Friday, May 21, 2021

ಗುರಿ ಹಿಡಿದು, ತಾಳ್ಮೆ ಬಿಟ್ಟರೆ ..!

 * ಗುರಿ ಹಿಡಿದು, ತಾಳ್ಮೆ ಬಿಟ್ಟರೆ ..!     * 


         ಆದರ್ಶವೆ ಹಾಗೆ ಮಾತನಾಡುವವನ ಮಾತಲ್ಲಿ  ಇಲ್ಲವೆ ಉಪದೇಶ ಮಾಡುವವನ ಬಾಯಲ್ಲಿ ಹೂವು ಅರಳುವ ರೀತಿಯಲ್ಲಿ  ಅರಳುತ್ತದೆ.  ಆದರೆ ಆ ಹೂವು ಶಿವನಿಗೆ ಏರಬೇಕಲ್ಲವೆ ಅದು ಸರಳವಾದ ಕೆಲಸವಲ್ಲ ಬಿಡಿ, ಅಲ್ಲಿಗೆ ತಲುಪಬೇಕಾದರೆ ಸಾವಿರ ಹಳ್ಳ, ಕೊಳ್ಳ,ಶಿಖರ,ಕಂದರ ದಾಟಬೇಕಾಗುತ್ತದೆ.ಹೀಗೆ ತಲುಪಬೇಕಾದರೆ ತುಂಬಾ ತಾಳ್ಮೆಯ ಅವಶ್ಯಕತೆ ಇದೆ ಇದನ್ನು ಎಲ್ಲರಲ್ಲಿಯೋ ನಿರೀಕ್ಷೆ ಮಾಡಲಾದೀತೇ ? ಇಲ್ಲಿಯವರೆಗೆ ನಾನು ಏಕೆ ಪೀಠಿಕೆ ಹಾಕಿದೆ ಎಂದರೆ.. ಒಂದೂರಿನಲ್ಲಿ ಒಂದು ಪದವಿ ಪೂರ್ವ ಕಾಲೇಜು ಇತ್ತು. ಅಲ್ಲಿರುವ ವಿದ್ಯಾರ್ಥಿಗಳು ಅಷ್ಟೇನು ಜಾಣರು ಅಲ್ಲದ, ದಡ್ಡರೂ ಅಲ್ಲದ ಮಧ್ಯಮ ಹಾದಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಇದ್ದರು.ಏಕೆ ಹೀಗೆ ಎಂದರೆ ,ಬಹುತೇಕ ವಿದ್ಯಾರ್ಥಿಗಳ ಕಾಲೇಜು ನೆಪದಲ್ಲಿ ಬಸ್ ನಲ್ಲಿ ಅಡ್ಡಾಡಲು ಪಕ್ಕದ ನಗರದ ಕಾಲೇಜು ಕಡೆ ಮುಖ ಮಾಡಿದ್ದರು. ಕಾಲೇಜಿನಲ್ಲಿ ಶೇಕಡಾ ಎಪ್ಪತ್ತರಷ್ಟು ವಿದ್ಯಾರ್ಥಿನೀಯರೆ ಇದ್ದರು ಅವರು ಮಾತ್ರ ಬಹು ಆಸಕ್ತಿಯಿಂದ ಕಲಿಯುತ್ತದ್ದರು ಹುಡುಗರು ಮಾತ್ರ ತಮ್ಮ ಹೊಲ ಗದ್ದೆಗಳಲ್ಲಿ ಕೆಲಸಕ್ಕೆ ಮಹತ್ವ  ನೀಡಿ ಕೆಲಸವಿಲ್ಲದಾಗ ಮಾತ್ರ ಬಹಳ ಅಚ್ಚುಕಟ್ಟಾಗಿ ಕಾಲೇಜಿಗೆ ಬರುತ್ತಿದ್ದರು.ಹುಡುಗಿಯರು ಮಾತ್ರ ಕಾಲೇಜಿಗೆ ತಪ್ಪಿಸಿದವರಲ್ಲ ನೂರಕ್ಕೆ ನೂರು ಹಾಜರಿ. ಆ ಕಾಲೇಜಿಗೆ ಹೊಸದಾಗಿ ಬಂದ ಇತಿಹಾಸದ ಮೇಷ್ಟ್ರು ಶಿಸ್ತಿಗೆ ಹೆಸರಾದವರು ಅವರೆ ಪ್ರಕಾಶ.