Monday, June 15, 2026

ಹಾನಾಪೂರದಲ್ಲೊಂದು ನಕ್ಷತ್ರ

 
"ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾಡಿದ ಸಾಧನೆಯಿಂದ ರುಜುವಾತಾಗಿದೆ.
ಕರಿಯಪ್ಪ ಮಾದರ ಕಲಿತದ್ದು ಅದೇ ಊರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಯಿಯು ನಿರಕ್ಷರಿ, ಮುಂದಿನ ಶಿಕ್ಷಣ ಕಲಿತದ್ದಾರೂ ಯಾವ ಶಾಲೆಗಳು? ಅವೆಲ್ಲವೂ ಸರ್ಕಾರದ ಶಾಲೆಗಳು ಮಾಧ್ಯಮಿಕ ಶಿಕ್ಷಣ ಹಾನಾಪೂರ ಎಲ್ ಟಿ ಪ್ರೌಢಶಾಲೆಯಲ್ಲಿ ,  ಪದವಿ ಪೂರ್ವ ಶಿಕ್ಷಣ, ಬಾಲಕರ  ಸರ್ಕಾರಿ ಪದವಿ ಪೂರ್ವ ಕಾಲೇಜು ಗುಳೇಗುಡ್ಡ ದಲ್ಲಿ ಇದರಿಂದ ನಮಗೆ ಅರ್ಥವಾಗುವ ಅಂಶ ಏನೆಂದರೆ ಪ್ರತಿಭೆ ಅರಳಲು ಲಕ್ಷ  ಎಣಿಸಬೇಕಾದ ಶಿಕ್ಷಣ ಸಂಸ್ಥೆಗಳೇ ಬೇಕಿಲ್ಲ ಎಂದು. ಯಾವುದೆ ಒಂದು ಕಾಲೇಜಿನಲ್ಲಿ ಒಂದು ವಿದ್ಯಾರ್ಥಿ ಇಂತಹ ಶಾಧನೆ ಮಾಡಿದರೆ ಆವರ ಪೋಟೊ ಹಾಕಿ ಅದನ್ನು ಲಾಭ ಮಾಡಿಕೊಳ್ಳಲು ತವಕಿಸುವ, ಒಂದು  ವರ್ಷ ಮಾಡಿದ ಸಾಧನೆಯನ್ನು ಮತ್ತೆ ಮತ್ತೆ ಹಾಕುವ ಇಂದಿನ ದಿನದಲ್ಲಿ  ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿ ಇಂತಹ  ಸಾಧನೆ ಮಾಡಿದ ಕರಿಯಪ್ಪ ನಿಜವಾಗಿಯೂ ಅಭಿನಂದನಾರ್ಹ. ಆಡು ಆಕಳು ಮೇಯಿಸುವ ತಾಯಿಗೆ IIT ಅಂದರೇನು ಎನ್ನುವ  ಪರಿಕಲ್ಪನೆಯೂ ಇಲ್ಲ ಆದರೆ ಅಭಿನಂದನೆಗಳ ಮಹಾಪೂರ ಹರಿದು ಬಂದದ್ದು ನೋಡಿ ಚನ್ನಾಗಿ ಕಲಿತುಕೊಂಡಿದ್ದಾನೆ ಎಂದುಕೊಂಡಿರಬಹುದು. ಗುಡ್ಡದ ಊರಿನಲ್ಲಿ ಜನಿಸಿದ ಕರಿಯಪ್ಪ ಇನ್ನೂ ದೊಡ್ಡವನಾಗಬೇಕು.ಕಾಲೇಜಿನ ಎಲ್ಲ ಉಪನ್ಯಾಸಕರ  ಆಶೀರ್ವಾದವಿದೆ ಮತ್ತು ಊರ ಗ್ರಾಮ ದೇವತೆ ಕರಿಯಮ್ಮನ ಆಶೀರ್ವಾದವಿದೆ. ಸಾಧನೆ ಸಾಧಕನ ಸೊತ್ತು ಎನ್ನುವ ಮಾತನ್ನು  ಪೂರ್ಣ ಗೊಳಿಸಲು ಅವಕಾಶ ದೊರತಿದೆ ಇದು ಅರ್ಧ ದಾರಿ ಮಾತ್ರ, ಪೂರ್ಣ ಗೊಳಿಸಿ ಹಾನಾಪೂರ ಎಸ್ ಪಿ ಹಾಗೂ ಗುಳೇಗುಡ್ಡ ಬಾಲಕರ ಸರ್ಕಾರಿ ಪ.ಪೂರ್ವ ಕಾಲೇಜಿನ ಹೆಸರನ್ನು ಭಾರತದ ಇತಿಹಾಸದಲ್ಲಿ ದಾಖಲಿಸಬೇಕಾಗಿದೆ.
      ಈ ಹುಡುಗ ನನ್ನ ಊರಿನವನು ಎನ್ನುವದು ಎಷ್ಟು ಹೆಮ್ಮೆಯೋ ಅಷ್ಟೆ ಹೆಮ್ಮೆ ನನ್ನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ವಿದ್ಯಾರ್ಥಿ ಎನ್ನುವುದು ಇನ್ನೂಂದು ಹೆಮ್ಮೆಯ ವಿಷಯ. ಅವರ ಅಣ್ಣ ನೂ ಬಾಲಕರ ಸರ್ಕಾರ ಪ.ಪೂ.ಕಾಲೇಜಿನ ವಿದ್ಯಾರ್ಥಿ, ಪ್ರತಿಭೆಯಿಂದ ಅರಳಿ ಪೋಲೀಸ್ ಕೆಲಸ ಪಡೆದು ಈಗ ಮಂಗಳೂರಿನಲ್ಲಿ ಪಿ.ಸಿ ಯಾಗಿ ಸೇವೆ ಸಲ್ಲಿಸುತ್ತಿದ್ದಾನೆ.ನಯ ವಿನಯದ ಅವನ ವರ್ತನೆ ,ಕಲಿಯುವ ಹಂಬಲ ಅವನನ್ನು ಸರ್ಕಾರದ ಕೆಲಸ ಮಾಡುವಂತೆ ಮಾಡಿತು.ಈಗ ಆತನ ತಮ್ಮ ಕರಿಯಪ್ಪನೂ ಸತತ ಪ್ರಯತ್ನ ಇನ್ನೂಂದು ಹೆಜ್ಜೆ ಮುಂದೆ ಹೋಗುವಂತೆ ಮಾಡಿದೆ .
