Wednesday, September 29, 2021

* ನಿನಗೂ ಒಂದು ದಿನ *

ದನಿವರಿಯದ ಧಣಿಯೆ  
ನಿನಗೆ ನನ್ನ ಶರಣು / 
ಹಗಲೇನು ಇರುಳೇನು 
ಹೆಗಲಾಗಿ ದುಡಿದೆ /
ಕೂಗಲಿಲ್ಲ ಕಿರುಚಲಿಲ್ಲ 
ಸಾಗಿತಲ್ಲ ನಿನ್ನ ದುಡಿಮೆ/
ಓಡಿದಾಗ ಓಡಿದೆ 
ನಡೆದಾಗ ಹಾಡಿದೆ /
ನೀನಾರಿಗೇನು 
ಕಡಿಮೆ /
ಜೀವಕಳೆಯ ಹೊರಸಿ  
ಮೂಲೆ ಮೂಲೆ ಕಳುಹಿಸಿ/
ಮಾಲೆ ಬಯಸದ 
ಕೋಲೆಯ ಬಸವ /
ನನ್ನ ಅರಗಿಣಿಗೂ 
ನೀನೇ ಮುದ್ದು ಮಣಿ/ 
ಕದ್ದು ಬೀಗುವಳು 
ನನ್ನ ಹಿಂದೆ ರಮಣಿ 
ನೀನಗೂ ತಂದರಲ್ಲ 
ಒಂದು ದಿನ.... ! 
ಮೆಲುಕು ಹಾಕದ ದಿನಗಳಲ್ಲಿ /
ದಿನಕರನ ಆಣೆ 
ಅವನಿ ಇರದ 
ದಿನ ನನ್ನ ನಿನ್ನ 
ಮರಣ/  


ಬಸನಗೌಡ ಗೌಡರ

Saturday, September 25, 2021

*ಮುತ್ತಿನ ಮಂಪರು *

ಸೌಂದರ್ಯ ಸೂಸಲು 
ನಿನ್ನ ವದನಕೆ ಚಂದನ 
ಬಳಿಯಬೇಕಿಲ್ಲ ಗೆಳತಿ/ 
ಚಂದದ ಮುಗುಳ್ನಗೆ ಸಾಕು 
ನಾ ನಿನ್ನ ಹಿಂದೆ 
ಭ್ರಮರದಂತೆ ಬರಲು//

ಒಂದೇ ಎರಡೇ ಕುಂಟು 
ನೆವಗಳು ಸಾಕು ನನ್ನಿಂದ ಸಾಗಲು/
ಕಣ್ ಸನ್ನೆ ಸಾಕು ಗೆಳತಿ,
ಸಮ್ಮತಿ ಸೂಚಿಸು ನಾ 
ಸ್ವರ್ಗದಲಿ ತೇಲಿ ಬರಲು//

ನೀನುಟ್ಟ ಸೀರಿಯ ಸೆರಗು 
ಹೊಂಬಣ್ಣದ ಬಿಸಿಲಿಗೆ ತಾಗಿ /
ಹಸಿರೆಲೆಯ ಮೇಲೆ 
ಹೊಸ ಕಾಮನ ಬಿಲ್ಲು 
ತುಂತುರು ಮಳೆ ಯಾಗಿ 
ನಾನು ತೂರಿ ಬರಲು//

ಭಾವಗಳ ಕಾರಂಜಿ 
ಜೀವನದ ಸೆಲೆಯಾಗಿ/
ನಾವು ಕೆತ್ತಿದ ಮೂರ್ತಿ 
ನಾಳೆಗಳ ಬುತ್ತಿಯಾಗಿ 
ಹೃದಯ ತಟ್ಟಿದೆ ಪ್ರೀತಿ
ಮರ ಸುತ್ತುವದು  ನಾ 
ಮೋಡವಾಗಿ ಬರಲು//
  
ಕಾನನದ ಬಯಲಲ್ಲಿ 
ಕನಸುಗಳ ಬೇರಲ್ಲಿ /
ಕವನಗಳು ಹೊರಚೆಲ್ಲಿ 
ಕತ್ತಲಾವರಿಸಿ ಮೌನ ಮೆತ್ತಿತು 
ಮುತ್ತಿನ ಮಂಪರು ಬರಲು//


