Sunday, June 1, 2025

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"


ಶಾಂತಿ ಮಂತ್ರ ಪಠಿಸುವ ಶಾಲೆಯ
ಕ್ರಾಂತಿಯ ಗೀತೆಯ ಹಾಡುವ ಕಲಿಗಳು
ಕೆದುಕದೆ ಕದನ ಮಾಡದ ಹುಲಿಗಳು
ಭಾರತದ ಯೋಧರು ಭಾಗ್ಯವಿದಾತರು॥

ಹೆತ್ತವರ ಮಮತೆ ಮನದಲ್ಲಿ ನೆಟ್ಟು
ಮಡದಿಯ ಪ್ರೀತಿಯ ಅದುಮಿಟ್ಟು
ಉತ್ತರದ ಹಿಮಶಿಖರ ಹತ್ತುವರು, 
ತಟ್ಟಿದರೆ ನೆತ್ತರಿನೋಕಳಿಯಾಡುವರು॥

ರಕ್ತ ಹೆಪ್ಪುಗಟ್ಟಿದರೂ ತಪ್ಪಿಸಿಕೊಳ್ಳದೆ
ಸೂಕ್ತ ಸಮಯಕೆ ಕಾಯುವವರು
ವೈರಿ ತಂತ್ರಕೆ ಪ್ರತಿ ತಂತ್ರ ಹೆಣೆಯುವರು
ಮಂತ್ರ ಒಂದೆ ನಾವು ಭಾರತೀಯರು॥

ಪಾಕ್ ಕುನ್ನಿಗಳ ಹೇತು ಒಂದೇ
ಕಾಶ್ಮೀರ ಕದಿಯಲು ಭಯೋತ್ಪಾದನೆ ಮುಂದೆ
ಕಾರ್ಗಿಲ್ ದ್ರಾಸ್ ಭೇಧಿಸ ಬಯಸಿದರು
ಧೀರ ಯೋಧರು ಗುನ್ನ ಇಟ್ಟರು ಅಂದು॥

ಜೈ ಜವಾನ ಜೈ ಕಿಸಾನ
ಬರಿ ಘೋಷಣೆಯಲ್ಲ ಭಾರತದುಸಿರು
ಯೋಧರ ಕಷ್ಟಕೆ ಹಿಂದುಸ್ತಾನ ಮುಂದು
ಗಡಿ ಕಾಯುವವರಿಗೆ ಗುಡಿ ಕಟ್ಟುವರಿಂದು ॥


Friday, May 30, 2025

ಗಂಜಿ ಕೆರೆ

ಗಂಜಿ ಕೆರೆಯ ದಂಡೆ

ನನ್ನ ಹೊಲದ ಜಲ 
ಇಲ್ಲಿ ಬಂದು ಸೇರುವದೆಂದರೆ ಏನು ?
ಕೇಳುವುದೇ ವಿಸ್ಮಯ
ಯಾವ ಮೂಲೆಯ ಜಾಗದಲ್ಲಿ 
ಹೇಗೆ ಅವಿತಿದೆ ಯಾರು ಬಲ್ಲರು? 
ಕಾಣದಿದ್ದರೂ ಒಂದೇ ಕಂಡರೂ ಒಂದೆ 
ಉಂಡು ಸಂತಸಪಡಬೇಕು ಕ್ಷಣ 
ನಾಗರಿಕತೆಯ ನೊಗ ಹೊತ್ತವರು 
ನಗದೆ ಇರುವರೆ ನಿನ್ನ ?
ನಿನ್ನ ದೆನ್ನುವುದೇನಿದೆ ಜಗದಲ್ಲಿ?
ಕುನ್ನಿ, ಮಹಾದೇವ ಕರುಣಿಸದ ಜಲ
ಭೂದೇವೆ ತರಿಸಿಕೊಂಡಳು ವರ
ಹಸಿರು ಸೀರೆಯನುಟ್ಟು ಹಣೆಗೆ ಹೂ ಬೆಟ್ಟು
ಮೇ ನಲ್ಲೆ ಸುರಿದ ಮುಂಗಾರಿನ ಮಳೆ 
ಹೆಂಗಾರ ವರ್ಣಿಸುವುದು
ಸಿಂಗರಿಸಿದ ಧರಣಿ,ವಧು ವರರಿಗೆ  
ಶಾಸಕ್ಕಿ ಹೊಯ್ದಾಂಗ
ಹೊಸಮಾಲಗಿತ್ತಿ ನಸುನಾಚಿ
ಕನಸುಗಳ ಬೆನ್ನೇರಿದಾಂಗ
ಬಿರಿದ ಕರಿ ಹೊಲಗದ್ದೆ
ಕಾಯ್ದು ಕಮ್ಮಾರನ ತಿದಿ ಗಾಳಿ
ಕಾಡ ಬಂದಿದೆ ಏನೋ ಕಾರ್ಮೋಡ 
ಬಿಳಿಯ ಕಲ್ಲುಗಳೊಳಗೂಡಿ
ಮೇಲೆ ಬೆಂಕಿಯ ಕಿಡಿ
ಕೆಳಗೆ ಬಂಗಾರದಂತಹ 
ಭಾಸ್ಕರನ ಕಿರಣ
ನಳ ನಳಿಸುವ ಗಿಡ ಮರ 
ನೋಡಲು ತೆರಿಗೆಯ ಹಾಕಿದರೆ 
ಏನು ಮಾಡುವುದು ?
ನನ್ನ ದೆನ್ನುವುದು ಏನಿಲ್ಲಾ
ಕಣ್ಣು ಹಾಯೀಸಿದ ಕಡೆ ಸ್ವರ್ಗದ ಬಿಡು
ಅಸ್ವಾದಿಸು ಮತ್ತೆ ಕಾಣಲು
ಮಹಾದೇವನ ಆಶೀರ್ವಾದ ಬೇಕು