    ಸರ್ಕಾರಿ ಪ.ಪೂರ್ವ ಕಾಲೇಜಿಗೆ ಇಂದು ದಿನಾಂಕ 15.06.2026 ಹಬ್ಬದ ದಿನ ಕಾರಣ ಇಷ್ಟೆ ಕರಿಯಪ್ಪ ನನ್ನು ಸನ್ಮಾನ ಮಾಡಲು ಇಲಾಖೆಯ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪುಂಡಲಿಕ ಕಾಂಬಳೆ ಹಾಗೂ ಬದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಭೀಮಸೇನ ಚಿಮ್ಮನಕಟ್ಟಿಯವರು ನಮ್ಮ ಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಯನ್ನು ಗೌರವಿಸದರು ಈ ಸಂದರ್ಭ ದಲ್ಲಿ ನಮ್ಮ ಸಂಸ್ಥೆಯ ರಸಾಯನಶಾಸ್ತ್ರ ದ ಉಪನ್ಯಾಸಕಿಯರು  ಹೇಳಿದ ಮಾತು ಇಲ್ಲಿ ಬರೆಯಬೇಕಿನಿಸಿತು.ಅದನೆಂದರೆ "ಶಿಕ್ಷಣ ಕ್ಕೆ ಅದ್ಭುತ ಶಕ್ತಿಯಿದೆ" ಮಾನ್ಯ ಶಾಸಕರು ಹಾಗೂ ಉಪನಿರ್ದೇಶಕರು ಒಂದೇ ಅವಧಿಯಲ್ಲಿ ನಮ್ಮ ಸಂಸ್ಥೆಗೆ ಬಂದ ಉದಾಹರಣೆಯಿರಲಿಲ್ಲ ಈಗ ನಾವು ನೋಡಿದೆವು.ಎನ್ನಬೇಕೆ ? ಪ್ರಾಯಶಹ ಇದು ಸರಳವಾಗಿ ಮಾತನಾಡಿದ ಮಾತಾಗಿರಬಹುದೇನೋ ಸರಿ. ಆದರೆ ಶಿಕ್ಷಣ ಬಲದ ಮಹತ್ವವೇ ಅಂತಹದು ಶ್ರೇಷ್ಠ ವ್ಯಕ್ತಿಗಳೂ ಕಣ್ಣು ತೆರೆದು ನೋಡುವಂತೆ ಮಾಡಬಲ್ಲದು.ಇಂದು ನಮ್ಮ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾನ್ಶ ಶಾಸಕರು ಮಾತನಾಡಿದ್ದು ಅದು ಭಾಷಣವಾಗಿರಲಿಲ್ಲ ಬದಲಾಗಿ ಅನುಭವಗಳನ್ನು ಉಣಬಡಿಸಿದ ಕೈಗಳಾಗಿದ್ದವು ಹಾಗಾಗಿ ನಮ್ಮ ಸಂಸ್ಥೆಯ 350 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಂತ್ರ  ಮುಗ್ಧ ರಾಗಿದ್ದರು ಕಾರಣ ಇಷ್ಟೆ ಐಐಟಿ ಎಂದರೇನು ಎಂದು ಅರಿಯದ ಮುಗ್ಧ ತಾಯಿಯ ಕಾರ್ಯ ವನ್ನು ಶ್ಲಾಘಿಸುತ್ತಾ ಮಕ್ಕಳೊಂದಿಗಿನ ಅವರ ಪ್ರಶ್ನೋತ್ತರ ರೀತಿ ಶಿಕ್ಷಣ ತಜ್ಞ  ಗುರುರಾಜ ಕರ್ಜಗಿಯವರ ಮಾತುಗಳನ್ನು ನೆನಪಿಗೆ ತರುವಂತೆ ಮಾಡಿದವು ಇನ್ನು ಉಪನಿರ್ದೇಶಕರಾದ ಪುಂಡಲಿಕ  ಕಾಂಬಳೆಯವರು  ಇಲಾಖೆಯ ಪರವಾಗಿ ಸನ್ಮಾನ  ಮಾಡಿ ಸರ್ಕಾರದ ಸಂಸ್ಥೆಗಳಲ್ಲಿ ಸಾವಿರ ಕರಿಯಪ್ಪ ಗಳು ಸೃಷ್ಟಿಯಾಗಲಿ ಎಂದದ್ದು ವಿದ್ಯಾರ್ಥಿಗಳ ಮನದಲ್ಲಿ ಛಲದ ಅಲೆಯನ್ನೆ ಸೃಷ್ಟಿಸಿತು. ಹಾನಾಪೂರ ಗ್ರಾಮದ ಯಮನಪ್ಪ ಹೀರೇಗೌಡರ ಊರಿನ ಅಭಿಮಾನದಿಂದ ವಿದ್ಯಾರ್ಥಿಯ ಮುಂದಿನ ವ್ಯಾಸಂಗಕ್ಕೆ 50 ಸಾವಿರ ಪ್ರೋತ್ಸಾಹಧನವನ್ನು ನೀಡಿದ್ದು ಸಣ್ಣ  ವಿಷಯ ವೇನಲ್ಲ  ನಮ್ಮ ಸಂಸ್ಥೆಯ ಪ್ರಾಚಾರ್ಯ ಹಾಗೂ ಉಪನ್ಯಾಸಕರಿಗೆ ಸಡಗರವೊ ಸಡಗರ,ವಿದ್ಯಾರ್ಥಿಗಳಲ್ಲಿ ಸಂಚಲನ,  ನಾನೂ ಸಾಧನೆ ಮಾಡಬೇಕು ಎನ್ನುವ ಅಲೆ ಹುಟ್ಟಿದ್ದಂತು ಸತ್ಯ. 
ಅಭಿನಂದನೆಗಳು ಕರಿಯಪ್ಪ. 

