Wednesday, September 30, 2020

* ನಾರಿ ಸ್ವರ್ಗದ ದಾರಿ *

ಮಾತನಾಡದೆ ಮೌನದಿಂದ ಭಾವ 
ಬಿತ್ತುವ ಮಾನಿನಿ ಮನೆಯೆ ಜೀವಫಲ
ಬೆರೆತು ಬಾಳುವ ಪತಿಯ ಪಡೆದ 
ಸತಿಯ ಮನೆಯದು ನಿತ್ಯ ದೇಗುಲ//

ಸ್ವಾರ್ಥದ ಸೇತುವೆಯ ಕಟ್ಟಿ ಸೆಳೆವ 
ಸುಳಿ ದಾಟಿಸುವ ನಟನೆಯ ನಗೆ ಬೀರಿ 
ಗಾಳಿ ಬಂದಾಗ ಜಿಗಿದ ಅಂಬಿಗನಂತೆ
ಗೊಸುಂಬೆ ಜನರದೆ ಇಲ್ಲಿ ನಿತ್ಯಸಂತೆ//

ಹುಟ್ಟಿದ ಮನೆಯಲ್ಲೂ ಪಟ್ಟ ಕಟ್ಟಲಿಲ್ಲ
ಮೆಟ್ಟಿದ ಮನೆಯಲ್ಲೂ ಕಾಟ ತಪ್ಪಲಿಲ್ಲ
ಬಿಟ್ಟು ಬದುಕವ ಎದೆ ಗಂಡುಗಳಿಗಿಲ್ಲ
ಜಿಡ್ಡು ಹಿಡಿದ ಸಡಿಲ ನಿಯಮಗಳೆಲ್ಲ//

ನವ ಲೋಕ ಕಟ್ಟುವ ನಾರಿ ನಿನ್ನಯ
ರಥದ ಗಾಲಿಗಳ ಮರ್ಮ ಅರಿತರೆ 
ದಾರಿ ಬಹು ಸರಳ, ತಿಳಿಯದೆ ಮರೆತರೆ 
ಗಾಲಿಗಳು ತಿರುಗುವವು ಹೆರಾಪೆರಾ//

