Saturday, January 30, 2021

* ಪ್ರಜೆ.....ಪ್ರಭುತ್ವ *

ಸತ್ಯದ ಕೊಲೆ ನಿತ್ಯ ನಡೆದರೂ 
ತಲೆ ಎತ್ತಿ ನಡೆಯದಂತೆ ಒತ್ತಿ ಹಿಡಿದವರು 
ಯಾರು ನನ್ನ, ಸತ್ಯವೆ ದೇವರೆನ್ನುತ
ನಡೆದವರು ನಾವು  //

ಕತ್ತೆಯಂತೆ ದುಡಿದರೂ ಮತ್ತೆ ಕೆಲಸ  
ಸುತ್ತ ತಿರುಗಲೂ ಬಿಡದವರು 
ಯಾರು ನನ್ನ ,ದುಡತವೆ ದುಡ್ಡಿನ 
ತಾಯಿ ಎನ್ನುವವರು ನಾವು//

ಎತ್ತರದ ಧ್ವನಿ, ಹತಾರದಂತೆ ಹರಿತ 
ಪ್ರತಿಭಟಿಸದಂತೆ ಮಾಡಿದವರು
ಯಾರು ನನ್ನ, ಮಾತು ಮಾಣಿಕ್ಯ 
ಮೌನ ಬಂಗಾರವೆನ್ನುವರು ನಾವು//

ಕಪಟಿಗಳಿಗೆ ಜೈಕಾರ ನಿಷ್ಠೆಯಿಂದ 
ದುಡಿದರೂ ಒಬ್ಬಂಟಿ ಮಾಡಿದವರು
ಯಾರು ನನ್ನ ,ನಿಷ್ಠುರವಾದಿ ಲೋಕ 
ವಿರೋಧಿ ಎನ್ನುವವರು ನಾವು//

ಮಾತುಗಳಲ್ಲೆ ಮನೆ ಮಾಡಿ ಜೋತು 
ಬೀಳಿಸಿ ಜೀತಗಾರನಾಗಿ ಮಾಡಿದವರು
ಯಾರು ನನ್ನ ,ಜೊತೆಯಾಗಿ ಬಾಳಿ 
ಸ್ವರ್ಗ ಎನ್ನುವವರು ನಾವು //

ಮತಹಕ್ಕು ಪಡೆಯಲು ಹತರಾದರು 
ಹಿರಿಯರು ನೀತಿಗೆ ನೀಡದೆ ತಡೆದರು
ಯಾರು ನನ್ನ, ಮತವೆ ಪ್ರಭುತ್ವದ 
ಪ್ರಭುಗಳೆನ್ನುವವರು ನಾವು //

           ಬಸನಗೌಡ ಗೌಡರ

Thursday, January 28, 2021

"ರಾಮನಾಮ ಭಾವನಾಮ"

ಹಿಂದು ಜಲವ  ಮಿಂದ ದೊರೆಯ
ಗಂಗೆ ಯಮುನೆ ಹಿಮದ ಝರಿಯ 
ಗಿರಿಯ ತೊರೆಯ ನಾದ ಲೀಲೆ
ಗಗನ ದಾಟಿ ಹೃದಯ ಮೀಟಿ 
ಬೆಳಗಲೆಮ್ಮ ಭಾವ ಕೋಟಿ ಕೋಟಿ //

ಸೀತೆಯೆಂಬ ಭರತ ಮಾತೆ 
ಪಿತೃ ಪಾಲನೆ ಪತಿಯ ಪಡೆದ ಸುತೆ 
ವನವಾಸ ನಡೆದಳು ಪತಿಯ ಜೊತೆ 
ಅಯೋಧ್ಯೆಗವನೆ ಕೈಕೆಯ ಸುತ
ಪಾದರಾಕ್ಷೆ ಹಿಡಿದ ತನುಜ ಭರತ  //

ಬೆಳಗಲಿ ಭಾವ ಧರ್ಮದ ಜ್ಯೋತಿ 
ಅಳಿಯಲಿ ಅರಿ ಅಧರ್ಮದ ಭೀತಿ
ಅರಳಲಿ ಪಿತೃಪರಿಪಾಲನಾ ನೀತಿ 
ಆದರ್ಶ ಪುರುಷನಿಗೆ ಎತ್ತು ಆರತಿ
ಜಗವೆಲ್ಲ ಬಾಗಿದೆ ನೀನೆಮ್ಮ ಭಾರತಿ//

ಐಕ್ಯ ಸರಸ್ವತಿ ಪುಣ್ಯಧಾಮ
ಜಪಿಸು ಅನುದಿನ ರಾಮನಾಮ
ಜನರ ಹೃದಯ ಬೆಸೆದ ಮಂದಿರ
ಅರಳಿತಲ್ಲಿ ಅಯೋಧ್ಯೆನೆಲದ ಹಂದರ
ಇರುಳು ಕಸಿದ, ಹಿಂದು ಜನರ ಚಂದಿರ//

