Tuesday, June 18, 2024

ಎನ್ ಎಸ್ ಹಿರೇಮಠರ ಬೀಳ್ಕೊಡುಗೆ

ನಗು ಮುಖದ ನಾಗಯ್ಯ
ನೆತ್ತಿಯ ಬುತ್ತಿಗೆ ಸುತ್ತಿದ ಹತ್ತೂರು।
ಬತ್ತಲಿಲ್ಲ ಜ್ಞಾನದ ಚಿತ್ತ ।
ಮತ್ತೆ ಹೆಡೆ ಬಿಚ್ಚಿದ 
ಎರಡನೆಯ ಗುರುವಾಗಿ॥

ಕಿತ್ತು ತಿನ್ನುವ ಬಡತನ 
ಹತ್ತಲಿಲ್ಲ ಶೋಕಿಯ ದಾರಿ ।
ಚಿತ್ತ ಒಂದೆ... ಸಾಗಿದನು 
ಕನಸುಗಳು ಬೆನ್ನೇರಿ ॥
ದುಡಿಮೆ,ಕಲಿಕೆ ಎಲ್ಲಾ ತರಹೇವಾರಿ॥

ಹೊಲವಿಲ್ಲದ ಹೈದ ನೆಲೆಯೇನು ಕಂಡಾನು 
ಮೊಲದಂತೆ ಓಡುಬಲ್ಲನೇ ದೂರ ।
ಸುತ್ತಲೂ ಕುಹಕಗಳ ಮಳೆ
ಬತ್ತಲಿಲ್ಲ ಉತ್ಸಾಹದ ಚಿಲುಮೆ।
ಬಿತ್ತಿದ ಬೆವರ ಹನಿ 
ಎತ್ತಿದ.... ಬಂಗಾರದಂತ ಹೊಲ॥

ಮಾಡಿದ ಚಿಂತನ,.... ಪಡೆದ 
ನೂತನ ಮಾರ್ಗ॥
ಬಿತ್ತಿದ ಅರಿವಿನ ಬೀಜ 
ಹರಗಿದ ಸಂಸ್ಕಾರದ ನೆಲ
ತೆಗೆದ ಸುಜ್ಞಾನದ ಫಲ।

ನಿಲುಕದ ಮರದಲ್ಲಿ 
ಫಲ ಕಿತ್ತ ಪ್ರವೀಣ 
ಛಲವೊಂದೆ ಕುಲ ....! ಕಲಿತ 
ವಿದ್ಯೆಯೆಂಬ ಆನೆಯ ಬಲ,
ಸದ್ದಲ್ಲದೆ ಬಂತು... ಸಂಪತ್ತು 
ಗೆದ್ದು ಬೀಗುತಿರುವನಿವತ್ತು॥

