Friday, September 26, 2025

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉದ್ದೇಶ ಇಡೇರಲಾರದು.ಶಿಕ್ಷಣವೆಂದರೆ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಇಲ್ಲವೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆಯಲ್ಲ ಹಾಗೆ ಕಲಿತ ಶಿಕ್ಷಣದ ವಿಷಯಗಳು ಪರೀಕ್ಷೆಯ ದಿನಗಳವರೆಗೆ ಸಾಗಿ ಬರಬಹುದೇನೋ ಇಲ್ಲವೆ ತದನಂತರ ಅವು ಮರೆಯಾಗಲೂಹುದು. ಅಂದರೆ ಪ್ರಶ್ನಿಸದೆ ಕಲಿಕೆ ಅಪೂರ್ಣ ಎಂದಾಯಿತು. ಹಾಗಾದರೆ ಆ ಪ್ರಶ್ನಿಸುವ ಕಾರ್ಯ ಎಲ್ಲಿಂದ ಪ್ರಾರಂಭವಾಗಬೇಕು, ಯಾರಿಂದ ಮೊದಲು ಪ್ರಾರಂಭವಾಗಬೇಕು? ಎನ್ನುವುದರ ಮೇಲೆ ಕಲಿಕೆಯ ತೀವ್ರತೆಯು ವ್ಯತ್ಯಾಸವಾಗುತ್ತ ಸಾಗುತ್ತದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ತಮ್ಮ ಆಶ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಬೇಗನೆ ಹೇಳಿಕೊಡುತ್ತಿರಲಿಲ್ಲ ಬದಲಾಗಿ ವಿದ್ಯೆಯ ಹಸಿವುಂಟಾಗುವಂತೆ ಮಾಡುತ್ತಿದ್ದರು ತದನಂತರದ ದಿನಗಳಲ್ಲಿ ಅನುಭವಗಳನ್ನು ಧಾರೆ ಎರೆಯುತ್ತಿದ್ದರು ಹಾಗೆ ಕಲಿತ ಜ್ಞಾನ ತಮ್ಮ ಜೀವನದ ಕೊನೆಯವರೆಗೂ ಹಿಂಬಾಲಿಸುತ್ತಿತ್ತು ಮತ್ತು ಗಟ್ಟಿಗೊಂಡಿರುತ್ತಿತ್ತು ಅಷ್ಟೆ ಏಕೆ ನಾಲ್ಕೈದು ದಶಕಗಳ ಹಿಂದಿನ ಹಿರಿಯರನ್ನು ನೀವು ಸೂಕ್ಷ್ಮ ವಾಗಿ ಗಮನಿಸಿರಿ ತಾವು ಕಲಿತ ಕವನ, ಕಥನ, ಕಾದಂಬರಿ ಲೆಕ್ಕ ಗಳನ್ನು ನೀರು ಕುಡಿದಷ್ಟೆ ಸಲೀಸಾಗಿ ಹೇಳುವುದನ್ನು ಕೇಳಿದ್ದೇವೆ. ಅದು ಹೇಗೆ ಸಾಧ್ಯ ! ಅವರೆಲ್ಲ ಹಸಿವಾಗಿ ಉಂಡವರು, ಅಂದರೆ ಕೇಳಿ ಪಡೆದವರು.ಹೀಗಾಗಿ ಅವರು ಕಡಿಮೆ ಇಯತ್ತೆಗಳನ್ನು ಕಲಿತಿದ್ದರೂ ಅದನ್ನು ಇಂದು ಪರಿಪೂರ್ಣವಾಗಿ ಹೊರಹಾಕುತ್ತಿದ್ದಾರೆ.ಈಗ ಅವರ ನಿರೀಕ್ಷೆ ಏನೆಂದರೆ ತಾವು ಕಡಿಮೆ ಕಲಿತವರಾದರೂ ಇಂದಿನ ಹೆಚ್ಚಿನ ವ್ಯಾಸಂಗ  ಮಾಡಿದ  ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದಾರೆ ಮತ್ತು ಗುಣಮಟ್ಟ ಕುಸಿದಿದೆ ಎಂದು ಗೊಣಗುಟ್ಟುವುದನ್ನು ಕೇಳಿದ್ದೇವೆ. ಕೆಲವೊಂದು ಅಧ್ಯಾಪಕರು ಹದಿನೈದು ನಿಮಿಷ ಪಾಠ ಮಾಡಿ ಮೂವತ್ತು ನಿಮಿಷ ಬರೆಯಿಸುವುದನ್ನು ರೂಢಿಸಿಕೊಂಡವರಿರಬಹುದೇನೊ ಬಹುಶಃ ಅದು ಹೆಚ್ಚಿನ ಅಂಕಗಳಿಕೆಗೆ ಇರಬಹುದೇನೊ ಅಥವಾ ಪಾಸಿಂಗ್ ಪ್ರತಿಶತ ಹೆಚ್ಚಿಸಲು ಕಂಡುಕೊಂಡರೋ ಅದು ಅವರು ಬೋಧಿಸುವ ಬೋಧನಾ ಪದ್ಧತಿಗೆ ಬಿಟ್ಟ ವಿಷಯ.