ಭವ್ಯ ಭಾರತ ಪುತ್ರರು,ಭವದಿ 
ಬೆರೆತು ವಾಸಿಸುವ ಜನರೆ ಮಿತ್ರರು, 
ಕಾಶಿಯಿಂದ ರಾಮೇಶ್ವರ, ಪುರಿಯಿಂದ
ದ್ವಾರಿಕೆ. ಕಣ ಕಣಗಳಲ್ಲಿ ಅರಳಲಿ 
ಹರ ರಾಮ ನಾಮ ದ್ವನಿಗಳು.//

         ಬಸನಗೌಡ ಗೌಡರ

Sunday, January 24, 2021

 ಶರಣೆಂಬೆ ಗುರುವಿಗೆ, ಶರಣೆಂಬೆ ಅರಿವಿಗೆ 
ಶರಣೆಂಬೆ ಸಾಹಿತ್ಯ ಸರಸ್ವತಿಗೆ 
ಶರಣು ಶರಣೆಂಬೆ ತಮ್ಮೆಲ್ಲರಿಗೆ.

72 ನೇ ಗಣರಾಜ್ಯೋತ್ಸವದ ಶುಭಾಶಯಗಳು.

      ಭಾರತೀಯ ರಾಷ್ಟೀಯ ಹಬ್ಬಗಳು ಐದು. ಮಕ್ಕಳ ದಿನಾಚರಣೆ,ಸ್ವಾತಂತ್ರ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವ ಮತ್ತು ಶಿಕ್ಷಕರ ದಿನಾಚರಣೆ, ಅವುಗಳಲ್ಲಿ ಎರಡನ್ನು ಬಹು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡುತ್ತೇವೆ.ಇಂದು ಗಣರಾಜ್ಯೋತ್ಸವ ನಮಗೆ ಸಂತೋಷ ಮತ್ತು ಸಡಗರದ ದಿನ ಅದರ ಕುರಿತು ಒಂದೆರಡು ಮಾತನಾಡಲು ಇಷ್ಟಪಡುತ್ತೇನೆ.

        1947 ಆಗಷ್ಟ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆ ಭಾರತ ಹೂವಿನ ಹಾಸಿಗೆ ಯಾಗಿರಲಿಲ್ಲ ಬದಲಾಗಿ ಅದು ಮುಳ್ಳಿನ ಹಾಸಿಗೆಯಾಗಿತ್ತು ಕಾರಣವೆಂದರೆ ಹಲವಾರು ಸಮಸ್ಯಗಳನ್ನು ಅದು ಎದುರಿಸುತ್ತಿತ್ತು . ಅವುಗಳೆಂದರೆ ಸಂಸ್ಥಾನಗಳ ವಿಲೀನೀಕರಣ ಸಮಸ್ಯೆ, ನಿರಾಶ್ರಿತರ ಸಮಸ್ಯೆ, ಆಹಾರ ಸಮಸ್ಯೆ, ಆಡಳಿತಕ್ಕಾಗಿ ನಮ್ಮದೆಯಾದ ಸಂವಿಧಾನ ರಚಿಸಿಕೊಳ್ಳಬೇಕಾಗಿತ್ತು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಂಸ್ಥಾನಗಳ ವಿಲೀನಿಕರಣ ಸಮಸ್ಯೆಯನ್ನು ಸರ್ದಾರ ವಲ್ಲಭಬಾಯಿ ಪಟೇಲರು ತಮ್ಮ ಚಾಣಾಕ್ಷತನದಿಂದ ಸುಮಾರು 550 ಕ್ಕಿಂತ ಹೆಚ್ಚು ಸಂಸ್ಥಾನಗಳು ಭಾರತದಲ್ಲಿ ವಿಲೀನ ಮಾಡಿದರು. ಆದರೆ ಮೂರು ಸಂಸ್ಥಾನಗಳು ಮಾತ್ರ ಭಾರತದಲ್ಲಿ ಸೇರದೆ ತಟಸ್ಥವಾಗಿ ಉಳಿದವು ಅವುಗಳೆಂದರೆ ಜುನಾಗಡ, ಕಾಶ್ಮೀರ, ಹೈದರಾಬಾದ. ಸರ್ದಾರ ವಲ್ಲಭಬಾಯಿ ಪಟೇಲರು ಜುನಾಗಡವನ್ನು ಜನಮತಗಣನೆ ಮೂಲಕ, ಕಾಶ್ಮೀರ ರಾಜಾಹರಿಸಿಂಗ ಭಾರತಕ್ಕೆ ಸೇರುವದರ ಮೂಲಕ ಕಾಶ್ಮೀರ ಭಾರತದಲ್ಲಿ ಸೇರಿತು. ಹೈದರಾಬಾದ ಸಂಸ್ಥಾನವನ್ನು ಸರದಾರ ಪಟೇಲರು ಪೋಲೀಸ್ ಕಾರ್ಯಾಚರನೆ ಮೂಲಕ ಭಾರತದಲ್ಲಿ ಸೇರಿಸಿದರು ಹೀಗೆ ಅಖಂಡ ಭಾರತ ದೇಶ ನಿರ್ಮಾಣವಾಯಿತು.

      ಇನ್ನೊಂದು ಪ್ರಾಮುಖ್ಯವಾದ ಸವಾಲು ಎಂದರೆ ಸಂವಿಧಾನ ರಚನೆ, ಡಿಸೆಂಬರ್ 09 1946 ರಂದು,ಭಾರತೀಯ ಸಂವಿಧಾನಸಭೆಯು ಉದ್ದೆಶಿತ ಸಂವಿಧಾನದತ್ತ ಕೆಲಸ ಮಾಡಲು ಹಲವಾರು ಸಮಿತಿಗಳನ್ನು ನೇಮಿಸಿತು.ಭಾರತ ಸ್ವಾತಂತ್ರ್ಯಾ ನಂತರ ಅಗಷ್ಟ 29, 1947 ರಂದು ಡಾ// ಬಿ ಆರ್ ಅಂಬೇಡ್ಕರ ಅಧ್ಯಕ್ಷತೆಯಲ್ಲಿ ಕರಡು ಸಮಿತಿ ರಚಿಸಲಾಯಿತು ಅದರಲ್ಲಿ 6 ಜನ ಸದಸ್ಯರಿದ್ದರು ಇನ್ನೂ ಕೆಲವು ಸದಸ್ಯರು ಸೇರ್ಪಡಯಾದರು ಅವರೆಲ್ಲ  ಸೇರಿ ಎರಡು ವರ್ಷ 11 ತಿಂಗಳು 18 ದಿನ ಭಾರತದ ಸಂವಿಧಾನ ರಚಿಸಿದರು 1949 ನವ್ಹಂಬರ 26 ರಂದು ಹಲವಾರು ಪರಿಶೀಲನೆ ತಿದ್ದುಪಡಿಗಳ ನಂತರ ಅಂಗೀಕರಿಸಲ್ಪಟ್ಟಿತು.ಮುಂದೆ 1950 ಜನವರಿ 26 ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.ಅದು 395 ಆರ್ಟಿಕಲ್‍ಗಳನ್ನು, 8 ಪರಿಚ್ಚೇದಗಳನ್ನು, 22 ಪಾರ್ಟಗಳನ್ನು ಹೊಂದಿತ್ತು. 

      ಜನವರಿ 26 ರಂದೆ ಜಾರಿಗೆ ಬರಲು ಕಾರಣವಿದೆ.1927 ರ ಸುಮಾರಗೆ ಭಾರತದ ತುಂಬೆಲ್ಲ ಚಳುವಳಿ ತೀವೃವಾಗಿ ನಡೆಯಲು ಪ್ರಾರಂಭವಾದಾಗ ಅವುಗಳನ್ನು ಹತೋಟಿಗೆ ತರಲು ಬ್ರಿಟಿಷರು ಸಂವಿಧಾನಾತ್ಮಕ ಸುಧಾರಣೆ ತರಲು ಸೈಮನ್ ಆಯೋಗವನ್ನು ಭಾರತಕ್ಕೆ ಕಳುಹಿಸಿದರು. ಭಾರತೀಯರು ಇದನ್ನು ಬಲವಾಗಿ ವಿರೋಧಿಸಿದರು ಕಾರಣವೆಂದರೆ ಅದರಲ್ಲಿ ಭಾರತೀಯ ಸದಸ್ಯರು ಇರಲಿಲ್ಲಿ. ಇದೆ ಅವದಿಯಲ್ಲಿ ಲಾಲಾ ಲಜಪತರಾಯರು ಪ್ರತಿಭಟನೆ ವೇಳೆ ಮರಣ ಹೊಂದಿದರು. ಬ್ರಿಟಿಷರು ಭಾರತೀಯರಿಗೆ ಸರ್ವ ಪಕ್ಷಗಳಿಗೆ ಒಪ್ಪಿಗೆಯಾಗುವಂತೆ ವರದಿ ತಯಾರಿಸಲು ಹೇಳಿದರು. ಅದನ್ನು ಸವಾಲಾಗಿ ಸ್ವೀಕರಿಸಸಿದ ಭಾರತೀಯರು ಮೋತಿಲಾಲ ನೆಹರು ನೇತೃತ್ವದಲ್ಲಿ ಒಂದು ವರದಿಯನ್ನು ತಯಾರಿಸಿದರು ಇದೆ ಇತಿಹಾಸ ಪ್ರಸಿದ್ಧ “ನೆಹರು ವರದಿ” ಆದರೆ ಬ್ರಿಟಷರು ಅದನ್ನು ತಿರಸ್ಕರಿಸಿದರು ಪರಿಣಾಮವಾಗಿ 1929 ರಂದು ಲಾಹೋರಿನಲ್ಲಿ ನಡೆದ ಇಂಡಿಯನ್  ನ್ಯಾಷಿನಲ್ ಕಾಂಗ್ರೆಸ್‍ಅಧಿವೇಶನದಲ್ಲಿ 1930 ಜನವರಿ 26 ನ್ನು “ಪೂರ್ಣ ಸ್ವರಾಜ್ಯ” ಎಂದು ಘೋಷಿಸಿಕೊಂಡಿತು ಅದರ ಸವಿ ನೆನಪಿಗಾಗಿ 1950 ಜನವರಿ 26 ನ್ನು ಸಂವಿಧಾನ ಜಾರಿ ದಿನವನ್ನಾಗಿ ನಿರ್ದರಿಸಲಾಯಿತು.