                  ಬಸನಗೌಡಗೌಡರ 

Tuesday, September 29, 2020

* ದಾರಿ ಕಾಣದು *

ದಾರಿ ತೋರಿದರು ಮನುಜಗೆ ಪ್ರಾಣಿ 

ಪಕ್ಷಿಗಳಾದರೇನು ಸರಿ ಸಹ ಜೀವನ 

ಮರೆತು ಪಾಲಿಸದೆ ಮಾಡಿದರು ಹರಣ

ಜೀವಸಂಕುಲ ದಾರಿ ತಪ್ಪಿತು ಈ ದಿನ//


ಕಾಡಿನ ಕಾವಲು ಮುರಿದ ಕದಿಮರು

ನಾಗರಿಕತೆ ಬೆಳವಣಿಗೆಯ ಹಾಡಿದರು

ಕವಲು ದಾರಿಯಲ್ಲಿ ಅರಿಯದವರು,

ಕಾಲ ಬಂದಾಗ ಉತ್ತರಿಸವರಾರು//


ಕತೆ ಹೇಳಲು ನೈತಿಕತೆಯ ಬಳಸಿ

ಜೊತೆ ನಡೆದು ಹೇಳಿದ್ದು ಬರಿ ಹುಸಿ 

ಪ್ರಕೃತಿಯ ಹಿತ ಬಯಸಿದಂತೆ ನಟಿಸಿ

ವಿಕೃತಿ ಮೆರೆದರು ಸಮಯ ಸಾಧಿಸಿ//


ಬನದ ಮುಖವೆಲ್ಲ ಕೆಂಪಾದವೊ  

ನಾಡಿನ ಬದುಕೆಲ್ಲ ಕೊಂಪೆಯಾದವು

ದುರಾಶೆಯ ಜೀವನ ನಿರಾಶೆಯಾದರು

ಬರಲಿಲ್ಲ ಬುದ್ಧಿ ಬವಣೆ ಬಂದರು. //


   🖋️.ಬಸನಗೌಡ ಗೌಡರ

Monday, September 28, 2020

* ಬರವು ವರ *

ಬರವು ಬಂದರೆ ಬರಲಿ ವರಗಲ್ಲಿಗೆ 

ಹಚ್ಚಬಹುದು ಬಂಗಾರ ಸಿಗುವವರೆಗೆ   

ಬರವು ವರವಾದೀತು ಬಂಧುತ್ವಕ್ಕೆ//


ವರುಣನಿಲ್ಲದ ಧರಣಿ ಲಜ್ಜೆಯಿಲ್ಲದ 

ತರುಣಿಯಂತೆ ದಿಕ್ಕೆಟ್ಟು ತಿರುಗುವುದು 

ಶರಣಾಗುವುದು ಕೃಪೆಗಾಗಿ ಜೀವಜಲ//


ಆಹಾರವಿಲ್ಲದೆ ಗಿರಿಗಿರಣೆ ತಿರುಗುವವು 

ಸೀಳುಬಿದ್ದ ನೆಲದಲ್ಲಿ ಪ್ರಾಣಿ  ಪಶುಪಕ್ಷಿ  

ನಿನ್ನ ಕರುಣೆ ಹಬ್ಬಮಾಡಿತು ಬಕಪಕ್ಷಿ//


ದೊಂಬರಾಟವ ಮಾಡಿ ದಮ್ಮಡಿಗೆ

ತಿರುಗಿದಾಗ ಹಿಂದಡಿಯಿಟ್ಟ ಜನರಂತೆ

ಪಲಾಯನ ಮಾಡುವರು ನಿನ್ನವರು//


ಹರಿದ ನೋಟನು ಹಚ್ಚಿ ಪೆಂಡಯ 

ಸೇರಿಸಿ ಹೊರಗೆ ಹಾಕಿದ ಹಾಗೆ, ಸಾಗ 

ಹಾಕುವರು ನೀನ್ನವರು ಹಾಕಿ ಹೊಗೆ//


ಹುಳುಕು ಹಲ್ಲಿಗೆ ನಾಲಿಗೆ ಮತ್ತೆ ಮತ್ತೆ 

ಸರಿದಂತೆ ತಿರುಗುವರು ನೀನ್ನವರು

ನೀ ಕೃಪೆ ತೋರಿದ ಸಂಪತ್ತಿನ ಮೇಲೆ// 

           ಬಸನಗೌಡ ಗೌಡರ 


Friday, September 25, 2020

ಭಾವ ಪೂರ್ಣ ಶ್ರದ್ಧಾಂಜಲಿ

 *ಸ್ವರ ಸಾಮ್ರಾಟನಿಗೆ*


ಹಾಡುವ ಕೋಗಿಲೆಯ ದ್ವನಿಯ 

ನಿಲ್ಲಿಸಿದೆ ಹೇ, ಪರಶಿವ ನೀ.. 

ಕ್ರೂರಿಯೇ!

ಸಾವಿರ ಸಾವಿರ ಸ್ವರ ಗಾನ

ಸಿಂಚನ ಗೈದು..!

ಕೋಟಿ ಹೃದಯ ನಿನ್ನ ಪಾದಕೆ ತಂದ

ನಾದ ಲೋಕ ನಿರ್ಮಿಸಿದವನಿಗೆ 

ಈ ಪರಿಯೇ, .......

ನಿನ್ನ ಸ್ಮೃತಿಗೆ ಗ್ರಹಣ 

ಹಿಡಿದು ಭೂ ಲೋಕದಲ್ಲಿ 

ಗಂಧರ್ವ ಲೋಕ ಸೃಷ್ಟಿಸಿದ 

ಗಾನ ಗಾರುಡಿಗನಿಗೆ ಇದು ನ್ಯಾಯವೇ...!

ಸಂಗೀತ ಲೋಕ ಸಂಪತ್ತಿಗೆ 

ಇನ್ನಷ್ಟು ದಿನ ಉಳಿಸ ಬಾರದೆ.