ತಮ್ಮ ಶಿಸ್ತಿನ ಪಾಠ  ಹೇಳುತ್ತ  "ನೋಡಿರಿ ಆ ಹುಡುಗಿಯರನ್ನಾದರು ನೋಡಿ " punctuality" ಎಂದರೇನು ಎನ್ನುವದನ್ನು ಕಲಿತುಕೊಳ್ಳಿರಿ" ಎಂದದ್ದಕ್ಕೆ ಪಾಠ ಮುಗಿದ ಮೇಲೆ ಬಂದ ಹುಡುಗರು ತಮ್ಮ ಮೇಷ್ಟರಿಗೆ ಹೇಳಿದರು " ಅದು ಅವರ punctuality   ಅಲ್ಲ ಸರ್.. ಮನೆಯಲ್ಲಿ  ಕೆಲಸ ಹತ್ತುತ್ತವೆ ಎಂದು ಕಾಲೇಜಿನಲ್ಲಿ ಬಂದು ಕುಳಿತು ಕೊಳ್ಳುವುದು ಸರ್ " ಎಂದು ನಗ ಚಟಾಕೆ ಹಾರಿಸಿದರು .ಪಾಲಕರು ಮಾತ್ರ ಮದುವೆಯವರೆಗೆ ಕಲಿಯಲಿ ಎಂದು ಹುಡುಗಿಯರನ್ನು ಕಾಲೇಜಿಗೆ ಕಳುಹಿಸಿದಂತೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿಗಾವಹಿಸಿದಂತೆ ಕಾಣುತ್ತಿರಲಿಲ್ಲ.ಇದಕ್ಕೆ ಅಪವಾದ ಎಂಬಂತೆ ಮಾಲಾ ಎಂಬ ಹುಡುಗಿಯು ಅದೆ ಕಾಲೇಜಿನಲ್ಲಿ ಓದುತ್ತಿದ್ದಳು ಆ ಹುಡುಗಿಯು ಶ್ರೀಮಂತರ ಮನೆಯ ಹುಡುಗಿ ಅವರ ಅಪ್ಪನೂ ಕೂಡಾ ಅದೆ ಕಾಲೇಜಿನಲ್ಲಿ ಕಾಲೇಜು ಸುಧಾರಣಾ ಸಮಿತಿ ಸದಸ್ಯನಾಗಿದ್ದ ಹೀಗಾಗಿ ಆಗಾಗ ಕಾಲೇಜಿಗೆ ಬಂದು ಕಾಲೇಜಿನ ಸುಖ ದುಃಖದಲ್ಲಿ ಭಾಗಿಯಾಗುತ್ತಿದ್ದ.ಮಗಳ ಶಿಕ್ಷಣದ ಬಗ್ಗೆ ಕೇಳಿ ಹೆಮ್ಮೆ ಪಡುತ್ತಿದ್ದ ಮಾಲಾನೂ ಕೂಡಾ ಅಷ್ಟೇ ಕಾಲೇಜಿನಲ್ಲಿ ಎಲ್ಲ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು.ಭಾಷಣ ,ಹಾಡುಗಾರಿಕೆಯಲ್ಲಿ ಎತ್ತಿದ ಕೈ, ಕಾಲೇಜು ಕಾರ್ಯಕ್ರಮ ಗಳಲ್ಲಿ ಇವಳದೆ ನಿರೂಪಣೆ ,ಅರಳು ಹುರಿದಂತೆ ಮಾತುಗಳು.ಇವಳು ನಿರೂಪಣೆಗೆ ನಿಂತರೆ ಟಿ.ವಿ.ನಿರೂಪಕಿಯೂ ತಲೆ ತಗ್ಗಿಸಬೇಕು ಅಂತಹ ವಾಕ್ ಪಟುತ್ವ.ಕೇವಲ ಪಠ್ಯೇತರ ಚಟುವಟಿಕೆಗಳಲ್ಲಿ ಅಷ್ಟೇ ಅಲ್ಲ ಪಾಠದಲ್ಲಿಯೂ ಮುಂದು. ಎಲ್ಲ ವಿಷಯಗಳಲ್ಲ ಇವಳ ಅಂಕಗಳು 90 ರ ಆಚೆ ಇಚೆಯೆ ಓಡಾಡುವುದು.