Monday, June 26, 2023

* ಗುರುವಂದನಾ ಕಾರ್ಯಕ್ರಮ *

Teachers  are social engineers "ಎನ್ನುವ ಮಾತೊಂದಿದೆ ,ಅದು ಅಷ್ಟೇ ಸತ್ಯವೂ ಕೂಡಾ ಹೌದು, ಸುಸ್ಥಿರ ಸಮಾಜ ಕಟ್ಟುವಲ್ಲಿ ಶಿಕ್ಷಕನ ಸ್ಥಾನವನ್ನು ಸರಿಗಟ್ಟುವ ಉದ್ಯೋಗ ಸಮಾಜದಲ್ಲಿ ಇನ್ನೊಂದಿಲ್ಲ ಆದರೆ ಅದನ್ನು ಶಿಕ್ಷಕರು ಉಳಿಸಿಕೊಂಡು ಹೋಗಬೇಕು ಅಷ್ಟೆ. ಬೇರೆ ಉದ್ಯೋಗಗಳಿಗೆ ಹೋಲಿಸಿ ನೋಡಿದರೆ ಅದು ಅರ್ಥವಾಗುತ್ತದೆ. ನಿವೃತ್ತಿಯಾದ ನಂತರವೂ ಶಿಕ್ಷಕರಿಗೆ ಸಿಗುವ ಗೌರವ ಗಟ್ಟಿಯಾಗಿ ಏರುತ್ತಿರುತ್ತದೆ.ಈ ಮಾತಿಗೆ ಪುಷ್ಪಿ ನೀಡುವ ಹಾಗೆ ನಿನ್ನೆ ಹಿರೇಹಾಳ ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಒಂದು ತಾಜಾ ಉದಾಹರಣೆ.ಈಗ್ಗೆ ಎರಡು ಮೂರು ದಿನಗಳ ಹಿಂದೆ ನನಗೊಂದು ಪೋನ್ ಕಾಲ್ "ಆರಮ್ ಇದ್ದೀರಾ ಸರ್" ಎಂದ ವಿದ್ಯಾರ್ಥಿ. "ಖಂಡಿತವಾಗಿಯೂ ಆರಾಮ ಇದ್ದೀನಿ ತಾವು ಆರಾಮ ಇದ್ದೀರಾ ಸರ್, ಎಂದೆ.ಸರ್ ನಾನು ಭೀಮನಗೌಡ ಪಾಟೀಲ ತಮ್ಮ ವಿದ್ಯಾರ್ಥಿ ನಮ್ಮೂರಿನಲ್ಲಿ 2007-08 ಸಾಲಿನಲ್ಲಿ ಹತ್ತನೆಯ ವರ್ಗ ಓದಿದ ವಿದ್ಯಾರ್ಥಿಗಳು ಸೇರಿ ಗುರುವಂದನೆ ಕಾರ್ಯಕ್ರಮ ಇಟ್ಟುಕೊಂಡಿದ್ದವೆ ಬರಬೇಕು ಸರ್ ಎಂದ. 'ಖಂಡಿತವಾಗಿಯೂ ಬರುತ್ತೇನೆ   ಆದರೆ ಬಿಡುವು ಇರದಿದ್ದರೆ ಕಷ್ಟ ಎಂದೆ .ಅದಕ್ಕೆ ಆತ ಸರ್, ತಮಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಎಂದು ರವಿವಾರ ಇಟ್ಟುಕೊಂಡಿದ್ದೇವೆ ಬರಬೇಕು ಎಂದ. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಸೇರಿ ಮಾಡುವ ಗೌರವ ವಂದನೆಯಾದರೆ ಹೋಗದೆ ಇದ್ದರೂ ನಡೆಯುತ್ತದೆ ಎಂದೆನಿಸಿತ್ತು ಯಾಕೆಂದರೆ ಅಲ್ಲಿ ನಾನು ಪಿಯುಸಿ ಪಾಠ ಬೋಧನೆ ಮಾತ್ರ ಮಾಡಿದ್ದೆ. ಈಗ ಅಲ್ಲಿ ಪಿಯುಸಿ ವಿದ್ಯಾರ್ಥಿಗಳು ಕೊಡಿ ಮಾಡಿಲ್ಲವಲ್ಲ, ಔಪಚಾರಿಕವಾಗಿ ಕರೆದಿರಬಹುದು ಎಂದ ಭಾವಿಸಿದ್ದೆ. ಆದರೆ ಅಲ್ಲಿ 2007-08 ಸಾಲಿನಲ್ಲಿ ಓದಿದ ವಿದ್ಯಾರ್ಥಿಗಳೆ ನಮ್ಮ ಪಿ.