* ಅಮವಾಸ್ಯೆಯ ಹೂವಿನ ಹಾರ *
ಬಹಳ ದಿನಗಳ ನಂತರ ನಾನು ಈ ಫೇಸ್ಬುಕ್ ಮೂಲಕ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ ಅದಕ್ಕೆ ಈ ಮೊಬೈಲ್ ಮತ್ತು ಫೇಸ್ಬುಕ್ ಸಂಶೋಧನೆ ಮಾಡಿದವರಿಗೆ ನನ್ನ ಅನಂತ ಕೃತಜ್ಞತೆಗಳು,ವಿಷಯ ಇಷ್ಟೆ ಇಂದು ಅಮವಾಸ್ಯೆ ಹಾಗಾಗಿ ಎಲ್ಲರಿಗೂ ವಿಶೇಷವಾದ ದಿನ, ಬರಿ ಹಿಂದೂಗಳಿಗಷ್ಟೆ ಅಲ್ಲ ಎಲ್ಲ ಧರ್ಮಗಳಿಗೂ ಎಂದರೆ ತಪ್ಪಾಗಲಾರದು .ಏಕೆ ಹೇಳಿ ? ಎಲ್ಲಾ ಯಂತ್ರಗಳು, ಆಯುಧಗಳು ನವ ವಧುವಿನಂತೆ ಶೃಂಗರಿಸಿಕೊಳ್ಳುತ್ತವೆ, ತೋಟದಲ್ಲರಳಿದ ಹೂವುಗಳು ತಗಡಿನ ಶೆಡ್ಡಿನಿಂದ ಶೇಟನಂಗಡಿಯವರೆಗೂ ಸಾಲುಗಟ್ಟಿ ನಿಲ್ಲುತ್ತವೆ.ಕಾರಣ ಹೂವು ಮಾರುವ ಹೂವಕ್ಕನಿಂದ ಹಣ್ಣು ಮಾರುವ ಸಣ್ಣಕ್ಕನವರೆಗೊ ರೈತ ಕಲ್ಲಪ್ಪನಿಂದ ಮಾಲಿ ಮಲ್ಲಪ್ಪನವರಗೂ ಸಡಗರವೊ ಸಡಗರ ಏಕೆಂದರೆ ಅಮವಾಸ್ಯೆ ನಂತರ ಚಂದ್ರನಾಗಮನದಂತೆ ಹೊಸತನ ಹರಿಯಲಾರಂಭಿಸುತ್ತದೆ.ತುಕ್ಕು ಹಿಡಿದ ಯಂತ್ರಗಳು ಚೊಕ್ಕಟವಾಗುತ್ತವೆ ,ಸಂದಿ ಗೊಂದೆಗಳು ಅಂದ ಹೆಚ್ಛಿಸಿಕೊಂಡು ಭೌತಿಕವಾಗಿ ಶ್ರೀಮಂತಗೊಳ್ಳುತ್ತವೆ. ಇರಲಿ ಇಲ್ಲಿಯವರೆಗೆ ಈ ಪೀಠಿಕೆ ಹಾಕಿದ ಉದ್ದೇಶವೇನೆಂದರೆ ನಿನ್ನೆಯೇ ನನ್ನ ಶ್ರೀಮತಿ ಇವತ್ತಿನ ಅಮವಾಸ್ಯೆಗೆ ಅಂತ ನನ್ನ ಎರಡನೆಯ ಹೆಂಡತಿ( ನನ್ನ ಪ್ರೀತಿಯ ಬೈಕಿಗೆ ಯಾರೊ ನನ್ನ ಗೆಳೆಯರು ಹೇಳಿದ ಮಾತು) ಶೃಂಗರಿಸಲು ಐವತ್ತು ರೂಪಾಯಿ ನೀಡಿ ಸುಂದರವಾದ ಹೂವಿನ ಹಾರ ಖರೀದಿ ಮಾಡಿದ್ದಳು. ಬೆಳಗಾಗುವುದೆ ತಡ ಮನೆಯಂಗಳ ಮಂಗಳಕರವಾಗಿತ್ತು. ರಂಗೋಲಿಗೂ ಸಂಭ್ರಮ ಅದು ಪೇಪರ ಹುಡುಗನಿಗೆ ಇವತ್ತು ಅಮಾವಾಸ್ಯೆ ಅಂತ ಪಾಠ ಮಾಡಿತ್ತು.ನನಗೆ ಮಾತ್ರ ಕಾಲೇಜು ನೀಡಿದ ರಜೆ ನನ್ನನ್ನು ಸೋಮಾರಿಯನ್ನಾಗಿ ಮಾಡಿತ್ತು ಆದರೇನು ಮಾಡುವುದು ..ನನ್ನನ್ನು ನನ್ನ ಶ್ರೀಮತಿ ಬಿಡಬೇಕಲ್ಲ "ನಳ ಬಂದಿವೆ ಬೇಗ ಬೈಕ ತೊಳಿರಿ ನಳದ ನೀರು ಹೋಗತಾವು ನೋಡ ಮತ್ತ" ಅಂತಾ ಹೇಳಿದ್ಥು ಕಿವಿಯಲ್ಲಿ ಗುಣಗುಟ್ಟಿತ್ತು.