    ಭಾರತದ ಸಂವಿಧಾನವು ಒಂದು ಶ್ರೇಷ್ಠ ಸಂವಿಧಾನವಾಗಿದೆ ಜಗತ್ತಿನ ಪ್ರಮುಖ ಸಂವಿಧಾನಗಳ ಮುಖ್ಯ ಅಂಶಗಳನ್ನು ಅದರಲ್ಲಿ ಸೇರಿಲಾಗಿದೆ ಯುನೈಟೆಡ್ ಕಿಂಗಡಮ್ ನಿಂದ ಸಂಸದಿಯ ಮಾದರಿಯ ಸರಕಾರವನ್ನು ತೆಗೆದುಕೊಳ್ಳಲಾಗಿದೆ ಅಮೇರಿಕಾ ದೇಶದಿಂದ ಒಕ್ಕೂಟ ಮಾದರಿಯ ಸರಕಾರ ಮತ್ತು ಬಿಲ್ ಆಪ್ ರೈಟ್ಸ ತೆಗೆದು ಕೊಳ್ಳಲಾಗಿದೆ .ಐರಲ್ಯಾಂಡ ದೇಶದಿಂದ ನಿರ್ದೇಶಾತ್ಮಕ ತತ್ವಗಳನ್ನು ತೆಗೆದುಕೊಳ್ಳಲಾಗಿದೆ, ಆಸ್ಟೇಲಿಯಾ ದೇಶದಿಂದ ರಾಜ್ಯ ಹಾಗೂ ಕೇಂದ್ರ ನಡುವೆ ಮುಕ್ತ ವ್ಯಾಪಾರದ ಕಾನೂನುಗಳನ್ನು ಅಳವಡಿಸಿಕೊಂಡಿದೆ ರಷ್ಯ ದೇಶದಿಂದ ಮೂಲಭೂತ ಕರ್ತವ್ಯಗಳನ್ನು ಮತ್ತು ಪಂಚವಾರ್ಷಿಕ ಯೋಜನೆ ಅಳವಡಿಸಿಕೊಂಡಿದೆ.ಪ್ರಾನ್ಸ ದೇಶದಿಂದ ಸ್ವಾತಂತ್ರ್ಯ ,ಸಮಾನತೆ ,ಬಂಧುತ್ವ ತತ್ವಗಳನ್ನು ಅಳವಡಿಸಿಕೊಂಡಿದೆ. ಡಾ/ ಬಿ ಆರ್ ಅಂಬೇಡ್ಕರರು 60 ದೇಶಗಳ ಸಂವಿಧಾನಗಳನ್ನು ಓದಿಕೊಂಡಿದ್ದರು ಹಾಗಾಗಿ ಶ್ರೇಷ್ಟ ಸಂವಿಧಾನ ರಚನೆ ಮಾಡಲು ಸಾಧ್ಯವಾಗಿದೆ. 

         ಭಾರತ ಸಂವಿಧಾನ ಒಂದು ಶಕ್ತಿ ಶಾಲಿಯಾದ ಮತ್ತು ಸುಂದರವಾದ ಸಂವಿಧಾನ ಒಬ್ಬ ಪೇಪರ ಮಾರುವ ಹುಡುಗ ಈದೇಶದ ರಾಷ್ಟ್ರಪತಿಯಾಗಬಹುದು ಚಹಾಮಾರುವ ಹುಡುಗ ಈ ದೇಶದ ಪ್ರಧಾನ ಮಂತ್ರಿಯಾಗಬಹುದು ಕುರಿಕಾಯುವವನ ಮಗ ಈ ರಾಜ್ಯದ ಮುಖ್ಯ ಮಂತ್ರಿಯಾಗಬಹುದು.