      

Thursday, February 12, 2026

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು 
       ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳನ್ನು
ಆಸ್ವಾದಿಸುವ ರೂಪ ಬೇರೆ ಬೇರೆ ಆಗಿರುತ್ತದೆ ಅವುಗಳಲ್ಲೊಂದಿಷ್ಟುಇಲ್ಲಿ ಮೇಲಕು ಹಾಕುವದ ರ ಮೂಲಕ ಸಂತೋಷ  ಪಡುತ್ತಿದ್ದೇನೆ.ಅಪ್ಪ ಗಳೆ ಬಿಟ್ಟುಕೊಂಡು ಹೊರಟಾಗ ಎತ್ತಿನ ಆಶಿಯ ಮೇಲೆ ಕುಳ್ಳರಿಸಿ ಬೀಳಬಾರದೆಂದು ಮೇಳಿ ಹಿಡಿಸಿ ಸಂತೋಷ ಪಡಿಸಿದ. (ಬಹುಶಃ ಈಗಿನ ದಿನಮಾನದಲ್ಲಿ ಆವನ ರೀತಿಯಾಗಿ ಮಕ್ಕಳನ್ನು  ಆಶಿ ಮೇಲೆ ಕುಳ್ಳಿರಿಸಿ ಹೊಲಕ್ಕೆ ಕರೆದುಕೊಂಡು ಹೋದದ್ದು ನಾನು ಕಂಡಿಲ್ಲ)  ಮಧ್ಯ ರಾತ್ರಿಯಲ್ಲಿ ಎದ್ದು ಬುಂದೆದುಂಡಿ ಬೇಕು ಎಂದು ಹಠ ಹಿಡಿದಾಗ ರಾತ್ರಿ ಅಂಗಡಿ ತಗಸಿ ಬುಂದೆ ಕೊಡಸಿದ. ಅದಕ್ಕಿಂತ ಮೊದಲು ಸಣ್ಣವನಿದ್ದಾಗ ಹೆಗಲು ಮೇಲೆ ಹತ್ತಿಸಿಕೊಂಡು ಬಿತ್ತಿದ್ದಾನಂತೆ ಆಗ ನಾನು ಕಾಗೆಗಳನ್ನು ಓಡಿಸಲು ಕೇಕೆ ಹಾಕಿದ್ದನ್ನು ಹೇಳಿ ನೀ ಹಠವಾದಿಯಾಗಿದ್ದಿ ಎಂದು ಪುಟಗಟ್ಟಲೆ ಹೇಳಿದ್ದಾನೆ. 

