Thursday, May 13, 2021

* ಸತ್ಯವನ್ನು ಹೂತಿಡಲು ಸಾಧ್ಯವಿಲ್ಲ *

          ಧಾವಂತದ ಬದುಕಿನಲ್ಲಿ ಜೀವನಾನುಭವವನ್ನು ಮೆಲುಕು ಹಾಕಲು ಆಗುತ್ತಲೆ ಇರಲಿಲ್ಲ ಆ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಕೊರೋನಾಕ್ಕೆ ಧನ್ಯವಾದಗಳನ್ನು ಹೇಳಬೇಕು, ಆದರೆ ಅದರ ಅಟ್ಟಹಾಸ  ನೋಡಿದರೆ ಅದನ್ನು ಹೊಸಕಿ ಹಾಕಬೇಕು ಅನಿಸುತ್ತೆ ಆದರೆ ಏನು ಮಾಡುವುದು ಕೈಯಲ್ಲಿ ಸಿಗೋದಿಲ್ಲವಲ್ಲ... !, ಹಿಡಿ ಶಾಪ ಹಾಕಿ ತೆಪ್ಪಗೆ ಮನೆಯಲ್ಲಿ ಕುಳಿತುಕೊಂಡಿದ್ದೇವೆ ! ಇದೆ ಕೆಲಸ ಯಾವನಾದರೊ ಮನುಷ್ಯ ಮಾಡಿದ್ದರೆ..? ಅದರ ಕಥೆನೆ ಬೇರೆ ಆಗುತ್ತಿತ್ತು,  ಇರಲಿ ನಾನು ಏನು ಹೇಳಲಿಕ್ಕೆ ಹೊಂಟಿದ್ದೀನಿ ಎಂದರೆ ನಾನು ಸಣ್ಣ ವನಿದ್ಧಾಗ ನಮ್ಮ ಅಪ್ಪ  ಕೆಲವು ಕಥೆಗಳನ್ನು ಹೇಳುತ್ತಿದ್ದ ಅದನ್ನು ಈಗ ಹಂಚಿಕೊಳ್ಳುವ ಆಶೆ ಆಯಿತು ಅದಕ್ಕೆ ಅದರಲ್ಲಿ ಒಂದನ್ನು ಹಂಚಿಕೊಳ್ಳುವ  ಪ್ರಯತ್ನ ಮಾಡುತ್ತಿದ್ದೇನೆ.ನಮ್ಮಪ್ಪ ಮೂರು ಕ್ಲಾಸು ಮುಗಿಸಿ ನಾಲ್ಕನೆಯ ಇಯತ್ತೆಗೆ ಶಾಲೆಗೆ ಗುಡ್ ಬಾಯ್ ಹೇಳಿದ್ದ. ಆದರೆ ವ್ಯವಹಾರ ಜ್ಞಾನದಲ್ಲಿ ನನಗಿಂತ ತುಂಬಾ ಮಂದಿದ್ದ ಆತನ ಬಿಡುವಿನ ವೇಳೆಯಲ್ಲಿ ರಾಮಾಯಣ, ಮಹಾಭಾರತ ,ಕೆಲವು ನಾಟಕ ಹಾಗೂ ಕಥೆಗಳನ್ನ ಓದುತ್ತಿದ್ದ ಮತ್ತು  ಅವಗಳನ್ನು ಹಾಗೂ ತನ್ನ ಜೀವನಾನುಭವಗಳನ್ನು ನನಗೆ ಆಗಾಗ  ಹೇಳುತ್ತಿದ್ದ .ಬಹುಶಃ ಇಂದಿನ ಮಕ್ಕಳಿಗೆ ಅಂತಹ ಭಾಗ್ಯ ಕಡಿಮೆಯೇ ಅಂತ ನನ್ನ ಭಾವನೆ .ಅದೇನೆ ಇರಲಿ  ಮಕ್ಕಳಂತೂ ಸಂಪೂರ್ಣವಾಗಿ ಟಿ ವಿ ಅಥವಾ ಮೊಬೈಲ್ ದಾಸರಾಗಿದ್ದಾರೆ. ಅದರ ಒಳಿತು ಮತ್ತು ಕೆಡುಕಿನ ಬಗ್ಗೆ ಈಗ ಚರ್ಚೆ ಮಾಡುತ್ತಾ ಕುಳಿತು ಕೊಳ್ಳುವದು ಬೇಡ.  