Tuesday, August 30, 2022

* ತಲುಪಿದ್ದು ದ್ವೀಪ ಅಲ್ಲಿಲ್ಲ ದೀಪ *

ಬದುಕೊಂದು ಬವಣೆಯ ದೋಣಿ 
ಇದಕಿಲ್ಲ ಕೊನೆ, ಹಾಕಿಹರು ಮಣೆ 
ಮಧು..ವಿಗೊ,ಮದಿರೆಗೊ ವಧುವಿನ
ಮದುವೆಗೆ ನಡೆದಿದೆ ಸಡಗರದ ಪಯಣ !!

ಚದುರಿದಾ ಮೋಡಗಳಂಬರದ 
ಮಡಿಲಲ್ಲಿ ಚಿತ್ತಾರದ ಚಂದ್ರಮ
ಹಾಲಿನಂತಹ ನೊರೆ ಬೆಳದಿಂಗಳ 
ನೋಡಲೆರಡು ಸೋತಿವೆ ನಯನ!!

ಬಾಚಿ ತಬ್ಬಲು ಹೀಚು ಕಾಯಿಗಳು
ಕಚುಗಳಿಯಿಡುವ ಕನ್ಯೆಯರಿವರು
ಶಶಿಧರನಂಗಳದ ಈ ಚಿಕ್ಕಿಗಳಾ ಹಿಂಡು
ನಶೆಯೇರಿಸಿ ನೀಡಿದವು ಹೊಸ ಚುಂಬನ !!

ಶರಧಿಯ ಸಮ್ಮೋಹನಕರಳಿದ ರವಿ
ವರದಿಯ ನೀಡಲು ಬಂತು ಹೊಂಬಣ್ಣ  
ಉಷೆಯಲ್ಲರಳಿದ ನಸು ಗೆಂಪಿನ 
ಹಸಿಹಸಿ ಕನಸುಗಳಾ.. ಆಲಿಂಗನ !!
 
ದಡ ತಲುಪಿ ಕುಣಿಯಿತು ಮನ 
ಹೆಡೆಯೆತ್ತಿದೆ ಉರಗ ಗುಣ 
ತಲುಪಿದ್ದು ದ್ವೀಪ ಅಲ್ಲಿಲ್ಲ ದೀಪ 
ಮಲೆತು ಕತ್ತಲೆಯೊಂದಾಗಿದೆ ಶಾಪ !!

