Monday, January 20, 2025

ಕಣ್ಣಿನ ಕುಡಿ ನೋಟ

ಯಾವ ಕಲೆಗಾರನ ಕುಂಚದ ಕುಡಿಯಿದು
ಕುಡಿನೋಟದಿಂದಲೆ ಕಲ್ಲು ಹೃದಯ
ಕೊಲ್ಲುವ ಕತ್ತಿಯ ಮೊನೆಯಿದು
ಸ್ನಿಗ್ಧ ಸೌಂದರ್ಯದ ಬಲೆಯಿದು॥

ಯಾರು ಜೀವಕಳೆ ತುಂಬಿದರು 
ಚಿತ್ರಗಾರ ಡಾ ವಿಂಚಿಯ
ಮೊನಾಲೀಸಾ !
ಮುಗ್ಧತೆಯ ಮಡಿಲು ಸೌಂದರ್ಯ ಬೆಡಗು
ಬಂದಳು ಕುಂಬ ಮೇಳದ ರುದ್ರಾಕ್ಷಿ ಬಾಲೆಯಾಗಿ॥

ಯಾವ ಜಂಗಮವಾಣಿಯ ರಸಗವಳ 
ಹೊಂಗನಸಿನ ಸಂಗೀತದ  ಹೊಸರಾಗವಿದು।
ರಂಭೆ ಊರ್ವಸಿಯೂ ನಸುನಾಚುವಂತೆ
ಸೇರಹಿಡಿದ ಗೊಂಬೆಯ ಬಿಂಬವಿದು॥

ಯಾರು ಸೆರೆಹಿಡಿದು ತೇಲಿ ಬಿಟ್ಟರು
ಈ ಬ್ರಹ್ಮ ಗೀಚಿದ ಚಿತ್ರ ಬರಹ।
ಸಾವಿರ ಮನಸ್ಸುಗಳ ಸೂರೆಗೊಂಡು
ದೂರ ಉಳಿವ ಕೃಷ್ಣನ ಕೈಚಳಕವಿದು॥

ಯಾವ ಹಳ್ಳಿಯ ಹೈದನ 
ತೋಟದಲ್ಲರಳಿದ ಚೆಂಗುಲಾಬಿಯಿದು ।
ಪರಿಮಳ ಸೂಸುವ ಮಲ್ಲಿಗೆಯು
ಸುರಿಯುತಿದೆ ಎಲ್ಲೆಲ್ಲೋ ಮುಂಗಾರು ಮಳೆ ॥

ಯಾವ ಪ್ರಕೃತಿಯು ನೀಡಿದ ಆಕೃತಿಯಿದು
ಬಣ್ಣವೆ ಬಡಿವಾರವೆಂದ ಬಂಡವಾಳವೆ ಬಯಲು।
ಬಣ್ಣಿಸುವ ಪದಗಳು ಬರಿದು ಮಾಡಿದವಳಿವಳು  
ಆಶೆಗಣ್ಣಿಗೆ ಉಷ್ಣ ವೇರಸಿದ ಕೃಷ್ಣವೇಣಿಯಿವಳು॥

  

Sunday, January 19, 2025

ಬಯಲು ದಾರಿ

ಬಯಲು ದಾರಿಯಲ್ಲಿ 
ಉರಿವ ಬಿಸಿಲು ಮೀರಿ 
ಸಪ್ತ ಸಾಗರ ದಾಟಲು
ಸತ್ಯ ವೊಂದೆ ಹೊತ್ತು ಸಾಗವ 
ಸಂಪತ್ತಿನಂತಹ ಆಸರೆ ।

ತಗ್ಗು ದಿನ್ನೆ ಗಳರುವ  ದಾರಿ
ಬಗ್ಗಿ ನಡೆದು ಸುಗ್ಗಿ ಕಾಣಲು  
ಗೆಳೆಯರ ಹಿತನುಡಿಗಳೆ 
ಗಿಡಮರಗಳಂತೆ ನೆರಳು 
ಬೆರಳು ತೋರಿಸಲಾಸರೆ ॥