ತಿರುಗುವದು ಕಾಲಚಕ್ರ 
ಒಮ್ಮೆಉಪ್ಪರಗಿ ಮತ್ತೊಮ್ಮೆ ತಿಪ್ಪೆ 
ಒಪ್ಪಿ ನಡೆದವನೀಗ ಎಲ್ಲರಿಗೂ ಹಿರಿಯ



Saturday, June 15, 2024

*ಹಾಲಹಂಡೆ *



ನನ್ನ ಹೊನ್ನ ಹಾನಾಪೂರ 
ತನ್ನೊಡಲೊಳಗೊಂದು 
ಪ್ರಕೃತಿಯ ವಿಸ್ಮಯ ಮಡಗಿದೆ ಇಲ್ಲಿ ।
ಬನ್ನಿರೋ ಈ  ಪುರಕೊಮ್ಮೆ ಬಾಗಿ . 
ಇದರ ಇನ್ನೊಂದು ಗೆಳತಿಯೇ 
"ಕೆರೆ ಖಾನಾಪೂರ ".
ಅದರ ಉತ್ತರಕೊಂದು ಪರ್ವತಿ ಪುರ....!
ಇವೆರಡೂ ಪುರಗಳಿಗಿದಾಗಿದೆ 
ಸಮ್ಮತ್ (ಎಸ್ ಪಿ) ಪುರ ! 
ಇದರ ದಕ್ಷಿಣದ ದಿಕ್ಕಿಗೆ ನಡೆದರೆ ಸಿಗುವವು 
ಅಕ್ಕ ತಂಗಿ,ಹಾಲ ಹಂಡೆ ಜಲಪಾತಗಳ ಗಣ.
ಚಾರಣಿಗರಗಿವು ಹೇಳಿ ಮಾಡಿಸಿದ ತಾಣ.
ಗುಳೇದಗುಡ್ಡದ ದಕ್ಷಿಣ ದಿಕ್ಕಿಗೆ 
ನಡೆಯಬೇಕು ನಾಲ್ಕೈದು ಕಿಲೋ ಮೀಟರ್  
ಬುತ್ತಿ ಕಟ್ಟಿ ಪೂರ್ತಿದಿನ .
ಬಂಡೆಗಳು ಕೂಡಾ ಹೇಳುತ್ತವೆ. 
ಬಂಗಾರದಂತಹ ಕಥೆ !
ಸುಂದರವಾದದ್ದು ಅಂದರೆ
ಬಂಗಲೆಗಳು ಅಷ್ಟೇ ಅಲ್ಲ ಕಣೋ !
ಬಾಗಿ ನಿಂತು ಬೀಗುವ  
ಹಿರಿ ಬಂಡೆಗಳಿಗೂ ಉಂಟು  
ಬಡಿವಾರದ ಬದುಕು ಅನುದಿನ....
ನರಿ ನಾಯಿ, ನವಿಲುಗಳಿಗೂ...! 
ಗುಬ್ಬಿ ಗೀಜಗ ಗೊರವಂಕಗಳಿಗೂ
ಉಬ್ಬಿ ನಡೆಯುವ ಸ್ವಾತಂತ್ರ್ಯ ಉಂಟು
ತಬ್ಬಿಕೊಂಡು ನಡೆಯುವ 
ದಿಬ್ಬಗಳಿಗೂ ತಾಳ್ಮೆ ಏನು ಕಡಿಮೆಯೇ.?
ಭೇದವಿಲ್ಲ.... ನಮ್ಮವರೆ... ನಮ್ಮವರೇ ! 
ಎಲ್ಲರೂ ಗೂಡು ಕಟ್ಟಿ ಹಾಡುವವರೇ !
ಕಿತ್ತುಕೊಳ್ಳಲು ನೀವೆ ಬರಬೇಕು ಅಲ್ಲಿ.
ಮಳೆಯಾದರೆ ಸಾಕು, ಹಂಡೆದಂತಹ ಹೊಂಡದಲ್ಲಿ
ಉತ್ತರ ದಿಕ್ಕಿಗೆ ಕಿತ್ತು ಹಾರುವವು 
ಹಾಲಿನಂತಹ ನೊರೆ ಹಾಲು ಕೆನೆ .
ಬರದೆ ಹರಟೆ ಹೊಡೆದರೇನು ಮಾಡುವದು ? 
ಮತ್ತೆ ನೀವು ಕಾಯಬೇಕು 
ಮಳೆರಾಯ ಬುತ್ತಿ ಬಿಚ್ಚೊ ತನಕ.
ಜೋಗಕ್ಕೆ ಹೋಗಲು ಯೋಗ ಬೇಕು 
ಹಾಲಹಂಡೆಯಲ್ಲಿಳಿಯಲು ಗುಂಡಿಗೆ ಬೇಕು.
ಕಣ್ಣು ತುಂಬಿಕೊಳ್ಳುವ ಮನಸ್ಸಿದ್ದರೇ ?
ಗಂಜಿಕೆರೆ ದಾಟಿ ,ಹೊಂಗೆ ಮರದಲ್ಲಿ ಬಾಗಿ
ಅಂಜದೆ ಕೊಳ್ಳದ ನಡುವೆ ನಡೆದರೆ 
ಸಂಜೆಯೊಳಗಾಗಿ ಸ್ವರ್ಗ ಕಾಣುವಿರಿ
ದೇವರಾಣೆ ? ಇದು ಸತ್ಯ...ಸತ್ಯ ....🙏🙏🙏🙏🙏

https://www.facebook.com/share/r/7Bhq6uFbSLMvRqY1/?mibextid=oFDknk

Sunday, June 2, 2024

ಗೆಳೆಯರ ಬಳಗ ಹಾಗೂ ಆಡಿನ ಕುಟುಂಬದವರನೇತೃತ್ವದಲ್ಲಿ ಹಮ್ಮಿಕೊಂಡ ನಿವೃತ್ತರಿಗೆ ಸನ್ಮಾನದ ಕಾರ್ಯಕ್ರಮದಲ್ಲೊಂದು ಸುತ್ತು.

