Sunday, September 25, 2022

ನಂಬುಗೆಗಳ ಉದ್ದೇಶ ಒಳ್ಳೆಯದೆ ಇದ್ದರೆ ಬೇಡ ಎನ್ನಲಾದೀತೆ ?


        ಇಂದು ಮಧ್ಯಾಹ್ನ ಲಗು ಬಗೆಯಿಂದ  ನನ್ನ ಹೊಲದ ಕಡೆ ನಡೆದೆ ರವಿವಾರ ರಜೆ ತಾನೆ.  ಅಮವಾಸ್ಯೆ ಬೇರೆ, ಹೊಲದಲ್ಲೇನು ಸಂತೋಷ ತರುವ ಬೆಳೆಯೇನು ಇಲ್ಲ. ಮಳೆರಾಯ ಎಲ್ಲಾ ಗುಡಿಸಿ ಗುಂಡಿಗೆ ಹಾಕಿದ್ದಾನೆ. ಆದರೇನು ರವಿವಾರಕ್ಕೊಮ್ಮೆ ಹೊಲ ನೋಡದಿದ್ದರೇ ಏನೋ ಕಳೆದುಕೊಂಡ ಅನುಭವ. ಭೂತಾಯಿನ್ನು ನೋಡುವುದೇ ಒಂದು ಭಾಗ್ಯ. ರೆಡಿಯಾಗಿದ್ದೆ ತಡ ಹಿಂದೆ ಅರ್ಧಾಂಗಿಯೂ ರಡಿ ಏಕೆಂದರೆ ನನ್ನೂರಿನ ಮನೆಯಲ್ಲಿ ಅಮವಾಸ್ಯೆ ಸ್ವಚ್ಚತಾ ಕಾರ್ಯ ನಡೆಯಬೇಕು ನೋಡಿ ! ಮನೆಯ ದೇವರುಗಳನ್ನು ಹಿರಿಯರ ಆತ್ಮಕ್ಕೆ ಶಾಂತಿ ಮಾಡಬೇಕು ತಾನೇ ? ದೇವರನ್ನು ಶಾಂತಮಾಡುವುದು ಎಂದರೇನು ? ನಾವು ಶಾಂತಿಯನ್ನು ಆನುಭವಿಸುವದು ಎಂದರ್ಥ. ಅದಕ್ಕೆ ಶಂಕರಾಚಾರ್ಯರು ಹೇಳದ್ದು "ನಾನೇ ದೇವರು" ಎಂದು   ಆತ್ಮ ಬೇರೆ ಅಲ್ಲ ದೇವರು ಬೇರೆ ಅಲ್ಲ. ಆತ್ಮ ನನ್ನಲ್ಲಿ ಇದೆ ಎಂದರೆ . ನನ್ನಲ್ಲಯೇ ದೇವರಿದ್ದಾನೆ ಎಂದರು. ಅದಕ್ಕೆ"ಅಹಂ ಬ್ರಹ್ಮಾಷ್ಮೀ ' ಎಂದದ್ದು  ಇದನ್ನೆ ಅವರು ಅದ್ವೈತ ಸಿದ್ದಾಂತ ಎಂದು ಕರೆದರು ಅಂದರೆ ಎರಡಲ್ಲದ್ದು ಎಂದು ಅರ್ಥ. ಇರಲಿ ಆರೇಳು ಕಿ ಮೀ ಹತ್ತು ,ಹದಿನೈದು ನಿಮಿಷಗಳಲ್ಲಿ ಶರವೇಗದ ಸ್ಪ್ಲೆಂಡರ ಬೈಕು ಹುಟ್ಟಿ ಬೆಳೆದ ಮನೆಗೆ ತಂದು ನಿಲ್ಲಿಸಿತು. ಮನೆಯಲ್ಲೇನಿದೆ !! ಅದು ಮಹಿಳೆಯರ ಹೊಕ್ಕ ಮೇಲೆಯೇ ಸ್ವರ್ಗ ಅಲ್ಲಿಯವರೆಗೆ ಅದು ನಾಲ್ಕು ಗೋಡೆಗಳು ಇರುವ ಅಘೋಷಿತ ಜೈಲೆ ಸರಿ. ಮಡದಿಯ ಕೈಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ಹೊಲದ ದಾರಿ ಹಿಡಿದೆ ಹೊಲ ತಲುಪಿದ್ದೆ ತಡ ಹೊಲದ ತುಂಬಾ ಜಿನುಗುತ್ತಾ ಹರಿಯುವ ಬುಗ್ಗೆಗಳು, ಕಾಲು ಇಟ್ಟ ಕಡೆ  ಕೈಲಾಸ ಅದು ಮನಕಾಲು ತಲುಪಿ ಕಿತ್ತುನಡೆಯಲು  ಹೆತ್ತತಾಯಿನ್ನು ನೆನೆಯಬೇಕು  ಅದು ಹೊಲವಲ್ಲ ಮಲೆನಾಡು ಮೈಮೇಲೆಳೆದುಕೊಂಡ  ಮಲಗಿದ ಮಾರಿ ಮುತ್ತು, ನಿಟ್ಟುಸಿರು ಬಿಟ್ಟು ನಡುಹೊಲಕ್ಕೆ ಬಂದೆ, ಮಳೆಗೂ ಮಾನವನನ್ನು ಮಣಿಸುವ ಶಕ್ತಿ ಇದೆ ಎಂದು ಅರ್ಥವಾಗಿದ್ದು ಆವಾಗಲೆ. ಮಡಚಿ ಮಲಗಿದ ಗೋವಿನ ಜೋಳ. ನೀರು ಕುಡಿಯುತ್ತಿರುವ ಮುಸುಕಿನ ತೆನೆ. ಪಕ್ಕದಲ್ಲಿಯೇ ಗೊರಲಿಗೆ ಆಹಾರವಾದ ಮುಸುಕಿನ ಜೋಳ. ಏನು ಮಾಡುವುದು, ಮಾನಸೂನೊಡನೆ ಜೂಜಾಟ ಆಂದರೆ ಇದೆ ಅಲ್ಲವೆ ?. ಇರಲಿ ನನ್ನ ಮುಖ್ಯವಾದ ವಿಷಯ ಅದಲ್ಲ. ಧನಿವಾರಿಸಲು ಬನ್ನಿ ಗಿಡದ ಕೆಳಗೆ ಒರಗಿದ್ದೇ ತಡ ಮೂರು ದಾಂಡಿಗರು ಎರಡು ಚಿಕ್ಕ ಹುಡುಗರು ಎರಡು ಆಳೆತ್ತರದ ಸಸಿಯೊಂದಿಗೆ ಹಾಜರು .ಇವರು ಗುರುತು ಅಸ್ಪಷ್ಟ ಆದರೆ ನನ್ನೂರಿನ ಲಂಬಾಣಿ ಸಹೋದರರೆಂದು ಗುರುತು ಹಿಡಿಯಲು ಬಹು ವೇಳೆ ಏನು ಹಿಡಿಯಲಿಲ್ಲ ಇವರೆಲ್ಲೋ ಸಸಿ ನೆಡಲು ಹೊರಟಿರುವುದು ಎಂದು ತಿಳಿದೆ. "ಸರ್ ನಾವು ತಪ್ಪು ಮಾಡಿದ್ದೆವು ಅಂದರೆ... ತಪ್ಪೇನು ಅಲ್ಲ .ನಿಮ್ಮ ತಮ್ಮ ಮನೆ ಕಟ್ಟಿಸುವ ಸಲುವಾಗಿ ಗಿಡ ಕಡಿಸಿದ್ದ ಆವಾಗ ಬನ್ನಿಗಿಡಕ್ಕೆ ಹೊಂದಿಕೊಂಡ ನಿಮ್ಮ ದೇವರ ಬೇವಿನ ಗಿಡ ಕಡಿಯಬಾರದಿತ್ತು ಆದರೆ ನಿಮ್ಮ ತಮ್ಮನ ಮಾತಿಗೆ ಕಡಿದಿದ್ದೇವೆ ಅದಕ್ಕಾಗಿ ನಾವು ಪಡಬಾರದ ಕಷ್ಟ ಅನುಭವಿಸಿದ್ದೇವೆ ಅದರ ಪಶ್ಚಾತ್ತಾಪದ ಸಲುವಾಗಿ ನಿಮ್ಮ ಹೊಲದಲ್ಲಿ ಎರಡು ಗಿಡ ನೀಡಬೇಕೆಂದು ಹೇಳಿದ್ದಾರೆ ಅದಕ್ಕಾಗಿ ಇವತ್ತು ಆಡಗಲ್ಲಿನ ನರ್ಸರಿಯಿಂದ ಎರಡು ಗಿಡ ತಂದಿದ್ದೇವೆ ಇವತ್ತು ರವಿವಾರ ಅಮವಾಸ್ಯೆ ನಿಮ್ಮ ಹೊಲದಲ್ಲ ನೆಟ್ಟರೆ ತಪ್ಪೇನೂ ಇಲ್ಲವಲ್ಲ ಸರ್, ಎಂದರು . ಅದಕ್ಕೇನು... ನಾವೆ ಗಿಡತಂದು ನೆಡಲು ನೂರಾರು ರೂಪಾಯಿ ಖರ್ಚು ಮಾಡಬೇಕು ಆದರೆ ನೀವಾಗಲೆ ನಮ್ಮಹೊಲದಲ್ಲಿ ಗಿಡ ನೆಡುತ್ತೀರಿ ಎಂದರೆ ಯಾರು ತಾನೆ ಬೇಡ ಎಂದಾರು ? ಆದರೆ ಒಂದು ಖಂಡಿಷನ್ ಏನೆಂದರೆ ಒಂದು ಗಿಡ ಈ ದೇವರ ಗಿಡದ ಸಮೀಪ ನೆಡಬೇಕು ಇನ್ನೊಂದು ನಾನು ಹೇಳೋ ಜಾಗದಲ್ಲಿ ನೆಡಬೇಕು ಎಂದೆ.  ಆಗಲಿ ಸರ್ ಈ ಒಂದು ಗಿಡ ನೆಡುವದರಿಂದ  ಬನ್ನಿ ಮಹಾಂಕಾಳಿ ಸಂತೃಪ್ತಿಯಾದರೆ ಅಷ್ಟೆ ಸಾಕು ಎನ್ನಬೇಕೆ ? ಅವರ ನಿಷ್ಕಲ್ಮಶವಾದ ಭಾವಕ್ಕೆ ಒಂದು ಕಡೆ ಅಯ್ಯೋ ಎನ್ನಿಸಿದರೂ ಅವರ ಮಗುವಿನಂತ ನಿಷ್ಕಪಟವಾದ  ಮನಸ್ಸಿಗೆ  ನನ್ನ ಹೃದಯ ಹೂವಿನಂತೆ ಕರಗಿತು. ಅವರ ನಂಬುಗೆಯು, ಅದು ಸರಿಯೊ ತಪ್ಪೊ ಅದು ನನಗೆ ಚರ್ಚಿಸುವ ವಿಷಯವಲ್ಲ ಆದರೆ ಅವರ ಉದ್ದೇಶ ಅಪ್ಫಟ ಪ್ರಕೃತಿ ಪ್ರೇಮದ ಅನಾವರಣ ನಂಬುಗೆಯು ಅದು ಏನೆ ಇರಲಿ ಉದ್ದೇಶ ಮತ್ತು ಕಾರ್ಯ ಅದು ಸಮಾಜ ಮುಖಿಯಾಗಿದ್ದರೆ ಒಳ್ಳೆಯದೆ ಅಲ್ಲವೆ ?

