Saturday, October 19, 2024

ಈ ಮುನಿ ಭಾವ ಯಾನಿ

ಹೆಂಡತಿಯ ಹಿಡಿತ ತಪ್ಪಿದವನಲ್ಲ
ಜಡೆ ಬಿಟ್ಟು ಕೊಡೆ ಹಿಡಿದವನಲ್ಲ
ತೊಡೆ ತಟ್ಟಿ ತಿರುಗಿ ನಡೆದವನಲ್ಲ 
ಕಂಡುಂಡುಟ್ಟವನು ಜಗದ ಧನಿ,ದ್ವನಿ ॥

ಯಾನದಲ್ಲಿ ಮಾನ ಉಳಿಸಿಕೊಂಡವನು
ಹಣವಿದ್ದು ಗುಣವುಳಿಸಿಕೊಂಡವನು
ಧ್ವನಿ ಇದ್ದು ಮೌನಿ, ಮಾನ್ಯವಾದವನು
ಕನಿ ಕೇಳದೆ ಮನಕೇಳುವನು ಈ ಮುನಿ ॥

ಭಾವಗಳಿಗೆ ಜೀವ ತುಂಬುವವನು
ಕಾಯ ಕಮಂಡಲ, ಕರ್ಮ ರುದ್ರಾಕ್ಷಿ
ಧರ್ಮ ವೊಂದೆ ಉದರದ ಭಕ್ಷ ಭೋಜ್ಯ
ಬದುಕಿನ ಮರ್ಮ ತಿಳಿದವನು ಈ ಮುನಿ ॥

ಬಣ್ಣ ಬದಲಿಸದೆ ಉಣ್ಣುವವನು
ಕಣ್ಣೊಳಗಿದ್ದು ಹೃದಯದಿಂದೇಳುವನು
ತನ್ನವರು ಭಿನ್ನರೆಲ್ಲರೂ ಇವನಿಗೊಂದೆ
ಬೆಣ್ಣೆಯಂತೆ ಕರಗುವನು ಈ ಭಾವಯಾನಿ ॥







ಗುಳೇಗುಡ್ಡದ ಇತಿಹಾಸ

    ಪ್ರಸ್ತುತ ಗುಳೇಗುಡ್ಡ,ಬಾಗಲಕೋಟೆಯ ಜಿಲ್ಲೆಯಲ್ಲಿ ಬರುವ ಒಂದು ನೂತನ ತಾಲೂಕಾ ಕೇಂದ್ರ .ಆದರೆ ಇದು ಮೊದಲು ಬಾದಾಮಿ ತಾಲೂಕಿನ ಹೋಬಳಿಯಾಗಿತ್ತು ಈ ತಾಲೂಕು 1997 ರ ಪೂರ್ವದಲ್ಲಿ ಬಿಜಾಪುರ ಜಿಲ್ಲೆಯಲ್ಲಿರುವ ನಗರವಾಗಿತ್ತು. ಭೌಗೋಳಿಕವಾಗಿ ಗಮನಿಸುವದಾದರೆ.16.05. ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 75.8 ಪೂರ್ವ ರೇಖಾಂಶ ದಲ್ಲಿದೆ 2011 ರ ಜನಗಣತಿಯ ಪ್ರಕಾರ ಇದರ ಜನಸಂಖ್ಯೆಯ 33,991.ಈ ನಗರದ ಸಾಕ್ಷರತೆ ಪ್ರಮಾಣ ಶೇಕಡ 76 ರಷ್ಟಿದೆ.