ಗೆಳೆಯರ ಬಳಗ ಹಾಗೂ ಆಡಿನ ಕುಟುಂಬದವರ
ನೇತೃತ್ವದಲ್ಲಿ ಹಮ್ಮಿಕೊಂಡ ನಿವೃತ್ತರಿಗೆ ಸನ್ಮಾನದ ಕಾರ್ಯಕ್ರಮದಲ್ಲೊಂದು ಸುತ್ತು.
          ಧಾರವಾಡದ ಸಾಧನಕೇರಿಯಲ್ಲಿ ನಿಂತು ಒಂದು ಕಲ್ಲು ಒಗೆದರೆ ಅದು ಒಬ್ಬ ಕವಿಯ ಮೇಲೆ ಬೀಳುತ್ತದೆ ಎನ್ನುವ ಮಾತೊಂದಿದೆ.  ಹಾಗೆಯೇ ಗುಳೇದಗುಡ್ಡದ ಪಕ್ಕದಲ್ಲಿರುವ  ಶಿರೂರಿನಲ್ಲಿ ಒಂದು ಕಲ್ಲು ಒಗೆದರೆ ಅದು ಒಬ್ಬ ಕೆ ಎಸ್ ಆರ್ ಟಿ ಸಿ ನೌಕರನ ಮೇಲೆ ಬೀಳುತ್ತದೆ ಎನ್ನುವಷ್ಟು ಡ್ರೈವರ ಕಂಡಕ್ಟರ್  ಶಿರೂರನಲ್ಲಿ ಇದ್ದಾರೆ ಅನ್ನುವುದು ವಿಶೇಷ. ಆದರೆ ಇತ್ತೀಚೆಗೆ ಎಲ್ಲಾ ಹುದ್ದೆಗಳಲ್ಲೂ ಅದ್ಭುತವಾದ ಸಾಧನೆ ಮಾಡಿದವರೂ ಇದ್ದಾರೆ ಆ ಮಾತು ಬೇರೆ.
      ಇವತ್ತಿನ ದಿನ ಕೆ ಎಸ್ ಆರ್ ಟಿ ಸಿ ಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ  ನಿವೃತ್ತರಾದ ಮಲ್ಲಪ್ಪ ಆಡಿನ ರವರ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರಕಿತು . ಅದನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದೆ. ಮುಲ್ಲಾಸಾಬಿಗೂ ಗೋಕುಲಾಷ್ಟಮಿಗೂ  ಏನು ಸಂಬಂಧ ಎನ್ನುವಂತೆ ಗೌಡರ ಸರ್,  ಇಲ್ಲಿ ? ಎನ್ನುವ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಸಾಲು ಬರೆಯಲು ಪ್ರಾರಂಭಿಸಿದೆ. ಅದಕ್ಕಾಗಿ ಈ ನಾಲ್ಕು ಸಾಲುಗಳು. ನಮ್ಮದೆ ಸಂಸ್ಥೆಯಲ್ಲಿ ಎನ್ ಎಸ್ ಹಿರೇಮಠ ಸಮಾಜ ಶಾಸ್ತ್ರ ಉಪನ್ಯಾಸಕರು ಮೇ  31 ರಂದು ನಿವೃತ್ತಿಯಾದರು, ಅವರೂ ಮೂಲತಃ ಶಿರೂರನವರೆ .ಅಲ್ಲದೆ ಗೆಳೆಯರ ಬಳಗದಲ್ಲಿರುವ ಬಹುತೇಕರು ಅಂದರೆ.ನಿವೃತ್ತ ಸಮಾಜಶಾಸ್ತ್ರ ಉಪನ್ಯಾಸಕರಾದ  ಡಾ॥ ಸಿ ಎಮ್ ಜೋಶಿಯವರು ,ಡಾ॥