ಒಂದೂರಿನಲ್ಲಿ ಕಲ್ಲಪ್ಪ ಅಂತ ಒಬ್ಬ ಪ್ರಗತಿಪರ ರೈತ ಇದ್ದ ಒಂದು ಸಾರೆ ಎಲ್ಲರಿಗಿಂತ ಚನ್ನಾಗಿ ಇರುವ ಹೋರಿ ತರಬೇಕು ಅಂತ ಅನಿಸಿತು.ಎಲ್ಲರಿಂದ ಪ್ರಶಂಸೆ ಪಡೆಯಬೇಕು ಅಂತ ಮೂಡಲಗಿ ಜಾತ್ರೆಗೆ ಹೋಗಿ ಒಂದು ಜೊತೆ ಸುಂದರವಾದ ಹೋರಿಗಳನ್ನು ಖರೀದಿಸಿ ತಂದ . ಊರಿನಲ್ಲಿ ಎಲ್ಲರೂ ಹೋಗಿ ನೋಡಿದ್ದೆ, ನೋಡಿದ್ದು ಎಲ್ಲರೂ ಎತ್ತುಗಳನ್ನು ಹೋಗಳಿದ್ದೆ ,ಹೊಗಳಿದ್ದು. ವರ್ಣನೆಯಿಂದ ಕಲ್ಲಪ್ಪ ಉಬ್ಬಿ ಹೋದ.ರಾತ್ರಿಯಲ್ಲಾ ಅವರ ಹೊಗಳಿಕೆ ಅವನನ್ನು ಆಕಾಶದಲ್ಲಿ ತೇಲಿಸಿದಂತೆ ಮಾಡಿತು, ಸರಿಯಾಗಿ ನಿದ್ರೆನೆ ಬರಲಿಲ್ಲ ಯಾವಾಗ ಹೊತ್ತು ಹೊಂಟೀತು ಅವುಗಳಿಗೆ ನನ್ನ ಹೊಸ ಚಕ್ಕಡಿ(ಬಂಡಿ) ಹೂಡಿ, ಓಡಿಸಿ ಎಲ್ಲರಿಂದ ಸೈ ಅನಿಸಿ ಕೊಳ್ಳುಬೇಕು ಅಂದುಕೊಂಡ .ಮುಂಜಾನೆ ಎತ್ತುಗಳಗೆ ಹೊಟ್ಟು ಕಾಳು ತಿನಿಸಿ ರೆಡಿ ಮಾಡಿದ. (ಇವತ್ತು ನಾಗರಿಕರು ನಾವು ಎನ್ನುವವರಿಗೆ  ಕಾರು ಖರೀದಿಸಿದಾಗ ಇರುತ್ತಲ್ಲಾ ಅಂತಹ ಉಲ್ಲಾಸ ಇತ್ತು.) ಸರಿಯಾಗಿ ಹನ್ನೊಂದುವರೆ ಆಗಿರಬೇಕು, ಎತ್ತುಗಳಿಗೆ ಕೊಳ್ಳಗಟ್ಟಿದ ಹೋರಿಗಳು ಬಿರುಗಾಳಿಯಂತೆ ಗಾಳಿಯ ರಭಸದಲ್ಲಿ ಓಡಲು ಹತ್ತಿದವು. ಅವುಗಳನ್ನು ನಿಯಂತ್ರಣ ಮಾಡಲು ಸಾಧ್ಯವೆ ಆಗುತ್ತಿಲ್ಲ, ಮುಗದಾನಕ್ಕೆ ಹಗ್ಗ ಇದ್ದರೂ ಅವುಗಳನ್ನು ಹಿಡಿದು ಜಗ್ಗುವ ರಭಸಕ್ಕೆ ಕೈ ಉರಿಯ ಹತ್ತಿದವು. ಸುಮಾರು ಅರ್ಧ ಕಿಲೋಮೀಟರ್ ಸಾಗಿರಬೇಕು ಅಲ್ಲಿ ಒಂದು ಬೇವಿನ ಮರದ ಕೆಳಗೆ ಒಬ್ಬಳು ಹೆಂಗಸು ಬೇವಿನ ಬೀಜಗಳನ್ನು ಆರಿಸುತ್ತಿದ್ದಳು ಅದು ರೋಡಿನ ಸಮೀಪ ತನ್ನ ಮಗುವನ್ನು ಹಾಕಿ. ಅದು ಅವಳ ಮಗು  ಎಂದು ಇವನಿಗೆ ಅರಿತುಕೊಳ್ಳಲು  ಬಹಳ ಸಮಯವೇನು ಹಿಡಿಯಲಿಲ್ಲ, ಆಗ ಅವಳಿಂದ ಐದು ನೂರು ಮೀಟರ್ ಅಂತರದಲ್ಲಿದ್ದ.