ನಾವೋಡುವ ದಾರಿಯಲ್ಲಿ
ಓಡುತ್ತಾ ನಡೆದಿದ ಆಡಿದ ಕರ್ಮ
ನಮಗಿಂತ ಮುಂದೆ ನಾವದರ ಹಿಂದೆ
ಅದು ಅಗಲಿಸದಾ ಬಂಧ
ಬಿಡಿಸಲು ಬಾರದು ಕೆಡಿಸಲು ಆಗದು
ನಡೆಯುವುದು ಒಂದೆ ಧರ್ಮ ! ॥
ಚಾರಣಕೇರಿ ಚಾಟಿ ಏಟನು ಮರೆತು
ಬೇಟೆಯಾಡಲು ನಿಂತ ಶಬರ.
ಕೋಟೆ ಕಟ್ಟಿಹರು ಅಲ್ಲಿ...
ಎಂಟು ಸುತ್ತಿನ ಕೋಟೆ ! ಬಂಟರೆ ಬೇಕಲ್ಲಿ.
ದಾಟಿಸಲು ಯಾರಿಲ್ಲ ,ಶಿವನೆ, ದಾಟಿಸಲಾರಿಲ್ಲ.
ವಿಠ್ಠಲಾ ದಾಟಿಸು ಇದನೆಲ್ಲಾ.॥
ಲೆಕ್ಕ ಕೇಳುತಿರುವರು, ಪಕ್ಕಾ ಮಾಡುವರು
ಇಲ್ಲಾ ಪಕ್ಕೆಲಬು ಮುರಿಯುವರು.
ಹಕ್ಕಿನಲ್ಲಿರುವದೊಂದೇ ಕರ್ಮ.
ಚುಕ್ತಾ ಮಾಡಬೇಕೊ ಅಲ್ಲಿ...
ಹಪ್ತಾ ಚುಕ್ತಾ ಮಾಡಬೇಕೋ ಅಲ್ಲಿ ....
ತಕ್ಕಡಿ ತೂಗುತಿರುವದಲ್ಲಿ.॥
ಲಂಚ, ಇವರಿಗೆ ಬೇಕಿಲ್ಲ, ಮಂಚ ಹತ್ತಲ್ಲ.
ಸಂಚು ಮಾಡಿದರೆ ಗೆಲ್ಲಲಾಗಲ್ಲ.
ಕೊಂಚ ಮೊದಲೆ ತಿಳಿದಿದ್ದರೆ
ಪಂಚೇರ ತಗೆಯುತ್ತಿದ್ದೆವಲ್ಲ.
ಹೆದ್ದಾರಿ ಹಿಡಿಯುತ್ತಿದ್ದೆವಲ್ಲ..
ಕಾಲ ಮಿಂಚಿ ಹೋಗಿದೆಯಲ್ಲ.॥
ಶಿವ,ಶಿವ,ರಾಜ ಮಾರ್ಗ ದೂರ
ಆದರೆ ಏನು ಉರುಳಿ ಬರಹುದಿತ್ತಲ್ಲ
ಈಗ ನೆರಳಾಗಿ ಕಾಡತಿರುವದಲ್ಲ
ಉರಳು ಬಿಗಿಯಿತಲ್ಲ ಸರಳು ಜಾರಿತಲ್ಲ
ಏರಿ ಬಂದ ಮೇಲರಿವು ಬಂದರೇನು
ಸಾರಿ ಹೇಳುವದೊಂದೆ ಉಳಿದಿದೆಯಲ್ಲ॥
No comments:
Post a Comment