* ಕರ್ನಾಟಕ ರಾಜ್ಯೋತ್ಸವದ ಸುವರ್ಣಮಹೋತ್ಸವ *
ಪಿ. ಇ.ಟಿ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್. ಸಿ) ಶಾಲೆ ಗುಳೇದಗುಡ್ಡದಲ್ಲಿ ಅರಳಿದ ಅಪ್ಪಟ ಕನ್ನಡದ ಕಂಪು.ಇದು ಅತಿಥಿಗಳಾಗಿ ನನ್ನನ್ನು ಆಹ್ವಾನ ಮಾಡಿದರೆಂಬ ಕಾರಣಕ್ಕಾಗಿ ಹೊಗಳಿ ಬರೆದ ಅಭಿಪ್ರಾಯವಲ್ಲ, ಬದಲಾಗಿ ಕನ್ನಡದ ಉಸಿರು ಹಸಿರಾಗಿ ಕಂಗೊಳಿಸಿದ ಶಾಮಲೆಯ ನೈಜ ಸಾಲುಗಳು. ಅದು ಕರ್ನಾಟಕದ ಮುಖ್ಯ ಮಂತ್ರಿಗಳ ಕನಸಿನ ಘೋಷಣೆಯ ಸಾಲಿನ ಉಸಿರು. ಕರ್ನಾಟಕ ರಾಜ್ಯೋತ್ಸವದ ಸುವರ್ಣಮಹೋತ್ಸವದ. "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ" ಘೋಷಣೆಯ ಸಾಕಾರದ ಪ್ರತಿರೂಪ.ಇಂದು ನಮ್ಮ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವದ ಕಾರ್ಯಕ್ರಮದ ಕನ್ನಡಾಂಬೆ ಭುವನೇಶ್ವರಿಯ ಪಾದಗಳಲ್ಲಿ ಶಿರಭಾಗಿ, ಸಹಪಾಠಿಗಳ ಸೆಲ್ಪಿಗೆ ಮುಖ ನೀಡಿ, ತಾಲೂಕು ಆಡಳಿತದ ಉತ್ಸವದಲ್ಲಿ ಭಾಗವಹಿಸಿದಾಗ ಗಂಟೆ 9.30 . ಪೋನ್ ರಿಂಗುಣಿಸಿತು .ಅತ್ತ ಪಿ ಇಟಿ ಆಂಗ್ಲ ಮಾಧ್ಯಮ (ಸಿ. ಬಿ ಎಸ್. ಸಿ) ಶಾಲೆ ಗುಳೇದಗುಡ್ಡದ ಮುಖ್ಯ ಗುರುಗಳಿಂದ "ಸರ್ , ನಮ್ಮ ಸಂಸ್ಥೆಯ ಕರ್ನಾಟಕ ಸುವರ್ಣ ರಾಜ್ಯೋತ್ಸವದಲ್ಲಿ ತಾವು ಮುಖ್ಯ ಅತಿಥಿಗಳು ಎಂದಾಗ .ಏನೋ ಮನಸ್ಸಿನಲ್ಲಿ ತಳಮಳ, ಅದು ಸಿ ಬಿ ಎಸ್ ಸಿ ಆಂಗ್ಲ ಮಾಧ್ಯಮ ಶಾಲೆ . ಹತ್ತರಲ್ಲಿ ಹನ್ನೊಂದು ಎನ್ನುವಂತೆ ಆಚರಿಸಬಹುದೆಂದು ಭಾವಿಸಿದ್ದೆ .ಲಗುಬಗೆಯಿಂದ ಬೈಕು ಏರಿ ಶಾಲೆ ತಲುಪಿದಾಗ ನನ್ನ ಎಲ್ಲಾ ವಿಚಾರಗಳು ಬುಡಮೇಲು ಸಂಸ್ಥೆಯ ಛೇರ್ಮನ್ ಪುರುಷೋತ್ತಮ ಝಂವಾರ ಹಾಗೂ ಮುಖ್ಯೋಪಾಧ್ಯಯ ಭಾವಿಯವರ ನೇತೃತ್ವದಲ್ಲಿ ಇಡಿ ಸಂಸ್ಥೆಯು ರಾಜ್ಯೋತ್ಸವ ಹಬ್ಬದಿಂದ ಕಳೆಕಟ್ಟಿತ್ತು. ಸರಿ, ಅದು ನನ್ನ ಮುಖ್ಯ ವಿಷಯವಲ್ಲ .ಏಕೆಂದರೆ ರಾಜ್ಯೋತ್ಸವದ ಹಬ್ಬವನ್ನು ಎಲ್ಲರೂ ಸಡಗರ ಸಂಭ್ರಮದಿಂದಲೆ ಆಚರಿಸುತ್ತಾರೆ ಕಾರಣ ಅದು ನಮ್ಮ ನಾಡಿನ, ನುಡಿಯ, ಸಂಸ್ಕೃತಿಯ ಹಬ್ಬ.