ಇನ್ನೇನು ತನ್ನ ಚಕ್ಕಡಿ ಆ ಮಗುವಿನ ಮೇಲೆ ಹಾಯ್ದು ಹೋದರೆ ...? ಹೌಹಾರಿ ಒಂದೆ ಸವನೆ ಚೀರಲು ಪ್ರಾರಂಭಿಸಿದ.ಬೇ. ಬೀಜ ಆರಿಸೋ ಹೆಣ್ಣು ಮಗಳೆ... ನಿನ್ನ ಮಗುವನ್ನು ತೆಗೆದುಕೊ ಹೋರಿಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಚೀರಿದ, ಅದರೆ ಆ ಹೆಂಗಸು ಮಾತ್ರ ತನ್ನ ಕಾಯಕದಲ್ಲಿ ಮಗ್ನಳಾಗಿ ತನ್ನ  ಮಗು ಇಷ್ಟು ದೂರ ಇದೆ ದೂರ ಹೊಡೆದುಕೊಂಡು ಹೋಗಲು ಇವನಿಗೇನು ದಾಡಿ ಇನ್ನೂ ಅಷ್ಟು ದಾರಿ ಇಲ್ಲವೇನು ? ಹೊಸ ಹೋರಿ ದರ್ಪ ಇವನದು ಎಂದು ಬೀಜ ಆರಿಸುವದರಲ್ಲೆ ಮಗ್ನಳಾದಳು.ಇವತ್ತು ನಾವು ಇಂತಹ ಸನ್ನಿವೇಶವನ್ನು ದಿನನಿತ್ಯ ಕಾಣಬಹುದು. ನಾವು ಬೈಕು ಓಡಿಸುತ್ತಿರುತ್ತೇವೆ... ಮೂರನಾಲ್ಕು ಹುಡುಗರು ಸೇರಿ ಮಾತನಾಡುತ್ತು ಹೋಗುತ್ತಿರುತ್ತಾರೆ  ನಾವು ಹಾರ್ನ ಹಾಕುತ್ತೇವೆ, ಹುಡುಗರು ಮಾತ್ರ ಸರಿಯುವದಿಲ್ಲ, ಅವರು ಅಂದು ಕೊಳ್ಳುವದೇನೆಂದರೆ ಇನ್ನೂ ಅಷ್ಟು ದಾರಿ ಇದೆ ಹಾದು ಹೋಗಲಿ, ಇಲ್ಲವೆ ನಮ್ಮ ಮೇಲೆ ಹಾಯಿಸಿಕೊಂಡು ಹೋಗುತ್ತಾನೇನು ಆ ಮಗ ? ಎನ್ನುವ ದಾಟಿಯಲ್ಲಿ ಇರುತ್ತಾರೆ ಆ ಹುಡುಗರು. ನಮ್ಮ ದಿನ ನತ್ಯದ ಬದುಕಿನಲ್ಲಿ ಇದು ಸಾಮಾನ್ಯ. ಹಾಗೆಯೇ ಆ ಬೀಜ ಆಯುವ ಹೆಣ್ಣು ಮಗಳು ವರ್ತಿಸಿದಳು. ಕಲ್ಲಪ್ಪ ಎಷ್ಟೆ ಪ್ರಯತ್ನ ಮಾಡಿದರೂ ಅವುಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗದೆ ಮಗುವಿನ ಮೇಲೆ ಹಾದು ಸ್ಥಳದಲ್ಲಿ ಮರಣ ಹೊಂದಿತು. ಆಗ ಆ ತಾಯಿ ಲಬೋ.. ಲಬೋ.. ಬಡಿದುಕೊಂಡು ಚಿರಾಡಿ ಅಳಹತ್ತಿದಳು ,ಕಾಲ ಮಿಂಚಿ ಹೋಗಿತ್ತು . ಪರಿಣಾಮವಾಗಿ ಆ ಮಹಿಳೆ ಪಿರ್ಯಾದಿ ನೀಡಿದಳು ಮತ್ತು ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದಳು ಮತ್ತು ಮಗುವನ್ನು ಕೊಂದ ಪಾಪಿಗೆ ಉಗ್ರ ಶಿಕ್ಷೆಯಾಗಬೇಕೆಂದು ನ್ಯಾಯಾಧೀಶರಲ್ಲಿ ಬೇಡಿಕೊಂಡಳು.