Sunday, January 25, 2026

ಬಡಾವಣೆ

ಬಡಾವಣೆ

ನಾಗರಿಕತೆ ಬಂದದ್ದೆ ನಗರಗಳ 
ಉಗಮದಿಂದ ಇದು ಜೀವನ ಸುಲಬಗೊಳಿಸಲು 
ಮಾನವ ಮಾಡಿದ ಅನ್ವೇಷಣೆಯ ದಾರಿ
ನಗರದ ಪ್ರತಿ ಮೂಲೆಯೂ ಬಡಾವಣೆ ಹಿಗ್ಗುತಿದೆ 
ಕೃಷಿ ಭೂಮಿ ಕುಗ್ಗುತಿದೆ 
ಹೊಸ ಬಡಾವಣೆಯ ಗಾಳಿಯಿಂದ .
ಇಲ್ಲಿ ಇನ್ನು ಮುಂದೆ ಬೆಳೆ ಬೆಳೆಯುವುದಿಲ್ಲ
ಬಿಲ್ಡಿಂಗಗಳು ಬೆಳೆಯುತ್ತವೆ
ಇನ್ನು ಮುಂದೆ ಇಲ್ಲಿ ಬೆಳದಿಂಗಳು ಚೆಲ್ಲುವುದಿಲ್ಲ 
ಬಲ್ಬುಗಳೆ ಬೆಳದಿಂಗಳನ್ನು ನೀಡುತ್ತವೆ
ಇಲ್ಲಿ ಹಸು ಕುರಿ ಮೇಕೆ  ಮೇಯುವುದಿಲ್ಲ
ಮನುಷ್ಯರು ಮೇಯುತ್ತಾರೆ
ಇಲ್ಲಿ ಹಕ್ಕಿ ಪಕ್ಕಿ ಗಳು ದ್ವನಿ ಮಾಡುವುದಿಲ್ಲ
ದ್ವನಿ ವರ್ಧಕಗಳು ಅಬ್ಬರಿಸುತ್ತವೆ.
ಇಲ್ಲಿ ಭೂಮಾತೆ ಗಂಟಲು ಹಿಚುಕುತ್ತಾರೆ
ಹೊಟ್ಟೆಯನ್ನು ಬಗೆದು ನೀರು ಬಸಿಯುತ್ತಾರೆ 
ಇಲ್ಲಿ ಇನ್ನು ಪೈಪುಗಳೆ ನರನಾಡಿಗಳು
ಎಲೆಕ್ಟ್ರಿಕ್ ಕಂಬಗಳೆ ಸ್ವಾಗತ ಕಮಾನುಗಳು
ನಗರಸಭೆಯವರೆ ವೈದ್ಯರು 
ಹಂದಿಗಳೆ ದಾದಿಯರು
ಹೊಂದಿಕೊಂಡವರು ಉಳಿತಾರೆ 
ಹೊಂದದಿದ್ದರೆ ಚಂದಾ ವಸೂಲಿ 
ಮದ್ದು ನೀಡುವವರಿಗೇನು ಕಡಿಮೆ
ಸರಿಯಾದ ಸಮಯಕ್ಕಾದರೆ ಸೀದಾ ನಡಿ
ಸಾವಿರ ಟೆಸ್ಟಮಾಡಿ ಸೋತರೆ ಗಾಡಿ ಬಿಡಿ
 
 