ಭಾರತ ದೇಶ ಗಣರಾಜ್ಯವಾದ ಮೇಲೆ ಬ್ರಿಟಿಷರ ಮಾತನ್ನು ಸುಳ್ಳು ಮಾಡಿದ್ದೆವೆ ಹೇಗೆಂದರೆ 1947 ಆಗಷ್ಟ 14 ರ ಮಧ್ಯರಾತ್ರಿ  ಬ್ರಿಟನ್ ದೆಶದ ಆಗಿನ ಪ್ರಧಾನಿ  ಮಂತ್ರಿ ಚರ್ಚಿಲ್ ಹೇಳುತ್ತಾನೆ ಭಾರತೀಯರು ಕೇವಲ ಆಳಿಸಿಕೊಳ್ಳಲು ಮಾತ್ರ ಅರ್ಹರು ಆಳಲು ಅಲ್ಲ ಎಂದಿದ್ದರು ಅದನ್ನು ಇವತ್ತು ಸುಳ್ಳು ಮಾಡಿದ್ದೇವೆ. ಇವತ್ತು ಜಗತ್ತಿನಲ್ಲಿ ಕೆಲವೆ ರಾಷ್ಟ್ರಗಳು ಕ್ರಯೋಜನಿಕ ತಂತ್ರಜ್ಞಾನ ತಿಳಿದಿರುವ ರಾಷ್ಟ್ರಗಳಿವೆ ಅದರಲ್ಲಿ ಭಾರತವೂ ಒಂದು ಅದರ ಮೂಲಕ ಎರಡು ಬಾರಿ ಅಣು ಪರೀಕ್ಷೆ ಮಾಡಿದ್ದೇವೆ. ಕೆಲವೆ ರಾಷ್ಟ್ರಗಳಲ್ಲಿ ಸೂಪರ್ ಕಂಪ್ಯೂಟರ ತಯಾರಿಸುವ ತಂತ್ರಜ್ಞಾನವಿದೆ ಅದರಲ್ಲಿ ಭಾರತವಿದೆ. ಕೆಲವೆ ರಾಷ್ಟ್ರಗಳಲ್ಲಿ ಚಂದ್ರನ ಮೇಲೆ ಹೋಗುವ ಶಕ್ತಿ ಇದೆ ಅದರಲ್ಲಿ ಭಾರತವಿದೆ.ಅತಿ ಹೆಚ್ಚು ವೈದ್ಯರನ್ನು ಮತ್ತು ತಂತ್ರಜ್ಞರನ್ನು ತಯಾರಿಸುವ ದೇಶ ಭಾರತ. 

       ಇವತ್ತು ನಮ್ಮ ವಿಜ್ಞಾನಿಗಳು ಕೋವಿಡ್ 19 ವೈರಸ್ಸಿಗೆ ಸ್ವದೇಶಿ ಔಷದ ಕಂಡು ಹಿಡಿದಿದ್ದಾರೆ. ಬೇರೆ ರಾಷ್ಟ್ರಗಳಿಗೆ ಉಚಿತವಾಗಿ 07 ದೇಶಕ್ಕೆ ಸೇರಿ 11 ದೇಶಕ್ಕೆ ಲಸಿಕೆ ನೀಡಿದ್ದಕ್ಕೆ ಡಬ್ಲು ಎಚ್ ಓ ಶ್ಲಾಘಿಸಿದೆ. 20 ಲಕ್ಷ ಡೋಸ್ ಕೋವಿಶೀಲ್ಡ ಲಸಿಕೆ ಬ್ರಜಿಲ್ ದೇಶಕ್ಕೆ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದನ್ನು ನಾನು ಪೇಪರಿನಲ್ಲಿ ಓದಿದ್ದೆನೆ. ಇವು ಸಾಧನೆಯ ಒಂದೆರಡು ಜಲಕಗಳು ಮಾತ್ರ ಹೇಳಿದ್ದೇನೆ ಸಾಕಷ್ಟಿವೆ.ಇವತ್ತು ಇಡಿ ಜಗತ್ತೆ ಭಾರತದ ಕಡೆಗೆ ಬೆರಗುಗಣ್ಣಿನಿಂದ ನೋಡುವ ಸನ್ನಿವೇಶ ನಿರ್ಮಾಣವಾಗಿದೆ ಅದು ಈ ಭಾರತ ದೇಶದ ಪ್ರಜಾಪ್ರಭತ್ವದ ಗಟ್ಟಿತನದ ಸಂಕೇತ.ಆದಾಗ್ಯೂ ನಮ್ಮ ದೇಶ ಕೆಲವು ಸಣ್ಣಪುಟ್ಟ ಸಮಸ್ಯಗಳನ್ನು ಎದುರಿಸುತ್ತಿದೆ ಅದು ಕೋಮುವಾದ ವಿರಬಹುದು ಪ್ರಾದೇಶಿಕತೆ ಇರಬಹುದು ಅದನ್ನೆಲ್ಲಾ ಮೆಟ್ಟಿ ನಿಲ್ಲಬೇಕಾಗಿದೆ ಯಾಕೆಂದರೆ ನಮ್ಮ ನೆರೆಯ ರಾಷ್ಟ್ರಗಳಿಂದ ನಮಗೆ ಆಗಾಗ ಕೆಲವು ಕಿರಿಕಿರಿಗಳು ಉಂಟಾಗುತ್ತಿವೆ ಪಾಕಿಸ್ತಾನದ ಭಯೋತ್ಪಾದಕರು  ನಮ್ಮ ಗಡಿಯಲ್ಲಿ ಸುರಂಗವನ್ನು ತೆಗೆದದ್ದನ್ನು ಪತ್ರಿಕೆಗಳಲ್ಲಿ ಓದಿದ್ದೆವೆ.ಚೀನಾ ದೇಶವು ಅರುಣಾಚಲ ಗಡಿಯಲ್ಲಿ ನೂರು ಮನೆಗಳಿರುವ ಹಳ್ಳಿಯುನ್ನು ನಿರ್ಮಾಣ ಮಾಡಿದ್ದನ್ನು ಪತ್ರಿಕೆಯಲ್ಲಿ ಓದಿದ್ದೇವೆ ಇಂತವುಗಳನ್ನು ಮೀರಿ ನಾವು ಹೋಗಬೇಕಾದರೆ ದೇಶ ನನಗೇನು ಕೊಟ್ಟಿದೆ ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳದೆ ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ.ಅಂದರೆ ನಾವು ದೇಶಕ್ಕಾಗಿ ಬಂದೂಕು ಹಿಡಿದು ಗಡಿಗೆ ಹೋಗಬೇಕಿಲ್ಲ ನಮ್ಮ ನಮ್ಮ ಕರ್ತವ್ಯವನ್ನು ನಾವು ಬದ್ದತೆ ಮತ್ತು ನಿಷ್ಟೆಯಿಂದ ಮಾಡಿದರೆ ಅದೆ ದೆಶಕ್ಕೆ ನಿಜವಾದ ಕೊಡುಗೆ .

