" ಹಳದೂರು ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿ, ಅಕ್ಷರದ ಮೂಲಕ ಸಂಸ್ಕಾರ ನೀಡಿ ಸನ್ಮಾರ್ಗ ತೋರಿಸುವ ಪವಿತ್ರವಾದ ಶಿಕ್ಷಣ ಇಲಾಖೆಯಲ್ಲಿ ಉನ್ನತವಾದ ಹುದ್ದೆ ಅಲಂಕರಿಸುವುದು ಅಂದರೆ ಅದು ಸಾಮಾನ್ಯವಾದ ವಿಷಯವಲ್ಲ" ,ಅದರೆ ಅದನ್ನು ಸಾಧ್ಯವಾಗಿಸಿದ್ದು ಬೇರಾರು ಅಲ್ಲ ಅವರೆ ಶ್ರೀ ಎ ಎಮ್ ಮಡಿವಾಳರ.ನಿವೃತ್ತ ಸಹ ನಿರ್ದೇಶಕರು ಸಾ.ಶಿ.ಇ.ಬೆಳಗಾವಿ. ಇವರ ಕುಟುಂಬದ ಪರಿಚಯ ನನಗಾಗಿದ್ದು ನಾನು ಪದವಿ ಓದುತ್ತಿದ್ದ ಅವಧಿಯಲ್ಲಿ.ಅವರ ಪರಿವಾರದ ಶ್ರೀ ಚಂದ್ರಶೇಖರ ಮಡಿವಾಳರ ನನ್ನ ಆತ್ಮೀಯ ಸ್ನೇಹಿತ ,ಆತನ ಮೂಲಕ ಶ್ರೀ ಎ ಎಮ್ ಮಡಿವಾಳರ ಬಗ್ಗೆ ಕೇಳಿದ್ದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸರಳ ಮತ್ತು ಸಮರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು. ಅವರ ಹಾಗೆ ನಾನು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾ ? ಎಂಬುವ ಕನಸು ಕಂಡಿದ್ದೆ ಕೂಡಾ. ಸ್ನೇಹಿತ ಚಂದ್ರ ಶೇಖರ ಮಡಿವಾಳರ ಪದವಿ ಮುಗಿದ ತಕ್ಷಣವೆ ಶಿಕ್ಷಕರಾದರು,ಆದರೆ ನಾನು ಬಂಡಾರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಕಾಲೇಜಿಗೆ ಪ್ರಥಮವಾಗಿ ಪಾಸಾದೆ ಆ ಕಾರಣಕ್ಕಾಗಿ ನನಗೆ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಬಿ.ಇಡಿ. ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು.ಇದು ನಾನು ಮತ್ತೆ ಮಡಿವಾಳರ ಕುಟುಂಬಕ್ಕೆ ಹತ್ತಿರವಾಗುವಂತೆ ಮಾಡಿತು,ಕಾರಣ ಅದೇ ವರ್ಷದಲ್ಲಿ ಬಿ ಇಡಿ ವರ್ಗಕ್ಕೆ ಸೇರಿದ ಸ್ನೇಹಿತ ಶ್ರೀಶೈಲ ಮಡಿವಾಳರ. ಅವರು ಬೇರೆ ಯಾರು ಅಲ್ಲ ಶ್ರೀ ಎ.