ದೀಪಾವಳಿಯ ಬಲಿಪಾಡ್ಯಯ ಹಿಂದನ ದಿನ ಒಂದು ಪೋನ್ ಬಂತು, "ದೀಪಾವಳಿಯ ಹಬ್ಬದ ಶುಭಾಶಯಗಳು ಸರ್." ಎಂದರು ಗೆಳೆಯ ಶ್ರೀಶೈಲ ಮಡಿವಾಳರ. ಈಗಾಗಲೆ ವಾಟ್ಸ ಅಪ್ ಗ್ರೂಪ್ ನಲ್ಲಿ ಶುಭಾಶಯ ಕೋರಿಕೊಂಡದ್ದೇವು ನಾನೂ ಶುಭಾಶಯ ಹೇಳಿದೆ. ವಿನಿಮಯದ ನಂತರ ಮಾತು ಮುಂದುವರೆಯಿತು. ಸರ್, ನಮ್ಮ ಶರಣಪ್ಪನ ಮನೆ ಭೂಮಿಯ ಪೂಜೆ ಕಾರ್ಯ ಕ್ರಮ ನಾಳೆ ಮುಂಜಾನೆ 9.00 ಗಂಟೆಗೆ, ಇದು ನೀವೇ ನಡೆಸಿಕೊಡಬೇಕು ಎನ್ನಬೇಕೆ. ಆ ಶರಣಪ್ಪ ಬೇರೆ ಯಾರು ಅಲ್ಲ ಅವರು ನನ್ನ ಸಹೋದ್ಯೋಗಿ ,ಅಂದರೆ ಶ್ರೀಶೈಲರವರ ಅಳಿಯ .ಸರ್ ಭೂಮಿಯ ಪೂಜೆ ಕಾರ್ಯ ಕ್ರಮಕ್ಕೆ ಬರಬೇಕು ಅಂದರೆ ಓಕೆ ! ಈ ನಡೆಸಿಕೊಡುವುದು ಅಂದರಲ್ಲಾ ಅದು ಯಾಕೆ ? ವಿಷಯ ಇಷ್ಟೆ ನಾನು ಪೂಜಾ ಕಾರ್ಯಕ್ರಮ ನಡೆಸಿಕೊಡುವುದರಲ್ಲಿ ಬಹು ವೀಕ್, ಹಲವು ವಿಧಿ ವಿಧಾನಗಳಿರುತ್ತೆ ಅಲ್ಲಿ ಸಮರ್ಪಕವಾಗಿ ನೆರವೇರಿಸಬಹುದೆ ? ಎಂದೆ. ಆಗ ಅವರು ಹೇಳಿದ ಮಾತು ನನ್ನನ್ನು ಆತ್ಮವಿಶ್ವಾಸದ ಮತ್ತು ಪ್ರೀತಿಯ ದಾರಿಯನ್ನು ಹಿಡಿಸಿತು ಕಾರಣ ಇಷ್ಟೇ ಪ್ರಾರಂಭ ಅದು ಪೂಜಾ ಕ್ರಮದ ಬದಲಾಗಿ ಸ್ವಚ್ಛ ಭಾವನೆಯ ಮೇಲೆ ಮುನ್ನಡೆಯಬೇಕು ಎನ್ನಬೇಕೆ ? ಇದರ ಮೂಲ ಏನೆಂದರೆ ನಡೆದು ಬಂದ ಸಂಪ್ರದಾಯಗಳ ಪ್ರಕಾರ ಏನೆ ಶುಭ ಕಾರ್ಯ ಮಾಡಬೆಕೆಂದರೂ ಕುರುಬರು ಪ್ರಾರಂಭಸಬೇಕು ಎನ್ನುವುದು ಒಂದು

Wednesday, January 7, 2026

ಸಿದ್ಧರಾಮನ ಚರಿತೆ

ಸಿದ್ಧರಾಮನ ಹುಂಡಿಯಿಂದೆದ್ದು ಬಂದು
ಗೆದ್ದು ಬೀಗಿದ ಸಿದ್ಧರಾಮನ ಚರಿತೆಯಿದು
ಸದ್ದು ಮಾಡುತಿದೆ ಕರ್ನಾಟಕ ದೇಶದೊಳು॥

ಕುರಿಕಾಯುವ ಕುರುಬರ ಕುಲ ತಿಲಕ
ಸರಿ ಕಂಡಂತೆ ನಡೆದು ಗುರಿ ತಲುಪಿ
ದೊರೆಯಾದನು ಕನ್ನಡದ ದೇಶದೊಳು ॥

ವಿಜ್ಞಾನದ ಬಲದಿಂದ ಸುಜ್ಞಾನದ ಪ್ರಭೆ 
ಕುಹಕಳ ಮಧ್ಯ ಪಡೆದ ಕಾನೂನು ಪ್ರಜ್ಞೆ
ವೈಚಾರಿಕತೆ ಮೈಗೂಡಿಸಿಕೊಂಡ ಮನದೊಳ್॥

ಬುದ್ಧ ಬಸವ ಅಂಬೇಡ್ಕರ್ ರ ಗ್ರಹಿಸಿ
ಶುದ್ಧ ಲೋಹಿಯಾ ಸಿದ್ದಾಂತ ಪರಿಪಾಲಿಸಿ
ಇವನೆದ್ದು ಬಂದ ತಳಸಮುದಾಯದೊಳ್॥

