Saturday, July 18, 2020

* ವಿಕಾಸ *

ಮಂಗನಿಂದ ಮಾನವ ಬೆಳೆದ ನಿರಂತರ
ವಿಕಾಸದ ಹಾದಿಯು ಬಹು ಸುಂದರ 
ನಾಲ್ಕು ಕಾಲು ಬಳಸಿ ಎರಡೆ ಉಳಿಸಿದ
ಎಲೆ ತಿಂದು ಮಾಂಸಕೆ ಬಲೆ ಬಳಸಿದ //

ಮರದ ಎಲೆ ಕಾಯಿ ಹಣ್ಣು ಮಾಯ
ಹುಲ್ಲು ಬೆಳೆಯಿತು, ಹಸಿವಿನ ಗಾಯ 
ಹಿಡಿದ ಕಲ್ಲು ಬಿಲ್ಲು, ತಿಂದ ಸತ್ತ ಪ್ರಾಣಿ 
ಸಡೆಸಿದ ಬಾಳು, ಉಳಿಸಿಕೊಂಡ ಪ್ರಾಣ//

ವಂಶವ ಬೆಳೆಸಿದ, ಆಹಾರಕ್ಕದು ತತ್ತರ        
ಸರಳ ಜೀವನಕದು ನಾಗರಿಕತೆ ಉತ್ತರ
ಚಕ್ರದ ಶೋಧ, ತಿರುಗಿದ ನಿರಂತರ 
ನಿಲ್ಲದಂತೆ ಬೆಳೆದ ಬಹು ಎತ್ತರೆತ್ತರ //

ವಿಕಸನದ ಹಾದಿ  ವಿಶ್ಮಯ ತಂದೆ
ಎಲೆ ತಿಂದವನಿಂದು ಮರ ನುಂಗಿದ
ಮಣ್ಣು ನುಂಗಿದ, ಮತ್ತೆ ಕಲ್ಲೆ ನುಂಗಿದ
ಮಾನವ ಮನಷ್ಯನ್ನುಂಗತಾನ ಮುಂದ//

ಬತ್ತಲೆಯವನ ದೇಹ ಮುಚ್ಚಿತಂಬರ 
ಮತ್ತೆ ತೆರೆದು ತೋರಿಸದಿರು ದೇಹ
ಮನಗಾನು ಮನವೆ ಬೇಡ ಸಮರ
ಮೌನದಿಂದ ಗೆದ್ದವರಿದ್ದಾರೆ ಸಾವಿರ //

                  ಬಸನಗೌಡ ಗೌಡರ 

Thursday, July 16, 2020

* ಮಹಾಮಾತೆ *

ಮೊಳಕೆ ಮೊಗ್ಗಾಗಿ ಹೀಚು ಕಾಯಾಗಿ   
ಮೊದಲು ಮನೆಗೆ ಮಲ್ಲಿಗೆಯಾಗಿ
ತವರಿನ ಸಿರಿಯಾಗಿ ಬೆಳೆದವಳಿವಳು
ಸಂಸ್ಕಾರದ ತಳಪಾಯವಾದವಳಿವಳು//

ಮುದ್ದಿನ ಮಗಳು ಶುದ್ದಗುಣದ ಗಣಿ
ಶಿಕ್ಷಣ ಹಂತದಲ್ಲಿ ಇವಳೆ ಮುತ್ತು ಮಣಿ 
ಪ್ರತಿ ಕ್ಷಣವೂ ಸ್ಪರ್ಧೆಗೆ ಇವಳ ಹೋಮ
ಸವಾಲು ಸ್ವೀಕರಾದಲ್ಲಿವಳಿಗಿಲ್ಲ ಸಮ //

ಪಾದವಿಟ್ಟ ಮನೆಯ ದಾಳ ದೂಳಾಗಿ
ಪತಿ ಪರದೈವ ಪಾತಿವೃತ್ಯದ ಆಳಾಗಿ 
ಭಕ್ತಿಪರವಶೆಯ ಮುಕ್ತಿ ಮನೆಮಂದಿರ
ಪತಿ ಸುತರ ಕಾವಲು ತಾಳುಗೋಪುರ //