Wednesday, April 30, 2025

ಬಸವ ಸ್ಮರಣೋತ್ಸವ

    
           
      ಬಸವ ಕೇಂದ್ರ ಗುಳೇದಗುಡ್ಡದ ವತಿಯಿಂದ ಬಸವ ಸ್ಮರಣೋತ್ಸವ 2025 ರಲ್ಲಿ ನನಗೂ ಅಭಿಪ್ರಾಯ  ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟು ನನ್ನನ್ನು ಶರಣರ ಕುಲಕ್ಕೆ ಸೇರಿಸಿದ ಬಸವ ಕೇಂದ್ರದ ಸಂಘಟಕರಿಗೆ ನಾನು ಚಿರಋಣಿ ಅಪಾರ ಪಾಂಡಿತ್ಯ ಹೊಂದಿದ ತಾಲೂಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಿದ್ದಲಿಂಗಪ್ಪ ಬರಗುಂಡಿ ಸರ್,ನಿವೃತ್ತ ಪ್ರಾಂಶುಪಾಲರಾದ ನೀಲಕಂಠ ಮಠ ಸರ್, ಬಸವ ಕೇಂದ್ರದ ಗೌರವಾಧ್ಯಕ್ಷರು ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ.ಎಚ್ ಎಸ್ ಹುಳಿಪಲ್ಲೇದ ಸಾಹೇಬರು ಯಾವ ಮಾನದಂಡ ಇಟ್ಟುಕೊಂಡು ನನಗೆ ಅನುಭಾವದ ನುಡಿಗಳನ್ನಾಡಲು ಅವಕಾಶ ನೀಡಿದರೊ ನಾನರಿಯೇ ಅದರೆ ನಾನು ಮಾತ್ರ ಅನುಭಾವಿಗಳ ಸಾಮಿಪ್ಯಕ್ಕೆ ಬಂದು ಬಿದ್ದಿದ್ದಂತು ಸತ್ಯ. 
        " ಜಾತಿ ಸಂಕರವಾದ ಬಳಿಕ ಕುಲವನರಿಸುವರೆ ?" ಎಂದು ಪ್ರಶ್ನಿಸುವ ಮೂಲಕ.  ಬಸವೇಶ್ವರರು   ಕಾಯಕ ಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ಇದು ಭಾರತದ ಇತಿಹಾಸದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಲು ಸಹಕಾರಿಯಾಯಿತು. ಆ ಮೂಲಕ ಅಂದಿನ ದಿನಮಾನದಲ್ಲಿದ್ದ ರೈತರು,ಶೂದ್ರರು, ಪಂಚಮರು, ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ಮತ್ತು ಅವರಿಗೆ ಶಿಕ್ಷಣ ನೀಡಿ ಅವರ ಅನುಭವಗಳನ್ನು ಅನುಭವ ಮಂಟಪದಲ್ಲಿ ಮಂಡಿಸಲು ಅವಕಾಶ ಕಲ್ಪಿಸಿತು ಮತ್ತು ಆದು ಅಂದಿನ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು  ಚರ್ಚೆಯಾಗಲು ದಾರಿ ಮಾಡಿಕೊಟ್ಟಿತು.