ಹೀಗಾಗಿ ಎಲ್ಲಾ ಉಪನ್ಯಾಸಕರ ಅಚ್ಚುಮೆಚ್ಚಿನ ಹುಡುಗಿ .ಇವಳು ಇಲ್ಲದ ದಿನ ಉಪನ್ಯಾಸಕರ ಪಾಠ ಸಪ್ಪೆ ಯಾಗುತ್ತಿತ್ತು ಎಂದು ಉಪನ್ಯಾಸಕರು ಮಾತಾಡಿಕೊಳ್ಳುತ್ತಿದ್ದುರು ಕಾರಣ ಒಬ್ಬ ಉತ್ತಮ ಉಪನ್ಯಾಸಕನ ಪಾಠ ತನ್ನ ವರ್ಗದಲ್ಲಿ ನಡೆಯುವ ಸಂವಾದ ಮತ್ತು ಚರ್ಚೆಯ ಮೇಲೆ ಅವಲಂಬಿತವಾಗಿರುತ್ತದೆ.ವರ್ಗ ಕೋಣೆಯೊಂದು ಅದು ಜೀವಂತವಾಗಿರಬೇಕಾದರೆ ಶಿಕ್ಷಕ ಹೇಳಬೇಕು ವಿದ್ಯಾರ್ಥಿಗಳು ಕೇಳಬೇಕು, ಹಾಗೆಯೇ ವಿದ್ಯಾರ್ಥಿಗಳು ಹೇಳಬೇಕು ಶಿಕ್ಷಕರು ಕೇಳಬೇಕು ಇಲ್ಲದಿದ್ದರೆ ಅದೊಂದು ಹಿಂಸೆಯ ಕೋಣೆಯಾಗಬಹುದು.ಅಂತಹ ಜೀವಂತ ಕ್ಲಾಸ್ ಮಾಡುವಲ್ಲಿ ಮಾಲಾ ಯಾವಾಗಲೂ ಶಿಕ್ಷಕರನ್ನು ಜೀವಂತವಾಗಿಡುತ್ತಿದ್ದಳು.ಆ ಕಾರಣದಿಂದಲೆ ಅವಳು ಎಲ್ಲಾ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಳು. ಹಾಗೆಯೇ ತನ್ನ ಜೀವನದಲ್ಲಿಯೂ ಉದಾತ್ತ ಆದರ್ಶವನ್ನು ಕಟ್ಟಿಕೊಂಡಿದ್ದಳು ಅವಳಿಗೆ ಬಡವರ ಮೇಲೆ ಎಲ್ಲಿಲ್ಲದ ಪ್ರೇಮ.ಮೊದಲೆ ಹೇಳಿದ ಹಾಗೆ ಶ್ರೀಮಂತರ ಮಗಳು ತನ್ನ ಕೈಲಾಷ್ಟು ಇನ್ನೂಬ್ಬರಿಗೆ ಸಹಾಯ ಮಾಡುತ್ತಿದ್ದಳು.ಪ್ರಕಾಶ ಸರ್ ಹೇಳಿದ ಪಾಠಗಳನ್ನು ಅತ್ಯಂತ ಶ್ರದ್ಧೆಯಿಂದ ಕೇಳುತ್ತಿದ್ದಳು ಮತ್ತು ಜನರಿಗೆ ಸಹಾಯ ಮತ್ತು ಸೇವೆ ಮಾಡಲು ನಾನೊಬ್ಬ ಅಧಿಕಾರಿಯಾಗಬೇಕೆಂದು ತನ್ನ ಬಲವಾದ ಆಶೆಯನ್ನು ಹೊರಹಾಕುತ್ತಿದ್ದಳು ಮತ್ತು ಅದಕ್ಕೆ ಅರ್ಹಳು ಹೌದು. ಪ್ರಥಮ ಪಿಯುಸಿ ಅತ್ಯುನ್ನತ ಅಂಕದೊಂದಿಗೆ ಪಾಸಾಗಿ ದ್ವಿತೀಯ ಪಿಯೂಸಿಗೆ  ಪ್ರವೇಶ ಪಡೆದಳು.