ಬೀಜ ಮೊಳಕೆಗೆ ಹದವಾದ ಮಣ್ಣಾಗಿ  
ಮೈಮುರಿದು ಮೃದು, ಮನೆಗೆ ಹಣ್ಣಾಗಿ
ಮತ್ತೆ ಬೆಳೆಗೆ ತೋಟದ ಮಾಲಿನೀನಾದೆ
ಉಲಿದು ಶಿಕ್ಷಣ ವರ್ಣ ತಳಗುರುವಾದೆ//

ಮನ ಮನೆ  ವಂಶದಕುಡಿ ಬಾರ ತಾಳಿ 
ಮತ್ತೆ ಮನೆ ಬೆಳಗುವೆ ದೀಪ ತಾ ಬಾಳಿ
ಮೈಲಿಗೆ ಮುಂದೆ ಮಾಡಿ ನೋವಿತ್ತರು
ವಂಶ ಬೆಳಗಿತು ನೀ ಹರಿಸಿದ ನೆತ್ತರ   //

             ಬಸನಗೌಡ ಗೌಡರ 


* ಮಗ್ಗಲು ಮುಳ್ಳು *

ಹಲವು ಕಲಹ ಹೆಕ್ಕಿ ತಿಕ್ಕಿ ಮುಕ್ಕುತಿವೆ 

ಬಯಲು ದಾರಿಯಲಿ ಬುಸುಗುಡುತಿವೆ

ಹಾಲು ಕುಡಿದು ಹಾಲಾಹಲ ಕಕ್ಕುತಿವೆ 

ಸಾಲು ಸಾಲು ಸಮಸ್ಯೆಗಳ ಸರಮಾಲೆ

ಏರುವ ಮಂಚದ ಕಾಲುಗಳೆ ಮಾಯೆ
ಪವಡಿಸಿದ ಪಲ್ಲಂಗ ಉರಗ ಛಾಯೆ
ಸುಖದ ಸುಪ್ಪತ್ತಿಗೆಯದು ಬರಿ ಭ್ರಮೆ
ನೀನಿಡುವ ಪ್ರತಿ ಹೆಜ್ಜೆ ಸರಿಯಿಲ್ಲದಿರೆ

ಲಂಚದ ಮಂಚ ಏರಬಯಸಿದೆ ಕೆಂಚ
ಸಂಚು ಮಾಡಬೇಕು ಹಂಚಿ ತಿನ್ನಬೇಕು
ಕೊಂಚ ಎಡವಟ್ಟಾದರು ಸಂಚಾಕಾರ
ಪವಡಿಸ ಬಿಡದೆ ಕಾಡುವುದು ಮಂಚ

ಮಂಚವೇರಲು ಮತಿಗೆಟ್ಟು ತಿರುಗಾಟ
ಮೈಮುರಿದು ದುಡಿಯದೆ ಹುಡಗಾಟ
ಹಾಸಿಗೆ ಹಾವಾಗಿ ಹೂವು ಮುಳ್ಳಾಗಿ
ಹಗಲಿರುಳು ಬೆನ್ನತ್ತುವುದು ಶಾಪವಾಗಿ

ಕಾಲವೆ ಕೈ ಚೆಲ್ಲಿ ಕುಳಿತು ಕಲಿರಾಯ
ಕತ್ತು ಹಿಡಿದೆಳೆದಾಗ ಹಿತವರಾರಿಹರು
ಸತಿಸುತರು ತಂದು ಹಾಕುವಾಗಿಹರು
ಸತ್ತರೆ ಕುಣಿವರೆಗೆ ಮಾತ್ರ ಬರುವರು

            ಬಸನಗೌಡ ಗೌಡರ
 


Sunday, July 12, 2020

ದೀಪದಿಂದ ನಿಜ ದೀಪಾವಳಿ

ದಿವ್ಯದೃಷ್ಟಿ ನಮ್ಮಸೃಷ್ಟಿ ಸಾಗಲು 
ದಿನದ ಬದುಕಿನ ಕೊವಿಡ್ ಕೊಲ್ಲಲು
ನಮ್ಮ ಸಂರಕ್ಷಣೆ ಮೆರೆಯಲು
ಅಚರಿಸಬೇಕು ನಿಜ ದಿಪಾವಳಿ  