Saturday, September 24, 2022

* ತಂಡಕ್ಕಾಡದೆ ದಂಡನಾಯಕ ?*

ತಂಡಕ್ಕಾಡದವನು 
ದಂಡನಾಯಕ ಹೇಗಾದಾನು ? 
ದಂಡವಿರಬಹುದು ದುಂಡಾಗಲೂಬಹುದು  
ತನಗಾಗಿ ಇವನ ದಂಡಯಾತ್ರೆ .
ಸೋತರೆ ದಂಡ ಪಿಂಡ 
ಗೆದ್ದರೆ ಪ್ರಚಂಡ...  !!
ಯಾಕಿಲ್ಲ ಇವರ ತಲೆದಂಡ....
ನಾಯಕ ತನಗಾಗಿ ಆಡಿ 
ಹಿಂಡಿನ ಹಿಂದೆ ಇದ್ದರೆ 
ತಪ್ಪೇನು ? .ಗೆಲುವಿನ ಗೆರೆಗಳಲ್ಲಿ 
ಅವನದು ಹಿರಿಪಾಲು ಅಲ್ಲವೆ ? 
ಸೋತರು ಉಂಟು ಗೆದ್ದರು ಉಂಟು 
ತಡಮಾಡದೆ ಪಡೆಯಲು 
ಅವರೆ ಬರುವರು ಬಿಡಿ !. 
ಗೆದ್ದರೆ ಕಪ್ಪು. ಬಿದ್ದರೆ ಚಿಪ್ಪೂ ಅವನಿಗೆ !!! 
ಮುಂದೋಡಿದವನನ್ನು ಕೇಳುವರಾರು ? 
ಇವನದ್ಯಾವಗಲೂ ಬರಿ ಪಡಿಪಾಟಲು 
ಮೊನಕಾಲು ಮಾಡಿಕೊಂಡಿರುವನು 
ಮುಗ್ಗರಿಸಿದಾಗಿನ ಗೀಟು
ಓಡಿದವನ ನೋಡಿ 
ಓಡದವನಾಡಿಕೊಳ್ಳದಿದ್ದೂರೂ ಅಷ್ಟೇ 
ಆಡಿಕೊಂಡರೂ ಅಷ್ಟೇ ಅವನಿಗದು
ಅನುಭವದ ಉತ್ಕೃಷ್ಟ ಪಾಠ, 
ಅದಕಿಲ್ಲ ಸರಿಸಾಟಿ .
ಮೇಲತ್ತಲದುವೆ ಹಿರಿಯ ಪಾಠ .
ತಂಡಕ್ಕಾಡುವ ತಂಡನಾಯಕನ 
ಕೊಂಡು ತರಲಾದೀತೆ ? 
ಹಿಂಡಿನವರೆಲ್ಲಾ ದುಡಿಯಬೇಕು.   
ತಂಡ, ಮುನ್ನಡೆಸಲದು ಕುರುಡನಂತೆ .
ಕಣ್ಣಿಗಿದೆ ಪಟ್ಟಿ ,ಓಡುವದೊಂದೆ ಅವರ ಕರ್ಮ 
ಮುಟ್ಟಿದರೆ ಧರ್ಮ ಮುಟ್ಟದಿರೆ ಅಧರ್ಮ ! .

Thursday, September 22, 2022

* ಹೇಳಲೇನು ನಿನ್ನ ಹಿರಿಮೆ *

ಬರೆದೆ ನನ್ನ ಎದೆಯ ಮೇಲೆ 
ಪೊರೆದ ಮಾತೆಯೇ ನಿನ್ನ ಹಿರಿಮೆ।
ಕೊರೆವ ಚಳಿಯಲಿ ಕನಸು ಅರಳಿ
ಗೌರವ ತರಲು ತೆರಳುವೆ ಇಂದು॥

ಬಯಲು ದಾಟಿ ಬಾಗಿ ನಿಂತು
ನಮಿಸಿ ಏರುವೆ ಕಾಂಚನಜುಂಗ।
ಗೌರಿ ಶಿಖರವೇರಿ ಜಾರಿ ನಿಂತು 
ವೈರಿ ಶಿರವ ಹರಿವೆ ಕೊರಳಿಗೆ ॥

ಭಾರತಾಂಭೆ ಎನಿತು ಬನ್ನಿಸಲಿ 
ನಿನ್ನ ಚರಣ ಕಮಲ ಕಡಲಾಭರಣ। 
ಮಲೆಯ ಮಂಜಿನಲೆಯ ಮೇಲೆ 
ತ್ರಿವರ್ಣ ಧ್ವಜ ವರುಣ ಸಿಂಚನ॥

ಹಿಮದ ಗಿರಿಯಲಿ ತಮವು  ಕರಗಿ 
ಪ್ರೇಮದುರಿಗೆ  ಪ್ರೀತಿಯ ಮಹಲು।
ಸುಡುತಿದೆ ಅರಿಷಡ್ವರ್ಗ ಕೊರಗಿ  
ಪಡುವನ ನಡೆ ಭಾಸ್ಕರನುರಿಗೆ ॥

ಋಣ ತೀರಿಸಲೆಣವಾಗಲು ಸರಿ
ಪಣವೊಂದೆ ಅಜಯಗಿರಿ ಭಾರತ।
ಕಣ ಕಣದಲಿ ಹರಿದಿದೆ ಹರಿ ಗುಣ
ಬಣವಾಗಲು ಬಿಡೆ ಹೈಂದವಿ ವಂದೆ॥

🖋. ಬಸನಗೌಡ ಗೌಡರ 
ಉಪನ್ಯಾಸಕರು ಗುಳೇದಗುಡ್ಡ

Tuesday, September 20, 2022

*ಮಹಾತ್ಮನಾದ ಗಾಂಧಿ*

ಸತ್ಯ ,ಅಹಿಂಸೆ,ಸತ್ಯಾಗ್ರಹ. 
ಸಪ್ತಖಂಡಕೆ ಆತ್ಮೀಯ ಗಾಂಧಿ,
ಹುತಾತ್ಮನಾದ ಗಾಂಧಿ 
ಮಹಾತ್ಮಾನಾದ ಗಾಂಧಿ॥

ಸಪ್ತ ಪಾತಕ ಸಂಹಾರ ಮಾಡಲು 
ಸನ್ಮಾರ್ಗ ತೋರಿದಾ ಗಾಂಧಿ, 
ಸಂತನಾದ ಗಾಂಧಿ 
ಮಹಾತ್ಮಾನಾದ ಗಾಂಧಿ॥

ಮೂಲ ಶಿಕ್ಷಣಕೆ ನೂಲು ತಗೆದ 
ಕರ, ಶಿರ ಹೃದಯ ತರಬೇತಿಯ
ಶೀಲವೇ ಶಿಕ್ಷಣವೆಂದ ಗಾಂಧಿ
ಮಹಾತ್ಮಾನಾದ ಗಾಂಧಿ ॥

ಶೋಷಣೆಗೆ ಸತ್ಯದ ಸವಾಲು
ಅಹವಾಲುಗಳಿಂದಲೆ ಅರುಹಿ 
ತಾಳ್ಮೆಯಿಂದಲೆ ಬಾಳಿದ ಗಾಂಧಿ
ಮಹಾತ್ಮಾನಾದ ಗಾಂಧಿ ||

ಗುರು ಗೋಖಲೆಯ ದಾರಿ
ಆಹಿಂಸೆಯ ಮಾಲೆ ಆಂಗ್ಲರ   
ಅಧಿಕಾರ ಪ್ರಶ್ನಿಸಿದ ಗಾಂಧಿ
ಮಹಾತ್ಮಾನಾದ ಗಾಂಧಿ ||

ಅರೆಬೆತ್ತಲೆಯ ಪಕೀರ 
ಕತ್ತಲೆ ಕಳೆದ, ಸತ್ಯ ದಾರಿ ತುಳಿದ
ಮಿತ್ಯ ಜನರ ಹತ್ಯೆಗೆ ಬಲಿಯಾದ
ಹುತಾತ್ಮನಾದ ಗಾಂಧಿ॥

🖋 .ಬಸನಗೌಡ ಗೌಡರ 
ಉಪನ್ಯಾಸಕರು ಗುಳೇದಗುಡ್ಡ

Monday, September 19, 2022

ಜೀವನವೆಂದರೆ ಇಷ್ಟೆ!

