ಅದೆಷ್ಟು ದೇಹಗಳು ಮುದುಡಿ
ಮಣ್ಣೊಳಗೆ ಮೃತ್ಯುವಿಗೆ ಶರಣಾದಾಗ
ಮೂರು ಹಿಡಿ ಮಣ್ಣಿಟ್ಟು
ಕೈ ಮುಗಿದಿಲ್ಲ ನಾನು !
ಅದೆಷ್ಟು ದೇಹಗಳು ಬೇಸರದಿ ಬೆಂದು
ಬೆಂಕಿಗೆ ಬಾಡುವಾಗ
ಪತ್ರಿ ಎಸೆದಿಲ್ಲ ನಾನು !
ಸಾಲು ಸಾಲು ಆಕ್ರಂದನಗಳು ...
ಬಂಧುಗಳೆ ಇವರೆಲ್ಲ .
ಬಂಧನದಿ ಬಿಡಿಸಿಕೊಂಡವನಿಗೊಂದು
ಭಾವಪೂರ್ಣ ರೋಧನ
ಅವನಿಗಾಗಿ ಅಲ್ಲ .
ಅವರಿಗಾಗಿ ಅವರ ಮಕ್ಕಳಿಗಾಗಿ
ಅವರ ಭವಿಷ್ಯದ ಬೇತಾಳಕೆ
ಹೆದರಿ ಚೀರುವರು ಇವರೆಲ್ಲ.
ಮಗಳ ಬಡಿವಾರಕ್ಕೆ ಬೇಕಿತ್ತು
ಮಣ ಬಂಗಾರ .
ಮಗನೂ ಮಡದಿಯೊಂದಗೆ
ಮಲಗಲು ಬೇಕಿತ್ತು
ಮಹಲು.. ಮಂದಿರ !
ಮಡದಿಯು ಬಿಡದೆ ರುಬ್ಬಿದಳು
ಕೈಕಾಲುಗಳಲ್ಲಿ ಶಕ್ತಿ ಇದ್ದಾಗ
ಪಡೆದ ಅವಕಾಶಗಳಿಗೆ ಲೆಕ್ಕವಿಲ್ಲ
ಹಿಡಿ ಶಾಪ ಹಾಕುತಿಹಳು
ಶಿವನಿಗೆ !
ಇನ್ನಷ್ಟು ಬೇಕಿತ್ತು ಅವಳಿಗೆ,
ಅವನಿಗಾಗಿ ಅಲ್ಲ
ತನಗಾಗಿ ದುಡಿಯಬೇಕಿತ್ತಿವನು.
ತಿಳಿಯಲಿಲ್ಲ ಇವನಿಗೆ
ನನ್ನದೆನ್ನವುದು ಬರಿ ಭ್ರಾಂತಿ
ತಿಳಿಯಲು ಸಾಕಾಗಲಿಲ್ಲ ಕಾಲ
ಈಗ ನಿಶ್ಚಿಂತೆ ...ಶಾಂತಿ
ಜೀವನವೆಂದರೆ ಇಷ್ಟೇನಾ ?
🖋 ಅಂತರ್ಮುಖಿ
No comments:
Post a Comment