Monday, July 31, 2023

* ಓಡಿದ ಮಳೆರಾಯ*


ಹೆದರಿದನಾ ಮಳೆರಾಯ
ಕಾದಿರುವೆ ಪೂರ್ತಿ ದಿನ। 
ಹೋದವನು ಬರದಿರುವನೆ  
ಕಾದಿರುವೆ ಇದು ಶಬರಿಯ ವನ ॥
ಮೂರಡಿಯು ಇಡದಂತೆ 
ಹಾಕಿದನು ಕಡಿವಾಣ ।
ಆಡಲು ಬಿಡಲೊಲ್ಲ,ಓಡಲು ಬಿಡಲೊಲ್ಲ. 
ಕಾಡಿದನು ಕರಡಿಯಾಡಿಸುವವ
ಮನೆಬಿಡದೆ ಕುಣಿಸಿದಂತೆ
ರಾಡಿಯಾದರೆ ಏನು ,?
ಕದ್ದು ಹೋಗದೆ ನಾನೂ ಬಿಡೆ॥ 
ಅಮ್ಮನದೂ ಅದೆ ಹಾಡು 
ಮಾಡಿಕೊಳ್ಳದಿರು ರಾಡಿ! ಇದ್ದದ್ದೆ ತಡೆ.। 
ಒಮ್ಮೆ ಜಿಟಿ, ಜಿಟಿ, ಇನ್ನೂಮ್ಮೆ ರಪ ರಫಾ, 
ಅಪ್ಪನದೂ ಅದೆ ರಾಗ ತಂದೀತು ಕಫಾ। 
ಕಟ್ಟಿಹಾಕಲು ಕೊಟ್ಟ, ಬಿಟ್ಟಿ ಹುಕಂ,। 
ಸೋಲುವವರಾರು ?
ಕಾಲು ಓಣಿಯ ಪಾಲು
ಅಂಗಿ ದೋಬಿಯ ಪಾಲು ।
ಸೋತದ್ದು ಅಪ್ಪ ,ಅಮ್ಮನಿಗೆ ...ಅಲ್ಲಲ್ಲ ....
ನಮ್ಮ ಮನೆಗೂ ಬಂತು 
ರಂಗು ರಂಗಿನ ಛತ್ರಿ ।
ಅಣ್ಣನಿಗೊಂದು ಅವ್ವನಿಗೂಂದು
ಸವಾಲು ಹಾಕಲು ನನಗೊಂದು।
ನಿನ್ನೆಯಿಂದ ಕಾದದ್ದೆ ಕಾದದ್ದು .
ಮಳೆ ರಾಯ ಹೆದರಿ
ಹಿಡಿದಿರಬೇಕು ಯಾತ್ರೆ . ॥

ಸ್ವದೇಶಿ ಮಂತ್ರ



ಕಾಲದ ನೆರಳಿನಲ್ಲಿ ನೆಲ ಕರಗಿಸಿ 
ಕಾಲೆಳೆಯುವ  ಜಾಲವುಂಟು ಜಗದಲ್ಲಿ।
ಗೆಲವು ಕಾಣಲು ಬಲವೊಂದೆ ಸಾಲದು 
ಛಲದೊಂದಿಗೆ ಬೇಕು ಸ್ವದೇಶಿ ಬಲ॥

ಏರುವದೊಂದೆ ಇಳಿಯಲಲ್ಲ
ಪರರ ಹಂಗು ಗೌರವಕೆ ಕುಂದು 
ಯಾರು ಸಹಿಸಬೇಕು ಈ ತಂತ್ರ 
ಸ್ವದೇಶಿಯೊಂದೆ ಇದಕ್ಕೆ ಮಂತ್ರ॥

ಯಾರು ನಮಗೆ ಹಿರಿಯರಲ್ಲ
ಕಿರಿಯತನದ ಕೀಳುರಮೆ ಸಲ್ಲ।
ಹೊರೆಯಾದರು ಪರವಾಗಿಲ್ಲ
ಸರಕಾಗಲಿ ನಮ್ಮನೆ ನಮ್ಮಿಂದ॥