ಯು ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಎಂದು ಆಮೇಲೆ ಅರ್ಥವಾದದ್ದು ದಿನಾಂಕ  23 06 2023 ರಂದು ಮತ್ತೆ ಪೋನ್ ಕಾಲ ಸರ್ ತಾವು ಎಲ್ಲಿದ್ದೀರಿ ತಮಗೆ ಆಹ್ವಾನ ಪತ್ರಿಕೆ ನೀಡಲು ಬರುತ್ತಿದ್ದೇವೆ ಎನ್ನಬೇಕೆ ! ಈಗ ಬೇಡ ಎನ್ನಲೂ ಬಾರದ, ಬನ್ನಿ. ಎನ್ನಲೂ ಬಾರದ ಸನ್ನಿವೇಶ .ಏಕೆಂದರೆ ಸುಮಾರು 40 ಕಿ ಮೀ ದೂರದಿಂದ ಬರುತ್ತಿದ್ದಾರೆ ಎಂದರೆ ಅವರ ಪ್ರೀತಿಗೆ ತಲೆ ಬಾಗಲೆ ಬೇಕಾಗಿತ್ತು. ಔಪಚಾರಿಕವಾಗಿ ವಾಟ್ಸಪ್ ನಲ್ಲೆ ಹಾಕಿದ್ದರೆ ಬರುತ್ತಿದ್ದೆ ಎನ್ನುವುದಕ್ಕೂ ಮನಸ್ಸಾಗದೆ ಬಂದ ವಿದ್ಯಾರ್ಥಿಗಳಿಗೆ ಪ್ರೀತಿಯ ಅಭಯ ನೀಡಿ ಬೀಳ್ಕೊಟ್ಟೆ.  ಅಂದು ರವಿವಾರ ಬಸ್ ಪ್ರಯಾಣವೊ ? ಬೈಕು ಪ್ರಯಾಣವೊ ಗೂಡಾದೆ ಅಂತಿಮವಾಗಿ ಬೈಕ್ ನ್ನೆ ಆಯ್ಕೆ ಮಾಡಿಕೊಂಡು ಹಿರೇಹಾಳ ಮಾರ್ಗ ಹಿಡಿದೆ. ಕಾರಣವಿಷ್ಟೆ ಮುರುಡಿ ,ಹಾನಾಪೂರ. ನಂದಿಕೇಶ್ವರ ಮಾರ್ಗವಾಗಿ ಶಿವಯೋಗ ಮಂದಿರ ಸುತ್ತಿ ಬೇಲೂರು ಮಾರ್ಗವಾಗಿ ಹಿರೇಹಾಳ ತಲುಪುವುದು. ಕಾರಣವಿಷ್ಟೆ ನಿಸರ್ಗದ ಮಡಿಲಲ್ಲಿ ಸಾಗಿ ಪ್ರವಾಸದ ಅನುಭವದ ಸ್ವರ್ಗ ಕಾಣುವ ಬಯಕೆ. ಹಾನಾಪೂರ ದಾಟಿದ ಮೇಲೆ ನಂದಿಕೇಶ್ವರ ತಲುಪುವ ಮುನ್ನ ಬೃಹತ್ತಾದ ಗುಡ್ಡ ಕೊರೆದು ನಿರ್ಮಿಸಿದ ಗುಳೇದಗುಡ್ಡ ದಿಂದ ಶಿವಯೋಗ ಮಂದಿರ ತಲುಪುವ ದ್ವಾರಬಾಗಿಲನಂತಹ ಮಾರ್ಗ ಗುಡ್ಡ ಸೀಳಿ ಮಾಡಿದ ಆಳದ ದಾರಿ. ಅದು ನಿಸರ್ಗ ಪ್ರೀಯರಿಗೊಂದು ಹಬ್ಬದ ಸಂಭ್ರಮ ಸಾಲು! ಅಲ್ಲಿಂದ ಮಲಪ್ರಭೆಯ ನದಿ ತಟದ  ಆ ವಿಹಂಗಮ ದೃಶ್ಯ ನೋಡಬೇಕು ! ಅರಸಿಕನ ಮನದಲ್ಲಿಯೂ ರಸಸ್ವಾದ ಹೊರಹೊಮ್ಮಿಸುತ್ತದೆ. ಅಂದೊಮ್ಮೆ ಜೋಳ ಕಡಲೆ ಹತ್ತಿಗಳನ್ನೆ ನೆಚ್ಚಿ ಬದುಕು ಕಟ್ಟಿಕೊಂಡ ರೈತ ,ಇಂದು ಕಬ್ಬು ಗೋವಿನ ಜೋಳ ಬೆಳೆ ನಂಬಿದ ವಾಣಿಜ್ಯ ರೈತ. ಅದು ಮಲಪ್ರಭೆಯ ನೀರು ಮತ್ತು ಬೋರವೆಲ್ ನ ಅಭಯ .