Wednesday, January 26, 2022

*ಎಳೆಯೋಣ ತಲೆ ಎತ್ತಿ *

ನಾವು ತಲೆಯತ್ತಿ ನಡೆಯಲು 
ತಲೆಯನ್ನೆ ನೀಡಿದ 
ಓ ವೀರ ಪುತ್ರರೆ !
ನೀವು ನಡೆದ ಪುಣ್ಯ ಭೂಮಿ 
ತಂದಿದೆ ನಮಗಿಂದು 
ಸ್ವರ್ಗದ ದಾರಿ ಹತ್ತಿರ. //

ಸಮಾನತೆ, ಸ್ವಾತಂತ್ರ್ಯ 
ಬಂಧುತ್ವ, ಸಾಮಾಜಿಕ ನ್ಯಾಯ 
ಹಾಗೆ ಬಂದುವಲ್ಲ ಹೇ ಪುತ್ರ
ನೆನಪುಗಳು ನೆನೆಯದ ಉತ್ತರ 
ಬರಿ ತಿಂದು ತೇಗಲು ಬಂದ 
ಹರಾಮಿ ಧರ್ಮ ಛತ್ರ .//

ಕ್ಷಣ ಗಡಿಯ ಕಡೆ ನೋಡು 
ಇಂದೂ ಒಣಗಿವೆ ಜೀವ kkm
ಉರುಳುತಿವೆ ಹಿಮ ರಕ್ಕಸ/
ದಿನವೆಲ್ಲ ಕಾಡುತಿವೆ ಒಳಗೂ  
ಹೊರಗೂ ಉಳಿಯದ 
ಕುದಿಯುವ  ಬಿಸಿ ನೆತ್ತರ// 

ನಿಂತ ನೆಲ ಅಲುಗಾಡಿದೆ 
ಅನಂತ ಸ್ವಾರ್ಥದ ಬಾರ 
ಅರಿಯದೆ ವಿರಮಿಸಿದರೆ 
ಹೊರೆ ಭಾರತ/ 
ತರು ಲತೆ ಬೆಳೆಗಲಾದರೂ
ಹರಡಲಿ ನಿನ್ನೊಲಮೆಯ 
ಚುರುಕಿನ ಹೊಸ ಚಿತ್ರ// 

ಭಾವಗಳ ಹೊಸೆದು ಜೀವಗಳ ಸೇರಿಸಿ 
ಹೊಸ ಧ್ವಜವ ಹೆಣೆಯೋಣ
ಮನಸುಗಳ ಮನೆ ಮನಗಳಲಿ
ಮೌನ ಮಹಡಿಯ ಕಟ್ಟೋಣ /
ಸ್ವಾಭಿಮಾನದ ಬಣ್ಣ ಹಚ್ಚಿ
ತ್ಯಾಗದ ಬಾವುಟ ತಲೆ ಎತ್ತಿ 
ಧರ್ಮದ ದಾರ ಎಳೆಯೋಣ ಒತ್ತಿ ಒತ್ತಿ//

Saturday, January 15, 2022

* ಎಚ್ಚರದಿಂದ ಇರೋಣ *

ಭಾರತೀಯತೆ ಒಂದು ದೇಹ, 
ಬಿಡಿಯಾಗಿ ನೋಡ ಬಾರದಣ್ಣ 
ಇಡಿಯಾಗಿ ನೋಡಿದರೆ 
ಉಳಿಗಾಲ ಇಲ್ಲ ಅಳಿಗಾಲ !
ರೋಗ ಸಾಮಾನ್ಯ 
ಔಷಧಿಯೂ  ಯುಂಟು 
ವಾಸಿಯಾಗದ್ದೇನಲ್ಲ 
ಜಾತೀಯತೆ ,ಕೋಮುವಾದ  
ಪ್ರಾದೇಶಿಕತೆ ಪಟ್ಟಿ ಏನೆ ಇರಲಿ 
ಸುಟ್ಟು ಹಾಕಬಹುದು
ಪ್ರೀತಿ ಸಹನೆ ಎಂಬ ಔಷದದಿಂದ.
ಮೂಗಿಗೆ ನೆಗಡಿ ಬಂದರೆ 
ಮೂಗು ಕೊಯ್ದವರುಂಟೆ? 
ಶುಂಟಿ ಪುಡಿಯಿಂದ  
ವಾಸಿಮಾಡಿದವರುಂಟು.
ವೈದ್ಯರೂ ಉಂಟು...
ಆಯ್ಕೆ ಅವರವರಿಗೆ...
ವಾಸಿಮಾಡದ್ದೇನಲ್ಲ !
ತಲೆಯುಂಟು ಅದರ 
ನೋವು ಉಂಟು !
ತಲೆ ತಗೆದವರುಂಟೆ ?
ತಲೆಯಿಂದ ದ್ವೇಷ ಅಸೂಯೆ 
ತೆಗೆದರೆ ಮನಶ್ಶಾಂತಿ 
ಇಲ್ಲದಿದ್ದರೆ ಬರಿ ವಾಂತಿ.
ಕೃಶವಾದ ಮರಕೆ ಪೆಟ್ಟು 
ನೀಡುವವರ ಪಟ್ಟಿಯೂ ಇದೆ
ಇದು ಹೊಸದೇನು ಅಲ್ಲ . 
ನಿಂತವರ ಚಿಂತೆ ಬಿಡಿ..... 
ನಿಲ್ಲದೆ ಸದಾ ನಡೆಯುತ್ತಾ ಇರೋಣ 
ನಡೆದವನಿಗೆ ರೋಗ ಕಡಿಮೆ 
ನಿಂತವನು ರೋಗದ ಸಂತೆ.
ಭಾರತವೆಂಬುದು ಬರಿ 
ಬಡಿವಾರದ ಮಾತಲ್ಲ 
ಸಾವಿರ ವರುಷದ ಸತ್ವಪೂರ್ಣ 
ಇತಿಹಾಸ ಹೊಂದಿದ ಅಸ್ಮಿತೆಯ ಭಾವ,
ನರನಾಡಿಗಳು ಪುಟಿದೇಳುವ 
ಅನನ್ಯ ಭಾವ .
ಇಲ್ಲಿ ಸಲ್ಲುವವರು 
ಎಲ್ಲಾ ಕಡೆ ಸಲ್ಲುವರು. 
ಇಲ್ಲಿಂದಲೆ ಜ್ಞಾನ ಕಲಿತು, 
ಕಲಿಸಿದಂತೆ ನಟನೆ ಮಾಡಿದರು.
ಚರಿತ್ರೆಯ ಪುಟವೊಮ್ಮೆ ನೋಡಿ 
ಇಲ್ಲದಿದ್ದರೆ ಮತ್ತೆ ಕಲಿಸಲು 
ಅವರೆ ಬರಬೇಕಾದೀತು.