ಬೆರೆತು ಬಾಳಲೂ ತಿಳಿದಿದೆ
ಮರೆತು ನಡೆಯಲು ಗೊತ್ತಿದೆ। 
ಪಾರತಂತ್ರ್ಯದ ಹೀನ ಬಾಳು 
ಹೊರೆಯಾಗದಿರಲಿ  ತಮ್ಮಿಂದ॥

ಜಗವು ಬಾಳಲೆಲ್ಲರಿಗೂ ದೇವ 
ನೀಡಿದ ಅಭಯ ಕಾಣೋ 
ಅಸಮತೆಗೆ ಜಾಗವಿಲ್ಲ ಹೇಳು
ಜಪವೊಂದೆ ಸ್ವದೇಶಿ ನಮ್ಮಿಂದ॥

 🖋ಬಸನಗೌಡ. ಯ.ಗೌಡರ
  ಉಪನ್ಯಾಸಕರು ಗುಳೇದಗುಡ್ಡ

Tuesday, July 25, 2023

* ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಯಲ್ಲೊಂದು ದಿನ *

* ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಯಲ್ಲೊಂದು ದಿನ *

            ಶಾಖಾಂಬರಿ ಪದವಿ ಪೂರ್ವ ಕಾಲೇಜು, ಕಮತಗಿಯಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ. ಈ ಅಮೋಘ ಕಾರ್ಯಕ್ರಮದ ಅವಿಸ್ಮರಣೀಯ ಸನ್ನಿವೇಶದಲ್ಲೂಂದು ದಿನ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡಿದ ಕಾಲೇಜಿನ ಪ್ರಾಚಾರ್ಯರಾದ ಪಿ ಎಲ್ ನಾಯ್ಕ, ಸರ್. ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸುರೇಶ್ ಭಜಂತ್ರಿ ಸರ್. ಮತ್ತು ಭರಮಣ್ಣವರ್ ಸರ್. ಹಾಗೂ ಸಮಸ್ತ ಕಾಲೇಜಿನ ಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳು.
              ಗುರುಗಳು ಇರುವುದೇ ಮಕ್ಕಳ ಸಮಾರಂಭದಲ್ಲಿ ಬೆರೆತು ಮಗುವಾಗಿ ತೊದಲು ನುಡಿಯಲು ? ಮಗು.... ಎಂದರೆ ನಗು, ನಿಸರ್ಗ. ಆತ ಹಗೆ ಅಳಿಸಿ  ನಗು ತರಸಿ,  ಜಗದೊಳಗೆ ಹೂವು ಬೆಳೆವ ಮಾಲಿ. ಹೂವು ಯಾವುದಾದರೇನು ದೇವರ ಮುಡಿಗೆ.  ಬೆಳೆಸುವದೊಂದೆ ಆತನ ಗುರಿ.