ಇತ್ತ ಕಡೆ ಕಲ್ಲಪ್ಪ ಚಿಂತಾಕ್ರಾಂತನಾದ ತನಗೆ ಶಿಕ್ಷೆ ಖಚಿತವೆಂದು ಮನೆಯಲ್ಲಿ ಗೋಳಾಡಿದ ಏನು ಮಾಡುವುದು ನಡೆದು ಹೋಗಿದೆ ಹೇಗಾದರು ಮಾಡಿ ಪಾರಾಗಬೇಕಲ್ಲ ಒಳ್ಳೆಯ ವಕೀಲರನ್ನು ಹಿಡಿದು ಸಂಕಷ್ಟದಲ್ಲಿ ಪಾರಾಗಬೇಕೆಂದು ಪ್ರಸಿದ್ಧ ವಕೀಲರನ್ನು ಬೇಟಿಯಾದ ,ಆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ .ಒಂದು ಮಾತು ಇದೆ ವೈದ್ಯ, ವಕೀಲರಲ್ಲಿ ಆದದ್ದನು ಸರಿಯಾಗಿ ಹೇಳಬೇಕು, ಏನು ಮುಚ್ಚಿಡಬಾರದು. ಹಾಗೆಯೇ ಎಲ್ಲಾ ವಿವರಿಸಿದ .ನಂತರ ಹಾಯಿಸಿದ ಹೋರಿಗಳನ್ನು ವಕೀಲರಿಗೂ ತೋರಿಸಿದ, ಹೊರಿಗಳೆ  ಅಷ್ಟು ಚಂದವಾಗಿದ್ದವು .ವಕೀಲರಿಗೂ ಅಂತಹ  ಹೋರಿ ಹೊಂದಬೇಕು ಎನ್ನುವಷ್ಟು ಆಕರ್ಷಕ ವಾಗಿದ್ದವು. ಆಗ ವಕೀಲರು ಹೇಳಿದರು ಆ ಎರಡು ಹೋರಿಗಳನ್ನು ನನಗೆ ನೀಡಿದರೆ ನಾನು ನಿನ್ನನ್ನು ಈ ಕೇಶಿನಿಂದ ಬಿಡುಗಡೆಗೊಳಸುವೆನೆಂದು ಹೇಳಿದರು. ಕಲ್ಲಪ್ಪನಿಗೆ ಎಲ್ಲಿಲ್ಲದ ಸಂತೋಷ ಬೇಕಾದಷ್ಟು ಹೋಗಲಿ, ಕೊಡಲು ಆತ ರೆಡಿಯಾಗಿದ್ದ  ಹೋರಿಗಳು ಹೋದರೆ  ಹೋಗಲಿ ಶಿಕ್ಷೆಯಿಂದ ಆತನು ಪಾರಾಗಬೇಕಾಗಿತ್ತು.ವಿಚಾರಣೆ ಸಮೀಪಿಸಿತು. ವಿಚಾರಣೆ ಹಿಂದನ ದಿನ ವಕೀಲರು ಕಲ್ಲಪ್ಪನನ್ನು ಕರೆದು ನೀನು ಇಂದಿನಿಂದ ಮೂಕ, ವಿಚಾರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾತನಾಡುವ ಹಾಗಿಲ್ಲ .ಎಂದರು.