Friday, January 14, 2022

* ಸಡಗರದ ಸಂಕ್ರಾಂತಿ *


ಸಂಕ್ರಾಂತಿ ಹಬ್ಬ ಸಡಗರದ ಹಬ್ಬ
ಬೆಳೆದ ಫಸಲು ತರುವುದೆ ಉಬ್ಬು/
ಇದು ಭೂ ತಾಯಿ ಮಗನ ಹಬ್ಬ
ಸವಿಯೋಣ ಹಲ್ಲಿದ್ದವರು ಕಬ್ಬು//

ಮಾಗಿಯ ಚಳಿಯು ಹೋಗುವ ಕಾಲ 
ಮೈತುಂಬ ಬಳದೇವ ಎಳ್ಳು ಬೆಲ್ಲ /
ಮನೆ ತುಂಬಾ  ಸಡಗರವೆಲ್ಲಾ 
ಮಣ್ಣಿನ ಮಗನ  ಬಾಳು ರಸಗುಲ್ಲ//

ಬೆಳದೇನ ಜೋಳ ರಾಗಿ ಭತ್ತ 
ಹಾಕೇನಿ ಹಗೆದಾಗ ಹತ್ತಿಪ್ಪತ್ತು /
ನನಗಿಲ್ಲ ಅನ್ನದ ಚಿಂತೆ ಇವತ್ತು 
ಮಳೆಯರಾಯ ನಿನದೊಂದೆ ಚಿತ್ತ//

ಬಸವಣ್ಣ ನಿನ ಮೈ ತೊಳದೇನು 
ಜೂಲಾ ಹಾಕೇನು ಸಾಲಾಗಿ ನಿಂತೇನು 
ಅಗಸ್ಯಾಗ ಡುರಕಿ ಹೊಡಸೇನು
ಸೊಗಸಾಗಿ ಬೆಂಕಿ ತುಳಸೇನು //

ಸಜ್ಜಿಯ ರೊಟ್ಟಿ ಸೇಂಗಾದ ಹೋಳಿಗೆ 
ಮುಳ್ಳ ಬದನೆಯ ಪಲ್ಯ ಮೇಲೆ ಗುರೆಳ್ಳ ಚಟ್ನಿ 
ಅವ್ವ ಹಾಕಿದ ಕೆನೆ ಕೆನೆ ಮೊಸರು 
ಸ್ವರ್ಗಕ್ಕೆ ಸವಾಲು ಹಾಕೇನು//


Thursday, January 13, 2022

* ಕಳೆದುಕೊಂಡಿದ್ದೇನೆ *

ಕೇಳುವವರನ್ನು 
ಕಳೆದುಕೊಂಡಿದ್ದೇನೆ
ಯಾರಾದರೂ ಇದ್ದರೆ 
ಹುಡುಕಿ ಕೊಡಿ ...!

ಪಡೆಯಲು ಬೇಕಲ್ಲ 
ನಮಗೆ ಮಹಡಿ ? 
ನಮಗೂ ಬೇಕು 
ನಮ್ಮ ಮಕ್ಕಳಿಗೂ ಬೇಕು// 

ಸಿಗಬೇಕು ಎಲ್ಲಿಂದ ?
ನಾನು ಕಿಲಾಡಿ
ಕೇಳಲು ಕೊಡುವೆನು 
ಇವರಿಗೆಲ್ಲ ಲಂಚ.. ?

ಕೊಟ್ಚರೇನು ಶಿವಾ. 
ಕುಂಭ ಕರ್ಣನ ವಂಶ
ಮಲಗಿದ್ದಾರಲ್ಲಾ
ಇಲ್ಲದೆ ಹಾಸಿಗೆ ಮಂಚ..