ಇಂದು ದಿನಾಂಕ 25.07.2023 ರಂದು ಪ್ರಥಮ ಅವಧಿ ಮುಗಿಸಿ ಕಮತಗಿಯ ದಾರಿ ತುಳಿದಾಗ ವೇಳೆ ಹತ್ತು ಮುಕ್ಕಾಲು. ಮಳೆರಾಯ ಮುಣಿದನೊ, ಹಣಿಯುತ್ತಿದ್ದನೋ ಒಂದು ತಿಳಿಯದು. ಬೈಕು ಏರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರೋಣವೆಂದರೆ ಮಳೆಯಾಯಿತು ನನಗೆ ಮಾರಿ. ಮಾಡುವದಿನ್ನೇನು ಬಸ್ಸೆ ನನಗಾಯಿತು ದಾರಿ. ಆದರೆ ಆದದ್ದೆ ಬೇರೆ,ಮನೆಗೆ ಹೋಗಿ ಛತ್ರಿ ಹಿಡಿದು ಬಂದು ಬಸ್ಸು ಏರಬೇಕೆಂದರೆ ಬಸ್ಸು ಪರಾರಿ ...ಅಲ್ಲಲ್ಲ ನಾನೇ ಸೋಮಾರಿ ಅದನ್ನು ಹಿಡಿಯುವಲ್ಲಿ ನನಗಾಯಿತು ವೇಳೆ ದುಬಾರಿ. ಒಂದೆ ಸೆಕಂಡ್ ನಲ್ಲಿ ಬಸ್ಸು ಮಿಸ್ .ಕೈ, ಕೈ ,ಹಿಚುಕಿಕೊಂಡೆ. ಮಾಡುವದಿನ್ನೇನು ಅದೆ ನನ್ನ ಸ್ಪ್ಲೆಂಡರ ಬೈಕ್ ಏರಿ  ಕಮತಗಿಯ ದಾರಿ ಹಿಡಿದೆ.ದೋ.ದೋ.ಸುರಿಯುವ ವರುಣ ,ಅವನಿಗಿಲ್ಲ ಕರುಣ. ಅದು ರೋಡಲ್ಲ ಹೊಂಡಗಳ ಸಮೂಹ, ಕಂಡ ಕಂಡಲ್ಲಿ ನುಗ್ಗಿ ಆಳ ನೋಡುವು ಮೂಳನಂತೆ ಹಣಕಿ ಹಾಕಿ ಮರಳಿ ಬರುತ್ತಿದ್ದ ನನ್ನ ಎರಡು ಗಾಲಿಯ ದುರುಳ. ಬಹುಶಃ ಪ್ಯಾಂಟು ಏರಸಿ ಗಾಡಿ ಓಡಿಸು ಎಂದಿರಬೇಕು.! ಜರ್ಕಿನ್, ಮೇಲೊಂದು ಛತ್ರಿ ತೋಯಿಸಿಕೊಂಡಿಲ್ಲ ಎನ್ನುವದನ್ನು ಖಾತ್ರಿ ಮಾಡಿಕೊಳ್ಳುತ್ತ ಗಾಡಿ ಓಡಿಸುತ್ತಿದ್ದೆ ಏಕೆಂದರೆ ನಾನು ಹೋಗುತ್ತಿರುವುದು ಮನೆಗಲ್ಲ ,ಹಿತವಚನ ಸಾರುವ ಮತಿಗಳ ಮಹಾವೇದಿಕೆಗೆ. ವೇಳೆ ಬಹಳವಾಗಿದ್ದರಿಂದ ಆಗಲೆ ನಿಧಾನವಾಗಿ ಕಾರ್ಯಕ್ರಮ ಪ್ರಾರಂಭ ಮಾಡಿಯಾಗಿತ್ತು. ಮಂತ್ರಮುಗ್ದರಾಗಿ ಕುಳಿತ ಆ ಮಕ್ಕಳ ಮನದಲ್ಲೊಂದು ಕಾತರ ನಾವು ತಿಳಿಯಬೇಕು ಬೆಳೆಯಬೇಕು. ಮಾತು ಯಾರದಾದರೇನು ಹಿತವಾಗಿರಬೇಕು ಕಥೆಯಾಗಿರಬೇಕು, ಬದುಕು ಕಟ್ಟಿಕೊಳ್ಳಲು ಅದು ಜೊತೆಯಾಗಿರಬೇಕು ಎನ್ನುವುದೊಂದೆ ಅವರ ತವಕ. ಕಾರ್ಯಕ್ರಮ ನಿರೂಪಕರು ಸ್ವಾಗತಿಸಿ ವೇದಿಕೆ ನೀಡಿದಾಗ  ನಾನು ಅವರ ಜೊತೆಯಲ್ಲಿಯೇ ಓಡಿದೆ. ಅಂಕಗಳ ಮಹತ್ವ ಅರ್ಧ ಸತ್ಯ ಎನ್ನುವ ಪರಿಕಲ್ಪನೆಯ ಹಾದಿಯಲ್ಲಿ ಪಠ್ಯೇತರ ಚಟುವಟಿಕೆ ಮಹತ್ವ ಸಾರುತ್ತಾ ಸಾಗಿದೆ.