ಅರಗಿಸಿಕೊಳ್ಳಲಾರದ 

ಕಠೋರ ವಾರ್ತೆ...

ಜಗಕ್ಕೆಲ್ಲ ನೀಡಿ ನಿನ್ನ ಕಡೆ 

ಗಮನ ಸೆಳೆಯಲು ಮಾಡಿದ ತಂತ್ರವೇ !

ಸಂಗೀತ ಲೋಕದ ಸೂರ್ಯ. 

ಬೆಳಗುವ ನಕ್ಷತ್ರ, ಸ್ವರ ಸಾಮ್ರಾಟನ

ಆಟ ನಿಲ್ಲಿಸಿದ ನಿಪುಣ ,

ನಿನ್ನ ಸೂತ್ರದ ಪಾತ್ರ 

ಚನ್ನಾಗಿಯೇ ಮಾಡಿ 

ಎಚ್ಚರಿಸಿದ ಪರಿ ಸರಿಯೇ..!

ಮತ್ತೊಮ್ಮೆ ಎಸ್ ಪಿ ಬಿ ಜನಿಸುವಂತೆ

ಮಾಡೆನ್ನ ತಂದೆ..ಆತ್ಮಕ್ಕೆ ಚಿರಶಾಂತಿ 

ಮಾಡು ಮುಂದೆ//


  ನಮನಗಳು 

ಬಸನಗೌಡ ಗೌಡರ



 


