Tuesday, January 14, 2025

ಮರದ ದಿಮ್ಮೆಯ ಮುಂದೆ

ಮರದ ದಿಮ್ಮೆಯ ಮುಂದೆ

ಮುಗಿಲು ಚುಂಬಿಸಲು ಹಗಲಿರುಳೆನ್ನದೆ ಬೆಳೆದು
ಖಗ ಪಕ್ಷಿಗಳಿಗೆ ನೆರಳಾಗಿ ಉರುಳಿದೆ ನೀ ಕೊರಡಾಗಿ
ಹಗೆಯೆಂಬುದಿಲ್ಲ ಎಲ್ಲಾ ಜಗದುಳಿವಿಗೆ ನಗುವಿಗೆ ॥

ಬೋಳಾದರೇನು ಹಾಳಾದರೇನು ಉಳಿದು
ಬೆಳಯುವ ತಲೆಗಳಿಗೆ ನೀ ಆಸರೆಗಂಬ
ಕಳೆದು ತೀಡಿದರೆ ಸಿಂಹಾಸನ ರಾಜನಿಗೆ॥

ನೀನಿಟ್ಟ ಸೌಖ್ಯದ ಸಿರಿ, ಬೆಳೆ ಬಾನೆತ್ತರಕೆ 
ಬರಿ ಬೆತ್ತಲೆ, ಕತ್ತಲೆ  ದಿನಕರ ಉರುಳಿದಾಗ
ಸತ್ತರೂ ಸುತ್ತುವರೆದರೆ ನೀ ಆಹಾರ ಗೆದ್ದಲುಗಳಗೆ॥

ನಿನ್ನ ನಂತರದ ತಲೆಮಾರು ಚುಂಬಕದ ಸಾಲು 
ಎತ್ತಿಕೊಳ್ಳಲು ತವಕದ ಬಿಂಬಗಳು ನೂರಾರು
ಒಣ ಕೊಂಬೆಯಾದರೇನು ನೀ ಬೆಲೆ ಕೆಂಡಗಳಿಗೆ॥
 
ಎತ್ತರ ಬೆಳೆದು ಕತ್ತು ಬಗ್ಗಿಸಿ ಕಿರಿಯಾದೆ ಮಲಗಿ 
ಸುತ್ತಲೂ ಏರಿದೆ ಪ್ರೀತಿಯ ಅಮಲು  ಮರೆತು 
ಬತ್ತಳಿಕೆಯಲ್ಲಿಲ್ಲ  ಹಮ್ಮಿ ಬಿಮ್ಮಿನ ಬಾಣ,ಬಿಲ್ಲುಗಳಿಗೆ  ॥

2 comments:

  1. ಮಾವು ಬೇವು ಹುಣಿಸೆ ಹಲಸು
    ಮರ ಯಾವುದೇ ಆಗಿರಲಿ,
    ತೊಗಟೆ- ತ್ವಚೆ ಕಳಚಿ ಧರೆಗುರುಳಿದ ಮೇಲೆ, ಕಳೆದ ಬದುಕು ಉಳಿದ ಜೀವ
    ತೆರೆದು ನೋಡುವ ಕಂಗಳಿಗೆ ,
    ಅರಿದೊರೆದು ನೋಡುವ ಮನಕದುವೆ
    ಸ್ಪೂರ್ತಿಯ ತಾಣ, ಪ್ರಕೃತಿ ಮಾತೆಯ
    ಮಡಿಲು ಅಪಾರ ಸಿರಿಯೊಡಲು
    ಕಾಣೋ ಜಾಣ l
    .. ಅಭಿನಂದನೆಗಳು ಗೌಡರೆ,
    ನಿಮ್ಮ ಸುಂದರ ಕವಿತೆ ಓದಿದ ಮೇಲೆ ಬರೆದದ್ದು. ಶುಭ ರಾತ್ರಿ.

    ReplyDelete
    Replies
    1. ಎಸ್ ಜಿ ಕೋಟಿ. ವಿದ್ಯಾಗಿರಿ

      Delete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...