ಹಾಲು ಹಂಡೆ(ಹಾಲಂಡೆ)
ಹಲವು ಬಾರಿ ಹಾಲು ಹಂಡೆಯ ಬಗ್ಗೆ ಬರೆದು ನನ್ನ ಮನಸ್ಸಿನಲ್ಲಿಯ ನನ್ನೂರಿನ ಪ್ರಕೃತಿ ಸೌಂದರ್ಯದ ಸವಿಯನ್ನು ಹೊರಹಾಕಿದ್ದೇನೆ. ಈಗ ಮತ್ತೊಮ್ಮೆ ಅದರ ಪ್ರಕೃತಿ ಸೊಬಗನ್ನು ಈ ಸ್ವಾತಂತ್ರ್ಯ ದ ಅಮೃತಮಹೋತ್ಸವ ಸಂದರ್ಭದಲ್ಲಿ ಈ ಸಮೂಹ ಮಾಧ್ಯಮದ ಮೂಲಕ ನನ್ನ ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಮತ್ತೆ ಕೈ ಬೆರಳುಗಳು ಮೊಬೈಲ್ ಕೀ ಮಣಿಗಳೊಂದಿಗೆ ಸರಸಕ್ಕಿಳಿದಿವೆ. ಘನ ಸರ್ಕಾರ ದಿನಾಂಕ 13.08.2022 ರಿಂದ 15.08.2022 ರವರಿಗೆ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವು ಮೂಲಕ ರಾಷ್ಟ್ರ ಪ್ರೇಮ ಮರೆಯಲು ಸೂಚಿಸಿದ ಪ್ರಯುಕ್ತ ಪ್ರತಿ ಮನೆ,ವಾಹನ, ಗಲ್ಲಿಗಲ್ಲಿಗಳಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಡಗರ ಕಾರಂಜಿಯಂತೆ ಪುಟಿಯುತ್ತಿದೆ. ಮುಂಜಾನೆ 8.00 ಗಂಟೆ ಯಿಂದ ಮಧ್ಯಾಹ್ನ 2.00.ಗಂಟೆಯವರೆಗೆ ಎಡೆಬಿಡದ ಸಡಗರದ ಸಂಭ್ರಮದ ಕಾರ್ಯಗಳು, ಮುಂಜಾನೆ ,ಪೌಢ ,ಪದವಿ ಪೂರ್ವ, ಪದವಿ ಕಾಲೇಜುಗಳ ಸಂಯುಕ್ತ ಧ್ವಜಾರೋಹಣ ,75 ವಸಂತ ಪೂರ್ತಿ ಗೊಳಿಸದ ಪ್ರಯುಕ್ತ ವಿದ್ಯಾರ್ಥಿಗಳಿಂದ ಅಮೃತ ಸಂಖ್ಯೆಯ ಸಂಕೇತ ಸಂಖ್ಯೆಯ ನಿರ್ಮಾಣ. ವಿದ್ಯಾರ್ಥಿಗಳಿಂದ ಪಿರಾಮಿಡ್ ರಚನೆ, ದೇಶ ಭಕ್ತಿ ಗೀತೆಗಳಂತೂ ದೇಶ ಭಕ್ತಿಯ ಪ್ರೇಮ ನಮ್ಮೆಲ್ಲರಲ್ಲಿ ರೋಮ ರೋಮಗಳಲ್ಲಿ ವಿದ್ಯುತ್ ಸಂಚಾರ ಮಾಡಿದೆವು. ತದನಂತರ ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರ ಹುದ್ದೆಯ ಪ್ರಭಾರ ವಹಿಸಿ ಕೊವಿಡ್ ಕೆಟ್ಟ ಕನಸುಗಳನ್ನು ಸಿವುಡುಗಟ್ಟಿ ಸೀಮೆ ಆಚೆ ದಾಟಸಿ ಪ್ರಗತಿಯ ಮುನ್ನುಡಿ ಬರೆಯಲು ಹಾತೊರೆಯುತ್ತೀರುವ ಶ್ರೀ ವಿಠ್ಠಲ ಕಳಸಾ ರವರ ನೇತೃತ್ವದಲ್ಲಿ ಈರಣ್ಣ ದೊಡ್ಡ ಮನಿ ಕನ್ನಡ ಉಪನ್ಯಾಸಕರ ನೇತೃದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ, ದೇಶ ಭಕ್ತಿಗೀತೆಗಳು ನಡೆದವು. ಇದು ಇಲ್ಲಿಯವರೆಗೆ ಬಯಲಿನಲ್ಲಿ ನಿಂತು ಬಳಲಿ ಬಂದ ವಿದ್ಯಾರ್ಥಿಗಳಿಗೆ ಬೆಲ್ಲದ ಹೋಳಿಗೆಯೇ ಸರಿ, ಯಾಕೆಂದರೆ ಸ್ಫರ್ಧೆಗಾಗಿ ಹೆಸರು ನೀಡಿದ ವಿದ್ಯಾರ್ಥಿಗಳಿಗಿಂತ ಮೂರು ಪಟ್ಟು ವಿದ್ಯಾರ್ಥಿಗಳು ಸದೃಡ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಮಾತಾಡಿದ ವಾದ ಸರಣಿಗೆ ತಲೆದೂಗುವ ಸರಣಿ ನಮ್ಮ ದಾಗಿತ್ತು.ಇಷ್ಟೆಲ್ಲಾ ಶೈಕ್ಷಣಿಕ ಚಟುವಟಿಕೆಗಳ ಮಧ್ಯ ಬಹು ದಿನಗಳಿಂದ ನಮ್ಮ ಉಪನ್ಯಾಸಕ ಬಂಧುಗಳ ತಲೆಯಲ್ಲಿ ಅಂಕುರಿಸಿದ್ದ ಹಾಲು ಹಂಡೆಯ ಕನಸು ದಿಗ್ಗನೆ ಜಾಗೃತವಾಯಿತು, ಏಕೆಂದರೆ ಮಳೆಯಾಗುತ್ತಿದೆಯಲ್ಲವೆ ? ಹಾಲಿನಂತಹ ನೀರಿನಲ್ಲಿ ತೇಲುವ ಬಯಕೆ ಅದು ಹೆಮ್ಮರವಾಗಲು ಕೆಲವೇ ನಿಮಿಷಗಳು ಸಾಕಾಗಿತ್ತು, ನಾಳೆ ಹೋದರಾಯಿತು ಎನ್ನುವ ವಿಚಾರಗಳು ಈಗ ಪತನದ ಅಂಚಿಗೆ ಸರಿದು ಹೋದವು ಮುಂಜಾನೆ 8.00 ಗಂಟೆಯಿಂದ ಎಡೆಬಿಡದ ಕೆಲಸಗಳ ನಡುವೆ ವಿದ್ಯಾರ್ಥಿಗಳೊಂದಿಗಿನ ದೇಶ ಪ್ರೇಮದ ಗುಂಗಲ್ಲಿದ್ದ ನಮಗೆ ಪ್ರಕೃತಿ ಮಡಿಲಿನ ಕರೆ.....ಹಾನಾಪೂರ ಎಸ್ ಪಿ ಗ್ರಾಮದ ರಾಜು ಕಳ್ಳಿಮನಿಯ ಟಂ ಟಂ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡಿತು.ಹಾನಾಪೂರ ಎಸ್ ಪಿ ಗುಳೇದಗುಡ್ಡದಿಂದ ಬಹು ದೂರದ ಊರೇನಲ್ಲ ಕೇವಲ ಏಳು ಕಿ.ಮಿ.