ಬಡತನವೆಂಬ ಭೂತ 
ಸಿಗದ ಪ್ರೀತಿ,ಎಲ್ಲ ನನ್ನದೆಂಬ ಭ್ರಾಂತಿ
ಉರಿವ ಕೆಂಡದಲ್ಲೂ ಬದುಕಲು,
ಸಾಕ್ಷಿಪ್ರಜ್ಞೆಯೊಂದೆ ಜಲದಂತೆ 
ಬದುಕಿಗಾಸರೆ ॥

ವಿಶಾದವೂ ವಿನೋದವೊ 
ಬಿರುಗಾಳಿಗೆ ಸಿಕ್ಕು ಓಲುವಾಗ
ಸಿಗುವ ಭ್ರಾತೃ ಭಾವನೆ 
ದಡಸೇರಿಸುವ ಭರವಸೆಯೇ 
ಜೀವಕಾಸರೆ ॥
 
ಉಕ್ಕಿ ಹರಿವ ನದಿಗಳು
ದಿಕ್ಕು ಕಾಣದಂತೆ ಸುರಿವ ಮಳೆಯಲಿ
ಸಿಕ್ಕ  ಸಹಕಾರದ ಹನಿಗಳು
ಹೊಕ್ಕು ತುಂಬಲು ಶೆಲೆಗಳು
ಒರತೆ ಗಾಸರೆ  ॥

Tuesday, January 14, 2025

ಮರದ ದಿಮ್ಮೆಯ ಮುಂದೆ

ಮರದ ದಿಮ್ಮೆಯ ಮುಂದೆ

ಮುಗಿಲು ಚುಂಬಿಸಲು ಹಗಲಿರುಳೆನ್ನದೆ ಬೆಳೆದು
ಖಗ ಪಕ್ಷಿಗಳಿಗೆ ನೆರಳಾಗಿ ಉರುಳಿದೆ ನೀ ಕೊರಡಾಗಿ
ಹಗೆಯೆಂಬುದಿಲ್ಲ ಎಲ್ಲಾ ಜಗದುಳಿವಿಗೆ ನಗುವಿಗೆ ॥

ಬೋಳಾದರೇನು ಹಾಳಾದರೇನು ಉಳಿದು
ಬೆಳಯುವ ತಲೆಗಳಿಗೆ ನೀ ಆಸರೆಗಂಬ
ಕಳೆದು ತೀಡಿದರೆ ಸಿಂಹಾಸನ ರಾಜನಿಗೆ॥

ನೀನಿಟ್ಟ ಸೌಖ್ಯದ ಸಿರಿ, ಬೆಳೆ ಬಾನೆತ್ತರಕೆ 
ಬರಿ ಬೆತ್ತಲೆ, ಕತ್ತಲೆ  ದಿನಕರ ಉರುಳಿದಾಗ
ಸತ್ತರೂ ಸುತ್ತುವರೆದರೆ ನೀ ಆಹಾರ ಗೆದ್ದಲುಗಳಗೆ॥

ನಿನ್ನ ನಂತರದ ತಲೆಮಾರು ಚುಂಬಕದ ಸಾಲು 
ಎತ್ತಿಕೊಳ್ಳಲು ತವಕದ ಬಿಂಬಗಳು ನೂರಾರು
ಒಣ ಕೊಂಬೆಯಾದರೇನು ನೀ ಬೆಲೆ ಕೆಂಡಗಳಿಗೆ॥
 
ಎತ್ತರ ಬೆಳೆದು ಕತ್ತು ಬಗ್ಗಿಸಿ ಕಿರಿಯಾದೆ ಮಲಗಿ 
ಸುತ್ತಲೂ ಏರಿದೆ ಪ್ರೀತಿಯ ಅಮಲು  ಮರೆತು 
ಬತ್ತಳಿಕೆಯಲ್ಲಿಲ್ಲ  ಹಮ್ಮಿ ಬಿಮ್ಮಿನ ಬಾಣ,ಬಿಲ್ಲುಗಳಿಗೆ  ॥