ಹಸಿವನ್ನು ಹೊದ್ದು ಮಲಗಿದ ಜನರಿಗೆ
ಹೊಸ ಆಶಾಕಿರಣವಾದ ಅನ್ನರಾಮಯ್ಯ 
ಬೆಸೆದ ಮಾನವೀಯತೆ ಜಗದೋಳ್॥  

ಕಾಲದ ಗರಡಿಯ ಚೇಲಾಗಳ ಸಿಂಹ ಸ್ವಪ್ನ 
ಸೋಲಿನ ಸುಳಿಗೆ ಸವಾಲಿನ ಚಾಣಕ್ಯ ತಂತ್ರ
ಮಂತ್ರವೊಂದೇ ಗೆಲ್ಲುವ ರಣತಂತ್ರ ವ್ಯೂಹದೊಳ್॥

ಕನ್ನಡದ ಕುವರ ವ್ಯಾಕರಣ ಪಂಡಿತ 
ತನ್ನ ನಾಡಿನ ಅಂಕಿ ಸಂಖ್ಯೆಗಳ ಗಣಿತಜ್ಞ
ಶಿಕ್ಷಕ ತಾ ತಿದ್ದುವನು ಪ್ರಶ್ನೆಯಾ ಶಾಲೆಯೊಳ್

ಪ್ರೀತಿಸಿದರೆ ಸ್ವಾಭಿಮಾನದ ಪುತ್ರ 
ವಿರೋಧಿಸದರೆ ಕೇಸರಿ, ನಡುಗಬೇಕು ಶತೃ 
ದೊರೆ ತಾ ಪ್ರೀತಿಸುವ ಬಡವರ ಛತ್ರದೊಳ್
 



 







Wednesday, December 31, 2025

ಮರೆಯಾದ ಶ್ರೇಷ್ಠ ಪ್ರೀತಿ

ಅರಿಯುವ ಮುನ್ನ ಮರೆಯಾಯಿತು 
ಶ್ರೇಷ್ಠ ಪ್ರೀತಿಯನ್ನು ನೀಡುವ ಜೀವ 
ಶಿವನ ಕರೆಗೆ ಭುವನ ತೊರೆದು
ಜೀವನದ ಕೊನೆ ಗುರಿತಲುಪಿದಳಮ್ಮ॥
 
ಎಲ್ಲರ ಮನೆಯ ದೋಸೆಯೂ ತೂತೆ
ಕಲ್ಲಿನ ದೇವರಿಗೆ ಬೆಲ್ಲ ಸಕ್ಕರೆ ನೈವೇದ್ಯ 
ಬಲ್ಲೆವೇನಿವಳ ಬದುಕಿದ ಎಲ್ಲ ಕಷ್ಟಗಳಾ
ಸೊಲ್ಲೆತ್ತದೆ ಸುತ್ತಿ ಮಾಯವಾದಳಮ್ಮ॥

ಕತ್ತು ಬಗ್ಗಿಸಿ ಕತ್ತೆಯಂತೆ ದುಡಿದು
ನಿತ್ಯ ಕೊರೆಯಿಸಿಕೊಂಡಳು ಗರಗಸ 
ಸಕ್ಕರೆ ಸವರಿದ ಕಹಿಗುಳುಗಿ ನುಂಗಿ
ಮಿಕ್ಕಿ ನಡೆವ ಛಲವೆ ನಿನ್ನ ಆಭರಣವಮ್ಮ ॥
 
ಸ್ವಾತಂತ್ರ್ಯ ವೆಂಬುದು ಅಂಬರದ ತಾರೆ 
ಗಟ್ಟಿಯಾಗಿ ನಿಂತರು ಸಿಗಲಿಲ್ಲ ಚೂರು
ಹುಟ್ಟಿದ ಮನೆ,ಕೊಟ್ಟ ಮನೆ ಎರಡೂ ಒಂದೇ
ಬೆಟ್ಟ ಅಗೆದು ಇಲಿಯನ್ನು ಹಿಡಿದಳಮ್ಮ॥

ತವರಿಗೆ ಹಂಬಲಿಸಿ ತನು ಮೀಸಲಾಗಿಸಿ 
ತಾಯಿ ಸತ್ತ ಮೇಲೆ ತಾ ದೂರವಾದಳಮ್ಮ
ತಾ ಬೇಡ ತವರಿಗೆ, ಸಹಿ ಪಡೆದ ಮೇಲೆ
ತಮ್ಮಂದಿರ ನೆನೆದು ದೂರಾದಳಮ್ಮ॥