ಆದರೆ ಇಂದು ನಾವು ಪರಿಪೂರ್ಣ ಕಲಿಕೆಯನ್ನು ಮತ್ತೆ ಮಾಡಲು ವಿದ್ಯಾರ್ಥಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನಾಗಿ ಮಾಡಬೇಕಾಗಿದೆ. ನಾನು ಈಗ್ಗೆ ಮೂವತ್ತು ವರ್ಷಗಳ ಹಿಂದೆ ಬಿ ಇಡಿ ಮಾಡುವಾಗ ಹರ್ಬರ್ಟನ ಪಂಚ ಸೋಪಾನ ಓದಿದ್ದೆ  ಅದರಲ್ಲಿ ಮೊದಲು ಬರುವ ಸೋಪಾನವೇ ಪೀಠಿಕೆ,  ಇದರ  ಉದ್ದೇಶ, ಉದ್ದೇಶ ಕಥನಕ್ಕೆ ವಿದ್ಯಾರ್ಥಿಗಳನ್ನು ತರುವುದು ನಂತರದ ಕಾಲಘಟ್ಟದಲ್ಲಿ ಅದು ಕಲಿಕಾಪೂರ್ವ ಚಟುವಟಿಕೆಯಾಯಿತು, ಇದರ ಉದ್ದೇಶವೂ ಉದ್ದೇಶ ಕಥನಕ್ಕೆ ಬರುವುದು, ಉದ್ದೇಶ ಕಥನದ ಯಶಸ್ಸು ಮಾತ್ರ ಮಗುವಿನ ಪ್ರಶ್ನಿಸುವ ಸಾಮರ್ಥ್ಯ ವನ್ನೆ ಅವಲಂಬಿಸಿದೆ.ಪ್ರಶ್ನೆಗಳಲ್ಲಿ ಹಲವಾರು ವಿಧಗಳಿವೆ ಅವುಗಳನ್ನು ನಾನು ಇಲ್ಲಿ ವ್ಯಕ್ತಪಡಿಸಲಾರೆ ಆ ಪ್ರಶ್ನೆಯ ವಿಧಗಳನ್ನು ಕಲಿತವರೆ ಶಿಕ್ಷಕರಾಗಿದ್ದರೆ ಆ ಮಾತು ಬೇರೆ. ಈಗ ನಮ್ಮ ಮುಂದಿರುವ ಬಹುದೊಡ್ಡ ಅವಶ್ಯಕತೆ, ಮಕ್ಕಳಲ್ಲಿ ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡುವುದು. ಒಂದು ಮಾತಿದೆ "ಪ್ರಶ್ನಿಸುವವನು ಕ್ಷಣ ಕಾಲ ದಡ್ಡನಾಗಿರುವನು ಪ್ರಶ್ನಿಸದೆ ಇರುವವನು ಸದಾ ಕಾಲ ದಡ್ಡ ನಾಗಿಯೇ ಉಳಿಯುವನು" ಎಂದು. ಪ್ರಶ್ನಿಸುವ ವಾತಾವರಣ ಎಂದರೆ ಅದೊಂದು  ಮನಸ್ಥಿತಿ ಮತ್ತು ಭವಿಷ್ಯ ನಿರ್ಮಾಣದ ಕೇಂದ್ರ ಅಲ್ಲಿರುವವರು ನಾವು ಹೇಳುವುದನ್ನು ಮಾತ್ರ ಕೇಳಲು ಕುಳಿತ ಸೋತೃಗಳಲ್ಲ ಹಾಗಾಗಿಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ನೇಮಿಸಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಮಾತ್ರ ಹೇಳಿ ಕೊಡುತ್ತೇನೆ" ಎಂದು. ಮುಂದುವರಿದು... ಮಕ್ಕಳಲ್ಲಿ ಈಗಾಲೆ ಪ್ರತಿಭೆಯು ಅಂತರ್ಗತ ವಾಗಿದೆ ಅದನ್ನು ಹೊರಗೆ ತರುವವನೆ ಶಿಕ್ಷಕ ಎಂದದ್ದು. ಹಾಗೆಯೇ ಪ್ರಶ್ನಿಸಲು ಬಾರದವನು ಶಿಕ್ಷಕನಾಗಲಾರ. ಪ್ರಶ್ನಿಸುವುದು ಒಂದು ಕಲೆ ಅದಿಲ್ಲದೆ ಉತ್ತಮ ಶಿಕ್ಷಕನಾಗಲಾರ .ಸತತ ಅಭ್ಯಾಸ ಒಬ್ಬ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿತ್ವ ವುಳ್ಳ ವ್ಯಕ್ತಿಯನ್ನಾಗಿ ಮಾಡುತ್ತದೆ.ಅಂತಹ ಗುರು ವರ್ಗ ಕೋಣೆಯನ್ನು ಸ್ವರ್ಗ ವನ್ನಾಗಿ ಮಾಡಬಲ್ಲ. ಪ್ರಶ್ನೆಗಳಿಲ್ಲದ ಕೋಣೆ ಅದು ಕೊಳೆತ ಬಾಳೆಹಣ್ಣಿನ ಗೊನೆ. " ಪ್ರಶ್ನೆಗಳೆ ಉತ್ತಮ ಶಿಕ್ಷಕನ ಜೀವಾಳ"