ಭೀಮನಗೌಡ ಪಾಟೀಲ, ಸಂಗಮ ಸರ್, ಡಾ।ಸಂತೋಷ ಕಾಳನ್ನವರು ,ಹೆಚ್ ಎಸ್ ಘಂಟಿ, ಸಣ್ಣ ವೀರಣ್ಣ ದೊಡಮನಿಯಂತಹ  ಘಟಾನುಗಟಿ ಹಿರಿಯರಿರುವ ,ನಮ್ಮ ಪರಮಾಪ್ತರೇ ಸೇರಿದ ಈ ಸಮಾರಂಭದಲ್ಲಿ  ಭಾಗವಹಿಸಲು ನಮಗೂ ಒಂದು ಅವಕಾಶವು ನಮ್ಮದೆ ಸಂಸ್ಥೆಯಿಂದ ಸನ್ಮಾನಿಸಲ್ಪಡುವ ನಾಗಯ್ಯ ಹಿರೇಮಠರಿಂದ ನಮಗೆ ದೊರಕಿತ್ತು, ಹಾಗಾಗಿ ನಾರು ಹೂವಿನ ಸಂಘ ಮಾಡಿ ದೇವರಿಗೆ ಏರಿತು ಎನ್ನುವ ಹಾಗೆ ಈ ರವಿವಾರ ಸಾರ್ಥಕವಾಯಿತು.
       ಸರಕಾರಿ ಇಲಾಖೆ ಯಾವುದಾದರೇನು ! ಅರವತ್ತು ವರ್ಷಕ್ಕೆ ಆಚೆ ಬರಲೆಬೇಕು ಇದು ನಿಯಮ. ಆದರೆ ಹೇಗೆ ಬಂದರು ಎನ್ನುವುದೇ ಮುಖ್ಯವಾದ ವಿಷಯ ತಾವು ಸೇವೆ ಸಲ್ಲಿಸಿದ ಇಲಾಖೆಯಲ್ಲಿ ಎಂಥಹ ಸೇವೆ ಸಲ್ಲಿಸಿದರು ಎನ್ನುವುದು ಇಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ.ಇಲ್ಲಿ ಸನ್ಮಾನಗೊಂಡ ಮಲ್ಲಪ್ಪ ಆಡಿನರವರು ಅಪಘಾತರಹಿತ ಸೇವೆಗೆ ಶ್ರೇಷ್ಠ  ಪದಕ ಪಡೆದು ಬಂದವರು ಅಲ್ಲದೆ ಸದೃಡವಾದ ದೃಢವಾದ ದೇಹವನ್ನು ಜೋಪಾನವಾಗಿಟ್ಟುಕೊಂಡು ಹುದ್ದೆಯಿಂದ ಬಿಡುಗಡೆ ಮಾಡಿಕೊಂಡವರು. ಅಂತಹ ನಿವೃತ್ತರ ಸಮಾರಂಭಕ್ಕೆ ನಾವು ನಮ್ಮ ಸಹೋದ್ಯೋಗಿಗಳ ಜೊತೆಗೆ ಶಿರೂರ ದಾರಿ ತುಳಿದದ್ದು ಒಂದು ವಿಶಿಷ್ಟ ಅನುಭವ.
         ಅದು ಸಂಬಂಧಗಳನ್ನು ಬೆಸೆಯುವ ಜೇನುಹುಳಗಳು ದಂಡು ಆಡಿನ ಮನೆತನದ ತುಂಡು. ಒಂದು ಕಾಲದಲ್ಲಿ ಶಿರೂರ ಆಡಿನ ಮಲ್ಲಪ್ಪನ ಹೆಸರು ಹೇಳಿದರೆ ಹುಬ್ಬೇರಿಸುವ ಹೆಸರು ,ರಾಜಕೀಯದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ಹುರಿಯಾಳು ಎಂದು ಸಣ್ಣವರಿದ್ದಾಗ  ಕೇಳಿದ ನೆನಪು.