Monday, September 21, 2020

* ಹುತ್ತದ ಸುತ್ತ *

ಮಾಯಾ ನಗರವಿದು ಮಾಯಾಂಗನೆ

ಮೆರೆಯತಿರುವಳು ಜಗದ ತುಂಬಾ

ಮನದ ಮೂಲೆಯಲ್ಲಿ ನೆಟ್ಟಾಳ ಕಂಬ

ಮರೆತರೆ  ಒಗೆಯತಾಳೊ ಹುಂಬ//


ಬೆಳೆಯುವವ ಬೆಳೆಯಲಿ ಮರದೆತ್ತರ

ರವಿ ಬೆಳೆದ ಮೇಲೆ ನೆರಳಿದಕೆ ಉತ್ತರ 

ಸಂತೋಷ ಪಡಲು ಬರಬೇಕು ಹತ್ತಿರ 

ಕತ್ತರಿಸಬೇಕು ಸದಾ ಮತ್ಸರದ ಹುತ್ತ//


ಥಳಕು ಬಳುಕಿನ ತಾಮಸ ಬದುಕು 

ಕೆದಕಿದರದು ಬರಿ ಹರಕು ಮುರಕು 

ಕಾವಿ ಬಟ್ಟೆಯನ್ನೂ ಬಿಟ್ಟಿಲ್ಲ ಮತ್ತು

ಕಾಲವೆ ತರುವುದು ಇದಕೆಲ್ಲ ಕುತ್ತು//


ಮತ್ತಿಗೆ ಬೆನ್ನು ಹತ್ತಿದವರ ತಾಕತ್ತು 

ಹೊತ್ತು ಏರಿದಾಗ ಬರತಾವು ಹಕಿಕತ್ತು

ಅದು ಇಳಿದಾಗ ಅದಕಿಲ್ಲ ಕಿಮ್ಮತ್ತು

ಈಗ ಕೇಳಲು ನಮಗಿಲ್ಲ ಪುರಸೊತ್ತು//


           ಬಸನಗೌಡ ಗೌಡರ 


Saturday, September 19, 2020

* ನನ್ನವಳು *

ಹೃದಯದ ಬಡಿತಕ್ಕೆ ಧ್ವನಿಯಾಗಿ

ಕಣ್ಣು ರೆಪ್ಪೆಯ ಸಪ್ಪಳಕೆ ಬೆಚ್ಚಿ

ನೆರಳಿನಂತೆ ನನ್ನ ಹಿಂದೆ ಸುಳಿದು

ಹಾಡಿನ ಪಲ್ಲವಿಯಾದವಳಿವಳು//


ಉಪವಾಸದಿ ಉಂಡಂತೆ ನಟಿಸಿ

ನಾನುಂಡ ಸಂತೋಷ ತಾನುಂಡಂತೆ 

ಹೊರಹಾಕಿ ನರಕ ದೂರ ಸರಸಿ

ನಗುತ ನನ್ನರಸಿ  ಹೆಜ್ಜೆ ಹಾಕಿದವಳು //


ಬಂಡಿ ಕೀಲವಳು ದಂಡಿನ ಸಿಪಾಯಿ 

ಶ್ರೀಗಂಧದಂತೆ ಸುವಾಸನೆ ಬೀರಿದವಳು 

ಗಂಡನೆ ದೇವರೆಂದು ಪೂಜಿಸಿದವಳು

ಮನೆ ಮಂತ್ರಾಲಯ ಮಾಡದವಳು //


ನೋವಿನಲ್ಲೂ ನವಿಲಿನಂತೆ ಕುಣಿದು

ನಡಬಾಗಿಸಿ ನರ್ತಿಸಿ ಕೀರ್ತಿ ತಂದವಳು

ತವರಿನ ಸಿರಿತನದ ನಲಿವು ಮರೆತವಳು

ತಂಗಳುಂಡರು ತೂಗಿ ನಡೆದವಳು //


ಮಾತಿಗೆ ಮಾತು ಬೆಳೆದಾಗ ಸೋತು

ಮೌನದಲಿ ಉತ್ತರ ನೀಡದವಳು

ಹೊತ್ತು ಹೊತ್ತಿಗೆ ನನ್ನ ಚಿತ್ತವ ಕದ್ದು 

ತನ್ನ ಸುತ್ತ ತಿರುಗಿಸಿದಳು ನನ್ನವಳು//


           🖋️  ಬಸನಗೌಡ ಗೌಡರ

Thursday, September 17, 2020

* ಜಯಬೇರಿ *

ಬೆಳೆದಾಗ ಸೇರುವುದು ನನ್ನ ಬಳಗ

ಸುಳಿಯದು ಸಂಬಂಧ ನಾ ಕಳೆದಾಗ

ಬೆಳೆಯುತ್ತಾ ಬಾಗು ಕಳೆದರೂ ನಗು 

ಬೆಳಗುವುದನ್ನೆ ಹೊಗಳುವದು ಜಗ //


ವೇದನೆಯು ಸಹಜ ಸಾಧನೆಗಿಳಿದಾಗ

ಕಾದವರು ಕೈಲಾಗದವರಲ್ಲ ತಿಳಿದಾಗ

ಬೆಲೆ ಬರುವದು ಬಂಧನ ಮುಗಿದಾಗ

ಬಹುಪಾಲು ಬಹುಪರಾಕ ನಿನಗಾಗ //


ಬರಿಯದ ಓದು ಬೆರೆಯದ ಸಂಬಂಧ 

ಬೆವರದ ದೇಹವದು ಬರಿ ದುರ್ಗಂಧ

ಬಯಲಿನಲ್ಲೂ ಬಂಗಾರ ಕಾಣು ತಂದೆ

ಬಾಳು ಹೊರಸೂಸುವದು ಶ್ರೀಗಂಧ//


ಬರಿ ಕನಸು ಕಾಣುವನು ಸೋಮಾರಿ 

ನನಸು ಮಾಡಲಾಗು ನೀ ಹಠಮಾರಿ

ಕಲ್ಲು ಮುಳ್ಳು ಕಾಣುವವು ತರೆಹೆವಾರಿ 

ಕಿತ್ತೆಸೆದಾಗ ಸಿಗುವುದು ಜಯಭೇರಿ //


        ಬಸನಗೌಡ ಗೌಡರ 

 

Monday, September 14, 2020

* ವಸಂತ ಮಾಸ *

ವಸಂತ ಬಂದ ಜಗದ ತಮಕೊಂದ 
ಸಂತೋಷದ ಸವಿಯದು ಶ್ರೀಗಂಧ
ಮಾವು ಬೇವಿಗೂ ಮಂದ ಹಾಸ
ಜೀವ ಸಂಕುಲಕರಳಿತು ಕೈಲಾಸ //