🖋  ಬಸನಗೌಡ ಗೌಡರ

Sunday, August 28, 2022

ಸಾಮರಸ್ಯಕ್ಕೊಂದು ಅನುಭವ ಮಂಟಪ




ಸಮಾಜದಲ್ಲಿ ಸಾಮರಸ್ಯಕ್ಕೊಂದು ಅನುಭವ ಮಂಟಪ*

ಕಲ್ಯಾಣವೆಂಬುದು ಎಲ್ಲಿಹುದಯ್ಯಾ ? ಕಲ್ಲು ಹೃದಯಗಳಲ್ಲಿ ಅಲ್ಲ, ಮಲ್ಲಿಗೆಯಂತ ಮನಗಳಲ್ಲಿ ಬೆಣ್ಣೆಯಂತ ಹೃದಯಗಳಲ್ಲಿದೆ . ಅದು ನಡೆದದ್ದು ದಿನಾಂಕ 28.08.2022 ರಂದು. ಅಂತಹ ಅನುಭವ ಮಂಟಪದ ಶರಣನಾಗುವ ಸೌಭಾಗ್ಯವೊಂದು ನನಗೆ ಬಂದದ್ದು ನನ್ನ ಪೂರ್ವ ಜನ್ಮದ ಪುಣ್ಯದ ಫಲವೆ ಸರಿ. ಶ್ರೀ ಗುರುಸಿದ್ದೇಶ್ವರ ಬ್ರಹನ್ಮಠದ 1008  ಶ್ರೀ ಬಸವರಾಜ ಪಟ್ಟಾದಾರ್ಯ  ಶ್ರೀಗಳ ಕನಸಿನ ಕೂಸು ಶ್ರಾವಣ ಮಾಸದ ಪ್ರವಚಗಳ ನಿರ್ವಹನೆಯ ಅಧ್ಯಕ್ಷ ಹಾಗೂ ಸ್ನೇಹಿತ ಶ್ರೀ ಚಂದ್ರಶೇಖರ ಹೆಗಡೆ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬೀಳಗಿ ,ಇವರ ಮುಂದಾಳತ್ವದಲ್ಲಿ ಲೋಕಾರ್ಪಣ ಗೊಂಡದ್ದು ಈಗ ಐತಿಹಾಸಿಕ ಸತ್ಯ. ಶ್ರಾವಣ ಮಾಸದಲ್ಲಿ ಸತ್ಕಾರ್ಯಗಳು, ಸತ್ ಚಿಂತಣೆಗಳು ನಡೆದು. ಸಾದು ಸಂತರ ಮಾತುಗಳನ್ನು ಕೇಳಿ ಪುಣಿತರಾಗುವದು ಸರ್ವೆ ಸಾಮಾನ್ಯ ಆದರೆ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ ಹೊಸ ಪ್ರಯೋಗವೊಂದು  ಶ್ರೀಮಠದಲ್ಲಿ ನಡೆಯಿತು, ಅದೇನಂದರೆ ಶ್ರೀ ಗುರು ಬಸವದೇವರ ಪ್ರತಿ ದಿನದ ಪ್ರವಚನದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅನುಭಾವಿಗಳ ಲಘು ಉಪನ್ಯಾಸ. ಶ್ರಾವಣ ಮಾಸದ ಮೂವತ್ತು ದಿನಗಳೂ ನಿರಂತರವಾಗಿ ನಡೆದು ಆಗಷ್ಟ 28 ರಂದು ಸಂಪನ್ನಗೊಂಡಿತು.ಅದು ನಿಜವಾಗಿಯೂ ಅನುಭವ ಮಂಟಪವೆ ಸರಿ.ನನಗೆ ವಿದ್ಯಾದಾನಮಾಡಿದ ನಾಲ್ಕು ಜನ ವಿದ್ಯುನ್ಮಣಿಗಳಾದ ಡಾ!ವ್ಹಿ ಎ ಬೆನಕನಾಳ,ಎಸ್ ಎಸ್ ರಾಜನಾಳ,ಸಿದ್ಧಲಿಂಗಪ್ಪ ಬರಗುಂಡಿ ಹಾಗೂ ಎಮ್ ಎಮ್ ಜಗತಾಪ ರ ಆದಿ ಯಾಗಿ 30 ದಿಗ್ಗಜರ ನಡುವೆ ನಾನೊಂದು ಬಡಪಾಯಿ ಶರಣ, ಹೂವಿನ ಜೊತೆ ದಾರವು ದೇವರ ಮುಡಿಗೇರದ ಹಾಗೆ ಅವರ ಮಧ್ಯೆ ನನಗೂ ಒಂದು ಸನ್ಮಾನ, ಧನ್ಯನಾದೆ ಭಗವಂತ.ಅದಕ್ಕಿಂತ ಇನ್ನೂಂದು ಮಹತ್ವದ ವಿಷಯ ಏನೆಂದರೆ, ಸಮಾಜ ಸಮಾಜಗಳ ನಡುವೆ ತಮ್ಮ ಸಮಾಜ ಮತ್ತು ಸಂಸ್ಕೃತಿಗಳ ವೈಭವೀಕರಣದ ಪೈಪೋಟಿಯ ಇಂದಿನ ದಿನಾಮಾನದಲ್ಲಿ ಸರ್ವ ಸಮಾಜದ ಒಳಿತು ಬಯಸುವ ಬಸವ ಚಿಂತನೆಗಳ ಸಾಕ್ಷಾತ್ಕಾರದ ಸಮಾರಂಭ. ಸಮಾಜಗಳು ಕಲುಷಿತವಾಗುತ್ತಿರುವ ಸೂಚನೆಗಳು ಕಾಣುತ್ತಿರುವ ಈ ಪರ್ವ ಕಾಲದಲ್ಲಿ ಸರ್ವ ಮಠಮಂದಿರಗಳು ಮಸೀದಿ ಚರ್ಚಗಳೂ ಅನುಸರಿಸಬಹುದಾದ ಸಾಮರಸ್ಯಕ್ಕೊಂದು ಸಣ್ಣ ಪ್ರಯೋಗ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ ಮನದಲ್ಲಿ ಅಂಕುರಿಸಿದ್ದು ಭಾವೈಕ್ಯತೆಯ ನಾಡಿಗೊಂದು ಭರವಸೆಯ ಆಶಾಕಿರಣ.  ಶ್ರೀಗಳೆ ಹೇಳುವ ಹಾಗೆ ಶ್ರೀ ರಾಮಚಂದ್ರ ಸೇತುವೆ ಕಟ್ಟುವಾಗ ಅಳಿಲೊಂದು ಮಾಡಿದ ಸೇವೆ ! ಸಮುದ್ರಲ್ಲಿ ಮುಳುಗಿ ಹಸಿ ಮೈಯಲ್ಲಿ ಉಸುಗು ಮೆತ್ತಿಸಿ ಸೇತುವೆಗೆ ಆಸರೆಯಾದ ಬಗೆಯಂತೆ. ಚಿಟಕೆ ಉಸುಕಾದರೂ ಏನು ? ತಾವು ಮಾಡುವ ಸೇವೆ  ಸಾಮರಸ್ಯ ಬೆಸೆಯುವ ಸೇತುವೇ ಆದೀತೆಂದು ಒಂದೆ ವೇದಿಕೆಯಲ್ಲಿ  ಮೂವತ್ತು ದಿನಗಳ ಉಪನ್ಯಾಸ ಮಾಡಿದ ಅನುಭಾವಿಗಳನ್ನು ಸೇರಸಿ,ಅಂತಹ ವಿದ್ವತ್ ಮಣಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರದ ಜೊತೆಗೆ, ಹೂ ದಳಗಳನ್ನು ಮಸ್ತಕದ ಮೇಲೆರಿಸಿ ಉಪನ್ಯಾಸದ ಜೊತೆಗೆ ಆಚರಣೆಯ ದೀಕ್ಷೆ ನೀಡಿದ ಕಾರ್ಯ ಮಾನವತ್ವವನ್ನೆ ಮೈಗೂಡಿಸಿಕೊಂಡು ವೈಚಾರಿಕ ನೆಲೆಗಟ್ಟಿನಿಂದ ಸಮಾಜವನ್ನು  ಮುನ್ನಡೆಸುತ್ತಿರವ ಬಸವರಾಜ ಶ್ರೀಗಳಗೆ ಬರದೆ ಇನ್ನಾರಿಗೆ ಬರಲು ಸಾಧ್ಯ ಹೇಳಿ ? ಇವತ್ತಿನ ಕಾರ್ಯ ಗುಳೇದಗುಡ್ಡದ ಸಾಂಸ್ಕೃತಿಕ ಜಗತ್ತಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಉಪನ್ಯಾಸ ಮಾಡಿದ್ದಕ್ಕೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದ ಶ್ರೀ ಮಠಕ್ಕೆ ಹಾಗೂ ಶ್ರಾವಣ ಮಾಸದ ಪ್ರವಚನ ಉಸ್ತುವಾರಿ ಅಧ್ಯಕ್ಷರಾದ ಚಂದ್ರಶೇಖರ ಹೆಗಡೆಯವರಿಗೆ ಹಾಗೂ ಮಠದ ಎಲ್ಲಾ ಸದ್ಬಕ್ತರಿಗೆ ಹೃದಯಪೂರ್ವಕ ಧನ್ಯವಾದಗಳು.

Saturday, August 27, 2022

ಕಣ್ಣು ತೆರೆಯಿಸಿದೊಂದು ಸಣ್ಣ ಚಿತ್ರ

ಕಣ್ಣು ತೆರೆಯಿಸಿತೊಂದು
ಸಣ್ಣ ಚಿತ್ರ ,ಸಣ್ಣವರಾದರೆ ಏನು ?
ಇನ್ನೂ ಕಲಿಯಬೇಕಿದೆ ನಾನು, 
ನನ್ನವರು.ಬೆನ್ನು ಮೇಲೆ 
ಪದವಿಯ ಮೂಟೆ ಹೊತ್ತವರು.
ಹೊನ್ನು ಹೊದ್ದವರು, ಎದ್ದವರು, ಗೆದ್ದವರು
ಕಣ್ಣು ಕಂಡರೂ ಹೃದಯಕ್ಕೆ ಬಗ್ಗದವರು.
ಕಲಿಯಬೇಕಾಗಿದೆ ಇನ್ನೂ !
ಆದರೂ ನಿಮಗೆ ಕಲಿಸುವ 
ಹಿರಿಯರು, ಗುರುಗಳು ನಾವು
ನೀವು ಕಲಿಯುವುದಕ್ಕಿಂತ 
ನಾವು ಕಲಿಯುವುದೆ ಇನ್ನೂ ಇದೆ !
ಹೊಟ್ಟೆ ಹೊರೆಯಲು ಪಡುವ 
ಕಷ್ಟ ಜೀವಿಗಳೆ ನಿಜ ದೇವರು 
ಪಕ್ಕದಲ್ಲಿ ಪವಡಿಸಿದರು ದಿಟ್ಟಿಸಿ 
ನೋಡಿ ಸರಸರನೆ ಏರುವ
ಕಾಣದೆ ಇರುವ ಕಲ್ಲು ದೇವರಿಗೆ ಬರುವ 
ನನ್ನವರು ಕಲಿಯಬೇಕಾಗಿದೆ 
ಆ ಕಂದಮ್ಮಗಳ ಶಾಲೆಯಲ್ಲಿ 
ಈ ನಿರಮ್ಮಳ ಭಾವದಲ್ಲಿ !