ಮಾತ್ರ ಹತ್ತರಿಂದ 20 ನಿಮಿಷದ ದಾರಿ. ಹಾನಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಒಂದು ದೊಡ್ಡ ಶೆಲೂಟ ಹೇಳಲೆ ಬೇಕು,ಏಕೆಂದರೆ ಈ ಪೂರ್ವದಲ್ಲಿ ನಾನೊಂದು ಆರ್ಟಿಕಲ್ ಬರೆದು ಹಾಲು ಹಂಡೆಗೆ ದಾರಿ ಮಾಡಿದರೆ ಪ್ರವಾಸಿಗರಿಗೆ ಅನುಕೂಲ ವಾಗುತ್ತದೆ ಎಂದಿದ್ದೆ. ಅದಕ್ಕಾಗಿಯೆ ಈ ಸಿಮೆಂಟ ರಸ್ತೆ ಮಾಡಿದ್ದಾರೆ ಎಂದು ನಾನು ಹೇಳಲಾರೆ... ಹಾನಾಪೂರ ಎಸ್ ಪಿ ಪಂಚಾಯತ್ ಗೆ . ನಮ್ಮೂರಿಗೆ ಅವಶ್ಯಕತೆ ಏನಿದೆ ಎಂಬುದನ್ನು ಚನ್ನಾಗಿಯೇ ಬಲ್ಲರು.. ಹೀಗಾಗಿ ಹಾಲು ಹಂಡೆಗೆ ಹೋಗಲು ಗಟ್ಟು ಮುಟ್ಟಾದ ರಸ್ತೆ ಮಾಡಿಸಿ ಪ್ರಕೃತಿ ಸೌಂದರ್ಯ ಸವಿಯಲು ಪ್ರಕೃತಿ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.ನಾಲ್ಕು ಬೈಕು ಒಂದು ಟಂ ಟಂ ಹಾಲ ಹಂಡೆಗೆ ಬಂದಾಗ ಹಾಲು ಹಂಡೆಯ ಹಿರಿದಾದ ಕಲ್ಲು ಬಂಡೆಗಳು ಹಾರ್ದಿಕ ಸ್ವಾಗತ ನೀಡಿದವು. ಹಂಡೆಯಲ್ಲಿಳಿಯಲು ಗಂಡೆದೆಯೇ ಬೇಕು ಆದರೇನು ಮಾಡುವುದು ! ಹಲವು ಬಾರೆ ನೋಡಿ ಬಂದ ಸ್ನೇಹಿತ, (ಈಗ ಪ್ರಭಾರ ಪ್ರಾಚಾರ್ಯ) ವಿಠ್ಠಲ ಕಳಸಾ ಮತ್ತು ನಾನು ಹಂಡೆದಂತಹ ಹೊಂಡ ಇಳಿಯಲು ಮಾಡಿದ ಸಾಹಸ ಹಿಮಾಲಯ ಏರಲು ಮಾಡಿದ ತೇನಸಿಂಗನಿಗಿಂತ ಕಡಿಮೆ ಏನಲ್ಲ ,ಏಕೆಂದರೆ ಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದನ ಅನುಭವದ ಆಧಾರದ ಮೇಲೆ ನಾವು ಇಳಿಯಲು ಮಾಡಿದ ಹುಚ್ಚು ಸಾಹಸ ಅಚ್ಚಳಿಯದೆ ನಮ್ಮ ಮನಪಟಲದ ಮೇಲೆ ಉಳಿಯುವಂತೆ ಮಾಡಿತು. ಏಕೆಂದರೆ ಇಪ್ಪಡಿ, ಹೊಂಗೆ ವಿವಿಧ ಜಾತಿಯ ಕಂಟಿಗಳು ನಾಕಾಬಂದಿಗೆ ನಿಂತ ಕಾವುಲುಗಾರಂತೆ ನಮ್ಮ ನ್ನು ತಡೆಯಲು ಬಂದವು. ನಾವೇನು ಬಿಟ್ಟು ಹಿಂದಿರುಗಲು ಬಂದ ಹೇಡಿ ಸೈನಿಕರೆ ? ಅಡ್ಡಲಾಗಿ ಕೈಚಾಚಿ ನಿಂತ ಶಿಪಾಯಿಗಳನ್ನು ಸರಿಸಿ ನಡೆದಂತೆ ಮುನ್ನಡೆದೆವು .