ಎದುರು  ವಕೀಲರು ಏನೆ ಕೇಳಿದರು ಬಾಯಿ ತೆಗಯಕೂಡದು, ತೆಗೆದರೆ ಶಿಕ್ಷೆ ಖಚಿತವೆಂದು ವಕೀಲರು ತಾಕೀತು ಮಾಡಿದರು. ವಿಚಾರಣೆ ದಿನ ಬಂದೆ ಬಿಟ್ಟಿತು ಮಗು ಕಳೆದುಕೊಂಡ ಮಹಿಳೆಯೂ ಬಂದಿದ್ದಳು. ನ್ಯಾಯಾದೀಶರ ಮುಂದೆ ಪಾಟಿ ಸವಾಲು ಪ್ರಾರಂಭವಾಯಿತು ಎದರು ಪಕ್ಷದ ವಕೀಲರು ಕಲ್ಲಪ್ಪ ನನ್ನು ಕುರಿತು ಪ್ರಶ್ನೆ ಮಾಡಲು ಪ್ರಾರಂಭಿಸಿದರು ನಿನ್ನ ಹೇಸರೇನು ? ....ಉತ್ತರ ವಿಲ್ಲ ..., ನಿಮ್ಮ ಊರು ಯಾವುದು? ... ಉತ್ತರವಿಲ್ಲ... ನೀನು ಈ ಹೆಣ್ಣುಮಗಳ ಮಗುವಿನ ಮೇಲೆ ಚಕ್ಕಡಿ ಹಾಯಿಸಿದ್ದು ಸತ್ಯವೆ ?.. ಅದಕ್ಕೂ ಕಲ್ಲಪ್ಪನು ಉತ್ತರ ನೀಡಲಿಲ್ಲ ಆಗ ಕಲ್ಲಪ್ಪನ ವಕೀಲ ಎದ್ದು ನಿಂತು ನನ್ನ ಕಕ್ಷಿದಾರ ಮೂಕನಿದ್ದಾನೆ ಎಂದಾಗ, ಆ ಬೀಜ ಆಯುವ ಮಹಿಳೆಯ ಸಿಟ್ಟು ನೆತ್ತಿಗೇರಿತು.ಇಲ್ಲ ಸರ್ ಈತ ಸಳ್ಳು ಹೇಳುತ್ತಿದ್ದಾನೆ . ಈತ ಚಕ್ಕಡಿ ಹಾಯಿಸಿದ ಸ್ಥಳದಿಂದ ಅರ್ಧ ಕಿಲೋ ಮೀಟರ್ ದೂರ ಇದ್ದಾಗಲೆ ಇಡಿ ಊರಿಗೆ ಕೇಳುವಂತೆ ನನ್ನ ಹೋರಿ ನನಗೆ ಹಿಡತ ತಪ್ಪಿವೆ ಎಂದೂ, ಮಗು ಪಕ್ಕಕ್ಕೆ ತೆಗೆದುಕೋ ಎಂದು ಚೀರುತ್ತಾ ಬಂದದ್ದನ್ನು ನಾನೇ ಕೇಳಿದ್ದೇನೆ, ಅವನಿಗೆ ಮಾತು ಬರುತ್ತದೆ .ಆತ ಮೂಕನಲ್ಲ.......ಎಂದು ಹೇಳುತ್ತಾ ತನ್ನ ತಪ್ಪನ್ನೂ ತನಗರಿವಿಲ್ಲದೆ ಹೊರಗೆ ಹಾಕಿಯಾಗಿತ್ತು .ಹೀಗೆ ಜಾಣನಾದ  ವಕೀಲ ತನ್ನ  ಕಕ್ಷಿದಾರ ನಿರಪರಾದಿ ,ಆ ಮಗು ಸಾಯಲು ಅವನದು ದುರದ್ದೇಶವಿಲ್ಲವೆನ್ನುವುದನ್ನು ನಿರೂಪಿಸಿದ.ಇದರಿಂದ ನಮಗೆ ಮನವರಿಕೆಯಾಗುವದೇನೆಂದರು ಸತ್ಯವನ್ನು ಯಾವುದೆ ಸಂದರ್ಭದಲ್ಲಿ ಮುಚ್ಚಿಡಲು ಸಾಧ್ಯವಿಲ್ಲ, ಅದು ಹೂತಿಟ್ಟರು ಯಾವಗಲಾದರೂ ಒಂದು ದಿನ ಹೂರ ಬಂದೆ ಬರುತ್ತದೆ.ಅದಕ್ಕೆ ತನ್ನದೆ ಅದ್ಭುತವಾದ ಶಕ್ತಿ ಇದೆ.ಇದಕ್ಕೆ ತಾವೆಲ್ಲ ಏನಂತೀರಾ ?


             ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...