* ನಾಕವೊಂದರಳಲು ಬೇಕು *

ನಾಕವೊಂದರಳಿಸಲು ಬೇಕು 
ನಮಗೊಂದು ಸ್ವಂತ ಕರ್ಮ 
ನಮಗ್ಯಾಕೆ ನರಕದ  ಚಿಂತೆ 
ನಮ್ಮ ಶಿವ ನೀಡಿರುವನು 
ಸಂಸಾರವೆಂಬ ಸಂತೆ !!

ಸಂತೆಯ ಬಯಲಲ್ಲಿ ಸಾವಿರ 
ಕಂತೆ, ಕಂತೆ ! ಸವಿಯಾದ ಫಲ
ತಿಳಿಯದೆ ನಾ.. ಹೌಹಾರಿ ಕುಂತೆ
ಆಯ್ಕೆ ಹೇಗೆ ? ಗರಬಡಿದು ನಿಂತೆ 
ಹೇಳಿದರು... !  ಜ್ಞಾನ ಬೇಕಂತೆ !!

ಕಳೆತ ಹಣ್ಣೂ ಸಾವಿರ ಸಾವಿರ
ಕೊಳೆತ ಹಣ್ಣಿಗೇನಿಹುದು ಕೊರತೆ   
ಮಳೆಯಾಗದೆ ಬೆಳೆದು ನಿಂತಿವೆ
ಬರದ ಬಯಲಿನ ಪಾಪಾಸ ಕಳ್ಳಿ
ಕೌರವ ದೃತರಾಷ್ಟ್ರರಂತೆ !!

ಬರಿ ಸೆಳತೆವೊಂದೆ ಸಾಕೆ  
ಉರಿವ ದೀಪಗಳಂತೆ ಕ್ಷಣಿಕ
ಮರದ  ಫಲಿತ ಹಣ್ಣು ಬೇಕು
ತಡವರಿಸಿ ಹುಡುಕಾಡಿದೆ
ದಾರಿ ಕಾಣದೆ ನಾ ನಿಂತೆ !!

ಕಾಯುವೆ ಕಲಿಗಾಲದ ಕರ್ತಾರನ  
ಕಮ್ಮಟದ ಚಮ್ಮಟಿಯ ಏಟಿಗೆ.
ಹಮ್ಮು ಹರಿದು ಬಿಮ್ಮು ಕಳೆದು
ನಿಮ್ಮದಾಗುವ ಹಿರಿದು ಬಯಕೆಗೆ.
ಸಮ್ಮಾನವುಂಟು ನಾ.... ಅಳಿದ ಮೇಲೆ !!

🖋  ಬಸನಗೌಡ ಗೌಡರ

Sunday, August 21, 2022

* ಗೂಡೊಂದು ಕಟ್ಟುತಿರುವೆ *

ನಾಮಗಳನ್ನು ಕಡಿಮೆ ಮಾಡಿ
ಹೋಮಗಳನು ಹೂತು ಹಾಕಿ
ರಾಗ ದ್ವೇಷ ಮೀರಿದ ಮಡಿವಂತ
ತಾಯಿ ಮಡಿಲಂತ ಗೂಡೊಂದು 
ನಮಗಾಗಿ ಕಟ್ಟುತಿರುವೆ !!

ಕಲ್ಲುಗಾರೆಗಳಿಂದಲ್ಲ
ಹೊಳೆಯುವ ಬಣ್ಣಗಳಿಂದಲ್ಲ
ಬೆಳಗುವ ದೀಪಗಳಿಂದಲ್ಲ 
ಬೆಳಗಿನೊಲವಿನ ಕಳೆಯಿಂದ 
ಪಳಗಿ ಮನೆಯೊಂದು ಕಟ್ಟುತಿರುವೆ!!

ಅರೆ ಹೊಟ್ಟೆ ಹೊರೆದು ಹರಿದಂಬರ ಹೊದ್ದು 
ವರವ ಪಡೆಯಲು ಹೊರಗೆಲ್ಲೂ ಕಾಣದ 
ಧರೆಯಲ್ಲಾ ಬೆಳಗುವಾ ಹರಿ ನಾಮದ ಅರಮನೆಯೊಂದು ಕಟ್ಟುತೀರುವೆ !!
 
ಗುಡಿ ಗೋಪುರದ ಗಡಿ ಮೀರಿ
ಹಿಡಿ ಪ್ರೀತಿ ಮಡಿಲಲ್ಲಿ ಕಾಪಿಟ್ಟು
ಗುಡಿಯೊಂದು ಕಟ್ಟುತಿರುವೆ
ನಂಬುಗೆಯ ನಲ್ಮೆಯ 
ಗೂಡೊಂದು ಕಟ್ಟುತಿರುವೆ !!