Monday, January 13, 2025

ಕಲಿಗಾಲವರಳಿದರೆ

ಮೂಢನಂಬಿಕೆಗಳು ಮೌಡ್ಯದ ಅಡ್ಯೆಯಾಗಿ
ಆಡಂಬರಗಳೆ ಸಂಸ್ಕೃತಿಯ ಸೋಗುಗಳಾದರೆ
ಶೋಷಣೆಯು ಸಂತೋಷದ ಮೂಲವಾಗುವುದು
ಶಂಡನು ರಾಜನಾಗಿ ರಾಜ್ಯ ವಾಳುವುನಯ್ಯ

ಗರ್ವವು ಸ್ವಾಭಿಮಾನದ ಪ್ರತೀಕವಾಗಿ
ಗುರುತನ ಉದರ ಉದ್ಯೋಗವಾದರೆ
ಹಿರಿತನ ಕಮಿಷನ ದಂದೆಯಾಗುವುದು
ದೊರೆತನದ ಅಮಲು ಮಹಲಾಗುವುದಯ್ಯ

ಆರೈಕೆಯು ಪೂರೈಕೆಯ ಅರ್ಥಶಾಸ್ತ್ರವಾಗಿ
ವಿಕಸನದ ಮಾನಗಳು ಮಹಡಿಗಳಾದರೆ
ಹುಸಿಗನಸುಗಳೆ ನಿಜ ಸಾಮ್ರಾಜ್ಯಳಾಗುವವು
ದಾಸಿ ಮಗನ ದರ್ಬಾರಗಸಿಗ ಸಾಗುವುದಯ್ಯ

ಪ್ರೀತಿಯ ನಾಟಕಗಳು ಪವಿತ್ರ ಮಂದಿರಗಳಾಗಿ
ಖ್ಯಾತಿ ಕುಖ್ಯಾತಿಯ ಅಂತರವರಿಯದಿದ್ದರೆ
ಜೋತಿಷಿಗಳೇ ನಿಜ ದೇವರುಗಳಾಗುವರು
ವಂಚಕನಿಗೆ ಜಾಣನ ಪಟ್ಟಗಟ್ಟುವರಯ್ಯ