ಐತಿಹಾಸಿಕ ಮಹತ್ವ. 
        ಈಗಿರುವ ಗುಳೇಗುಡ್ಡ ತನ್ನ ಉತ್ತರಕ್ಕೆ ಹಬ್ಬಿರುವ  ಪೂರ್ವ ಪಶ್ಚಿಮದ ಗುಡ್ಡದ ಮೇಲಿತ್ತು ಕಾಲಾನಂತರ ಅದು ಕೆಳಗಡೆ ಬಂದಿದೆ ಎನ್ನುವುದಕ್ಕೆ ಗುಡ್ಡದ ಮೇಲೆ ಇರುವ ಬಲವಾದ ಸಾಕ್ಷಿಗಳು ಅವಶೇಷಗಳ ರೂಪದಲ್ಲಿವೆ.ಈ ಪ್ರದೇಶದ ಐತಿಹ್ಯ ಬಹು ಪುರಾತನವಾದದ್ದು. ಇದಲ್ಲದೆ ಪ್ರಾಗಿತಿಹಾಸದ ನೆಲೆಗಳು ಗುಳೇಗುಡ್ಡ ಪರಸರದಲ್ಲಿದ್ದವು ಎನ್ನುವುದಕ್ಕೆ ಪ್ರಾಚೀನ ಇತಿಹಾಸದ ಉಲ್ಲೇಖಗಳು ಸಾಕ್ಷಿ. ಈ ಪ್ರದೇಶದ ಸಮೀಪವಿರುವ ಕುಟಕನಕೇರಿ, ಲಾಯದಗುಂದಿ, ನಿಂಬಲಗುಂದಿ ಗಳು ಗುಳೇಗುಡ್ಡ ಪರಿಸರದ ಇತಿಹಾಸವನ್ನು ಪ್ರಾಗಿತಿಹಾಸ ಕಾಲಘಟ್ಟಕ್ಕೆ ತಂದು ನಿಲ್ಲಿಸುತ್ತವೆ. ತದನಂತರದ ದಿನಮಾನಗಳಲ್ಲಿ ಗುಳೇಗುಡ್ಡ ನಗರ ಗುಡ್ಡದ ಮೇಲೆಯೇ ವಿಕಸನವಾಗಲು ಕಾರಣವೆಂದರೆ ದಾಳಿಕೋರರಿಂದ ರಕ್ಷಣೆ ಪಡೆಯಲು ಊರುಗಳನ್ನು ಗುಡ್ಡದ ಮೇಲೆ ನಿರ್ಮಾಣ ಮಾಡುತ್ತಿದ್ದರು. ಮಧ್ಯ ಕಾಲಿನ ಭಾರತದ ಇತಿಹಾಸದಲ್ಲಿನ ಬೀಕರ ದಾಳಿಗಳು ಈ ಮಾತನ್ನು ಇನ್ನಷ್ಟು ರುಜುವಾತುಪಡಿಸುತ್ತವೆ.
              ದೇಹಲಿ ಸುಲ್ತಾನರ ಖಿಲ್ಜಿವಂಶದ ಅಲ್ಲಾವುದ್ದೀನ ಖಿಲ್ಜಿ ದಕ್ಷಿಣ ಭಾರತದ ಮೇಲೆ ಬಹು ಬೀಕರವಾಗಿ ದಾಳಿ ಮಾಡಿದ, ಸಂಪತ್ತನ್ನು ದೋಚಿದ .ಆದರೆ ದಕ್ಷಿಣದ ಆಡಳಿತದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ.ಆದರೆ ತೊಘಲಕ ಸಂತತಿಯ ಮಹಮದ್ ಬಿನ್ ತೊಘಲಕ ದಕ್ಷಿಣದ ಜವಾಬ್ದಾರಿಯನ್ನು ಹೊರಲು ಹೋಗಿ ವಿಫಲನಾದ, ಫಲ ಶೃತಿಯಾಗಿ 1336 ರಲ್ಲಿ ವಿಜಯನಗರ 1347 ರಲ್ಲಿ ಬಹಮನಿ ಸಾಮ್ರಾಜ್ಯ ಗಳು ಉದಯವಾದವು.ಇವುಗಳ ಸಂಘರ್ಷ ದ ನಂತರ 1481ರಲ್ಲಿ ಬಹಮನಿ ಸಾಮ್ರಾಜ್ಯ ವಿಘಟನೆಯಾದರೆ 1565 ರಲ್ಲಿ ವಿಜಯನಗರದ ಪತನವಾಯಿತು ಈ ಸಂದರ್ಭದಲ್ಲಿ 1489 ರಲ್ಲಿ ಯೂಸುಫ್ ಆದಿಲ್ ಷಾ ನಿಂದ ಒಂದು ರಾಜ್ಯ ಸ್ಥಾಪನೆಯಿತು, ಈ ಮನೆತನವೇ ಬಿಜಾಪುರದ ಆದಿಲ್ ಷಾಹಿಗಳು.
           ಬಿಜಾಪುರ ಆದಿಲ್ ಷಾಹಿ ಮನೆತನದಲ್ಲಿ ಅತ್ಯಂತ ಶ್ರೇಷ್ಠ ದೊರೆಯೇ ಎರಡನೆಯ ಇಬ್ರಾಹಿಂ ಆದಿಲ್ ಷಾ ಈತ ಜಗದ್ಗುರು ಬಾದಷಾ ಎಂದು ಕರೆಯಿಸಿಕೊಂಡಿದ್ದಾನೆ ಇವನು 1580 ರಲ್ಲಿ ಗುಳೇಗುಡ್ಡ ಕೋಟೆಯನ್ನು ಕಟ್ಟಿಸದ ಎಂಬ ಉಲ್ಲೇಖವಿದೆ.ಅದು ಈಗ ಕಮಾನಿನ ಆಕಾರದ ಬಾಗಿಲು, ವಿನಾಶದ ಅಂಚಿನಲ್ಲಿರುವ ಕೋಟೆಯ ಅಳಿದುಳಿದ ಗೆರೆಗಳು  ಕೋಟೆ ಇತ್ತು  ಎನ್ನುವುದನ್ನು ಒತ್ತಿ ಹೇಳುತ್ತದೆ 1700 ರಿಂದ 1710 ರ ಸುಮಾರಿಗೆ ದಕ್ಷಿಣದ ಜಲಾಶಯ ಉತ್ತರಕ್ಕೆ ಊರು ನಿರ್ಮಾಣ ವಾಯಿತು ಎಂಬ ಉಲ್ಲೇಖವಿದೆ ಗುಳೆ ಬಂದವರ ಊರು ಗುಳೇದಗುಡ್ಡ ವಾಯಿತೆಂದು ವಾದವಿದೆ. ಇನ್ನು ಕೆಲವರು ಗೂಳಿಯಿಂದ ಈ ಹೆಸರು ಬಂತು ಎನ್ನುವವರು ಉಂಟು.
.          ವಿಜಯನಗರದ ಪತನಾನಂತರದ ಕಾಲಘಟ್ಟದಲ್ಲಿ ಕೆಳದಿ,ಚಿತ್ರದುರ್ಗ, ಮೈಸೂರು ರಾಜ್ಯಗಳು ಪ್ರವರ್ಧಮಾನಕ್ಕೆ ಬಂದರೂ ಅಂತಿಮವಾಗಿ 1761 ರಿಂದ 1799 ರ ಕಾಲಾವಧಿಯಲ್ಲಿ,ಮೈಸೂರಿನ ಆಡಳಿತಗಾರಾಗಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು  ಇವತ್ತಿನ ಕರ್ನಾಟಕದ ಬಹು ಭಾಗದ ಆಡಳಿತವನ್ನು ಮೈಸೂರ ರಾಜ್ಯ ದಿಂದ ಆಡಳಿತ ಮಾಡಿದರು, ಆಗ ಗುಳೇಗುಡ್ಡವು ಮೈಸೂರಿನ ನಿಯಂತ್ರಣಕ್ಕೆ ಬಂದಿತು ಆದರೆ ಅದು ಬಹುಕಾಲವಿರದೆ ಮರಾಠರ,ಮೈಸೂರಿನ ದಾಳಿಗೆ ಬಲಿಯಾಯಿತು 1750 ರಲ್ಲಿ ಒಮ್ಮೆ ಈ ಊರು ದಾಳಿಗೊಳಗಾದರೆ 1787 ರಲ್ಲಿ ಮರಾಠರು, ಟಿಪ್ಪು ನಡುವೆ. ಗಜೇಂದ್ರಗಡ ಒಪ್ಪಂದವಾದಾಗ ಗುಳೇಗುಡ್ಡ ಟಿಪ್ಪುವಿಗೆ ಸೇರಿತು.ಹೀಗಾಗಿ ಮರಾಠರಿಂದ ದಾಳಿಗೊಳಗಾಯಿತು.1799 ರಲ್ಲಿ ಟೀಪ್ಪುವಿನ ಮರಣದೊಂದಿಗೆ ಬ್ರಿಟಿಷರು ತಮಗೆ ಸಹಾಯ ನೀಡಿದ ನಿಜಾಮ, ಮರಾಠರಿಗೆ ಮೈಸೂರು ರಾಜ್ಯ ವನ್ನು ವಿಭಜಿಸಿ ಒಂದು ಭಾಗವನ್ನು  ಮರಾಠರ ಅಧೀನಕ್ಕೆ ನೀಡಿದರು ಆಗ ಗುಳೇಗುಡ್ಡ ಮತ್ತೆ ಮರಾಠರ ಅಧೀನಕ್ಕೆ ಬಂದಿತು.