Sunday, August 14, 2022

ಹಾಲು ಹಂಡೆ(ಹಾಲಂಡೆ)
      ಹಲವು ಬಾರಿ ಹಾಲು ಹಂಡೆಯ ಬಗ್ಗೆ ಬರೆದು ನನ್ನ ಮನಸ್ಸಿನಲ್ಲಿಯ ನನ್ನೂರಿನ ಪ್ರಕೃತಿ ಸೌಂದರ್ಯದ ಸವಿಯನ್ನು ಹೊರಹಾಕಿದ್ದೇನೆ. ಈಗ ಮತ್ತೊಮ್ಮೆ ಅದರ ಪ್ರಕೃತಿ ಸೊಬಗನ್ನು ಈ ಸ್ವಾತಂತ್ರ್ಯ ದ ಅಮೃತಮಹೋತ್ಸವ ಸಂದರ್ಭದಲ್ಲಿ ಈ ಸಮೂಹ ಮಾಧ್ಯಮದ ಮೂಲಕ ನನ್ನ  ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಮತ್ತೆ  ಕೈ ಬೆರಳುಗಳು ಮೊಬೈಲ್ ಕೀ ಮಣಿಗಳೊಂದಿಗೆ ಸರಸಕ್ಕಿಳಿದಿವೆ. ಘನ ಸರ್ಕಾರ ದಿನಾಂಕ 13.08.2022 ರಿಂದ  15.08.2022 ರವರಿಗೆ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವು ಮೂಲಕ ರಾಷ್ಟ್ರ ಪ್ರೇಮ ಮರೆಯಲು ಸೂಚಿಸಿದ ಪ್ರಯುಕ್ತ ಪ್ರತಿ ಮನೆ,ವಾಹನ, ಗಲ್ಲಿಗಲ್ಲಿಗಳಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಡಗರ ಕಾರಂಜಿಯಂತೆ ಪುಟಿಯುತ್ತಿದೆ. ಮುಂಜಾನೆ 8.00 ಗಂಟೆ ಯಿಂದ ಮಧ್ಯಾಹ್ನ  2.00.ಗಂಟೆಯವರೆಗೆ ಎಡೆಬಿಡದ ಸಡಗರದ ಸಂಭ್ರಮದ ಕಾರ್ಯಗಳು, ಮುಂಜಾನೆ ,ಪೌಢ ,ಪದವಿ ಪೂರ್ವ, ಪದವಿ ಕಾಲೇಜುಗಳ ಸಂಯುಕ್ತ ಧ್ವಜಾರೋಹಣ ,75 ವಸಂತ ಪೂರ್ತಿ ಗೊಳಿಸದ ಪ್ರಯುಕ್ತ ವಿದ್ಯಾರ್ಥಿಗಳಿಂದ ಅಮೃತ ಸಂಖ್ಯೆಯ  ಸಂಕೇತ ಸಂಖ್ಯೆಯ ನಿರ್ಮಾಣ. ವಿದ್ಯಾರ್ಥಿಗಳಿಂದ ಪಿರಾಮಿಡ್ ರಚನೆ,  ದೇಶ ಭಕ್ತಿ ಗೀತೆಗಳಂತೂ ದೇಶ ಭಕ್ತಿಯ ಪ್ರೇಮ ನಮ್ಮೆಲ್ಲರಲ್ಲಿ ರೋಮ ರೋಮಗಳಲ್ಲಿ ವಿದ್ಯುತ್ ಸಂಚಾರ ಮಾಡಿದೆವು. ತದನಂತರ ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರ ಹುದ್ದೆಯ ಪ್ರಭಾರ ವಹಿಸಿ ಕೊವಿಡ್ ಕೆಟ್ಟ ಕನಸುಗಳನ್ನು ಸಿವುಡುಗಟ್ಟಿ ಸೀಮೆ ಆಚೆ ದಾಟಸಿ  ಪ್ರಗತಿಯ ಮುನ್ನುಡಿ ಬರೆಯಲು ಹಾತೊರೆಯುತ್ತೀರುವ ಶ್ರೀ ವಿಠ್ಠಲ ಕಳಸಾ ರವರ ನೇತೃತ್ವದಲ್ಲಿ ಈರಣ್ಣ ದೊಡ್ಡ ಮನಿ ಕನ್ನಡ ಉಪನ್ಯಾಸಕರ  ನೇತೃದಲ್ಲಿ  ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ, ದೇಶ ಭಕ್ತಿಗೀತೆಗಳು ನಡೆದವು. ಇದು  ಇಲ್ಲಿಯವರೆಗೆ ಬಯಲಿನಲ್ಲಿ ನಿಂತು ಬಳಲಿ  ಬಂದ ವಿದ್ಯಾರ್ಥಿಗಳಿಗೆ ಬೆಲ್ಲದ ಹೋಳಿಗೆಯೇ ಸರಿ, ಯಾಕೆಂದರೆ ಸ್ಫರ್ಧೆಗಾಗಿ ಹೆಸರು ನೀಡಿದ ವಿದ್ಯಾರ್ಥಿಗಳಿಗಿಂತ  ಮೂರು ಪಟ್ಟು ವಿದ್ಯಾರ್ಥಿಗಳು ಸದೃಡ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಮಾತಾಡಿದ ವಾದ ಸರಣಿಗೆ ತಲೆದೂಗುವ ಸರಣಿ ನಮ್ಮ ದಾಗಿತ್ತು.ಇಷ್ಟೆಲ್ಲಾ ಶೈಕ್ಷಣಿಕ ಚಟುವಟಿಕೆಗಳ ಮಧ್ಯ ಬಹು ದಿನಗಳಿಂದ ನಮ್ಮ ಉಪನ್ಯಾಸಕ ಬಂಧುಗಳ ತಲೆಯಲ್ಲಿ ಅಂಕುರಿಸಿದ್ದ ಹಾಲು ಹಂಡೆಯ ಕನಸು ದಿಗ್ಗನೆ ಜಾಗೃತವಾಯಿತು, ಏಕೆಂದರೆ ಮಳೆಯಾಗುತ್ತಿದೆಯಲ್ಲವೆ ? ಹಾಲಿನಂತಹ ನೀರಿನಲ್ಲಿ ತೇಲುವ ಬಯಕೆ ಅದು ಹೆಮ್ಮರವಾಗಲು ಕೆಲವೇ ನಿಮಿಷಗಳು ಸಾಕಾಗಿತ್ತು, ನಾಳೆ ಹೋದರಾಯಿತು ಎನ್ನುವ ವಿಚಾರಗಳು ಈಗ ಪತನದ ಅಂಚಿಗೆ ಸರಿದು ಹೋದವು ಮುಂಜಾನೆ 8.00 ಗಂಟೆಯಿಂದ ಎಡೆಬಿಡದ ಕೆಲಸಗಳ ನಡುವೆ    ವಿದ್ಯಾರ್ಥಿಗಳೊಂದಿಗಿನ ದೇಶ ಪ್ರೇಮದ ಗುಂಗಲ್ಲಿದ್ದ ನಮಗೆ ಪ್ರಕೃತಿ ಮಡಿಲಿನ ಕರೆ.....