ಕಟ್ಟುವೆವು ಕನಕ ಕಟ್ಟಿದ
ಕನಸಿನ ನಾಡೊಂದನು /
ಮನುಕುಲದ ಬೀಡೊಂದನು
ವರ್ಗವಿಲ್ಲದ ವರ್ಣವಿಲ್ಲದ
ಸ್ವರ್ಗದ ನಾಡೊಂದನು//
ಬಸವಕಲ್ಯಾಣ, ಬಾಡದ
ಶರಣ ದಾಸರ ಸಂತತಿಯ
ಮಾನವತೆ ನಾಡೊಂದನು/
ಹೊಸೆದು ತೀಡಿ ಕಟ್ಟುವೆವು
ಬಸವ ನಾಡೊಂದನು//
ಬುದ್ಧ ಬಸವ ದಾಸ ಶ್ರೇಷ್ಠ
ಶುದ್ಧ ಭಾವದ ನಾಡೊಂದನು/
ರವಿ ಕಾಣದ ಜಗವ ಸೇರಿ
ಜಿಡ್ಡು ತೊಳೆದು ಕಟ್ಟುವೆವು
ರಾಗಿಯ ನಾಡೊಂದನು //
ವಿಜಯನಗರ ವೈಭವ ಮತ್ತೆ
ಮರಳಿ ಅರಳುವ ನಾಡೊಂದನು/
ಹರಿ ಕೃಷ್ಣ ನಾಮ ಸ್ಮರಣೆಯ
ದಾಸ ಸಾಹಿತ್ಯ ಸಂಭ್ರಮದ
ಸಂಗೀತ ನಾಡೊಂದನು//
ಕದವಿಲ್ಲದ ಕದನವಿಲ್ಲದ
ಶಾಂತಿ ಸಮೃದ್ಧಿಯ ನಾಡೊಂದನು/
ಭ್ರಾಂತಿ ಮೀರಿದ, ಆಧ್ಯಾತ್ಮದ
ಅನುಭೂತಿಯ ಅಮರತ್ವದ
ಸಾಮರಸ್ಯದ ನಾಡೊಂದನು//
ಬಸನಗೌಡ ಗೌಡರ
ಉಪನ್ಯಾಸಕರು ಗುಳೇದಗುಡ್ಡ
No comments:
Post a Comment