ನಮಗೀಗ ಹಿಡದಿದೆ ಅಂಕಗಳ ಭೂತ
ಅಮ್ಮನಿಗೆ ನಂಟು, ಅಪ್ಪನಿಗೂ ಉಂಟು।
ಗುರುವಿಗೂ ತಂದು ಹಾಕಿದರು ಗಂಟು ಹಾಕಿಕೊಳ್ಳದಿದ್ದರೆ ಕೇಳುವರು ನೂರೆಂಟು॥

ಗುರು ಮಾಡಿಸಬೇಕು ಬಾಯಿಪಾಠ
ಮಾಡಿಸದಿದ್ದರೆ ಎಲ್ಲರದೂ ಕಾಟ।
ಮಾಡಿದರೆ, ಹುಡುಗರು ಕಂಠಪಾಠ
ನೆನಪಿಡಲು ನಡೆಯುವದು ಪಿಕಲಾಟ॥

ಆಟದಲ್ಲಿಯೂ ಇರುವುದು ಪಾಠ
ಪಾಠ ಮಾಡಿದರಾಗಬಾರದು ಕಾಟ।
ಪಾಠವೇ ಆಗಿರಬೇಕು ಆಟ
ಕನಸು ಕಟ್ಟಲು ಬೇಕು ಪಠ್ಯೇತರ ಓಟ ॥

ಅಂಕವೆ ಶ್ರೇಷ್ಠವೆಂಬ ಭೂತ ಮಿತ್ಯ॥
ಕಲಿಯಬೇಕು ಚಿತ್ರಕಲೆ, ಸಂಗೀತ ನೃತ್ಯ
ಅವುಗಳಿಂದರಳುವದು ವ್ಯಕ್ತಿತ್ವ ಸತ್ಯ।
ನೀನಾಗುವೆ ಬದುಕಲ್ಲಿ ಅಭಿನೇತ್ರಿ ನಿತ್ಯ

ಗಟ್ಟಿಯಾಗುವುದು ದೇಹ
ಬಲಗೊಳ್ಳುವುದು ಮನಸ್ಸು।
ಹೃದಯ ತುಂಬಿ ಭಾವ ಅಲೆಯಾಗಿ
ಕರಗಳ ಬೆರಳಿನಲ್ಲರಳುವುದು ಭವಿಷ್ಯ ॥

ಹೀಗೆ ಸಾಗಿತ್ತು ನನ್ನ ವಾದ ಸರಣಿ .ಗುರಿ ಮತ್ತು ಆದರ್ಶ ವನ್ನಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯಲು ಸಾಧಕರ ಸತತ ಪ್ರಯತ್ನ ,ಪ್ರಯತ್ನದಿಂದ ಪರಿಪೂರ್ಣತೆ ಕಡೆಗೆ ಸಾಗಲು ಮಹಾನ್ ವ್ಯಕ್ತಿಗಳ ಪರಿಚಯ. ಶಿವಾಜಿ, ಹೈದರಾಲಿ, ಅಕ್ಬರ,ವಿಯೆಟ್ನಾಂ ದೇಶಕ್ಕೆ ಸ್ವಾತಂತ್ರ್ಯ ನೀಡಿದ ಹೊಚಿಮಿನ್ ಸಾಹೇಬರು, ಗಾಂಧೀಜಿ, ರಾಜಕುಮಾರ್,ಕ್ರಿಕೆಟ್ ದೇವರೆಂದು ಕರೆಯಿಸಿಕೊಂಡ ಸಚಿನ್ ತಂಡೂಲಕರ ಮುಂತಾದ  ವ್ಯಕ್ತಿ ಚಿತ್ರಗಳ ಮೂಲಕ ಸಾಗಿದೆ. ಅದಕ್ಕೆ ಅಲ್ಲವೆ ಥಾಮಸ್ ಕಾರ್ಲೈಲ "ಮಹಾಪುರುಷರು ಇಂದಿಲ್ಲ, ಆದರೆ ಪ್ರಪಂಚದ ಇತಿಹಾಸ ಮತ್ತು ಮಹಾನ ಪುರುಷರ ಆತ್ಮ ಚರಿತ್ರೆಗಳು ಇನ್ನೂ ಉಳಿದಿವೆ ", ಎಂದದ್ದು. ಆದರೆ ಯಾರು ದೂರ ಸರಿಯಲು ತಯಾರಿಯಿಲ್ಲ ಎಲ್ಲಿಯವರೆಗೆ ಕರೆದುಕೊಂಡು ಹೋಗುವುದು ? ನಿಲ್ದಾಣಕ್ಕೆ ನಾನೇ ಬರಬೇಕಾಯಿತು. ಗಂಟೆ ಒಂದುವರೆ.ಅವರ ತೃಪ್ತಿಯಲ್ಲಿ ನಾನು ಧನ್ಯನಾದೆ ಅವಕಾಶ ನೀಡಿ ಸನ್ಮಾನಿಸಿದ ಶಾಖಾಂಬರಿ ಪದವಿಪೂರ್ವ ಕಾಲೇಜಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಕಾಲೇಜಿನ ಆಡಳಿತವರ್ಗ ,ಸಿಬ್ಬಂದಿ ಬಳಗ ಹಾಗೂ ವಿದ್ಯಾರ್ಥಿಗಳಗೆ ನನ್ನ ಕೃತಜ್ಞತೆಗಳು