ಆದರೆ ಆ ವರ್ಗಕ್ಕೆ ಬಂದಾಗ ಆದದ್ದು ಬೇರೆ ರಾಜ್ಯ ಶಾಸ್ತ್ರ ವಿಷಯದ ಉಪನ್ಯಾಸಕರು ವರ್ಗವಾಗಿ ಬೇರೆ ಊರಿಗೆ ಹೋದರು ಪರಿಣಾಮವಾಗಿ ಪ್ರಾಚಾರ್ಯರು ಪಾಠ ಪ್ರವಚನಕ್ಕೆ ದಕ್ಕೆಯಾಗಬಾರದೆಂದು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರು, ಅದೆ ತಾನೆ ಸ್ನಾತಕೋತ್ತರ ಪದವಿ ಮುಗಿಸಿ ಬಂದ ಹೇಮಂತ ತಕ್ಷಣವೇ ಸಿಕ್ಕ ಉಪನ್ಯಾಸಕ  ಹುದ್ದೆಗೆ ನಿಜವಾದ ನ್ಯಾಯವನ್ನೆ ಒದಗಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರನಾದ .ಮಾಲಾ ಮೊದಲೆ ಸಾರ್ವಜನಿಕ ಸೇವೆಗಾಗಿ ಅಧಿಕಾರಿ ಆಗಬೇಕೆಂದು ಹಪಹಪಿಸುವ ಸಂದರ್ಭದಲ್ಲಿ ಹೇಮಂತ ಆಶಾಕಿರಣವಾದ  ಆಗಾಗ ಅಭ್ಯಾಸದ ನೆಪದಲ್ಲಿ ಬೇಟಿಯಾಗುವ ಅವಕಾಶ ಸಲುಗೆಯ ಹಂತಕ್ಕೆ ಮುಂದುವರೆಯಿತು. ದ್ವಿತೀಯ ಪಿಯುಸಿ ಮುಗಿಯುವದರೊಳಗಾಗಿ ಸಲುಗೆ ಪ್ರೀತಿಯಾಗಿ ಬದಲಾವಣೆಯಾಯಿತು. ಅದಕ್ಕೆ ಜಾತಿಯೂ ಸೇರಿದರೆ ಇನ್ನೇನು ಆಗಬೇಡ ಹೇಳಿ ? 90 ರ ಆಜು ಬಾಜುವಿನಲ್ಲಿದ್ದ ಹುಡುಗಿ ಅರವತ್ತರ ಬಾಜುವಿನಲ್ಲ ಬಂದು ನಿಂತಿದ್ದಳು.ಮುದಿನ ವರ್ಷ ವರ್ಗಾವಣೆಗಳು ನೆಡೆದು ಪ್ರಕಾಶ ಉಪನ್ಯಾಸಕರು ಕೂಡಾ ತಮ್ಮ ಊರಿನ  ಸಮೀಪದ ಕಡೆ ವರ್ಗವಾಗಿ ಹೊಗಿದ್ದರು.ಹೀಗೆ ಬೇರೆ ಊರಿನಲ್ಲಿ ಪ್ರಕಾಶ ಸರ್ ನಾಲ್ಕಾರು ವರ್ಷಗಳ ಸೇವೆ ಮುಗಿಸಿದ ಮೇಲೆ ಯಾವದೋ ಕಾರಣ ನಿಮಿತ್ಯ ತಾನು ಸೇವೆ ಸಲ್ಲಿಸಿದ ಪಕ್ಕದ ನಗರಕ್ಕೆ ಹೋಗುವ ಕಾಲ ಬಂದಿತು. ಲಗುಬಗೆಯಿಂದ ನಡೆದು ಹೋಗುವಾಗ ಎದುರಿಗೆ ಯಾರೋ "ನಮಸ್ಕಾರ ಸರ್"ಎಂದಾಗ ತನ್ನ ಕಣ್ಣು ತಾನು ನಂಬಲಾಗುತ್ತಿಲ್ಲ ,ಅದೆ ಬಾಡಿದ ಮುಖ ಕೆದರಿದ ಕೂದಲು, ಕೈಯಲ್ಲಿ ಒಂದು ಹೆಣ್ಣು ಕೂಸು,ಬಗಲಲ್ಲಿ ಇನ್ನೊಂದು ಗಂಡು ಕೂಸು.ಗುರತು ಹಚ್ಚಲು ಬಹಳ ಸಮಯವೇನು ಹಿಡಿಯಲಿಲ್ಲ.