ದೀಪದಿಂದ ಕೊರೊನಾ ಅಳಿಯಲಿ
ದಿಪದಿಂದ ಶಾಪ ದಿವಾಳಿಯಾಗಲಿ
ಲೋಕ ತಮಂದವಳಿದು ನಾಕವಾಗಲು
ಆಚರಿಸುಬೇಕು ನಿಜ ದೀಪಾವಳಿ//

ಆರಿಸಿ ಆಚರಣೆ ನಮ್ಮದಲ್ಲ ಕೇಳಿ
ಎಚ್ಚರದಿಂದ ಹಚ್ಚಿ ದೀಪ,ತಾಳಿ
ಹುಚ್ಚರಾಗಿವಿ ಕೊರೊನಾ ಕೇಳಿ ಕೇಳಿ
ಅಚ್ಚರಿಫಲಿತಾಂಶಕೆ ನಿಜ ದೀಪಾವಳಿ//

ದೀಪ ಸಂಕೇತ, ಭಾವ ಬಿತ್ತ ಬೇಕು 
ಭವ್ಯ ಭಾರತ ಕಟ್ಟಬೇಕು ಜನಕ
ಕಾಶ್ಮೀರದಿಂದ ಕನ್ಯಾಕುಮಾರಿ ತನಕ
ಆಚರಿಸಬೇಕು ನಿಜ ದೀಪಾವಳಿ//

ಭವ್ಯ ಪರಂಪರೆ ಭುವನ ಪುತ್ರರು
ವಿಶ್ವ ಮಾನವತ್ವ ಬೆಳವಣಿಗೆ ಮಿತ್ರರು
ಭೇಧ ಭಾವ ಮನದಿಂದ ಅಳಿಯಲು
ಆಚರಿಸಬೇಕು ನಿಜ ದೀಪಾವಳಿ//

ದಾದಿ ವೈದ್ಯ, ಆರಕ್ಷಕರ ಸ್ಮರಣೆಗೆ
ಪ್ರಧಾನಿಯ ಕರೆಗೆ,ರೋಗ ನಿವಾರಣೆಗೆ
ಕೋಟಿ,ಕೋಟಿ ಭಾರತೀಯರ ರಕ್ಷಣೆಗೆ ಬೆಳಗಬೇಕು ದೀಪದಿಂದ ದೀಪಾವಳಿ//


             ಬಸನಗೌಡ ಗೌಡರ

Tuesday, July 7, 2020

ಬಾಗು ಮನ


ಅನುದಿನವು ಬರಿ ಚಪಲಕೆ ಮಾತಾಡಿ
ಅರೆಕ್ಷಣವೂ ಓದದೆ ಬರೆಯುವೆ ಕೊಡಿ
ಆರು ಓದುವವರು ಈ ನಿನ್ನ ಕವನ
ಅರಳುಮರಳು ಹಿಡಿದ ಮುದಿ ಜೀವನ//

ಬೇಟೆಯಾಡಿದಂತೆ ನಾಟಕವಾಡಿ
ಸರಿಸಾಟಿಯಲ್ಲದವರ ಜೊತೆಗೂಡಿ
ಸಮಾಜಸೇವೆ ರಂಗತಾಲೀಮು ಮಾಡಿ
ಕುಣಿದು ಬೆತ್ತಲಾಗಿ ನಿಲ್ಲುವೆ ಹಾಡಿ//

ಬಂಜರು ನೆಲದ ಭತ್ತದ ಹುಡಕಾಟ
ಬಿರುಗಾಳಿಗೆ ಸಾಲುಗಳೆಲ್ಲ ಅಲುಗಾಟ
ಭಾಗುವ ಗಿಡ ಬದುಕುವುದು ದಿಟ
ಬಾಗದೆ ಬಗ್ಗದೆ ನಿಲ್ಲಲು ಯಾಕಿ ಹಠ//

ಮಾಡಿದ ಪಾಪಗಳೆ ಮೇಲೆರಗುವವು  
ಮಧ್ಯರಾತ್ರಿಯಲ್ಲಿ ಬಿರುಗಾಳಿಯಾಗಿ
ಮಾಡಿದ ಪುಣ್ಯಗಳೆ ಸುರಿಯುವವು
ಮಾಮರದ ಮಂದ ಮಾರುತಗಳಾಗಿ //