* ಅಪ್ಪ ನಮ್ಮೆಲ್ಲರ ಛಪ್ಪರ *

ಅಪ್ಪನೆನ್ನುವ ಅಕ್ಷರವೆ ಹಾಗೆ 
ಚಪ್ಪರದಂತೆ ನೆರಳು ನೀಡಿ 
ಅಪ್ಪಿಕೊಂಡು ಓಡುವ ಸಾರೋಟ॥

ಅನುದಿನವೂ ಅಕ್ಕರೆಯ ಶ್ರೀರಕ್ಷೆ, 
ಎನ್ನ ಬೆಳಸಿದ ಆಗಸದೆತ್ತರದ ವೃಕ್ಷ
ಕಾಗೆ ಗುಬ್ಬಚ್ಚಿಯಂತೆ ಗೂಡು ಕಟ್ಟಿದ ಅಪ್ಪ॥

ಸತ್ಯದ ಆಲ ನೆಟ್ಟು ನೀರು ಗೊಬ್ಬರವೆರದು
ನಿತ್ಯಸತ್ಕರ್ಮದ ಬೇಲಿ ಸುತ್ತು ಹೆಣೆದು 
ನರಿ ತೋಳ ಸುಳಿಯದಂತೆ ಕಾದ ಅಪ್ಪ॥

ನೆಲೆನಿಂತ ಹೊಲವೆ ಉರಿದರು  
ಛಲದಿಂದ ಅರಿವಿನ ನಗೆ ಬೀರಿ
ದೊರೆಯಂತೆ ಬೆಳೆಸಿದ ಅಪ್ಪ ॥

ಬಿರುಗಾಳಿ ,ಮಳೆಯಿಲ್ಲಾ ಬರಿ ದೂಳು
ಉರಿ ಬಿಸಲಿನಲ್ಲಿ ಬರಿಗಾಲ ಪಯಣ
ಹೊರೆಯಾದರು ಬಾರ ಎಳೆದ ಅಪ್ಪ .॥

ಹೊರಗೆ ದುರ್ವಾಸ ಮುನಿ
ಒಳಗೆ ಮಹಾಭಾರತದ ವ್ಯಾಸ
ಇಳೆಗೆ ಶ್ರೀರಾಮನ ಪ್ರೀತಿ ತಂದ ಅಪ್ಪ ॥

ಇಂದು ಇಲ್ಲ ಮುಂದೆ ಸಿಗುವುದಿಲ್ಲ
ಹುಡುಕಲು ಹೋಗಬೇಕಿಲ್ಲ
ಎದೆಯಾಳದಲ್ಲಿ ಅಡಗಿ ಕುಳಿತ ಅಪ್ಪ॥

Sunday, January 25, 2026

ನಗರೀಕರಣ

ನಾಗರಿಕತೆ ಬಂದದ್ದೆ ನಗರಗಳ 
ಉಗಮದಿಂದ ಇದು ಜೀವನ ಸುಲಬಗೊಳಿಸಲು 
ಮಾನವ ಮಾಡಿದ ಅನ್ವೇಷಣೆಯ ದಾರಿ
ನಗರದ ಪ್ರತಿ ಮೂಲೆಯೂ ಬಡಾವಣೆ ಹಿಗ್ಗುತಿದೆ 
ಕೃಷಿ ಭೂಮಿ ಕುಗ್ಗುತಿದೆ 
ಹೊಸ ಬಡಾವಣೆಯ ಗಾಳಿಯಿಂದ .
ಇಲ್ಲಿ ಇನ್ನು ಮುಂದೆ ಬೆಳೆ ಬೆಳೆಯುವುದಿಲ್ಲ
ಬಿಲ್ಡಿಂಗಗಳು ಬೆಳೆಯುತ್ತವೆ
ಇನ್ನು ಮುಂದೆ ಇಲ್ಲಿ ಬೆಳದಿಂಗಳು ಚೆಲ್ಲುವುದಿಲ್ಲ 
ಬಲ್ಬುಗಳೆ ಬೆಳದಿಂಗಳನ್ನು ನೀಡುತ್ತವೆ
ಇಲ್ಲಿ ಹಸು ಕುರಿ ಮೇಕೆ  ಮೇಯುವುದಿಲ್ಲ
ಮನುಷ್ಯರು ಮೇಯುತ್ತಾರೆ
ಇಲ್ಲಿ ಹಕ್ಕಿ ಪಕ್ಕಿ ಗಳು ದ್ವನಿ ಮಾಡುವುದಿಲ್ಲ
ದ್ವನಿ ವರ್ಧಕಗಳು ಅಬ್ಬರಿಸುತ್ತವೆ.
ಇಲ್ಲಿ ಭೂಮಾತೆ ಗಂಟಲು ಹಿಚುಕುತ್ತಾರೆ
ಹೊಟ್ಟೆಯನ್ನು ಬಗೆದು ನೀರು ಬಸಿಯುತ್ತಾರೆ 
ಇಲ್ಲಿ ಇನ್ನು ಪೈಪುಗಳೆ ನರನಾಡಿಗಳು
ಎಲೆಕ್ಟ್ರಿಕ್ ಕಂಬಗಳೆ ಸ್ವಾಗತ ಕಮಾನುಗಳು
ನಗರಸಭೆಯವರೆ ವೈದ್ಯರು 
ಹಂದಿಗಳೆ ದಾದಿಯರು
ಹೊಂದಿಕೊಂಡವರು ಉಳಿತಾರೆ 
ಹೊಂದದಿದ್ದರೆ ಚಂದಾ ವಸೂಲಿ 
ಮದ್ದು ನೀಡುವವರಿಗೇನು ಕಡಿಮೆ
ಸರಿಯಾದ ಸಮಯಕ್ಕಾದರೆ ಸೀದಾ ನಡಿ
ಸಾವಿರ ಟೆಸ್ಟಮಾಡಿ ಸೋತರೆ ಗಾಡಿ ಬಿಡಿ
 