Tuesday, January 7, 2025

ಲಾಲ ಬಹದ್ದೂರ ಶಾಸ್ತ್ರೀಜಿ

        ವರ್ಷದುದ್ದಕ್ಕೂ ಇಂದು ನಾವು ಮಹಾ ಪುರುಷರ ಜಯಂತಿಗಳನ್ನು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಈ ಆಚರಣೆಗಳ ಮುಖ್ಯ ಉದ್ದೇಶವೇ ಸಮಾಜವು ಅವರ ಜೀವನ ಸಾಧನೆಗಳನ್ನು ಸ್ಮರಿಸಬೇಕು ಮತ್ತು ಅವರ ಆದರ್ಶ ಗಳನ್ನು ಜೀವನದಲ್ಲಿ ರೂಢಿಸಿಕೊಂಡು ನಡೆಯಲಿ ಎಂದು.
           ಶ್ರೀಮತಿ ಪರಮೇಶ್ವರಿ ಹಿರೇಮಠ ಅವರು ತಮ್ಮ  ತಂದೆಯವರ  ಲಿಂಗೈಕ್ಯ ದಿನದ ಆಚರಣೆಯ ಈ ಸಂದರ್ಭ ದಲ್ಲಿ  ಸಮಾಜ ಮತ್ತು ದೇಶದ ಸಲುವಾಗಿ ದುಡಿದ ಸಾಧಕ ಮಹನಿಯರ ಲೇಖನಗಳನ್ನು ಶೈಕ್ಷಣಿಕ  ಭಾಗವಾಗಿ ಒಂದು ಕಡೆ ನೀಡಬೇಕೆಂದು ಮಾಡಿದ ಕಾರ್ಯ ಸ್ತುತ್ಯಾರ್ಹ. ಈಗ ನಾನು ಆಯ್ಕೆ ಮಾಡಿದ ಮತ್ತು ಬರೆಯಲು ಪ್ರಯತ್ನಿಸಿದ ಮಹನೀಯರು ಎಂದರೆ ಭಾರತದ ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತ್ರೀಜಿಯವರು.
         ನಾನು ಓದಿದ ಅತ್ಯಂತ ಅಪರೂಪದ ಆದರ್ಶ ರಾಜನೀತಿಜ್ಞ ಲಾಲ ಬಹದ್ದೂರ ಶಾಸ್ತ್ರಿ ಜೀ ಯವರು . ಸುಸಂಸ್ಕೃತ ಮನೆತನದಲ್ಲಿ  ಅಕ್ಟೋಬರ  02 .1904 ರಲ್ಲಿ ಉತ್ತರ ಪ್ರದೇಶದ ಮುಗಲ್ಸರಾಯಿಯಲ್ಲಿ ತಾಯಿಯ ಅಜ್ಜಿಯರ ಮನೆಯಲ್ಲಿ ಜನಿಸಿದರು  ಹಾಗಾಗಿ ಅವರು ತಮ್ಮ ಜೀವನದ ಮೊದಲ ವರ್ಷ ಅಲ್ಲಿ ವಾಸಿಸುತ್ತಿದ್ದರು. ಶಾಸ್ತ್ರಿಯವರ ತಂದೆ ಶರದ್ ಪ್ರಸಾದ್ ಶ್ರೀವಾಸ್ತವ ಅವರು ಶಾಲಾ ಶಿಕ್ಷಕರಾಗಿದ್ದರು ಅವರ ತಾಯಿ ರಾಮದುಲಾರಿ ದೇವಿ ಮುಘಲ್ ಸರಾಯಿನ  ರೈಲ್ವೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಇಂಗ್ಲಿಷ್ ಶಿಕ್ಷಕರಾದ ಮುನ್ಷಿ ಹಜಾರಿ ಲಾಲ್ ಅವರ ಮಗಳು . ಶಾಸ್ತ್ರಿಯವರು ಅವರ ತಂದೆ ತಾಯಿಯರ ಎರಡನೇ ಮಗ
     ಮಧ್ಯಮ ವರ್ಗದ ಕುಟುಂಬದಲ್ಲಿ  ಶಾಸ್ತ್ರಿಯವರು ಬೆಳೆದರೂ ಶಿಕ್ಷಣ ಮತ್ತು ಸೌಕರ್ಯಗಳಿಗೆ ಕೊರತೆಯಾಗದಂತೆ ಬೆಳೆದು ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದರು ಸ್ವಾತಂತ್ರ್ಯ ಚಳವಳಿಗೂ ಅವರ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ, ಹರೀಶ್ ಚಂದ್ರ ಪ್ರೌಢಶಾಲೆಯಲ್ಲಿ ಅವರ ಶಿಕ್ಷಕರಾದ ನಿಷ್ಕಾಮೇಶ್ವರ್ ಪ್ರಸಾದ್ ಮಿಶ್ರಾ ಎಂಬ ದೇಶಭಕ್ತ ಮತ್ತು ಗೌರವಾನ್ವಿತ ಶಿಕ್ಷಕರ ಪ್ರೇರಣೆಯಿಂದ ಶಾಸ್ತ್ರಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಿಕೊಂಡರು ಮತ್ತು  ಸ್ವಯಂ ಸೇವಕರಾಗಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಶಾಖೆಗೆ ಸೇರಿಕೊಂಡರು ಮತ್ತು ಪಿಕೆಟಿಂಗ್ ಮತ್ತು ಬ್ರಿಟಿಷರ ಆಡಳಿತ ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು . ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿತು ಮತ್ತು ಜೈಲಿನಲ್ಲಿರಿಸಿದರು, ಆದರೆ ಅವರು ಇನ್ನೂ ಅಪ್ರಾಪ್ತರಾಗಿದ್ದರಿಂದ ನಂತರ ಬಿಡಲಾಯಿತು.    
        ಶಾಸ್ತ್ರೀಜಿ ಯವರು ಸ್ವಾಮಿ ವಿವೇಕಾನಂದ, ಅನಿಬೆಸಂಟ್ ಮಹಾತ್ಮ ಗಾಂಧಿಯವರ ಕೃತಿಗಳನ್ನು  ಅಧ್ಯಯನ ಮಾಡಿದರು ಮತ್ತು ಭಾರತವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತ ಗೊಳಿಸಲು ಅವರ ವಿರುದ್ಧ  ಚಳುವಳಿಯಲ್ಲಿ ಭಾಗವಹಿಸಿದರು. ಲಾಲಾ ಲಜಪತರಾಯರು ಸ್ಥಾಪಿಸಿದ ಸರ್ವಂಟ್ಸ ಆಪ್ ಪಿಪಲ್ ಸೊಸೈಟಿಯ ಆಜೀವ ಸದಸ್ಯ ರಾದರು ಮತ್ತು ಗಾಂಧಿಯವರ ಮಾರ್ಗದರ್ಶನಲ್ಲಿ ಹರಿಜನ ಸೇವೆಯಲ್ಲಿ ತೊಡಗಿದರು.
        1928 ರಲ್ಲಿ ಮಹಾತ್ಮಾ ಗಾಂಧಿಯವರ ಕರೆಯ ಮೇರೆಗೆ ಶಾಸ್ತ್ರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾದರು. ಸಕ್ರಿಯ  ಚಳುವಳಿಯಲ್ಲಿ ತೊಡಗಿದ  ಕಾರಣಕ್ಕೆ ಅವರು  ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿ ಕಲಿಯಬೇಕಾಯಿತು.1940 ರಲ್ಲಿ ಗಾಂಧೀಜಿಯವರ ವೈಯಕ್ತಿಕ ಸತ್ಯಾಗ್ರಹ ದಲ್ಲಿ ಭಾಗವಹಿಸಿದ ಕಾರಣಕ್ಕೆ ಇವರನ್ನು ಮತ್ತೆ ಒಂದು ವರ್ಷ ಜೈಲಿಗೆ ತಳ್ಳಲಾಗಿತ್ತು. 