ಎಮ್ ಮಡಿವಾಳರವರ ಅಳಿಯ.ಅವರ ನಮ್ಮ ಸ್ನೇಹಿತತ್ವ ಬೆಳಯಲು ಕಾರಣ ನಾನು ಅವರ ಪಕ್ಕದ ಹಳ್ಳಿಯಿಂದ ಬಂದವನು ಅನ್ನುವದು ಒಂದು ಕಡೆಯಾದರೆ ಈಗಾಗಲೇ ಸ್ನೇಹಿತನಾಗಿದ್ದ ಅವರ ಸಹೋದರ ಚಂದ್ರಶೇಖರ ಮಡಿವಾಳರ ಆಗಿರಲೂ ಬಹುದು. ಆವಾಗ ಶ್ರೀಯುತ ಎ ಎಮ್ ಮಡಿವಾಳರ ಮುದೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸರಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಉಪನ್ಯಾಸಕರಾಗಿ ಆಗಮಿಸಿದರು.ಅವರನ್ನು ಶಿಕ್ಷಣದ ಅಧಿಕಾರಿ ಎಂದು ನಾನು ತಿಳಿದುಕೊಂಡಿದ್ದೆ. ಆದರೆ ಈಗ ಅವರನ್ನೆ ಗುರುವಾಗಿ ಪಡೆಯುವ ಸೌಭಾಗ್ಯ ದೊರೆಯಿತು. ಅವರಿಂದ ನಾನು ಕಲಿತೆ ಅನ್ನುವದಕ್ಕಿಂತ ನಾನು ಕಲಿಯಲು ಅವರು ಪ್ರೇರಣಾತ್ಮಕ ವ್ಯಕ್ತಿಯಾದರು ಅಂದರೆ ತಪ್ಪಾಗಲಾರದು. ಗರು ಎನ್ನುವವರು ಬದುಕೆ ಪುಸ್ತಕವಾಗಬೇಕು,ಬದುಕಿನ ಆದರ್ಶವಾಗಬೇಕು. ಗಾಂಧೀಜಿ ಇವತ್ತು ನಮಗೆ ಆದರ್ಶ ಏಕೆ ಹೇಳಿ ? ಬೋಧನೆ ಮಾಡಲಿಲ್ಲ ಬದಲಾಗಿ ಬದುಕಿ ತೋರಿಸಿದರು "He Preached what he practiced " ಅಂತೆಯೇ ಶ್ರೀ ಎ ಎಮ್ ಮಡಿವಾಳರವರ ಸರಳ ಜೀವನ ಮತ್ತು ಉದಾತ್ತ ಚಿಂತನೆ ನಮಗೆ ಕಲಿಯಲು ದಾರಿ ದೀಪವಾಯಿತು ಮತ್ತು ಸಮೀಪದ ಹಳ್ಳಿಯವರು ಎನ್ನುವುದು ಇನ್ನೊಂದು ಹೆಮ್ಮೆ ವಿಷಯ ಬೇರೆ. ಅವರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕೂಡಾ ಗರ್ವ ಅವರ ಹತ್ತಿರ ಸುಳಿದದ್ದೆ ಇಲ್ಲ. ತೀರಾ ಸಾಮಾನ್ಯ ವ್ಯಕ್ತಿ ಅವರ ಹತ್ತಿರ ಹೋದರೂ ಕೂಡಾ ಅತ್ಯಂತ ಸೌಜನ್ಯದಿಂದ ಅವರ ಸಮಸ್ಯೆಗಳನ್ನು ಪರಿಹರಿಸಿ ಎಲ್ಲರ ನೆಚ್ಚಿನ ಶಿಕ್ಷಣಾಧಿಕಾರಿಯಾಗಿದ್ದರು. ಅವರ ಆಡಳಿತಾತ್ಮಕ ಜಾಣ್ಮೆಯನ್ನು ಗಮನಿಸಿ ಹಲವಾರು ಪುರಸ್ಕಾರಗಳು ಅವರ ಹಿಂದೆ ಬಂದವು ಇದು ಅವರ ಸಾಧನೆಗೆ ಹಿಡಿದ ಕೈಗನ್ನಡಿ, ಇದು ಇಂದಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶಿಯೂ ಕೂಡಾ ಹೌದು.