ಆ ಮನೆತನದವರ ಸಂಬಂಧಿಕರ ತೋಟದ ಮನೆಯಲ್ಲಿ ಹಾಕಿದ ಪೆಂಡಾಲ ಸೇರಿಕೊಂಡಾಗ ಹನ್ನೆರಡು ಗಂಟೆ ಸಮಯವಾಗಿತ್ತು. ಅದಾಗಲೇ ಕಾರ್ಯಕ್ರಮ ಪ್ರಾರಂಭವಾಗಿತ್ತು ದೋತಿ ಶರ್ಟನಲ್ಲಿ ಪತ್ನಿಯ ಪಕ್ಕದಲ್ಲಿ ಕುಳಿತ ಮಲ್ಲಪ್ಪನನ್ನು ನೋಡಿದೆ... ಪ್ರಾಯಶಃ ನಾವು ತಪ್ಪಾದ ಕಾರ್ಯಕ್ರಮದಲ್ಲಿ ಪ್ರವೇಶ ಪಡೆದ ಅನುಭವವಾಯಿತು ಅದು ಮದುವೆ ಮಂಟಪವಾ ಅಥವಾ ನಿವೃತ್ತಿ ಹೊಂದಿದದವರ ಸನ್ಮಾನದ ಮಂಟಪವಾ ಅಂತಾ  ! ಏಕೆಂದರೆ ದಂಪತಿಗಳ ಆರೋಗ್ಯದ ಗುಟ್ಟು ಅವರು ಮಾಡಿದ ತೋಟವೆ ಎನ್ನುವುದು ಅರ್ಥವಾಗಲು ತಡವಾಗಲಿಲ್ಲ . ಯಾವನು ಕ್ರೀಯಾಶೀಲನೋ ಆತನೆ ಪಂಡಿತ ,ಶ್ರೀಮಂತ, ಆರೋಗ್ಯವಂತ, ಎನ್ನುವುದನ್ನು ವೇದಿಕೆಯು ಸಾಧರಪಡಿಸುತಿತ್ತು.ಅಲ್ಲಿಯೇ ಕುಳಿತ ನಾಗಯ್ಯ ಹಿರೇಮಠ್ ಕರಿ ಕೋಟಿನಲ್ಲಿ  ಅದೆ ತಾನೆ ವಾದ ಮಾಡಿಬಂದ ಕಿರಿಯ ವಕೀಲನನ್ನೂ ಮೀರಿಸುವ ಉತ್ಸಾಹದಲ್ಲಿದ್ದದ್ಥು ನೋಡಿ, ವಯಸ್ಸಿಗೂ ಸವಾಲು ಹಾಕಬಹುದೆನೆಸಿತು.ಅಂದರೆ ನಿವೃತ್ತಿ ಎನ್ನುವದೊಂದು ನಂಬರ ಗೇಮ್.ಪಕ್ಕ ಬದಲಿಸಿದರೆ ಪರ್ಯಾವರಣ ನಿರ್ಮಿಸಬಹುದೆನ್ನುವದನ್ನು ರುಜುವಾತು ಮಾಡಿದ್ದೇ ಇಂದು ಸನ್ಮಾನಗೊಂಡವರ ಕ್ರೀಯಾಶೀಲರ ಸಮಾರಂಭ  .ಇಂತಹ ಕಾರ್ಯಕ್ರಮದಲ್ಲಿ ನೀಡಿದ ಅನಿರೀಕ್ಷಿತ ಆಹ್ವಾನ ನನ್ನನ್ನೂ  ಕೆಲ ಸಮಯ ವಿಚಲಿತನನ್ನಾಗಿ ಮಾಡಿತು. ಆದರೂ ಆಡಿನ ಬಳಗದಲ್ಲಿ ಮಾತಾಡಿದೆ ನನಗೆ ತಿಳಿದಷ್ಟು ಅದು ಬೇರೆ ವಿಷಯ .ಅವರದೆ ಬಳಗದ ಮಲ್ಲಪ್ಪ ಆಡಿನರವರ ಆರನೆ ಕ್ಲಾಸ ಓದುವ ಮೊಮ್ಮಗಳ ಅರಳು ಹುರಿಯುವಂತಹ ಮಾತೆಗೆ ನಿರೂಪಕರು ನನಗೆ ಹೇಳಿದ ಸಾಹಿತಿ ಪಟ್ಟ ಕೆಳಗಿಟ್ಟು ಆ ಪುಟ್ಟ ಕಂದಮ್ಮನ ಆತ್ಮವಿಶ್ವಾಸದ ಮಾತಿನ ಮುಂದೆ ನಾ ಶರಣಾಗಿ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಂಡು ಸಂತೋಷ ಪಟ್ಟೆ.
ವಂದನೆಗಳೊಂದಿಗೆ🙏🙏🙏🙏🙏

