ಹಾನಾಪೂರ ಎಸ್ ಪಿ ಗ್ರಾಮದ ರಾಜು ಕಳ್ಳಿಮನಿಯ ಟಂ ಟಂ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡಿತು.ಹಾನಾಪೂರ ಎಸ್ ಪಿ  ಗುಳೇದಗುಡ್ಡದಿಂದ ಬಹು ದೂರದ ಊರೇನಲ್ಲ ಕೇವಲ ಏಳು ಕಿ.ಮಿ.ಮಾತ್ರ ಹತ್ತರಿಂದ 20 ನಿಮಿಷದ ದಾರಿ. ಹಾನಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಒಂದು ದೊಡ್ಡ ಶೆಲೂಟ ಹೇಳಲೆ ಬೇಕು,ಏಕೆಂದರೆ ಈ ಪೂರ್ವದಲ್ಲಿ ನಾನೊಂದು ಆರ್ಟಿಕಲ್ ಬರೆದು ಹಾಲು ಹಂಡೆಗೆ  ದಾರಿ ಮಾಡಿದರೆ ಪ್ರವಾಸಿಗರಿಗೆ ಅನುಕೂಲ ವಾಗುತ್ತದೆ ಎಂದಿದ್ದೆ. ಅದಕ್ಕಾಗಿಯೆ ಈ ಸಿಮೆಂಟ ರಸ್ತೆ ಮಾಡಿದ್ದಾರೆ ಎಂದು ನಾನು ಹೇಳಲಾರೆ... ಹಾನಾಪೂರ ಎಸ್ ಪಿ  ಪಂಚಾಯತ್ ಗೆ . ನಮ್ಮೂರಿಗೆ ಅವಶ್ಯಕತೆ ಏನಿದೆ ಎಂಬುದನ್ನು ಚನ್ನಾಗಿಯೇ ಬಲ್ಲರು.. ಹೀಗಾಗಿ ಹಾಲು ಹಂಡೆಗೆ ಹೋಗಲು ಗಟ್ಟು ಮುಟ್ಟಾದ ರಸ್ತೆ ಮಾಡಿಸಿ ಪ್ರಕೃತಿ ಸೌಂದರ್ಯ ಸವಿಯಲು ಪ್ರಕೃತಿ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.ನಾಲ್ಕು ಬೈಕು ಒಂದು ಟಂ ಟಂ ಹಾಲ ಹಂಡೆಗೆ ಬಂದಾಗ ಹಾಲು ಹಂಡೆಯ ಹಿರಿದಾದ  ಕಲ್ಲು ಬಂಡೆಗಳು ಹಾರ್ದಿಕ ಸ್ವಾಗತ ನೀಡಿದವು.  ಹಂಡೆಯಲ್ಲಿಳಿಯಲು ಗಂಡೆದೆಯೇ ಬೇಕು ಆದರೇನು ಮಾಡುವುದು ! ಹಲವು ಬಾರೆ ನೋಡಿ ಬಂದ ಸ್ನೇಹಿತ, (ಈಗ ಪ್ರಭಾರ ಪ್ರಾಚಾರ್ಯ) ವಿಠ್ಠಲ ಕಳಸಾ ಮತ್ತು  ನಾನು ಹಂಡೆದಂತಹ ಹೊಂಡ ಇಳಿಯಲು ಮಾಡಿದ ಸಾಹಸ ಹಿಮಾಲಯ ಏರಲು ಮಾಡಿದ ತೇನಸಿಂಗನಿಗಿಂತ ಕಡಿಮೆ ಏನಲ್ಲ ,ಏಕೆಂದರೆ ಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದನ ಅನುಭವದ ಆಧಾರದ ಮೇಲೆ ನಾವು ಇಳಿಯಲು ಮಾಡಿದ ಹುಚ್ಚು ಸಾಹಸ ಅಚ್ಚಳಿಯದೆ ನಮ್ಮ ಮನಪಟಲದ ಮೇಲೆ ಉಳಿಯುವಂತೆ ಮಾಡಿತು. ಏಕೆಂದರೆ ಇಪ್ಪಡಿ, ಹೊಂಗೆ ವಿವಿಧ ಜಾತಿಯ ಕಂಟಿಗಳು ನಾಕಾಬಂದಿಗೆ ನಿಂತ ಕಾವುಲುಗಾರಂತೆ ನಮ್ಮ ನ್ನು ತಡೆಯಲು ಬಂದವು. ನಾವೇನು ಬಿಟ್ಟು ಹಿಂದಿರುಗಲು ಬಂದ ಹೇಡಿ ಸೈನಿಕರೆ ? ಅಡ್ಡಲಾಗಿ ಕೈಚಾಚಿ ನಿಂತ ಶಿಪಾಯಿಗಳನ್ನು ಸರಿಸಿ ನಡೆದಂತೆ ಮುನ್ನಡೆದೆವು .ಸುಮಾರು ದಿನಗಳಿಂದ ದುಮ್ಮಿಕ್ಕಿ ಹರಿದು ಈಗ ಸೊರಗಿದ ಜಲಪಾತ ಈಗ ಲೇಟಾಗಿ ಬಂದ ಹುಡುಗರನ್ನು ಗದರುವಂತೆ ಭಾಸವಾಗುತ್ತಿತ್ತು. ನಮ್ಮ ಉಪನ್ಯಾಸಕರ ಬಳಗದ ಮಹಿಳಾ ಉಪನ್ಯಾಸಕೀಯರು ಹಾಗೂ ಸಿಬ್ಬಂದಿ ವರ್ಗ ನಮ್ಮ  ಹಿಂದೆಯೇ ನಾವೇನು ಕಡಿಮೆಯೇ ಅನ್ನುವಂತೆ ಬರುತ್ತಿತ್ತು ! ಕಿತ್ತೂರು  ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ನಾಡಿನವರಲ್ಲವೆ ! ಎನ್ನುವಂತೆ ಹಳಸುಗಟ್ಟಿದ ಕಲ್ಲು ಮುಳ್ಳಿನ ಮಧ್ಯ ಜುಳು ಜುಳು ಹರಿಯುವ ನೀರಲ್ಲಿ ತೆವಳುತ್ತಾ ಧಾವಿಸಿ ಬರುವ ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ಉಪನ್ಯಾಸಕಿಯರು, ದ್ವಿತೀಯ ದರ್ಜೆ ಸಹಾಯಕರು.....