ಮನಪರಿವರ್ತನೆಗೆ ಮಿಸುಕಾಡಿತಾ ಹಿಡಿ 
ಮಾವುತಗೆ ಮಣಿಯಲಾರದೆ ಆ ಕರಿ
ಅಂಕುಶವೆ ಕಿರಿದೆಂದು ಬಿಂಕವ ಬಿಡು
ಅಂಕೆಯಲಿಡಲು ಸಂಕೀರ್ತನೆ ಹಾಡು//

         ಬಸನಗೌಡ ಗೌಡರ 





Sunday, July 5, 2020

ಮಾಹಿತಿ ಗುರು

ಇಂದು ಬದಲಾಗಿದೆ ಜಗತ್ತು
ಅದು ತರಲು ಹೊರಟಿದೆ ಆಪತ್ತು
ಮಾಹಿತಿಗಳೆ ಗುರುಗಳು ಇವತ್ತು
ಅರ್ದ ತಿಳಿದವನಿಗೂ ಬಂದಿದೆ ಗತ್ತು//

ಗರು ಸೃಷ್ಟಿ ಸ್ಥಿತಿ ಲಯ ಕರ್ತೃವಾದ ಕಾಲವಿತ್ತು
ಮಾಹಿತಿ ಮಾಣಿಕ್ಯವೆಂಬ ಕಾಲ ತೇಲಿ ಬಂದಿತ್ತು
ಮನೆ ಪಾಠದ ಸಾಧನವಾಗಿ ಗುರು ಸಾಕಾಗಿತ್ತು
ಗರು ಕೊಂಡುಕೊಂಡರು ಮಾಹಿತಿಗಾಗಿ ಇವತ್ತು //

ಮಾಹಿತಿಗಳೇರುವ ವಾಹಕಗಳೆ ಗುರುವಾಗಿ
ಗುರುಗಳಿಗೆ ಕಾಡುತಿದೆ ಸಂಬಳವೆ ಶಾಪವಾಗಿ
ಗುರು ಮಟ್ಟಕ್ಕೇರದೆ ಸಾಧನಗಳೇ ಲಘುವಾಗಿ
ಸಾಧನಗಳೆ ಬೀಳಬಹುದು ತೆಲೆ ಕೆಳಗಾಗಿ//

ಗುರು  ಹರನಂತೆ ಬದಲಾಗಬೇಕು
ವಿಷ ಕುಡಿಯಲು ತಯಾರಿರಬೇಕು
ಸಮುದ್ರ ಮಂಥನ ಮಾಡಬೇಕು
ಸಾಧನಗಳ ಹುರಿದು ಜೀರ್ಣಿಸಬೇಕು

ನನ್ನ ಗುರುವು ನನಗಿಂತ ಭಿನ್ನ ನಾಗಿದ್ದ
ಆಹಾರ ತಯಾರಿಸಿ ನಳಪಾಕನಾಗದ್ದ
ಊರಿನ ಹಬ್ಬಹರಿದಿನದ ಸೇವಕನಾಗಿದ್ದ
ಓದಿ ಬ್ರಾಹ್ಮಣ, ಮಕ್ಕಳ ನಾಯಕನಾಗಿದ್ದ //

          ಬಸನಗೌಡ ಗೌಡರ









Wednesday, July 1, 2020

ಮುಂಗಾರು


ಉರಿದ ಕೆಂಡಕೆ ಮೈಯಲ್ಲಾ ಮುದುಡಿ
ಮಲಗಿದ್ದ ಭೂತಾಯಿ ಮೈಯಲ್ಲಾ ದುಗುಡ
ಭಾರಕ್ಕೆ ತಲೆಯ ಕೂದಲೆಲ್ಲ ಉದುರಿ 
ಬೊಚ್ಚು ಬಾಯಲ್ಲಿ ಹುಚ್ಚಾಗಿದ್ದಳು ಚೀರಿ//

ಮುಂಗಾರು ಮಳೆ ಸುರಿಯೆ ಸಿಂಗಾರ
ಹಸಿರು ಸೀರಿಯ ಹೊದ್ದಳು ಬಂಗಾರಿ
ಭೂರಮೆಗೆ ತಂಗಾಳಿ ಬೀಸಿತು ಚಾಮರ
ಗಿಳಿ ಗೊರವಂಕದ ಭೃಂಗದ ಜೇಂಕಾರ//

