ತುಂಬಿದ ಕೊಡ ತುಳುಕುವದಿಲ್ಲ ಅಂತಾರಲ್ಲ, ಅಂತಹ ವ್ಯಕ್ತಿಗಳ ಬಗ್ಗೆ ನಾನು ಹೇಳಬೇಕು ಅಂತಾ ವಿಚಾರ ಮಾಡಿದಾಗ ತಲೆಯಲ್ಲಿ ಅನೇಕ ಇತಿಹಾಸದ ಪುರುಷರು ನನ್ನ ಕಣ್ಣುಗಳು ಮುಂದೆ ಸುಳಿದಾಡುತ್ತಾರೆ. ಏಕೆ ಹೇಳಿ ? ಮೊದಲೆ ನಾನು ಇತಿಹಾಸ ಉಪನ್ಯಾಸಕ ...ಥಾಮಸ್ ಕಾರ್ಲೈಲ ಎನ್ನುವ ಇತಿಹಾಸಕಾರ ಹೀಗೆ ಹೇಳುತ್ತಾನೆ ಮಹಾಪುರುಷರು ಇಂದಿಲ್ಲ,ಆದರೆ ಪ್ರಪಂಚದ ಇತಿಹಾಸ ಮತ್ತು ಮಹಾನ್ ಪುರುಷರ ಆತ್ಮ ಚರಿತ್ರೆಗಳು ಮಾತ್ರ ಇನ್ನೂ ಉಳಿದಿವೆ " ಎಂದು. ಆದರೆ ನಾನು ಈಗ ಹೇಳಲು ಹೊರಟಿರುವುದು ಐತಿಹಾಸಿಕ ವ್ಯಕ್ತಿ ಗಳದಲ್ಲ ಬದಲಾಗಿ ನನ್ನ ಸ್ನೇಹಿತರ ವಿಚಾರ, ಯಾಕೆಂದರೆ ಪ್ರತಿ ನಿತ್ಯ ವಿದ್ಯಾರ್ಥಿಗಳ ಮುಂದೆ ನಾನು ಮಾತನಾಡುವ ವಿಷಯದ ಬದಲಾಗಿ ವಿಭನ್ನವಾಗಿ ಏನಾದರು ಹಂಚಿಕೊಳ್ಳುವ ಮನಸ್ಸಾಯಿತು ಅದಕ್ಕಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಪ್ರಯತ್ನವೆ ಈ ನನ್ನ ಲೇಖನದ ಉದ್ದೇಶ.ಇದು ತನ್ನ ಗೆಳೆಯರನ್ನು ಮೆಚ್ಚಿಸುವ ಇಲ್ಲವೆ ಮುಖ ಸ್ತುತಿಸುವ ವಿಚಾರದಂತೆ ಕೆಲವರಿಗೆ ಕಂಡರೆ ಅಚ್ಚರಿ ಇಲ್ಲ ! ಆದರೆ ಒಂದಂತೂ ಸತ್ಯ ಎಂತಹ ಗೆಳೆಯರು ನಮಗೆ ಇದ್ದರೆ ಚನ್ನಾಗಿರುತ್ತದೆ ಎನ್ನುವುದನ್ನು ನಾವು ಅರಿತುಕೊಂಡರೆ ನಮಗೆಷ್ಟು ಲಾಭ ಎನ್ನುವುದು ಈ ಲೇಖನದ ಉದ್ದೇಶ. ಇಲ್ಲಿಯವರೆಗೆ ನಾನು ಈ ಪೀಠಿಕೆ ಯಾಕೆ ಹಾಕಿದೆ ಎಂದರೆ ನನ್ನ ಬದುಕಿನ ಪಯಣದಲ್ಲಿ ಅನೇಕ ಸ್ನೇಹಿತರು ಬಂದು ಹೋಗಿದ್ದಾರೆ ಅವರು ನನ್ನಿಂದ ಏನು ಕಲಿತರೊ ಬಿಟ್ಟರೊ ನನಗೆ ಗೊತ್ತಿಲ್ಲ, ಆದರೆ ಪ್ರತಿ ಹಂತದಲ್ಲಿಯೂ ನಾನು ಅವರಿಂದ ಬಹಳ ಕಲಿತಿದ್ದೇನೆ.