             

                           ಜೈ ಹಿಂದ್ ಜೈ ಕರ್ನಾಟಕ


Wednesday, January 13, 2021

* ಬದುಕು ಬದಲಾವಣೆ *

ಸಗ್ಗದ ಸಿರಿಯ ಹಿಗ್ಗುತ ಸವಿದು
ಸುಗ್ಗಿಯ ಕಾಲದ ಸಂಕ್ರಾಂತಿ ಜೇನು. 
ಜೋಳದ ಹೊಲದಲಿ ಸೀತನಿ ತಿಂದು 
ಭತ್ತವ ತರಿದು ಗತ್ತಿನಲಿ ನಡಿಯೋಣ//

ಹಸುವಿನ ಸಂತತಿ ಕಸುವಿನ ಮೂಲ
ಬೆಸೆಯದ ಬೇಸಾಯ ಯಂತ್ರ ಜಾಲ
ರಾಸುಗಳಿಲ್ಲದ ಕೃಷಿಯನು ತೊರೆದು
ದಾಸರಾಗದೆ ಯಂತ್ರ ಬಳಸೋಣ //

ಮಾಗಿಯ ಚಳಿ ಸಾಗಿತು ನೋಡು
ಮೇಲೆ ಬರುತಿಹ ದಿನಕರನ ದೌಡು
ಮರೆಯದೆ ಎಳ್ಳು ಬೆಲ್ಲವ ಸವಿದು
ಮನದ ಮಲಿನತೆ ತೊಲಗಿಸೋಣ//
 
ಉತ್ತರಕೇರುವ ನೇಸರನ ಕಾಂತಿ
ಇಳಿದವ ಏರಬೇಕು ಬಿಡು ಭ್ರಾಂತಿ
ಹೇಮಂತ ಋತು ಸಂಭ್ರಮವಿದು
ತಮದ ಶಕ್ತಿಯ ತುಳಿಯೋಣ // 

           🖋️ಬಸನಗೌಡ ಗೌಡರ 

Monday, January 11, 2021

* ವಿವೇಕ ಗುರುವಿಗೆ ನಮನ *

ಬೂದಿ ಬಡಕರ ದೇಶವೆಂದವರ 
ಪೂರ್ವಾಗ್ರಹ ಬುಡಮೇಲು ಮಾಡಿದ 
ಗಂಡೆದೆಯ ದೀರ ಸನ್ಯಾಸಿ ನಿನ್ನ 
ಧೈರ್ಯಕೆ ನನ್ನ ನಮನ ಗುರುವೆ //

ಶಿಕ್ಷಣವೆಂದರೆ ಅಕ್ಷರ ಜ್ಞಾನವೆಂದವರ
ಲಕ್ಷಣಗಳ ಬಯಲು ಮಾಡಿದ 
ಶೀಲವೆ ಶಿಕ್ಷಣವೆಂದ ಸನ್ಯಾಸಿ ನಿನ್ನ 
ಏಕಾಗ್ರತೆಗೆ ನನ್ನ ನಮನ ಗುರವೆ //

ನಾಗರಿಕತೆ ಬಟ್ಟೆಯಲ್ಲಳಿದವರ
ಹುಟ್ಟನೆ ಹಿಡಿದು ಜಾಲಾಡಿದ
ಗಟ್ಟಿ ಮಾತಿನ ದಿಟ್ಟ ಸನ್ಯಾಸಿ ನಿನ್ನ
ಪಟ್ಟುಗಳಿಗೆ ನನ್ನ ನಮನ ಗುರುವೆ // 

ಪಶ್ಚಿಮದ ಜ್ಞಾನ ಶ್ರೇಷ್ಠವೆಂದವರ
ಭೌತಿಕ ಜ್ಞಾನದ ಮೂಲ ಅರುಹಿದ
ಋಷಿ ಮುನಿ ಜ್ಞಾನಿಯೆ ನಿನ್ನ 
ಭಾರತೀಯತೆಗೆ ನಮನ ಗುರುವೆ //