          ಮರಾಠರು ತಮ್ಮ ಆಡಳಿತದ ಅನುಕೂಲಕ್ಕೆ ರಾಜ್ಯ ವನ್ನು ಕ್ರಮವಾಗಿ ಸ್ವರಾಜ್ಯ, ಪ್ರಾಂತ್, ಪರಗಣಗಳು, ಗ್ರಾಮಗಳಾಗಿ ವಿಂಗಡಿಸಿದ್ದರು.ಪರಗಣದ ಮುಖ್ಯ ಸ್ಥರೇ ದೇಸಾಯಿಗಳು.ಅಂತಹ ದೇಸಾಯಿಗಳಲ್ಲಿ ಕೋಟೆಕಲ್ ದೇಸಾಯಿಗಳು ಒಬ್ಬರು ಅವರು ಥಾಮಸ್ ಮನ್ರೋನ ಸಹಕಾರ ದೊಂದಿಗೆ ಗುಳೇಗುಡ್ಡ ಪಟ್ಟಣವು ಅಭಿವೃದ್ಧಿಯಾಗಲು ಕಾರಣೀಕರ್ತರಾದರು.
         ಬದಲಾದ ಕಾಲಘಟ್ಟದಲ್ಲಿ ಅಂದರೆ 1818 ರ ಸುಮಾರಿಗೆ ಮರಾಠರ ಪ್ರಾಬಲ್ಯವು ಕುಸಿಯಿತು. ಫಲಶೃತಿಯಾಗಿ ಬ್ರಿಟಿಷರು ಆಡಳಿತ ಮಾಡುತ್ತಿದ್ದ ಬಾಂಬೆ ಪ್ರಾಂತ್ಯದ ಅಡಿಯಲ್ಲಿ ಗುಳೇಗುಡ್ಡ ಬಂದಿತು.ವ್ಯಾಪಾರ ವಾಣಿಜ್ಯದ ಬೆಳವಣಿಗೆ ಗುಳೇಗುಡ್ಡ ನಗರವನ್ನು ಜನದಟ್ಟಣೆಯ ಪ್ರದೇಶವನ್ನಾಗಿ ಮಾಡಿತು. ಮಿಶನರಿಗಳು ತಂದ ಶಿಕ್ಷಣ ಹಾಗೂ ಧಾರ್ಮಿಕ ಚಟುವಟಿಕೆಗಳ ಫಲಶೃತಿ ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟಂಟ ಪಂಥಗಳು ಗುಳೇಗುಡ್ಡ ಪರಿಸರದಲ್ಲಿ ಸ್ಥಾಪನೆಯಾದವು.
ಗುಳೇಗುಡ್ಡ ಇತಿಹಾಸದಲ್ಲಿ ಚರ್ಚನ ಪಾತ್ರ 
      ಭಾರತದ ಆಧುನಿಕ ಶಿಕ್ಷಣದ ಇತಿಹಾಸದಲ್ಲಿ 1835 ರ ಮೇಕಾಲೆ ವರದಿ  ಮತ್ತು 1854 ರ ಚಾರ್ಲ ವುಡ್ ನ ವರದಿ ಅತ್ಯಂತ ಮಹತ್ವದ ಅಧ್ಯಾಯಗಳು.ವುಡ್ ವರದಿ ಭಾರತೀಯರ ಶಿಕ್ಷಣಕ್ಕಾಗಿ ಶಾಲಾ ಕಾಲೇಜುಗಳನ್ನು ತೆಗೆಯಲು ಅವಕಾಶ ಕಲ್ಪಿಸಿತು ಆಗ ಧಾರವಾಡ, ವಿಜಾಪುರ, ಗದಗ_ಬೆಟಗೇರಿ ಸುಮಡ್ಡಿ ಮುಸ್ಟಿಗೇರಿ ಮುಂತಾದ ಕಡೆ ಮಿಸಿನರಿಗಳು ಧರ್ಮ ಹಾಗೂ ಶಿಕ್ಷಣ ಪ್ರಚಾರ ಮಾಡಿದರು ಸಾ .ಶ.1855 ರಲ್ಲಿ ರೆವರೆಂಡ್ ರೇಜ ಹಾಗೂ ಧೂಮ ಅವರು ಆಗಮಿಸಿ ಮಿಷನರಿ ಬಂಗಲೆಯನ್ನು ಕಟ್ಟಿಸಿದರು.ಅಲ್ಲದೆ ನೇಕಾರರಿಗೆ ಮಗ್ಗಗಳ ಕೋಣೆ ಕಟ್ಟಿಸಿ ಉತ್ತೇಜನ ನೀಡಿದರು ಇದೆ ಸಂದರ್ಭ ದಲ್ಲಿಯೇ ಸಾ.ಶ.1858 ಸುಮಾರಿಗೆ  ಉತ್ತರ ಕರ್ನಾಟಕದಲ್ಲಿ ಮೊದಲು ಬಾರಿಗೆ  ಗುಳೇಗುಡ್ಡ ದಲ್ಲಿ ಬಾಸೆಲ್ ಮಿಸನ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಶ್ರೇಯಸ್ಸು ರೆ.ಜಿ.ಕ್ರಿಸ್ಜೆ ಮತ್ತು  ರೆ.ಸಿ.ವೈಗ್ಲೆಯವರಿಗೂ ಸಲ್ಲುತ್ತದೆ ಫಲಶೃತಿಯಾಗಿ ಆಧುನಿಕ ಶಿಕ್ಷಣದ ಗಾಳಿ ಗುಳೇಗುಡ್ಡ ಪರಿಸರದಲ್ಲಿ ಹರಿಡಿತು.ಅಲ್ಲದೆ ಕೃಪಾಲಯ ಎಂಬ ಸಂಸ್ಥೆಯ ಮೂಲಕ ಕುಷ್ಠ ರೋಗಿಗಳ ಉಪಚಾರ ಮಾಡಿದ್ದು.ಗೋಧಿನುಚ್ಚು,ಎಣ್ಣೆ ಆಳಿನ ರೂಪದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಕೂಡಾ ಗುಳೇಗುಡ್ಡ ಅಭಿವೃದ್ಧಿಯ ವೇಗಕ್ಕೆ ಚೈತನ್ಯ ತುಂಬಿತು.
   ಅದೆ ರೀತಿಯಲ್ಲಿ ಕ್ಯಾಥೊಲಿಕ್ ಪಂಥವು ಕೂಡಾ ಸಾ ಶ.1867 ರಲ್ಲಿ ಫಾದರ್ ಫ್ರೆಂಕನ್ ಎಸ್ ಸೇರಾಸಟ್ ಆಗಮನವಾಯಿತು ಅವರು ಯೇಸುವಿನ ದೇವಾಲಯ ನಿರ್ಮಾಣ ಮಾಡಿದರು. ಅದೆ ಇಂದಿನ ನಿರ್ಮಲ ಮಾತಾ ದೇವಾಲಯ.ಸಾ ಶ. 1905 ರಲ್ಲಿ ಸೈಂಟ ಕ್ಸೇವಿಯರ ಸಂಸ್ಥೆಯ ಸ್ಥಾಪನೆಯಾಯಿತು ಇದು ಗುಳೇಗುಡ್ಡ  ಭಾಗದಲ್ಲಿ ಶಿಕ್ಷಣ ಹರಡಿ ಜನರನ್ನು ಸುಶಿಕ್ಷಿತರಾಗಲು ಶ್ರಮಿಸಿತು.

