Wednesday, March 24, 2021

* ಮೌನದರಮನೆ *

ಉಂಡದ್ದು ಅರಗಿಸಿ ಬೊಜ್ಜು ಕರಗಿಸಿ 
ಬೊಂಬೆಯಂತಾಗಲು ಬಯಸಿ 
ನಡೆದೆ ನಡೆದೆ ಕೈಬೀಸಿ, ಕಾಲು ಕಂಬ 
ಹೊಟ್ಟೆ ತಲೆದಿಂಬು.ಸುಸ್ತಾದ ಎನ್ನ 
ನೋಡಿ ಮುಸಿ ಮುಸಿ ನಕ್ಕಿತು 
ನೆಟ್ಟ ನಗರಸಭೆ ದೀಪದ ಕಂಭ ..!  
ಯಾಕೆಂದರೆ ನಾ ತಿರುಗುತ್ತಿದ್ದೆ 
ಹೊಸ ಲೆಔಟ ತುಂಬಾ
ನನಗಿಲ್ಲದ ಸುಸ್ತು ನಿನಗೆ 
ಯಾಕೊ ಹುಂಭ...? ಹೇಳಿತಾ ಕಂಬ..
ನೆತ್ತಿಯಲ್ಲಿ ಬಿತ್ತುವೆ ಬೆಳಕು 
ಜಗದ ತುಂಬಾ .....
ಆದರೂ ನನಗಿಲ್ಲ ಜಂಭ 
ಬಳಕುವ ಮೈಯಲ್ಲಿ ಥಳಕಿಲ್ಲ 
ಬಳುಕಿಲ್ಲ ದಾರಿ ತೋರಿದೆನೆಂಬ 
ದರಿದ್ರ ಹಮ್ಮು ಬಿಮ್ಮಿಲ್ಲ .
ನಿನಗ್ಯಾಕೆ ನೆತ್ತಿಗೇರಿದೆ ಪಿತ್ತ ಗೊತ್ತಾ ? 
ಇದರಲ್ಲಿರುವ ಮೂರು ಪ್ಲಾಟು
ನಾನೆ ಗಳಿಸಿದೆನೆನ್ನುವ ಘಾಟು ..! 
ಯಾರೊ ಮನೆ ಕಟ್ಟಲು ಮಾಡಿದರು 
ಈ ಭೂಮಿಯ ಸಮತಟ್ಟು ,.. 
ಇನ್ನಾರೋ ಮಾಡಿದ ರಸ್ತೆ 
ಇನ್ನಾರೋ ನೆಟ್ಟ ಗಿಡ ಮರ 
ನಳಿ ನಳಿಸುವ ಬೃಂದಾವನ .....
ನನ್ನದೆನ್ನುವದು ಇಲ್ಲಿ ಏನಿಲ್ಲ 
ಅದರ ಗೊಡವೆಯೊ ನನಗಿಲ್ಲ ...
ನನಗಿಲ್ಲದ ಸುಸ್ತು ನಿನಗ್ಯಾಕೆ ಗೊತ್ತಾ ?
ನೀನೇ ಗಳಿಸಿದ ಮೂರು ಅದರ ಮುಂದೆ 
ಆರು ಸೊನ್ನೆಯಿಂದ ಗಳಿಸಿದ ಅರವತ್ತು 
ನಲವತ್ತರ ಮಣ್ಣಿನ ಒಡೆತನದ ಹಮ್ಮು .
ನೀನೆ ಬಿತ್ತಿದ ಬೀಜಗಳು ಹೆಮ್ಮರವಾಗಿ 
ಬೇರು ಬಿಡಲು ಕಿತ್ತಾಡಿ 
ಎರಚಾಡುವವು ರಾಡಿ. 
ಮೆತ್ತಿದ ರಭಸಕ್ಕೆ ಸುತ್ತ ತಿರುಗುವೆ 
ಸುಸ್ತಾಗಿ...ಮುಚ್ಚಿಟ್ಟ ಸತ್ಯದ 
ಹುಚ್ಚು ಭೂತದ ಘಾತ .
ನಿತ್ಯ ಚುಚ್ಚಿದ ಮುಚ್ಚಿದ ಕತ್ತಿ 
ಯಾರಿಗೂ ಕಾಣದೆ ಸಾರಿ ಹೇಳುವ 
ಸವತಿಯರ ಬಿರುಗಾಳಿಗೆ ಅಲುಗಾಡಿ 
ಛಲ ಬಿಡದೆ ತಿನುಕಾಡಿ 
ಕಾಣುತಿರುವೆ ಮೈಮನದ ಸುಸ್ತು 
ನೀ ಮರೆತಂತಿದೆ ಮೂರು 
ಆರಡಿಯ ಮೌನದರಮನೆ. 

      ಬಸನಗೌಡ ಗೌಡರ 





No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...