Monday, July 24, 2023

* ಕೋಟೆಕಲ್ ದಿಡಗು *

ಗುಳೇದ - ಗುಡ್ಡದ ನೆತ್ತಿಯ ಮೇಲೆ
ಬಿತ್ತು ಮುತ್ತಿನ ಹನಿಯು। 
ಎತ್ತ ಸಾಗವುದು ಗೆಳೆಯ 
ಉತ್ತರಕಿಲ್ಲ ದಾರಿ ॥
ಮತ್ತೆ ತಿರುಗಿದಳು ವೈಯಾರಿ
ಪಶ್ಚಿಮ ದಿಕ್ಕಿಗೆ ತೊರೆಯಾಗಿ॥
ಗುಳೇದಗುಡ್ಡದ ಗೆಳೆಯ 
ಕೋಟಿಯ - ಕಲ್ಲಿನ ಕ್ವಾರಿ.
ಹತ್ತಿ ಇಳಿದಿದೆ ಗುಡ್ಡದ ವಾರಿ।
ಬಿತ್ತು ಲಲನೆ ಜಲಪಾತ ಹಾರಿ॥
ಹಾವಾಗಿ ಹರಿದು, ನವಿಲಾಗಿ ಕುಣಿದು
ಕವಲಾಗಿ ಸುರಿಯುತಿದೆ ದಿಡಗು।
ಕಾಣಬೇಕು ಗೆಳೆಯ, ಏನಿದರ ಬೆಡಗು ! ।
ಕಣ್ಣಿಗೆ ಹಬ್ಬ ನಡೆದವರಿಗೆ ದಿಬ್ಬಣ।
ಕಾಯ್ದವರಿಗಿಲ್ಲ ಕಾಣುವ ಭಾಗ್ಯ ॥
ಮತ್ತೆ ಕಾಣಲು ಬೀಳಬೇಕು 
ಮುತ್ತಿನ ಮಳೆಯು।
ಇವಳು ಕೋಟೆಯ "ಕಲ್ಲಿನ ರಾಣಿ"
ಗುಳೇದಗುಡ್ಡದ "ಮಹಾರಾಣಿ"।
ಬಂದಾಗ ಮಿಂದು, ಜಿಗಿದಾಗ ಕುಣಿದು
ಬೆರೆಯಬೇಕು ಗೆಳೆಯ॥






Saturday, July 15, 2023

* ಪಠ್ಯೇತರ ಚಟುವಟಿಕೆ *

"ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ"
       