ಋತುವಿನ ಶೃಂಗದ ನೃತ್ಯ ಅಭಂಗ
ಮೈಮನದಲ್ಲೇಳುತಿದೆ ಭಾವತರಂಗ
ಭುವಿಯಾಗಿದೆ ಸಂಗೀತದ ನವರಂಗ
ಮೇಳೈಸಿದೆ ಕೋಗಿಲೆಗಳಂತರಂಗ//

ಹೋಂಗೆಯ ಹೂವಿನ ಮಕರಂದ
ಚೆಂಗುಲಾಬಿಯ ಮೋಹಕ ಅಂದ
ಭೃಂಗದ ಜೇಂಕಾರ ಮಹದಾನಂದ  
ಸವಿಯಬೇಕು ಸಂತ ವಿನಯದಿಂದ//

ಕವಿಯ ಕಲ್ಪನೆ ಕೋಗಿಲೆ ಕೂಗಿಗೆ
ಅರಳಿತು ಜುಳು ಜುಳು ತೊರೆಯಾಗಿ
ಕರಳು ಕುಡಿಗಳ ಬೆರಳು ತುದಿಗೆ
ಆಟದ ಪಾಠ ಕಳೆಕಟ್ಟಿತು ಬೆಸುಗೆ//

ಹೊಸತನ ಪಸರಿಸಿ ನಸುನಗೆ ಪೇರಿಸಿ
ಹುಸಿನಗು ತುಳಿದನು ದಿನಕರ ಸೋಸಿ
ಕನಸನು ಕಟ್ಟುವ ಮನಸನು ಬಿತ್ತಿ
ಹರುಷವ ತೇಲಿಸಿ ನಡೆದನು ಕೈ ಎತ್ತಿ//  

       ✒.ಬಸನಗೌಡ ಗೌಡರ 
   

 

Saturday, September 12, 2020

* ಅಧಿಕಾರ ಮೌನ *


ಅಳೆದು ತೂಗಿ ಮೌನದಲಿ ಹೊಲಸು 

ಮರೆಮಾಡಿ ಮರೆಯಬೇಡ ಮೂಢ

ಹುಳವಾಡಿ ಕೊಳೆತು ತೇಲಿತು ಕೇಡು

ಬೆಳಕಿಗಿಲ್ಲ ಬರವು ಅದು ರವಿ ಹಾಡು//


ಬೆಕ್ಕಿಗೂ ಕೊರಮರ ಬಲೆಯ ಭಯ 

ಸೊಕ್ಕಿ ನಡೆದರೆ ಅದು ಉಕ್ಕಿದ ಸಾರು 

ಲೆಕ್ಕ ವಿಡದೆ ಬಿಡುವನೇನು ಮಹಾಶಿವ

ಪಕ್ಕೆಲಬು ಮುರಿದು ಕಕ್ಕಿಸದೆ ಬಿಡನು//


ಅಧಿಕಾರ ಮೂರುದಿನದ ಸಂತೆ ಕಂತೆ

ಎತ್ತಿ ಮೆರೆದವರ ಬಾಳು ಸದಾ ಹಸಿರು

ಎತ್ತದೆ ಮೆರೆದವರ ಕತ್ತು ಬರಿ ಮೇಲು  

ಸತ್ತ ಮೇಲೂ ಕಾಡುವುದು ಗರ್ವ ಫಲ//


ಅಣಬೆ ಆಯುಷ್ಯ ಅಲ್ಪ, ಆಹಾರದ

ಮನೆ ಸೇರಿದ ಮರುಗಳಗೆ ಅಮೃತ

ಅರಿಯದೆ  ಮೆರೆದರದು ಕಾಣುವ ಕಂಬ

ಬರಿ ಹುಳಗಳೆ ಸೇರುವುವು ಮೈತುಂಬ //


            ಬಸನಗೌಡ ಗೌಡರ 


 
 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...