ಪೆನ್ನು ಹಿಡಿದ ಕೈಗಳೂ ಗನ್ನು ಹಿಡಿಯಬಲ್ಲವು ಎನ್ನುವಂತೆ ಬರುತ್ತಿರುವ ಮಹಿಳೆಯರ  ಸಾಹಸ ಮೆಚ್ಚಲೆ ಬೇಕು. ಇರಲಿ ಹೊಂಡ ತಲುಪಿದೆ ಮೇಲೆ ಸಿಕ್ಕ ಆ ಸಂತೃಪ್ತಿ ,ತಲುಪುವಾಗ ಪಟ್ಟ ಶ್ರಮದ ಫಲಕ್ಕಿಂತ ಸಾವಿರ ಪಾಲು ಮೇಲಾಗಿತ್ತು.  ಪ್ರಕೃತಿಗೆ ಸರಸಮನಾರು  ನಿರಾಭರಣ ಸುಂದರಿ. ಕೃತ್ರಿಮವಾಗಿ ರೂಪಿಸಿದ ನೂರು  ಸರೋವರಗಳನ್ನು ನೂಕಾಚೆ. ನನ್ನೂರಿನ ಕೊಳ್ಳ ಅದು ನನಗೆ, ಸ್ವರ್ಗಕ್ಕಿಂತ ಮಿಗಿಲು ಹಾಗಾಗಿ ಹಲವು ದಿನಗಳಿಂದಲೂ ಹೋಗಲು ತವಕದಿಂದದ್ದ ನನ್ನ ಸಹಪಾಠಿಗಳಿಗೆ ಅದರ ಬಗ್ಗೆ  ಹೇಳಿದ ಧನ್ಯತಾ ಭಾವ,ಆದರೆ ನಮ್ಮ ಸಂಸ್ಥೆಯ ಭೂಗೋಳ ಶಾಸ್ತ್ರ ದ ಉಪನ್ಯಾಸಕರಿಗೆ ಜಲಪಾತದ ಕೆಳಭಾಗದಲ್ಲಿ ಬಂದು ಸೌಂದರ್ಯ ವನ್ನು ಆಸ್ವಾದಿಸಲಾಗಲಿಲ್ಲ ಎನ್ನುವ ಕೊರಗು ಒಂದು ಕಡೆಯಾದರೆ ನಾವು ಇನ್ನೂ ಬೇಗ ಬರಬೇಕಿತ್ತಲ್ಲ ಎನ್ನುವ ಅಳುಕು.ಪ್ರತಿ ಕಾರ್ಯ ಕ್ಕೆ ಸದಾ ಸಿದ್ದ ಎನ್ನುವ ಪಟ್ಟಣಶೆಟ್ಟಿ ಯವರು  ಜಲಪಾತದ  ಮೇಲ್ಬಾಗದಿಂದಲೆ ಅಭಯ. ಅವರು ಸೆರೆಹಿಡಿದ ಛಾಯಾಪ್ರತಿ ದ್ರೋಣದಲ್ಲಿ  ಸೆರೆಹಿಡಿದಂತೆ ಕಾಣುತ್ತಿರುವುದು ನಮ್ಮೆಲ್ಲ ಸಹೋದ್ಯೋಗಿಗಳ ಸಂತೋಷಕ್ಕೆ ಸಾಕ್ಷಿಯಾಯಿತು. ಇನ್ನು ನಮ್ಮ ಸಮಾಜ ಶಾಸ್ತ್ರ ಉಪನ್ಯಾಸಕರ ಊಟದ ಉಸ್ತುವಾರಿ. ...! ಮೊದಲೆ ಸಮಾಜ ಶಾಸ್ತ್ರಜ್ಞರು ಸರ್ವ ಜನರ ಸುಖಗಳ ಮೂಲ ಅರಿತವರು ಸಿಹಿ ಕಾರಗಳ ಸಮ ಮಿಶ್ರಣ ಮೇಲೆ ಸವಾರಿ, ಹೊಟ್ಟೆ ಬಿರಿಯುವಂತಹ ಬೋಜನ ಮೇಲೊಂದು ಜವಾರಿ  ಬಾಳಿ ಹಣ್ಣು, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಮೇಡಂ ನೀಡುವ ಎಲೆ ಅಡಿಕೆ... ಅದನ್ನು  ಒಡೆಯಲು ಕಲ್ಲಿಗೂ ಕೊರತೆ ....? ಬಂಡೆಯ ನಾಡಿನಲ್ಲಿ ಅಡಿಕೆ ಒಡೆಯಲು ಗುಂಡುಗಲ್ಲಿಗೂ ಬರ ! ನೂರು ಅಂಡಗ ಕಾಳು ಬೆಳದರೂ ಸೆರಗು ಜೋಳ ತಿನ್ನು ವ ರೈತನಂತೆ ಪರಿತಪಿಸಿದ್ದಂತು ಸತ್ಯ .ಆದರೆ ಬಂಡೆಯ ನಾಡಿನ ಜಲಪಾತದ ಬಡಿವಾರ ಮಳೆಯಾದ ಮರುದಿನ ಪೂರ್ತಿ  ನೋಡುವ ಶಪತದೊಂದಿಗೆ ಹಾಲು ಹಂಡೆಗೆ ವಿದಾಯ ಹೇಳಿ ಅಣ್ಣನ ಹೊಲದ ಸೂರ್ಯಕಾಂತಿಯ ಹೊಲದಲ್ಲಿ ಪುಷ್ಪ ದಂತೆ ಮುಖ ಅರಳಿಸಿ ಗಣಿತ ಉಪನ್ಯಾಸಕರ ಮೊಬೈಲ್  ಕ್ಯಾಮರಕ್ಕೆ ಆಹಾರವಾದೆವು.ಪಶ್ಚಿಮದ ಆಗಸದಲ್ಲಿ ಸೂರ್ಯ ನೂ ಕರ್ತವ್ಯಮುಗಿಸಿ ಮನೆಗೆ ನಡೆದಿದ್ದ ಈಗ  ಕಳ್ಳಿಮನಿ ರಾಜ ಮತ್ತೆ ಜೈಲಿಗೆ ತಳ್ಳುವ ಭಟನಂತೆ ನಮಗಾಗಿ ಕಾಯುತ್ತಿದ್ದ...ಅದೆ ಬದುಕೆಂಬ ಬಂದಿಖಾನೆಗೆ.. ಮತ್ತೆ ಹೆಂಡತಿ ..ಮಕ್ಕಳು... ಸಂಸಾರ ಕೃತ್ರಿಮ ಬದುಕು......ಮತ್ತೆ  ಬರುವೆ ಹಾಲಹಂಡೆ (ಹೊಂಡ) !!!! ನಮಸ್ಕಾರಗಳು.