ಅದೆಷ್ಟು ದೇಹಗಳು ಮುದುಡಿ 
ಮಣ್ಣೊಳಗೆ ಮೃತ್ಯುವಿಗೆ ಶರಣಾದಾಗ 
ಮೂರು ಹಿಡಿ ಮಣ್ಣಿಟ್ಟು 
ಕೈ ಮುಗಿದಿಲ್ಲ  ನಾನು !
ಅದೆಷ್ಟು ದೇಹಗಳು ಬೇಸರದಿ ಬೆಂದು 
ಬೆಂಕಿಗೆ ಬಾಡುವಾಗ 
ಪತ್ರಿ ಎಸೆದಿಲ್ಲ ನಾನು ! 
ಸಾಲು ಸಾಲು ಆಕ್ರಂದನಗಳು ...
ಬಂಧುಗಳೆ ಇವರೆಲ್ಲ  .
ಬಂಧನದಿ ಬಿಡಿಸಿಕೊಂಡವನಿಗೊಂದು 
ಭಾವಪೂರ್ಣ ರೋಧನ  
ಅವನಿಗಾಗಿ ಅಲ್ಲ .
ಅವರಿಗಾಗಿ ಅವರ ಮಕ್ಕಳಿಗಾಗಿ  
ಅವರ ಭವಿಷ್ಯದ ಬೇತಾಳಕೆ 
ಹೆದರಿ ಚೀರುವರು ಇವರೆಲ್ಲ.
ಮಗಳ ಬಡಿವಾರಕ್ಕೆ ಬೇಕಿತ್ತು 
ಮಣ ಬಂಗಾರ .
ಮಗನೂ ಮಡದಿಯೊಂದಗೆ 
ಮಲಗಲು ಬೇಕಿತ್ತು
ಮಹಲು.. ಮಂದಿರ !
ಮಡದಿಯು ಬಿಡದೆ ರುಬ್ಬಿದಳು 
ಕೈಕಾಲುಗಳಲ್ಲಿ ಶಕ್ತಿ ಇದ್ದಾಗ
ಪಡೆದ ಅವಕಾಶಗಳಿಗೆ ಲೆಕ್ಕವಿಲ್ಲ
ಹಿಡಿ ಶಾಪ ಹಾಕುತಿಹಳು 
ಶಿವನಿಗೆ !
ಇನ್ನಷ್ಟು ಬೇಕಿತ್ತು ಅವಳಿಗೆ, 
ಅವನಿಗಾಗಿ ಅಲ್ಲ 
ತನಗಾಗಿ ದುಡಿಯಬೇಕಿತ್ತಿವನು.
ತಿಳಿಯಲಿಲ್ಲ ಇವನಿಗೆ
ನನ್ನದೆನ್ನವುದು ಬರಿ ಭ್ರಾಂತಿ 
ತಿಳಿಯಲು ಸಾಕಾಗಲಿಲ್ಲ ಕಾಲ
ಈಗ ನಿಶ್ಚಿಂತೆ ...ಶಾಂತಿ
ಜೀವನವೆಂದರೆ ಇಷ್ಟೇನಾ ?