ಇರಲಿ ಬಿಡಿ ..
ಹೇಳುವವರು ?
ಹೇಳುವವರಿಗೇನು ಬರ 
ಕೊಟ್ಟರೆ ಮೂರು ನಿಮಿಷ
ಕುಟ್ಟುವರು ನೂರು ನಿಮಿಷ

ಗಟ್ಟಿ ಕಾಳು ಬರುವುದೆ 
ಇಲ್ಲಾ ..ಆದರೇನು ?
ಪಟ್ಟು ಬಿಡದ ಜಗಜಟ್ಟಿಗಳು 
ಕೊಟ್ಟು ಬಿಡುವೆವು ಕುದರೆ.... 

ಕಾಯದೆ ಏರಿಸುವರು ಪೇರಿ ...
ಲಂಗು ಇಲ್ಲ ,ಲಗಾಮೆ ಇಲ್ಲ 
ಜಿಗದದ್ದೆ  ಜಿಗದಿದ್ದು... 
ಸಂದಿ, ಗೊಂದಿ ಒಂದೂ 
ಉಳಿಯುವದಿಲ್ಲ.
ಗಟಾರಗಳೆ ಇವರ ವಠಾರಗಳು!

Sunday, January 9, 2022

* ಕಾಲ ಕಳೆದ ಮೇಲೆ *

ಎತ್ತರಕ್ಕೆ ಬೆಳೆದಂತೆ 
ರೆಂಬೆ ಕೊಂಬೆಯ ವೈಭವ /
ಹೂವು ಹೀಚು ಕಾಯಿ ಹಣ್ಣು
ಮೈತುಂಬ ಸಿರಿತನದ ಭಾವ //
ಕರೆಯದೆ ಬರೆಯದೇ 
ಪಡೆದೆ ಹಿರಿತನದ ಗೌರವ //
ಗುಬ್ಬಿ ಗಿಡುಗ ಕಾಗೆ 
ಕೋಗಿಲೆಗಳ ಕಲರವ //
ಸಾಗಿ ಹೋಗುವ ದಾರಿ 
ಹೋಕರಿಗೂ ನಾನೇ ಬೇಕು/ 
ಧನಿದು ಬಂದವನಿಗೂ ಮುದ 
ನೀಡುವ ಮುದ್ದಿನ ಮಾವ //
ಸದ್ದಿಲ್ಲದೆ  ಗೆದ್ದಿತು ಓಡುವ ಕಾಲ
ಒಂದೊ..  ಎರಡೊ.. ಶತ ಕಾಲ 
ಹತ ಮಾಡಲು ಬಂದೆ ಬಿಟ್ಟಿತು //
ತನಿಸುವಾಗ ಹೊಗಳಿದ ಜನ  
ಉಸಿರು ಪಡೆದು ಉಬ್ಬಿದ ಜನ/
ಹೆಸರು ಹೇಳದೆ  ಕೊಸರಿ 
ಓಡುತಿರುವರಲ್ಲ ಪ್ರತಿದಿನ // 
ಎಲೆಯಲ್ಲಾ ಹಳದಿಯಾಗಿ
ಟೊಂಗೆಗಳೆಲ್ಲಾ ಅಂಗಹೀನ /
ಕತ್ತರಿಸುವ ಕಟುಕನಿಗೇನು ಗೊತ್ತು 
ನಿತ್ಯ ನೂರು ಜನರ ಹಿತಕೆ 
ಈತ ಸತ್ತಿರುವನೆಂದು //

            ಬಸನಗೌಡ ಗೌಡರ

Saturday, January 8, 2022

* ಮಾಯಾಂಗಿನಿ *

ಯಾರಿವಳು ಈ ಮಾಯಾಂಗಿನಿ 
ಬಿಡದಂತೆ ಮಾಡಿಹಳು ಮೋಡಿ  
ನೋಡದಿದ್ದರೆ ಕಾಡುವಳು ಕೋಡಿ  
ರಾತ್ರಿ, ಹಗಲು ...ದಿನವಿಡಿ..., 
ಎಷ್ಟು ನೋಡಿದರು ಸಾಲದು, 
ಇನ್ನಷ್ಟು ನೋಡುವಂತೆ 
ಮಾಡುವಳು ಈ ಬಿಡಾಡಿ. 
ಅಪ್ಪ, ಅಮ್ಮ, ಅಣ್ಣ ತಂಗಿ 
ಯಾರಾದರು ಸರಿ 
ನೀ ಸಿಗದಿದ್ದರೆ ಯುದ್ಧ 
ಮಹಾಯುಧ್ಧ !
ಸತ್ತ ಸೈನಿಕರನ್ನು ಹುಗಿಯಲು 
ಸ್ಥಳವಿಲ್ಲ ಮತ್ತೆ ಹೊಂದಬೇಕೆಂಬ ಬಯಕೆ  
ನಿತ್ಯ ನೀನಿಲ್ಲದೆ ಬದುಕಿದವರ 
ಪತ್ತೆ ಮಾಡಲು ಸುತ್ತಿ ...
ನಾನೂ ಸತ್ತೆ ...
ಗುಡಿ,ಗುಂಡಾರ ಇಗರ್ಜಿ, 
ಶಾಲೆ, ಕಾಲೇಜು ಚಿತ್ರ ಮಂದಿರ 
ಎಲ್ಲೆಲ್ಲೂ ನಿನ್ನದೆ ಯಜಮಾನಿಕೆ 
ನೀನಿಲ್ಲದೆ ಗರ್ಭಗುಡಿ 
ಅದು ಮಂದಿರ ಹೇಗಾದಿತು? 
ನಸುಕಿನಲ್ಲಿ ನಾನೆದ್ದು  ಮೊದಲು 
ಕೈಮುಗಿಯುವುದೆ  ನಿನಗೆ !  
ಕೈ ಮುಗಿಯದವರು ಯಾರಾದರೂ 
ಇದ್ದರೆ ಹೇಳಿ ?
ಅವರಿಗೆ ನಾನು ಎರಡು ಬಾರಿ 
ಕೈ ಮುಗಿಯವೆ. 
ಕಲಿಸುವ ಗುರುಗಳು .
ಕಂಗಾಲಾಗಿದ್ದಾರೆ ನೀನಿಲ್ಲದೆ ....
ಕತ್ತರಿಸಲು ಖಡ್ಗಗಳಲ್ಲಿ 
ರಕ್ಷಿಸಿಕೊಳ್ಳುಲು ಗುರಾಣಿಗಳಿಲ್ಲ
ಬಿತ್ತರಿಸಲೂ ನೀನೇ ಬೇಕು.
ಉತ್ತರಿಸಲು ನೀನೇ ಬೇಕು.
ಸತ್ಯವಾಗಿ ಹೇಳುತ್ತಾನೆ 
ನೀನೆ ನನ್ನ ಅರ್ಧಾಂಗಿಣಿ.....
ಅಲ್ಲ ಅಲ್ಲ ....ನೀನೆ ನನ್ನ ಎದೆಯ 
ಮೇಲೆ ಮಲಗಿರುವ 
ಮೋಬೈಲಾಂಗನಿ....ಹ್ಹಾ.ಹ್ಹಾ  !!