ನನಗೆ ಇಬ್ಬರು ಸ್ನೇಹಿತರು ಇದ್ದಾರೆ ಅವರೆ ಚಂದ್ರಶೇಖರ ಹೇಗಡೆ ಮತ್ತು ಡಾ/ರಾಜಶೇಖರ್ ಬಸುಪಟ್ಟದ ಅಂತ, ಪ್ರೊ ಸಿ ಬಿ ಹೆಗಡೆ ಈಗ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು. ಇವರು ಮೊದಲು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆವಾಗ ಅವರ ಮತ್ತು ನನ್ನ ಸ್ನೇಹಿತನಕ್ಕೆ ಕೊಂಡಿಯಾದವರೆ ಡಾ / ರಾಜಶೇಖರ್ ಬಸುಪಟ್ಟದ ಇವರು ವೀರ ಪುಲಿಕೇಶಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು.ಇವರು ನನಗಿಂತ ವಯಸ್ಸಿನಲ್ಲಿ, ವಿದ್ಯೆಯಲ್ಲಿ ಅನುಭವದಲ್ಲಿ ತುಂಬಾ ಹಿರಿಯರು ಆದಾಗ್ಯೂ ಅವರ ನಮ್ಮ ಗೆಳೆತನ ನುಗ್ಗಿ ಗಿಡಕ್ಕೆ ಎಲೆ ಬಳ್ಳಿ ಏರಿದ ಹಾಗೆ ಬೆಸೆಯಿತು.ಒಂದು ಮಾತಿದೆ ಆದೇನಂದರೆ ಗೆಳೆತನ ಬೆಸೆಯಲು ವಯಸ್ಸಿನಲ್ಲಿ ಸಮ ಇರಬೇಕು ಇಲ್ಲವೆ ಬುದ್ಧಿ,ಜ್ಞಾನದಲ್ಲಿ ಯಾದರೂ ಸಮ ಇರಬೇಕು ಇಲ್ಲವೆ ಕೊನೆಯ ಪಕ್ಷ ಹವ್ಯಾಸಗಳಲ್ಲಿಯಾದರು ಸಮ ಇರಬೇಕು ಅಂದರೆ ಗೆಳೆತನ ಗಟ್ಟಿಯಾಗುತ್ತದೆ ಅಂತ. ನಾನು ಮೊದಲನೆಯ ಎರಡರಲ್ಲಿ ಸಮನಾಗಲು ಹೇಗೆ ಸಾಧ್ಯ ಹೇಳಿ ? ಸಾಧ್ಯವಾಗದ ಮಾತು, ಮೂರನೆಯದರಲ್ಲಿ ಸಮಾನತೆಯಾಗಿರಬಹುದು ! ಅದು ಹೇಗೆಂದರೆ ದಿನಾಲೂ ವಾಕಿಂಗ್ ಹೋಗುವ ಹವ್ಯಾಸದಿಂದ ಇದು ನಮ್ಮಿಬ್ಬರನ್ನು ಹತ್ತಿರಕ್ಕೆ ತಂದಿತು.ಇದಕ್ಕೆ ಇನ್ನೊಬ್ಬರು ಬಂದು ಸೇರಿಕೊಂಡರು, ಅವರೆ ಈ ಚಂದ್ರಶೇಖರ ಹೇಗಡೆ ,ಇವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ವೈಚಾರಿಕ ಚಿಂತನೆಗಳಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಇದ್ದರು