ಮಸ್ಜಿದ್ ಗಳ ಪಾತ್ರ 
ಗುಳೇಗುಡ್ಡ ದಲ್ಲಿ ವಿವಿಧ ಕಾಲಘಟ್ಟದಲ್ಲಿ ಸ್ಥಾಪನೆಯಾದ ಪ್ರಮುಖವಾದ ಏಳು ಮಸೀದಿಗಳಿದ್ದು, ಅವು ಬಡಿ ಮಸ್ಜಿದ್, ಜಾಮಿಯಾ ಮಸ್ಜಿದ್,ಮದಿನಲಾಲ ಮಸ್ಜಿದ್, ನಯಿಪೇಟ ಮಸ್ಜಿದ್,ಯಾಸ್ಜಿದ್ ಮಸ್ಜಿದ್,ಮಕ್ಕಾ ಮಸ್ಜೀದ್, ಬಾರಾ ಇಮಾನ ಮಸ್ಜಿದ್, ಇವುಗಳು ಮುಸ್ಲಿಮರಿಗೆ ಆಧ್ಯಾತ್ಮಿಕ  ಬದುಕು ರೂಢೀಸುವದರ ಜೊತೆಗೆ ಇತರೆ ಧರ್ಮದ ಜನರೊಂದಿಗೆ ಸಾಮರಸ್ಯ ದಿಂದ ಬದುಕಲು ಕಲಿಸುತ್ತಿವೆ.