Tuesday, August 19, 2025

ಹಾಲಹಂಡೆ










ಬಂಡೆಗಳ ನಾಡಲ್ಲಿ ಬೆಳೆದು
ನಿಂತಿಹಳು ಹಾನಾಪೂರದ ಹಾಲಹಂಡೆ 
ಕಂಡು ಸಂತಸ ಪಡು ನೀ ಮಳೆಗಾಲದಂದು
ಫೀ ಇಲ್ಲ, ಪೇ ಮಾಡಬೇಕಿಲ್ಲ ಪಳಾರದ ಹಂಗಿಲ್ಲ 
ನಿಷ್ಕಲ್ಮಷ  ಮನಸ್ಸೆ ನಿನ್ನೂಲುವಿನಾ ಪೂಜೆ ಇವಳಿಗೆ ॥

ನಿಜ ಭಾವದಾಲಪವೆ ಭಜನೆ ಆ ಬಯಲಿಗೆ !
ತಂದು ಸುರಿಯಿರಿ ನಿಮ್ಮ ಗೊಜಲು ಗೊಂದಲ
ತಿಂದು ಜೀರ್ಣೀಸುವ ಶಕ್ತಿ ಯುಂಟು 
ಈ ಹಸಿರು ಹೊದ್ದ ಹೊಂಗೆ ಮರದ ಬಾಲೆಗೆ ! 

ಮೂವತ್ತು ಅಡಿಗಳ ಮೇಲಿನಿಂದಿವಳ ನರ್ತನ 
ಜುಳು ಜುಳು ನಾದವೆ ಇವಳ ಕೀರ್ತನೆ.
ಅಪ್ಪಳಿಸಿ ಹಾರುವ ಹನಿಗಳೆ 
ಮಂತ್ರಾಕ್ಷತೆ ಈ ಮದುವನಗಿತ್ತಿಗೆ !

ಅಂದು ದನಮೇಯಿಸಲೋದ ನನ್ನಕ್ಕತಂಗಿ
ಮೈಮರೆತು ಮೆಟ್ಟಿನಿಂತರು ಪಡುವನ ದಿಕ್ಕಿಗೆ 
ಹೊತ್ತು ಜಾರಿ ಕತ್ತಲಾವರಿಸಿ 
ಚಿತ್ತಕಳೆದುಕೊಂಡರಲ್ಲಿ ।

ಮಾಹಾಮಳೆಯು ಬೆಂಬತ್ತಿ 
ಬಂಡೆಗಲ್ಲಿಗೆ ಹೆದರಿ 
ಹಾವಾಗಿ ಹರಿದಳು ಮಾಯಾವಿ 
ಈ ವೈಯಾರಗಿತ್ತಿ ।
ಪಡಿಯ ನಡು ನಡುವೆ ನಡಿಗೆ ರೌದ್ರಾವತಾರ।
ಹಿಡಿದು ನೂಕಲು ಸಜ್ಜಾದಳು ಯಮರೂಪಿ॥

ಮೇಯಿಸಿದ ರಾಸು ಮನೆತಲುಪಿದಾಗ 
ಮನವೆಲ್ಲ ಗಲಿಬಿಲಿ, ಮನೆಯ ಕರೆಯೇ 
ಮರಣ ಮೃದಂಗದ ಬಲೆ !
ದಾಟಲೆಲ್ಲಿದೆ ಕಾಲಿನಲ್ಲಿ ಶಕ್ತಿ ! 
ಮೆಲ್ಲ ಮೆಲ್ಲನೆ ಒಂದಾಗಿ
ಓಡಿದರು ..ಓಡಿದರು.. ನಾವು ತಲುಪದ
ನಕ್ಷತ್ರ ವಾವಾಗುವ ಅನಂತ ದಾರಿಗೆ.॥