ಎನ್ನಿ, ಅವರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಆ ಸಂದರ್ಭದಲ್ಲಿ ನಾನು ಕೂಡಾ ಭೂಗೋಳ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ಮಾಡಿದ್ದೆ ಅದು ಕೂಡಾ ನಾವು ಹತ್ತಿರಕ್ಕೆ ಬರಲು ಸಹಾಯಕವಾಗಿರಬಹುದೇನೋ , ಆಶ್ಚರ್ಯ ವಾಗಿರಹುದು ....! ನಾನು ಇತಿಹಾಸ ಉಪನ್ಯಾಸಕ ಭೂಗೋಳ ವಿಷಯದ ಸಂಪನ್ಮೂಲ ವ್ಯಕ್ತಿ ? ಕಾರಣ ಇಷ್ಟೆ ಪದವಿ ಯಲ್ಲಿ ಕಲಿತದ್ದು ಇತಿಹಾಸ, ಭೂಗೋಳ. ಕರ್ತವ್ಯ ಪ್ರಾರಂಭವಾದದ್ದು ಇಂಗ್ಲಿಷ್ ಭಾಷೆಯ ಬೋಧನೆ, ನಂತರ ಸಮಾಜ ವಿಜ್ಞಾನ ಹೀಗಾಗಿ ವಿಭಿನ್ನ ನೆಲೆಯಲ್ಲಿ ಗಟ್ಟಿ ಭೋಧನೆಯ ಫಲ ಸಂಪನ್ಮೂಲ ಘಟ್ಟಕ್ಕೆ ತೆಗೆದು ಕೊಂಡು ಹೋದದ್ದು ನನ್ನ ಅದೃಷ್ಟವೇ ಸರಿ ,ಇರಲಿ ಸ್ನೇಹಿತರು ಎಂದೇ ಅಲ್ಲವೆ ? ಈಗ ಹೇಳಿದೆನಲ್ಲವಾ ಡಾ/ ರಾಜಶೇಖರ್ ಬಸುಪಟ್ಟದ ಹಾಗೂ ಪ್ರೊ ಚಂದ್ರಶೇಖರ್ ಹೆಗಡೆ ಸಾಹಿತ್ಯದ ದೋಣಿಯಲ್ಲಿ ಪಯಣಿಸಲು ಆಗ ಹೊರಟಿದ್ದರು, ಈ ಜೋಡಿ ಶೇಖರ್ ಬೆಳಕಿನಲ್ಲಿ ಕಣ್ಣು ಪಿಳಿಕಸಿ ಮುನ್ನಡೆದಾಗ ಏನೋ ಒಂದು ತರ ಪುಳಕ ಸಾಹಿತ್ಯ ಸಾಗರದ ಎರಡು ಹನಿಗಳನ್ನು ಬಾಚಿಕೊಳ್ಳುವ ತವಕ. ಶರಧಿಯನ್ನು ಶೆರೆ ಹಿಡಿಯಲು ಅಕ್ಷಿಪಟಲಗಳಿಗೆ ಸಾಧ್ಯ ವೆ ...ಇಲ್ಲ. ಆದರೆ ಕ್ಷಣ ಸಂತೋಷದಿಂದಿ ರೋಮಾಂಚನಗೊಳ್ಳಲು ತೆರಿಗೆ ಕಟ್ಟಬೇಕಾಗಿಲ್ಲವಲ್ಲ.ಅದೆ ತಾನೆ ಡಾ/ಗಿರಡ್ಡಿ ಗೋವಿಂದರಾಜರಿಂದ ಧಾರವಾಡದಲ್ಲಿ ಪ್ರಾರಂಭವಾದ ಸಾಹಿತ್ಯ ಸಂಭ್ರಮ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಲು ತಯಾರಿಯಾಗಿತ್ತು, ಅದಕ್ಕೆ ಆನ್ಲೈನಲ್ಲಿ ಪಾಸ್ ಪಡೆದವರೆ ಚಂದ್ರ ಶೇಖರ್ ಹೆಗಡೆ. ಸಾಹಿತ್ಯದ ಸೆಳುವಿನ ಅಲೆಗಳ ಬಲೆಗಳಲಿ ಸುರಪಾನ ಮಾಡಿದವನ ಹಾಗೆ ಗರಗರನೆ ತಿರುಗಿದೆ ಸಾಹಿತ್ಯ ಪ್ರೇಮಿಯಾಗಿ....