ಪಕ್ಕದಲ್ಲಿಯೇ ನಿಂತವನು ಕೂಡಾ ತಾನ ಈ ಮೊದಲು ಸೇವೆ ಸಲ್ಲಿಸಿದ ಕಾಲೇಜಿನ ಅತಿಥಿ ಉಪನ್ಯಾಸಕ ಹೇಮಂತನೆನ್ನುವುದು ಖಚಿತವಾಗಿತ್ತು . ನಾಚಿ ನೀರಾಗಿದ್ದ ಆತ "ದುಡುಕಿ ತಪ್ಪು ಮಾಡಿದೆವು" ಸರ್ ಇನ್ನೊಂದಿಷ್ಟು ದಿನ ಸಾಧನೆಗಾಗಿ ಅವಧಿ ಯನ್ನು ಮೀಸಲಿಡಬೇಕಾಗಿತ್ತು ಎಂದ. ಪ್ರಕಾಶ ಸರ್ ಗೆ ಏನು ಮಾತನಾಡಬೇಕೆನ್ನವುದೆ ತಿಳಿಯಲೊಲ್ಲದು." ಮಾಲಾ,  ನಾನು ಕನಸು ಕಂಡ ಮಾಲಾ ಎಲ್ಲಿ ಹೋದಳು ?" ನನ್ನ ವಿದ್ಯಾರ್ಥಿ ಉನ್ನತ ಅಧಿಕಾರಿಯಾಗಬೇಕೆಂದು ಬಯಸಿದ್ದೆ ಹೀಗೇಕೆ ಆಯಿತು?"  ಪ್ರಕಾಶಗೆ ಕತ್ತಲೆ ಕವಿದಂತಾಯಿತು. "ಸರ್, ಪ್ರೀತಿಯೆಂಬ ಭೂತ ಮತ್ತು ಹೇಮಂತನ ತಂದೆಯ ಮರಣದ ನಂತರ ಆತನಿಗೆ ಸಿಕ್ಕ ಅನುಕಂಪದ ನೌಕರಿಯ ಭದ್ರತೆಯ ಅಸ್ತ್ರದ ಫಲವಾಗಿ. ತಂದೆ ತಾಯಿ ಬಂಧುಗಳಗವನ್ನು ಮೀರಿ ಇಲ್ಲಿಯವರೆಗೂ ಬಂದು  ನಿಲ್ಲಬೇಕಾಯ್ತು ಸರ್, "ತಾವು ನೀಡಿದ ಆದರ್ಶ ಮತ್ತು ಗುರಿಯನ್ನು ತಲುಪುವಲ್ಲಿ ಎಡಿವಿದೆ " ಎಂದಳು ಮಾಲಾ,ಇರಲಿ ಆದದ್ದು ಎಲ್ಲವೂ ಒಳ್ಳೆಯದಕ್ಕೆ ಆಗಿದೆ. ನಿಮ್ಮ ಗುರಿ ಮತ್ತು ಆದರ್ಶ  ನಿಮ್ಮ ಮಕ್ಕಳಲ್ಲಿ ಕಾಣಿರಿ ಎಂದು ಬಸ್ ಕಡೆ ಮುಖ ಮಾಡಿದರು .ಬಸ್ ನಲ್ಲಿ ಕುಳಿತ ಪ್ರಕಾಶಗೆ ಅವರದೆ ಚಿತ್ರ ಸುಳಿದಾಡಿದ ಅನುಭವ, ದೊಡ್ಡ ಗುರಿ ಸಾಧಿಸಲು ದೊಡ್ಡ ತಾಳ್ಮೆ ಮತ್ತು ನಿರಂತರ ತಪಸ್ಸು ಅವಶ್ಯಕತೆ ಇದೆ !... ಎನ್ನುತ್ತಾ ಪ್ರಯಾಸ ಪಟ್ಟು ಸೀಟು ಹಿಡಿದು ವರಗಿ ಉಸಿರು ಬಿಟ್ಟರು , ಕಂಡಕ್ಟರ್ ಬಂದು  ಟಿಕೆಟ್ ಕೇಳಿ ದಾಗಲೆ ವಾಸ್ತವಕ್ಕೆ ಬಂದರು ಪ್ರಕಾಶ್ ಸರ್.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...