             ಬಸನಗೌಡ ಗೌಡರ

Tuesday, January 4, 2022

* ಕಟ್ಟಿದ ಕನಸು *

* ಕಟ್ಟಿದ ಕನಸು *

ಕಟ್ಟಿದ ಕನಸು ಕಣ್ಮುಂದೆ ಕರಗಿ 
ಕಡಲು ಹರಿದು ಪುಡಿಯಾಗಿ 
ಒಡಲಿನ ದುಃಖ ಮಡಿಲೂಳಗೆ
ಕಣ್ಣೀರಿಗೂ ಬರ ಉಕ್ಕಲೆಲ್ಲಿದೆ. //

ಕಾಪಿಟ್ಟು ಕಟ್ಟಿದೆ ,ಗರ್ಭಗುಡಿ 
ಕಲ್ಲು ಮಣ್ಣುಗಳನ್ನು ಕಲಸಿ
ಕತ್ತು ಬಗ್ಗಿಸಿ ಕಾಯ ಮಣಿಸಿ 
ಕರ್ಮವೆ ಧರ್ಮವಾಗಿಸಿದೆ//

ಎತ್ತರಕೇರಿದ ಗತ್ತಿನ ಗೋಪುರ 
ಸುತ್ತೆಲ್ಲ ಮಿರಮಿರನೆ ಮಿಂಚಿ 
ಹೊತ್ತು ಮುಳುಗುವ ಮುನ್ನ 
ಪತ್ತೆ ಯಾಯಿತು ಹತ್ತೂರಿಗೆ//

ಡೋಲು ಬಡಿದವರೊಂದು ಬಣ 
ಕೊಳಲೂದುವರೊಂದು ಬಣ
ಹಲಗಿ ಸಪ್ಪಳಕೆ ಕದಲಿತು ಮನ 
ಅಲುಗಾಡಿತು ಕಟ್ಟಿದ ಭುವನ//

ಕಾಲಕ್ಕೆ ಬರವೇನು? ಕದಳಿಯ 
ವನದಂತೆ ಗೊಣೆಗಳು ಸಾವಿರ
ಶಿವನ ಸದರಿಗೆ ಏರುವವು ಫಲ
ಮಾಗಿದ ಮೇಲೆ ಮೆದುವಾಗಿ//

