Monday, March 20, 2023

ಪ್ರವಾಸ ಕಥನ

ಮೂಡಲಗಿಯಿಂದ ಮುಗಳಖೋಡ !
            ಇದು ಏನ್ರೀ ಪ್ರಾಸಬದ್ದ ಪ್ರಲಾಪನೆ ಎನ್ನಬಹುದುಲ್ಲವೆ ! ಹೌದು ಇದು ಪ್ರಲಾಪನೆಯೇ.  ನಾನು ಮೂಡಲಗಿಯಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದಾಗ ಕೈಕೊಂಡ ಒಂದು ಪ್ರವಾಸದ ಕಥನ ಮೂಡಲಗಿಯಿಂದ ಮುಗಳಖೋಡ 18 ರಿಂದ 20 ಕೀ ಮೀ. ದಲ್ಲಿ ಇರುವ ಒಂದು ಪವಿತ್ರ ಕ್ಷೇತ್ರ .ಈ ಕ್ಷೇತ್ರಕ್ಕೆ ಸುಮಾರು 28 ವರ್ಷಗಳ ಹಿಂದೆ ಬೇಟಿ ನೀಡಿದ ನೆನಪು ಆದು ಅಸ್ಪಷ್ಟ ವಾಗಿತ್ತು ಆದರೆ ಅದು ಮತ್ತೊಮ್ಮೆ ಸ್ಪಷ್ಟವಾಗಲು ಕಾಲ ಕೂಡಿ ಬಂದಿತ್ತು . ಅಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಹೊಳೆಚ್ಚಿ ಎನ್ನುವವರು ತಮ್ಮ ಮಾವನವರಾದ ಸೋಮನಗೌಡರ ಎಂಬುವರ ಜೋತೆ ಈ ಕ್ಷೇತ್ರಕ್ಕೆ ಹೊರಟು ನಿಂತಾಗ ಅದೆ ತಾನೆ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ ನನ್ನನ್ನೂ ಕರೆದುಕೊಂಡು ಹೋಗಲು ತಯಾರಿಯಾದರು ಕಾರಣ ಇಷ್ಟೇ ಅವರ ನನ್ನ ಸ್ವಭಾವ ತುಂಬಾ ಹತ್ತಿರ ಇದ್ದದ್ದು, ಅಂದರೆ ಗರೀಬ (ಆವಾಗ ನಾನು ಹೈಪಾಯ ಇರಲಿಲ್ಲ) ಅಂತಾರಲ್ಲ 
ಆ ತರಹ. ಇನ್ನೂ ಅಷ್ಟೊಂದು ಮುಂದುವರೆಯದ ಅಂದರೆ ಪವಾಡ ಮತ್ತು ಪಾವಿತ್ರ್ಯಕ್ಕೆ ಹೆಸರಾಗಿದ್ದ ಕಾಲಘಟ್ಟದಲ್ಲಿ ಈ ಕ್ಷೇತ್ರಕ್ಕೆ ಬಂದು ಹೋಗದ್ದೆವು ಈಗ ಅದು ಅಭಿವೃದ್ಧಿ ಹೊಂದಿದ ಮಠ. ಹೀಗಾಗಿ ಅಂದಿನ ಚಿತ್ರ ನನಗೆ ಸರಿಯಾಗಿ ನೆನಪಿರಲಿಲ್ಲ.