Monday, August 11, 2025

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, 

     ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರೆ ಹಾಗೂ ಮಾದ್ಯಮ ಸ್ನೇಹಿತರೆ
           ಇಂದು ಅಗಸ್ಟ 15, ನಾವೆಲ್ಲ 79 ನೇ ಸ್ವಾತಂತ್ರ್ಯೋತ್ಸವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತ್ತಿದ್ದೇವೆ ಈ ಸಡಗರ ಮತ್ತು ಸಂಭ್ರಮವು ಹಾಗೆಯೆ ಬಂದದ್ದಲ್ಲ  ಸಾವಿರಾರು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳ ಫಲ.1947 ರ ಕ್ಕಿಂತ ಪೂರ್ವ ದಲ್ಲಿ  ಬ್ರಿಟಿಷರು ನಮ್ಮನ್ನಾಳುತ್ತಿದ್ದರು ನಾವೆಲ್ಲ ಗುಲಾಮರಾಗಿದ್ದೆವು. ಭಗತ ಸಿಂಗ , ಚಂದ್ರಶೇಖರ ಅಜಾದ, ಖುದೀರಾಮ ಬೋಸ್, ಉದಯ  ಸಿಂಗ್ ರಂತಹ ಕ್ರಾಂತಿಕಾರಿಗಳು.... ಗೋಪಾಲ ಕೃಷ್ಣ ಘೋಖಲೆ, ಬಾಲಗಂಗಾಧರ ತಿಲಕ, ಸುಭಾಸ್ ಚಂದ್ರ ಬೋಸ್ ಮಹಾತ್ಮಾ ಗಾಂಧೀಜಿಯವರಂತ ರಾಷ್ಟ್ರ ಭಕ್ತ ನಾಯಕರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಗಲು ದಾರಿಯಾಯಿತು, ಆ ಕಾರಣಕ್ಕಾಗಿ  ಅಂತಹ ನಾಯಕರನ್ನು  ಇಂದು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಸ್ವಾತಂತ್ರ್ಯ ಸಿಕ್ಕ ಮೇಲೆ ಇಂದು ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಅಂದು ಹಸಿವಿನಿಂದ ಹಡಗಿಗಾಗಿ ಹಪಿಹಪಿಸುತ್ತಿದ್ದ ನಾವು ಹಸಿರು ಕ್ರಾಂತಿಯನ್ನು ಮಾಡಿ ವಿದೇಶಗಳಿಗೆ ಆಹಾರ ರಫ್ತು ಮಾಡುವ ದೇಶವಾಗಿದ್ದೇವೆ.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳ ರಾಷ್ಟ್ರಗಳಿಗೆ ಸಮವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ, ಚಂದ್ರನ ಮೇಲೆ ಉಪಗ್ರಹ ಕಳುಹಿಸಿದ್ದೇವೆ, ವಿದೇಶಗಳು ಕ್ರಯೋಜನಿಕ್ ತಂತ್ರಜ್ಞಾನ ನೀಡಲು ನಿರಾಕರಿಸಿದರೂ ಸ್ವದೇಶಿ ಕ್ರಯೋಜನಿಕ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಣು ಶಕ್ತಿ ಮತ್ತು ಅಂತರಿಕ್ಷ ಯಾತ್ರೆ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದ್ದೇವೆ.ವೈರಿ ರಾಷ್ಟ್ರ ಗಳು ಬಂದು ವೈದ್ಯಕೀಯ ಸೌಲಭ್ಯ ಪಡೆದು ಹೋಗಬಹುದಾದ ವೈದ್ಯಕೀಯ ಸೌಲಭ್ಯಗಳು ನಮ್ಮಲ್ಲಿವೆ . ಪಹಲ್ಗಾಮನಲ್ಲಿ ಭಯೋತ್ಪಾದಕರು ನೀಡಿದ ಅಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ್ದೇವೆ, ಇದು ನಮ್ಮ ಹೆಮ್ಮೆಯ ಸಂಗತಿಯಾದರೂ ಇನ್ನೂ ನಮ್ಮ ದೇಶವನ್ನು ಕೆಲವೊಂದಷ್ಟು ಸಮಸ್ಯೆಗಳು  ಕಾಡುತ್ತಿವೆ. ನಿರುದ್ಯೋಗ ಸಮಸ್ಯೆಯಿರಬಹುದು,ಜಾತೀಯತೆ,ಬಡತನ,ಪ್ರಾದೇಶಿಕತೆ, ಭಯೋತ್ಪಾದಕತೆ ಮುಂತಾದವು. ಇವುಗಳನ್ನು ಬುಡ ಸಮೇತ ಕೀಳಲು ನಾವೆಲ್ಲ ಸಿದ್ಧರಾಗಬೇಕಾಗಿದೆ ...ಈ ದೇಶ ನನಗೇನೂ ನೀಡಿದೆ ಎಂದು ಪ್ರಶ್ನೆ ಹಾಕಿಕೊಳ್ಳದೆ ದೇಶಕ್ಕಾಗಿ ನಾನು ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ,  ದೇಶಕ್ಕಾಗಿ ದುಡಿಯುವುದೆಂದರೆ ಗಡಿಯಲ್ಲಿ ಹೋಗಿ ಯುದ್ದ ವನ್ನೆ ಮಾಡಬೇಕೆಂದೇನೂ ಇಲ್ಲ ಪ್ರತಿಯಬ್ಬರೂ ನಮ್ಮ ನಮ್ಮ ಕರ್ತವ್ಯ ವನ್ನು ನಿಷ್ಠೆಯಿಂದ, ಬದ್ಧತೆಯಿಂದ, ಸಮರ್ಪಣಾ ಮನೋಭಾವದಿಂದ ಮಾಡಿದರೆ ಅದೇ ರಾಷ್ಟ್ರ ಕ್ಕೆ ನಾವು ಮಾಡಬಹುದಾದ ದೊಡ್ಡ ಸೇವೆ ಅದನ್ನು ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ತಮ್ಮ ತಮ್ಮ ಕಾರ್ಯ ವನ್ನು ಮಾಡಿ ದೇಶದ ಅಭಿವೃದ್ಧಿಗೆ ನಮ್ಮ ಪಾಲನ್ನು ಅರ್ಪಿಸೋಣ. 
         ಜೈ ಹಿಂದ್ ,ಜೈ ಕರ್ನಾಟಕ 

