Wednesday, July 1, 2020

ಮುಂಗಾರು


ಉರಿದ ಕೆಂಡಕೆ ಮೈಯಲ್ಲಾ ಮುದುಡಿ
ಮಲಗಿದ್ದ ಭೂತಾಯಿ ಮೈಯಲ್ಲಾ ದುಗುಡ
ಭಾರಕ್ಕೆ ತಲೆಯ ಕೂದಲೆಲ್ಲ ಉದುರಿ 
ಬೊಚ್ಚು ಬಾಯಲ್ಲಿ ಹುಚ್ಚಾಗಿದ್ದಳು ಚೀರಿ//

ಮುಂಗಾರು ಮಳೆ ಸುರಿಯೆ ಸಿಂಗಾರ
ಹಸಿರು ಸೀರಿಯ ಹೊದ್ದಳು ಬಂಗಾರಿ
ಭೂರಮೆಗೆ ತಂಗಾಳಿ ಬೀಸಿತು ಚಾಮರ
ಗಿಳಿ ಗೊರವಂಕದ ಭೃಂಗದ ಜೇಂಕಾರ//

ಪಡುವಣ ತೆಂಕಣ ಮೂಲೆಯ ಮುತ್ತು
ಸುರಿದು ದುಮ್ಮಕ್ಕಿ ಹರಿದವು ಜಲಪಾತ
ಹಳ್ಳ ಕೊಳ್ಳದ ಜುಳು ಜುಳು ಆಲಾಪ
ಹಕ್ಕಿ ಪಕ್ಕಿಗೆ ಹೂವು ಬಳ್ಳಿಗಳ ಪ್ರಲಾಪ//

ಉದಯ ಭಾಸ್ಕರನ ಅಬ್ಬರವ ಕರಗಿಸಿ
ಮಬ್ಬಾಯಿತು ಮುಂಜಾವು ಮಂದಹಾಸದಿ
ಮನೆತುಂಬಾ ಕಲರವ ಮತ್ತೆ ಬಿತ್ತುವ ಕಳೆ
ಭೂದೇವಿ ಸೆಳೆತಕ್ಕೆ ಮನುಕುಲದ ಜೀವಕಳೆ//

ನಾನೆ ಎಂದವನ ಜಂಗಾಬಲ ಉಡುಗಿತ್ತು
ಕಲ್ಲು ಕಂಟಿಗೂ ಪೂಜೆ ಪುನಷ್ಕಾರ ನಡೆದಿತ್ತು
ಕಪ್ಪೆ ಕತ್ತೆಗೂ ಮದುವೆ ಜೋತೀಷಿ ಕರಾಮತ್ತು
ವರುಣ ಕಣ್ಣು ತೆಗೆದರೆ ಮಾತ್ರ ಈ ಜಗತ್ತು//

              ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...