Thursday, July 21, 2022

ಕಾಲ ಲೀಲೆ



ಮುಂಗಾರು ಮಳೆ  ಮುತ್ತಿಟ್ಟ ಬನ 
ಮದರಂಗಿ ಮೆತ್ತಿದ ಮಧುವನಗಿತ್ತಿ
ಹದವಾಗಿ ಅರಳಿತು ಮೌನ ಮನ
ಭ್ರಮರದಂತೆ ತಿರುಗಿತು ವನ ಸುತ್ತಿ//

ಕಾಯ್ದ ಕಬ್ಬಿಣ ತೊಯ್ದಾರುವ ಮುನ್ನ  
ಬಾಯ್ದೆರೆದಿದೆ ಚಮಟಿ ಪೆಟ್ಟಿಗೆ ಬಯಸಿ
ಹದವು ಬೇಕು ಹರಗಿ ಬಿತ್ತಲು ಬೀಜ
ಬೆದೆ ಬಂದ ಮನ ತಹ ತಹಿಸಿ ಕೆಂಡ ನಿಗಿನಿಗಿ //

ಕಾಪಿಟ್ಟ ಕಾವು ಹೆಬ್ಬಾವಿನಂತೆ ಹಿರಿದು
ಕಾಮನೆಗಳ ನುಂಗಿ ಏರುವುದು ಮರ
ಸುತ್ತುವುದು ಎಡಬಲ, ಏರುವುದೊಂದೆ 
ಮತ್ತೇರಿ ಮುರಿಯುವುದು ಒಣ ಕೊರಡು//

ಕಾಲದ ಕತ್ತಲೆಯು ಬಲೆ ಬೀಸಿದಾಗ
ಜಾಲವು ಕಾಣದೆ ಕುಸಿಯಿತು ಕುರುಡಾಗಿ 
ಬಿಲಕಾಗಿ ಹಗಲು ಹುಡುಕಾಡಿತು ಮನ
ನೆಲವಿದೆ ಬರಿ ಕಲ್ಲು ಮುಳ್ಳಿನ  ಬರಡು//

ತವಕ ತನ್ನರಿವಿನ ಹರಿವು ಮೀರಿ 
ವಿವೇಕದ ವಿವೇಚನೆ ಮರೆಯಾಗಿ 
ತಾವಿರುವ ತವರಿನ ಬೇರು ಹರಿದು
ಸವಕಳಿಯಾಗಿತ್ತು ಸತ್ಯದ ಕರಡು //

ಜವರಾಯ ನಿಲ್ಲಲು ಜಡೆಮಳೆಯಲ್ಲ
ಅವನಿ ಕಾಯ್ದಿರುವಳು ತಡೆಯುವವರಿಲ್ಲ
ಭುವಿಯ ಬಯಸುವ  ಮನಗಳಿಗೆ ಬರವಿಲ್ಲ
ಯಮರಾಯನಿಗೂ ನೀ ಬೇಕು ಇಲ್ಲ ಕೊಡೆ//

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...