        ಭಾರತದ ಸ್ವಾತಂತ್ರ್ಯ ನಂತರ ತಮ್ಮ ತವರು ರಾಜ್ಯ ವಾದ ಉತ್ತರ ಪ್ರದೇಶದಲ್ಲಿ ಸಂಸದೀಯ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿದರು ತದನಂತರ ಸಾರಿಗೆ ಸಚಿವರಾಗಿ ಮಹಿಳಾ ನಿರ್ವಾಹಕರನ್ನು ನೇಮಕ ಮಾಡಿದ ಮೊದಲಿಗರಾದರು ಇವರ ಕಾರ್ಯ ದಕ್ಷತೆಯನ್ನು ಗಮನಿಸಿ 1951 ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ಸಿನ ಕಾರ್ಯ ದರ್ಶಿಯನ್ನಾಗಿ ಮಾಡಿದರು ಇವರ ಚಾಣಕ್ಯ ನಡೆಯಿಂದ 1952,1957, 1962 ರ ಚುನಾವಣೆಯಲ್ಲಿ ಕಾಂಗ್ರೆಸ್ಸು ಜಯಭೇರಿ ಹೊಡೆಯುವಂತೆ ಮಾಡಿದರು, ಮುಂದೆ ನೆಹರುರವರು ಶಾಸ್ತ್ರೀಜಿಯವರನ್ನು ಕೇಂದ್ರ ರೈಲ್ವೆಯ ಸಚಿವರನ್ನಾಗಿ ಮಾಡಿದರು ಈ ಆವಧಿಯಲ್ಲಾದ ರೈಲು ಅಪಘಾತದ ಹೊಣೆ ಹೊತ್ತು ರಾಜಿನಾಮೆ ನೀಡಿದರು.ಇದು ಅವರ ಆದರ್ಶ ಬದುಕಿನ ಬಹು ದೊಡ್ಡ ಉದಾಹರಣೆಯಾಗಿದೆ.ಇಂತಹ  ಅವರ ಆದರ್ಶ ಜೀವನ ಮತ್ತು ದಕ್ಷತೆಯ ನಡೆ ಅವರನ್ನು ಭಾರತದ ಅತ್ಯಂತ ಉನ್ನತ ಹುದ್ದೆಯಾದ ಪ್ರಧಾನಿಯ ಹುದ್ದೆಯ ವರೆಗೆ ತಂದು ನಿಲ್ಲಿಸಿತು
       1964 ರಲ್ಲಿ ನೇಹರೂವರು ಮರಣ ಹೊಂದಿದ ಮೇಲೆ ಭಾರತ ದೇಶದ ಜನ ಮೆಚ್ಚುವ ಪ್ರಧಾನಿಯಾದರು .ಮೃದು ಸ್ವಭಾವದರೆಂದು ಭಾವಿಸಲಾದ ಲಾಲಬಹದ್ದೂರ ಶಾಸ್ತ್ರೀಯವರು ತಮ್ಮ ಅವಧಿಯಲ್ಲಿ ತೆಗೆದುಕೊಂಡ ಅವರ ನಿರ್ಧಾರಗಳಿಂದ ಮೂರ್ತಿ ಚಿಕ್ಕ ದಾದರೂ ಕೀರ್ತಿ ದೊಡ್ಡದು ಎಂದು ರುಜುವಾತುಪಡಿಸಿದರು
           ಶ್ವೇತ ಕ್ರಾಂತಿಯನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರು.
1965 ರಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿದರು
          1965 ರ ಇಂಡೋ ಪಾಕಿಸ್ತಾನ ಯುದ್ಧ ದ ಸಂದರ್ಭ ದಲ್ಲಿ ಅವರು ನೀಡಿದ  "ಜೈ ಜವಾನ ಜೈ ಕಿಸಾನ್" ಘೋಷಣೆಯು ಭಾರತೀಯರ ಸ್ವಾಭಿಮಾನ ಉತ್ತೇಜಿಸುವ ಕೆಲಸ ಮಾಡಿತು. ಪಾಕಿಸ್ತಾನವು ಕಚ್ ಪ್ರದೇಶದಲ್ಲಿ ಭಾರತೀಯ ಪಡೆಗಳೊಂದಿಗೆ ಚಕಮುಖಿ ನಡೆಸಿದಾಗ ಹೀಗೆ ಹೇಳುತ್ತಾರೆ  "ಸರ್ಕಾರದ ಕರ್ತವ್ಯವು ಸಾಕಷ್ಟು ಸ್ಪಷ್ಟವಾಗಿದೆ. ಮತ್ತು ಈ ಕರ್ತವ್ಯವನ್ನು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲಾಗುವುದು... ಅಗತ್ಯವಿರುವಷ್ಟು ಕಾಲ ಬಡತನದಲ್ಲಿ ಬದುಕಲು ನಾವು ಬಯಸುತ್ತೇವೆ ಆದರೆ ನಮ್ಮ ಸ್ವಾತಂತ್ರ್ಯವನ್ನು ಹಾಳುಮಾಡಲು ನಾವು ಅನುಮತಿಸುವುದಿಲ್ಲ" ಲಾಲಬಹದ್ದೂರ ಶಾಸ್ತ್ರಿಯವರು  ನೇಹರೂಜೀಯವರ ನಂತರ ಅವರ ಅಲಿಪ್ತ ನೀತಿಯನ್ನು ಮುಂದುವರಿಸಿದರು ಮತ್ತು ರಷ್ಯಾದ ಜೊತೆ ಉತ್ತಮ ಸಂಬಂಧ ವನ್ನು ಇಟ್ಟುಕೊಂಡಿದ್ದರು.