ಮಠಗಳ ಪಾತ್ರ 
ಗುಳೇಗುಡ್ಡ ದಲ್ಲಿ ಹಲವಾರು ಜಾತಿ ಜನಾಂಗದವರು ನೆಲೆಗೊಂಡಿದ್ದಾರೆ ಅವರೆಲ್ಲರೂ "ಧರ್ಮೋ ರಕ್ಷತಿ ರಕ್ಷಿತಾಃ ಎನ್ನುವ ಸಿದ್ಧಾಂತ ದಲ್ಲಿ ನಂಬುಗೆ ಇಟ್ಟವರು ಇವರು ನಿತ್ಯ ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಪೂಜೆ ನೈವೇದ್ಯ ಮಾಡಿಸಿ ದೇವರ ಕೃಪೆಗೆ ಪಾತ್ರ ರಾಗುತ್ತಾರೆ.ಇಲ್ಲಿರುವ ಮಠಗಳು ಕೂಡಾ ಸಮಾಜಮುಖಿ ಕಾರ್ಯ  ಮಾಡುವದರ ಜೊತೆಗೆ ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿವೆ. ಪ್ರಮುಖ ಮಠಗಳೆಂದರೆ. 
ಮುರಗಘಾಮಠ : ಇದು ಅರಳಿ ಕಟ್ಟೆಯ ಹತ್ತಿರ ಇದ್ದು ಹನ್ನೆರಡನೆಯ ಶತಮಾನದಲ್ಲಿಯೇ ಸ್ಥಾಪನೆಯಾಗಿದೆ.  ಮಠದ ಪರಂಪರೆಯ ಶ್ರೀ ಮ.ನಿ.ಪ್ರ.ಮುರಘಿಶಾಂತವೀರ ದೇಶಿಕೇಂದ್ರ ಸ್ವಾಮಿಗಳಿಂದ ಹಿಡಿದು ಇಂದಿನ ಕಾಶಿನಾಥ ಮಹಾಸ್ವಾಮಿಗಳವರೆಗೆ ನಡೆದು ಬಂದಿದೆ. ಶ್ರೀಮುರುಘಿಶಾಂತವೀರ ದೇಶಿಕೇಂದ್ರ ಮಹಾಸ್ವಾಮಿಗಳು ಪಂಡಿತರಾಗಿದ್ದು ಹಮ್ಮೀರಕಾವ್ಯ ರಚಿಸಿದರು.ಶ್ರೀಮಠವು ಧಾರ್ಮಿಕ ಕಾರ್ಯಗಳಲ್ಲದೆ ಬಡಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆಯನ್ನು ಮಾಡಿದೆ.
ಗುರುಸಿದ್ಧೇಶ್ವರ ಮಠ : ಈ ಮಠವು ನಾಕಾದ ಹತ್ತಿರ ಉತ್ತರಾಭಿಮುಖವಾಗಿದ್ದು 1937 ಡಿಸೆಂಬರ 27 ರಂದು ಶ್ರೀ ಗುರುಸಿದ್ದ ಪಟ್ಟಾದಾರ್ಯರಿಂದ ಸ್ಥಾಪನೆಯಾಗಿದೆ.ಇವರು ಲಿಂಗೈಕ್ಯ ರಾದ ನಂತರ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳು 1979 ರಲ್ಲಿ ಪೀಠಾಧ್ಯಕ್ಷರಾಗಿ ನೇಕಾರ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುವುದಲ್ಲದೆ,ಮಾನವತ್ವದ ಸಾಕಾರ ಮೂರ್ತಿಯಾಗಿ ಸಕಲ ಜನಾಂಗದ ಪ್ರಗತಿಗೆ ಶ್ರಮಿಸುತ್ತಿದ್ದಾರೆ .
ಮರಡಿ ಮಠ :ಗುಳೇಗುಡ್ಡ ಮಧ್ಯ ಭಾಗದಲ್ಲಿರುವ ಈ ಮಠವು ತನ್ನ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಸಂಸ್ಕಾರ ಹಾಗೂ ಶ್ರಾವಣ  ಮಾಸದಲ್ಲಿ ಕೀರ್ತನೆ, ಸಾಮೂಹಿಕ ವಿವಾಹ ಮುಂತಾದ ಕಾರ್ಯಕ್ರಮ ಮಾಡುತ್ತದೆ.
ನೀಲಕಂಠೇಶ್ವರ ಮಠ : ಸಾ.ಶ.1937ರಲ್ಲಿ ಪ್ರಾರಂಭವಾದ ಈ ಮಠವು ದಸರಾ,ನವರಾತ್ರಿ ಉತ್ಸವದಲ್ಲಿ ದೇವಿಪುರಾಣ,ಕಾರ್ತಿಕೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಅಕ್ಕಲಕೋಟ ಮಠ : ಗುಳೇಗುಡ್ಡ ದಲ್ಲಿ ಇಂಗ್ಲಿಷ ಹಾಗೂ ಸಂಸ್ಕೃತ ಶಿಕ್ಷಣ ಕ್ಕೆ ಆದ್ಯತೆ ನೀಡಿದ ಮಠಗಳಲ್ಲಿ ಇದು ಒಂದು ಈ ಮಠದ ಉದ್ದೇಶವೇ ಅದ್ವೈತ ಸಿದ್ಧಾಂತ ತತ್ವಗಳ ಪ್ರಚಾರವಾಗಿದೆ. 
ರಾಘವೇಂದ್ರ ಮಠ :1984 ರ ಅಕ್ಟೋಬರ 31 ರಲ್ಲಿ ಚೌಬಜಾರನಲ್ಲಿ ಸ್ಥಾಪನೆಯಾದ ಈ ಮಠವು ಬ್ರಾಹ್ಮಣರ ಆರಾಧ್ಯ ದೈವ ರಾಘವೇಂದ್ರ ಮಹಾಸ್ವಾಮಿಗಳದ್ದು.
ಒಪ್ಪತ್ತೇಶ್ವರ ಮಠ :ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ದಲ್ಲಿ ನೆಲೆಸಿದ್ದ ಶರಣರಲ್ಲಿ ಒಪ್ಪತ್ತೇಶ್ವರರು ಒಬ್ಬರು ಶ್ರೀ ಮ.ನ.ಪ್ರ.ಒಪ್ಪತ್ತೇಶ್ವರ ಶ್ರೀಗಳಿಂದ ಪ್ರಾರಂಭವಾಗಿ ಇಂದಿನ ಅಭಿನವ ಒಪ್ಪತ್ತೇಶ್ವರ ಶ್ರೀಗಳವರೆಗೆ ಗುಳೇಗುಡ್ಡ ಪರಿಸರದಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದೆ.
ಮಾರ್ವಡಿಗಳ ಬಾಲಾಜಿ ಗುಡಿ ಮತ್ತು ಜಗನ್ನಾಥ ದೇವಾಲಯ:
ಅಯೋದ್ಯೆಯಿಂದ ಆಗಮಿಸಿದ ಸನ್ಯಾಸಿಗಳಾದ ರಘುನಾಥ ದಾಸ ಈ ದೇವಾಲಯ ಸ್ಥಾಪನೆಯಲ್ಲಿ ಶ್ರಮಿಸಿದರು.ಇಲ್ಲಿ ರಾಮ ,ಲಕ್ಷ್ಮಣ ಸೀತೆಯರ ಪೂಜೆಯು ನಿರಂತರವಗಿ ನಡೆಯುತ್ತದೆ.ಮಹೇಶ್ವರಿ ಜನಾಂಗದವರು ಈ ಎರಡೂ ದೇವಾಲಯಗಳನ್ನು ನೋಡುವದರ ಜೊತೆಗೆ ಗೋಶಾಲೆ,ಮಹೇಶ್ವರಿ ವಿದ್ಯಾ ಪ್ರಸಾರಕ ಮಂಡಳಿ,ಹೆರಿಗೆ ಆಸ್ಪತ್ರೆಗಳನ್ನು ಸರಕಾರದ ಅನುದಾನವಿಲ್ಲದೆ ನಡೆಸಿಕೊಂಡು ಬರುತ್ತಿರುವುದು ಮಾರ್ವಾಡಿಗಳ ಹೆಗ್ಗಳಿಕೆ.
ಅಲ್ಲದೆ.ಸೋಮವಂಶ ಕ್ಷತ್ರೀಯ ಸಮಾಜದ ಅಂಭಾಭವಾನಿ ದೇವಾಲಯ, ರೇಣುಕಾಚಾರ್ಯ ರ ಮಠ, ಶ್ರೀ ಮಾರುತೇಶ್ವರ ಜಾತ್ರೆ ಸಾಲೇಶ್ವರ ಜಾತ್ರೆ,ಬನಶಂಕರಿ ಜಾತ್ರೆ,ಹಾದಿ ಬಸವೇಶ್ವರ ಜಾತ್ರೆ, ಮೂಕೇಶ್ವರಿ ಜಾತ್ರೆಗಳು ಗುಳೇಗುಡ್ಡ ಜನತೆಯಲ್ಲಿ ಸಾಮರಸ್ಯ ದ ಬೀಜವನ್ನು ಬಿತ್ತುವದರ ಜೊತೆಗೆ ಸಂಸ್ಕೃತಿಯ ವಾಹಕಗಳಾಗಿ ಭಾವೈಕ್ಯದ ಬೇರುಗಳನ್ನು ಭದ್ರ ಪಡಿಸುತ್ತಿವೆ.