ಮನೆ ಕಟ್ಟಿದ ಮಕ್ಕಳು ಮನಕೊಟ್ಟರೇನು
ಹಣವಿಟ್ಟು ಫಲವೇನು ಗುಣವರಳಲಿಲ್ಲ
ದನಿವರಿಯದ ದುಡಿಮೆ ಕೈಕೊಟ್ಟರೂ
ಕೊನೆಯವರೆಗೂ ಮನತುಂಬಿ ಹರಿಸಿದಳಮ್ಮ॥




 




Friday, November 14, 2025

ಸಾಲು ಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ

ನೂರು ಬೋಧಕರನು ಮೀರಿ ಬೆಳೆದ
ನಾರಿ ಇವಳು ದೇವರಿಗಿಂತ ಮಿಗಿಲು ನಮಗೆ
ಮರವ ಬೆಳೆದು ಜಗದೊಳಾದಳಜರಾಮರ॥

ಅಕ್ಷರವನರಿತು ಬಿಕ್ಷುಕರಂತೆ ಬೇಡುವ
ಸಾಕ್ಷರರು ಬಲ್ಲೆವೇನಿವಳ ಕಾರ್ಯದುತ್ತರ
ವೃಕ್ಷ ಮಾತೆಯ ದಕ್ಷ ನಡೆಯು ಸಾಗಿದೆ ಅನುದಿನ॥

ಸಾಲು ಮರದ ತಿಮ್ಮಕ್ಕ ಇವಳೇ ಜಗದಕ್ಕರ
ಸಾವಿರ ನೋವು ಹಾವಾಗಿ ಹರಿದರೂ
ಹಾಲೆರೆದು ಬೆಳೆದು ಬೀಗಿದಳಾಲದಮರ॥

ಒಂದೆ, ಎರಡೆ ನೆಟ್ಟಳೆಂಟು ಸಾವಿರ
ಬಂದು ನಿಂತವು ಮಕ್ಕಳೆಲ್ಲ ಹರಹರ
ದುಡಿದು ಸಾಗುವ ಶ್ರಮಿಕರಿಗೆಲ್ಲ ಬೃಂದಾವನ 

ಮಾತೆಯ ಮಡಿಲು ಮಕ್ಕಳುಸಿರು 
ಜಗದ ತುಂಬಾ ಹಸಿರು ಸಾಲು ಸಾಲು
ಕೊಸರಿ ಹೋಗುವ ನಿನ್ನುಸಿರು, ಮರೆಯಲಾಗದ ಹಸಿರು, ಮರೆಯಲಾಗದ ಹಸಿರು.॥