ಇತ್ತೀಚೆಗೆ ನನಗೊಂದು ಸಂಶಯ ಕಾಡಹತ್ತಿದೆ ತಾಳ್ಮೆ ಎನ್ನುವ ಶಬ್ದವನ್ನು ಪ್ರಾಯಶಃ ಈ ಮಡಿವಾಳರ ಕುಟುಂಬದಿಂದ ಕಡವಾಗಿ ತಂದಿದ್ದಾರೋ ಹೇಗೆ ಅಂತ. ನಾನು ಪ್ರೌಢಶಾಲಾ ಶಿಕ್ಷಕನಾಗಿದ್ದಾಗ ತಾಳಿಕೋಟೆಯಲ್ಲಿದ್ದೆ ಆಗ ಅವರು ತಮ್ಮ ಹಾಗೂ ತಮ್ಮನ ಮಗಳನ್ನು ಕೋಚಿಂಗನಲ್ಲಿ ಬಿಟ್ಟಿದ್ದರು ಕೆಲವೆ ದಿನಗಳಲ್ಲಿ ಆ ಹುಡುಗಿಯರು ಅಲ್ಲಿರಲು ತಯಾರಾಗಲಿಲ್ಲ.ಆ ಕಾರಣಕ್ಕಾಗಿಯೇ ಅವರು ಅಲ್ಲಿಗೆ ಬಂದಿದ್ದರು ಆವಾಗ ಆ ಸನ್ನಿವೇಶವನ್ನು ಹ್ಯಾಂಡಲ್ ಮಾಡಿದ ರೀತಿ ಇನ್ನೂ ನನ್ನ ಮನಪಟಲದ ಮೇಲೆ ಉಳಿದಿದೆ ನಾವು ಯಾವುದೆ ಕಾರ್ಯ ಕೈಕೊಂಡಾಗ ಅದು ವಿಫಲವಾದರೆ ನಾವು ಉದ್ವೇಗಕ್ಕೆ ಒಳಗಾಗಿ ವರ್ತಿಸುತ್ತೇವೆ ಆದರೆ ಅವರು ಅಂದು ಆ ಸನ್ನಿವೇಶದಲ್ಲಿ ಸಮಾಧಾನ ಚಿತ್ತದಿಂದ ವರ್ತಿಸಿದ ರೀತಿ ತೆಗೆದುಕೊಂಡು ನಿರ್ಣಯ ಅವರ ಪ್ರಾಂಜಲ ಮನಸ್ಸು ಇನ್ನೂ ನನ್ನ ಮನಸ್ಸಿನಲ್ಲಿ ಉಳಿದಿವೆ ಮತ್ತು ನಮಗೊದಗುವ ಕೆಲವು ಘಟನೆಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಕಲಿಸಿಕೊಟ್ಟಿವೆ. ಇವತ್ತಿಗೂ ಕೂಡಾ ನನಗೆ ಅಂತಹ ಸನ್ನಿವೇಶ ಸೃಷ್ಟಿಯಾದರೆ ಆ ಕ್ಷಣವನ್ನು ಮತ್ತು ಅವರು ಸನ್ನಿವೇಶಕ್ಕೆ ಸ್ಪಂದಿಸುವ ರೀತಿಯನ್ನು ಮೇಲಕು ಹಾಕುವದರ ಮೂಲಕ ಆ ಕ್ಷಣದಲ್ಲಿ ಜಯಶಾಲಿಯಾಗಿದ್ದೇನೆ.ಇಂದೂ ಕೂಡಾ ಅವರ ಪರಿವಾರ ನನ್ನ ಹತ್ತಿರದಲ್ಲಿಯೇ ಇದೆ ಅವರೆಂದರೆ ಸಹಪಾಠಿ ಉಪನ್ಯಾಸಕ ಶ್ರೀ ಶರಣಪ್ಪ ಮಡಿವಾಳರ. ನಮ್ಮ ಕಾಲೇಜಿನ ಉಪನ್ಯಾಸಕ.