Monday, January 3, 2022

*ವ್ಯಕ್ತಿಗಾಗಿ ವ್ಯವಸ್ಥೆ *

            ನಾವಿರೋದೆ ಹೀಗೆ..ಎಲ್ಲಿ ಹೋದರೆ ನಮಗೆ ಗೌರವ ? ಎಲ್ಲಿ ಕಲಿತರೆ ಹೆಚ್ಚು ಗೌರವ ?ಎಲ್ಲಿ ಕುಳತರೆ ಹೆಚ್ಚು ಗೌರವ ? ಯಾವ ಚೇರ ಮೇಲೆ ಕುಳಿತರೆ ನಮಗೆ ಗೌರವ ಸಿಗುತ್ತದೆ... ಎನ್ನುವ ಭೂತವನ್ನು ನಮ್ಮ ಜೊತೆಗೆ  ಸದಾ ಇಟ್ಟು ಕೊಂಡಿರುತ್ತೇವೆ ..ಎನ್ರಿ ಇದು ಗೌರವ, ಗೌರವ ಅಂತಾ...ತೆಲೆ ಕೆರಿತೀರಾ, ಖಂಡಿತವಾಗಿಯೂ ನಾನು ಆ ಕೆಲಸ ಮಾಡದೆ ನೇರವಾಗಿ ಮುಖ್ಯ ವಾದ ವಿಷಯಕ್ಕೆ ಬರುತ್ತೇನೆ ನಾನು ಈಗ್ಗೆ ಕೆಲ ದಿನಗಳ ಹಿಂದೆ  ಒಂದೂರಿಗೆ ಪ್ರಯಾಣ ಬೆಳೆಸಿದ್ದೆ ಆ ಸಂದರ್ಭದಲ್ಲಿ ಆದ ಒಂದು ಸಣ್ಣ ಘಟನೆ ಹಂಚಿಕೊಳ್ಳುವ ಮನಸ್ಸಾಯಿತು ಅದಕ್ಕಾಗಿ ಈ ಪೀಠಿಕೆ ಹಾಕಿದೆ ಅಷ್ಟೆ. ನನ್ನ ಜೋತೆ ಪ್ರಯಾಣ ಬೆಳೆಸಿದವರು ಒಬ್ಬರು ಉಪನ್ಯಾಸಕರೆ ! ಪ್ರಯಾಣ ಸುಖಕರವಾಗಿಯೆ ನಡೆದಿತ್ತು ಬಹು ದೂರದ ಪ್ರಯಾಣ ಎಂದರೆ ಕೇಳಬೇಕೆ  ದಾರಿಯಲ್ಲಿ ಹಲವಾರು ಜನ ಹತ್ತುತ್ತಾರೆ ಹಲವಾರು ಜನ ಇಳಿಯುತ್ತಾರೆ. ಆ ಪ್ರಶ್ನೆ ಬೇರೆ ..ಮಾರ್ಗ ಮಧ್ಯದಲ್ಲಿ ಒಬ್ಬರು ಸ್ಫರದ್ರೂಪಿ ಯುವಕ ಅಂದರೆ ಮೂವತ್ತು ಮೂವತೈದು ವರ್ಷದ ತರುಣ ಬಸ್ಸಿಗೆ ಏರಿದ  ಆತನೊಬ್ಬ ಶಿಕ್ಷಕನೆಂದು ಅರಿತುಕೊಳ್ಳಲು ಬಹಳ ಸಮಯವೇನು ಹಿಡಿಯಲಿಲ್ಲ ಯಾಕೆಂದರೆ ನೀಟಾದ ಬಟ್ಟೆ  ಇನ್ ಮಾಡಿದ ಶರ್ಟ್, ಮಾತು ಕೂಡಾ ತೂಕದ ಮಾತುಗಳೆ ಆಗಿದ್ದವು ಇರಲಿ, ವಿಷಯ ಅದಲ್ಲ ನಾವು ಜೊತೆಯಾಗಿ ಪ್ರಯಾಣಿಸದ ಸ್ನೇಹಿತರು ಲೋಕಾಭಿರಾಮವಾಗಿ ಮಾತಾಡಲು ಸುರುಮಾಡಿದಾಗ ಸಹ ಪ್ರಯಾಣಿಕನಿಗೆ ನಾವು ಉಪನ್ಯಾಸಕರು ಎಂದು ತಿಳಿಯಲು ಅವರೂ ಬಹಳ ಅವಧಿ ತೆಗೆದುಕೊಳ್ಳಲಿಲ್ಲ .ಪರಿಣಾಮವಾಗಿ ಬಸ್ಸಿನ ಕ್ಷಣದ  ಬಾಂಧವ್ಯ ಬೆಸೆಯಲು ಬಹಳ ಸಮಯವೂ ಹಿಡಿಯಲಿಲ್ಲ. ತಕ್ಷಣವೇ ಅವರು "ನೀವು ಬೋಧಿಸುವ ವಿಷಯ ? " ಎಂದು ಕೇಳಿದರು  ಆಗ ನನ್ನ ಸ್ನೇಹಿತರು ತಮ್ಮ ವಿಷಯವನ್ನು ಹೇಳಿ  ನನ್ನ ವಿಷಯದೊಂದಿಗೆ ನನ್ನನ್ನು ಪರಿಚಯಿಸಿದರು ನಾನು ನಮಸ್ಕಾರ ಹೇಳಿ ಔಪಚಾರಿಕ ನಗೆ ಸೂಸಿ ಸುಮ್ಮನಾದೆ. ಆದರೆ ಇಬ್ಬರು ತಮ್ಮತಮ್ಮ ಸ್ನೇಹಿತರು ಎಲ್ಲಿ ಎಲ್ಲಿ ಇದ್ದಾರೆ ಎನ್ನುವುದನ್ನು ಹೇಳುತ್ತಾ ಪರಿಚಯ ಗಟ್ಟಿ ಮಾಡಲು ಸುರು ಮಾಡಿದರು .ನಾನು ಮೊದಲೇ ಕಿಡಕಿಯ ಹತ್ತಿರ ಕುಳಿತುಕೊಂಡಿದ್ದರಿಂದ ಮಧ್ಯ ಬಾಯಿ ಹಾಕುವ ಕೆಲಸ ಮಾಡಲಿಲ್ಲ ಕಾರಣ ಇಷ್ಟೆ... ಒಂದು, ಕಿಡಕಿಯಾದರೆ ಇನ್ನೂಂದು ಜನರೇಷನ್ ಗ್ಯಾಪ್ ...ಅಂದರೆ ಅದಕ್ಕೆ ವಯಸ್ಸಿನ ಅಂತರವೂ ಇರಬಹುದೇನೊ ...ಇರಲಿ ಈ ಅವಧಿಯಲ್ಲಿಯ ಒಂದು ಸನ್ನಿವೇಶ ನನ್ನ ಮನಪಟಲದಲ್ಲಿ  ಉಳಿಯುವಂತೆ ಮಾಡಿದ್ದು ಅದೇನಂದರೆ ಪ್ರಯಾಣಿಕ ನನ್ನ ಸ್ನೇಹಿತನಿಗೆ ಕೇಳಿದ ಪ್ರಶ್ನೆ "ನೀವು ಯಾವ ವಿಶ್ವವಿದ್ಯಾಲಯದಲ್ಲಿ " ಎಮ್. ಎ .