ಪಾಲಿಸದಿದ್ದರೆ ನಡೆದೀತೆ ? ದುರ್ಗಾವತಾರ ! ನವಮಿಗಿಂತ ಮೊದಲೆ ನೋಡಬೇಕು. ಬೈಕ್ ತೊಳೆದು ಆದೇಶ ಪಾಲಿಸಿಯಾಗಿತ್ತು.ಇನ್ನೇನು ಪ್ರತಿದಿನದ ಕರ್ಮಗಳು. ಒಂದಾದ ಮೇಲ ಮತ್ತೊಂದು ಕರ್ತವ್ಯಗಳು ಮುಗಿದು ಪೂಜೆ ಮಾಡುವ ಕಾಲ ಬಂದೆ ಬಿಟ್ಟಿತು, ಅತ್ಯಂತ ಭಕ್ತಿಯಿಂದ ಇಂಚು ಇಂಚಿಗೆ ಮೂರು ಬಟ್ಟ ವಿಭೂತಿ ಬಳೆದ ಮೇಲ ಚಂದ್ರ ಹಚ್ಚಿ ಹೂವಿನ ಹಾರ ಹಾಕಿದೆ. ಕಾಥೆವಾಡದ ಕುದರಿಯನ್ನು ಮಸಾಜ ಮಾಡಿ ನಿಲ್ಲಿಸಿದಂತೆ ಓಡಲು ರೆಡಿಯಾಗಿತ್ತು. ಹೂವಿನ ಹಾರ ಕೊರಳಿಗೇರಿಸಿದ ಕುವರಿ ಅವಳು ಸುರ ಲೋಕದ ಸುಂದರಿ ನೋಡಿದರೆ ಮತ್ತೊಮ್ಮೆ ನೋಡಬೇಕಿನಿಸುತ್ತಿತ್ತು.ಅಮವಾಸ್ಯೆಯ ಈ ದಿನ ದೇವರಿಗೆ ಹೋಗಲು ತಯಾರಿ ನಡೆದಿತ್ತು. ಹೀಗೆ ಒಳಗೆ ಹೋಗಿ ಹೊರಗೆ ಬರುವದರೊಳಗಾಗಿ ಬೈಕ್ ಕೊರಳಿಗೆ ಹಾರವಾಗಿದ್ದ ಹೂವಿನ ಹಾರ ಈಗ ಬೀದಿಯಲ್ಲಿ ಬಂದಿದ್ದ ಗೋಮಾತೆಯ ಆಹಾರವಾಗಿತ್ತು ಎಲ್ಲಾ ಅಯೋಮಯ. ಶ್ರೀಮತಿ ನೋಡಿದ್ದೆ ತಡ ನಕಸಿಕಾಂತ ಉರಿದು ಹೋದಳು.ನಾನು ಮಾತ್ರ ಪ್ರಶಾಂತನಾಗಿದ್ದೆ... ಏಕೆ ಹೇಳಿ ? 'ದೇವರು ಸಂತೃಪ್ತಿಯಾಗಿದ್ದ' ನಾವು ಮಾಡುವ ಪೂಜೆ ದೇವರಿಗೆ ತಲುಪಬೇಕಲ್ಲವೆ ? ಹೌದು, ಈಗ ಆದದ್ದಾದರು ಏನು ? ಪ್ರತಿಯೊಂದು ಜೀವಿಗಳಲ್ಲಿ ಆತ್ಮ ಇದೆ .ಶಂಕರಾಚಾರ್ಯರು ಹೇಳಿದ್ದೇನು ಪ್ರತಿ ಆತ್ಮನಲ್ಲಿ ಪರಮಾತ್ಮ ಇದ್ದಾನೆ. ಅಂದರೆ ಗೋವು ಮಾತೆಯಲ್ಲಿಯೂ ಆತ್ಮ ಇದ್ದಾನೆ, ಆ ಹೂವಿನ ಹಾರ ತಿಂದ ಗೋಮಾತೆಯ ಆತ್ಮ ಸಂತೃಪ್ತಿಯಾಗಿದೆ, ಅಂದರೆ ದೇವರು ತೃಪ್ತಿಯಾದನೆಂದೆ ಅರ್ಥ ಅಲ್ಲವೆ.ಅಷ್ಟೆ ಅಲ್ಲದೆ ಹಿಂದೂಗಳಾದ ನಾವು ಮುಕ್ಕೋಟಿ ದೇವತೆಗಳು ಆಕಳಲ್ಲಿ ಇವೆ ಎಂದು ನಂಬುವವರಲ್ಲವೆ.ದಾಸರು ಹೇಳಿದ ಹಾಗೆ ನಂಬಿ ಕೆಟ್ಟವರಿಲ್ಲವೊ ಮನಜ ಎಂಬ ದಾಸರ ವಾಣಿಯನ್ನು ನೆನೆಯುತ್ತಾ ನಮ್ಮ ಹುಟ್ಟೂರು ದೇವರನ್ನು ತೃಪ್ತಿಮಾಡಲು ಬೈಕ್ ಏರಿ ಊರಿನಕಡೆ ಸವಾರಿ ನಡೆಸಿದೆ..
ವಂದನೆಗಳೊಂದಿಗೆ.🙏🙏
No comments:
Post a Comment