Tuesday, August 9, 2022

* ಅರಳುವವು ಮುಂದೆ *

ನೂರು ಹೂವುಗಳು 
ಅರಳುವವು ಮುಂದೆ 
ನಾನವರ ಹಿಂದೆ ಹಿಂದೆ!!

ನಾ ತುಳಿದ ಹಾದಿಯ ಗಾದೆ
ಅದಿವರಿಗೆ ಪಡೆವ ಗಾದಿ 
ಮಲಗಲು ಬಿಡದೆ ನಡೆಸುವೆನು 
ಮುಂದೆ ಮುಂದೆ !!

ಕಲ್ಲು ಮುಳ್ಳಿನ ಅಂಕು 
ಡೊಂಕಿನ ಕವಲು ದಾರಿಯ 
ಬಯಲು ಆಲಯ ಗಣ
ಕಾಯುವೆನು ಹಿಂದೆ ಹಿಂದೆ !!

ಬಿಂಕದ ನಡಿಗೆಯನು ಕಲಿಸಿ
ಅಂಕದ ಹುಚ್ಚನೊಮ್ಮೆಬಿಡಿಸಿ
ಅಂಕೆಯಲಿಟ್ಟು ನಡೆಸುವೆನು 
ಮುಂದೆ ಮುಂದೆ !!

ದೇವರ ಗುಡಿಗೊಂದು ದಳ
ಹೆಂಗಳೆಯ ಮುಡಿಗೊಂದು ಮಳ
ಅಂಗವೆ ಮೇಲೊಂದು ದವಳ
ಸತ್ಸಂಗ ಸೇರಿಸುವೆನು 
ಮುಂದೆ ಮುಂದೆ !!

ಹಸಿದವನಿಗೆ ಹೊಸೆದು ಬಡಿಸಿ
ಕಸಿದವನಿಗೆ ಬುದ್ದಿಗಲಿಸಿ
ನಶೆ ಇಳಿಸಲು ಹೊಸ ತಂತ್ರ 
ಬಳಸುವೆನು ಮುಂದೆ ಮುಂದೆ !!

ತೋಟದ ಮಾಲಿ ನಾ ಹಟಯೋಗಿ 
ಪಾಠವೆ ಪರಿಮಳ, ಆಟವೆ 
ಅಂಗ ಸೌಸ್ಟವ ಅನುದಿನವೂ 
ಕಳೆ ಕೀಳುವೆ ಹಿಂದೆ ಹಿಂದೆ !!

Sunday, August 7, 2022

ನಾನು ನಾನಾಗಿರಲು ಬಿಡಿ

ನಾನು ನಾನಾಗಿರಲು ಬಿಡಿ 
ನನ್ನವರೆ ನಾನು ನಾನಾಗಿರಲು ಬಿಡಿ !
ನನ್ನತನವಿದೆ ಹಾಕಬೇಡಿ 
ಮನಸ್ಸಿನಂಗಳಕೆ ಬೇಡಿ. 
ಹಿಡಿದಿಡುವ ಅಧಿಕಾರಿ 
ನೀಡಿದವರಾರೊ ಕೋಡಿ ?.
ಹತ್ತಿರಕೆ ತರಬೇಡ 
ಹೀನ ಜನರ ಗಾಡಿ 
ಸುತ್ತಲೂ ತುಂಬಿಕೊಂಡಿದೆ ರಾಡಿ 
ಹೊತ್ತು ತರಬೇಡ ನೀ ಓಡಿ .
ನಾನಾವ ಜಾತಿ,ಧರ್ಮ,
ಸಂಪ್ರದಾಯದವನಿರಲಿ 
ನನ್ನಂತೆ ನಾನಿರಲು ಬಿಡಿ .
ಅನ್ನವನೆ ಉನ್ನಲಿ 
ಅಂಬಲಿಯೇ ತಿನ್ನಲಿ
ಮಿಕ್ಕಿ ಮೀನನ್ನೆ ನುಂಗಲಿ !
ನನ್ನ ನಾನಾಗಿರಲು ಬಿಡಿ
ನಾನಾಡುವ ಮಾತು ಭಾವನೆಗಳ
ಹಂಚಿಕೊಳ್ಳುವ ಧ್ವನಿಗಳು ಮಾತ್ರ
ಕನ್ನಡವೇ ಇರಲಿ 
ತೆಲುಗಾದರೂ ಇರಲಿ 
ತಗಲು ಹಾಕಿಕೊಳ್ಳದೆ 
ನಾನು ನಾನಾಗಿರಲು ಬಿಡಿ !
ಅನ್ಯರ ಬದುಕನ್ನು ನಿನ್ನದಕೆ 
ಹೋಲಿಸಿ ಭಿನ್ನ ಮಾಡಲು 
ಅಧಿಕಾರ ನೀಡಿದವರಾರೋ ಕೋಡಿ.
ನಿನ್ನದು ನಿನಗಿರಲಿ ಶ್ರೇಷ್ಠ .
ನನ್ನದು ನನಗದು ಉತ್ಕೃಷ್ಟ 
ಮಾಡಬೇಡ ಅನ್ಯರದು ಕನಿಷ್ಠ 
ನಾನು ನಾನಾಗಿಯೇ ಇರಲು ಬಿಡಿ
ನನ್ನ ತನಕೆ ಹಾಕಬೇಡ ನೀ ತಡಿ

Friday, August 5, 2022

ಸ್ನೇಹಿತನ ಗೃಹಪ್ರವೇಶ

ಹೊಸ ಗೂಡಲ್ಲರಳಿದ 
ಹಳೆಯ ಗೆಳೆಯರ ಬಳಗ. 
ಪ್ರೀತಿಯ ಆಹ್ವಾನಕೆ ಸೋತು
ಹಾರಿ ಬಂದಿತ್ತು, ಹತ್ತಿರ ಹತ್ತಿರ.
ಬೋಜನದ ಸವಿಗೂ ಮೀರಿದ
ಭಾವಗಳ ಸಂಗಮ.. 
ಭಾಷೆಗೂ ನಿಲುಕದ ಪ್ರೀತಿಯ 
ನಿಶೆಯಲ್ಲಿ ತೇಲಾಡಿ ಓಲಾಡಿ
ಹರಟಿದೆವು ನಾವೆಲ್ಲಾ....
ಅದೂ ಹುಡುಗರ ಭಾಷೆಯಲ್ಲಿ......... 
ದಾಟಿದ್ದು ಐವತ್ತರ ಗಡಿ 
ದಾಟಿಲ್ಲ ವಿನ್ನೂ ಚೇಷ್ಠೆ 
ಹತ್ತು ಹನ್ನೊಂದರ ಗಡಿ.
ಅದರಲ್ಲೂ ಖುಷಿಯಿತ್ತು
ಗೆಳೆತನ ಗಟ್ಟಿ ಗೂಳಿಸಬೇಕಿತ್ತು
ನಾಯ್ಕರನ ಬಳಗಕ್ಕೆ  ನಲಿಯಲು
ನೆವವೊಂದೆ ಸಾಕಾಗಿತ್ತು 
ಭಾವಗಳ ಬೆಸೆದು ಬಂಗಾರದ
ಹೊಳಪು ಕಾಣಬೇಕಿತ್ತು.
ನೂರ್ಕಾಲ ಬಾಳುವ ಚೈತನ್ಯ 
ಸ್ನೇಹಿತರ  ಬಳಗದಲ್ಲಿ ಪುಟಿದೆದ್ದಿತ್ತು