    🖋 ಅಂತರ್ಮುಖಿ

Thursday, September 8, 2022

* ಗಂಜಿ ನೀಡಿದ ಗಂಜಿಕೆರೆಯಲ್ಲೊಂದು ಸಂಜೆ *



      ಪ್ರಕೃತಿಯ ಮಡಿಲಲ್ಲಿ ವಿಕೃತಿಗೆ ಏನು ಕೆಲಸ ? ಎಲ್ಲವೂ ಸುಕೃತಿ, ಎಲ್ಲಿ ನೋಡಿದಲ್ಲೆಲ್ಲ ಜಲರಾಸಿ ,ಸಸ್ಯರಾಶಿ ನೋಡಲೆರಡು ಕಣ್ಣುಗಳು ಸಾಲವು.ಒಂದು ಕಾಲದಲ್ಲಿ ಗುಳೇ ಬಂದ ಜನರಿಗೆ ಗಂಜಿ ನೀಡಿದ ಗಂಜಿಕೆರೆ ವರುಣನ ಕೃಪೆಯಿಂದ ಇಂದು ಮೈದುಂಬಿ ನಿಂತಿದ್ದಾಳೆ  ಆ ಸೊಬಗನ್ನು ನೋಡುವುದೇ ಒಂದು ಸೌಭಾಗ್ಯ .ಇದು ಇಂದು ನನಗೆ ಪೂರ್ವ ಯೋಜಿತ ಕಾರ್ಯಕ್ರಮವೇನಲ್ಲ ಅಚಾನಕ್ಕಾಗಿ ಹೊಳೆದ ಅಪರೂಪದ ಪಯಣ.  ಇಂದು ಗುರುವಾರ ಗುಳೇದಗುಡ್ಡದಲ್ಲಿ ಸಂತೆ ದಿನ. ಮಧ್ಯಾಹ್ನವೆ ಮಡದಿಯ ಸಂತೆಯಾಗಿದ್ದರೆ ಪಡೆಯುವದೇನಿತ್ತು ಭಾಗ್ಯ ?  " ರೀ ಮನೆಯಲ್ಲಿ ಸಂತೆಯಿಲ್ಲ ತಂದರೆ ಚನ್ನಾಗಿ ಇರುತ್ತಿತ್ತಲ್ಲಾ ?" ಮಡದಿಯ ಕೋಮಲ ನುಡಿಗಳಿಗೆ ಕರಗದ ಹೃದಯ ಅದು ಹೃದಯವಲ್ಲ ಕಲ್ಲು ಬಂಡೆ. ನಾನು ಮಡದಿ ಹೇಳಿದ ಸಂತೆಯನ್ನು ಮಾಡಬಹುದೇನೋ ಆದರೆ ಸಂತೆಯಿಂದ ಬಂದ ಮೇಲೆ ಪಾಟಿಸವಾವಲಿಗೆ ಉತ್ತರಿಸುವುದು ನನ್ನಿಂದಾಗದ ಮಾತು. ಬೇಕಾದರೆ ಸಂತೆಗೆ ತಲುಪಿಸಲು ಸಿದ್ಧ ಎಂದೆ ! ಸರಿ ಲಗುಬಗೆಯಿಂದ ಹತ್ತೆ ನಿಮಿಷದಲ್ಲಿ ರೆಡಿ ? ಆಹಾ ಹೀಗೂ ಉಂಟೆ ? ಏಕೆಂದರೆ ನಾವೆಲ್ಲ ಓಲ್ಡ್ ಮಾಡಲ್ ದಂಪತಿಗಳು.. ! ನನ್ನ ಸೂಪರ್ ಸ್ಪ್ಲೆಂಡರ್ ಗಾಡಿ ಶರವೇಗದಲ್ಲಿ ಸಂತೆ ತಲುಪಿತು.ಆದರೆ ಇನ್ನೇನು ಮಡದಿಯ ಮೃದುವಾದ ಮಾತು..ರಿ ನಾನು ಹೀಗೆ ಹೋಗಿ ಹಾಗೆ ಹತ್ತು ನಿಮಿಷದಲ್ಲಿ ಬಂದು ಬಿಡತಿನ ಸ್ವಲ್ಪ ಆ ಕಡೆ ಈ ಕಡೆ ಓಡಾಡಿ ಅನಬೇಕೆ ! ಆಹಾ  ನಂಬುವ ಆಸಾಮಿ ನಾನಲ್ಲ.  ತಟ್ಟನೆ ಹೊಳೆದದ್ದೆ ಗಂಜಿಕೆರೆ ಸೂರ್ಯಾಸ್ತ ಕಣ್ತಂಬಿಕೊಳ್ಳಬೇಕು ? ಲಗುಬಗೆಯಿಂದ ಬಲಗೈಗೆ ಬಲನೀಡಿದೆ ಬೈಕು ಗಾಳಿಯನ್ನು ಸೀಳುತ್ತಾ ಬಂದು ಗಂಜಿಕೆರೆ ದಂಡೆಗೆ ಬಂದು ನಿಂತಿತು ಆದರೇನು ಮಾಡುವುದು ? ಸೂರ್ಯ ಪಡುವಣ  ದಿಕ್ಕಿನಲ್ಲಿ ಭೂತಾಯಿ ಮಡಿಲಿನಲ್ಲಿ ಇಳಿದಾಗಿತ್ತು .. ವೇಳೆಗೆ ಸರಿಯಾಗಿ ಬರದವನಿಗೆ ಇದೆ ಮರ್ಯಾದೆ ತಾನೆ ? ದಿನ ಬೆಳಗಾದರೆ ಲೇಟಾಗಿ ಬರುವ ಹುಡುಗರ ಮುಂದೆ ಹೂಂಕರಿಸುವ ನನಗೆ ಕಪಾಳ ಮೋಕ್ಷ ಮಾಡಿದಂತಾಗಿತ್ತು. ಆದರೇನಾತು? ಭಾಸ್ಕರ ಇಳಿದ ದಾರಿಯ ದೂಳು ಅಂಗಾರಕನ ಬಣ್ಣದಂತೆ ಅಂಬರದಲ್ಲಿ ರಂಗು ಚೆಲ್ಲಿತ್ತು. ಗೊಂಬೆಗಳಂತಹ ಮೋಡಗಳನ್ನು ಹೊತ್ತ ಅಂಬರದ ಸಂಭ್ರಮ ನೋಡುವುದೆ ಒಂದು ಚಂದ. ಕೆಳಗೆ ನೋಡಿದರೆ ಜಲರಾಶಿ ಪೂರ್ತಿ ತುಂಬಿದ ಗಂಜಿಕೆರೆಯ ಇಕ್ಕೆಲಗಳಲ್ಲಿರುವ ಕೋಡಿಗಳಲ್ಲಿ ದುಮ್ಮಿಕ್ಕಿ ಹರಿಯುವ ಝರಿಗಳು, ತವರು ಮನೆಗೆ ದಾವಿಸುವ ತರುಣಿಯಂತೆ ಕುಣಿದು, ಕುಣಿದು ಸಾಗುತ್ತಿತ್ತು. ಇವಳು ನನ್ನೂರಿನ ರಾಣಿ ?....