ಸಾಹಿತ್ಯದ ಪಾತ್ರ :
ಗುಳೇಗುಡ್ಡ ನಗರವು  ಸಾಹಿತ್ಯ ಮತ್ತು ಸಾಂಸ್ಕೃತಿಯ ತವರೂರು, ಇಲ್ಲಿನ ಸಾಹಿತಿಗಳು ತಮ್ಮ ಪ್ರತಿಭೆಯಿಂದ ಸಾಹಿತ್ಯದ ಕಣಜವನ್ನು ಶ್ರೀಮಂತಗೊಳಿಸಿದ್ದಾರೆ ಅದರಲ್ಲಿ ನಾವು ಹೆಸರಿಸಬಹುದಾದ ಕೃತಿ ಎಂದರೆ "ಹಮ್ಮೀರ ಕಾವ್ಯ" ಇದನ್ನು ಮುರುಘಾರಾಜೇಂದ್ರ ಶ್ರೀಗಳು ರಚಿಸಿದರೆಂದು ಉಲ್ಲೇಖವಿದೆ. ಗುಳೇಗುಡ್ಡ ದ ಕವಿ ,ಬೆಂದ್ರೆಯವರ ಶಿಷ್ಯ ರಾದ ಡಾ.ಎಸ್.ಎಸ್.ಬಸುಪಟ್ಟದ ಈ ನೆಲದ ಅಪರೂಪದ ಕವಿ.ನಾನು ವಿಶ್ವ ಕನ್ನಡ ಕನ್ನಡ ಸಮ್ಮೇಳನಕ್ಕೆ ಬೆಳಗಾವಿಗೆ ಹೋದಾಗ ನಿತ್ಯೋತ್ಸವ ಕವಿ ನಿಸಾರ ಅಹ್ಮದ್ ರನ್ನು ಬೇಟಿಯಾದೆ ಆವಾಗ ಅವರು ನನ್ನನ್ನು ಯಾವ ಊರಿನವರು ಎಂದು ಕೇಳಿದರು ಆಗ ನಾನು ಗುಳೇಗುಡ್ಡ ದವನು ಎಂದಾಗ "ಎಸ್ ಎಸ್ ಬಸುಪಟ್ಟದ ಊರಾ ! ಎಂದರು, ಹೀಗೆ ಗುಳೇಗುಡ್ಡ ಕೀರ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಪರಿಚಯಿಸಿದರು, ಇವರು ವೀಣಾನಾದ,ರತ್ನ ದೀಪ, ನಾವು ಸತ್ತವರಲ್ಲ, ಕೃತಿಗಳನ್ನು ನೀಡಿದ್ದಲ್ಲದೇ "ನಿಜಗುಣ ಶಿವಯೋಗಿಗಳ ಜೀವನ ಮತ್ತು ಕೃತಿಗಳು"  ಸಂಶೋಧನಾ ಗ್ರಂಥವನ್ನು ಬರೆದರು. 
ಭಂಡಾರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ರಾದ ಡಾ.ಮಹಾದೇವ ಕಣವಿ ಕಾವ್ಯ, ಕಥೆ,ಕಾದಂಬರಿಯ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಪ್ರಸಿದ್ಧ ರಾದವರು.ತಾಯಿ ಬೇರು,ಮುಟ್ಟಲ ಮುರಕಿ
,ಕಲ್ಕಿ,ದೇವರ ಹೆಸರಿನ ಮೇಲೆ ಪ್ರಮಾಣ ಮಾಡಿ ಇವರ ಕೃತಿಗಳು.
ಮೂಲತಹ ವಾಣಿಜ್ಯದ ವಿದ್ಯಾರ್ಥಿಯಾಗಿದ್ದರೂ, ವಿಧಾನಸಭೆಯ ಸದಸ್ಯರಾಗಿ, ಕವಿಯಾಗಿ ಗುಳೇಗುಡ್ಡ ಪರಿಸರದಲ್ಲಿ ಮಲ್ಲಿಕಾರ್ಜುನ ಬನ್ನಿ, ಸಾಹಿತ್ಯ ಕ್ಷೇತ್ರದಲ್ಲಿನ ಇನ್ನೊಬ್ಬ ಅಪರೂಪದ ಪ್ರತಿಭೆ ಇವರು ಒಡಲಾಳದ ಬೆಂಕಿ, ಆರತಿ, ಸತ್ಯ ಪ್ಪನ ಸಾವಿನ ಸುತ್ತ, ಏಳು ಮಲ್ಲಿಗೆ ಕೃತಿಗಳನ್ನು ಬರೆದು ಗುಳೇಗುಡ್ಡ  ಸಾಹಿತ್ಯದ ಇತಿಹಾಸಕ್ಕೆ ತಮ್ಮ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ .
ಡಾ.ಸಿ.ಎಮ್ ಜೋಶಿ ಗುಳೇಗುಡ್ಡದ ಅಪ್ರತಿಮ ಪ್ರತಿಭೆ ಮೂಲತಹ ಸಮಾಜ ಶಾಸ್ತ್ರ ದ ಪ್ರಾಧ್ಯಾಪಕ ಮತ್ತು ಸಮಾಜ ಶಾಸ್ತ್ರ ದ ಲೇಖಕ ರಾದರೂ ಸಾಹಿತ್ಯ ಕ್ಷೇತ್ರ ಮತ್ತು ನಾಟಕ  ಕ್ಷೇತ್ರದಲ್ಲಿನ ಅವರ ಕೊಡುಗೆ ಅವಿಸ್ಮರಣೀಯ, ಭಾವ ಸಂಗಮ, ಭಾವಾಂಜಲಿ ಅವರ  ಕವನ ಸಂಕಲನಗಳಾದರೆ,ಮೂಡದ ನೆರಳು (ನಾಟಕ) ಮತ್ತು ನಾಟಕ ಕಾರ ಭಸ್ಮೆ_ಒಂದು ಚಿಂತನೆ,ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಸಿಂಧೆ,ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ವೀರಪುಲಿಕೇಶಿ ಪದವಿ ಮಹಾವಿದ್ಯಾಲಯದ ಕನ್ನಡದ ಪ್ರಾಧ್ಯಾಪಕ ಡಾ.ರಾಜಶೇಖರ ಬಸುಪಟ್ಟದ ಗುಳೇಗುಡ್ಡ ದ ಅನರ್ಘ್ಯ ರತ್ನ, ಸರಳ ,ಸತತ ಪರಿಶ್ರಮದ ನಿಷ್ಠುರು ಕವಿ .ಇವರು 'ನಿನ್ನೆ ನಾಳೆಗಳ ಮಧ್ಯೆ' ಕವನ ಸಂಕಲನ,ಬಯಲು ಬೆರಗು,ಮಡಿವಾಳಪ್ಪ ಪಟ್ಟಣಶೆಟ್ಟಿ ಜೀವನ ಚರಿತ್ರೆ.ವಿವೇಕ ಚಿಂತಾಮಣಿ,ಚಿತ್ತರಗಿ-ಇಲಕಲ್ ವಿಜಯ ಮಹಾಂತೇಶ ಸಂಸ್ಥಾನಮಠ-ಒಂದು ಸಾಂಸ್ಕೃತಿಕ ಅಧ್ಯಯನ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ರಂಗ ಸಾಹಿತ್ಯ ದಲ್ಲಿ ಹೆಸರು ಮಾಡಿರುವ ಡಾ.ಭೀಮನಗೌಡ ಪಾಟೀಲ, ಪ್ರೊ.ಜಿ.ಜಿ.ಹೂಗಾರ, ಡಾ.ಸುಭಾಷ ಪೊರೆ,ಡಾ. ವ್ಹಿ.ಎ.ಬೆನಕನಾಳ,ಕೆ.ಎನ್ ಯರಗಾ,ಮಹದೇವ ಜಗತಾಪ,ಡಾ.ಎಚ್ ಎಸ್ ಘಂಟಿ,ಡಾ.ಸಂಗಮೇಶ ಕಲ್ಯಾಣಿ, ಕೆ ಆರ್ ರಾಯಚೂರ,ಡಾ.ಪ್ರಕಾಶ ನರಗುಂದ,ಪ್ರೊ.ಎಸ್ ಐ.ರಾಜನಾಳ ,ಎಮ್ ಜಿ ಅಂಗಡಿ,ಶಿವಕುಮಾರ ಕರನಂದಿ ಮುಂತಾದ ಕವಿಗಳು ತಮ್ಮ ಕೃತಿಗಳನ್ನು ರಚಿಸಿ ಗುಳೇಗುಡ್ಡ ಸಾಹಿತ್ಯದ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ.