Saturday, June 1, 2024

ಜೂನ್ ಒಂದು. ...ಹುಟ್ಟು ಹಬ್ಬ



ಟ್ರಿನ್.. ಟ್ರಿನ್...ಟ್ರಿನ್..... ಹೆಲೋ ಸರ್ , ...ಯಾರದು ? "ನಾನು ರಂಗಣ್ಣ ಸರ್ " ಗೋವಾದಿಂದ ಮಾತಾಡತಾ ಇರೋದು, " ಇನ್ನೂ ಎದ್ದಿಲ್ಲವಾ ಸಾರ್ ".ಎಂದ .ರಂಗಣ್ಣನ ದ್ವನಿ ಗುರುತು ಹಿಡಿಯಲು ತಡವಾಗಲಿಲ್ಲ, ಆದರೂ ಅದಾಗಲೆ ರಂಗಣ್ಣ ತನ್ನ ಹೆಸರು ಹೇಳಿಯಾಗಿತ್ತು  " ಸರ್, ಇನ್ನೂ ಮಲಗಿದ್ದೀರಾ ಎಂದ.ಹೌದಪ್ಪಾ ಲೇಟಾಗಿ ಎದ್ದೆ .ಏನ್ ಸಮಾಚಾರ ಎಲ್ಲಾ ಆರಾಮ ಇದ್ದಿಯಾ ಎಂದೆ ,ಹುಡುಗ ತಡಬಡಾಯಿಸಿ, ಸರ್,  ಹ್ಯಾಪಿ ಬರ್ತ ಡೇ ಸರ್, ಎಂದ ಅವಾಗಲೆ ನನಗೆ ಅರ್ಥ ಆಗಿದ್ದು ಜೂನ ಒಂದು ನನ್ನ ಬರ್ತ್ ಡೇ ಅಂಥಾ.ಧನ್ಯವಾದಗಳು ರಂಗಣ್ಣ ಶುಭಾಶಯಗಳು ಎಂದೆ. 
ಪ್ರಾಥಮಿಕ ಶಾಲೆಯ ಶಿಕ್ಷಕರು ಬರೆದ ಬ್ರಹ್ಮ ನ ಬರಹ ಆ ಹುಟ್ಟು ಹಬ್ಬದ ದಿನ ,ಅದನ್ನು ಯಾರಿಂದಲೂ ಅಳುಕಿಸಲು ಸಾಧ್ಯವಾಗದ್ದು.
ನಾವು ನಿವೃತ್ತಿ ಯಾಗಬೇಕಾದದ್ದು ಕೂಡಾ ಈ ದಿನವನ್ನೆ ಆಧಾರವಾಗಿಯೇ ಇಟ್ಟು ಕೊಂಡು, ಹಾಗಾಗಿ ಈ ಬರಹ. ಇದು ಬ್ರಹ್ಮ ಬರಹವೆ ಸರಿ.ನಮ್ಮಪ್ಪ ರೈತ ತುಂಟಾಟ ಕಡಿಮೆ ಮಾಡಿಸಲು ಸಣ್ಣ ವಯಸ್ಸಿನಲ್ಲಿ ಶಾಲೆಗೆ ನೂಕಿರಬಹುದು ಇಲ್ಲವೆ  .ಸುಧಾರಿಸಿದ ಪಾಲಕರು ಹೆಚ್ಚು ವಯಸ್ಸಾದರೂ ನವೋದಯದಂತ ಶಾಲೆಗೆ ಹಾಕುವುದಕ್ಕಾಗಿ ಹೆಚ್ಚು ವಯಸ್ಸಾದರೂ ಕಡಿಮೆಯಾಗಿ ಹಚ್ಚಿರಲಿ .ಯಾವುದನ್ನೂ ಅಳುಕಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ಬ್ರಹ್ಮರೆ.!

       ನನ್ನ ಹಾಗೂ ರಂಗಣ್ಣನ ಪ್ರೀತಿಯ ಕುಶಲೋಪರಿ ಇಂದು ನಿನ್ನೆಯದಲ್ಲ ಆತ ಪ್ರೈವೇಟ ಕಂಪನಿಯಲ್ಲಿ ಉದ್ಯೋಗ ಹಿಡಿದಾಗಿನಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಲೆ ಇದ್ದಾನೆ .ಆದರೆ ನನ್ನ ಹಾಳಾದ ನೆನಪು ನನಗೆ ಕೈ ಕೊಡುತ್ತಿದೆ.ಆತ ವಿದ್ಯಾರ್ಥಿ ದೆಶೆಯಿಂದನೂ ನನಗೆ ಅಚ್ಚುಮೆಚ್ಚು ಆದರೆ ನನಗಿಂತ ನನ್ನ ಇಂಗ್ಲೀಷ್ ಉಪನ್ಯಾಸಕರಾದ ಬಿರಾದಾರ ಸರ್ ಜೊತೆ ಅವನ ನಗುವಿನ ಚಟಾಕೆ ಬಹಳ ಇರುತ್ತಿತ್ತು ನಾನಾದರು ನಕ್ಕು ನಕ್ಕು ಸುಸ್ತಾಗುತ್ತಿದ್ದೆ ಕಲಿಯುವಿಕೆಯಲ್ಲಿ ಆತ ಸಾಧಾರಣವಾದ ವಿದ್ಯಾರ್ಥಿಯಾದರೂ ಉಪನ್ಯಾಸಕರ ಜೊತೆಗೆ ಆತನ ಸಂಪರ್ಕ ಬಹಳ ಚನ್ನಾಗಿಯೇ ಇತ್ತು ಮತ್ತು ಆತ ನಮ್ಮೂರ ವಿದ್ಯಾರ್ಥಿ ಎನ್ನುವುದು ನನ್ನನ್ನು  ಇನ್ನಷ್ಟು ಆತನ ಹತ್ತಿರಕ್ಕೆ ತಂದಿತ್ತು. 