ಸುಮಾರು ದಿನಗಳಿಂದ ದುಮ್ಮಿಕ್ಕಿ ಹರಿದು ಈಗ ಸೊರಗಿದ ಜಲಪಾತ ಈಗ ಲೇಟಾಗಿ ಬಂದ ಹುಡುಗರನ್ನು ಗದರುವಂತೆ ಭಾಸವಾಗುತ್ತಿತ್ತು. ನಮ್ಮ ಉಪನ್ಯಾಸಕರ ಬಳಗದ ಮಹಿಳಾ ಉಪನ್ಯಾಸಕೀಯರು ಹಾಗೂ ಸಿಬ್ಬಂದಿ ವರ್ಗ ನಮ್ಮ ಹಿಂದೆಯೇ ನಾವೇನು ಕಡಿಮೆಯೇ ಅನ್ನುವಂತೆ ಬರುತ್ತಿತ್ತು ! ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ನಾಡಿನವರಲ್ಲವೆ ! ಎನ್ನುವಂತೆ ಹಳಸುಗಟ್ಟಿದ ಕಲ್ಲು ಮುಳ್ಳಿನ ಮಧ್ಯ ಜುಳು ಜುಳು ಹರಿಯುವ ನೀರಲ್ಲಿ ತೆವಳುತ್ತಾ ಧಾವಿಸಿ ಬರುವ ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ಉಪನ್ಯಾಸಕಿಯರು, ದ್ವಿತೀಯ ದರ್ಜೆ ಸಹಾಯಕರು.....ಪೆನ್ನು ಹಿಡಿದ ಕೈಗಳೂ ಗನ್ನು ಹಿಡಿಯಬಲ್ಲವು ಎನ್ನುವಂತೆ ಬರುತ್ತಿರುವ ಮಹಿಳೆಯರ ಸಾಹಸ ಮೆಚ್ಚಲೆ ಬೇಕು. ಇರಲಿ ಹೊಂಡ ತಲುಪಿದೆ ಮೇಲೆ ಸಿಕ್ಕ ಆ ಸಂತೃಪ್ತಿ ,ತಲುಪುವಾಗ ಪಟ್ಟ ಶ್ರಮದ ಫಲಕ್ಕಿಂತ ಸಾವಿರ ಪಾಲು ಮೇಲಾಗಿತ್ತು. ಪ್ರಕೃತಿಗೆ ಸರಸಮನಾರು ನಿರಾಭರಣ ಸುಂದರಿ. ಕೃತ್ರಿಮವಾಗಿ ರೂಪಿಸಿದ ನೂರು ಸರೋವರಗಳನ್ನು ನೂಕಾಚೆ. ನನ್ನೂರಿನ ಕೊಳ್ಳ ಅದು ನನಗೆ, ಸ್ವರ್ಗಕ್ಕಿಂತ ಮಿಗಿಲು ಹಾಗಾಗಿ ಹಲವು ದಿನಗಳಿಂದಲೂ ಹೋಗಲು ತವಕದಿಂದದ್ದ ನನ್ನ ಸಹಪಾಠಿಗಳಿಗೆ ಅದರ ಬಗ್ಗೆ ಹೇಳಿದ ಧನ್ಯತಾ ಭಾವ,ಆದರೆ ನಮ್ಮ ಸಂಸ್ಥೆಯ ಭೂಗೋಳ ಶಾಸ್ತ್ರ ದ ಉಪನ್ಯಾಸಕರಿಗೆ ಜಲಪಾತದ ಕೆಳಭಾಗದಲ್ಲಿ ಬಂದು ಸೌಂದರ್ಯ ವನ್ನು ಆಸ್ವಾದಿಸಲಾಗಲಿಲ್ಲ ಎನ್ನುವ ಕೊರಗು ಒಂದು ಕಡೆಯಾದರೆ ನಾವು ಇನ್ನೂ ಬೇಗ ಬರಬೇಕಿತ್ತಲ್ಲ ಎನ್ನುವ ಅಳುಕು.