ಗುಳೇಗುಡ್ಡ ಇತಿಹಾಸ ನಿರ್ಮಾಣದಲ್ಲಿ ನೇಕಾರಿಕೆ ಪಾತ್ರ 

ಗುಳೇಗುಡ್ಡ ದಲ್ಲಿ ಎರಡು ರೀತಿಯ ನೇಕಾರರನ್ನು ಕಾಣಬಹುದು ಒಂದು ಜಾತಿಯಿಂದ ನೇಕಾರರಾದರೆ ಇನ್ನೊಬ್ಬರು ಉಪಜೀವನಕ್ಕಾಗಿ ವೃತ್ತಿ ನೇಕಾರರು. ಜಾತಿಯಿಂದ ನೇಕಾರೆಂದರೆ_ ದೇವಾಂಗ, ಪದ್ಮಸಾಲಿ,ಪಟ್ಟಸಾಲಿ ಸಕುಳಸಾಲಿ,ಕುರುಹಿನಶೆಟ್ಟಿ, ಶಿವಸೋಮಸಾಲಿ,ನೀಲಗಾರರು.ಇನ್ನು ಉಪಜೀವನಕ್ಕಾಗಿ ಜಂಗಮ,ಲಿಂಗಾಯಿತ, ಕಂಬಾರ,ಕಂಬಾರರು ಈ ವೃತ್ತಿಯನ್ನು ಮಾಡುತ್ತಿದ್ದಾರೆ.ಜಾತಿಯಿಂದ ನೇಕಾರರಿಗೆ ಬನಶಂಕರಿಯೇ ಕುಲದೇವತೆ ಮತ್ತು ಆರಾಧ್ಯ ದೈವ ಈ ಬನಶಂಕರಿ ದೇವಿ.ಬದಾಮಿ ಚಾಲುಕ್ಯರ ಕುಲದೇವತೆಯು ಬನಶಂಕರಿಯೇ ! ಹಾಗಾಗಿ ಗುಳೇಗುಡ್ಡ ನೇಕಾರಿಕೆ ಇತಿಹಾಸ ಚಾಲುಕ್ಯರ ಇತಿಹಾಸಕ್ಕೆ ಬಂದು ತಲುಪುತ್ತದೆ.
       ಬದಾಮಿ ಚಾಲುಕ್ಯರ ಇತಿಹಾಸ ಪ್ರಾರಂಭವಾಗುವದು ಆರನೇ ಶತಮಾನದಲ್ಲಿ.ಈ ಮನೆತನ ಜಯಸಿಂಹನಿಂದ ಪ್ರಾರಂಭವಾದರೂ ಐತಿಹಾಸಿಕ ಪುರುಷ ಒಂದನೆಯ ಪುಲಿಕೇಶಿಯಿಂದ ನಮಗೆ ಸ್ಪಷ್ಟ ವಾದ ಇತಿಹಾಸ ತಿಳಿಯುತ್ತದೆ.ಇವರ ಪ್ರಸಿದ್ಧ ಅರಸ ಎರಡನೆಯ ಪುಲಿಕೇಶಿಯು ಇಡಿ ದಕ್ಷಿಣ ಭಾರತವನ್ನಾಳಿ ದಕ್ಷಿಣಾ ಪಥೇಶ್ವರನೆಂದು ಬಿರುದಾಂಕಿತನಾಗಿದ್ದ ಆದರೆ ಪಲ್ಲವ ದೊರೆ 1 ನೇ ನರಸಿಂಹವರ್ಮನಿಂದ ಸೋತು ಹತನಾದಾಗ 13 ವರ್ಷ ಪಲ್ಲವರ ಆಡಳಿತಕ್ಕೆ ಬದಾಮಿ(ವಾತಾಪಿ) ಒಳಪಟ್ಟಿತ್ತು ಆಗ ಗುಳೇಗುಡ್ಡ ಆಡಳಿತದ ಮೇಲೆ ಪಲ್ಲವರ ಆಡಳಿತದ ಪರಿಣಾಮ ಬೀರಿತ್ತು.
          ಇಂದು ನೇಕಾರಿಕೆ ತೀವ್ರ ಸಂಕಷ್ಟ ದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಅದು ಗುಳೇಗುಡ್ಡದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೆ ಬಹು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇವತ್ತು ಗುಳೇಗುಡ್ಡ ತಾಲೂಕಾ ಕೇಂದ್ರವಾಗಿ ಘೋಷಣೆಯಾಗಿ ಕಾರ್ಯ ಪ್ರವೃತ್ತವಾಗಿದ್ದರೂ ಕೂಡಾ ಅದು ಪೂರ್ಣ ಪ್ರಮಾಣದಲ್ಲಿ ಆಡಳಿತವನ್ನು ಹೊಂದದಿರವುದು ಅದರ ಆರ್ಥಿಕ ಚಟುವಟಿಕೆಯ ಮೇಲೆ ಹಿನ್ನಡೆಯನ್ನು ಕಂಡಿದೆ.