Friday, September 26, 2025

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉದ್ದೇಶ ಇಡೇರಲಾರದು.ಶಿಕ್ಷಣವೆಂದರೆ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಇಲ್ಲವೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆಯಲ್ಲ ಹಾಗೆ ಕಲಿತ ಶಿಕ್ಷಣದ ವಿಷಯಗಳು ಪರೀಕ್ಷೆಯ ದಿನಗಳವರೆಗೆ ಸಾಗಿ ಬರಬಹುದೇನೋ ಇಲ್ಲವೆ ತದನಂತರ ಅವು ಮರೆಯಾಗಲೂಹುದು. ಅಂದರೆ ಪ್ರಶ್ನಿಸದೆ ಕಲಿಕೆ ಅಪೂರ್ಣ ಎಂದಾಯಿತು. ಹಾಗಾದರೆ ಆ ಪ್ರಶ್ನಿಸುವ ಕಾರ್ಯ ಎಲ್ಲಿಂದ ಪ್ರಾರಂಭವಾಗಬೇಕು, ಯಾರಿಂದ ಮೊದಲು ಪ್ರಾರಂಭವಾಗಬೇಕು? ಎನ್ನುವುದರ ಮೇಲೆ ಕಲಿಕೆಯ ತೀವ್ರತೆಯು ವ್ಯತ್ಯಾಸವಾಗುತ್ತ ಸಾಗುತ್ತದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ತಮ್ಮ ಆಶ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಬೇಗನೆ ಹೇಳಿಕೊಡುತ್ತಿರಲಿಲ್ಲ ಬದಲಾಗಿ ವಿದ್ಯೆಯ ಹಸಿವುಂಟಾಗುವಂತೆ ಮಾಡುತ್ತಿದ್ದರು ತದನಂತರದ ದಿನಗಳಲ್ಲಿ ಅನುಭವಗಳನ್ನು ಧಾರೆ ಎರೆಯುತ್ತಿದ್ದರು ಹಾಗೆ ಕಲಿತ ಜ್ಞಾನ ತಮ್ಮ ಜೀವನದ ಕೊನೆಯವರೆಗೂ ಹಿಂಬಾಲಿಸುತ್ತಿತ್ತು ಮತ್ತು ಗಟ್ಟಿಗೊಂಡಿರುತ್ತಿತ್ತು ಅಷ್ಟೆ ಏಕೆ ನಾಲ್ಕೈದು ದಶಕಗಳ ಹಿಂದಿನ ಹಿರಿಯರನ್ನು ನೀವು ಸೂಕ್ಷ್ಮ ವಾಗಿ ಗಮನಿಸಿರಿ ತಾವು ಕಲಿತ ಕವನ, ಕಥನ, ಕಾದಂಬರಿ ಲೆಕ್ಕ ಗಳನ್ನು ನೀರು ಕುಡಿದಷ್ಟೆ ಸಲೀಸಾಗಿ ಹೇಳುವುದನ್ನು ಕೇಳಿದ್ದೇವೆ. ಅದು ಹೇಗೆ ಸಾಧ್ಯ ! ಅವರೆಲ್ಲ ಹಸಿವಾಗಿ ಉಂಡವರು, ಅಂದರೆ ಕೇಳಿ ಪಡೆದವರು.ಹೀಗಾಗಿ ಅವರು ಕಡಿಮೆ ಇಯತ್ತೆಗಳನ್ನು ಕಲಿತಿದ್ದರೂ ಅದನ್ನು ಇಂದು ಪರಿಪೂರ್ಣವಾಗಿ ಹೊರಹಾಕುತ್ತಿದ್ದಾರೆ.ಈಗ ಅವರ ನಿರೀಕ್ಷೆ ಏನೆಂದರೆ ತಾವು ಕಡಿಮೆ ಕಲಿತವರಾದರೂ ಇಂದಿನ ಹೆಚ್ಚಿನ ವ್ಯಾಸಂಗ  ಮಾಡಿದ  ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದಾರೆ ಮತ್ತು ಗುಣಮಟ್ಟ ಕುಸಿದಿದೆ ಎಂದು ಗೊಣಗುಟ್ಟುವುದನ್ನು ಕೇಳಿದ್ದೇವೆ. ಕೆಲವೊಂದು ಅಧ್ಯಾಪಕರು ಹದಿನೈದು ನಿಮಿಷ ಪಾಠ ಮಾಡಿ ಮೂವತ್ತು ನಿಮಿಷ ಬರೆಯಿಸುವುದನ್ನು ರೂಢಿಸಿಕೊಂಡವರಿರಬಹುದೇನೊ ಬಹುಶಃ ಅದು ಹೆಚ್ಚಿನ ಅಂಕಗಳಿಕೆಗೆ ಇರಬಹುದೇನೊ ಅಥವಾ ಪಾಸಿಂಗ್ ಪ್ರತಿಶತ ಹೆಚ್ಚಿಸಲು ಕಂಡುಕೊಂಡರೋ ಅದು ಅವರು ಬೋಧಿಸುವ ಬೋಧನಾ ಪದ್ಧತಿಗೆ ಬಿಟ್ಟ ವಿಷಯ.