ಸ್ವಾಮಿಗಳೆಂದು ಸೇವೆ ಬಯಸಿದವರ
ಸೇವೆಯ ಹೆಸರಿನ ಸ್ವಾಹ ತಿಳಿಸಿದ
ಶ್ರೀ ರಾಮಕೃಷ್ಣಾಶ್ರಮದ ನಿನ್ನ  
ನಿಜ ಸೇವಗೆ ನನ್ನ ನಮನ ಗುರವೆ //
 

             🖋️ಬಸನಗೌಡ ಗೌಡರ

Saturday, January 9, 2021

* ಮಾಯಾಂಗನೆ *

ನಿನ್ನ ತುಟಿಯಂಚಿನ ಮಿಂಚು 
ಹೊಂಚು ಹಾಕಿ ಸಂಚು ಮಾಡಿತು 
ಎನ್ನ ಮನದ ಮೂಲೆಯಲ್ಲಿ //

ಹುಚ್ಚೆದ್ದು ಕಾಡುವ ಭಾವಗಳ 
ಬಲೆಯಲ್ಲಿಮಿಂದೆದ್ದು ವಿಲವಿಲನೆ 
ತಿರುಗಿದೆ ಬಿರುಗಾಳಿ ಸುಳಿಯಲ್ಲಿ //

ಬಂದು ಬಾಂಧವರನ್ನೆ ಬದಿಗಿರಿಸಿ
ಒಂದುಗೂಡಲು ಹಪಹಪಿಸಿ
ಕೊಂದು ಅರಳಿ ಸೆಳೆದ ಚೌಕಾಸಿ//

ಸಾವಿರ ಅಲೆ ಅಬ್ಬರಿಸಿ ಬೊಬ್ಬಿರಿದು
ಬೋರ್ಗರೆದ ಬೊಂಬೆಗಳೆ ಸೋತು 
ಶಾಂತಿಯ ಪಠಿಸಿ ಹಾರೈಸಿತು ಮಾಸಿ//

ಹಗಲು ರಾತ್ರಿ ಹೆಗಲಲ್ಲಿ ಮಲಗಿ
ಹಲಗಿಯ ಹೊಡೆದು ಸಲುಗೆ ಮೆರೆದು
ತೊಲಗದ ಹಸಿ ಹಸಿ ಆಸೆಗಳು ಬಿಸಿ//

ಬದುಕು ಬವಣೆ ಬಯಲು ಕಾತರ 
ಕವಲುಗಳರಿಯದೆ ತೆವಳುತ್ತಿವೆ ಮನ
ಕಂದಕ ಕಮರಿಗಿಳಿದಾಗ ರೋಧನ //

                  ಬಸನಗೌಡ ಗೌಡರ 

Friday, January 8, 2021

ಹಂಗ್ಯಾಕೋ ಕಾಲದ !

ಕೆಲವರು ಮುಂದೆ ಹೋಗಲು 
ತಯಾರಿಲ್ಲ.
ಹಲವರು ಹಿಂದೆ ಹೋಗಲು
ತಯಾರಿಲ್ಲ.
ಬಹುಜನರಿಗೆ ಎಲ್ಲಿ ಹೋಗಬೇಕೆಂದು 
ತಿಳಿದಿಲ್ಲ  !
ತಿರುಗುತ್ತಿದೆ  ಕಾಲ ಚಕ್ರ 
ಇವರ ಹಂಗಿಲ್ಲ.
ಮೇಲಿನವನು ಕೆಳಗೆ 
ಕೆಳಗಿನವನು ಮೇಲೆ 
ನಡೆದಿದೆಯಲ್ಲ.
ಹೊಟ್ಟೆ ಪಾಡಿಗೆ ದುಡಿದವನು
ಹೊಟ್ಟೆ ಕರಗಿಸಬೇಕಿಲ್ಲ  
ಹೊಟ್ಟೆ ಬಿರಿಯುವಂತೆ 
ತಿಂದವನಿಗೆ ಇದೆಲ್ಲ ...
ಕಟ್ಟೆಯ ಪುರಾಣಕೆ 
ನಿಷ್ಠೆಯಿಂದ ನಡೆಯಬೇಕಿಲ್ಲ.
ದುಷ್ಟರ ಜೀವನ ಎಷ್ಟೆ ಎತ್ತರವಿರಲಿ
ಕಷ್ಟ ತಪ್ಪಿ ದ್ದಲ್ಲ.
ನಿನಗಿಷ್ಟವಾದದ್ದು ಮಾಡಿದರೆ 
ಕನಿಷ್ಟವೆಂದೂ ಆಗಲ್ಲ
ಆದರೆ ದಾರಿಯಲ್ಲಿ
ಇರಬೇಕಲ್ಲ ..?
ಇದ್ದರೆ ಹೆದರಬೇಕಾದವನು 
ನೀನಲ್ಲ.
ಜಗತ್ತೆ ನಿನ್ನ ಕಾಲಕೆಳಗೆ 
ಇರುತ್ತಲ್ಲ..

