Wednesday, June 16, 2021

* ಮುಂಗಾರು ಮಳೆ *

ಮುಂಗಾರು ಮಳೆ ಮುಗಿಲು ಸೀಳಿ
ತಂಗಾಳಿ ಬೀಸಿ ಹೊಂಗನಸು ತಂತು 
ಸಂಗಾತಿ ಕನಸಿಗೆ ಹೊಸ ಜೀವಕಳೆ
ಬಂಗಾರ ಬದುಕಿಗೆ ಸಿಂಗಾರ ತಂತು//

ಮಡುಗಟ್ಟಿದ ಕೊಳೆ ಸಿವುಡುಗಟ್ಟಿ
ಕೆರೆ ಕಾಲುವೆ ತುಂಬಿ ಜಲಪಾತ ದಾಟಿ
ಹರವಾಗಿ ಒಮ್ಮೊಮ್ಮೆ ನೊರೆಯಾಗಿ
ಬರವ ಸಂಹಾರ ಮಾಡಲು ಬಂತು//

ಬಾಯಿ ತೆರೆದ ಭುವಿಗೆ ಜೀವ ಕೊಟ್ಟು 
ಬರುಡಾದ ನೆಲಕೆ ಹಸಿರು ಬಣ್ಣ ಇಟ್ಟು 
ಹಾರಾಡುವ ಹಕ್ಕಿಗೆ ಚೈತನ್ಯ ಕೊಟ್ಟು 
ಬೋರಾದ ಬಾನಿಗೆ ಚಿತ್ತಾರ ಬಿಡಿಸಿತು//

ಕನಸು ನೆಲದಲ್ಲಿ ಬಿತ್ತಿ ಕಷ್ಟದ ಕಳೆ ಕಿತ್ತಿ
ನನಸು ಮಾಡಲು ನಾವಿನ್ಯತೆ ಮೆತ್ತಿ  
ಎಣಿಸು ಮೋಡದಲ್ಲಿ ಕಾಣುವುದು ಬುತ್ತಿ
ತಣಿಸಲು  ರೈತನ ಬಾಗಿಲಗೆ ಬಂತು //

ಹದ ಮಾಡಿದ ಹೈದ ಎದೆಯುಬ್ಬಿಸಿದ 
ಕೌದಿ ಹಾಸಿ ಕಾಲು ಚಾಚಿದವ ನಾಚಿದ 
ಇದು ನಿತ್ಯ ದುಡಿದವನ ಸತ್ಯದ ಮಾತು
ಸದಾ ದುಡಿದವನ ವದನವೀಗರಳಿತು//

                  ಬಸನಗೌಡ  ಗೌಡರ 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...