ಬಸನಗೌಡ ಗೌಡರ

*ತಾಯಿ ಮಡಿಲು*

 *ವಿಷಯ* : ಚಿತ್ರ ಕವನ

ಮಗುವಾಗುವಾಸೆ ಮತ್ತೆ 
ಮಡಿಲು ಸೇರುವಾಸೆ 
ಸುತ್ತ ಸುಳಿದ ಬಲೆಯ ಸೆಳೆತ ಸಾಕು 
ನಿತ್ಯ ನಿನ್ನ ಉದರಲ್ಲಿ 
ಸತ್ಯ ಕಾಣುವಾಸೆ !
ಜೀವವಿತ್ತ ಮಮಕಾರ ಎನಗೆ ಬೇಕು /
ನೀನಿತ್ತ ಭವದ ಬಡಿವಾರ 
ಬದುಕು ಸಾಕು /
ತಾಯಿ ಮಾಂಸ ಮುದ್ದೆ 
ನೀನಿತ್ತ ಹಾಸಿಗೆ /
ಕರಳು ಬಳ್ಳಿ ಯಿಂದ ಸೇರಿ 
ಕಸುವು ತಂದ ಕೆಸರಿನಂತ 
ಹಾಲು ಎನೆಗೆ ಅಂದ /
ಕಾಸಿಗಾಗಿ ಕಲಬೆರಕೆ ಹಾಲು ಕುಡಿದು 
ಕಣ್ಣು ಕರಗಿ ನಾನಾದೆ ಅಂದ /
ಕಡಲು ಕರಗಿಸಿ ಒಡಲು 
ತುಂಬಿಸಿ ಮಹಡಿ ಏರಿಸಿದರು ಚಂದ / 
ಗುಡಿಯ ಕಟ್ಟಿ ಗಡಿಯ ಹಾಕಿದ 
ಪುಂಡರ ತಂಡ ನಮಗೇಕೆ ಬೇಕು /
ನಿನ್ನ ಗರ್ಭ ಗುಡಿಯೆ ಎನಗೆ ಸಾಕು /
ಹಾಲಾಹಲ ಉಂಡು 
ಹಾಲು ಹಾಕಿ ಬೆಳೆಸಿದ ನಿನ್ನ ಮಡಿಲೆ 
ಎನಗೆ ಸಾಕು /
ಎತ್ತ ನೋಡಿದರತ್ತತ್ತ ಬರಿ 
ಬ್ರಮಗಳೆ ತುಂಬಿದ ಡೌಲತ್ತು / 
ಬರಿ ಮತ್ಸರದಿಂದ ಉರಿವ 
ಜನಗಳ ಮಧ್ಯ ಬೆರೆವ ಬದುಕು ಸಾಕು / 
ಮತ್ತೆ ಮಮಕಾರ ಹಾಸು ಹೊದ್ದ 
ನಿಷ್ಕಲ್ಮಷ ಗರ್ಭ ಗುಡಿಯಲಿ
ಬಂದು ಸೇರುವಾಸೆ /


  ✍️ *ಶ್ರೀ ಬಸನಗೌಡ ಗೌಡರ 

             ಉಪನ್ಯಾಸಕರು 

       ಬಾಲಕರ ಸರಕಾರಿ ಪದವಿ      ಪೂರ್ವ ಕಾಲೇಜುಗುಳೇದಗುಡ್ಡ

Tuesday, September 21, 2021

"ಗೆಳೆತನವಿದು, ಒಳಿತು ಮೂಲ"