    ಶಾಸ್ತ್ರಿಯವರು ಭಾರತದ ಅತ್ಯಂತ ಗೌರವಾನ್ವಿತ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು ಅವರು ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಲು ನಿರಾಕರಿಸಿದ ಜಾತ್ಯತೀತವಾದಿ. 
       ಅವರು ಒಮ್ಮೆ ಹೀಗೆ ಹೇಳುತ್ತಾರೆ "ನಮ್ಮ ದೇಶದ ವಿಶಿಷ್ಟ ಅಂಶವೆಂದರೆ ನಾವು ಹಿಂದೂಗಳನ್ನು ಹೊಂದಿದ್ದೇವೆ, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಗಳು ಮತ್ತು ಇತರ ಎಲ್ಲ ಧರ್ಮಗಳ ಜನರು ನಮ್ಮಲ್ಲಿ ದೇವಾಲಯಗಳು ಮತ್ತು ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳನ್ನು ಹೊಂದಿದ್ದೇವೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯತ್ಯಾಸವಾಗಿದೆ ಮತ್ತು ಪಾಕಿಸ್ತಾನವು ತನ್ನನ್ನು ತಾನು ಇಸ್ಲಾಮಿಕ್ ರಾಜ್ಯವೆಂದು ಘೋಷಿಸುತ್ತದೆ ಮತ್ತು ಧರ್ಮವನ್ನು ರಾಜಕೀಯ ಅಂಶವಾಗಿ ಬಳಸುತ್ತದೆ, ನಾವು ಇಲ್ಲಿ ಯಾವುದೇ ಧರ್ಮವನ್ನು ಆರಿಸಿಕೊಳ್ಳಬಹುದು ಮತ್ತು ನಮಗೆ ಇಷ್ಟವಾದ ರೀತಿಯಲ್ಲಿ ಪೂಜಿಸುವ ಸ್ವಾತಂತ್ರ್ಯ ಹೊಂದಿದ್ದೇವೆ, ರಾಜಕೀಯವು ಕಳವಳಕಾರಿಯಾಗಿದೆ, ನಾವು ಪ್ರತಿಯೊಬ್ಬರೂ ಇತರರಂತೆ ಭಾರತೀಯರು." 
    ಶಾಸ್ತ್ರೀಜಿಯವರು 1966 ಜನವರಿ 11 ರಂದು ತಾಷ್ಕೆಂಟ್ ನಲ್ಲಿ ಹೃದಯಾಘಾತದಿಂದ  ಮರಣ ಹೊಂದಿದರು ಇದರ ಬಗ್ಗೆ ಕೆಲವು ವಿವಾದಗಳು ನಡೆದವು ಆ ಮಾತು ಬೇರೆ, ಅವರ ಮರಣದ ನಂತರ ಭಾರತ ಸರ್ಕಾರ 1966 ರಲ್ಲಿ ಅವರ ಸಾರ್ಥಕ ಸೇವೆಯನ್ನು ಗುರುತಿಸಿ ಮರಣೋತ್ತರ  "ಭಾರತ ರತ್ನ " ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಶ್ರೀ.ಬಸನಗೌಡ .ಯ.ಗೌಡರ 
ಉಪನ್ಯಾಸಕರು
ಬಾಲಕರ ಸರ್ಕಾರಿ ಪ.ಪೂ.ಕಾಲೇಜು 
ಗುಳೇಗುಡ್ಡ 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...