Wednesday, August 6, 2025

ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ

ಅಂಕಗಳ ವೈಭವೀಕರಣಕಿರಲಿ ಅಂಕುಶ
ಅತಿಯಾದರದು ಮಗುವಿನ ಶಿಕ್ಷಣದ ಪಾಶ
ಮಿತಿ ಇರಲಿ, ಹಿತವಾಗಿದ್ದರದು ಅಳತೆಯ ಕೋಲು
ಸತತಪ್ರಯತ್ನವಿಲ್ಲದಿದ್ದರೆ ಪರಿಪೂರ್ಣತೆಗೆ ಸೋಲು ।।

ಅಂಕಗಳೆ ಅಂತಿಮವಲ್ಲ ಆದಿಯೂ ಅಲ್ಲ
ಸಾಧನೆಗದು ಊರುಗೋಲು ಮಾತ್ರ 
ಅದರಾಚೆಗೂ ಒಂದು ಬಾಳಿದೆ, ಬದುಕಿದೆ
ಬರದಿದ್ದರೆ ಏನ್ ? ಬೆದರುವುದು ಸಾಕು ।

ಪಠ್ಯ ದೊಂದಿಗೆ ಪುಟ್ಟದೊಂದು ಅವಕಾಶ
ಕಟ್ಟಿಕೊಳ್ಳಲು ಎಣಿಸಬೇಡ ಮೀನಾ ಮೇಷ 
ಪಟ್ಟಿಯೊಂದಿಗೆ ಬಂದಿದೆ ಮತ್ತೊಂದು ವರುಷ
ಪಠ್ಯೇತರ ಚಟುವಟಿಕೆಯಾಗಲಿ ಈ ವರುಷ ಹರುಷ

ಇಂಪಾಗಿ ಹಾಡು ತಂಪಾಗುವುದು ಜಗವೆಲ್ಲ
ಬಿಡಿಸಿ ಚಿತ್ರ ,ಮಾಡು ನೃತ್ಯ ಗಳಿಸುವೆ ಸಮಚಿತ್ತ
ಕಡೆಗಾಣಿಸದಿರು ಬಿಡುವು,  ಅಡು ನೀ ಆಟ
ಬಿಡದೆ ನಡೆಯುವುದು ದೇಹವೆಂಬ ರಥದ ಓಟ||

ಪ್ರಬಂಧ ರಸಪ್ರಶ್ನೆಯ, ಬೆಳೆಸು ಸಂಬಂಧ 
ಆಲಸ್ಯ ವೆಂಬುದು ದೇಹಕ್ಕಂಟಿದ ತುಕ್ಕು
ಮಿಕ್ಕಿ ನಡೆದರೆ ನೀನಾಗುವೆ ಚೊಕ್ಕ ಚಿನ್ನ
ಹೆಕ್ಕಿ ತೆಗೆಯಲಿದು ತಕ್ಕ ಸಮಯದ ಬಂಧನ॥

ವ್ಯವಸ್ಥೆಯೆಂಬದು ಚದುರಂಗದಾಟ
ನಾವದರ ಪದಾತಿ ದಳ, ನಡೆಸುವವನ ಸಾಮರ್ಥ್ಯ
ನಡೆಯುವವನ ಅವದಾನವಿಲ್ಲದಿದ್ದರೆ ನಡೆ ವ್ಯರ್ಥ 
ಕಡೆಗಣಿಸಿ ಬಿಡಬೇಡ, ನಡೆ ನೀನಾಗಹುದು ಮಂತ್ರಿ ॥