       ತುಂಬಿದ ಕೊಡ ತುಳುಕುವದಿಲ್ಲ  ಅಂತಾರಲ್ಲ, ಅಂತಹ ವ್ಯಕ್ತಿಗಳ ಬಗ್ಗೆ  ನಾನು ಹೇಳಬೇಕು ಅಂತಾ ವಿಚಾರ ಮಾಡಿದಾಗ ತಲೆಯಲ್ಲಿ ಅನೇಕ ಇತಿಹಾಸದ ಪುರುಷರು ನನ್ನ ಕಣ್ಣುಗಳು ಮುಂದೆ ಸುಳಿದಾಡುತ್ತಾರೆ. ಏಕೆ ಹೇಳಿ ? ಮೊದಲೆ ನಾನು ಇತಿಹಾಸ ಉಪನ್ಯಾಸಕ ...ಥಾಮಸ್ ಕಾರ್ಲೈಲ ಎನ್ನುವ ಇತಿಹಾಸಕಾರ ಹೀಗೆ ಹೇಳುತ್ತಾನೆ ಮಹಾಪುರುಷರು ಇಂದಿಲ್ಲ,ಆದರೆ ಪ್ರಪಂಚದ ಇತಿಹಾಸ ಮತ್ತು  ಮಹಾನ್ ಪುರುಷರ ಆತ್ಮ ಚರಿತ್ರೆಗಳು ಮಾತ್ರ ಇನ್ನೂ ಉಳಿದಿವೆ " ಎಂದು. ಆದರೆ ನಾನು ಈಗ ಹೇಳಲು ಹೊರಟಿರುವುದು ಐತಿಹಾಸಿಕ ವ್ಯಕ್ತಿ ಗಳದಲ್ಲ ಬದಲಾಗಿ ನನ್ನ ಸ್ನೇಹಿತರ ವಿಚಾರ, ಯಾಕೆಂದರೆ ಪ್ರತಿ ನಿತ್ಯ ವಿದ್ಯಾರ್ಥಿಗಳ ಮುಂದೆ ನಾನು ಮಾತನಾಡುವ ವಿಷಯದ ಬದಲಾಗಿ ವಿಭನ್ನವಾಗಿ ಏನಾದರು ಹಂಚಿಕೊಳ್ಳುವ ಮನಸ್ಸಾಯಿತು ಅದಕ್ಕಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಪ್ರಯತ್ನವೆ ಈ ನನ್ನ ಲೇಖನದ ಉದ್ದೇಶ.ಇದು ತನ್ನ ಗೆಳೆಯರನ್ನು ಮೆಚ್ಚಿಸುವ ಇಲ್ಲವೆ ಮುಖ ಸ್ತುತಿಸುವ ವಿಚಾರದಂತೆ ಕೆಲವರಿಗೆ  ಕಂಡರೆ ಅಚ್ಚರಿ ಇಲ್ಲ ! ಆದರೆ ಒಂದಂತೂ ಸತ್ಯ ಎಂತಹ ಗೆಳೆಯರು ನಮಗೆ ಇದ್ದರೆ ಚನ್ನಾಗಿರುತ್ತದೆ ಎನ್ನುವುದನ್ನು ನಾವು ಅರಿತುಕೊಂಡರೆ ನಮಗೆಷ್ಟು ಲಾಭ ಎನ್ನುವುದು ಈ ಲೇಖನದ ಉದ್ದೇಶ. ಇಲ್ಲಿಯವರೆಗೆ ನಾನು ಈ ಪೀಠಿಕೆ  ಯಾಕೆ ಹಾಕಿದೆ ಎಂದರೆ  ನನ್ನ ಬದುಕಿನ ಪಯಣದಲ್ಲಿ ಅನೇಕ ಸ್ನೇಹಿತರು ಬಂದು ಹೋಗಿದ್ದಾರೆ ಅವರು ನನ್ನಿಂದ ಏನು ಕಲಿತರೊ ಬಿಟ್ಟರೊ ನನಗೆ ಗೊತ್ತಿಲ್ಲ, ಆದರೆ ಪ್ರತಿ ಹಂತದಲ್ಲಿಯೂ ನಾನು ಅವರಿಂದ ಬಹಳ ಕಲಿತಿದ್ದೇನೆ.ನನಗೆ ಇಬ್ಬರು ಸ್ನೇಹಿತರು ಇದ್ದಾರೆ ಅವರೆ ಚಂದ್ರಶೇಖರ ಹೇಗಡೆ ಮತ್ತು  ಡಾ/ರಾಜಶೇಖರ್ ಬಸುಪಟ್ಟದ  ಅಂತ, ಪ್ರೊ ಸಿ ಬಿ ಹೆಗಡೆ  ಈಗ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು. ಇವರು ಮೊದಲು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆವಾಗ ಅವರ ಮತ್ತು ನನ್ನ ಸ್ನೇಹಿತನಕ್ಕೆ ಕೊಂಡಿಯಾದವರೆ ಡಾ / ರಾಜಶೇಖರ್ ಬಸುಪಟ್ಟದ ಇವರು ವೀರ ಪುಲಿಕೇಶಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಧ್ಯಾಪಕರು.ಇವರು ನನಗಿಂತ ವಯಸ್ಸಿನಲ್ಲಿ, ವಿದ್ಯೆಯಲ್ಲಿ ಅನುಭವದಲ್ಲಿ ತುಂಬಾ ಹಿರಿಯರು ಆದಾಗ್ಯೂ ಅವರ ನಮ್ಮ ಗೆಳೆತನ ನುಗ್ಗಿ ಗಿಡಕ್ಕೆ ಎಲೆ ಬಳ್ಳಿ ಏರಿದ ಹಾಗೆ ಬೆಸೆಯಿತು.ಒಂದು ಮಾತಿದೆ  ಆದೇನಂದರೆ ಗೆಳೆತನ ಬೆಸೆಯಲು ವಯಸ್ಸಿನಲ್ಲಿ ಸಮ ಇರಬೇಕು ಇಲ್ಲವೆ ಬುದ್ಧಿ,ಜ್ಞಾನದಲ್ಲಿ ಯಾದರೂ ಸಮ ಇರಬೇಕು ಇಲ್ಲವೆ ಕೊನೆಯ ಪಕ್ಷ  ಹವ್ಯಾಸಗಳಲ್ಲಿಯಾದರು ಸಮ ಇರಬೇಕು ಅಂದರೆ ಗೆಳೆತನ ಗಟ್ಟಿಯಾಗುತ್ತದೆ  ಅಂತ. ನಾನು  ಮೊದಲನೆಯ ಎರಡರಲ್ಲಿ  ಸಮನಾಗಲು ಹೇಗೆ ಸಾಧ್ಯ ಹೇಳಿ ? ಸಾಧ್ಯವಾಗದ ಮಾತು, ಮೂರನೆಯದರಲ್ಲಿ ಸಮಾನತೆಯಾಗಿರಬಹುದು ! ಅದು ಹೇಗೆಂದರೆ ದಿನಾಲೂ ವಾಕಿಂಗ್ ಹೋಗುವ ಹವ್ಯಾಸದಿಂದ ಇದು ನಮ್ಮಿಬ್ಬರನ್ನು ಹತ್ತಿರಕ್ಕೆ ತಂದಿತು.