 



Wednesday, January 7, 2026

ಸಿದ್ಧರಾಮನ ಚರಿತೆ

ಸಿದ್ಧರಾಮನ ಹುಂಡಿಯಿಂದೆದ್ದು ಬಂದು
ಗೆದ್ದು ಬೀಗಿದ ಸಿದ್ಧರಾಮನ ಚರಿತೆಯಿದು
ಸದ್ದು ಮಾಡುತಿದೆ ಕರ್ನಾಟಕ ದೇಶದೊಳು॥

ಕುರಿಕಾಯುವ ಕುರುಬರ ಕುಲ ತಿಲಕ
ಸರಿ ಕಂಡಂತೆ ನಡೆದು ಗುರಿ ತಲುಪಿ
ದೊರೆಯಾದನು ಕನ್ನಡದ ದೇಶದೊಳು ॥

ವಿಜ್ಞಾನದ ಬಲದಿಂದ ಸುಜ್ಞಾನದ ಪ್ರಭೆ 
ಕುಹಕಳ ಮಧ್ಯ ಪಡೆದ ಕಾನೂನು ಪ್ರಜ್ಞೆ
ವೈಚಾರಿಕತೆ ಮೈಗೂಡಿಸಿಕೊಂಡ ಮನದೊಳ್॥

ಬುದ್ಧ ಬಸವ ಅಂಬೇಡ್ಕರ್ ರ ಗ್ರಹಿಸಿ
ಶುದ್ಧ ಲೋಹಿಯಾ ಸಿದ್ದಾಂತ ಪರಿಪಾಲಿಸಿ
ಇವನೆದ್ದು ಬಂದ ತಳಸಮುದಾಯದೊಳ್॥

ಹಸಿವನ್ನು ಹೊದ್ದು ಮಲಗಿದ ಜನರಿಗೆ
ಹೊಸ ಆಶಾಕಿರಣವಾದ ಅನ್ನರಾಮಯ್ಯ 
ಬೆಸೆದ ಮಾನವೀಯತೆ ಜಗದೋಳ್॥  

ಕಾಲದ ಗರಡಿಯ ಚೇಲಾಗಳ ಸಿಂಹ ಸ್ವಪ್ನ 
ಸೋಲಿನ ಸುಳಿಗೆ ಸವಾಲಿನ ಚಾಣಕ್ಯ ತಂತ್ರ
ಮಂತ್ರವೊಂದೇ ಗೆಲ್ಲುವ ರಣತಂತ್ರ ವ್ಯೂಹದೊಳ್॥

ಕನ್ನಡದ ಕುವರ ವ್ಯಾಕರಣ ಪಂಡಿತ 
ತನ್ನ ನಾಡಿನ ಅಂಕಿ ಸಂಖ್ಯೆಗಳ ಗಣಿತಜ್ಞ
ಶಿಕ್ಷಕ ತಾ ತಿದ್ದುವನು ಪ್ರಶ್ನೆಯಾ ಶಾಲೆಯೊಳ್

ಪ್ರೀತಿಸಿದರೆ ಸ್ವಾಭಿಮಾನದ ಪುತ್ರ 
ವಿರೋಧಿಸದರೆ ಕೇಸರಿ, ನಡುಗಬೇಕು ಶತೃ 
ದೊರೆ ತಾ ಪ್ರೀತಿಸುವ ಬಡವರ ಛತ್ರದೊಳ್
 



 







Wednesday, December 31, 2025

ಮರೆಯಾದ ಶ್ರೇಷ್ಠ ಪ್ರೀತಿ

ಅರಿಯುವ ಮುನ್ನ ಮರೆಯಾಯಿತು 
ಶ್ರೇಷ್ಠ ಪ್ರೀತಿಯನ್ನು ನೀಡುವ ಜೀವ 
ಶಿವನ ಕರೆಗೆ ಭುವನ ತೊರೆದು
ಜೀವನದ ಕೊನೆ ಗುರಿತಲುಪಿದಳಮ್ಮ॥
 