         ಇಂದು, ತವರು ಮನೆ ಸೇರಿ ತಾಯಿಯ ಮುಂದೆ ಪಾಯಸ ಸವಿದಂತಹ ಅನುಭವ, ಏಕೆ ಹೇಳಿ ?  ಸುಮಾರು 16 ರಿಂದ 17  ವರ್ಷಗಳ ಹಿಂದೆ ಪ್ರೌಢಶಾಲಾ ಶಾಲಾ ಸಹ ಶಿಕ್ಷಕನಾಗಿ, ಹಿರಿಯ ಶಿಕ್ಷಕನೆಂದು 10 ನೇ ತರಗತಿಯಲ್ಲಿ ಇಂಗ್ಲೀಷ್ ಹಾಗೂ ಸಮಾಜ ವಿಜ್ಞಾನ ಬೋಧಿಸಿದ ಸಮಯ, ಆ ಅವಧಿಯಲ್ಲಿ ಪ್ರಾಚಾರ್ಯರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಹ ನಿರ್ದೇಶಕರಂತಹ ಉನ್ನತ ಹುದ್ದೆಯವರೆಗೆ ಏರಿ ಇಂದು  ನಿವೃತ್ತಿ ಹೊಂದಿರುವ ವಾಯ್ ಎಚ್ ಇಲಾಳ ಅವರಿಂದ ಸೈ ಎನ್ನಿಸಿ ಕೊಂಡ ದಿನ.ಅಂದು ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ನಿಮ್ಮ ಸಲಹೆ ಏನು ಗೌಡರೇ, ಎಂದು ಕೇಳಿದ್ದಕ್ಕೆ ನನ್ನ ಉತ್ತರ "ಪ್ರತಿ ದಿನ ಕ್ವಿಜ್" ಎಂದಿದ್ದೆ, ಅದಕ್ಕೆ ಅವರು ಅದನ್ನು ನೀವು ಮಾಡಿ ನಿಮಗೇನು ಸಹಕಾರ ಬೇಕು ನಾ ಕೊಡುವೆ . ಎಂದು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರು ಮತ್ತು ಫಲಿತಾಂಶವನ್ನೂ ಪಡೆದಾಗಿತ್ತು.ಆ ಪವಿತ್ರ ಶಿಕ್ಷಣ ಸಂಸ್ಥೆಯ ಕರ್ಮ ಭೂಮಿಯಲ್ಲೊಂದು ವೇದಿಕೆಯ ಮುಖ್ಯ ಅತಿಥಿ ಉಪನ್ಯಾಸ. ಅದು ದಕ್ಕಿದ್ದು  ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಪ್ರಾಚಾರ್ಯರಾದ ಮಹೇಶ್ ಜಕ್ಕನ್ನವರ ಹಾಗೂ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಪಾಠಿ, ಇಂದು  ರಾಜ್ಯ ಶಾಸ್ತ್ರದ ಉಪನ್ಯಾಸಕ, ಗೆಳೆಯ ಶ್ರೀಶೈಲ ಮಡಿವಾಳರ ಮತ್ತು 2023-24 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸುನೀಲ ಮಾರುಟಗಿಯವರಿಂದ .ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂದರೆ ಏನು ಮಾಡುವುದು ? ನಮ್ಮ ಸಂಸ್ಥೆಯ ಪ್ರಾಚಾರ್ಯ ಶ್ರೀ ವಿಠ್ಠಲ ಕಳಸಾ ಎಂದೂ ಅಡತಡೆ ಮಾಡಿದವರಲ್ಲ .ಅಂತೆಯೇ ನಾನೂ ಕೂಡಾ ಎಂದೊ ಮಕ್ಕಳ ಪಾಠಕ್ಕೆ ದಕ್ಕೆ ತಂದವನೂ ಅಲ್ಲ  ಅದನ್ನು ದುರುಪಯೋಗ ಮಾಡಿಕೊಳ್ಳುವ ಜಾಯಮಾನವೂ ನನ್ನದಲ್ಲ. ಸಹಪಾಠಿಗಳ ಸಹಕಾರದೊಂದಿಗೆ ನಂತರದ ಅವಧಿಯನ್ನು ಮೊದಲಿನ ಅವಧಿಗೆ ಸರಿದೂಗಿಸಿದೆ. ಗಂಟೆ 12.00 ಅತ್ತಲಿಂದ ಪೋನ್. "ಸರ್, ಬನ್ನಿ ಕಾರ್ಯಕ್ರಮ ತಯಾರಿಯಾಗಿದೆ " ಕೃಷಿಕನ ಎತ್ತು ಸಂಜೆ ಮನೆಯ ಕಡೆ ನಡೆದಂತೆ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ದಾರಿ ತುಳಿದೆ. ಕಸದಲ್ಲಿಯೂ ರಸ ತಗೆಯುವ ಕೌಶಲ್ಯ ಕರಗತ ಮಾಡಿಕೊಂಡವರೆ ಸರಕಾರಿ ಕಾಲೇಜಿನ ಶಿಕ್ಷಕರು.ಇವರೆ ಅಲ್ಲವೆ  ಇಲ್ಲಗಳ ನಡುವೆಯೇ ಎಲ್ಲವನ್ನೂ ತೋರಿಸುವ ಬಲ್ಲ ಗುರುಗಳು .