* ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಯಲ್ಲೊಂದು ದಿನ *
ಶಾಖಾಂಬರಿ ಪದವಿ ಪೂರ್ವ ಕಾಲೇಜು, ಕಮತಗಿಯಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ. ಈ ಅಮೋಘ ಕಾರ್ಯಕ್ರಮದ ಅವಿಸ್ಮರಣೀಯ ಸನ್ನಿವೇಶದಲ್ಲೂಂದು ದಿನ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡಿದ ಕಾಲೇಜಿನ ಪ್ರಾಚಾರ್ಯರಾದ ಪಿ ಎಲ್ ನಾಯ್ಕ, ಸರ್. ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸುರೇಶ್ ಭಜಂತ್ರಿ ಸರ್. ಮತ್ತು ಭರಮಣ್ಣವರ್ ಸರ್. ಹಾಗೂ ಸಮಸ್ತ ಕಾಲೇಜಿನ ಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳು.
ಗುರುಗಳು ಇರುವುದೇ ಮಕ್ಕಳ ಸಮಾರಂಭದಲ್ಲಿ ಬೆರೆತು ಮಗುವಾಗಿ ತೊದಲು ನುಡಿಯಲು ? ಮಗು.... ಎಂದರೆ ನಗು, ನಿಸರ್ಗ. ಆತ ಹಗೆ ಅಳಿಸಿ ನಗು ತರಸಿ, ಜಗದೊಳಗೆ ಹೂವು ಬೆಳೆವ ಮಾಲಿ. ಹೂವು ಯಾವುದಾದರೇನು ದೇವರ ಮುಡಿಗೆ. ಬೆಳೆಸುವದೊಂದೆ ಆತನ ಗುರಿ.ಇಂದು ದಿನಾಂಕ 25.07.2023 ರಂದು ಪ್ರಥಮ ಅವಧಿ ಮುಗಿಸಿ ಕಮತಗಿಯ ದಾರಿ ತುಳಿದಾಗ ವೇಳೆ ಹತ್ತು ಮುಕ್ಕಾಲು. ಮಳೆರಾಯ ಮುಣಿದನೊ, ಹಣಿಯುತ್ತಿದ್ದನೋ ಒಂದು ತಿಳಿಯದು. ಬೈಕು ಏರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರೋಣವೆಂದರೆ ಮಳೆಯಾಯಿತು ನನಗೆ ಮಾರಿ. ಮಾಡುವದಿನ್ನೇನು ಬಸ್ಸೆ ನನಗಾಯಿತು ದಾರಿ. ಆದರೆ ಆದದ್ದೆ ಬೇರೆ,ಮನೆಗೆ ಹೋಗಿ ಛತ್ರಿ ಹಿಡಿದು ಬಂದು ಬಸ್ಸು ಏರಬೇಕೆಂದರೆ ಬಸ್ಸು ಪರಾರಿ ...ಅಲ್ಲಲ್ಲ ನಾನೇ ಸೋಮಾರಿ ಅದನ್ನು ಹಿಡಿಯುವಲ್ಲಿ ನನಗಾಯಿತು ವೇಳೆ ದುಬಾರಿ. ಒಂದೆ ಸೆಕಂಡ್ ನಲ್ಲಿ ಬಸ್ಸು ಮಿಸ್ .