ಎಲ್ಲರ ಮನೆಯ ದೋಸೆಯೂ ತೂತೆ
ಕಲ್ಲಿನ ದೇವರಿಗೆ ಬೆಲ್ಲ ಸಕ್ಕರೆ ನೈವೇದ್ಯ 
ಬಲ್ಲೆವೇನಿವಳ ಬದುಕಿದ ಎಲ್ಲ ಕಷ್ಟಗಳಾ
ಸೊಲ್ಲೆತ್ತದೆ ಸುತ್ತಿ ಮಾಯವಾದಳಮ್ಮ॥

ಕತ್ತು ಬಗ್ಗಿಸಿ ಕತ್ತೆಯಂತೆ ದುಡಿದು
ನಿತ್ಯ ಕೊರೆಯಿಸಿಕೊಂಡಳು ಗರಗಸ 
ಸಕ್ಕರೆ ಸವರಿದ ಕಹಿಗುಳುಗಿ ನುಂಗಿ
ಮಿಕ್ಕಿ ನಡೆವ ಛಲವೆ ನಿನ್ನ ಆಭರಣವಮ್ಮ ॥
 
ಸ್ವಾತಂತ್ರ್ಯ ವೆಂಬುದು ಅಂಬರದ ತಾರೆ 
ಗಟ್ಟಿಯಾಗಿ ನಿಂತರು ಸಿಗಲಿಲ್ಲ ಚೂರು
ಹುಟ್ಟಿದ ಮನೆ,ಕೊಟ್ಟ ಮನೆ ಎರಡೂ ಒಂದೇ
ಬೆಟ್ಟ ಅಗೆದು ಇಲಿಯನ್ನು ಹಿಡಿದಳಮ್ಮ॥

ತವರಿಗೆ ಹಂಬಲಿಸಿ ತನು ಮೀಸಲಾಗಿಸಿ 
ತಾಯಿ ಸತ್ತ ಮೇಲೆ ತಾ ದೂರವಾದಳಮ್ಮ
ತಾ ಬೇಡ ತವರಿಗೆ, ಸಹಿ ಪಡೆದ ಮೇಲೆ
ತಮ್ಮಂದಿರ ನೆನೆದು ದೂರಾದಳಮ್ಮ॥

ಮನೆ ಕಟ್ಟಿದ ಮಕ್ಕಳು ಮನಕೊಟ್ಟರೇನು
ಹಣವಿಟ್ಟು ಫಲವೇನು ಗುಣವರಳಲಿಲ್ಲ
ದನಿವರಿಯದ ದುಡಿಮೆ ಕೈಕೊಟ್ಟರೂ
ಕೊನೆಯವರೆಗೂ ಮನತುಂಬಿ ಹರಿಸಿದಳಮ್ಮ॥




 




Friday, November 14, 2025

ಸಾಲು ಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ

ನೂರು ಬೋಧಕರನು ಮೀರಿ ಬೆಳೆದ
ನಾರಿ ಇವಳು ದೇವರಿಗಿಂತ ಮಿಗಿಲು ನಮಗೆ
ಮರವ ಬೆಳೆದು ಜಗದೊಳಾದಳಜರಾಮರ॥

ಅಕ್ಷರವನರಿತು ಬಿಕ್ಷುಕರಂತೆ ಬೇಡುವ
ಸಾಕ್ಷರರು ಬಲ್ಲೆವೇನಿವಳ ಕಾರ್ಯದುತ್ತರ
ವೃಕ್ಷ ಮಾತೆಯ ದಕ್ಷ ನಡೆಯು ಸಾಗಿದೆ ಅನುದಿನ॥

ಸಾಲು ಮರದ ತಿಮ್ಮಕ್ಕ ಇವಳೇ ಜಗದಕ್ಕರ
ಸಾವಿರ ನೋವು ಹಾವಾಗಿ ಹರಿದರೂ
ಹಾಲೆರೆದು ಬೆಳೆದು ಬೀಗಿದಳಾಲದಮರ॥

ಒಂದೆ, ಎರಡೆ ನೆಟ್ಟಳೆಂಟು ಸಾವಿರ
ಬಂದು ನಿಂತವು ಮಕ್ಕಳೆಲ್ಲ ಹರಹರ
ದುಡಿದು ಸಾಗುವ ಶ್ರಮಿಕರಿಗೆಲ್ಲ ಬೃಂದಾವನ 

ಮಾತೆಯ ಮಡಿಲು ಮಕ್ಕಳುಸಿರು 
ಜಗದ ತುಂಬಾ ಹಸಿರು ಸಾಲು ಸಾಲು
ಕೊಸರಿ ಹೋಗುವ ನಿನ್ನುಸಿರು, ಮರೆಯಲಾಗದ ಹಸಿರು, ಮರೆಯಲಾಗದ ಹಸಿರು.॥