ಮಾಡಿದಿರಿ ? " ಪ್ರಶ್ನೆ ಏನೊ ಸುಲಬದ್ದೆ ಆದರೆ ಯಾವ ವಿಶ್ವವಿದ್ಯಾಲಯದಲ್ಲಿ ಎಮ್. ಎ.  ಮಾಡಿದ್ದೀರಿ ಎನ್ನುವ ಪ್ರಶ್ನೆ ಆ ವಿಶ್ವವಿದ್ಯಾಲಯ ಗುಣಮಟ್ಟದ  ಪ್ರಶ್ನೆ ಮಾಡಿದಂತೆ ಬಾಸವಾಯಿತೋ ಅಥವಾ  ವಿಶ್ವವಿದ್ಯಾಲಯದ ಮೇಲೆ ಕಲಿತ ವಿದ್ಯಾರ್ಥಿ ಗುಣಮಟ್ಟದ ಮೇಲೆ ಅವರಿಗಿರುವ ಗೌರವದ ಹಾದಿ ಇರತ್ತೋ ನಾನರಿಯೇ ಆ ಮಾತು  ಬೇರೆ, ಈಗ ನನ್ನ ಮುಖ್ಯ ವಾದ ವಿಷಯ ಏನು ಎಂದರೆ ಯಾವುದೆ ವಿಶ್ವವಿದ್ಯಾಲಯ ಒಂದರಿಂದಲೆ ಒಬ್ಬ ವ್ಯಕ್ತಿಯ ಗೌರವ ಹೆಚ್ಚಲಾರದು,ಯಾವುದೇ ಒಬ್ಬ ವ್ಯಕ್ತಿಯು ತನ್ನ ಸ್ವಸಾಮರ್ಥ್ಯದಿಂದ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಬಲ್ಲ.ಯಾಕೆ ಈ ಮಾತು ಹೇಳುವೆನೆಂದರೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಜೀವನ ನಿರ್ವಹಣೆಯಲ್ಲಿ ಎಡವಿದ್ದಾರೆ! ಉದ್ಯೋಗ ಸಿಗದೆ ಅಲೆಯುತ್ತಿದ್ದಾರೆ ಕೂಡಾ... ಆದರೆ ಬಾಹ್ಯವಾಗಿ ಬರೆದು ತಮ್ಮ ಅನುಭವಗಳನ್ನು ಅದಕ್ಕೆ ಎರೆದು ಅದೆಷ್ಟೋ ಜನ ನನ್ನ ಸ್ನೇಹಿತರು ಐ ಎ ಎಸ್, ಕೆ ಎ ಎಸ್, ಪ್ರಾಧ್ಯಾಪಕರಾಗಿ ನಮ್ಮ ಎಡಬಲದಲ್ಲಿ ಇದ್ದಾರೆ .ಜೀವನದ ಪಾಠಕ್ಕಿಂತ ದೊಡ್ಡದಾದ ಪಾಠ ಇನ್ನೊಂದು ಇಲ್ಲ ಅದಕ್ಕೆ ಹೇಳಿದ್ದು "ಪ್ರತಿಭೆಗಳು ಗುಡಿಸಲುಗಳಲ್ಲಿ ಹುಟ್ಟುತ್ತವೆ " ಎನ್ನುವುದು.ಬಾಹ್ಯವಾಗಿ ಪರೀಕ್ಷೆ ಬರೆದ ನನ್ನ ಸ್ನೇಹಿತ ಜನರಲ್ ಕೆಟಗೆರಿಯಲ್ಲಿ ನೇಮಕವಾಗಿದ್ದು ವಿಶ್ವವಿದ್ಯಾಲಯದ ಒಂದರ ಹಂಗಿನಲ್ಲಿ ಅಲ್ಲ ,ಅಂದರೆ ವಿಶ್ವವಿದ್ಯಾಲಯಗಳೆ ಅಂತಿಮವಲ್ಲ ಅವು ನಮಗೆ ಆದಾರಗಳೆ ಹೊರತು ಗೌರವ ತಂದು ಕೊಡುವ ಅಂತಿಮ ಗಡಿಗಳಲ್ಲ  ಇದರ ಅರ್ಥ ನನಗೆ ವಿಶ್ವವಿದ್ಯಾಲಯಗಳ ಬಗ್ಗೆ ಗೌರವವಿಲ್ಲ ಎಂದಲ್ಲ ಅಪಾರ ಗೌರವವಿದೆ. ಆದರೆ ವಿಶ್ವವಿದ್ಯಾಲಯಗಳು ಗೌರವದ ಸಂಕೇತಗಳಲ್ಲ ಎನ್ನುವುದನ್ನು ಅರ್ಥೈಸಿ ಕೊಳ್ಳಬೇಕಾಗಿದೆ .ಜ್ಞಾನ ಮತ್ತು ಮಾಹಿತಿಗಾಗಿ ಇಂದು ವಿಶ್ವ ವಿದ್ಯಾಲಯದಲ್ಲಿಯ ಪ್ರಾಧ್ಯಾಪಕರ ಮೇಲೆಯೇ  ಸಂಪೂರ್ಣವಾಗಿ ಅವಲಂಬಿಸುವ ಕಾಲಘಟ್ಟದಲ್ಲಿ ನಾವು ಇಲ್ಲ.  ಬದಲಾಗಿ  ವಿಶ್ವವನ್ನು ವೀಕ್ಷಿಸಲು ಕಣ್ಣುಗಳ ಸಂಖ್ಯೆ ಅಪಾರವಾಗಿವೆ ಅವುಗಳಿಂದ ನೋಡಬೇಕಷ್ಟೆ .ಅದಕ್ಕೆ ವಿಶ್ವವಿದ್ಯಾಲಯದ ಹೆಬ್ಬಾಗಿಲು ಮೇಲೆ ಬರೆದಿದ್ದು  "ಅರಿವೆ ಗುರು "ಎಂದು. ವಿಶ್ವವಿದ್ಯಾಲಯದ ಕ್ಷಮೆ ಕೋರುತ್ತಾ... ಜನರು ಇಂಥಹ  ವಿಶ್ವವಿದ್ಯಾಲಯದಲ್ಲಿ ಓದಿದರೆ ಮಾತ್ರ  ಶ್ರೇಷ್ಠ ಎನ್ನುವ ಮನೋಭಾವದಿಂದ  ಹೊರ ಬರಬೇಕಾಗಿದೆ ಎನ್ನುವುದು ಮಾತ್ರ ನನ್ನ ಲೇಖನದ ಉದ್ದೇಶ.