ಆಶ್ಚರ್ಯವಾಗಿರಬಹುದಲ್ಲವೆ ? ಹಾಲಂಡೆಯಿಂದ ಝರಿಯಾಗಿ ತೊರೆಯಾಗಿ ಹರಿದು ಬಂದವಳಿವಳು ತೊರೆದಳೆ ಗಂಜಿಕೆರೆ ಕೋಡಿಯಿಂದ ? ಹೀಗೆ ಸಾಗಿ ಹಿರೇಹಳ್ಳದ ಸೊಸೆಯಾಗಿ ನಡೆಯುವವಳು.ನಿನಗೆ ಮುನಿಸೆ ? ಒಂದು ಕಾಲವಿತ್ತು ಗಂಜಿಕೆರೆ.. ಗುಳೇದಗುಡ್ಡದ ಜನರಿಗೆ ಗಂಜಿ ನೀಡದವವಳು, ಕೆರೆಯ ಕೆಳ ಭಾಗದಲ್ಲಿ ಒಂದು ಸಾರೆ ಭತ್ತ ,ಇನ್ನೊಂದು ಸಾರೆ ಬೇಸಿಗೆಯಲ್ಲಿ ಸೇಂಗಾದ ಬೆಳೆ,ಎಂತಹ ಅರಸಿಕನು ತಲೆಯಾಡಿಸಿ ಸೈ ಎನ್ನುವ ಮಲೆನಾಡ ಸೊಬಗು ! ಇಂದೇನಾಗಿದೆ ? ಅವೈಜ್ಞಾನಿಕ ನೀರಿನ ಬಳಕೆಯಿಂದ ಭೂಮಿ ಬರುಡಾಗಿದೆ ಅಲ್ಲಲ್ಲಿ ಸರಕಾರಿ ಜಾಲಿ ,ಜೇಕು, ಆಪುಗಳ ದರ್ಬಾರು. ತರುಣರು ನಗರ ವ್ಯಾಮೋಹದಿಂದ ಪೃಕೃತಿಯ ಮಡಿಲಿಂದ ದೂರವಾವಾಗುತ್ತಿದ್ದಾರೆ .ಅದು ಅವರ ತಪ್ಪಲ್ಲ ಬಿಡಿ ಅಕಾಲಿಕ ಮಳೆ ಕೈತಪ್ಪುವ ಮಾರುಕಟ್ಟೆ ಕೃಷಿ ಮಾಡಿದ ತರುಣರು ನಗರಗಳಿಗೆ ಮುಖ ಮಾಡಿದ್ದಾರೆ ! ಇದು ಹೀಗೆಯೇ ಮುಂದುವರೆಯುತ್ತದೆ ಎಂದರೆ ತಪ್ಪಾದೀತು. ಇತಿಹಾಸ ಮರುಕಳಿಸುತ್ತದೆ ಎನ್ನವ ಮಾತೊಂದಿದೆ .ಉತ್ತಮ ಖೇತಿ, ಮಧ್ಯಮ ಬೇಪಾರಿ, ಕನಿಷ್ಟ ಚಾಕರಿ ಎನ್ನುವ ಕಾಲವೊಂದಿತ್ತು  ಕಾಲ ಬದಲಾಗಿದೆ ಈಗ ಎಲ್ಲರಿಗೂ ಚಾಕರಿಯೇ ಬೇಕು....! ಮತ್ತೆ ಆ ಕಾಲ ಬರಬಹುದೇನೋ ? ಪ್ರತಿ ಹಳ್ಳಿ, ಹಳ್ಳಿಗಳು ವಿಜ್ಞಾನದ ,ವೈಚಾಕರಿಕ ಕೇಂದ್ರಗಳಾದರೆ ಮಾತ್ರ. ಮೊಬೈಲ್ ರಿಂಗುಣಿಸಲು ಪ್ರಾರಂಭಿಸಿತು ....ಬೆಲ್ಲು ಕೇಳಿದ ವಿದ್ಯಾರ್ಥಿ ಮನೆಗೆ ದಾವಿಸಿದಂತೆ ಬೆಡಗಣ ದಿಕ್ಕಿಗೆ ಮುಖ ಮಾಡಿದೆ. ಹಿಂದಿನಿಂದ ಹಾರ್ನ ಶಬ್ಧ ಅದು ಬೇರಾರದು ಅಲ್ಲ ಬಾಲಕೀಯರ ಪ್ರೌಢಶಾಲೆಯಲ್ಲಿ ಜೊತೆಯಾಗಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಈಗ ನಿವೃತ್ತಿಯ ಬದುಕುನ್ನು ಅರ್ಥ ಪೂರ್ಣವಾಗಿ ಕಳೆಯುತ್ತಿರುವ ಸಿ ಬಿ ಸಜ್ಜನರು.ಇದು ಖಾನಾಪೂರಕ್ಕೆ ಹೋಗುವ ಮಾರ್ಗ ಇಲ್ಲಿ ಸಂಜೆಯಾದರೆ ಸಾಕು ಹಳೆಯ ನೆನಪುಗಳನ್ನು ಬಿಚ್ಚುತ್ತು ಹೊಸ ಕನಸುಗಳನ್ನು ಕೆದಕುತ್ತಾ ನಡೆವ ಹಿರಿಜೀವಿಗಳ ತಾಣ ಅದು ಗಂಜಿಕೆರೆಯ ಶದ್ಧಗಾಳಿಯು ಸಿಗುವ ನಿವೃತ್ತರ ಸ್ವರ್ಗ ಅದರ ಸವಿಯನ್ನು ಸವಿದವನೆ ಬಲ್ಲ.ಸಜ್ಜನರನ್ನು ಗುರುತು ಹಿಡಯಲು ಕಷ್ಟವೇನಾಗಲಿಲ್ಲಿ ಅದೇ ಗಾಂಭೀರ್ಯ ಮಾಗಿದ ಮನಸ್ಸು.ಅವರ ಸಾಮಿಪ್ಯ ಸಾವಿರ ವಿಶ್ವಕೋಶ ಓದಿದಂತಿತ್ತು. ಕುಶಲೋಪರಿ... ಮತ್ತೆ ಅದೆ ಪೋನ್. ಗೃಹ ಸಚಿವರ ಕರೆ ನಿರಾಕರಿಸಲಾದಿತೆ ?  ಮತ್ತೆ ಮರಳಿ ಗೂಡಿಗೆ... ಇದೆ ಅಲ್ಲವೆ ಬದುಕು. ಒಟ್ಟಾರೆ ಒಂದು ಸುಂದರವಾದ ಪೃಕತಿಯ ಕೊಡುಗೆಯನ್ನು  ಆಸ್ವಾದಿಸಿದ ಸಂತೃಪ್ತಿ.
ನೀವು ಪ್ರಕೃತಿ ಆರಾಧಕರೆ? ಒಂದರ್ಧ ಗಂಟೆ ಬಿಡುವ ಮಾಡಿಕೊಂಡರೆ ಯಾವುದೇ ಫೀ ಇಲ್ಲದೆ ಆಸ್ವಾದಿಸಬಹುದು. ಮನಸ್ಸು ಬೇಕು ಅಷ್ಟೇ ಬಹಳವೆಂದರೆ ಗುಳೇದಗುಡ್ಡದಿಂದ ಎರಡು ಕಿಲೋಮೀಟರ್ ಆಗಬಹುದೇನೋ.!
ಶುಭರಾತ್ರಿ 🙏🙏