ಆದರೆ ಇಂದು ನಾವು ಪರಿಪೂರ್ಣ ಕಲಿಕೆಯನ್ನು ಮತ್ತೆ ಮಾಡಲು ವಿದ್ಯಾರ್ಥಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನಾಗಿ ಮಾಡಬೇಕಾಗಿದೆ. ನಾನು ಈಗ್ಗೆ ಮೂವತ್ತು ವರ್ಷಗಳ ಹಿಂದೆ ಬಿ ಇಡಿ ಮಾಡುವಾಗ ಹರ್ಬರ್ಟನ ಪಂಚ ಸೋಪಾನ ಓದಿದ್ದೆ  ಅದರಲ್ಲಿ ಮೊದಲು ಬರುವ ಸೋಪಾನವೇ ಪೀಠಿಕೆ,  ಇದರ  ಉದ್ದೇಶ, ಉದ್ದೇಶ ಕಥನಕ್ಕೆ ವಿದ್ಯಾರ್ಥಿಗಳನ್ನು ತರುವುದು ನಂತರದ ಕಾಲಘಟ್ಟದಲ್ಲಿ ಅದು ಕಲಿಕಾಪೂರ್ವ ಚಟುವಟಿಕೆಯಾಯಿತು, ಇದರ ಉದ್ದೇಶವೂ ಉದ್ದೇಶ ಕಥನಕ್ಕೆ ಬರುವುದು, ಉದ್ದೇಶ ಕಥನದ ಯಶಸ್ಸು ಮಾತ್ರ ಮಗುವಿನ ಪ್ರಶ್ನಿಸುವ ಸಾಮರ್ಥ್ಯ ವನ್ನೆ ಅವಲಂಬಿಸಿದೆ.ಪ್ರಶ್ನೆಗಳಲ್ಲಿ ಹಲವಾರು ವಿಧಗಳಿವೆ ಅವುಗಳನ್ನು ನಾನು ಇಲ್ಲಿ ವ್ಯಕ್ತಪಡಿಸಲಾರೆ ಆ ಪ್ರಶ್ನೆಯ ವಿಧಗಳನ್ನು ಕಲಿತವರೆ ಶಿಕ್ಷಕರಾಗಿದ್ದರೆ ಆ ಮಾತು ಬೇರೆ. ಈಗ ನಮ್ಮ ಮುಂದಿರುವ ಬಹುದೊಡ್ಡ ಅವಶ್ಯಕತೆ, ಮಕ್ಕಳಲ್ಲಿ ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡುವುದು. ಒಂದು ಮಾತಿದೆ "ಪ್ರಶ್ನಿಸುವವನು ಕ್ಷಣ ಕಾಲ ದಡ್ಡನಾಗಿರುವನು ಪ್ರಶ್ನಿಸದೆ ಇರುವವನು ಸದಾ ಕಾಲ ದಡ್ಡ ನಾಗಿಯೇ ಉಳಿಯುವನು" ಎಂದು. ಪ್ರಶ್ನಿಸುವ ವಾತಾವರಣ ಎಂದರೆ ಅದೊಂದು  ಮನಸ್ಥಿತಿ ಮತ್ತು ಭವಿಷ್ಯ ನಿರ್ಮಾಣದ ಕೇಂದ್ರ ಅಲ್ಲಿರುವವರು ನಾವು ಹೇಳುವುದನ್ನು ಮಾತ್ರ ಕೇಳಲು ಕುಳಿತ ಸೋತೃಗಳಲ್ಲ ಹಾಗಾಗಿಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ನೇಮಿಸಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಮಾತ್ರ ಹೇಳಿ ಕೊಡುತ್ತೇನೆ" ಎಂದು. ಮುಂದುವರಿದು... ಮಕ್ಕಳಲ್ಲಿ ಈಗಾಲೆ ಪ್ರತಿಭೆಯು ಅಂತರ್ಗತ ವಾಗಿದೆ ಅದನ್ನು ಹೊರಗೆ ತರುವವನೆ ಶಿಕ್ಷಕ ಎಂದದ್ದು. ಹಾಗೆಯೇ ಪ್ರಶ್ನಿಸಲು ಬಾರದವನು ಶಿಕ್ಷಕನಾಗಲಾರ. ಪ್ರಶ್ನಿಸುವುದು ಒಂದು ಕಲೆ ಅದಿಲ್ಲದೆ ಉತ್ತಮ ಶಿಕ್ಷಕನಾಗಲಾರ .ಸತತ ಅಭ್ಯಾಸ ಒಬ್ಬ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿತ್ವ ವುಳ್ಳ ವ್ಯಕ್ತಿಯನ್ನಾಗಿ ಮಾಡುತ್ತದೆ.ಅಂತಹ ಗುರು ವರ್ಗ ಕೋಣೆಯನ್ನು ಸ್ವರ್ಗ ವನ್ನಾಗಿ ಮಾಡಬಲ್ಲ. ಪ್ರಶ್ನೆಗಳಿಲ್ಲದ ಕೋಣೆ ಅದು ಕೊಳೆತ ಬಾಳೆಹಣ್ಣಿನ ಗೊನೆ. " ಪ್ರಶ್ನೆಗಳೆ ಉತ್ತಮ ಶಿಕ್ಷಕನ ಜೀವಾಳ"

