ಮುಂಗಾರು ಮಳೆ ಮುತ್ತಿಟ್ಟ ಬನ
ಮದರಂಗಿ ಮೆತ್ತಿದ ಮಧುವನಗಿತ್ತಿ
ಹದವಾಗಿ ಅರಳಿತು ಮೌನ ಮನ
ಭ್ರಮರದಂತೆ ತಿರುಗಿತು ವನ ಸುತ್ತಿ//
ಕಾಯ್ದ ಕಬ್ಬಿಣ ತೊಯ್ದಾರುವ ಮುನ್ನ
ಬಾಯ್ದೆರೆದಿದೆ ಚಮಟಿ ಪೆಟ್ಟಿಗೆ ಬಯಸಿ
ಹದವು ಬೇಕು ಹರಗಿ ಬಿತ್ತಲು ಬೀಜ
ಬೆದೆ ಬಂದ ಮನ ತಹ ತಹಿಸಿ ಕೆಂಡ ನಿಗಿನಿಗಿ //
ಕಾಪಿಟ್ಟ ಕಾವು ಹೆಬ್ಬಾವಿನಂತೆ ಹಿರಿದು
ಕಾಮನೆಗಳ ನುಂಗಿ ಏರುವುದು ಮರ
ಸುತ್ತುವುದು ಎಡಬಲ, ಏರುವುದೊಂದೆ
ಮತ್ತೇರಿ ಮುರಿಯುವುದು ಒಣ ಕೊರಡು//
ಕಾಲದ ಕತ್ತಲೆಯು ಬಲೆ ಬೀಸಿದಾಗ
ಜಾಲವು ಕಾಣದೆ ಕುಸಿಯಿತು ಕುರುಡಾಗಿ
ಬಿಲಕಾಗಿ ಹಗಲು ಹುಡುಕಾಡಿತು ಮನ
ನೆಲವಿದೆ ಬರಿ ಕಲ್ಲು ಮುಳ್ಳಿನ ಬರಡು//
ತವಕ ತನ್ನರಿವಿನ ಹರಿವು ಮೀರಿ
ವಿವೇಕದ ವಿವೇಚನೆ ಮರೆಯಾಗಿ
ತಾವಿರುವ ತವರಿನ ಬೇರು ಹರಿದು
ಸವಕಳಿಯಾಗಿತ್ತು ಸತ್ಯದ ಕರಡು //
ಜವರಾಯ ನಿಲ್ಲಲು ಜಡೆಮಳೆಯಲ್ಲ
ಅವನಿ ಕಾಯ್ದಿರುವಳು ತಡೆಯುವವರಿಲ್ಲ
ಭುವಿಯ ಬಯಸುವ ಮನಗಳಿಗೆ ಬರವಿಲ್ಲ
ಯಮರಾಯನಿಗೂ ನೀ ಬೇಕು ಇಲ್ಲ ಕೊಡೆ//
No comments:
Post a Comment