Saturday, December 9, 2023

* ಓದಿ ಪಡೆಯುವೆ ಸ್ವರ್ಗದ ದಾರಿ *

ಬರೆಯಬೇಕೆಂದಿರುವೆ 
ಬದುಕು ಬವಣೆಗಳ ಭಾರವಾದ 
ಭಾವಾಲಾಪಗಳ ಸಂತೆ ।
ಬರಹಕ್ಕೇನು ಬರ ?, ಹಾದಿ ಬೀದಿಗಳಲ್ಲಿ 
ಬರೆದು ಗುಡ್ಡೆ ಹಾಕಿಹರು 
ಗುಡ್ಡದಂತಹ ದೊಡ್ಡ ಹೊತ್ತಿಗೆಗಳು ರಾಶಿ। 
ಬರಿ ಕಪಾಟುಗಳದೆ ಕೊರತೆ ! ॥
ಆದರೂ ಬರೆಯುವ ಹುಚ್ಚು, 
ಓದುವವರದೆಲ್ಲಿದೆ ಸರತಿ ?
ನಿತ್ಯ ನರಕಗಳ ಸಾಲು 
ಎತ್ತಿ ತೋರಿಸಿದರೆ ಬದುಕೊಂದು ಜೈಲು.।
ನರಿ ನಾಯಿಗಳ ಗರ್ಜನೆ !
ಹುಲಿಗಳೂ ನಾಚುವವು 
ಬಿಲ ಸೇರುವುದೊಂದೆ ಬಾಕಿ.।
ಇಲಿಗಳಿಗೂ ಬಂತು ಸುಗ್ಗಿಯ ಕಾಲ 
ಚೀಲ ಕತ್ತರಿಸಬೇಕಿಲ್ಲ, ಕತ್ತಲೆಗೆ ಕಾಯಬೇಕಿಲ್ಲ... ಬೆಳಕಿನಲ್ಲೆ ಭತ್ತ ಗೋದಿಯ ರಾಶಿ 
ತಿಂದು ಜೀರ್ಣಿಸಿಕೊಳ್ಳಲಷ್ಟೆ ಬೇಕು ಶಕ್ತಿ .
ನಿತ್ಯ ಬೆತ್ತ ಹಿಡಿದವನಿಗೆ ಬೇಕು ಯುಕ್ತಿ  
ಕಣ್ಣಿದ್ದು ಕುರುಡ, ಕಾಲಿದ್ದು ಹೆಳವ 
ಏಕೆಂದರೆ ಆತನಿಗೊ ಸಿಗಬೇಕಲ್ಲ ಭತ್ಯೆ .
ಬಲಿ ಕೊಡಲು ಕುರಿಗಳಿಗೇನು ಕಡಿಮೆ 
ಬಾಜಾ ಭಜಂತ್ರಿಗಳೊಡನೆ ನಡೆದಿದೆ ದಂಡು॥ 
ಬಹುಪರಾಕ ಹೇಳಿದವನೆ ದ್ವಾರಪಾಲಕ 
ಹಡದಿ ಹಾಸಿದವನೆ ಪಡೆದ ತಾಯಿತಂದೆ 
ಕುಡಿದು ತೂರಾಡುವವ ತಲೆ ಹಿಡಕ 
ಎಗರಾಡಿದರೆ ಆಗಬೇಕಾದೀತು ಕೊಲೆಗಡಕ।
ನಿಲ್ಲುವೆ ನಾ ಎಲೆಮರೆಯ ಕಾಯಂತೆ 
ಗೆಲ್ಲುವೆ ಹಣ್ಣಾಗಿ, ಕಾಲವೆ ಪಾಡಿಗೆ ಬಂದಾಗ।
ಬರದರೇನು ಬರಬಹುದು ಹಾರ ತುರಾಯಿಗಳು,
ಬರಿ ಓದಿ ಪಡೆಯುವೆ ಸ್ವರ್ಗದ ದಾರಿ॥.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...