ಇದಕ್ಕೆ ಇನ್ನೊಬ್ಬರು ಬಂದು ಸೇರಿಕೊಂಡರು, ಅವರೆ ಈ ಚಂದ್ರಶೇಖರ ಹೇಗಡೆ ,ಇವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ವೈಚಾರಿಕ ಚಿಂತನೆಗಳಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಇದ್ದರು ಎನ್ನಿ, ಅವರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಆ ಸಂದರ್ಭದಲ್ಲಿ ನಾನು ಕೂಡಾ ಭೂಗೋಳ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ಮಾಡಿದ್ದೆ ಅದು ಕೂಡಾ ನಾವು ಹತ್ತಿರಕ್ಕೆ ಬರಲು  ಸಹಾಯಕವಾಗಿರಬಹುದೇನೋ , ಆಶ್ಚರ್ಯ ವಾಗಿರಹುದು ....! ನಾನು ಇತಿಹಾಸ ಉಪನ್ಯಾಸಕ  ಭೂಗೋಳ ವಿಷಯದ ಸಂಪನ್ಮೂಲ ವ್ಯಕ್ತಿ ? ಕಾರಣ ಇಷ್ಟೆ ಪದವಿ ಯಲ್ಲಿ ಕಲಿತದ್ದು ಇತಿಹಾಸ, ಭೂಗೋಳ. ಕರ್ತವ್ಯ ಪ್ರಾರಂಭವಾದದ್ದು ಇಂಗ್ಲಿಷ್ ಭಾಷೆಯ ಬೋಧನೆ, ನಂತರ ಸಮಾಜ ವಿಜ್ಞಾನ ಹೀಗಾಗಿ ವಿಭಿನ್ನ ನೆಲೆಯಲ್ಲಿ ಗಟ್ಟಿ ಭೋಧನೆಯ ಫಲ ಸಂಪನ್ಮೂಲ ಘಟ್ಟಕ್ಕೆ ತೆಗೆದು ಕೊಂಡು ಹೋದದ್ದು ನನ್ನ ಅದೃಷ್ಟವೇ ಸರಿ ,ಇರಲಿ ಸ್ನೇಹಿತರು ಎಂದೇ ಅಲ್ಲವೆ ?  ಈಗ ಹೇಳಿದೆನಲ್ಲವಾ ಡಾ/ ರಾಜಶೇಖರ್ ಬಸುಪಟ್ಟದ ಹಾಗೂ ಪ್ರೊ ಚಂದ್ರಶೇಖರ್ ಹೆಗಡೆ ಸಾಹಿತ್ಯದ ದೋಣಿಯಲ್ಲಿ  ಪಯಣಿಸಲು ಆಗ ಹೊರಟಿದ್ದರು, ಈ ಜೋಡಿ ಶೇಖರ್ ಬೆಳಕಿನಲ್ಲಿ ಕಣ್ಣು ಪಿಳಿಕಸಿ ಮುನ್ನಡೆದಾಗ ಏನೋ ಒಂದು ತರ ಪುಳಕ ಸಾಹಿತ್ಯ ಸಾಗರದ ಎರಡು ಹನಿಗಳನ್ನು ಬಾಚಿಕೊಳ್ಳುವ ತವಕ. ಶರಧಿಯನ್ನು ಶೆರೆ ಹಿಡಿಯಲು ಅಕ್ಷಿಪಟಲಗಳಿಗೆ ಸಾಧ್ಯ ವೆ ...ಇಲ್ಲ. ಆದರೆ ಕ್ಷಣ ಸಂತೋಷದಿಂದಿ  ರೋಮಾಂಚನಗೊಳ್ಳಲು ತೆರಿಗೆ ಕಟ್ಟಬೇಕಾಗಿಲ್ಲವಲ್ಲ.ಅದೆ ತಾನೆ ಡಾ/ಗಿರಡ್ಡಿ ಗೋವಿಂದರಾಜರಿಂದ ಧಾರವಾಡದಲ್ಲಿ ಪ್ರಾರಂಭವಾದ ಸಾಹಿತ್ಯ ಸಂಭ್ರಮ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಲು ತಯಾರಿಯಾಗಿತ್ತು, ಅದಕ್ಕೆ ಆನ್ಲೈನಲ್ಲಿ ಪಾಸ್ ಪಡೆದವರೆ ಚಂದ್ರ ಶೇಖರ್ ಹೆಗಡೆ. ಸಾಹಿತ್ಯದ ಸೆಳುವಿನ ಅಲೆಗಳ ಬಲೆಗಳಲಿ ಸುರಪಾನ ಮಾಡಿದವನ ಹಾಗೆ ಗರಗರನೆ ತಿರುಗಿದೆ ಸಾಹಿತ್ಯ ಪ್ರೇಮಿಯಾಗಿ....ಸಾಹಿತಿ ಎಂದರೆ ? ಘೋರ ತಪ್ಪಾದೀತು ನಾನೊಬ್ಬ ಇತಿಹಾಸ ಉಪನ್ಯಾಸಕ ಸತ್ಯ ಹೇಳುವುದು ನನ್ನ ಕಾಯಕ, ಸಾಹಿತ್ಯ ಹಾಗಲ್ಲ ಇಲಿ ಯನ್ನು  ಹುಲಿಯೆನ್ನಬೇಕು ನೀರು ಹನಿಯನ್ನು  ಮುತ್ತು ಎನ್ನಬೇಕು ಇಲ್ಲ ವೆಂದರೆ ಅದು ಸಾಹಿತ್ಯವಲ್ಲ ಪರಿಣಾಮಕಾರಿಯಾಗಲು ಅದಕ್ಕೆ ಸುಣ್ಣ ಬಣ್ಣ ಮೆತ್ತಲೆಬೇಕು ! ಒಬ್ಬ ಇತಿಹಾಸ ಬೋಧಿಸುವವನಿಗೆ  ಸ್ನೋ ಪೌಡರ್ , ಪೇರ್ ಅಂಡ್  ಲೌಲಿ ಎಲ್ಲಿ ಸಿಗುತ್ತೆ ಹೇಳಿ ? ಆದರೆ ಹಚ್ಚಿದವರನ್ನು ನೋಡುವುದೇ ಹಬ್ಬ ಅಲ್ಲವೆ ! ಹಾಗಾಗಿ ಸಾಹಿತಿಗಳ ದಾಸನಾದೆ ಹಿಂದೆ ಹಿಂದೆ ತೆರಳಿದೆ,ಧಾರವಾಡ ಅದು ಜ್ಞಾನಿಗಳ ಕಾಶಿ ರಾಜ್ಯದ ಉದ್ದಗಲಗಳಿಂದ ವಿದ್ವಾಂಸರ ದಂಡೆ ಅಲ್ಲಿ ಸೇರುತ್ತಿತ್ತು ನೆತ್ತಿಯ ಹಸಿವಿನಿಂದ ಆಗಮಿಸಿದವರಿಗದು ಭಾವ ಬುತ್ತಿ, ಬಿಚ್ಚಿ ಉಂಡವರೆಷ್ಟೊ ಕಟ್ಟಿ ಕೊಂಡು ನಡೆದವರೆಷ್ಟೋ, ನೋಡುವುದೆ ಒಂದು ಹಬ್ಬ . ವಾದ ವಿವಾದ ಇಲ್ಲ ಎಂದಲ್ಲ ! ಸಿಡಲಬ್ಬರಕೆ ಗೋಡೆಗಳು ಅಲುಗಾಡಿದ್ದು ಉಂಟು. ಅದು ಎಡವೊ  ? ಬಲವೋ ?..... ವಿಚಾರ ತರಂಗಗಳು ತೇಲಿ ಬಂದದ್ದು ಸತ್ಯ .ಮನುಷ್ಯ ಬುದ್ಧಿಯ ವಿಕಾಸಕ್ಕೆ ಇವುಗಳೆ ಅಲ್ಲವೆ ಮದ್ದು .ಅದಕ್ಕೆ ಪ್ರಾಜ್ಞರು ಹೇಳುವುದು " ಜಗತ್ತನ್ನು ಆಳುವುದು ವಿಚಾರಗಳು, ಮನುಷ್ಯರಲ್ಲ" ಎಂದು.ಇಂತಹ ಅಂಗಳದಲ್ಲಿ ನಡೆಸಿದ ನನ್ನ  ಗೆಳೆಯರಿಗೆ ನನ್ನ ದೊಂದು ನಮನ .ಶುಭರಾತ್ರಿ.. ಮತ್ತೆ ಕಾಲಿ ಕುಳಿತಾಗ ತಮ್ಮ ಕಾಲವನ್ನು ಹರಟೆಯೊಂದಿಗೆ ಕತ್ತರಿಸಲು ಬರುವೆ.

