ಮುಂಗಾರು ಮಳೆ
ಏನು ನಿನ್ನ ಮಹಿಮೆ !
ಜೇನು ಮಧುವಿನಂತೆ
ನಿನ್ನ ಸೃಷ್ಟಿಯ ಗುಣ.!
ಸಿಗದು ನುಡಿ, ಬರೆದು ಬೀಗಲು
ಬರವು ಎನಗೆ ಕಡವ ತರಲೆ ?
ಅರಳಿ ನಿಂತ ಮರಳು ಕಣ
ಸೂಸಿ ಬಂತು ಶ್ರೀಗಂಧ ಪವನ
ಮೇ ಮಾಸದುರಿವ ಕೆನ್ನಾಲಿಗೆ
ಸೀಳಿ ಹರಿಸಿದೆ ತಂಪಿನ ದಳ !
ಗುಡುಗು ಸಿಡಿಲು ಪಡೆದ
ಭುವಿ ಒಡಲ ಕಾವು ಗರ್ಭಧರಿಸಿ
ಉಸಿರೆ ಹಸಿರು ಕಾನನ !
ಹೊಸ ಶಕೆಯು ಸುತ್ತಿ ಬರುವೆ
ಬೆಸೆವ ನೀನೆ ಸಾರ್ವಭೌಮ.!
ಅಶ್ವಿನಿ, ಭರಣಿ, ಕೃತಿಕ ಬಲ
ಓಡಿ ಬರುತಿದೆ ರೋಹಿಣಿ.
ನಾಮ ಹಲವು ನಿಯಮ
ಒಂದೆ ವರುಣ !
ಬಿರಿದ ನೆಲ, ಬರಿದು ಕೆರೆ
ಹರಿಸಿದೆ ಮೇಲೆ ನಿನ್ನ ವರ
ದುಮ್ಮಿಕ್ಕುವ ಬಲ ಒಂದೇ ಎರಡೇ
ಕಣ್ಣು ಸಾಲವು ಜಗದ ತುಂಬಾ
ಜೀವ ಜಲ ಜಿಗಿಯಿತು
ಕಾರಂಜಿ ತನನ !