ಬಯಸಬಾರದು ಬಾರದೂರಿನ ಚಿತ್ತ
ಬಯಸಬಾರದು ಬಾರದೂರಿನ ಚಿತ್ತ
ಬಯಸಲು ಹೋಗಿ ಭಾವಜೀವಿ ಸತ್ತ ।
ಬದುಕಲು ಬೇಕು ಕೂಡು ಕಳೆಯುವ ಲೆಕ್ಕ
ಬಂದಂತೆ ಬದುಕಬೇಕು ಬಡವ ನಿತ್ಯ ॥
ನಾಕವರಸಿ ನರಳುವುದು ನರಜನ್ಮ
ಯಾಕಾರ ಹಂಬಲಿಸುವುದಾತುರ ಮನ ।
ಜ್ವಾಕ್ಯಾಗಿ ಕಾಯಬೇಕು ಕರ್ಮದ ಫಲ
ಬೇಕೇನು ನಿಲುಕದ ನೀರಲಣ್ಣಿನ ಬಣ್ಣ॥
ಆಸೆಯ ಬೆನ್ನೇರಿ ದಾಸನಾಗುವುದೇನು
ಹೊಸೆಯಬೇಕಿತ್ತು ಹೊಸ ಹಗ್ಗದ ಕಣ।
ಹೆಗ್ಗುರುತಿಗೋಗಿ ಬಗ್ಗಿತು ಬಿಟ್ಟ ಬಾಣ
ಕಗ್ಗವನೋದದೆ ಕುಗ್ಗಿದರೇನು ಬಂತು ದಿನ ॥
ಬಾರನೆಂಬುದು ಬಿಡು ಹರುಷಕಿದೆ ದಾರಿ
ಹಾರೈಸಲಿಲ್ಲವೆ ಡಿ ವಿ ಜಿ ಗುರು ಹಿರಿಮನ।
ವರುಷಗಳುರುಳಿದರೂ ಬೆರೆಸುವುದೇನಿದೆ,
ಇದು ಬಂಗಾರದಂತಹ ಅನುಭವದ ಜ್ಞಾನ ॥
ಬುದ್ಧ ಬಸವನೋದಿ ತಿದ್ದಿಕೊಳ್ಳುವವ ಜಾಣ
ಬಿದ್ದಾಗ ತಿದ್ದಿಕೊಳ್ಳಲೊದ್ದಾಡುವುದೇನು ಚಿನ್ನಾ।
ನಿದ್ದೆಯಲ್ಲಿದ್ಡಾಗ ಬಂದು ಎಬ್ಬಿಸುವುದೆ ಜನ
ಹದ್ದುಬಸ್ತಿನಲ್ಲಿಡಬೇಕಾಗಿತ್ತು ಆಶೆಯ ಗುಣ॥
ಅನುದಿನವು ಅರಳಲು ಆತುರದ ದಾರಿ
ಹಣವಾದರೂ ಸರಿ ಹೆಣವಾದರೂ ಸರಿ।
ಗುಣ ನೋಡದೆ ಕುಣಿಯುವುದು ಮನ
ಪಣಕಿಡಲೇಕಿಲ್ಲ ಸತ್ಯದ ತನುವಿನ ಬಲ॥
ಪ್ರೀತಿಯ ಸಾರ ತುಂಬಿದ ಮೇಲೆ ಎಲ್ಲವೂ ಸಸಾರವೇ
ಸೋರಿ ಹೋಗಬಹುದೆ ಸಂತೋಷದ ಸುದಿನಗಳು ಪ್ರತಿದಿನವೂ