ಪ್ರತಿ ಕಾರ್ಯ ಕ್ಕೆ ಸದಾ ಸಿದ್ದ ಎನ್ನುವ ಪಟ್ಟಣಶೆಟ್ಟಿ ಯವರು ಜಲಪಾತದ ಮೇಲ್ಬಾಗದಿಂದಲೆ ಅಭಯ. ಅವರು ಸೆರೆಹಿಡಿದ ಛಾಯಾಪ್ರತಿ ದ್ರೋಣದಲ್ಲಿ ಸೆರೆಹಿಡಿದಂತೆ ಕಾಣುತ್ತಿರುವುದು ನಮ್ಮೆಲ್ಲ ಸಹೋದ್ಯೋಗಿಗಳ ಸಂತೋಷಕ್ಕೆ ಸಾಕ್ಷಿಯಾಯಿತು. ಇನ್ನು ನಮ್ಮ ಸಮಾಜ ಶಾಸ್ತ್ರ ಉಪನ್ಯಾಸಕರ ಊಟದ ಉಸ್ತುವಾರಿ. ...! ಮೊದಲೆ ಸಮಾಜ ಶಾಸ್ತ್ರಜ್ಞರು ಸರ್ವ ಜನರ ಸುಖಗಳ ಮೂಲ ಅರಿತವರು ಸಿಹಿ ಕಾರಗಳ ಸಮ ಮಿಶ್ರಣ ಮೇಲೆ ಸವಾರಿ, ಹೊಟ್ಟೆ ಬಿರಿಯುವಂತಹ ಬೋಜನ ಮೇಲೊಂದು ಜವಾರಿ ಬಾಳಿ ಹಣ್ಣು, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಮೇಡಂ ನೀಡುವ ಎಲೆ ಅಡಿಕೆ... ಅದನ್ನು ಒಡೆಯಲು ಕಲ್ಲಿಗೂ ಕೊರತೆ ....? ಬಂಡೆಯ ನಾಡಿನಲ್ಲಿ ಅಡಿಕೆ ಒಡೆಯಲು ಗುಂಡುಗಲ್ಲಿಗೂ ಬರ ! ನೂರು ಅಂಡಗ ಕಾಳು ಬೆಳದರೂ ಸೆರಗು ಜೋಳ ತಿನ್ನು ವ ರೈತನಂತೆ ಪರಿತಪಿಸಿದ್ದಂತು ಸತ್ಯ .ಆದರೆ ಬಂಡೆಯ ನಾಡಿನ ಜಲಪಾತದ ಬಡಿವಾರ ಮಳೆಯಾದ ಮರುದಿನ ಪೂರ್ತಿ ನೋಡುವ ಶಪತದೊಂದಿಗೆ ಹಾಲು ಹಂಡೆಗೆ ವಿದಾಯ ಹೇಳಿ ಅಣ್ಣನ ಹೊಲದ ಸೂರ್ಯಕಾಂತಿಯ ಹೊಲದಲ್ಲಿ ಪುಷ್ಪ ದಂತೆ ಮುಖ ಅರಳಿಸಿ ಗಣಿತ ಉಪನ್ಯಾಸಕರ ಮೊಬೈಲ್ ಕ್ಯಾಮರಕ್ಕೆ ಆಹಾರವಾದೆವು.ಪಶ್ಚಿಮದ ಆಗಸದಲ್ಲಿ ಸೂರ್ಯ ನೂ ಕರ್ತವ್ಯಮುಗಿಸಿ ಮನೆಗೆ ನಡೆದಿದ್ದ ಈಗ ಕಳ್ಳಿಮನಿ ರಾಜ ಮತ್ತೆ ಜೈಲಿಗೆ ತಳ್ಳುವ ಭಟನಂತೆ ನಮಗಾಗಿ ಕಾಯುತ್ತಿದ್ದ...ಅದೆ ಬದುಕೆಂಬ ಬಂದಿಖಾನೆಗೆ.. ಮತ್ತೆ ಹೆಂಡತಿ ..ಮಕ್ಕಳು... ಸಂಸಾರ ಕೃತ್ರಿಮ ಬದುಕು......ಮತ್ತೆ ಬರುವೆ ಹಾಲಹಂಡೆ (ಹೊಂಡ) !!!! ನಮಸ್ಕಾರಗಳು.
No comments:
Post a Comment