Monday, September 5, 2022

* ಹೀಗೊಂದು ಬೆಂಗಳೂರು ಪಯಣ *


          
            ಬೆಂದು, ನೊಂದು ಬಂದವರಿಗೊಂದು ಬದುಕು ನೀಡುವ ಬೆಂದಕಾಳೂರು .ಬೆಂಗಳೂರು ಅದು ನಿಜವಾಗಿಯೂ ಜ್ಞಾನ ಇದ್ದವರಿಗೆ 
ಅವಕಾಶಗಳ ಬಾಗಿಲು, ಜಗತ್ತಿನ ಕುತೂಹಲದ ಕೇಂದ್ರ. ದಿನ ಬೆಳಗಾದರೆ ಲಕ್ಷಾಂತರ ಜನರು ಬರುವ ಹೋಗುವ ಜನಜಂಗಳಿಯ ನಿತ್ಯ ಜಾತ್ರೆ, ಹಣ ಸಂಪಾದಿಸಿದವರ, ಸಂಪಾದಿಸಲು ಅರ್ಹತೆ ಹೊಂದಿದವರ ಉತ್ಸವದ ಮಂದಿರ. ಈ
ಮಂದಿರದ ನೆಲ ಸ್ಪರ್ಶಿಸುವ ಅವಕಾಶ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಗೂಂದು ಗೌರವದ ನಮನ . ನಿರಂತರ ಪಾಠದ  ಬರುವ ಮೌಲ್ಯಮಾಪನದ  ಗೌರವಯುತ ಕರ್ತವ್ಯದ ಆದೇಶ ಬಂದಾಗ ನಮಗೆಲ್ಲಾ ಪುಳಕ ಮತ್ತೊಂದು ಸಾರೆ ಬೆಂಗಳೂರು ಸುತ್ತಿ ಬರುವ ಸದವಕಾಶ ಮೂರು ದಿನಗಳ ಮುಂಚೆಯೇ ತಯಾರಿ .ಅದರ ಸೆಳೆತವೆ ಹಾಗೆ ಒಂದು ಕಡೆ ಗಾಂಧೀಜಿ ಹೇಳುತ್ತಾರೆ " ಕೆಲಸದ ಬದಲಾವಣೆಯೆ ವಿಶ್ರಾಂತಿ " ಇದು ನಿಜವಾಗಿಯೂ ಸತ್ಯದ ಮಾತು. ಮೊದಲೆ ಸತ್ಯದ ಪ್ರತಿಪಾದಕ ಅಂಹಿಂಸೆಯ ಬೆಂಬಲಿಗ ಅವರ ಪಾಲನೆಯಲ್ಲೂ  ನನಗಂತೂ ಸಂತಸ. ಪಾಲನೆಗೆ ಸಂತೃಪ್ತಿ... ಅಷ್ಟೆ ಸತ್ಯ .ಆದರೂ ವಿರೋಧಿಸುವ ಜನರಿರಬಹುದೇನೋ ಅದು ಅವರವರಿಗೆ ಬಿಟ್ಟ ವಿಷಯ ಬಿಡಿ. ಅದನ್ನು ನಾವೇಕೆ ತೆಲೆಕೆಡಿಸಿಕೊಳ್ಳಬೇಕು ಹೇಳಿ .ಇರಲಿ ಆಗಸ್ಟ್ ಒಂದರ ಸಂಜೆಯ ಪಂಚ ಸ್ನೇಹಿತರ ಮುಖಂಡ ವಿಠ್ಠಲ ಕಳಸಾ ರ ಮುಂದಾಲೋಚನೆಯು ನಮ್ಮ ತಂಡವನ್ನು ಗೋಲಗುಂಬಜ ಎಕ್ಸ್  ಪ್ರೆಸ್ ಮುಂದೆ ತಂದು ನಿಲ್ಲಿಸಿತು, ಐದು ಜನ ಉಪನ್ಯಾಸಕರು ಹರಟೆ ಹೊಡೆಯಲು ಮಜಾ ಉಡಾಯಿಸುವ ಈ ಸಂದರ್ಭಕ್ಕಿಂತ  ಇನ್ನೊಂದು ಸಂದರ್ಭ ಯಾವಾಗ ಸಿಗುತ್ತೆ ಹೇಳಿ ?  ಅರ್ಧಗಂಟೆ ಮೊದಲೆ  ನಿಲ್ದಾಣಕ್ಕೆ  ಆಗಮಿಸಿದ ನಮಗೆ ನಾವು ಏರುವ ರಿಜರ್ವ್ ಬೋಗಿ  ಎಲ್ಲಿ ನಿಲ್ಲುತ್ತದೆ ಎನ್ನುವ ತರ್ಕದ ವಿತಂಡವಾದಗಳೇ  ಎಸ್ 1..2..3 .. ಬೋಗಿ ಎಲ್ಲಿ ನಿಲ್ಲುತ್ತದೆ ಒಂದು ಪ್ರಾರಂಭವಾಗುವುದು ಇಂಜಿನ್ ಕಡೆಯಿಂದನಾ ಅಥವಾ ರೈಲಿನ ಹಿಂದುಗಡೆ ಯಿಂದ ನಂಬರಗಳು ಮುಂದುವರಿಯುತ್ತವಾ ಎನ್ನುವ  ಜಿಜ್ಞಾಸೆ ಯಾಕೆಂದರೆ ಮತ್ತೆ ಮತ್ತೆ ಅದೆ ರೈಲುಗಳಲ್ಲಿ ಪ್ರಯಾಣಿಸದ್ದರೆ ತಾನೆ ಸರಿಯಾಗಿ ಹೇಳಲು ಸಾಧ್ಯ ಆ ಕಾಲ ಬಂದೆ ಬಿಟ್ಟಿತು...
ಚುಕ್ ಬುಕ್, ಚುಕ್ ಬುಕ್ ರೈಲು ಬಂಡಿ ಗಾಳಿಯ ವೇಗದಲ್ಲಿ ಬಂದು ಮಾತಿಗೆ ತೆರೆ ಎಳೆಯಿತು.ಆದರೆ ಹತ್ತುವುದೊಂದೆ ಬಾಕಿ  ಟ್ರೈನ ಒಳಗಡೆ ಯುದ್ಧಕ್ಕೆ ಸಿದ್ದರಾಗಿ ನಿಂತ ಸೈನಿಕರಂತಿದ್ದ ಉಪನ್ಯಾಸಕರ ದಂಡು. ಮೌಲ್ಯಮಾಪನಕ್ಕೆ ಬಾಗಲಕೋಟೆಯಿಂದ ಟ್ರೈನ ಹತ್ತಿ ತೆಂಕಣಕ್ಕೆ ಮುಖ ಮಾಡಿತ್ತು .