Saturday, July 15, 2023

* ಪಠ್ಯೇತರ ಚಟುವಟಿಕೆ *

"ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ"
       
         ಇಂದು, ತವರು ಮನೆ ಸೇರಿ ತಾಯಿಯ ಮುಂದೆ ಪಾಯಸ ಸವಿದಂತಹ ಅನುಭವ, ಏಕೆ ಹೇಳಿ ?  ಸುಮಾರು 16 ರಿಂದ 17  ವರ್ಷಗಳ ಹಿಂದೆ ಪ್ರೌಢಶಾಲಾ ಶಾಲಾ ಸಹ ಶಿಕ್ಷಕನಾಗಿ, ಹಿರಿಯ ಶಿಕ್ಷಕನೆಂದು 10 ನೇ ತರಗತಿಯಲ್ಲಿ ಇಂಗ್ಲೀಷ್ ಹಾಗೂ ಸಮಾಜ ವಿಜ್ಞಾನ ಬೋಧಿಸಿದ ಸಮಯ, ಆ ಅವಧಿಯಲ್ಲಿ ಪ್ರಾಚಾರ್ಯರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಹ ನಿರ್ದೇಶಕರಂತಹ ಉನ್ನತ ಹುದ್ದೆಯವರೆಗೆ ಏರಿ ಇಂದು  ನಿವೃತ್ತಿ ಹೊಂದಿರುವ ವಾಯ್ ಎಚ್ ಇಲಾಳ ಅವರಿಂದ ಸೈ ಎನ್ನಿಸಿ ಕೊಂಡ ದಿನ.ಅಂದು ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ನಿಮ್ಮ ಸಲಹೆ ಏನು ಗೌಡರೇ, ಎಂದು ಕೇಳಿದ್ದಕ್ಕೆ ನನ್ನ ಉತ್ತರ "ಪ್ರತಿ ದಿನ ಕ್ವಿಜ್" ಎಂದಿದ್ದೆ, ಅದಕ್ಕೆ ಅವರು ಅದನ್ನು ನೀವು ಮಾಡಿ ನಿಮಗೇನು ಸಹಕಾರ ಬೇಕು ನಾ ಕೊಡುವೆ . ಎಂದು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು ಮತ್ತು ಫಲಿತಾಂಶವನ್ನೂ ಪಡೆದಾಗಿತ್ತು.ಆ ಪವಿತ್ರ ಶಿಕ್ಷಣ ಸಂಸ್ಥೆಯ ಕರ್ಮ ಭೂಮಿಯಲ್ಲೊಂದು ವೇದಿಕೆಯ ಮುಖ್ಯ ಅತಿಥಿ ಉಪನ್ಯಾಸ. ಅದು ದಕ್ಕಿದ್ದು  ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಪ್ರಾಚಾರ್ಯರಾದ ಮಹೇಶ್ ಜಕ್ಕನ್ನವರ ಹಾಗೂ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಪಾಠಿ, ಇಂದು  ರಾಜ್ಯ ಶಾಸ್ತ್ರದ ಉಪನ್ಯಾಸಕ, ಗೆಳೆಯ ಶ್ರೀಶೈಲ ಮಡಿವಾಳರ ಮತ್ತು 2023-24 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸುನೀಲ ಮಾರುಟಗಿಯವರಿಂದ .ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂದರೆ ಏನು ಮಾಡುವುದು ? ನಮ್ಮ ಸಂಸ್ಥೆಯ ಪ್ರಾಚಾರ್ಯ ಶ್ರೀ ವಿಠ್ಠಲ ಕಳಸಾ ಎಂದೂ ಅಡತಡೆ ಮಾಡಿದವರಲ್ಲ .ಅಂತೆಯೇ ನಾನೂ ಕೂಡಾ ಎಂದೊ ಮಕ್ಕಳ ಪಾಠಕ್ಕೆ ದಕ್ಕೆ ತಂದವನೂ ಅಲ್ಲ  ಅದನ್ನು ದುರುಪಯೋಗ ಮಾಡಿಕೊಳ್ಳುವ ಜಾಯಮಾನವೂ ನನ್ನದಲ್ಲ. ಸಹಪಾಠಿಗಳ ಸಹಕಾರದೊಂದಿಗೆ ನಂತರದ ಅವಧಿಯನ್ನು ಮೊದಲಿನ ಅವಧಿಗೆ ಸರಿದೂಗಿಸಿದೆ. ಗಂಟೆ 12.00 ಅತ್ತಲಿಂದ ಪೋನ್. "ಸರ್, ಬನ್ನಿ ಕಾರ್ಯಕ್ರಮ ತಯಾರಿಯಾಗಿದೆ " ಕೃಷಿಕನ ಎತ್ತು ಸಂಜೆ ಮನೆಯ ಕಡೆ ನಡೆದಂತೆ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ದಾರಿ ತುಳಿದೆ. ಕಸದಲ್ಲಿಯೂ ರಸ ತಗೆಯುವ ಕೌಶಲ್ಯ ಕರಗತ ಮಾಡಿಕೊಂಡವರೆ ಸರಕಾರಿ ಕಾಲೇಜಿನ ಶಿಕ್ಷಕರು.