ಶಿಕ್ಷಣ ಸಂಸ್ಥೆಗಳ ಪಾತ್ರ :
       ಸಾ.ಶ.1921 ರಲ್ಲಿ ಶ್ರೀ ಮ.ನಿ.ಪ್ರ. ಒಪ್ಪತ್ತೇಶ್ವರ ಶ್ರೀಗಳ ಅಮೃತ ಹಸ್ತದಿಂದ ಪ್ರಾರಂಭವಾದ  ಮುನಿಪಲ್ ಹೈಸ್ಕೂಲ ಗುಳೇಗುಡ್ಡ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ಇದು ಗುಳೇಗುಡ್ಡ ದಾನಿಗಳ ಅಭಯಹಸ್ತದಿಂದ ಪಾರಂಭ ವಾಗಿ ಗುಳೇಗುಡ್ಡ ಭಾಗದ ಅದೆಷ್ಟೋ ಜನರ ಜೀವನದ ಸಂಜೀವಿನಿಯಾಗಿದೆ ನಂತರ ಅದು ಸರ್ಕಾರಿ ಪ್ರೌಢ ಶಾಲೆ.ಬಾಲಕರ ಸ.ಪ.ಪೂ ಕಾಲೇಜಾಗಿದೆ ಇದೆ ಅಂಗಳದಲ್ಲಿ ಸರಕಾರಿ ಪದವಿ ಕಾಲೇಜು ಸ್ಥಾಪನೆಯಾಗಿ ಬಡವರ ಮಕ್ಕಳ ಆಶಾಕಿರಣವಾಗಿದೆ , ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಜಗತ್ತಿನ ವಿವಿಧ ಭಾಗಗಳಲ್ಲ ಉನ್ನತ ಸ್ಥಾನ ಮಾನ ಹೊಂದಿದ್ದಾರೆ. ಇದೆ ಸಂಸ್ಥೆಯಿಂದ ಬೇರ್ಪಟ್ಟ ಬಾಲಕಿಯರ ಪ್ರೌಢ ಶಾಲೆ, ನಂತರ ಪದವಿಪೂರ್ವ ಕಾಲೇಜಾಗಿದೆ. ಇದೆ ಸಂಸ್ಥೆಯಲ್ಲಿ ನಡೆದ ಪಿ.ಇ.ಟಿ ಟ್ರಸ್ಟಿನ ಭಂಡಾರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೆಯೇ ಎಸ್ ಕೆ ರಾಠಿ ವಿಜ್ಞಾನ ಮಹಾವಿದ್ಯಾಲಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುಳೇಗುಡ್ಡ ಜನರ ಶಿಕ್ಷಣದ ಆಶಾಕಿರಣವಾಗಿದೆ ಇಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಇವುಗಳಲ್ಲದೆ. ಕಾಂಚನೇಶ್ವರಿ ಪ್ರೌಢ ಶಾಲೆ ,ಕಾಡಸಿದ್ಧೇಶ್ವರ ಪ್ರೌಢ ಶಾಲೆ, ಗುರುಸಿದ್ಧೇಶ್ವರ ಪ್ರೌಢ ಶಾಲೆ,ಮಹಿಳಾ ಶಿಕ್ಷಣ ಮಹಾವಿದ್ಯಾಲಯ,ವೆಂಕಟೇಶ್ವರ ಕನ್ನಡ ಮಾಧ್ಯಮ ಶಾಲೆ, ಮಹೇಶ್ವರಿ ಸಂಸ್ಥೆಯ  ಹೊಳಬಸು ಶೆಟ್ಟರವರ ಪ್ರಾಥಮಿಕ ಶಾಲೆಯಿಂದ ಪ.ಪೂ ಕಾಲೇಜು ವರೆಗೆ ಶಿಕ್ಷಣ ಸಂಸ್ಥೆಗಳು ಗುಳೇಗುಡ್ಡದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಮೂಲ್ಯವಾದ ಕೊಡುಗೆ ನೀಡಿವೆ.


 






 
 
       

.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...