ಕೈ, ಕೈ ,ಹಿಚುಕಿಕೊಂಡೆ. ಮಾಡುವದಿನ್ನೇನು ಅದೆ ನನ್ನ ಸ್ಪ್ಲೆಂಡರ ಬೈಕ್ ಏರಿ ಕಮತಗಿಯ ದಾರಿ ಹಿಡಿದೆ.ದೋ.ದೋ.ಸುರಿಯುವ ವರುಣ ,ಅವನಿಗಿಲ್ಲ ಕರುಣ. ಅದು ರೋಡಲ್ಲ ಹೊಂಡಗಳ ಸಮೂಹ, ಕಂಡ ಕಂಡಲ್ಲಿ ನುಗ್ಗಿ ಆಳ ನೋಡುವು ಮೂಳನಂತೆ ಹಣಕಿ ಹಾಕಿ ಮರಳಿ ಬರುತ್ತಿದ್ದ ನನ್ನ ಎರಡು ಗಾಲಿಯ ದುರುಳ. ಬಹುಶಃ ಪ್ಯಾಂಟು ಏರಸಿ ಗಾಡಿ ಓಡಿಸು ಎಂದಿರಬೇಕು.! ಜರ್ಕಿನ್, ಮೇಲೊಂದು ಛತ್ರಿ ತೋಯಿಸಿಕೊಂಡಿಲ್ಲ ಎನ್ನುವದನ್ನು ಖಾತ್ರಿ ಮಾಡಿಕೊಳ್ಳುತ್ತ ಗಾಡಿ ಓಡಿಸುತ್ತಿದ್ದೆ ಏಕೆಂದರೆ ನಾನು ಹೋಗುತ್ತಿರುವುದು ಮನೆಗಲ್ಲ ,ಹಿತವಚನ ಸಾರುವ ಮತಿಗಳ ಮಹಾವೇದಿಕೆಗೆ. ವೇಳೆ ಬಹಳವಾಗಿದ್ದರಿಂದ ಆಗಲೆ ನಿಧಾನವಾಗಿ ಕಾರ್ಯಕ್ರಮ ಪ್ರಾರಂಭ ಮಾಡಿಯಾಗಿತ್ತು. ಮಂತ್ರಮುಗ್ದರಾಗಿ ಕುಳಿತ ಆ ಮಕ್ಕಳ ಮನದಲ್ಲೊಂದು ಕಾತರ ನಾವು ತಿಳಿಯಬೇಕು ಬೆಳೆಯಬೇಕು. ಮಾತು ಯಾರದಾದರೇನು ಹಿತವಾಗಿರಬೇಕು ಕಥೆಯಾಗಿರಬೇಕು, ಬದುಕು ಕಟ್ಟಿಕೊಳ್ಳಲು ಅದು ಜೊತೆಯಾಗಿರಬೇಕು ಎನ್ನುವುದೊಂದೆ ಅವರ ತವಕ. ಕಾರ್ಯಕ್ರಮ ನಿರೂಪಕರು ಸ್ವಾಗತಿಸಿ ವೇದಿಕೆ ನೀಡಿದಾಗ ನಾನು ಅವರ ಜೊತೆಯಲ್ಲಿಯೇ ಓಡಿದೆ. ಅಂಕಗಳ ಮಹತ್ವ ಅರ್ಧ ಸತ್ಯ ಎನ್ನುವ ಪರಿಕಲ್ಪನೆಯ ಹಾದಿಯಲ್ಲಿ ಪಠ್ಯೇತರ ಚಟುವಟಿಕೆ ಮಹತ್ವ ಸಾರುತ್ತಾ ಸಾಗಿದೆ.
ನಮಗೀಗ ಹಿಡದಿದೆ ಅಂಕಗಳ ಭೂತ
ಅಮ್ಮನಿಗೆ ನಂಟು, ಅಪ್ಪನಿಗೂ ಉಂಟು।
ಗುರುವಿಗೂ ತಂದು ಹಾಕಿದರು ಗಂಟು ಹಾಕಿಕೊಳ್ಳದಿದ್ದರೆ ಕೇಳುವರು ನೂರೆಂಟು॥
ಗುರು ಮಾಡಿಸಬೇಕು ಬಾಯಿಪಾಠ
ಮಾಡಿಸದಿದ್ದರೆ ಎಲ್ಲರದೂ ಕಾಟ।
ಮಾಡಿದರೆ, ಹುಡುಗರು ಕಂಠಪಾಠ
ನೆನಪಿಡಲು ನಡೆಯುವದು ಪಿಕಲಾಟ॥
ಆಟದಲ್ಲಿಯೂ ಇರುವುದು ಪಾಠ
