ಪ್ರಕೃತಿಯ ಮಡಿಲಲ್ಲಿ ವಿಕೃತಿಗೆ ಏನು ಕೆಲಸ ? ಎಲ್ಲವೂ ಸುಕೃತಿ, ಎಲ್ಲಿ ನೋಡಿದಲ್ಲೆಲ್ಲ ಜಲರಾಸಿ ,ಸಸ್ಯರಾಶಿ ನೋಡಲೆರಡು ಕಣ್ಣುಗಳು ಸಾಲವು.ಒಂದು ಕಾಲದಲ್ಲಿ ಗುಳೇ ಬಂದ ಜನರಿಗೆ ಗಂಜಿ ನೀಡಿದ ಗಂಜಿಕೆರೆ ವರುಣನ ಕೃಪೆಯಿಂದ ಇಂದು ಮೈದುಂಬಿ ನಿಂತಿದ್ದಾಳೆ ಆ ಸೊಬಗನ್ನು ನೋಡುವುದೇ ಒಂದು ಸೌಭಾಗ್ಯ .ಇದು ಇಂದು ನನಗೆ ಪೂರ್ವ ಯೋಜಿತ ಕಾರ್ಯಕ್ರಮವೇನಲ್ಲ ಅಚಾನಕ್ಕಾಗಿ ಹೊಳೆದ ಅಪರೂಪದ ಪಯಣ. ಇಂದು ಗುರುವಾರ ಗುಳೇದಗುಡ್ಡದಲ್ಲಿ ಸಂತೆ ದಿನ. ಮಧ್ಯಾಹ್ನವೆ ಮಡದಿಯ ಸಂತೆಯಾಗಿದ್ದರೆ ಪಡೆಯುವದೇನಿತ್ತು ಭಾಗ್ಯ ? " ರೀ ಮನೆಯಲ್ಲಿ ಸಂತೆಯಿಲ್ಲ ತಂದರೆ ಚನ್ನಾಗಿ ಇರುತ್ತಿತ್ತಲ್ಲಾ ?" ಮಡದಿಯ ಕೋಮಲ ನುಡಿಗಳಿಗೆ ಕರಗದ ಹೃದಯ ಅದು ಹೃದಯವಲ್ಲ ಕಲ್ಲು ಬಂಡೆ. ನಾನು ಮಡದಿ ಹೇಳಿದ ಸಂತೆಯನ್ನು ಮಾಡಬಹುದೇನೋ ಆದರೆ ಸಂತೆಯಿಂದ ಬಂದ ಮೇಲೆ ಪಾಟಿಸವಾವಲಿಗೆ ಉತ್ತರಿಸುವುದು ನನ್ನಿಂದಾಗದ ಮಾತು. ಬೇಕಾದರೆ ಸಂತೆಗೆ ತಲುಪಿಸಲು ಸಿದ್ಧ ಎಂದೆ ! ಸರಿ ಲಗುಬಗೆಯಿಂದ ಹತ್ತೆ ನಿಮಿಷದಲ್ಲಿ ರೆಡಿ ? ಆಹಾ ಹೀಗೂ ಉಂಟೆ ? ಏಕೆಂದರೆ ನಾವೆಲ್ಲ ಓಲ್ಡ್ ಮಾಡಲ್ ದಂಪತಿಗಳು.. ! ನನ್ನ ಸೂಪರ್ ಸ್ಪ್ಲೆಂಡರ್ ಗಾಡಿ ಶರವೇಗದಲ್ಲಿ ಸಂತೆ ತಲುಪಿತು.ಆದರೆ ಇನ್ನೇನು ಮಡದಿಯ ಮೃದುವಾದ ಮಾತು..ರಿ ನಾನು ಹೀಗೆ ಹೋಗಿ ಹಾಗೆ ಹತ್ತು ನಿಮಿಷದಲ್ಲಿ ಬಂದು ಬಿಡತಿನ ಸ್ವಲ್ಪ ಆ ಕಡೆ ಈ ಕಡೆ ಓಡಾಡಿ ಅನಬೇಕೆ ! ಆಹಾ ನಂಬುವ ಆಸಾಮಿ ನಾನಲ್ಲ. ತಟ್ಟನೆ ಹೊಳೆದದ್ದೆ ಗಂಜಿಕೆರೆ ಸೂರ್ಯಾಸ್ತ ಕಣ್ತಂಬಿಕೊಳ್ಳಬೇಕು ? ಲಗುಬಗೆಯಿಂದ ಬಲಗೈಗೆ ಬಲನೀಡಿದೆ ಬೈಕು ಗಾಳಿಯನ್ನು ಸೀಳುತ್ತಾ ಬಂದು ಗಂಜಿಕೆರೆ ದಂಡೆಗೆ ಬಂದು ನಿಂತಿತು ಆದರೇನು ಮಾಡುವುದು ? ಸೂರ್ಯ ಪಡುವಣ ದಿಕ್ಕಿನಲ್ಲಿ ಭೂತಾಯಿ ಮಡಿಲಿನಲ್ಲಿ ಇಳಿದಾಗಿತ್ತು .. ವೇಳೆಗೆ ಸರಿಯಾಗಿ ಬರದವನಿಗೆ ಇದೆ ಮರ್ಯಾದೆ ತಾನೆ ? ದಿನ ಬೆಳಗಾದರೆ ಲೇಟಾಗಿ ಬರುವ ಹುಡುಗರ ಮುಂದೆ ಹೂಂಕರಿಸುವ ನನಗೆ ಕಪಾಳ ಮೋಕ್ಷ ಮಾಡಿದಂತಾಗಿತ್ತು. ಆದರೇನಾತು? ಭಾಸ್ಕರ ಇಳಿದ ದಾರಿಯ ದೂಳು ಅಂಗಾರಕನ ಬಣ್ಣದಂತೆ ಅಂಬರದಲ್ಲಿ ರಂಗು ಚೆಲ್ಲಿತ್ತು. ಗೊಂಬೆಗಳಂತಹ ಮೋಡಗಳನ್ನು ಹೊತ್ತ ಅಂಬರದ ಸಂಭ್ರಮ ನೋಡುವುದೆ ಒಂದು ಚಂದ. ಕೆಳಗೆ ನೋಡಿದರೆ ಜಲರಾಶಿ ಪೂರ್ತಿ ತುಂಬಿದ ಗಂಜಿಕೆರೆಯ ಇಕ್ಕೆಲಗಳಲ್ಲಿರುವ ಕೋಡಿಗಳಲ್ಲಿ ದುಮ್ಮಿಕ್ಕಿ ಹರಿಯುವ ಝರಿಗಳು, ತವರು ಮನೆಗೆ ದಾವಿಸುವ ತರುಣಿಯಂತೆ ಕುಣಿದು, ಕುಣಿದು ಸಾಗುತ್ತಿತ್ತು. ಇವಳು ನನ್ನೂರಿನ ರಾಣಿ ?....ಆಶ್ಚರ್ಯವಾಗಿರಬಹುದಲ್ಲವೆ ? ಹಾಲಂಡೆಯಿಂದ ಝರಿಯಾಗಿ ತೊರೆಯಾಗಿ ಹರಿದು ಬಂದವಳಿವಳು ತೊರೆದಳೆ ಗಂಜಿಕೆರೆ ಕೋಡಿಯಿಂದ ? ಹೀಗೆ ಸಾಗಿ ಹಿರೇಹಳ್ಳದ ಸೊಸೆಯಾಗಿ ನಡೆಯುವವಳು.ನಿನಗೆ ಮುನಿಸೆ ? ಒಂದು ಕಾಲವಿತ್ತು ಗಂಜಿಕೆರೆ.. ಗುಳೇದಗುಡ್ಡದ ಜನರಿಗೆ ಗಂಜಿ ನೀಡದವವಳು, ಕೆರೆಯ ಕೆಳ ಭಾಗದಲ್ಲಿ ಒಂದು ಸಾರೆ ಭತ್ತ ,ಇನ್ನೊಂದು ಸಾರೆ ಬೇಸಿಗೆಯಲ್ಲಿ ಸೇಂಗಾದ ಬೆಳೆ,ಎಂತಹ ಅರಸಿಕನು ತಲೆಯಾಡಿಸಿ ಸೈ ಎನ್ನುವ ಮಲೆನಾಡ ಸೊಬಗು ! ಇಂದೇನಾಗಿದೆ ? ಅವೈಜ್ಞಾನಿಕ ನೀರಿನ ಬಳಕೆಯಿಂದ ಭೂಮಿ ಬರುಡಾಗಿದೆ ಅಲ್ಲಲ್ಲಿ ಸರಕಾರಿ ಜಾಲಿ ,ಜೇಕು, ಆಪುಗಳ ದರ್ಬಾರು. ತರುಣರು ನಗರ ವ್ಯಾಮೋಹದಿಂದ ಪೃಕೃತಿಯ ಮಡಿಲಿಂದ ದೂರವಾವಾಗುತ್ತಿದ್ದಾರೆ .ಅದು ಅವರ ತಪ್ಪಲ್ಲ ಬಿಡಿ ಅಕಾಲಿಕ ಮಳೆ ಕೈತಪ್ಪುವ ಮಾರುಕಟ್ಟೆ ಕೃಷಿ ಮಾಡಿದ ತರುಣರು ನಗರಗಳಿಗೆ ಮುಖ ಮಾಡಿದ್ದಾರೆ ! ಇದು ಹೀಗೆಯೇ ಮುಂದುವರೆಯುತ್ತದೆ ಎಂದರೆ ತಪ್ಪಾದೀತು. ಇತಿಹಾಸ ಮರುಕಳಿಸುತ್ತದೆ ಎನ್ನವ ಮಾತೊಂದಿದೆ .