ಇಷ್ಟೆ ಆಗಿದ್ದರೆ ನಾನು ಇಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿರಲಿಲ್ಲವೇನೋ ,ಆದರೆ ಅದಕ್ಕಿಂತ ಇಲ್ಲಿ ನಾನು ನೋಡಿದ್ದು ಭಿನ್ನವಾದ, ಸೃಜನಾತ್ಮಕ ಅಭಿವ್ಯಕ್ತಿ. ಅದೇನೆಂದರೆ ಕನ್ನಡ ನಾಡಿನ ಭಾಷೆಯ, ಸಂಸ್ಕೃತಿಯ ಇತಿಹಾಸವನ್ನು ಸಾರುವ ವಸ್ತುಪ್ರದರ್ಶನ.ಈ ಕಾರಣಕ್ಕಾಗಿ ಅಲ್ಲಿಯ ಕನ್ನಡ ಬೋಧಿಸುವ ಹಾಗು ಅವರಿಗೆ ಸಾಥ ನೀಡಿದ ಶಿಕ್ಷಕರಿಗೆ ಎಷ್ಟು ಧನ್ಯವಾದಗಳನ್ನು ಆರ್ಪಿಸಿದರೂ ಕಡಿಮೆಯೇ. ಏಕೆಂದರೆ ಆ ಶಿಕ್ಷಕರ/ಶಿಕ್ಷಕಿಯರ ಹಾಗೂ ವಿದ್ಯಾರ್ಥಿಗಳ ಶ್ರಮಕ್ಕೆ ಬೇಲೆ ಕಟ್ಟಲಾದೀತೆ ? ಇಡಿ ವಿದ್ಯಾರ್ಥಿಗಳನ್ನು ಅವರು ತಂಡಗಳನ್ನಾಗಿ ಮಾಡಿದ್ದಾರೆ ಅದಕ್ಕೊಂದು ಮಹನೀಯರ ಹೆಸರು ಇಟ್ಟಿದ್ದಾರೆ.ಆ ತಂಡದವರೆಲ್ಲರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹಾಗೂ ಇತಿಹಾಸ ಸಾರುವ ಸಾಕ್ಷ ಚಿತ್ರಗಳನ್ನು ಸಂಗ್ರಹಿಸಿ ಒಪ್ಪವಾಗಿ ಬರೆದು ನೋಡುಗರ ಗಮನ ಸೆಳೆಯುವಂತೆ ಮಾಡಿದ್ದಾರೆ. ಅವು ಒಂದೆ ಎರಡೆ ಸಾವಿರಾರು ಅವುಗಳನ್ನು ನೆನಪಿನಲ್ಲಿ ಇಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ವಿಡಿಯೋ ಮಾಡಿಕೊಳ್ಳಬೇಕಾಯಿತು ಆದರೇನು ಮಾಡುವುದು ಹಾಳಾದ ಮೊಬೈಲ್ ನೆನಪಿನ ಬುತ್ತಿ ಕಡಿಮೆ ಇದ್ದ ಕಾರಣ ತಮ್ಮ ಮುಂದಿಡಲೂ ಸಾಧ್ಯವಾಗದೆ ಕೈ ಕೈ ಹಿಚುಕಿಕೊಳ್ಳುವಂತಾಯಿತು.ಪ್ರತಿ ಅಕ್ಷರದ ಉಗಮ ಅದರ ಬೆಳವಣಿಗೆ ಹಲ್ಮಿಡಿ ಶಾಸನದಿಂದ ಇಲ್ಲಿಯವರಿಗೆ ಆದ ಬೆಳವಣಿಗೆ ಹಾಗೂ ಕನ್ನಡ ನಾಡಿನ ಬೆಳವಣಿಗೆಗೆ ಕಾರಣವಾದ ಮಹನಿಯರಿಂದ ಪಾಮರರವರೆಗಿನ ಚಿತ್ರಣವನ್ನು ಮಕ್ಕಳಿಂದ ಕಟ್ಟಿಸಿಕೊಟ್ಟ ಪರಿ ಯಾವ ಸಂಶೋಧಕನಿಗಿಂತ ಕಡಿಮೆಯೇನಲ್ಲ, ಪ್ರಾಯಶಃ ಹೊಸ ಶಿಕ್ಷಣ ನೀತಿಯ ಸಾಕಾರ ಇಲ್ಲಿ ಸಂಪೂರ್ಣಗೊಂಡಿದೆ ಎಂದರೆ ತಪ್ಪೇನು ಅಗಲಾರದು.ಶಿಕ್ಷಕ ಬೋಧಕನಲ್ಲ ಆತ ಸುಗಮಗಾರ ಮಕ್ಕಳು ಕಲಿಯಲು ಬೇಕಾದ ಪೂರಕ ಸಾಧನಗಳನ್ನು ಒದಗಿಸುವವ ಎನ್ನುವ ತತ್ವ ಇಲ್ಲಿ ಪ್ರತಿಫಲಿಸಿದೆ.