          ನಮ್ಮ ಇಂಗ್ಲಿಷ್ ಉಪನ್ಯಾಸಕರಾದ ಎಸ್ ಸಿ ಬಿರಾದಾರ ಹೆಚ್ಚು ಲೋಕ ಜ್ಞಾನ ಹೊಂದಿದ ವ್ಯಕ್ತಿ ಆವರು ಜಾಣ ವಿದ್ಯಾರ್ಥಿಗಳಿಗಿಂತ ಸಾಧಾರಣವಾದ ಮತ್ತು ದಡ್ಡ ವಿದ್ಯಾರ್ಥಿಗಳನ್ನು  ಬಹು ಹೆಚ್ಚಾಗಿ ಪ್ರೀತಿಸುತ್ತಿದ್ದರು ಇದಕ್ಕೆ ಅವರು ಕೊಡುವ ಕಾರಣ ಬಹು ಮಾರ್ಮಿಕವಾಗಿತ್ತು ,ಸರ್ ನಾವು ಸತ್ತಾಗ ಪ್ರೀತಿಯಿಂದ ಎತ್ತಿಕೊಂಡು ಹೋಗುವವರೆ ಇವರು ನಾವು ಮುದುಕರಾದಾಗ ಕೈ ಮುಗಿದು ಬಸ್ ನಲ್ಲಿ ಸೀಟು ಬಿಟ್ಟು ಕೊಡುವವರು ಇವರೇ ಆದರೆ ನೀವು ಜಾಣರು ಅಂತಾ ಅತ್ಯಂತ ಹೆಮ್ಮೆಯಿಂದ ಹೇಳುತ್ತಾ ತಿರುಗುತ್ತೀರಲ್ಲ ಅವರಾರು ಇವರಷ್ಟು ನಮ್ಮ ಇಳಿಗಾಲದಲ್ಲಿ  ಸಮೀಪದಲ್ಲಿ ಬರುವವರಲ್ಲ ದೂರದಲ್ಲಿಯೇ ನೋಡಿ ಮಾತನಾಡಿಸುವದು ಬರುತ್ತೆ ಅಂತಾ ದಾರಿ ಬದಲು ಮಾಡುವವರೆ ! ಎಂದಿದ್ದರು. ಬಹುಶಃ ಇವತ್ತು ನಸುಕಿನಲ್ಲಿ ಎಚ್ಚರಿಸಿದ ರಂಗಣ್ಣನ ಶುಭಾಶಯ ಬಿರಾದಾರ ಉಪನ್ಯಾಸಕರನ್ನು ನೆನಪು ಮಾಡುವಂತೆ ಮಾಡಿತು.
  ಇರಲಿ ಈ ನನ್ನ ವಿದ್ಯಾರ್ಥಿ ರಂಗಣ್ಣನನ್ನು ಸಾಧಾರಣವಾದ ವಿದ್ಯಾರ್ಥಿ ಎಂದೆನಲ್ಲವೆ ? ಈಗ ನನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವ ಸರದಿ .ಏಕೆಂದರೆ ನನಗೊಬ್ಬ ಮಗನಿದ್ದಾನೆ ಆತನಿಗೆ ಪಿ ಯು ಸಿ ಗೆ ಪ್ರತಿ ಒಂದು  ವರ್ಷಕ್ಕೆ  ಒಂದು ಲಕ್ಷ. ಎರಡನೇ ವರ್ಷಕ್ಕೆ ಮತ್ತೊಂದು ಲಕ್ಷ ಇನ್ನೂ ಇಂಜಿನಿಯರಿಂಗ್ ಮುಗಿಸಲು ನಾಲ್ಕು ಲಕ್ಷ. ಎಮ್ ಟೆಕ್ ಮಾಡಲು ಎರಡು ವರ್ಷಕ್ಕೆ ಎರಡು ಲಕ್ಷ ಒಟ್ಟು ಎಂಟು ಲಕ್ಷ ಖರ್ಚು ಮಾಡಿದ್ದೇನೆ ಪ್ರತಿ ವರ್ಷವೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ ಇಂಜಿನಿಯರಿಂಗ್ ಓದುವಾಗ ಎರಡು ವರ್ಷ ಕಾಲೇಜಿಗೂ ಪ್ರಥಮ ಬಂದಿದ್ದಾನೆ ಈಗ ವಿಶ್ವ ವಿದ್ಯಾಲಯದಲ್ಲಿ ಹೊರಗುತ್ತಿಗೆ ಮೇಲೆ ತಿಂಗಳಿಗೆ ಮೂವತ್ತು ಸಾವಿರ ಸಂಬಳವನ್ನೂ  ಪಡೆಯುತ್ತಿದ್ದಾನೆ.