Tuesday, September 14, 2021

* ಇದು ಸಂತೆ *

ಈ ಲೋಕದ ಜನರ  ನಿಯಮ 
ಹೀಗೂ ಉಂಟು ! ಹೇಳುವರು ಬೋಧಕರಾಗಿ,        ನಿಲ್ಲಬೇಕು ಸಿಂಗಲ್  ಸ್ಟಾಂಡ್ ಮೇಲೆ ! 
ಅಲುಗಾಡಲು ಬೇಡ ಬೀಳುವುದು ಗಾಡಿ 
ಮಾಡ ಬೇಡ ಗಡಿ ಬಿಡಿ.
ಕೇಳುವವರೆ ಕೋಡಿ !  
ಹೇಳುವವರಿಗೇನು ದಾಡಿ , 
ಯಾವಾಗಲೂ ಡಬಲ್ ಸ್ಟಾಂಡ್ 
ಮೇಲೆ ಇವರ ಗಾಡಿ.! 
ತಿಳಿಯುವುದು ಹೇಗೊ ಕೋಡಿ ? 
ಒಂದು ಮರೆ ಮಾಡಿ ಇನ್ನೊಂದರಿಂದಲೆ ಮೊಡಿ ...
ಏನು ಮಾಡುವುದು ? 
ಹಾಕು ಶಿಕ್ಷಣವೆಂಬ ನಿನ್ನದೆ ಸ್ವಂತ ಕನ್ನಡಿ
ಆದರ್ಶಗಳೆಂಬ ರೆಕ್ಕೆಗಳ ಧಾರಣೆ 
ಅದಕೆ ಸಿಂಗಲ್ ಸ್ಟಾಂಡೆ ಹೊಣೆ 
ಬದುಕೆಂಬ ಬಂಡಿಗೆ ಹಾಕಬೇಕು  
ಪ್ರ್ಯಾಕ್ಟಿಕಲ್ ಸ್ಟಾಂಡ್  ಮುಂದೆ. 
ಅದು ಹೇಗೆ ಬರುತ್ತೆ ತಂದೆ ! 
ಬರುವುದೇನು ಬಂತು ? 
ಕಲೆ ಬೇಕು ಇಲ್ಲದಂತೆ  ತೋರಿಸು ಇದು ಸಂತೆ....
ಎಲ್ಲಾ  ಇದ್ದು ಇಲ್ಲದಂತೆ  ಮುನ್ನಡೆಯಬೇಕು ! ಕಾಣದಂತಿರಬೇಕು.ಕವಿಯಾಗಬೇಕು 
ರವಿ ಕಾಣದ ಕಣಿವೆಯೊಳು ಕಿರಣ ಹರಿಸಬೇಕು .

       ಬಸನಗೌಡ ಗೌಡರ

Thursday, September 2, 2021

"ನಾನು ಹಿಟ್ಲರ್ ಆದಾಗ"