ಇದು ವಸ್ತು ಪ್ರದರ್ಶನಕ್ಕೆ ಸೀಮಿತ ಮಾತಲ್ಲ ಬದಲಾಗಿ ವೇದಿಕೆಯಲ್ಲಿಯೂ ಪ್ರತಿಧ್ವನಿಸಿತು. ಹೇಗೆಂದರೆ? ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳು,ಕರ್ನಾಟಕದ ಸಂತರು,ವಚನಕಾರರು, ಏಕೀಕರಣದ ಹೋರಾಟಗಾರರು, ಮಾದರಿ ಮೈಸೂರು ರಾಜ್ಯದ ನಿರ್ಮಾತೃ ವಾದ ಸರ್, ಎಮ್ ವಿಶ್ವೇಶ್ವರಯ್ಯನವರವರೆಗೆ ಪುಟಾಣಿಗಳ ವೇಷಭೂಷಣಗಳು ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಟ್ಟವು.ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಪಿ ಇಟಿ ಟ್ರಸ್ಟ್ ನ ಕಾರ್ಯದರ್ಶಿಯಾದ ರವೀಂದ್ರ ಪಟ್ಟಣಶೆಟ್ಟಿಯವರ ಉದ್ಘಾಟನಾ ಪರ ನುಡಿಗಳು ನನ್ನನ್ನು ಶಸ್ತ್ರರಹಿತ ಸೈನಿಕನಂತೆ ಮಾಡಿದವು ಕಾರಣ ಇಷ್ಟೇ ಅವರೂ ಕೂಡಾ ಎಂ ಎ ಇತಿಹಾಸ ವಿದ್ಯಾರ್ಥಿಯಾಗಿರುವದರಿಂದ ಕರ್ನಾಟಕ ಏಕೀಕರಣ ಇತಿಹಾಸವನ್ನು ಬಹು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟರು.ನಂತರ ಶಾಲೆಯಲ್ಲಿ ನಡೆದ ವಿವಿಧ ಸ್ಫರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಸಿದ ನಂತರ ನನ್ನ ಸರದಿ ! ಈಗ ಮುಖ್ಯಅತಿಥಿಯಾಗಿ ನನ್ನ ಭಾಷಣ. ಸೂರ್ಯ ನಡುನೆತ್ತಿಯ ಮೇಲೆ ,ವೇಳೆ ಸುಮಾರು 12.00 ಗಂಟೆ ಹತ್ತಿರ . ಔಪಚಾರಿಕವಾಗಿ ಮುಕ್ಕಾಲು ಗಂಟೆ ಮಾತನಾಡಿರಬಹುದು. ಗದ್ದಲವಿಲ್ಲದೆ ಶಾಂತ ರೀತಿಯಿಂದ . " ಪುಟ್ಟ ಮಕ್ಕಳು ಕೇಳುತ್ತಿದ್ದಾರೆ" ಇದು ಶಾಲೆ ಹಾಕಿದ ಶಿಸ್ತಿನಿಂದಲಾ? ಅಥಾವಾ ಕರ್ನಾಟಕ ಏಕೀಕರಣದ ಕಥೆಯಿಂದಲಾ ಕನ್ನಡ ಭಾಷೆಯ ಮಹತ್ವದ ಅರಿವಿನಿಂದಲಾ ? ನನಗೂಂದು ತಿಳಿಯಲಿಲ್ಲ.ಆದರೆ ಆ ಸಂಸ್ಥೆಯವರು ನನ್ನನ್ನು ಕರೆಯಿಸಿ ಆ ಮಕ್ಕಳ ಸಡಗರದಲ್ಲಿ ಭಾಗವಹಿಸಲು ಅವಕಾಶ ನೀಡಿ ಸನ್ಮಾನಿಸಿದರಲ್ಲ ಆ ಸಂಸ್ಥೆಯವರಿಗೆ ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಿದ ನಮ್ಮ ಕಾಲೇಜಿನ ಪ್ರಾಚಾರ್ಯರಿಗೆ ನನ್ನ ಅನಂತ ಪ್ರಣಾಮಗಳು.