ಪಾಠ ಮಾಡಿದರಾಗಬಾರದು ಕಾಟ।
ಪಾಠವೇ ಆಗಿರಬೇಕು ಆಟ
ಕನಸು ಕಟ್ಟಲು ಬೇಕು ಪಠ್ಯೇತರ ಓಟ ॥
ಅಂಕವೆ ಶ್ರೇಷ್ಠವೆಂಬ ಭೂತ ಮಿತ್ಯ॥
ಕಲಿಯಬೇಕು ಚಿತ್ರಕಲೆ, ಸಂಗೀತ ನೃತ್ಯ
ಅವುಗಳಿಂದರಳುವದು ವ್ಯಕ್ತಿತ್ವ ಸತ್ಯ।
ನೀನಾಗುವೆ ಬದುಕಲ್ಲಿ ಅಭಿನೇತ್ರಿ ನಿತ್ಯ
ಗಟ್ಟಿಯಾಗುವುದು ದೇಹ
ಬಲಗೊಳ್ಳುವುದು ಮನಸ್ಸು।
ಹೃದಯ ತುಂಬಿ ಭಾವ ಅಲೆಯಾಗಿ
ಕರಗಳ ಬೆರಳಿನಲ್ಲರಳುವುದು ಭವಿಷ್ಯ ॥
ಹೀಗೆ ಸಾಗಿತ್ತು ನನ್ನ ವಾದ ಸರಣಿ .ಗುರಿ ಮತ್ತು ಆದರ್ಶ ವನ್ನಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯಲು ಸಾಧಕರ ಸತತ ಪ್ರಯತ್ನ ,ಪ್ರಯತ್ನದಿಂದ ಪರಿಪೂರ್ಣತೆ ಕಡೆಗೆ ಸಾಗಲು ಮಹಾನ್ ವ್ಯಕ್ತಿಗಳ ಪರಿಚಯ. ಶಿವಾಜಿ, ಹೈದರಾಲಿ, ಅಕ್ಬರ,ವಿಯೆಟ್ನಾಂ ದೇಶಕ್ಕೆ ಸ್ವಾತಂತ್ರ್ಯ ನೀಡಿದ ಹೊಚಿಮಿನ್ ಸಾಹೇಬರು, ಗಾಂಧೀಜಿ, ರಾಜಕುಮಾರ್,ಕ್ರಿಕೆಟ್ ದೇವರೆಂದು ಕರೆಯಿಸಿಕೊಂಡ ಸಚಿನ್ ತಂಡೂಲಕರ ಮುಂತಾದ ವ್ಯಕ್ತಿ ಚಿತ್ರಗಳ ಮೂಲಕ ಸಾಗಿದೆ. ಅದಕ್ಕೆ ಅಲ್ಲವೆ ಥಾಮಸ್ ಕಾರ್ಲೈಲ "ಮಹಾಪುರುಷರು ಇಂದಿಲ್ಲ, ಆದರೆ ಪ್ರಪಂಚದ ಇತಿಹಾಸ ಮತ್ತು ಮಹಾನ ಪುರುಷರ ಆತ್ಮ ಚರಿತ್ರೆಗಳು ಇನ್ನೂ ಉಳಿದಿವೆ ", ಎಂದದ್ದು. ಆದರೆ ಯಾರು ದೂರ ಸರಿಯಲು ತಯಾರಿಯಿಲ್ಲ ಎಲ್ಲಿಯವರೆಗೆ ಕರೆದುಕೊಂಡು ಹೋಗುವುದು ? ನಿಲ್ದಾಣಕ್ಕೆ ನಾನೇ ಬರಬೇಕಾಯಿತು. ಗಂಟೆ ಒಂದುವರೆ.ಅವರ ತೃಪ್ತಿಯಲ್ಲಿ ನಾನು ಧನ್ಯನಾದೆ ಅವಕಾಶ ನೀಡಿ ಸನ್ಮಾನಿಸಿದ ಶಾಖಾಂಬರಿ ಪದವಿಪೂರ್ವ ಕಾಲೇಜಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಕಾಲೇಜಿನ ಆಡಳಿತವರ್ಗ ,ಸಿಬ್ಬಂದಿ ಬಳಗ ಹಾಗೂ ವಿದ್ಯಾರ್ಥಿಗಳಗೆ ನನ್ನ ಕೃತಜ್ಞತೆಗಳು