      ನನಗೆ ಈಗ ಇಪ್ಪತ್ತೇಳು ವರ್ಷದ ಬೋಧನಾನುಭವ, ವಯಸ್ಸು ಐವತ್ಮೂರು ಮುಗಿದು ಐವತ್ನಾಲ್ಕನೆ ವರ್ಷದ  ತುದಿ ತಲುಪಲು ಕಾಲ ದಾಪುಗಾಲು ಹಾಕಿ ಓಡುತ್ತಿದೆ, ಹಿಡಿದು ನಿಲ್ಲಿಸಲು ಸಾಧ್ಯವೆ ? ಓಡಲಿ ಬಿಡಿ, ಉಳಿದ ಅವಧಿಯನ್ನು ಸಾಧ್ಯವಾದ ಮಟ್ಟಿಗೆ  ಆನಂದಿಸಿದರಾಯಿತು.ಬೋಧಿಸುವ ಕೆಲಸ ಉಳಿದ ಕೆಲಸಗಳಿಗಿಂತ ಸಂತಸದ ಮತ್ತು ಸರಳವಾದದ್ದು ಅಂತ ನನ್ನ ಭಾವನೆ ಆದರೆ ಕೆಲವು ಜನರಿಗೆ ಆನಂದಿಸಲು ಪುರಸತ್ತು ಸಿಗದಿರಬಹುದು ಕಾರಣವೆಂದರೆ ಅವರಿಗೆ ಕಾರು ಇಲ್ಲದಿರಬಹುದು, ದೊಡ್ಡದಾದ ಬಂಗಲೆ ಇರಲಿಕ್ಕಿಲ್ಲ,ಸಂಬಳ ಕಡಿಮೆ ಇರಬಹುದೆಂದು ಭಾವಿಸಿರಬಹುದು ಇತ್ಯಾದಿ. ಆದರೆ ಕೆಲವರಿಗೆ ಅವುಗಳು ಯಾವುದು ಇರದಿದ್ದರೂ ಸಂತೋಷದಿಂದ ಇರುವುದನ್ನು ನಾನು ನೋಡಿದ್ದೇನೆ ಅಂತವರ ಪಾಲಿಗೆ ನನ್ನನ್ನು ಸೇರಿಸಿದರೆ ತಪ್ಪಾಗಲಿಕ್ಕಿಲ್ಲ ಇಲ್ಲಿಯವರೆಗೆ ನಾನು ಈ ಪೀಠಿಕೆ ಯಾಕೆ ಹಾಕಿದೆ ಎಂದರೆ ಬೋಧನೆಯ ಅವಧಿಯಲ್ಲಿಯ ಒಂದು ಅನುಭವ ಹಂಚಿಕೊಳ್ಳುವ ಮನಸ್ಸಾಯಿತು ಅದಕ್ಕಾಗಿ ಹೇಳಿದೆ ಅಷ್ಟೆ .ಅದನ್ನು ಬಿಟ್ಟರೆ ಮತ್ತೆ ಯಾವುದೆ ಉದ್ದೇಶ ನನ್ನಲ್ಲಿ  ಇಲ್ಲ. ನಾನು ಇತಿಹಾಸ ಪಾಠ ಮಾಡುವ ಉಪನ್ಯಾಸಕ .ಅದು ಬಹಳ ಸರಳ ವಿಷಯ ,ಅದಕ್ಕೆ ಎಕ್ಸ್ಟ್ರಾ ಪಾಠ ಮಾಡಿ ಕಲಿಸುವ ಪ್ರಮೆಯ ಬರುವದು ಕಡಿಮೆ. ಆದರೆ ನಾನು ಮಾತ್ರ ಪಠ್ಯಕ್ರಮ ಮುಗಿಸಲು ರವಿವಾರ ಕ್ಲಾಸ್ ಹಾಕುತ್ತಿದ್ದೆ ನೂರಕ್ಕೆ ನೂರು ವಿದ್ಯಾರ್ಥಿಗಳು ಬಾರದೆ ಹೋದರು 75 ಪ್ರತಿಶತ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು ಅದೂ ಸಂತೋಷದ ವಿಷಯವೆ ಹೌದು. ಯಾಕೆಂದರೆ ಮನೆಯಲ್ಲಿ ಓದಿದರೆ ಆಯಿತು ಅಂದರೆ ಏನು ಮಾಡುವುದು ? ಅಂತೂ ಅಂದು ರವಿವಾರ ಬಂದೆ ಬಿಟ್ಟಿತು ಕ್ಲಾಸ್ ತೆಗೆದುಕೊಳ್ಳುವ ಸಲುವಾಗಿ 9.00 ಗಂಟೆಗೆ ರಡಿಯಾಗಿ ಕಾಲೇಜು ಕಡೆ ಮುಖ ಮಾಡಿ ಲಗುಬಗೆಯಿಂದ ಹೋಗುತ್ತಿದ್ದೆ ಆವಾಗ ನಮ್ಮೂರಿನ ವ್ಯಕ್ತಿ ಬೇಟಿಯಾಗಬೇಕೆ ! ಬಹಳ ದಿವಸಕ್ಕೆ ಬೇರೆ ಭೇಟಿಯಾಗಿದ್ದ ಹೀಗಾಗಿ ಕೆಲವು ಕುಶಲೋಪರಿ ವಿಚಾರಿಸಲು ಒಂದು ಹತ್ತು ನಿಮಿಷ ಮಾತಾಡಿದೆ. ಒಂದು ವೇಳೆ ಅವರಿಗಾಗಿ ಒಂದಷ್ಟು ಸಮಯ ಕೊಡದಿದ್ದಲ್ಲಿ  ಏನು ತಿಳಿದಾರು ಎನ್ನುವ ಭಯದಿಂದ ಸಮಯ ಕಳೆದಿರಬಹುದು, ಇದು ಸರಿಯೋ ತಪ್ಪೊ ಅದು