ಹೇಳಿ ಕೇಳಿ ನಾನೊಬ್ಬ ಪೆದ್ದ
ಹೇಳುವರು ನೀನೊಬ್ಬ ಮುಗ್ಧ.
ಇದಕ್ಕೆ ನಾನೂ ಬದ್ದ.
ಇದರಲ್ಲಿ ನನ್ನದೇನು ತಪ್ಪಿಲ್ಲ ಬಿಡಿ ?
" ಬುದ್ದ, ಹಂಗಂದ್ರ ನೀ ದಡ್ಡ ಅಂತ"
ಖಂಡಿತವಾಗಿಯೂ ಹೌದು.
ಏಕೆ ಹೇಳಿ? ಜಾಣ ಎನ್ನಲು
ಚನ್ನಾಗಿಯೇ ನಾಟಕ ಮಾಡಬೇಕು.
ಭಾಗಿಸಿ ವಿಭಾಗ ಮಾಡಬೇಕು.
ನನಗೇನು ಬರತ್ತೇ ಹೇಳಿ ?
ಇಲಿಗೆ ಹುಲಿ ಎನ್ನಲು ಬರಲ್ಲ.
ಜಾಲಿ ಮರಕ್ಕೆ ಆಲದ ಮರ
ಎನ್ನಲು ಬರಲ್ಲ .
ಖಾಲಿ ಜೈಕಾರ ಹಾಕಲು
ಧ್ವನಿ ಬರಲ್ಲ
ಸತ್ಯವೆಂಬ ಭೂತವನ್ನು
ನಿತ್ಯ ಮಾತಿಗಂಟಿಸಿ
ಹರಿಶ್ಚಂದ್ರ ನಂತೆ ನಡೆದದ್ದೇ ಬಂತು.
ಹೋಗುವದಾದರೂ ಎಲ್ಲಿಗೆ ?
ಸುಡಗಾಡ...... ಅಲ್ಲವೆ ?
ಹೀಗಾಗಿ ನಾನೊಬ್ಬ ಪೆದ್ದ ?
ಯಾವಗಲೂ ನಿಯಮಗಳ ಪಾಲನೆ
ನಮಗೆಲ್ಲಿದೆ ಪೋಷಣೆ !.
ಮುರಿದವನೆ ಜಾಣ
ಪಾಲಿಸುವವನೆ ಕೋಣ !
ನಡೆದದ್ದೇ ನಡೆದದ್ದು
ಮುಟ್ಟಿದೆನೇನು ದಡ !
ಈಗ ನಿಯಮಗಳೆ ಅದಲು ಬದಲು
ಮುರಿದ ನಿಯಮಗಳೆ
ಈಗ ಸಕ್ರಮಗಳು.....
ಹೀಗಾಗಿ ನಾನೊಬ್ಬ ಮುಗ್ಧ !
ನನ್ನಂತೆ ಸಾವಿರ ಸಾವಿರ ಜನ
ನಾವ್ಯಾರು ಜಾಣರಲ್ಲ,
ಏಕೆ ಹೇಳಿ ? ಕಿವಿ ಕೇಳುವುದಿಲ್ಲ
ಕೇಳಿದರೂ ಮಾತು ಬರಲ್ಲ,
ಬಂದರೂ ನಾವು ಕೂಡಿ ಹೋಗುವುದಿಲ್ಲ
ಹಾಗಾಗಿ ನಾವೆಲ್ಲಾ ಮುಗ್ಧರು !!!!!!
No comments:
Post a Comment