ಉತ್ತಮ ಖೇತಿ, ಮಧ್ಯಮ ಬೇಪಾರಿ, ಕನಿಷ್ಟ ಚಾಕರಿ ಎನ್ನುವ ಕಾಲವೊಂದಿತ್ತು ಕಾಲ ಬದಲಾಗಿದೆ ಈಗ ಎಲ್ಲರಿಗೂ ಚಾಕರಿಯೇ ಬೇಕು....! ಮತ್ತೆ ಆ ಕಾಲ ಬರಬಹುದೇನೋ ? ಪ್ರತಿ ಹಳ್ಳಿ, ಹಳ್ಳಿಗಳು ವಿಜ್ಞಾನದ ,ವೈಚಾಕರಿಕ ಕೇಂದ್ರಗಳಾದರೆ ಮಾತ್ರ. ಮೊಬೈಲ್ ರಿಂಗುಣಿಸಲು ಪ್ರಾರಂಭಿಸಿತು ....ಬೆಲ್ಲು ಕೇಳಿದ ವಿದ್ಯಾರ್ಥಿ ಮನೆಗೆ ದಾವಿಸಿದಂತೆ ಬೆಡಗಣ ದಿಕ್ಕಿಗೆ ಮುಖ ಮಾಡಿದೆ. ಹಿಂದಿನಿಂದ ಹಾರ್ನ ಶಬ್ಧ ಅದು ಬೇರಾರದು ಅಲ್ಲ ಬಾಲಕೀಯರ ಪ್ರೌಢಶಾಲೆಯಲ್ಲಿ ಜೊತೆಯಾಗಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಈಗ ನಿವೃತ್ತಿಯ ಬದುಕುನ್ನು ಅರ್ಥ ಪೂರ್ಣವಾಗಿ ಕಳೆಯುತ್ತಿರುವ ಸಿ ಬಿ ಸಜ್ಜನರು.ಇದು ಖಾನಾಪೂರಕ್ಕೆ ಹೋಗುವ ಮಾರ್ಗ ಇಲ್ಲಿ ಸಂಜೆಯಾದರೆ ಸಾಕು ಹಳೆಯ ನೆನಪುಗಳನ್ನು ಬಿಚ್ಚುತ್ತು ಹೊಸ ಕನಸುಗಳನ್ನು ಕೆದಕುತ್ತಾ ನಡೆವ ಹಿರಿಜೀವಿಗಳ ತಾಣ ಅದು ಗಂಜಿಕೆರೆಯ ಶದ್ಧಗಾಳಿಯು ಸಿಗುವ ನಿವೃತ್ತರ ಸ್ವರ್ಗ ಅದರ ಸವಿಯನ್ನು ಸವಿದವನೆ ಬಲ್ಲ.ಸಜ್ಜನರನ್ನು ಗುರುತು ಹಿಡಯಲು ಕಷ್ಟವೇನಾಗಲಿಲ್ಲಿ ಅದೇ ಗಾಂಭೀರ್ಯ ಮಾಗಿದ ಮನಸ್ಸು.ಅವರ ಸಾಮಿಪ್ಯ ಸಾವಿರ ವಿಶ್ವಕೋಶ ಓದಿದಂತಿತ್ತು. ಕುಶಲೋಪರಿ... ಮತ್ತೆ ಅದೆ ಪೋನ್. ಗೃಹ ಸಚಿವರ ಕರೆ ನಿರಾಕರಿಸಲಾದಿತೆ ? ಮತ್ತೆ ಮರಳಿ ಗೂಡಿಗೆ... ಇದೆ ಅಲ್ಲವೆ ಬದುಕು. ಒಟ್ಟಾರೆ ಒಂದು ಸುಂದರವಾದ ಪೃಕತಿಯ ಕೊಡುಗೆಯನ್ನು ಆಸ್ವಾದಿಸಿದ ಸಂತೃಪ್ತಿ.
ನೀವು ಪ್ರಕೃತಿ ಆರಾಧಕರೆ? ಒಂದರ್ಧ ಗಂಟೆ ಬಿಡುವ ಮಾಡಿಕೊಂಡರೆ ಯಾವುದೇ ಫೀ ಇಲ್ಲದೆ ಆಸ್ವಾದಿಸಬಹುದು. ಮನಸ್ಸು ಬೇಕು ಅಷ್ಟೇ ಬಹಳವೆಂದರೆ ಗುಳೇದಗುಡ್ಡದಿಂದ ಎರಡು ಕಿಲೋಮೀಟರ್ ಆಗಬಹುದೇನೋ.!
No comments:
Post a Comment