ಇವರ ಮಾರ್ಗದರ್ಶನದಲ್ಲಿ ನಡೆಯುವ 500 ವಿದ್ಯಾರ್ಥಿನಿಯರು ಓದುವ ಕಾಲೇಜು.  ಲಕ್ಷ ಫೀ ತುಂಬಿ ಕಲಿಯುವ ವಿದ್ಯಾರ್ಥಿಗಳಿಗೆ ನಾವೇನು ಕಡಿಮೆ ಎನ್ನುವ ಆತ್ಮವಿಶ್ವಾಸದ ಬೀಡದು.ಅಂತಹ ವಿದ್ಯಾ ಸಂಸ್ಥೆಯ ಬಾಗಿಲು ತುಳಿದಾಗ ಯಾವುದೊ ದೇವಸ್ಥಾನದ ಬಾಗಿಲು ದಾಟಿದಂತಹ ಅನುಭವ ಅದಕ್ಕೆ ಅಲ್ಲವೆ  ಪ್ರಾಜ್ಞರು  "ಇದು ವಿದ್ಯಾ ತಪಸ್ಸಿನ ತಾಣ ಕೈ ಮುಗಿದು ಒಳಗೆ ಬಾ ಜಾಣ " ಎಂದದ್ದು .ಸುಶ್ರಾವ್ಯವಾಗಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಪಠ್ಯೇತರ ಚಟುವಟಿಕೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾಂಭ ಹಬ್ಬದ ಕಳೆಗಟ್ಟಿತ್ತು ನಾನು ಮುಖ್ಯ ಅತಿಥಿ, ಔಪಚಾರಿಕ ಮಾತ್ರ .ಉಪನ್ಯಾಸಕರ ಮಾತನ್ನು ಮೀರಿದ ಹಿತವಚನವನ್ನು ಹೇಳಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮಾತುಗಳು  ನನಗೂ ದಾರಿ ತೋರಿಸುವಂತಿದ್ದವು. ಧನಾತ್ತಕ ಚಿಂತನೆಯ ಅವರ ಮಂತ್ರ, ಪ್ರಥಮ ಪಿಯುಸಿಯವರಿಗೆ ನೀಡಿದ ಸಲಹೆ, ಇಡಿ ಕಾಲೇಜಿನ ಸಂಸ್ಕಾರದ ಅನಾವರಣವಾಗಿತ್ತು. ಭರತನಾಟ್ಯದ ಮೂಲಕ ಮನಸೂರೆಗೊಂಡ ವಿದ್ಯಾರ್ಥಿಗಳಿಗೆ ನಾ ಕೇಳಿದೆ, ಗುರು ಯಾರು ? ಅವರಿಗೆ ಅವ್ವನೆ ಗುರವಂತೆ ಪಠ್ಯೇತರ ಚಟುವಟಿಕೆ ಎಂದರೆ ಇದೆ ಅಲ್ಲವೆ? ಇದು  ಒಂದು ಕಡಯಾದರೆ .ಭಾವೈಕ್ಯತೆ ಸಾರುವ ಸುಶ್ರಾವ್ಯವಾದ ಭಾವಗೀತೆಗೆ ಹೊವಿನಂತೆ ಅರಳಿದ ಮುಖಭಾವಗಳು, ಜಾತಿ, ಧರ್ಮಗಳಾಚೆ ಶಾಂತಿ ಸೌಹಾರ್ದತೆಯ ಮುಂಗಾರು ಸಿಂಚನವಾಗಿತ್ತು.  ವೇದಿಕೆಗೆ ಹೋಗುವ ಪೂರ್ವದಲ್ಲಿ ಕಾಲೇಜಿನ ಪ್ರಾಚಾರ್ಯರು ಹೇಳಿದ ಮಾತು ಈಗ ರುಜುವಾತಾಗಿತ್ತು. ಕಾಲೇಜಿಗೆ ಒಮ್ಮೆ ಒಳಬಂದರೆ ಮಧ್ಯದಲ್ಲಿ  ಹೊರಹೋಗಬೇಕಾದರೆ  ಪ್ರತಿನಿಧಿ ಇಲ್ಲವೆ ಉಪನ್ಯಾಸಕರ ಒಪ್ಪಿಗೆ ಪಡೆದು ಸಹಿ ಹಾಕಿಯೆ ಹೋಗಬೇಕು ಎನ್ನುವ ಅವರು ಶಿಸ್ತಿನ ಮಾತು ಸಂಸ್ಕಾರವಲ್ಲದೆ ಇನ್ನೇನು.ಅದಕ್ಕೆ ಹೇಳುವುದು "As is the Principal so is the college " ಎಂದು ಅಂಕಗಳ ಅಡಿಯಾಳಾಗಿರುವ ಸಮಾಜದಲ್ಲಿ ಆಂತರಿಕ ಶಿಸ್ತನ್ನು ರೂಢಿಸಿಕೊಳ್ಳುವಂತೆ ಮಾಡಿದ ಪ್ರಾಚಾರ್ಯ ಮಹೇಶ್ ಜಕ್ಕನ್ನವರ ಹಾಗೂ ಅವರ ಸಿಬ್ಬಂದಿಯ ವರಿಗೆ ನನ್ನದೊಂದು ಪ್ರೀತಿಯ ಸಲಾಮು. ನಾನು ಎಷ್ಟರ ಮಟ್ಟಿಗೆ ಅವರೊಂದಿಗೆ ವಿಚಾರಗಳನ್ನು ಹಂಚಿಕೊಂಡು ಅವರ ಹತ್ತಿರ ಹೋದೆನೋ ನನಗೆ ಗೊತ್ತಿಲ್ಲ ,ಆದರೆ ಅವರು ನನಗೆ ಸನ್ಮಾನಿಸಿ ಗೌರವಿಸಿದ ಉಪಕಾರಕ್ಕೆ ನಾನು ಕೃತಜ್ಞತೆಯ ಭಾವದಿಂದ ಹೃದಯ ತುಂಬಿ ಶಿರಬಾಗುವೆ.