         ಬಸನಗೌಡ ಗೌಡರ 

Monday, January 4, 2021

* ಆರಕ್ಷಕರು *

ಪೌರರ ರಕ್ಷಣೆಗೆ ಬಂತು ಪ್ರಭುತ್ವ
ಅದರಲ್ಲಿ ಆರಕ್ಷಕರಿಗಿದೆ ಮಹತ್ವ 
ಕೊಲ್ಲುವವರು ನೂರಿರಲು ಕಾಯುವ 
ಕಾಯಕವೆ ಇಂದಿನ ಮಹತ್ವ  //
 
ಹಾಕಿದ್ದು ಖಾಕಿ ಹಾರೈಕೆಯೊಂದೆ ಬಾಕಿ 
ಕಟುವಾದ ಮಾತು ಒರಟು ಸ್ವಭಾವ 
ಕೆಟ್ಟವರೆಂದವರೇನು ಕಡಿಮೆ ?
ಅವರು ಬದುಕಲೂ ಇವರೆ ಬೇಕು !//

ಬಿಗಿ ನಿಯಮದ ಬಹದ್ದೂರರು
ಬಾಗಿ ನಡೆದಾಡುವರೇನು ?
ಹೆಡೆ ಎತ್ತಿ ತಿರುಗಿದರೆ ಕಡುಕಷ್ಟ
ಪುಡಿ ಜನರು ದಾರಿಸಾಗದೆ 
ಆಡಿಕೊಳ್ಳುವರು ಕಡು ಬ್ರಷ್ಟ//

ಬಿಸಿಲು ಮಳೆ ಗಾಳಿಗಿ ಬತ್ತದ
ಉತ್ಸಾಹ , ಸತ್ಯವರಿತವರೆಷ್ಟು ?
ಬೆತ್ತದಿಂದ ಬಾರಿಸುವದೊಂದೆ 
ಇವರಿಗೆ ಕಾಣುವ ಸತ್ಯ ! //

ಬಾರಿಸುವ ಮುನ್ನ ಮನಸ್ಸಿನ 
ತುಮಲ ತಿಳಿದವರೆಷ್ಟು ನಿತ್ಯ.
ಉತ್ಸಾಹದ ಚಿಲುಮೆ ನಮ್ಮೊಲುಮೆ 
ಸಿಕ್ಕರೆ ಬಾಳೆಲ್ಲ ಆಗುವುದು ಸಕ್ಕರೆ //

ಬರಿ ನಿಂದನೆ ಸಾಲದು ಬೇಕು ವಂದನೆ
ಹಿಡಿದು ಪಡೆದವರೇನು ಕಡಿಮೆ 
ನಮ್ಮವರ ಮಕ್ಕಳು ನಮಗೆ ಇಕ್ಕಳವೆ ? 
ಪಡೆ ಪುಷ್ಕಳ ಶಾಂತಿಯ ಮಲ್ಲಿಗೆ .//

     ಬಸನಗೌಡ ಗೌಡರ 

Friday, January 1, 2021

* ನೆನಪು *

ಮರೆತೆನೆಂದರ ಮರೆಯಲಿ ಹ್ಯಾಂಗ 
ಮರೆಯದೆ ಕಾಡತಾವ, ನೆನಪು 
ಮತ್ತೆ ಮತ್ತೆ ಇಂದು  //ಪ//

ಮೀನು ಹಿಡಿಯಲು ಗಾಳ ಕೊಂಡೆವು
ಹೊಟ್ಟೆ ತುಂಬಲೆಂದು, ಬಿರುಗಾಳಿಗೆ
ಉರಳಿದಾಗ ನಾವು  ದಡ ಕಾಣದೆ
ಮುಳಿಗಿದೆವಿಂದು //
 
ಮಂಗಳನಂಗಳದ ಕನಸು ಕಂಡೆವು 
ಮನದಾಗೊಂದು, ಕೊರೋನಾ 
ವಕ್ಕರಿಸಿ ಅಂಗಳದಾಗ ಬರಾಕ 
ಹೆದರತೀವಿಂದು // 

ಸೂರ್ಯನ ಸೃಷ್ಟಿಯ ಮಾಡುವೆವು
ಅಲ್ಲೊಂದು, ಸಿಟ್ಟಾದ ಸಾಗರ
ಉಕ್ಕಿಹರಿದಾಗ ತೀರ ಹರಕು
ಮುರುಕು ಇಂದು //

ಹೈಟೆಕ್ ಕಾರು ಖರೀದಿಸಿದೆವು 
ಹಾಯಾಗಿ ಬದುಕಲೆಂದು, ಕಾಲ
ಮಿಕ್ಕಿ ಕಾಲು ಹಿಡಿದಾಗ ಸಾಲು  
ಜೊಲಿ ಹೊಡಿಯಿತಿಂದು//

ಹೊಸ ವರ್ಷ ಹರುಷ ಕಂಡೆವು
ಈರ್ಷೆ ಬೇಡವೆಂದು, ಮತ್ತಿನ 
ಘರ್ಷನೆ ಬೆಳೆದಾಗ ವರ್ಷದ
ನೀತಿ ಅಳಿಯಿತಿಂದು //


"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...