Tuesday, August 5, 2025

ಹರ್ಷ ವರ್ಧನ

ಮೂಲಪುರುಷ : ಪುಷ್ಯ ಭೂತಿ 
ಪ್ರಭಾಕರ ವರ್ಧನ. ಹೆಂಡತಿ ಯಶೋಮತಿ
          ..... ಮಕ್ಕಳು....
1 ರಾಜವರ್ಧನ.-2 ಹರ್ಷವರ್ಧನ -  3 ರಾಜಶ್ರೀ
      ¥               (ಶೀಲಾದಿತ್ಯ)  ( ಗೃಹವರ್ಮನ ಶಹೆಂಡತಿ)
                         ಥಾನೇಶ್ವರ.            ಕನೌಜ 
1 ಗೃಹವರ್ಮನು ಗೌಡದೇಶದ ಶಶಾಂಕನಿಂದ ಹತ್ಯೆಯಾದ
2 ರಕ್ಷಣೆಗೆ ಹೋದ ರಾಜವರ್ಧನನೂ ಕೂಡಾ ಹತ್ಯೆಯಾದ
ಪರಿಣಾಮವಾಗಿ
3 ಸಾ ಶ.606 ರಲ್ಲಿ  ಹರ್ಷವರ್ಧನ ಅಧಿಕಾರಕ್ಕೆ ಬಂದ
ಅವನು ಎದುರಿಸಿದ ಸವಾಲುಗಳು.
1 ರಾಜಶ್ರೀ ಬಿಡುಗಡೆ
2 ಶಶಾಂಕನ ಮೇಲೆ ಸೇಡು ತೀರಿಸಿಕೊಳ್ಳುವುದು.

1 ಕಾಮರೂಪದ ಬಾಸ್ಕರ ವರ್ಮನ ಜೊತೆಗೂಡಿ ಗಾವುಡ ದೇಶದ ಶಶಾಂಕ ನನ್ನು ಸೋಲಿಸಿ ಸೇಡು ತೀರಿಸಿಕೊಂಡ.
ಕಷ್ಟ ಪಟ್ಟು ತಂಗಿ ರಾಜಶ್ರೀಯನ್ನು ಹುಡುಕಿ ರಕ್ಷಣೆ ಮಾಡಿದ ಮತ್ತು ಕನೌಜ್ ನ್ನು ತನ್ನ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡ. 
2 ಮಾಳ್ವ ದೇಶದ ದೇವಗುಪ್ತನನ್ನು ಸೋಲಿಸಿ ರಾಜ್ಯ ವನ್ನು ಸಾಮ್ರಾಜ್ಯ ದಲ್ಲಿ ಸೇರಿಸಿಕೊಂಡ.
3 ಸಾ.ಶ 612 ಪಂಜಾಬನ ಪಂಚ ಸಿಂಧೂ ಮೇಲೆ ಅಧಿಪತ್ಯ ಸಾಧಿಸಿದ.
4 ಕನೌಜ,ಬಿಹಾರ  ಓರಿಸ್ಸಾ ಗೆದ್ದ.
5 ವಲ್ಲಭಿಯ ಧೃವಸೇನನ್ನು ಸೋಲಿಸಿ ಮಗಳನ್ನು ನೀಡಿದ.
6 ಗಾವುಡ ದೇಶದ ಶಶಾಂಕ ನ ಮರಣದ ನಂತರ ಒಡಿಶಾ,ಮಗದ,ಒಡಿಶಾದ ಕೊಂಗಂಡಗಳು ಇವನ ಅಧೀನಕ್ಕೆ ಬಂದವು.
7 ನೇಪಾಳದ ದೊರೆಯನ್ನು ಸೋಲಿಸಿ ಕಪ್ಪು ಕಾಣಿಕೆ ಪಡೆದ.
8 ಸಾಧನೆಯ ಪ್ರತಿಕವಾಗಿ ಉತ್ತರಾ ಪಥೇಶ್ವರನೆಂಬ ಬಿರುದು ಪಡೆದ.
9 ಇಮ್ಮಡಿ ಪುಲಿಕೇಶಯೊಂದಿಗೆ ಕಾಳಗ : ಸಾ ಶ.634ರಲ್ಲಿ
 ನರ್ಮದಾ ಕಾಳಗದಲ್ಲಿ ಸೋತು ಒಪ್ಪಂದ ಮಾಡಿಕೊಂಡ 
 ಇವನ ಸಾಮ್ರಾಜ್ಯ ಉತ್ತರ ದಲ್ಲಿ ಕಾಶ್ಮೀರದಿಂದ ನರ್ಮದಾ ನದಿಯವರೆಗೂ ಪೂರ್ವ ದಲ್ಲಿ ಬಂಗಾಲ ಒರಿಸ್ಸಾದಿಂದ ಪಶ್ಚಿಮದಲ್ಲಿ ಪಂಜಾಬನ ವರೆಗೆ ವಿಸ್ತರಿಸಿತ್ತು.
10 ಧರ್ಮ:ಆರಂಭದಲ್ಲಿ ಶಿವನ ಆರಾಧಕನಾಗಿದ್ದು ನಂತರ ಬೌದ್ಧ ಧರ್ಮ ಸ್ವೀಕರಿಸಿದ, ಪ್ರಾಣಿಬಲಿ ನಿಷೇಧಿಸಿದ
11 ಸಾ ಶ.643 ರಲ್ಲಿ ಕನೌಜನಲ್ಲಿ ಧಾರ್ಮಿಕ ಮಹಾಸಭೆ ಮತ್ತು ಪ್ರಯಾಗದಲ್ಲಿ ಬೌದ್ಧ ಮಹಾಸಮ್ಮೇಳನ ಏರ್ಪಡಿಸಿದ