ಪಡುವಣ ತೆಂಕಣ ಮೂಲೆಯ ಮುತ್ತು
ಸುರಿದು ದುಮ್ಮಕ್ಕಿ ಹರಿದವು ಜಲಪಾತ
ಹಳ್ಳ ಕೊಳ್ಳದ ಜುಳು ಜುಳು ಆಲಾಪ
ಹಕ್ಕಿ ಪಕ್ಕಿಗೆ ಹೂವು ಬಳ್ಳಿಗಳ ಪ್ರಲಾಪ//

ಉದಯ ಭಾಸ್ಕರನ ಅಬ್ಬರವ ಕರಗಿಸಿ
ಮಬ್ಬಾಯಿತು ಮುಂಜಾವು ಮಂದಹಾಸದಿ
ಮನೆತುಂಬಾ ಕಲರವ ಮತ್ತೆ ಬಿತ್ತುವ ಕಳೆ
ಭೂದೇವಿ ಸೆಳೆತಕ್ಕೆ ಮನುಕುಲದ ಜೀವಕಳೆ//

ನಾನೆ ಎಂದವನ ಜಂಗಾಬಲ ಉಡುಗಿತ್ತು
ಕಲ್ಲು ಕಂಟಿಗೂ ಪೂಜೆ ಪುನಷ್ಕಾರ ನಡೆದಿತ್ತು
ಕಪ್ಪೆ ಕತ್ತೆಗೂ ಮದುವೆ ಜೋತೀಷಿ ಕರಾಮತ್ತು
ವರುಣ ಕಣ್ಣು ತೆಗೆದರೆ ಮಾತ್ರ ಈ ಜಗತ್ತು//

              ಬಸನಗೌಡ ಗೌಡರ

ವಾಸ್ತವ

ನಾವು ಗುರುಗಳು,ಅಲ್ಲ ತರಲೆಗಳು
ಕಲಿಸತೇವ ಜ್ಞಾನದ ಮೂಲ ತತ್ವಗಳು
ಮರೆಯತೇವ ದಿನ ನಿತ್ಯದ ಸತ್ಯಗಳು
ಹೊಗಳತೇವ ಇತಿಹಾಸ ಆದರ್ಶಗಳು

ಜ್ಞಾನವಂತರು ಜಾಣತನ ಮರೆತವರು
ವಾಸ್ತವವರಿಯದೆ ನಡೆಯುತಿರುವವರು
ನಮ್ಮ ನಿಮ್ಮ ನಡುವೆ ಏನಿದೆ ಅಂತರ
ವಿಷಯ ಸಂಗ್ರಹಿಸುತಿರುವೆವು ನಿರಂತರ //

ಮಾಸ್ತರಗ ಬುದ್ಧಿಯಿಲ್ಲ ಅಂದರು
ಸ್ಟೇಷನ್ ಮಾಸ್ಟರಗ ನಿದ್ದೆಯಿಲ್ಲಂದ್ರು
ಎದುರುತ್ತರವಿಲ್ಲದಕ್ಕ ಹಾಗಂದರು
ಸರಿ ಉತ್ತರವಿದ್ದರ ಹಿಂಗ್ಯಾಕಂತಿದ್ದರು//

ಎಲ್ಲ ಕೆಲಸಗಳನ್ನು ನಾವು ಮಾಡತೇವು
ಬಲ್ಲವರಂಗ ಬೈದವರನ್ನು ಸಹಿಸಿತೇವು
ಬರಿ ಆದರ್ಶ ತತ್ವಗಳ ಮಾತಾಡತೇವು
ಜಾಣರ ಮುಂದ ಅವು ಹೇಗೆ ನಡಿತಾವು//

ಮಕ್ಕಳ ತಪ್ಪಾದರು ನಮ್ಮನ್ನ ಬೈತಾರು
ಮನೆಯಲಿ ಅವ್ರ ಬೇಡಿದ್ದ ಕೊಡತಾರು
ಬೇಕಾದ್ದು ಕೊಟ್ಟಿದ್ರ ಹಿಂಗ್ಯಾಕಾಗತಿದ್ರು
ಮಾಡಬ್ಯಾಡಂತಾರು ತಾವ ಮಾಡತಾರು//

           ಬಸನಗೌಡ ಗೌಡರ 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...