Saturday, January 1, 2022

ಹಾಲ ಹಂಡೆ

          ಅಂದು ಬದಾಮಿ ತಾಲೂಕಿನ ಹಳ್ಳಿ ಎಂದು ಕರೆಯಿಸಿಕೊಂಡು ಇಂದು ಗುಳೇದಗುಡ್ಡ ತಾಲೂಕಿನ ಗ್ರಾಮವಾಗಿರುವ ಹಾನಾಪೂರ ಎಸ್ ಪಿ ಗ್ರಾಮ ಇಂದು ಹಂತ ಹಂತವಾಗಿ ಪ್ರಸಿದ್ಧಿಗೆ  ಬರಲು ಕಾರಣ ! ಅದುವೆ ಹಾಲು ಹಂಡೆ ಅಥವಾ ಅದನ್ನು ಹಾಲ ಹಂಡೆ ಎಂದು ಕರೆಯುತ್ತಿದ್ದಾರೆ ಆದರೆ ಸ್ಥಳಿಕರು ಅದನ್ನು ಅನುಕೂಲಕ್ಕಾಗಿ  ಹೊಂಡೆ ಎಂದು ಕರೆಯುವುದನ್ನು ರೂಢಿಸಿಕೊಂಡಸಿದ್ದನ್ನು ಕಾಣಬಹುದು ಬಹುಕಾಲದವರೆಗೆ ಅಜ್ಞಾತವಾಗಿ ಉಳಿದಿದ್ದ ಈ ಜಲಪಾತ ಬಯಲಿಗೆ ಬರಲು ಕಾರಣವೆಂದರೆ ಗುಳೇದಗುಡ್ಡದ ಕೆಲವು ಉತ್ಸಾಹಿ, ನಿಸರ್ಗ ಪ್ರೇಮಿಗಳಾದ ನೇಕಾರ ತರುಣರಿಂದ ಎಂದರೆ ತಪ್ಪಾಗಲಾರದು ಯಾಕೆಂದರೆ ತಮ್ಮ ಬೇಸರವನ್ನು ಕಳೆದುಕೊಳ್ಳಲು ಇಲ್ಲಿಗೆ ಬಂದು ಸಂತೋಷ ಪಟ್ಟು ಹೋಗುತ್ತಿದ್ದರು ಅದು ಪತ್ರ ಕರ್ತರವರೆಗೂ ತಲುಪಿ ಹೆಚ್ಚು ಜನಪ್ರೀಯತೆ ಪಡೆಯಿತು ಇದಕ್ಕೆ ಕಾರಣೀಭೂತರಾದ ಮಲ್ಲಿಕಾರ್ಜುನ ರಾಜನಾಳ ಬಸವರಾಜ ಯಂಡಿಗೇರಿ,ಮಲ್ಲಿಕಾರ್ಜುನ ಕಲಕೇರಿ ಯಂತಹ ಉತ್ಸಾಹಿ ಪತ್ರಕರ್ತರು ಈ ಜಲಪಾತಕ್ಕೆ  ಬೆಳಕು ಚೆಲ್ಲಿದರು.ಈ ಜಲಪಾತ ವಿರುವುದು ನಾನು ಜನಿಸಿದ ಊರಿನಲ್ಲಿ ಎನ್ನುವುದು ಒಂದು ಹೆಮ್ಮೆಯ ವಿಷಯ. ನಮ್ಮೂರು ನಮ್ಮ ಹೆಮ್ಮೆ. ಮಳೆಗಾಲದಲ್ಲಿ 25 ರಿಂದ 30 ಅಡಿಗಳಿಂದ ದುಮ್ಮಕ್ಕಿ ಹರಿಯುವ ಜಲಪಾತ ನೋಡುವುದೇ ಒಂದು ಹಬ್ಬ. ಇದು ಎಲ್ಲಿದೆ ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ ಗುಳೇದಗುಡ್ಡದಿಂದ ಗಂಜಿಕೆರೆ ಮೇಲೆ ಹಾದು ಟ್ರೆಕಿಂಗ್ ಮಾಡುತ್ತಾ ಹೋದರೆ 5 ರಿಂದ 6  ಕಿಲೋಮೀಟರನಲ್ಲಿ ಅಲ್ಲಿಗೆ ತಲುಪಬಹುದು .