           ಹನ್ನೆರಡನೆ ಶತಮಾನದ ಶರಣರು ಅಂದಿನ ಸಮಾಜದಲ್ಲಿ ಕಂಡು ಅನುಭವಿಸದ ವಜ್ರಗಳು ವಚನ ರೂಪದಲ್ಲಿ ಹೊರಬಂದು ಮುಂದಿನ ತಲೆಮಾರಿಗೆ ಅನುಭವದ ದಾರಿದೀಪಗಳಾದವು. ಶರಣರ ವಚನಗಳು ಸಂತೋಷದ ಬದುಕಿಗೆ ತಳಪಾಯವಾಗಬಲ್ಲವು. ಕಾರಣ ಇಷ್ಟೆ ಅವು ರಾಜರನ್ನು ಹೊಗಳಿ ಬರೆದ ಹೊತ್ತಿಗೆಗಳಲ್ಲ, ಸ್ವರ್ಗ ನರಕಗಳ ಬಗ್ಗೆ ಬರೆದ ಕಲ್ಪನಾ ಲೋಕದ ಆಲೋಚನೆಗಳೂ ಅಲ್ಲ  ಅವು ಕಾಯಕ ಯೋಗಿಗಳ ಅನುಭವಗಳ ಸಾಗರ "
       ಬಸವೇಶ್ವರರು ವೈದಿಕ ಶೈವ ಕುಟುಂಬದಲ್ಲಿ ಜನಿಸಿ ಅಲ್ಲಿ ನಡೆಯುವ ಲಿಂಗತಾರಮ್ಯದ ವಿರುದ್ದ ಬಂಡೆದ್ದು ಎಂಟನೆಯ ವಯಸ್ಸಿನಲ್ಲಿ ಮನೆಯಿಂದ ಹೊರಬಂದರು ಅಕ್ಕನಾಗಮ್ಮನ ಸಹಾಯದಿಂದ ಕೂಡಲಸಂಗಮದ ಲಕುಲೀಶ-ಪಾಶುಪಥ ಶೈವ ಕಲಿಕಾ ಕೇಂದ್ರದಲ್ಲಿ ಅಧ್ಯಯನ ಮಾಡಿ ಮೊದಲು ಮಂಗಳವೇಡಿ ನಂತರ ಕಲ್ಯಾಣದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದರು ಹನ್ನೊಂದುನೂರಾ ಐವತ್ನಾಲ್ಕರ ಸುಮಾರಿಗೆ ಕಲ್ಯಾಣಿ ಚಾಲುಕ್ಯರ ಮೂರನೇ ತೈಲಪನ ನಂತರ ಕಲ್ಯಾಣದಲ್ಲಿ ಕಲಚೂರಿ ಬಿಜ್ಜಳ ಅಧಿಕಾರಕ್ಕೆ ಬಂದಾಗ ಬಸವೇಶ್ವರರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾದರು ಈ ಅವಧಿಯಲ್ಲಿ ಅಂದಿನ ಸಮಾಜದಲ್ಲಿ ಬೇರೂರಿದ್ದ  ಅಂಧ ಶ್ರದ್ದೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ವಿಶೇಷವಾಗಿ ಜಾತೀಯತೆ ಮತ್ತು ಅಸ್ಪೃತೆ ವಿರುದ್ಧ ಹೋರಾಡಲು ಸಹಬೋಜನ ಮತ್ತು ಅಂತರ್ಜಾತೀಯ ವಿವಾಹ ಪ್ರೊತ್ಸಾಹಿಸಿದರು.ಸಮಗಾರ ನಾಗದೇವನಿಗೆ ಲಿಂಗ ದೀಕ್ಷೆ ನೀಡಿದಾಗ ಅವರು ಶರಣರಾದರು ಅವರ ಆತಿಥ್ಯ ಸ್ವೀಕರಿಸಿದರು.ಅದೆ ರೀತಿ ಹುಟ್ಟಿನಿಂದ ಬ್ರಾಹ್ಮಣ, ಸಂಸ್ಕಾರದಿಂದ ಶರಣನಾದ ಮದುವರಸನ ಮಗಳಿಗೂ ಹುಟ್ಟಿನಿಂದ ಸಮಗಾರನಾಗಿ ಸಂಸ್ಕಾರದಿಂದ ಶರಣನಾದ ಹರಳಯ್ಯನ ಮಗನಿಗೆ ಮದುವೆ ಮಾಡಿಸಿದರು ಇದು ಸಂಪ್ರದಾಯವಾದಿಗಳನ್ನು ತಿರುಗಿ ಬೀಳುವಂತೆ ಮಾಡಿತು. ಮುಂದೆ ಇದು ಕಲ್ಯಾಣದ ಕ್ರಾಂತಿಗೆ ಕಾರಣವಾಯಿತು.
            ಮಹಾವೀರರು ದೇವರನ್ನು ನಂಬಲಿಲ್ಲ,  ಬುದ್ಧ ದೇವರ ಬಗ್ಗೆ ಏನನ್ನು ಹೇಳಲಿಲ್ಲ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣ 
"ಕಲ್ಲು ದೇವರು ದೇವರಲ್ಲ