ಬೇರೆ ಮಾತು. ಕಾಲೇಜು ಕಂಪೌಂಡು ದಾಟಿ ಕಾಲೇಜು ಒಳ ಪ್ರವೇಶ ಮಾಡುವದಕ್ಕೂ ಕೆಲ ವಿದ್ಯಾರ್ಥಿಗಳು  ಕ್ಲಾಸ್ ಒಳಗಡೆ ನಡೆಯ ಹತ್ತಿದರು ಅದರಲ್ಲಿ ಒಬ್ಬ ಹುಡುಗ ಒಳಗೆ ಇರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ "ಹಿಟ್ಲರ್ ನ ಆಗಮನ" ಎಂದು ಜೋರಾಗಿ ಚೀರಿದ ಹುಡುಗರೆಲ್ಲಾ ನಗುತ್ತಾ ಪಾಠಕ್ಕಾಗಿ ತಮ್ಮ ತಮ್ಮ ಆಸನದ ಕಡೆ ಕುಳಿತು ಕೊಳ್ಳಲು ರಡಿಯಾದರು,  ನಾನು ಮಾತ್ರ ಸೀದಾ ಸ್ಟಾಪ್ ರೂಮ್ ಗೆ ಹೋಗಿ ಚಾಕ್ ಪೀಸ್ ಡಸ್ಟರ್ ನೊಂದಿಗೆ ವರ್ಗ ಕೊನೆಗೆ ಹಾಜರಾದೆ. ಕರ್ನಾಟಕದ ಏಕೀಕರಣದ ಮಜಲುಗಳನ್ನೂ ಹೇಳಲು ಪ್ರಾರಂಭಿಸಿದೆ ! ...(ಯಾವುದನ್ನು ಕೇಳದವನ ರೀತಿ) ಪಾಠವನ್ನು ಮನಮುಟ್ಟುವಂತೆ ಮಾಡಿದೆ.ಹುಡುಗರು ತಿಳಿದುಕೊಂಡದ್ದೆ ಬೇರೆ , (ಹಿಟ್ಲರ್ ಎಂದು ಕೂಗಿದ ಹುಡುಗನ ಹೆಸರು ಗೊತ್ತಿಲ್ಲ ಆಡ್ರೆಸ್ ಇವತ್ತಿಗೂ ನೆನಪಿದೆ ಬಡಿಗೇರ ಅಂತ) ..ಹುಡುಗರು ತಿಳಿದು ಕೊಂಡುದ್ದು ..ಸರ್ ಕೇಳಿರುತ್ತಾರೆ ಆ ಹುಡುಗನನ್ನು ಬೈದರೆ ಮಜಾ ತೆಗೆಕೊಳ್ಳುವ ವಿಚಾರದಲ್ಲಿ ಇದ್ದಿರಬಹುದು". ಆದರೆ ಆದದ್ದೆ ಬೇರೆ ನಾನು ಪಾಠ ಮಾಡಲು ಪ್ರರಂಭಿಸಿದೆ " ಟಿಪ್ಪುವಿನ ಮರಣದ ನಂತರ ಮೈಸೂರು ಹಂಚಿಹೋದ ಬಗೆ ಅದನ್ನು ಒಂದುಗೂಡಿಸಲು ಕರ್ನಾಟಕದ ನಾಯಕರು ಪರಿಶ್ರಮ ...ಎಳೆ ಎಳೆಯಾಗಿ ಬಿಡಿಸಿ ಹೇಳಿದೆ ವಿದ್ಯಾರ್ಥಿಗಳು ಮನಸ್ಸಿನಲ್ಲಿ ಏನೊ ಒಂದು ತರಹ ಸಂತೃಪ್ತಿಯನ್ನು ಕಂಡ ಭಾವ. ಕ್ಲಾಸ್ ನ ಚಿತ್ರಣವೆ ಬದಲಾಗಿ ಹೋಗಿತ್ತು .ಅವರ ತಲೆಯಲ್ಲಿ ಬರಿ ಕರ್ನಾಟಕದ ಏಕೀಕರಣ ಒಂದೆ ತಿರುಗಾಡುತ್ತಿತ್ತು .ಹುಡುಗ ಕೂಗಿದ ಶಬ್ದ ಸಮಾದಿಯಾಗಿತ್ತು.ಇದಕ್ಕೆ ಸಂವಾದಿಯಾಗಿ ಇನ್ನೊಂದು ಘಟನೆಯನ್ನು ಹೇಳಲು ಬಯಸುತ್ತೇನೆ.  ಅದೇನೆಂದರೆ ನಮ್ಮದೆ ಸಂಸ್ಥೆಯ ಒಬ್ಬರು ಉಪನ್ಯಾಸಕರು  ಇದ್ದರು ಅವರು ಅಜಾನುಬಾಹು ವ್ಯಕ್ತಿ ಹೆಸರು ಬೇಡ ಅವರ ಗಾತ್ರ ನೋಡಿ ಅವರಿಗೆ ಗಜ ಎಂಬ ಹೆಸರನ್ನು ಇಟ್ಟಿದ್ದರು ಅದು ಕಾಲೇಜಿನ ವಿದ್ಯಾರ್ಥಿಗಳೆಗೆ ಅಷ್ಟೆ ಅಲ್ಲದೆ ಆ ವಿಷಯ  ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೂ ಹಂಚಿ ಹೋಗಿತ್ತು. ಒಂದು ದಿನ ಅವರು ಬರುವಾಗ ಆ ಕಾಲೇಜಿನಲ್ಲಿ ಇರುವ ಪ್ರೌಢಶಾಲಾ  ಹುಡುಗರ ಗಜ ಗಜ ಎಂದು ಸೂಕ್ಷ್ಮವಾಗಿ  ಕೂಗಬೇಕೆ ? ಅದನ್ನು  ಉಪನ್ಯಾಸಕರು ಕೇಳದಂತ ಜಾಣ ಕುರುಡು ಮಾಡಿದ್ದರೆ ಸರಿಯಾಗುತ್ತಿತ್ತೇನೊ ! ಹುಡುಗರನ್ನು ನಿಲ್ಲಿಸಿ ಹಿಗ್ಗಾ ಮುಗ್ಗಾ ಬೈದು ತರಾಟೆಗೆ ತೆಗೆದುಕೊಂಡು ತಮ್ಮ ಪ್ರತಾಪ ತೋರಿಸಿ ಬಿಟ್ಟರು.