Friday, July 14, 2023

* ಅಂಕಗಳ ಭೂತ *

ನಮಗೀಗ ಹಿಡದಿದೆ ಅಂಕಗಳ ಭೂತ
ಅಮ್ಮನಿಗೆ ನಂಟು, ಅಪ್ಪನಿಗೂ ಉಂಟು।
ಗುರುವಿಗೂ ತಂದು ಹಾಕಿದರು ಗಂಟು ಹಾಕಿಕೊಳ್ಳದಿದ್ದರೆ ಕೇಳುವರು ನೂರೆಂಟು॥

ಗುರು ಮಾಡಿಸಬೇಕು ಬಾಯಿಪಾಠ
ಮಾಡಿಸದಿದ್ದರೆ ಎಲ್ಲರದೂ ಕಾಟ।
ಮಾಡಿದರೆ ಹುಡುಗರು ಕಂಠಪಾಠ
ನೆನಪಿಡಲು ನಡೆಯುವದು ಪಿಕಲಾಟ॥

ಆಟದಲ್ಲಿಯೂ ಇರುವುದು ಪಾಠ
ಪಾಠ ಮಾಡಿದರಾಗಬಾರದು ಕಾಟ।
ಪಾಠವೇ ಆಗಿರಬೇಕು ಆಟ
ಕನಸು ಕಟ್ಟಲು ಬೇಕು ಪಠ್ಯೇತರ ಓಟ ॥

ಅಂಕವೆ ಶ್ರೇಷ್ಠವೆಂಬ ಭೂತ ಮಿತ್ಯ॥
ಕಲಿಯಬೇಕು ಚಿತ್ರಕಲೆ, ಸಂಗೀತ ನೃತ್ಯ
ಅವುಗಳಿಂದರಳುವದು ವ್ಯಕ್ತಿತ್ವ ಸತ್ಯ।
ನೀನಾಗವೆ ಬದುಕಲ್ಲಿ ಅಭಿನೇತ್ರಿ ನಿತ್ಯ

ಗಟ್ಟಿಯಾಗುವುದು ದೇಹ
ಬಲಗೊಳ್ಳುವುದು ಮನಸ್ಸು।
ಹೃದಯ ತುಂಬಿ ಭಾವ ಅಲೆಯಾಗಿ
ಕರಗಳ ಬೆರಳಿನಲ್ಲರಳುವುದು ಭವಿಷ್ಯ ॥
 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...