ಮಣ್ಣು ದೇವರು ದೇವರಲ್ಲ 
ಮರ ದೇವರು ದೇವರಲ್ಲ
ಪಂಚಲೋಹಗಳಿಂದ ಮಾಡಿದ ದೇವರು ದೇವರಲ್ಲ 
ಸೇತುಬಂಧ ರಾಮೇಶ್ವರ ಕಾಶಿ ,ಕೇದಾರ,ಗೋಕರ್ಣ ಗಳಲ್ಲಿರುವ ದೇವರು ದೇವರಲ್ಲ
ತನ್ನ ತಾನಾರೆಂದು ತಿಳಿದೊಡೆ ತಾನೆ ದೇವರು ನೋಡಾ ಕೊಡಲ ಸಂಗಮ"
 ಎನ್ನುವ ವಚನದ ಮೂಲಕ ದೇವರ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನ ನೀಡಿದರು.
 ಬ್ರಹ್ಮ ವಿಷ್ಣು ಮಹೇಶ್ವರರನ್ನು ಮೀರಿ ಸೃಷ್ಟಿಕರ್ತನಿದ್ದಾನೆ ಅವನು ನಿರಾಕಾರ ಅವನನ್ನು ಮಾನವ ಹಾಗೂ ಪ್ರಾಣಿಗಳ ರೂಪದಲ್ಲಿ ಪೂಜಿಸುವದು ಸಲ್ಲದು ಎನ್ನುತ್ತಾರೆ ಬಸವಣ್ಣ 
       ದೇವರ ಸಾಕಾರ ಕೃತಿಯೇ ಬ್ರಹ್ಮಾಂಡ ಇದು ಗೋಲಾಕಾರದಲ್ಲಿದೆ ಆದ್ದರಿಂದ ಲಿಂಗದೇವರನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟ ಲಿಂಗ ಪರಿಚಯಿಸಿದರು ಮತ್ತು ಶಿವಭಕ್ತಿಯ ನಿರಂತರ ಜ್ಞಾಪನೆಗೆ ಪ್ರತಿಯೊಬ್ಬ ವ್ಯಕ್ತಿಗೆ ಅವರ ಜನ್ಮ ವನ್ನು ಲೆಕ್ಕಿಸದೆ ಲಿಂಗ ಚಿತ್ರ ವಿರವ ಇಷ್ಟ ಲಿಂಗ ಹಾರ ಧರಿಸಲು ಸೂಚಿಸಿದರು.
.       ಬಸವೇಶ್ವರರು ಶಿವಪೂಜೆಗೆ ಅವಕಾಶ ನೀಡಿದರು ಶಿವನ ಆರಾಧನೆಯಲ್ಲಿ ಎರಡು ಭಾಗಗಳಿವೆ ಒಂದು ಅಂಗ ಇನ್ನೂಂದು ಲಿಂಗ ,ಅಂಗವು ಲಿಂಗದಲ್ಲಿ ಐಕ್ಯವಾಗುವುದೆ ಮೋಕ್ಷ. ಇಲ್ಲಿ  ಶಿವ ಶಕ್ತಿ ವಿಲೀನವೇ ಬಸವ ತತ್ವ ಕ್ಕೆ ಆಧಾರ ಪರಸ್ಪರ ವಿಲೀನವಿಲ್ಲದೆ ಪುರುಷ ಪ್ರಕೃತಿಯು ಅಪೂರ್ಣ ಇದನ್ನೇ ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತ ಎಂದು ಕರೆಯುತ್ತಾರೆ. ಮೋಕ್ಷ ಸಾಧನೆಗೆ ಲಿಂಗ ಪೂಜೆಮಾಡಬೇಕು ಎಂದು ಹೇಳಿದರು
          ಶಿವನ ಮುಂದೆ ಎಲ್ಲರೂ ಸಮಾನರು, ವ್ಯಕ್ತಿಯೊಬ್ಬನ ಅಂತಸ್ತು ಆತನ ಯೋಗ್ಯ ತೆಯನ್ನು ಅವಲಂಬಿಸಿದೆಯೇ ಹೊರತು ಆತನ ಹುಟ್ಟನ್ನಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಡಾ.ಬಿ ಆರ್ ಅಂಬೇಡಕರರು ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ,ಬಂಧತ್ವವನ್ನು ನೀಡಿದರೆ ಬಸವಣ್ಣ ಅನುಭವ ಮಂಟಪದ ಮೂಲಕ ಇವೆಲ್ಲ ವುಗಳನ್ನು ನೀಡಿದರು ಹೀಗಾಗಿ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತು ಎಂದು ಕರೆಯಲಾಗಿದೆ.