ಆದರೆ ಅವರು ಮೊದಲೆ ತಮಗೆ ಸಂಬಂಧವಿಲ್ಲದ ಹೈಸ್ಕೂಲ್ ವಿದ್ಯಾರ್ಥಿಗಳು ಬೇರೆ.. ಬೈದು ಮುಂದೆ ನಡೆಯುವುದು ಒಂದೆ ಬಾಕಿ, ಹುಡುಗರೆಲ್ಲ ಜೋರಾಗಿ ಗಜ ಗಜ ಎಂದು ಜೋರಾಗಿ ಕೂಗಿ ಉಪನ್ಯಾಸಕರಿಗೆ ಇರುಸು ಮುರುಸು ಉಂಟು ಮಾಡಿದರು.ನಾವು ವಸ್ತುಗಳ ಜೊತೆ ಬದುಕುವವರಲ್ಲ ಬದಲಾಗಿ ಜೀವಂತ ಮೂರ್ತಿಗಳ ಜೊತೆ ಬದುಕಿ ಬದುಕು ಕಟ್ಟಿಕೊಡುವವರು ನಮಗೆ ಯಾವುದು ಮುಖ್ಯ ಅಮುಖ್ಯ ಎನ್ನುವುದು ತಿಳಿದಿರಬೇಕು  ಹಾಗಾಗಿ ಅವರು ನಮಗೆ ಹೆಸರು ಇಟ್ಟಿದ್ದಾರೆಂದರೆ ಅದು ಪರಿಣಾಮ ದಿಂದಾಗಿಯೆ ಇರುತ್ತದೆ. ಹಿಟ್ಲರ್ ಎಂದರೆ ಕ್ರೂರ ಸರ್ವಾಧಿಕಾರಿ ಎಂದು ಎಲ್ಲರಿಗೂ ಗೊತ್ತು ಆದರೆ ಅವನ ಜೀವನ ಚರಿತ್ರೆ ಪುಟಗಳನ್ನು ನೋಡಿದರೆ ಬಹಳಷ್ಟು ಸಂಕಷ್ಟದ ಬದುಕು ಸಾಗಿಸಿದವನು ಸೈನಿಕನಾಗಿ ಸೇವೆಗೆ ಸೇರಿ ಒಂದನೇ ಮಹಾಯುಧ್ಧದ ನಂತರ  ವಜಾಗೊಂಡು ಮನೆ ಮನೆಯ ಬಣ್ಣ ಬಳಿದು ಜೀವನ ಸಾಗಿಸಿ ಛಲದಿಂದ ಜರ್ಮನಿಯ ಸರ್ವಾಧಿಕಾರಿ ಯಾದವನು .ಶಿಸ್ತಿನ ಇನ್ನೊಂದು ಹೆಸರಾಗಿದ್ದ ಆತ ಜಗತ್ತಿನ ನಕಾಶೆ ಬದಲಿಸಲು ಹೋಗಿ ದುರಂತದ ಸಾವು ಕಂಡವನು.ಅದೇನೆ ಇರಲಿ ಆತ ಕೆಟ್ಟವನಾದರು ಅತನಲ್ಲಿರುವ ಛಲ ಮತ್ತು ಶಿಸ್ತನ್ನು ನನ್ನ ವಿದ್ಯಾರ್ಥಿಗಳು  ನನ್ನ ಲ್ಲಿ ಕಂಡಿರಬಹುದೆಂದು ನಾನು ಭಾವಿಸಿದ್ದೆನು. ಯಾವದೆ ಒಂದು ನಾಟಕದಲ್ಲಿ ವಿಲನ್ ಪಾತ್ರ ಮಾಡಿದ ಒಬ್ಬರನ್ನು ನಾಟಕ ಮುಗಿದ ಮೇಲೆ ಪ್ರೇಕ್ಷಕರಾಗಿ ಕುಳಿತು ಸ್ತ್ರೀ ಯರು ಬಡಿಯಲು ಹೋಗಿದ್ದರಂತೆ ಕಾರಣ ನಾಟಕದ ನಾಯಕಿ ನಟಿಯನ್ನು ಆತ ಭಯಂಕರ ವಾಗಿ ಕಾಡಿ ಗೋಳು ಹೊಯ್ದುಕೊಂಡಿದ್ದನಂತೆ. ಆಗ ಪಾತ್ರದಾರಿ ನಾಟಕದಲ್ಲಿ ವ್ಹಿಲನ್ ಪಾತ್ರ  ಮಾಡಿದ್ದು ಸಾರ್ಥಕವಾಯಿತು ಎಂದನಂತೆ. ಒಟ್ಟಾರೆಯಾಗಿ ಬೋಧಕನ ಬೋಧನೆ  ಸಾರ್ಥಕವಾಗಬೇಕಾದರೆ ಆತನು ಮಕ್ಕಳ ಮೇಲೆ ವಿಷಯದ ಬೋಧನೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಬದಲಾವಣೆ ತರುವಂತಿರಬೇಕು .

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...