ಆ ಸುಂದರ ನಿಸರ್ಗ ಸವಿ ಬಲ್ಲವನೇ ಬಲ್ಲ ಜುಳು ಜುಳು ಹರಿಯುವ ಜರಿಗಳು ಅಲ್ಲಲ್ಲಿ ಪಡಿಗಳು ಅದರಿಂದ ನಿರ್ಮಾಣವಾದ ಸಣ್ಣ ಪುಟ್ಟ ಗುಹೆಗಳು ನಮ್ಮನ್ನು ವಿಶಿಷ್ಟವಾದ ಲೋಕಕ್ಕೆ ತೆಗೆದು ಕೊಂಡು ಹೋಗುತ್ತವೆ. ಹೋಗುವಾಗ ಒಂದಷ್ಟು ಊಟಕ್ಕಾಗಿ ಬುತ್ತಿ ಕಟ್ಟಿ ಕೊಂಡು ಹೋಗಬೇಕು ಸ್ನಾನ ಮಾಡಿದ ಮೇಲೆ ಊಟ ಮಾಡಿದರೆ ಅದರ ರುಚಿ ಯಾವ ಪೈವ ಸ್ಟಾರ್ ಹೋಟೆಲ್ ನಲ್ಲೂ ಸಿಗದು. ಇನ್ನು ವಯಸ್ಸಾದವರು ಈ ಮಾರ್ಗವಾಗಿ ಹೋಗುವುದು ಸ್ವಲ್ಪ ಕಠಿಣ ಅನಿಸಬಹುದು, ಅದಕ್ಕೂ ಪರಿಹಾರ ಇದೆ ಏನೆಂದರೆ ಗುಳೇದಗುಡ್ಡ ದಿಂದ  7 ಕಿಲೋಮೀಟರ್ ಬಸ್ ಅಥವಾ ಟಂ ಟಂ ನಲ್ಲಿ ಹಾನಪೂರ ಎಸ್ ಪಿ ಗ್ರಾಮಕ್ಕೆ ಹೋಗಿ  ಅಲ್ಲಿಂದ ಪೂರ್ವಕ್ಕೆ ಕಾಲುದಾರಿಯಲ್ಲಿ ಹೊಲದಲ್ಲಿ ಸು.500 ಮೀಟರ್ ನಡೆದರೆ ನಿಮಗೆ ಸಿಗುವುದೇ ಹಾಲುಹಂಡೆ (ಹೂಂಡೆ) ಆ ನಿಸರ್ಗದ ಜಲಪಾತ ಸೃಷ್ಟಿಯ ಯಾಗಲು ಅಲ್ಲಿ ಪ್ರಾಕೃತಿಕ ಹಿನ್ನೆಲೆಯೆ ಕಾರಣ ಈ ಜಲಪಾತ ಇರವು ಜಾಗದ ಹಿಂದೆ   ಅಪಾರ ಪ್ರಮಾಣದ ಪಡೆಯಿರುವ  ಗುಡ್ಡವಿವದೆ ಅಲ್ಲ ದೆ  ಪಶ್ಚಿಮ ದಿಕ್ಕಿನಲ್ಲಿ ಅರ್ಧ ಕಿಲೋಮೀಟರ್ ಅಂತರದಲ್ಲಿ ಸುಂದರವಾದ ಕೆರೆಯು ಇದೆ ಇದರಲ್ಲಿ ಸೇಕರಣೆಯಾದ ಹೆಚ್ಚು ವರಿ ನೀರೂ ಕೂಡಾ ಈ ಜಲಪಾತಕ್ಕೆ ಬರುತ್ತಿದೆ ಮಳೆಗಾಲದಲ್ಲಿ ಬೀಳುವ ಆ ಸುಂದರವಾದ, ಹಾಲಿನಂತೆ ನೊರೆ ಇರುವ ಹೊಂಡ ಹಾಲಹಂಡೆ ಯಾಗಿರಬಹುದು ಈ ಸುಂದರವಾದ ಹಾಲಹಂಡೆ ಹಾನಾಪೂರ ಹೆಮ್ಮೆ ಇದಕ್ಕೆ ಸಮಾಜ ಸೇವಾ ಸಂಸ್ಥೆಗಳು ಸರಕಾರಗಳು ಕಾಳಜಿ ವಹಿಸಿದರೆ ಉತ್ತಮ ಪ್ರವಾಸಿ ತಾಣವಾಗುವದರಲ್ಲಿ ಯಾವುದೆ ಸಂಶಯವಿಲ್ಲ.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...