          ಕಾಯಕವು ಭಕ್ತಿಯ ಇನ್ನೊಂದು ರೂಪ ಅದು ಮುಕ್ತಿಗೆ ದಾರಿತೋರುವುದು ಹಾಗಾಗಿಯೇ ಕಾಯಕವೇ ಕೈಲಾಸವೆಂದರು ಯಾವ ಕಾಯಕ ಮೇಲೂ ಅಲ್ಲ ಕನಿಷ್ಠ ವೂ ಅಲ್ಲ ಎನ್ನುತ್ತಾ ಶ್ರಮಗೌರದ ಪರಿಕಲ್ಪನೆಯನ್ನು ನೀಡಿದರು.ಹದಿನೆಂಟನೆ ಶತಮಾನದಲ್ಲಿ ಜಗತ್ತಿನ ಕಾರ್ಮಿಕರನ್ನು ಒಂದುಗೂಡಲು ಕರೆ ನೀಡಿ ಬಂಡವಾಳ ಶಾಹಿಗಳ ವಿರದ್ಧ ಕಾರ್ಮಿಕರನ್ನು ರಕ್ಷಿಸಿದಂತೆ ಹನ್ನೆರಡನೆಯ ಶತಮಾನದದಲ್ಲಿಯೇ ಶ್ರೇಣಿಕೃತ ಸಮಾಜದಲ್ಲಿ ಕಾಯಕ ಜೀವಿಗಳನ್ನು ರಕ್ಷಸಿದರು.
       ಸರ್ ಆರ್ಥರ್ ಮೈಲಾರ್ ಬಸವಣ್ಣನನ್ನು ಕರ್ನಾಟಕದ ಮಾರ್ಟನ್ ಲೂಥರ್ ಎಂದು ಕರೆದಿದ್ದಾರೆ ಮಾರ್ಟಿನ್ ಲೂಥರ್ ಹದಿನಾರನೆ ಶತಮಾನದಲ್ಲ್ಲಿ ಕ್ಯಾಥೊಲಿಕ್ ಚರ್ಚನ ವಿರುದ್ಧ ಬಂಡೆದ್ದು ಪ್ರೊಟೆಸ್ಟಂಟ ಪಂಥವನ್ನು ಸ್ಥಾಪಿಸಿದರೆ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿಯೇ ವೈದಿಕ ಧರ್ಮದ ವಿರುದ್ಧ ಬಂಡೆದ್ದು ಲಿಂಗಾಯಿತ ಧರ್ಮ ಹುಟ್ಟು ಹಾಕಿದರು ಹಾಗಾಗಿ ಮಾರ್ಟನ್ ಲೂಥರರನ್ನು ಯೂರೋಪಿನ ಬಸವಣ್ಣ ಎಂದರೂ ತಪ್ಪಾಗಲಿಕ್ಕಿಲ್ಲ ಆ ಕಾರಣಕ್ಕಾಗಿ ಬಸವೇಶ್ವರರ ಮೂರ್ತಿಯನ್ನು ಥೇಮ್ಸ ನದಿ ದಡದಲ್ಲಿ ಸ್ಥಾಪಿಸಿ ಗೌರವಿಸಲಾಗಿದೆ ಬಸವೇಶ್ವರರು ವಿಸ್ವಗುರು ಅವರ ಜಯಂತ್ಯುತ್ಸವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಅವರ ತತ್ವ, ಸಿದ್ಧಾಂತಗಳು ಕಾರ್ಯ ರೂಪಕ್ಕೆ ಬಂದರೆ ಆಚರಣೆಗೂ ಒಂದು ಅರ್ಥ ಬಂದು ಸಮ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ .ಈ ವಿಚಾರ ಗಳನ್ನು ಹಂಚಿಕೊಳ್ಳುವ ಅವಕಾಶ ನೀಡಿ ನನ್ನನ್ನು ಗೌರವಿಸಿದ ಬಸವ ಕೇಂದ್ರದ ಸಂಘಟಿಕರಿಗೆ ಹೃದಯ ಪೂರ್ವಕ ಧನ್ಯವಾದಗಳು.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...