ಸಾಹಿತಿ ಎಂದರೆ ? ಘೋರ ತಪ್ಪಾದೀತು ನಾನೊಬ್ಬ ಇತಿಹಾಸ ಉಪನ್ಯಾಸಕ ಸತ್ಯ ಹೇಳುವುದು ನನ್ನ ಕಾಯಕ, ಸಾಹಿತ್ಯ ಹಾಗಲ್ಲ ಇಲಿ ಯನ್ನು ಹುಲಿಯೆನ್ನಬೇಕು ನೀರು ಹನಿಯನ್ನು ಮುತ್ತು ಎನ್ನಬೇಕು ಇಲ್ಲ ವೆಂದರೆ ಅದು ಸಾಹಿತ್ಯವಲ್ಲ ಪರಿಣಾಮಕಾರಿಯಾಗಲು ಅದಕ್ಕೆ ಸುಣ್ಣ ಬಣ್ಣ ಮೆತ್ತಲೆಬೇಕು ! ಒಬ್ಬ ಇತಿಹಾಸ ಬೋಧಿಸುವವನಿಗೆ ಸ್ನೋ ಪೌಡರ್ , ಪೇರ್ ಅಂಡ್ ಲೌಲಿ ಎಲ್ಲಿ ಸಿಗುತ್ತೆ ಹೇಳಿ ? ಆದರೆ ಹಚ್ಚಿದವರನ್ನು ನೋಡುವುದೇ ಹಬ್ಬ ಅಲ್ಲವೆ ! ಹಾಗಾಗಿ ಸಾಹಿತಿಗಳ ದಾಸನಾದೆ ಹಿಂದೆ ಹಿಂದೆ ತೆರಳಿದೆ,ಧಾರವಾಡ ಅದು ಜ್ಞಾನಿಗಳ ಕಾಶಿ ರಾಜ್ಯದ ಉದ್ದಗಲಗಳಿಂದ ವಿದ್ವಾಂಸರ ದಂಡೆ ಅಲ್ಲಿ ಸೇರುತ್ತಿತ್ತು ನೆತ್ತಿಯ ಹಸಿವಿನಿಂದ ಆಗಮಿಸಿದವರಿಗದು ಭಾವ ಬುತ್ತಿ, ಬಿಚ್ಚಿ ಉಂಡವರೆಷ್ಟೊ ಕಟ್ಟಿ ಕೊಂಡು ನಡೆದವರೆಷ್ಟೋ, ನೋಡುವುದೆ ಒಂದು ಹಬ್ಬ . ವಾದ ವಿವಾದ ಇಲ್ಲ ಎಂದಲ್ಲ ! ಸಿಡಲಬ್ಬರಕೆ ಗೋಡೆಗಳು ಅಲುಗಾಡಿದ್ದು ಉಂಟು. ಅದು ಎಡವೊ ? ಬಲವೋ ?..... ವಿಚಾರ ತರಂಗಗಳು ತೇಲಿ ಬಂದದ್ದು ಸತ್ಯ .ಮನುಷ್ಯ ಬುದ್ಧಿಯ ವಿಕಾಸಕ್ಕೆ ಇವುಗಳೆ ಅಲ್ಲವೆ ಮದ್ದು .ಅದಕ್ಕೆ ಪ್ರಾಜ್ಞರು ಹೇಳುವುದು " ಜಗತ್ತನ್ನು ಆಳುವುದು ವಿಚಾರಗಳು, ಮನುಷ್ಯರಲ್ಲ" ಎಂದು.ಇಂತಹ ಅಂಗಳದಲ್ಲಿ ನಡೆಸಿದ ನನ್ನ ಗೆಳೆಯರಿಗೆ ನನ್ನ ದೊಂದು ನಮನ .ಶುಭರಾತ್ರಿ.. ಮತ್ತೆ ಕಾಲಿ ಕುಳಿತಾಗ ತಮ್ಮ ಕಾಲವನ್ನು ಹರಟೆಯೊಂದಿಗೆ ಕತ್ತರಿಸಲು ಬರುವೆ.