Sunday, July 27, 2025

ಬದುಕು ಬಂಗಾರ

ಬೆನ್ನು ಬಾಗಿ, ಕಣ್ಣು ಮಂಜಾದವು
ಅನ್ನಹುಡುಕಲು ಅನುದಿನವೂ ಪಯಣ 
ತನ್ನವರು ತಂದು ಹಾಕುವುದೇ 
ಪರಹಾರವೆನ್ನದೆ ತಾ ದುಡಿದುದೆ ಪರಮಾನ್ನ //

ಬಿಸಿ ರಕ್ತ ಬಸಿಯುವಾಗ ಹೊಸ ಹುರುಪು
ಕುಸಿಯಿಂದ ಹೊಸ ನಗುವಿನಾ ಸಂಸಾರ
ಬಿಸಿಲು ಬಾಗಿ ಮುಸ್ಸಂಜೆಯಾವರಿಸಿ
ಕಸುವು ಕತ್ತಲೆಯಾವರಿಸಿದರೆ ಹಸಿವಿಗೆಲ್ಲಿದೆ ಬರ//

ಕಾಸಿಗೂ ಕಾಲಿಗೂ ಚೌಕಾಸಿ 
ನಡೆದಷ್ಟು ಪಡೆಯಲು ನಾ ಮುಂದು ತಾ ಮುಂದು
ನಡೆಯಿದಿದ್ದರೆ ಪಡೆಯವುದೇನಿದೆ 
ಬದುಕೊಂದು ಕಡೆಗೆ ನರಕದ ಮನೆ //

ಕನಸುಗಳು ಬೆನ್ನೇರಿ ಕವನಗಳ ಕಟ್ಟಿ
ಎಲ್ಲೆಲ್ಲೋ ಕವನ ಸಂಕಲನಗಳೇ
ಮನಸ್ಸುಗಳು ಹದವರಿತು  ಮೌನದಾಲಾಪ
ಮನವೆಲ್ಲಾ ಕಟ್ಟಿದ ಗಾನಗಂಧರ್ವ ಲೋಕ//

ನಡೆದದ್ದು ಬಹುದೂರ ಮಾಡಬೇಕಿದೆ ಪೂರ್ಣ
ಹೆಡೆಯಲ್ಲಿ ತೂಗಾಡಿದೆ ಕೇಸರಿಯ ವರ್ಣ
ಪಡೆಯಲು ದುಡಿಯುವುದೊಂದೆ ಹಂಬಲ
ತಡೆಯಾಲಾರಿಲ್ಲ ಉಳಿದ ಜೀವನವೆ ಬೆಂಬಲ//





 


 




 