ಪ್ರಶ್ನೆ ಅದಲ್ಲ ಹೊಲಿಕೆಗೆ ಹೇಳುತ್ತಿದ್ದೇನೆ ಅಷ್ಟೇ.ನನ್ನ ವಿದ್ಯಾರ್ಥಿ ರಂಗಣ್ಣನೂ ಇಪ್ಪತೈದು  ಸಾವಿರ ಸಂಬಳವನ್ನು ಪಡೆಯುತ್ತಿದ್ದಾನೆ. ಹಾಗಾದರೆ ಯಾರು ಸುಖಿಗಳು ? ಅವನು (ರಂಗಣ್ಣ) ಯಾವತ್ತೂ ಸಪ್ಪೆ ಮುಖ ಮಾಡಿ ಮಾತಾಡಿದ್ದೆ ನೋಡಿಲ್ಲ ಅತ್ಯಂತ ಸುಂದರವಾದ ಕುಟುಂಬವನ್ನು ನಡೆಸುತ್ತಿದ್ದಾನೆ.ಹಾಗಾದರೆ ಅತ್ಯಂತ ಉನ್ನತ ಮಟ್ಟದ ಶಿಕ್ಷಣ ಪಡೆದವರೆ ಹೆಚ್ಚು ಸುಖವಾಗಿರುತ್ತಾರೆ ಎನ್ನುವುದು ತಪ್ಪಾದೀತು .ಇದರರ್ಥ ಇಂಜಿನಿಯರಿಂಗ್ ಕಲಿತವರು ಸುಖಿಗಳಲ್ಲ ಎನ್ನುವುದು ನನ್ನ ವಾದವಲ್ಲ ಅದಕ್ಕೆ ತನ್ನದೇ ವ್ಯಾಪ್ತಿ ಇದೆ, ಆ ಮಾತು ಬೇರೆ.ಸುಮಾರು ವರ್ಷಗಳ ಹಿಂದೆ ಹಾಸ್ಟೆಲ್ ನಲ್ಲಿ ಅಡುಗೆಯವರ ಹುದ್ದೆಗೆ. ಅರ್ಜಿ ಕರೆಯಲಾಗಿತ್ತು ಅದಕ್ಕೆ ಎಮ್ ಟೆಕ್ ಆದವರು ಅರ್ಜಿ ಸಲ್ಲಿಸಿದ್ದರು ಕೆಲವರು ಆಯ್ಕೆ ಆಗಿರಲೂಬಹುದು ಅಡುಗೆ ಮಾಡುವ ಹುದ್ದೆ ಹಿಡಿಯಲು ಎಮ್ ಟೆಕ್ ಓದಬೇಕಾಗಿತ್ತೆ ?...... ಪ್ರಶ್ನೆ ಅದಲ್ಲ ತಾವು ಓದುವ ಬ್ರ್ಯಾಂಚನಲ್ಲಿ ಪಡೆಯಬೇಕಾದ ಕೌಶಲ್ಯ, ತಾಂತ್ರಿಕತೆ ಮತ್ತು ಬದ್ದತೆಯನ್ನು  ಪಡೆಯದ ಕಾರಣಕ್ಕೆ ಈ ಎಲ್ಲಾ ಅವಾಂತರಕ್ಕೆ ಕಾರಣವಾಗುತ್ತದೆ ಎನ್ನುವುದು ಅಷ್ಟೇ ಸತ್ಯ .ಇರಲಿ ರಂಗಣ್ಣನ ಶುಭಾಶಯಗಳು ನನ್ನನ್ನು ಇಲ್ಲಿಗ ತಂದು ನಿಲ್ಲಿಸಿತು .ರಂಗಣ್ಣ ನಿನಗೂ ಮತ್ತು ನನ್ನಂತೆ ಜೂನ್ ಒಂದು ಹುಟ್ಟು ಹಬ್ಬದ ದಿನಾಚರಣೆ ಆಚರಿಸಿಕೊಳ್ಳುತ್ತಿರವ ಎಲ್ಲಾ ನನ್ನ ಬಂಧುಗಳಿಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು.🙏🙏🙏🙏🙏🌷🌷🌷🌷🌷🙏🙏

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...