ಇವತ್ತು ಆಧನಿಕ ಸ್ಪರ್ಶ ಪಡೆದ ಮುಗಳಖೋಡ ಮಠ ನೋಡುವ ಭಾಗ್ಯ ಬಂದದ್ದು ನಮ್ಮದೆ ಪರೀಕ್ಷಾ ಕೇಂದ್ರದಲ್ಲಿ ಸಹ ಮುಖ್ಯ ಅಧೀಕ್ಷಕರಾಗಿ ಕರ್ತವ್ಯವ್ಯಕ್ಕಾಗಿ ಆಗಮಿಸಿದ ವಿಠ್ಠಲ ಜೋಡಟ್ಟಿಯವರಿಂದ ಆತ ವಯಸ್ಸಿನಲ್ಲಿ ಚಕ್ಕವನಾದರೂ  ಸಾಧನೆಯಲ್ಲಿ ಶಿಖರವನ್ನು ತಲುಪಿದಾತ ಅಂದರೆ ಕನ್ನಡ ವಿಷಯದಲ್ಲಿ ಗೋಲ್ಡ್ ಮೆಡಲ್ ಪಡೆದು ಪದವಿ ಪೂರ್ವಶಿಕ್ಷಣ ಇಲಾಖೆಯಲ್ಲಿ ನೆಡೆದ ನೆಮಕಾತಿಯಲ್ಲಿ ಪ್ರಥಮ ಸ್ಥಾನ ಪಡೆದವರು ಅದಕ್ಕಾಗಿ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪರವರಿಂದ  ನೇಮಕಾತಿ ಆದೇಶ ಪಡೆದವರು,ಬರಿ ಬಂಗಾರದ ಪದಕ ಪಡೆದವರು ಮಾತ್ರ ಅಲ್ಲ ನಿಜವಾಗಿಯೂ ಅವರು ಬಂಗಾರನೆ. ಪರೀಕ್ಷಾ ಕಾರ್ಯ ಮುಗಿದ ಮೇಲೆ  ಮುಖ್ಯ ಅಧೀಕ್ಷಕರ ಮುಂದೆ  ಗೌಡರ ಸರ್ ರನ್ನು  ನಾನು ಮುಗಳಖೋಡಕ್ಕೆ  ಕರಕೊಂಡು ಹೋಗ್ತೀನಿ ಎಂದರು. ನನಗೂ ಹೊಸ ಪ್ರದೇಶ, ಐತಿಹಾಸಿಕ ಸ್ಥಳಗಳನ್ನು ನೋಡುವುದೆಂದರೆ ಎಲ್ಲೆಲ್ಲಿದ ಖುಷಿ .ಮನೆ ಕಟ್ಟುವ ಸಂದರ್ಭದಲ್ಲಿಯೇ ಒಂದು ವಾರ ಮಹಾರಾಷ್ಟ್ರ ದ ತುಂಬಾ ಪ್ರವಾಸ ಮಾಡಿದವನು ನಾನು  ಬಿಡುವಿನ ವೇಳೆಯಲ್ಲಿ ಪವಿತ್ರ ಸ್ಥಳ ನೋಡುವದೆಂದರೆ ಬಿಡುವುದೇ. ಲಗುಬಗೆಯಿಂದ ತಯಾರಿಯಾದೆ ಅಭಿವೃದ್ಧಿಗೊಂಡ ಮುಗಳಖೋಡ ಮಠದ ಕಡೆ ವಿಠ್ಠಲ ಜೋಡಟ್ಟಿಯವರ ಬೈಕು ಓಡಲಾರಂಭಿಸಿತು. ಹಸಿರನ್ನೆ ಹೊದ್ದು ನಿಂತ ಭೂತಾಯಿ ಎಡಬಲಗಳಲ್ಲಿ ಹಡದಿ ಹಾಸಿ ಸ್ವಾಗತಸಿದಂತೆ ಭಾಸವಾಗುತ್ತಿತ್ತು . ಬರದನಾಡಿನಲ್ಲಿ ಬೆಳೆದು ಹಸಿರು ಕಾಣದೆ ಬೆಂಗಾಡನಲ್ಲಿ ಬೆಳೆದ ಕಳ್ಳಿ ಕುರುಚಲುಗಳೆ ಸರ್ವಸ್ವವೆಂದ ಹತಭಾಗ್ಯನಿಗೆ ಓಯಾಸಿಸ್ ಬದಿಯಲ್ಲಿ ಬಂದು  ಬಿಟ್ಟಂತಾಗಿತ್ತು. ಕಬ್ಬು ಗೋವಿನ ಜೋಳದ ಬೆಳೆ ನೋಡಿ ಕ್ಷಣ ಉಬ್ಬಿ ಹೋದೆ ಘಟಪ್ರಭೆಯ ಎಡದಂಡೆ ಕಾಲುವೆ ಘಟಸರ್ಪ ಬುಸುಗುಟ್ಟಿ ಸಾಗುವ ರೀತಿಯಲ್ಲಿ ಲೀಲಾಜಾಲವಾಗಿ ಹರಿಯುತ್ತಿತ್ತು . ನನ್ನೂರಿನಲ್ಲಿಯೂ ಇಂಥಹ ಒಂದು ಕಾಲುವೆ ಹರಿದಿದ್ದರೆ ?  ಖಂಡಿತವಾಗಿಯೂ ಹರಿಯುತ್ತಿತ್ತೇನೋ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಕನಸು ನನಸಾಗಿದ್ದರೆ ಬದಾಮಿಯ ತಾಲೂಕು ನಂದನವನವಾಗಿ ಬದಲಾಗಬೇಕಾಗಿತ್ತು ಆದರೆ ಆದದ್ದೆ ಬೇರೆ .ಅದು ಕುಂಟುತ್ತಾ ಸಾಗಿ ಕಾರ್ಯಗತಗೊಳ್ಳಲು ಇನ್ನೂ ಎಷ್ಟು ಪಂಚವಾರ್ಷಿಕ ಯೋಜನೆ ಬೇಕೇನೊ ? ಇರಲಿ ಕ್ಷಣ ಯೋಚಿಸುತ್ತಿರುವಾಗಲೆ ವಿಠ್ಠಲಜೋಡಟ್ಟಿಯವರ ಬೈಕು ಮುಗಳಖೋಡ ಎಲ್ಲಾಲಿಂಗನ ಅಂಗಳಕ್ಕೆ ಬಂದು ನಿಂತಿತ್ತು.ಕ್ಷಣ ವಿಚಲಿತನಾದರೂ ಸವಾರಿಸಿಕಂಡು ಮಠದ ದ್ವಾರಬಾಗಿಲ ಕಡೆ ಕಣ್ಣು ಹಾಯಿಸಿದರೆ  ಆಹಾ !.. ಇಲ್ಲಿಯವರೆಗೆ ನಾನು ನೋಡಿದ ಮಠಗಳಲ್ಲಿ ಕಾಣದ ವೈಭವ ನನ್ನನ್ನು ಮೂಖ ವಿಸ್ಮತನನ್ನಾಗಿ ಮಾಡಿತು. ಏಕೆಂದರೆ ಇದು ಮಠದ ದ್ವಾರ ಬಾಗಿಲೊ ಅಥವಾ ಅರಮನೆಯ ದ್ವಾರ ಬಾಗಲೋ ಕ್ಷಣ ಗೊಂದಲಕ್ಕೊಳಗಾಗಿ ಕೇಳಿದೆ  "ಏನಿದು ಮಠದ ವೈಭವ ಅರಮನೆಯ ದ್ವಾರ ಬಾಗಿಲು ನಾಚಿಸುತ್ತದೆಯಲ್ಲಾ ಎಂದೆ " ನಗುತ್ತಾ ಹೇಳಿದರು ಸರ್ ಈ ಭಾಗದ ಅತ್ಯಂತ ಶ್ರೀಮಂತ ಮಠ. ಅಲ್ಲದೇ ಆ ಮಠದಲ್ಲಿ ನಡೆದ ಕಾರ್ಯ ಕ್ರಮಗಳ ಪಟ್ಟಿಯನ್ನೇ ನೀಡಿದರು ನನ್ನ ಕಿವಿಗಳನ್ನು ನನಗೆ ನಂಬಲಾಗಲಿಲ್ಲ ಏಕೆಂದರೆ ಅದು ಕಬ್ಬು ಬೆಳೆಯುವ ಶ್ರೀಮಂತರ ನಾಡಲ್ಲವೆ ! ಸಾವಿರ ರೂ ಪಟ್ಟಿ ನೀಡಲು  ಹತ್ತು ಬಾರಿ ವಿಚಾರ ಮಾಡುವ ಬರದ ನಾಡಿನ ನಮಗೆ ಆ ಕಾಲುವೆ ನಾಡಿನ ವೈಭವ ಹುಬ್ಬೇರುವಂತೆ ಮಾಡುವದರಲ್ಲಿ ಆಶ್ಚರ್ಯವಲ್ಲ ಬಿಡಿ .