Monday, July 7, 2025

ಮೊಹರಂ

      ಹಬ್ಬಗಳ ಉದ್ದೇಶವೆ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು, ಬಂದು ಬಾಂಧವರು ಹತ್ತಿರ ಸೇರುವುದು, ಹಳಸಲು ಕಶ್ಮಲಗಳು ಹರಿದ ಹೋಗಿ ಹೊಸ ಉತ್ಸಾಹ ತುಂಬಿ ಬರುವುದಾಗಿದೆ. ಇಲ್ಲದಿದ್ದರೆ ಅದು ಹಬ್ಬ ಅಂತ ಅನ್ನಿಸಲಾರದು ಅದೂ ಜಾತಿ, ಧರ್ಮ ವನ್ನು ಮೀರಿದ ಮನಸ್ಸನ್ನು ಪುನಶ್ಚೇತನಗೊಳಿಸುವ ಸಂಜೀವಿನಿ.ಅದಕ್ಕಾಗಿ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಸಾಮಾಜಿಕ ಬಳುವಳಿ ಇದನ್ನು ಬಳಸಿಕೊಂಡ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ನಾಗರಿಕತೆ ಬೆಳೆದಂತೆ ಮನುಷ್ಯ ನ ನೆಮ್ಮದಿಯನ್ನು ಇಮ್ಮಡಿಗೊಳಿಸುವ ಭೌತಿಕ ಸಾಧನಗಳು ಸಾಕಷ್ಟು ಇವೆ.ಅವು ಏನೆ ಇರಲಿ ಅವು ವ್ಯವಹಾರಿಕ ಹಾದಿಯನ್ನು ಹಿಡಿದಿರುವುದನ್ನು ನಾವೆಲ್ಲ ಕಾಣುತ್ತೇವೆ ಅದರಾಚೆಯೂ ಕೂಡಾ ಹಳ್ಳಿಗಳಲ್ಲಿ ಧರ್ಮದ, ಜಾತಿಯ ಚೌಕಟ್ಟಿನ ಮೀರಿದ ಹಬ್ಬದ ಆಚರಣೆಯು ನನ್ನ ನ್ನು ಈ ನಾಲ್ಕು ಸಾಲುಗಳನ್ನು ಬರೆಯುವಂತೆ ಮಾಡಿದ್ದು ಸತ್ಯ. ನಾನು ಹುಟ್ಟಿದ ಊರು ಹಾನಾಪೂರ ಎಸ್ ಪಿ. ನನ್ನೂರಿನಲ್ಲಿ ಒಂದೆ ಒಂದು ಮುಸ್ಲಿಮ ಕುಟುಂಬವೂ ಇಲ್ಲ ಆದರೂ ಮುಸ್ಲಿಮರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮೊಹರಂ ಹಬ್ಬವನ್ನು ಊರಿನವರೆಲ್ಲ ಸೇರಿ ಆಚರಿಸುವ ರೀತಿಯು ಭಾವೈಕ್ಯಕ್ಕೆ ಹಿಡಿದ ಕನ್ನಡಿ ವಿವಿಧ ಜಾತಿಯ ಜನರು ವಾಸಿಸುವ ಈ ಊರಿನಲ್ಲಿರುವ ಹಬ್ಬ ಜ್ಯಾತಾತೀತ ಪದಕ್ಕೆ ಶೃಂಗಾರ. ಹಬ್ಬದ ಆಚರಣೆಯ ವಿಧಗಳು ಅವು ಏನೆ ಇರಲಿ ಬದುಕನ್ನು ಆಸ್ವಾದಿಸುವ ಅವರ ಪದ್ದತಿಯು ನಿಜಕ್ಕೂ ಅನುಕರಣೀಯ. ಹೆಜ್ಜೆಯ ಕುಣಿತಕ್ಕೆ ಅವರು ನೀಡಿದ ಆಧುನಿಕ ಸ್ಪರ್ಶ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು ಟ್ರ್ಯಾಕ್ಟರ್ ಗೆ  ಅಳವಡಿಸಿದ ಸ್ಪೀಕರ್ ಕೋಲಾಟದ ಕುಣಿತಕ್ಕೆ ತಾಳಹಾಕಿತು ಯುವಕರ ಸಿಳ್ಳೆಕೆಕೆಗಳು ಲೌಕಿಕ ಚಿಂತಕರ ಮೌನವನ್ನು ಮುರಿದು ಗಾನದಲ್ಲಿ ತೇಲಿಸಿದವು, ದುಡಿದು ಬಸವಳಿದವನಿಗೆ ಇದಕ್ಕಿಂತ ಟಾನಿಕ್ ಇನ್ನೂಂದು ಸಿಗಬಹುದೆ ?ಮೊಹರಂ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತಿದ್ದು, ಕ್ರಿ. ಶ 680ರಲ್ಲಿ ನಡೆದ ಕರ್ಬಲಾ ಕದನದಲ್ಲಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ರ ಸವಿನೆನಪಿಗಾಗಿ ಶೋಕದೊಂದಿಗೆ ಈ ದಿನವನ್ನು ಆಚರಿಸಲಾಗುವುದು. ಇದು ಇಸ್ಲಾಮಿಕ್‌ ಕ್ಯಾಲೆಂಡರ್‌ನಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದ ಹಬ್ಬವಾದರೂ ಆ ಯಾವ ಐತಿಹಾಸಿಕ ಮಾಹಿತಿ ಅರಿವು ಸಂಪೂರ್ಣ ಅವರಿಗೆ 
ಇಲ್ಲದಿದ್ದರೂ ನಂಬುಗೆ ಹಾಗೂ ಸಂಪ್ರದಾಯದ ಬೆಳಕಿನಲ್ಲಿ ಅವರು ಕಾಣುವ ಸಂತೋಷ ನಿಜವಾಗಿಯೂ ಮೆಚ್ಚಬೇಕಾದದ್ದೆ 

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...