ಅವರೂ ಕೂಡಾ ಎಂತಹ ಸನ್ನಿವೇಶದಲ್ಲಿ ಸಹನೆ ಕಳೆದುಕೊಳ್ಳದೆ ನಿಶ್ಚಲ ಸ್ಥಿತಿಯಲ್ಲಿರುತ್ತಾರೆ. ಅವರಲ್ಲಿರುವ ತಾಳ್ಮೆ ನನ್ನ ಜೀವನದ ಕೆಲವು ಸಂದರ್ಭದಲ್ಲಿ ಮಹದುಪಕಾರ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಅದು ಒಂದು ತಪಸ್ಸೆ ಸರಿ. ಅಂತಹ ತಪಸ್ಸು ಅವರ ಕುಟುಂಬಕ್ಕೆ ದಕ್ಕಿದೆ ಎಂದರೆ ತಪ್ಪಾಗಲಾರದು. ಶ್ರೀಯುತ ಎ ಎಮ್ ಮಡಿವಾಳರ ಶಿಕ್ಷಣ ಕ್ಷೇತ್ರದಲ್ಲಿ ಅತಿ ಉನ್ನತ ಹುದ್ದೆ ಹೊಂದಿದ್ದರೂ ಗಾಂಧೀಜಿಯವರ ಸಿದ್ಧಾಂತ ಮೈಗೂಡಿಸಿ ಕೊಂಡವರು .ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿ ಜಾಣ್ಮೆಯಿಂದ ಬಗೆಹರಿಸುವ ಅವರ ಕಲೆಗಾರಿಕೆಯು ಎಂಥಹವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಇಂದು ಅವರು ಹೇಗಿದ್ದಾರೊ ಅಧಿಕಾರದ ಔನ್ಯತ್ಯದಲ್ಲಿದ್ದಾಗ್ಯೂ ಹಾಗೆಯೆ ಇದ್ದರು. ಇದನ್ನೆ ಅಲ್ಲವೆ ಸ್ಥಿತಪ್ರಜ್ಞ ಎಂದು ಕರೆಯುವದು ಅದು ಎಲ್ಲರಿಗೂ ಸಿದ್ದಿಸಲಾರದು ಇಂದಿನ ಎಲ್ಲಾ ಅಧಿಕಾರಿಗಳು ಕಲಿಯಬಹುದಾದ ಆಡಳಿತಾತ್ಮಕ ಕಲೆಗಾರಿಕೆ ಅವರಲ್ಲಿದೆ. ಇಂದಿನ ಒತ್ತಡದ ಬದುಕಿನಲ್ಲಿ ಆ ಗುರುವಿನ ಅಗ್ರ ವ್ಯಕ್ತಿತ್ವ ನಮಗೆಲ್ಲ ಮಾರ್ಗದರ್ಶಿ. ಇಂದು ನೌಕರಿ ಹಿಡಿಯುವುದು ಎಷ್ಟು ಮುಖ್ಯವೊ ,
ಉಳಿಸಿಕೊಂಡು ಹೋಗುವುದು ಕೂಡಾ ಅಷ್ಟೇ ಸವಾಲಿನ ಕೆಲಸ, ಕೆಸರನಲ್ಲಿ ಅರಳುವ ಕಮಲದಂತೆ ಹಳದೂರಿನಲ್ಲಿ ಹೈದನಾಗಿ ಜನಿಸಿದರೂ ಬೆಂಗಳೂರಿನವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿ ಬೆಳೆದ ಅವರ ಸಾಧನೆ ನಮಗೆಲ್ಲಾ ಮಾರ್ಗದರ್ಶಿ. ಹೀಗೆ ನೂರ್ಕಾಲ ನಮಗೆ ದಾರದೀಪವಾಗಿ ಆಯುರಾರೋಗ್ಯದೊಂದಿಗೆ ಬಾಳಲಿ ಎಂದು ಆಶಿಸುತ್ತೇನೆ.
ಇಂತಿ ತಮ್ಮ ಆತ್ಮೀಯ ಶಿಷ್ಯ
ಬಸನಗೌಡ ಗೌಡರ
ಉಪನ್ಯಾಸಕರು
No comments:
Post a Comment