ನೋಡುಗರಿಗದು ನೀಡುತ್ತಿದೆ ಶುಭಾಶಯ. ಅದೆಷ್ಟು ರಸಿಕರಿಗೆ ಕಚಗುಳಿ ಇಟ್ಟಿದೆ ಯಾರು ಬಲ್ಲರು? ಅದಕ್ಕೆ ಅಲ್ಲವೇ ನಾನು ಬೈಕಿನಲ್ಲಿ ಪ್ರಯಾಣ ಬೆಳೆಸಿದ್ದು . ನಾನು ಯಾವಾಗಲೂ 40 ಕಿ ಮೀ ವೇಗದಾಟಿಸಿದವನಲ್ಲ, ಯಾಕೆ ಹೇಳಿ ? ಒಂದು ಸಂರಕ್ಷಣೆ ತಂತ್ರವಾದರೆ ಇನ್ನೊಂದು ಪ್ರಕೃತಿಯ ಸೌಂದರ್ಯ ಆಸ್ವಾದಿಸುವ ಬಯಕೆ. ಅದಕ್ಕಾಗಿಯೇ ಸಾಕಷ್ಟು ಮುಂಚಿತವಾಗಿ ನಾನು ಪ್ರಯಾಣ ಬೆಳೆಸುವುದು ! ಅದಕ್ಕಾಗಿ ನನಗೆ ಆಮೆಯ ವೇಗದವನೆಂದರೂ ಚಿಂತೆ ಇಲ್ಲಾ ಬಿಡಿ. ಸಾಗುವುದು ಸಾವಧಾನದಿಂದಲೆ ! ಲೇಟಾಗಿ ಪ್ರಯಾಣ ಬೆಳೆಸಿ ನೀಟಾಗಿ ಮಸಣದ ದಾರಿ ತುಳಿಯಬೇಕೆ ? ಇರಲಿ, ನನ್ನ ಹೊತ್ತು ನಡೆಯುವ ಎರಡು ಗಾಲಿಯ ಕುದುರೆ ಶ್ರೀ ಗುರು ಕುಮಾರೇಶ್ವರರ ಕೃಪಾಶೀರ್ವಾದದಿಂದ ತಲೆ ಎತ್ತಿದ ಶಿವಯೋಗ ಮಂದಿರ, ಅದರ ಎಡಬದಿಯಿಂದ ಸುತ್ತು ಹಾಕಿ ಮಲಪ್ರಭಾ ಪಶ್ಚಿಮದಿಂದ ದಾಟಿ ಪೂರ್ವಕ್ಕೆ ಸಾಗಬೇಕಿತ್ತು. ಇನ್ನೊಂದು ಕಡೆ ನನ್ನ ಮನುಸ್ಸಿನಲ್ಲಿ ಚಾಲುಕ್ಯರ ಹಯಗಳೋಡಾಡಿದ ಕ್ಷಾತ್ರ ಭೂಮಿಯ ಕನಸು , ಮಗದೊಂದು ಕಡೆಗೆ ವಟುಗಳನ್ನು ತರಬೇತಿಗೊಳಿಸಿ ಸಂಸ್ಕಾರದ ರಾಯಭಾರಿಗಳನ್ನು ನಾಡಿನ ಉದ್ದಗಲಕ್ಕೂ ತಲುಪಿಸುವ ಪವಿತ್ರ ಭೂಮಿ.ಇವಗಳ ಇತಿಹಾಸ ಮನಪಟಲದ ಮೇಲೆ ತಾಂಡವಾಡುತಿತ್ತು.ಅಂತೂ ನಾನು ಆಯ್ದುಕೊಂಡು ಸಾಗಿದ ನಿರ್ದಾರ ನನ್ನನ್ನು ಹೆಮ್ಮೆಯಿಂದ ಮುನ್ನುಗ್ಗುವಂತೆ ಮಾಡುತ್ತಿತ್ತು. ಮಲಪ್ರಭಾ ಬಲಬದಿಯ ಎತ್ತರಕ್ಕೆ ಪಟ್ಟದಕಲ್ಲಿನಿಂದ ಸಾಗುವ ಮಾರ್ಗ ನವಿಲುಹೊಳೆ ಮಾರ್ಗವಾಗಿ ಚಲಿಸಿ ಬದಾಮಿ ಬೇಲೂರು ಮಾರ್ಗ ಸೇರುತ್ತಿತ್ತು ಈ ಮಾರ್ಗದ ಮಧ್ಯೆ ಸಾಗುವುದು ಅಂದರೆ ಅದು ಮಲೆನಾಡಿನ ಕಾಡುಗಳಲ್ಲಿಯೇ ಸಂಚರಿಸಿದಂತೆ ಎಡ ಬದಿಗೆ ಹಸಿರನುಟ್ಟು ಹೊಸ ಸಂಚಲನ ಸೃಷ್ಟಿಸಿದ ಆ ಕಾಡು ಅದು ಸಹ್ಯಾದ್ರಿಗೂ ಸವಾಲು ಹಾಕಿದಂತಿತ್ತು ಬಲಬದಿಗೆ ಹಾದಿಗುಂಟಾ ಸಾಗಿದ ಮಲಪ್ರಭೆ ಹಾವಿನ ನಡಿಗೆಯನ್ನು ನಾಚಿಸುತ್ತಿತ್ತು ಅದು ನವಿಲು ತೀರ್ಥ ಡ್ಯಾಮಿನ ಪುಣ್ಯದ ಫಲವೊ ಇಲ್ಲವೆ ಅಲ್ಲಲ್ಲಿ ಮಾಡಿದ ಚಿಕ್ಕ ಡ್ಯಾಮಿನ ಫಲಶೃತಿಯೊ ಕಾಶ್ಮೀರದ ಕಣಿವೆಯನ್ನು. ಧರೆಗಿಳಿಸಿತ್ತು,ಅಲ್ಲಲ್ಲಿ ನವಿಲುಗಳ ನರ್ತನ .ಹಾರಿದರೆ ಹ್ಯಾಲಿ ಕ್ಯಾಪ್ಟರನ ಸಪ್ಪಳ; ಆಶ್ವಾದಿಸಲು ಎರಡು ಕಣ್ಣುಗಳು ಸಾಲದಾದವು. ಕಣ್ಣು ತೆಗೆಯುವದರೊಳಗಾಗಿ ಬದಾಮಿ ಬೇಲೂರು ರಸ್ತೆಗೆ ಬಂದು ತಲುಪಿಯಾಗಿತ್ತು ,ಛೇ ! ಇನ್ನೊಂದಿಷ್ಟು ರಸ್ತೆ ಇದ್ದರೆ ಚನ್ನಾಗಿರುತ್ತಿತ್ತು ಎಂದುಕೊಂಡೆ.ಈಗ ನನ್ನ ಎರಡು ಗಾಲಿಗಳ ಕುದುರೆ ಹಿರೇಹಾಳ ಮಾರ್ಗದ ಮಧ್ಯೆ ನನಗೂ ರಸ್ತೆಯಲ್ಲಿ ಅಧಿಕಾರವುಂಟೆಂದು ಎಡ ಪಾರ್ಶ್ವದಲ್ಲಿ ಸೈನಿಕನ ಕುದುರೆಯಂತೆ ಬೀಗುತ್ತಾ ಓಡುತ್ತಿತ್ತು.ನಾನು ಹಿರೇಹಾಳ ಪ್ರೌಢಶಾಲಾ  ಮೈದಾನ ತಲುಪಿದಾಗ ಗುರುವಂದನೆಗೆ ಹಾಕಿದ ಮಂಟಪ ಮದುವೆ ಮಂಟಪ ಮೀರಿಸಿ ಗುರುಗಳ ಬರುವಿಗೆ ಸ್ವಾಗತ ಕೋರುತ್ತಿತ್ತು.ಅವರ ಪ್ರೀತಿಗೆ ಬೆಲೆ ಕಟ್ಟಲಾದೀತೆ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜು ಹಂತದ ಎಲ್ಲ ಗುರುಗಳ ಆಶೀರ್ವಾದ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳ ಮುಖದ ಮೇಲೆ ಸಾರ್ಥಕ ಭಾವ ಮನೆ ಮಾಡಿತ್ತು .ಮೂರು ತಿಂಗಳ ಹಿಂದಿನಿಂದ ತಯಾರಿ .ಒಂದು ವರೆ ಲಕ್ಷ ರೂಪಾಯಿ ಕೂಡಿಸಿದ್ದರಂತೆ ಇಲ್ಲಿ ಹಣ ಗೌನ. ಅವರ ಸಾರ್ಥಕ ಭಾವಕ್ಕೆ ಬೆಲೆ ಕಟ್ಟಲಾಗದು.