ಆಧುನಿಕ ಕಾಲದಲ್ಲಿ ಕಲ್ಲುಗಳಲ್ಲಿ ಕಲೆ ಅರಳಿಸಿದ ಸ್ಥಳ ಇದಕ್ಕಿಂತ ಬೇರೆ ಎಲ್ಲಿಯಾದರು ಇದೆಯೊ ಇಲ್ವೊ ನನಗೆ ಗೊತ್ತಿಲ್ಲ. ಸಂಪೂರ್ಣವಾಗಿ ಸಿಮೆಂಟ ದಾಸರಾಗಿರುವ ನಮಗೆ ಅದರ ಹಂಗಿಲ್ಲದೆ ಉತ್ತಮ ವೈಭವದ ಕಟ್ಟಡ ಕಟ್ಟಬಹುದು ಎಂದು ತೋರಿಸಿ ಕೊಟ್ಟಿದ್ದೆ ಮುಗಳಖೋಡ ಮಠ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.ಮಠ ಪ್ರವೇಶದ ನಂತರ ಬಳಲಿದ ಮನಕ್ಕೆ ಭಕ್ತಿಯ ಪರಾಕಾಷ್ಠೆ ತುಂಬಿತು. ಜೋಡಟ್ಟಿಯವರ ಮಠದ ಬಗ್ಗೆ ತಿಳಿಸುತ್ತಾ ನಡೆಯುವ ಕ್ರಮಕ್ಕೆ ನಾನು ಮಗುವಾಗಿದ್ದೆ ಏಕೆಂದರೆ ಅವರು ಕನ್ನಡ ಉಪನ್ಯಾಸಕರಲ್ಲವೆ ? ನೂರಾರು ಕಲ್ಲು ಕಂಬ. ಮೇಲ್ಛಾವಣಿಯೂ ಕಲ್ಲು ಚಪ್ಪಡಿಯೇ ! ಇಲ್ಲಿ ಆರ್ ಸಿ ಸಿ ಗೆ ಜಾಗವಿಲ್ಲ  ಅದರ ಭವ್ಯತೆ ವರ್ಣಿಸಲು ಪದಗಳಿಲ್ಲ. ಇನ್ನೂ ನಾವು ಧ್ಯಾನ ಮಂದಿರ ನೋಡಬೇಕಾಗಿತ್ತು ವೇಳೆ ಮುಗಿದ ಕಾರಣ ಕಾವುಲುಗಾರನ ಅಪ್ಪನೆ ಬಾರವಾದ ಮನಸ್ಸಿನಿಂದ ಆ ಮಂಟಪದಿಂದ ಹೊರಬರಬೇಕಾಯಿತು ಅದು ಉಳಿದದ್ದು ಒಳ್ಳೆಯದೆ ಆಯಿತು ಮತ್ತೊಂದು ಸಾರೆ ಬರುವಂತೆ ಮಾಡು ಯಲ್ಲಾ ಲಿಂಗ ಎಂದು ಮನದಲ್ಲಿ ಗೊಣಗಿದೆ, ಗಂಟೆ 6.30 ತೋರಿಸುತ್ತಿತ್ತು   ವಿಠ್ಠಲ ಜೋಡಟ್ಟಿಯವರ ಕೊಡಸಿದ ಬಿಸಿ ಬಿಸಿ ಭಜಿ ಸವಿದು ಮೂಡಲಗಿ ದಾರಿ ಹಿಡಿದೆ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...