ಅಪರೂಪಕ್ಕೊಮ್ಮೆ ಭೇಟಿಯಾಗಿ ಕುಶಲೋಪರಿ ವಿನಿಮೆಯ ಮಾಡಕೊಳ್ಳುವ ಸ್ನೇಹಿತರು ಇಂದು ಮೌಲ್ಯಮಾಪನ ನೆವದಲ್ಲಿ ಬಹು ವೇಳೆ ನಾವೆಲ್ಲಾ ಕೊಂಡಿಯ ಬಂಡಿಯ ಬಂಧನದಲ್ಲಿ. ರಾಜಧಾನಿಗೆ ತೆರಳುವವರಿಗೆ ಹೊಸೆದು ಮಾತುಗಳನ್ನಾಡಿ ಹುಸಿ ನಗೆ ಬುಗ್ಗೆ ಎಬ್ಬಿಸುವ ಪರಿ ಹುರಿಗಡಲೆ. ಅದು ಒಮ್ಮೆ ಪಂಪನ ಕಡೆ ತಿರುಗಿದರೆ ಇನ್ನೂಮ್ಮೆ ಐನ್ ಸ್ಟೀನ್ ಮಗದೂಮ್ಮೆ ನಗೆ ಬುಗ್ಗೆ ಎಬ್ಬಿಸುವ ಬೀಚಿ ಪ್ರಾಣೇಶ್ ಕಡೆಗೆ, ರೈಲು ಕತ್ತಲೆಯನ್ನು ಸೀಳುತ್ತಾ ರಣ ವೇಗದಲ್ಲಿ ಓಡುತ್ತಿದ್ದರೆ ಗಣಿತ ಮಾಸ್ತರ ತಲೆಯಲ್ಲೆ ಆಹಾ.. ಸಾಪೇಕ್ಷೆ ಸಿದ್ದಾಂತ ನಾವು ಚಲಿಸುತ್ತಿದ್ದೇವೆ ಎಂದು ರುಜುವಾತು ಮಾಡಲು ಇನ್ನೊಂದು ರೈಲು ಸಾಪೇಕ್ಷವಾಗಿ ಚಲಿಸುವ ಅರಿವು. ಇದನ್ನು ಮಕ್ಕಳಿಗೆ ಅರ್ಥ ಮಾಡಿಸುವದು ತುಂಬಾ ಕಷ್ಟದ ಕೆಲಸ ಎನ್ನಬೇಕೆ ? ಅದಕ್ಕೆ ಭೌತಶಾಸ್ತ್ರದ ಉಪನ್ಯಾಸಕರ ತಮ್ಮ ಅನುಭವವನ್ನು ಹೊರ ಹಾಕಿದ ರೀತಿ ಇನ್ನೊಂದು ರೀತಿ ಸರ್ ಈಗ ನಾವು ನಿಶ್ಚಲ ಸ್ಥಿತಿಯಲ್ಲಿ ಇದ್ದೇವೆ ನಮ್ಮ ಗಾಡಿ ಚಲಿಸಿದಾಗ ಹೊರಗಿನವರಿಗೆ ನಾವು ಚಲನಾ ಸ್ಥಿತಿಯಲ್ಲಿರುತ್ತೇವೆ. ಅಂದರೆ ನಾವು ಹೊರಗಿನಿಂದ ನೋಡುವವರಿಗೆ ಚಲಿಸುತ್ತಿದ್ದೇವೆ ಎನ್ನಬೇಕೆ ! ಇತಿಹಾಸ ಮತ್ತು ಭೂಗೋಳ ಓದಿದ ನನಗೆ ಸಾಪೇಕ್ಷ ಸಿದ್ಧಾಂತ ತಿಳುವಳಿಕೆ ಅಷ್ಟಕ್ಕಷ್ಟೆ, ಆದರೆ ಇತಿಹಾಸ ಪಾಠ ಮಾಡುವಾಗ ಮಾತ್ರ ಇತಿಹಾಸ ಪಾಠ ತಿಳಿಯಲು ವಿದ್ಯಾರ್ಥಿಗಳಿಗೆ ನನಗೆ ತಿಳಿದ ನನ್ನದೆ ಶೈಲಿಯ ನನ್ನದೆ ಸಾಪೇಕ್ಷ ಸಿದ್ಧಾಂತ ?  ಒಂದು ಪಾಠವನ್ನ ಇನ್ನೊಂದು ಪಾಠಕ್ಕೆ ಹೋಲಿಕೆ ಮಾಡಿಯೇ ಕಲಿಯಲು ಹೇಳುವುದು, ಅಂದರೆ ಸಿಂಧೂ ನಾಗರಿಕತೆ ತಿಳಿಯಲು ವೈದಕ ಸಂಸ್ಕೃತಿ,ಚಾಲುಕ್ಯರ ಪಾಠ ತಿಳಿಯಲು ಗುಪ್ತರ ಸಾಮ್ರಾಜ್ಯ, ಗ್ರೀಕ ನಾಗರಿಕತೆ ತಿಳಿಯಲು ರೋಮ ನಾಗರಿಕತೆ...ನನ್ನ ಇತಿಹಾಸ ಪಾಠದ ತಂತ್ರ ಯಂತ್ರದಂತೆ ತಿರುಗುತ್ತಿದ್ದರೆ. ಗೋಲಗುಂಬಜ್ ಟ್ರೈನ  ಗದಗ್ ಹಿಂದೆ ಸರಿಸಿ ಮುಂದಕ್ಕೆ ಸಾಗುತ್ತಿತ್ತು ಒಬ್ಬೊಬ್ಬರಾಗಿ ನಿದ್ರಾದೇವಿಗೆ ಬಲಿಯಾಗಿದ್ದರು ಅದರೆ ಅವರು ಬಿಡುಗಡೆಯಾಗಿದ್ದು ತುಮಕೂರು ಬಂದ ಮೇಲೆಯೇ ಯಾಕೆಂದರೆ ಅದು ಬೆಂಗಳೂರು ರೈಲು. ನಾವು ಎಚ್ಚರವಾಗಿದ್ದು ನಿತ್ಯ ಬಹು ಪ್ರಯಾಣಿಕರ ಪ್ರವಾಸದ ಮಹಿಮೆ ಅವರ ಮತ್ತು ರೈಲೆನ ಸಂಬಂಧ ನೀರು ಮೀನಿನ ಸಂಬಂಧ.
ಇರಲಿ ಯಾವಾಗಾದರೊಮ್ಮ ಬಂದು ಹೋಗುವ ಬಡಪಾಯಿ ಪ್ರವಾಸಿಗರಿಗೆ ಬೆಂಗಳೂರು ರೈಲು ನಿಲ್ದಾಣ ಬಂಗಾರದಂತ ಸ್ವಾಗತ ನೀಡೀತು, ದಾರಿಯುದ್ದಕ್ಕೂ ಇರುವೆಗಳಂತೆ ಸರಸರನೆ ಸಾಲಾಗಿ ಸರಿದು ಹೋಗುವ ಯಂತ್ರ ಮಾನವರ ತಾಂತ್ರಿಕ ಬದುಕಿನ ಅನಾವರಣ.ಪ್ರತಿಯೊಂದಕ್ಕೂ ದಾವಂತ ಎರಡು ಮೂರು ದಿನದ ಎಲ್ಲಾ ತಯಾರಿಯ ಸರಂಜಾಮ ಎಲ್ಲಿ ಇಡುವುದು ? ಬಸ್ ನಿಲ್ದಾಣದ ಸಮೀಪದ ಪಂಚವಟಿ  ಲಾಡ್ಜನಲ್ಲಿ ದೇಹದ ಹೊರಗಿನ ಮತ್ತು ಒಳಗಿನ ಬಾರ ಇಳಿಸಿ.ಬಸವಳಿದು ಬಸ್ಸು ಏರಿ ಇಳದಾಗಲೆ ಗೂಗಲ್ನಲ್ಲಿ ನೋಡಿದ ಮೆಜೆಸ್ಟಿಕ್ ನಿಂದ ಆಚಾರ್ಯ ಪಾಠ ಶಾಲೆ ಪಿಯುಸಿ ಕಾಲೇಜು 6 ಕಿ.ಮಿ ದಾರಿ ತಲುಪಲು ಒಂದು ಗಂಟೆ ಬೇಕೆಂದು ಅರಿವಾಗಿದ್ದು? ....ಮತ್ತೆ  ಮುಂದುವರೆಯಲು...? ಶುಭ ರಾತ್ರಿ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...