Friday, September 26, 2025

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉದ್ದೇಶ ಇಡೇರಲಾರದು.ಶಿಕ್ಷಣವೆಂದರೆ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಇಲ್ಲವೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆಯಲ್ಲ ಹಾಗೆ ಕಲಿತ ಶಿಕ್ಷಣದ ವಿಷಯಗಳು ಪರೀಕ್ಷೆಯ ದಿನಗಳವರೆಗೆ ಸಾಗಿ ಬರಬಹುದೇನೋ ಇಲ್ಲವೆ ತದನಂತರ ಅವು ಮರೆಯಾಗಲೂಹುದು. ಅಂದರೆ ಪ್ರಶ್ನಿಸದೆ ಕಲಿಕೆ ಅಪೂರ್ಣ ಎಂದಾಯಿತು. ಹಾಗಾದರೆ ಆ ಪ್ರಶ್ನಿಸುವ ಕಾರ್ಯ ಎಲ್ಲಿಂದ ಪ್ರಾರಂಭವಾಗಬೇಕು, ಯಾರಿಂದ ಮೊದಲು ಪ್ರಾರಂಭವಾಗಬೇಕು? ಎನ್ನುವುದರ ಮೇಲೆ ಕಲಿಕೆಯ ತೀವ್ರತೆಯು ವ್ಯತ್ಯಾಸವಾಗುತ್ತ ಸಾಗುತ್ತದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ತಮ್ಮ ಆಶ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಬೇಗನೆ ಹೇಳಿಕೊಡುತ್ತಿರಲಿಲ್ಲ ಬದಲಾಗಿ ವಿದ್ಯೆಯ ಹಸಿವುಂಟಾಗುವಂತೆ ಮಾಡುತ್ತಿದ್ದರು ತದನಂತರದ ದಿನಗಳಲ್ಲಿ ಅನುಭವಗಳನ್ನು ಧಾರೆ ಎರೆಯುತ್ತಿದ್ದರು ಹಾಗೆ ಕಲಿತ ಜ್ಞಾನ ತಮ್ಮ ಜೀವನದ ಕೊನೆಯವರೆಗೂ ಹಿಂಬಾಲಿಸುತ್ತಿತ್ತು ಮತ್ತು ಗಟ್ಟಿಗೊಂಡಿರುತ್ತಿತ್ತು ಅಷ್ಟೆ ಏಕೆ ನಾಲ್ಕೈದು ದಶಕಗಳ ಹಿಂದಿನ ಹಿರಿಯರನ್ನು ನೀವು ಸೂಕ್ಷ್ಮ ವಾಗಿ ಗಮನಿಸಿರಿ ತಾವು ಕಲಿತ ಕವನ, ಕಥನ, ಕಾದಂಬರಿ ಲೆಕ್ಕ ಗಳನ್ನು ನೀರು ಕುಡಿದಷ್ಟೆ ಸಲೀಸಾಗಿ ಹೇಳುವುದನ್ನು ಕೇಳಿದ್ದೇವೆ. ಅದು ಹೇಗೆ ಸಾಧ್ಯ ! ಅವರೆಲ್ಲ ಹಸಿವಾಗಿ ಉಂಡವರು, ಅಂದರೆ ಕೇಳಿ ಪಡೆದವರು.ಹೀಗಾಗಿ ಅವರು ಕಡಿಮೆ ಇಯತ್ತೆಗಳನ್ನು ಕಲಿತಿದ್ದರೂ ಅದನ್ನು ಇಂದು ಪರಿಪೂರ್ಣವಾಗಿ ಹೊರಹಾಕುತ್ತಿದ್ದಾರೆ.ಈಗ ಅವರ ನಿರೀಕ್ಷೆ ಏನೆಂದರೆ ತಾವು ಕಡಿಮೆ ಕಲಿತವರಾದರೂ ಇಂದಿನ ಹೆಚ್ಚಿನ ವ್ಯಾಸಂಗ  ಮಾಡಿದ  ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದಾರೆ ಮತ್ತು ಗುಣಮಟ್ಟ ಕುಸಿದಿದೆ ಎಂದು ಗೊಣಗುಟ್ಟುವುದನ್ನು ಕೇಳಿದ್ದೇವೆ. ಕೆಲವೊಂದು ಅಧ್ಯಾಪಕರು ಹದಿನೈದು ನಿಮಿಷ ಪಾಠ ಮಾಡಿ ಮೂವತ್ತು ನಿಮಿಷ ಬರೆಯಿಸುವುದನ್ನು ರೂಢಿಸಿಕೊಂಡವರಿರಬಹುದೇನೊ ಬಹುಶಃ ಅದು ಹೆಚ್ಚಿನ ಅಂಕಗಳಿಕೆಗೆ ಇರಬಹುದೇನೊ ಅಥವಾ ಪಾಸಿಂಗ್ ಪ್ರತಿಶತ ಹೆಚ್ಚಿಸಲು ಕಂಡುಕೊಂಡರೋ ಅದು ಅವರು ಬೋಧಿಸುವ ಬೋಧನಾ ಪದ್ಧತಿಗೆ ಬಿಟ್ಟ ವಿಷಯ.