ಅದೆಷ್ಟೋ ನಿವೃತ್ತ ಶಿಕ್ಷಕರೂ ಹಾಗೂ ಹಾಲಿ ಶಿಕ್ಷಕರು ಇಲ್ಲಿ ಭಾಗವಹಿಸಿದ್ದರು. ಇವರ ಜೊತೆಗೆ ಸಂಘಟನೆಗೆ ಕೈ ಜೋಡಿಸಿದ ಆಕಾಶವಾಣಿ ಕಲಾವಿದ ಚಂದ್ರಶೇಖರ ವಡಗೇರಿ ನಿವೃತ್ತ ಶಿಕ್ಷಕರ ಮಾರ್ಗದರ್ಶನ ,ಆ ಕಾರ್ಯಕ್ರಮ ಯಶಸ್ವಿಗೆ ಸಾತು ನೀಡುತ್ತಿತ್ತು ವೇದಿಕೆ ಮುಂಭಾಗದಲ್ಲಿ ಎಡಬಲಕ್ಕೆ ಹಳೆಯ ವಿದ್ಯಾರ್ಥಿಗಳು( ಜವಾಬ್ದಾರಿ ನಾಗರಿಕರು) ಕೈ ತುಂಬಾ ತಟ್ಟೆ ಅದರ ತುಂಬಾ ಪುಷ್ಪ ಮೈಕ್ ಧ್ವನಿಯ ಆಲಪಕ್ಕೆ ಪುಷ್ಪ ಮಳೆ, ಇದು ಯಾವ ಉದ್ಯೋಗಕ್ಕೆ ಸಲ್ಲುವ ಗೌರವ ಹೇಳಿ ? ವೇದಿಕೆ ಏರಿದಾಗ ಹನ್ನೊಂದು. ತಡೆದ ವರುಣ ಹೊಂಚು ಹಾಕಿ ಕಾರ್ಯಕ್ರಮಕ್ಕೆ ನೀಡಿದ  ಸಿಂಚನ ! ಮುಂಜಾನೆ ಬಂದದ್ದು ಮಳೆ ಅಲ್ಲ ಮಧ್ಯಾಹ್ನ ಬಂದವ ಅಳಿಯ ಅಲ್ಲ ಎನ್ನುವ ಮಾತೊಂದನ್ನು ಎಲ್ಲೋ ಜನಪದರ ಮಾತಿನಲ್ಲಿ ಕೇಳಿದ ನೆನಪು.ಇರಲಿ ಈ ಸಂಚಲನಕ್ಕೆ ಎದೆಗುಂದುವವರಾರು . ಗೌರವ ನೀಡುವ ಭಾವದ ಪ್ರೀತಿಯ ಪರಾಕಾಷ್ಠೆ ಸೋಲಿಸುವವರಾರು? ಪದವಿ ಪೂರ್ವ ಕಾಲೇಜಿನ ಕಾರಿಡಾರಿನಲ್ಲಿ ಮರುಸೃಷ್ಠಿಯಾದ ವೇದಿಕೆಯಲ್ಲಿ ಪ್ರೀತಿಯ ಅಲೆ ಪದಗಳಾಗಿ ಭಾಷೆಯ ಮೂಲಕ ಭಾವನದಿಯ ಪ್ರವಾಹವಾಗಿ ಹರಿಯಿತು. ಗುರು ಶಿಷ್ಯರೆಲ್ಲ ಪೋಟೋ ಶೆಷನ್ನಿಗೆ ಮುಖ ಅರಳಿಸಿದ್ದಾಯಿತು. ಶಿಸ್ತಿನ ಶಿಪಾಯಿಯಂತೆ ಪ್ರೀತಿಯ ಭಾವ ತುಂಬಿದ  ವಿದ್ಯಾರ್ಥಿಗಳು ಬಡಿಸುವ ಬೋಜನಕ್ಕೆ ಯಾವ ಪೈವ್ ಸ್ಟಾರ ಹೋಟೆಲ್ ಗಳು ಸಮನಾಗಲಾರವು .ಈ ತುತ್ತಿಗೆ ಬೇಲೆ ಕಟ್ಟಲಾದೀತೆ ? ಇದೆ ಅಲ್ಲವೆ ಋಣಾನುಬಂಧ ಅನ್ನುವದು .ಕಲಿಸಿದ್ದು ಎರಡೆ ವರ್ಷಗಳು ಅವರ ಪ್ರೀತಿಗೆ ನೂರು ವರುಷಗಳ ಆಯು ಇಮ್ಮಡಿಯಾಯಿತು.

ಧನ್ಯವಾದಗಳು ,ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ

1 comment:

  1. ಧನ್ಯವಾದವುಗಳು ಗುರುಗಳೇ ...🙏💐🥰

    ReplyDelete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...