ಕನ್ನಡದ ಮಾಧುರ್ಯ ಕಂದನ
ಬಾಯಲ್ಲಿ, ಕದಳಿಯ ಎಲೆ
ಗಾಳಿಗೆ ಸುಳಿದಾಂಗ ।।
ಕನ್ನಡದ ವಾಣಿ, ಕಟ್ಟಿದರೆ
ಕರಿಮಣಿ, ಇಟ್ಟರೆ ಚೂಡಾಮಣಿ
ಬೆಟ್ಟಕ್ಕೆ ಬೆಳಕಿನ ಕಿರಣದಾಂಗ।।
ಪದಗಳ ಜೊತೆಗೆ ಹದವಾಗಿ
ಓಡುವಳು, ವಾದಗಳಲ್ಲಿಯೂ
ವೇದನಾದ, ವೇದಾಂತಿಯಾಂಗ॥
ಪರಭಾಷೆಗೆ ನೀಡವ ಗೌರವ
ಅರಿವಿಗೆ, ಕನ್ನಡ ಭಾಷೆಯ ಪರ
ಹೊರೆಯಾಗದ ಹಿರಿತನದಾಂಗ॥
ಮಾಗಿದ ಮಾತುಗಳು,ತೂಗುವಳು
ತತ್ವಜ್ಞಾನ, ನುಡಿ ಉಡಿತುಂಬ
ಮುತೈದಿಯ ಎಲೆಯಡಕಿಯಾಂಗ॥
ಭಾಷೆಯಲ್ಲಿ ಬೀಸುವಳು ಸಂಸ್ಕಾರದ
ಬೀಜ,ಸಂಸ್ಕೃತಿ ವಾರಸದಾರಳಿವಳು
ಹೊಸತನಕ್ಕೂ ಬೇಕಿವಳು ಕಳಸದಂಗ॥
No comments:
Post a Comment