ಇವರೆ ಅಲ್ಲವೆ  ಇಲ್ಲಗಳ ನಡುವೆಯೇ ಎಲ್ಲವನ್ನೂ ತೋರಿಸುವ ಬಲ್ಲ ಗುರುಗಳು .ಇವರ ಮಾರ್ಗದರ್ಶನದಲ್ಲಿ ನಡೆಯುವ 500 ವಿದ್ಯಾರ್ಥಿನಿಯರು ಓದುವ ಕಾಲೇಜು.  ಲಕ್ಷ ಫೀ ತುಂಬಿ ಕಲಿಯುವ ವಿದ್ಯಾರ್ಥಿಗಳಿಗೆ ನಾವೇನು ಕಡಿಮೆ ಎನ್ನುವ ಆತ್ಮವಿಶ್ವಾಸದ ಬೀಡದು.ಅಂತಹ ವಿದ್ಯಾ ಸಂಸ್ಥೆಯ ಬಾಗಿಲು ತುಳಿದಾಗ ಯಾವುದೊ ದೇವಸ್ಥಾನದ ಬಾಗಿಲು ದಾಟಿದಂತಹ ಅನುಭವ ಅದಕ್ಕೆ ಅಲ್ಲವೆ  ಪ್ರಾಜ್ಞರು  "ಇದು ವಿದ್ಯಾ ತಪಸ್ಸಿನ ತಾಣ ಕೈ ಮುಗಿದು ಒಳಗೆ ಬಾ ಜಾಣ " ಎಂದದ್ದು .ಸುಶ್ರಾವ್ಯವಾಗಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಪಠ್ಯೇತರ ಚಟುವಟಿಕೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾಂಭ ಹಬ್ಬದ ಕಳೆಗಟ್ಟಿತ್ತು ನಾನು ಮುಖ್ಯ ಅತಿಥಿ, ಔಪಚಾರಿಕ ಮಾತ್ರ .ಉಪನ್ಯಾಸಕರ ಮಾತನ್ನು ಮೀರಿದ ಹಿತವಚನವನ್ನು ಹೇಳಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮಾತುಗಳು  ನನಗೂ ದಾರಿ ತೋರಿಸುವಂತಿದ್ದವು. ಧನಾತ್ತಕ ಚಿಂತನೆಯ ಅವರ ಮಂತ್ರ, ಪ್ರಥಮ ಪಿಯುಸಿಯವರಿಗೆ ನೀಡಿದ ಸಲಹೆ, ಇಡಿ ಕಾಲೇಜಿನ ಸಂಸ್ಕಾರದ ಅನಾವರಣವಾಗಿತ್ತು. ಭರತನಾಟ್ಯದ ಮೂಲಕ ಮನಸೂರೆಗೊಂಡ ವಿದ್ಯಾರ್ಥಿಗಳಿಗೆ ನಾ ಕೇಳಿದೆ, ಗುರು ಯಾರು ? ಅವರಿಗೆ ಅವ್ವನೆ ಗುರವಂತೆ ಪಠ್ಯೇತರ ಚಟುವಟಿಕೆ ಎಂದರೆ ಇದೆ ಅಲ್ಲವೆ? ಇದು  ಒಂದು ಕಡಯಾದರೆ .ಭಾವೈಕ್ಯತೆ ಸಾರುವ ಸುಶ್ರಾವ್ಯವಾದ ಭಾವಗೀತೆಗೆ ಹೊವಿನಂತೆ ಅರಳಿದ ಮುಖಭಾವಗಳು, ಜಾತಿ, ಧರ್ಮಗಳಾಚೆ ಶಾಂತಿ ಸೌಹಾರ್ದತೆಯ ಮುಂಗಾರು ಸಿಂಚನವಾಗಿತ್ತು.  ವೇದಿಕೆಗೆ ಹೋಗುವ ಪೂರ್ವದಲ್ಲಿ ಕಾಲೇಜಿನ ಪ್ರಾಚಾರ್ಯರು ಹೇಳಿದ ಮಾತು ಈಗ ರುಜುವಾತಾಗಿತ್ತು. ಕಾಲೇಜಿಗೆ ಒಮ್ಮೆ ಒಳಬಂದರೆ ಮಧ್ಯದಲ್ಲಿ  ಹೊರಹೋಗಬೇಕಾದರೆ  ಪ್ರತಿನಿಧಿ ಇಲ್ಲವೆ ಉಪನ್ಯಾಸಕರ ಒಪ್ಪಿಗೆ ಪಡೆದು ಸಹಿ ಹಾಕಿಯೆ ಹೋಗಬೇಕು ಎನ್ನುವ ಅವರು ಶಿಸ್ತಿನ ಮಾತು ಸಂಸ್ಕಾರವಲ್ಲದೆ ಇನ್ನೇನು.ಅದಕ್ಕೆ ಹೇಳುವುದು "As is the Principal so is the college " ಎಂದು ಅಂಕಗಳ ಅಡಿಯಾಳಾಗಿರುವ ಸಮಾಜದಲ್ಲಿ ಆಂತರಿಕ ಶಿಸ್ತನ್ನು ರೂಢಿಸಿಕೊಳ್ಳುವಂತೆ ಮಾಡಿದ ಪ್ರಾಚಾರ್ಯ ಮಹೇಶ್ ಜಕ್ಕನ್ನವರ ಹಾಗೂ ಅವರ ಸಿಬ್ಬಂದಿಯ ವರಿಗೆ ನನ್ನದೊಂದು ಪ್ರೀತಿಯ ಸಲಾಮು. ನಾನು ಎಷ್ಟರ ಮಟ್ಟಿಗೆ ಅವರೊಂದಿಗೆ ವಿಚಾರಗಳನ್ನು ಹಂಚಿಕೊಂಡು ಅವರ ಹತ್ತಿರ ಹೋದೆನೋ ನನಗೆ ಗೊತ್ತಿಲ್ಲ ,ಆದರೆ ಅವರು ನನಗೆ ಸನ್ಮಾನಿಸಿ ಗೌರವಿಸಿದ ಉಪಕಾರಕ್ಕೆ ನಾನು ಕೃತಜ್ಞತೆಯ ಭಾವದಿಂದ ಹೃದಯ ತುಂಬಿ ಶಿರಬಾಗುವೆ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...