ಆದರೆ ಇಂದು ನಾವು ಪರಿಪೂರ್ಣ ಕಲಿಕೆಯನ್ನು ಮತ್ತೆ ಮಾಡಲು ವಿದ್ಯಾರ್ಥಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನಾಗಿ ಮಾಡಬೇಕಾಗಿದೆ. ನಾನು ಈಗ್ಗೆ ಮೂವತ್ತು ವರ್ಷಗಳ ಹಿಂದೆ ಬಿ ಇಡಿ ಮಾಡುವಾಗ ಹರ್ಬರ್ಟನ ಪಂಚ ಸೋಪಾನ ಓದಿದ್ದೆ  ಅದರಲ್ಲಿ ಮೊದಲು ಬರುವ ಸೋಪಾನವೇ ಪೀಠಿಕೆ,  ಇದರ  ಉದ್ದೇಶ, ಉದ್ದೇಶ ಕಥನಕ್ಕೆ ವಿದ್ಯಾರ್ಥಿಗಳನ್ನು ತರುವುದು ನಂತರದ ಕಾಲಘಟ್ಟದಲ್ಲಿ ಅದು ಕಲಿಕಾಪೂರ್ವ ಚಟುವಟಿಕೆಯಾಯಿತು, ಇದರ ಉದ್ದೇಶವೂ ಉದ್ದೇಶ ಕಥನಕ್ಕೆ ಬರುವುದು, ಉದ್ದೇಶ ಕಥನದ ಯಶಸ್ಸು ಮಾತ್ರ ಮಗುವಿನ ಪ್ರಶ್ನಿಸುವ ಸಾಮರ್ಥ್ಯ ವನ್ನೆ ಅವಲಂಬಿಸಿದೆ.ಪ್ರಶ್ನೆಗಳಲ್ಲಿ ಹಲವಾರು ವಿಧಗಳಿವೆ ಅವುಗಳನ್ನು ನಾನು ಇಲ್ಲಿ ವ್ಯಕ್ತಪಡಿಸಲಾರೆ ಆ ಪ್ರಶ್ನೆಯ ವಿಧಗಳನ್ನು ಕಲಿತವರೆ ಶಿಕ್ಷಕರಾಗಿದ್ದರೆ ಆ ಮಾತು ಬೇರೆ. ಈಗ ನಮ್ಮ ಮುಂದಿರುವ ಬಹುದೊಡ್ಡ ಅವಶ್ಯಕತೆ, ಮಕ್ಕಳಲ್ಲಿ ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡುವುದು. ಒಂದು ಮಾತಿದೆ "ಪ್ರಶ್ನಿಸುವವನು ಕ್ಷಣ ಕಾಲ ದಡ್ಡನಾಗಿರುವನು ಪ್ರಶ್ನಿಸದೆ ಇರುವವನು ಸದಾ ಕಾಲ ದಡ್ಡ ನಾಗಿಯೇ ಉಳಿಯುವನು" ಎಂದು. ಪ್ರಶ್ನಿಸುವ ವಾತಾವರಣ ಎಂದರೆ ಅದೊಂದು  ಮನಸ್ಥಿತಿ ಮತ್ತು ಭವಿಷ್ಯ ನಿರ್ಮಾಣದ ಕೇಂದ್ರ ಅಲ್ಲಿರುವವರು ನಾವು ಹೇಳುವುದನ್ನು ಮಾತ್ರ ಕೇಳಲು ಕುಳಿತ ಸೋತೃಗಳಲ್ಲ ಹಾಗಾಗಿಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ನೇಮಿಸಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಮಾತ್ರ ಹೇಳಿ ಕೊಡುತ್ತೇನೆ" ಎಂದು. ಮುಂದುವರಿದು... ಮಕ್ಕಳಲ್ಲಿ ಈಗಾಲೆ ಪ್ರತಿಭೆಯು ಅಂತರ್ಗತ ವಾಗಿದೆ ಅದನ್ನು ಹೊರಗೆ ತರುವವನೆ ಶಿಕ್ಷಕ ಎಂದದ್ದು. ಹಾಗೆಯೇ ಪ್ರಶ್ನಿಸಲು ಬಾರದವನು ಶಿಕ್ಷಕನಾಗಲಾರ. ಪ್ರಶ್ನಿಸುವುದು ಒಂದು ಕಲೆ ಅದಿಲ್ಲದೆ ಉತ್ತಮ ಶಿಕ್ಷಕನಾಗಲಾರ .ಸತತ ಅಭ್ಯಾಸ ಒಬ್ಬ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿತ್ವ ವುಳ್ಳ ವ್ಯಕ್ತಿಯನ್ನಾಗಿ ಮಾಡುತ್ತದೆ.ಅಂತಹ ಗುರು ವರ್ಗ ಕೋಣೆಯನ್ನು ಸ್ವರ್ಗ ವನ್ನಾಗಿ ಮಾಡಬಲ್ಲ. ಪ್ರಶ್ನೆಗಳಿಲ್ಲದ ಕೋಣೆ ಅದು ಕೊಳೆತ ಬಾಳೆಹಣ್ಣಿನ ಗೊನೆ. " ಪ್ರಶ್ನೆಗಳೆ ಉತ್ತಮ ಶಿಕ್ಷಕನ ಜೀವಾಳ"

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...