Tuesday, August 19, 2025

ಹಾಲಹಂಡೆ










ಬಂಡೆಗಳ ನಾಡಲ್ಲಿ ಬೆಳೆದು
ನಿಂತಿಹಳು ಹಾನಾಪೂರದ ಹಾಲಹಂಡೆ 
ಕಂಡು ಸಂತಸ ಪಡು ನೀ ಮಳೆಗಾಲದಂದು
ಫೀ ಇಲ್ಲ, ಪೇ ಮಾಡಬೇಕಿಲ್ಲ ಪಳಾರದ ಹಂಗಿಲ್ಲ 
ನಿಷ್ಕಲ್ಮಷ  ಮನಸ್ಸೆ ನಿನ್ನೂಲುವಿನಾ ಪೂಜೆ ಇವಳಿಗೆ ॥

ನಿಜ ಭಾವದಾಲಪವೆ ಭಜನೆ ಆ ಬಯಲಿಗೆ !
ತಂದು ಸುರಿಯಿರಿ ನಿಮ್ಮ ಗೊಜಲು ಗೊಂದಲ
ತಿಂದು ಜೀರ್ಣೀಸುವ ಶಕ್ತಿ ಯುಂಟು 
ಈ ಹಸಿರು ಹೊದ್ದ ಹೊಂಗೆ ಮರದ ಬಾಲೆಗೆ ! 

ಮೂವತ್ತು ಅಡಿಗಳ ಮೇಲಿನಿಂದಿವಳ ನರ್ತನ 
ಜುಳು ಜುಳು ನಾದವೆ ಇವಳ ಕೀರ್ತನೆ.
ಅಪ್ಪಳಿಸಿ ಹಾರುವ ಹನಿಗಳೆ 
ಮಂತ್ರಾಕ್ಷತೆ ಈ ಮದುವನಗಿತ್ತಿಗೆ !

ಅಂದು ದನಮೇಯಿಸಲೋದ ನನ್ನಕ್ಕತಂಗಿ
ಮೈಮರೆತು ಮೆಟ್ಟಿನಿಂತರು ಪಡುವನ ದಿಕ್ಕಿಗೆ 
ಹೊತ್ತು ಜಾರಿ ಕತ್ತಲಾವರಿಸಿ 
ಚಿತ್ತಕಳೆದುಕೊಂಡರಲ್ಲಿ ।

ಮಾಹಾಮಳೆಯು ಬೆಂಬತ್ತಿ 
ಬಂಡೆಗಲ್ಲಿಗೆ ಹೆದರಿ 
ಹಾವಾಗಿ ಹರಿದಳು ಮಾಯಾವಿ 
ಈ ವೈಯಾರಗಿತ್ತಿ ।
ಪಡಿಯ ನಡು ನಡುವೆ ನಡಿಗೆ ರೌದ್ರಾವತಾರ।
ಹಿಡಿದು ನೂಕಲು ಸಜ್ಜಾದಳು ಯಮರೂಪಿ॥

ಮೇಯಿಸಿದ ರಾಸು ಮನೆತಲುಪಿದಾಗ 
ಮನವೆಲ್ಲ ಗಲಿಬಿಲಿ, ಮನೆಯ ಕರೆಯೇ 
ಮರಣ ಮೃದಂಗದ ಬಲೆ !
ದಾಟಲೆಲ್ಲಿದೆ ಕಾಲಿನಲ್ಲಿ ಶಕ್ತಿ ! 
ಮೆಲ್ಲ ಮೆಲ್ಲನೆ ಒಂದಾಗಿ
ಓಡಿದರು ..ಓಡಿದರು.. ನಾವು ತಲುಪದ
ನಕ್ಷತ್ರ ವಾವಾಗುವ ಅನಂತ ದಾರಿಗೆ.॥













ಬಡಾವಣೆ

ಬಡಾವಣೆ ನಾಗರಿಕತೆ ಬಂದದ್ದೆ ನಗರಗಳ  ಉಗಮದಿಂದ ಇದು ಜೀವನ ಸುಲಬಗೊಳಿಸಲು  ಮಾನವ ಮಾಡಿದ ಅನ್ವೇಷಣೆಯ ದಾರಿ ನಗರದ ಪ್ರತಿ ಮೂಲೆಯೂ ಬಡಾವಣೆ ಹಿಗ್ಗುತಿದೆ  ಕೃಷಿ ಭೂಮಿ ಕುಗ್ಗು...