ಗೃಹಪ್ರವೇಶಕ್ಕೆ ಆಹ್ವಾನಿಸಿ 
ಸಂತೋಷ ಪಡಿಸಿದ ನಾಯ್ಕರ ಬಂಧುಗಳಿಗೆ 
ಸ್ನೇಹಿತರ ಬಳಗದಿಂದ ಹಾರ್ದಿಕ  ಶುಭಾಶಯಗಳು 
🌹🌹🌹🌹🌹🙏🙏🙏🙏🙏

Tuesday, August 2, 2022

ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಮಠದಲ್ಲಿ ಉಪನ್ಯಾಸ
























ದಿನಾಂಕ 31.07 2022 ರಂದು ಶ್ರೀ ಜಗದ್ಗುರ ಗುರುಸಿದ್ದೇಶ್ವರ ಬ್ರಹನ್ಮಠ ಗುಳೇದಗುಡ್ಡ ದಲ್ಲಿ ನನಗೆ ಲಘು ಉಪನ್ಯಾಸ ಮಾಡುವ  ಅವಕಾಶವನ್ನು ಶ್ರೀ ಮಠ ಅವಕಾಶ ಮಾಡಿಕೊಟ್ಟಿತ್ತು ಅದಕ್ಕೆ ಸ್ನೇಹಿತ ಸಹಾಯಕ ಪ್ರಾಧ್ಯಾtrಪಕ ಶ್ರೀ ಚಂದ್ರಶೇಖರ ಹೆಗಡೆ ಮುಖ್ಯ ಕಾರಣ. ಉಪನ್ಯಾಸ ಮುಗಿದ ಮೇಲೆ ಶ್ರೀ ಜಗದ್ಗುರು ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳು ಶ್ರಾವಣ ಮಾಸದ ಈ ಲಘ ಉಪನ್ಯಾಸಗಳನ್ನ ಕೃತಿ ರೂಪದಲ್ಲಿ ಏಕೆ ತರಬಾರದು ಎಂದು ಚಂದ್ರಶೇಖರ ಹೆಗಡೆಯವರಿಗೆ ಕೃತಿಯ ರೂಪದಲ್ಲಿ ತರುವ  ಜವಾಬ್ದಾರಿ ವಹಿಸಿದ ಪ್ರಯುಕ್ತ ನನ್ನ ಲಘು ಉಪನ್ಯಾಸವನ್ನು  ಬರೆದು ಅವರಿಗೆ ಕಳುಹಿಸಿ.ಅದನ್ನು  ಹಿತೈಸಿಗಳ ಮುಂದೆಯೂ ಇಡಬಯಿಸುತ್ತಿದ್ದೇನೆ.

ವಿಷಯ: ಐತಿಹಾಸಿಕ ಭಕ್ತಿ ಚಳುವಳಿಗಳು

             ನಿಸರ್ಗದ ವಿಸ್ಮಯಗಳಿಗೆ ಹೆದರಿದ ಮಾನವ ಅವುಗಳನ್ನು  ಅರಿಯಲು  ಮತ್ತು ಅವುಗಳಿಂದ ತಮಗೇನು ತೊಂದರೆಯಾಗ ಬಾರದೆಂದು  ಅಗೋಚರ ಶಕ್ತಿ ಗಳನ್ನು ಆರಾಧಿಸಲು ಧರ್ಮ ಮತ್ತು ದೇವರುಗಳನ್ನು  ಹುಟ್ಟು ಹಾಕಿದ ಇನ್ನು  ಭಾರತಕ್ಕೆ ಬರುವುದಾದರೆ ಭಾರತದ ಧರ್ಮದ ಬೇರುಗಳನ್ನು ಸಿಂಧೂ ನಾಗರಿಕತೆ ಮತ್ತು ವೈದಿಕ ಕಾಲದಲ್ಲಿ ಕಾಣುತ್ತೇವೆ .ಋಗ್ವೇದ ಕಾಲದಲ್ಲಿ ಪ್ರಕೃತಿ ದೇವರುಗಳನ್ನು ಸಂತೃಪ್ತಿ ಪಡಿಸಲು  ಋಕ್ಕುಗಳನ್ನು ಬರೆದು ರಾಗಬದ್ದವಾಗಿ ಹಾಡುತ್ತಿದ್ದರು.ಅವುಗಳ ಮುಖ್ಯ ಉದ್ದೇಶವೇ ದೇವರನ್ನು ಸಂತೃಪ್ತಿಪಡಿಸುವುದು ಮತ್ತು ಮೋಕ್ಷ ಸಾಧನೆ. ಅದು ಅವರ ಪರಮ ಗುರಿಯಾಗಿತ್ತು .ಸನಾತನ ಧರ್ಮದಲ್ಲಿ ಮೋಕ್ಷ ಸಾಧನೆಗೆ ಜ್ಞಾನ ಮಾರ್ಗ, ಕರ್ಮ ಮಾರ್ಗ, ಭಕ್ತಿ ಮಾರ್ಗ ಹೇಳಿದ್ದಾರೆ.ಅದರಲ್ಲಿ ಭಕ್ತಿ ಮಾರ್ಗವು ಪಾಮರರೂ ಕೂಡಾ ಮೋಕ್ಷ ಪಡೆಯಲು ಇರಬಹುದಾದ ಬಹು ಸುಲಭ ಮಾರ್ಗವಾಗಿದೆ.ಭಕ್ತಿ ಎಂದರೆ ಭಗವಂತನಲ್ಲಿ ಅಚಲವಾದ ನಂಬಿಗೆ ಇಡುವುದು ಎಂದರ್ಥ. ಪರಿಶುದ್ಧವಾದ ಭಕ್ತಿಯಿಂದ ದೇವರಲ್ಲಿ ಶರಣಾದರೆ ಭಗವಂತನ ಸ್ವರೂಪ ಸಾಕ್ಷಾತ್ಕಾರವಾಗುತ್ತದೆ ಇದನ್ನೆ ಮೋಕ್ಷ ಎನ್ನುವುರು.    ಆದರೆ ಉತ್ತರ ವೇದ ಕಾಲದಲ್ಲಿ ಪುರೋಹಿತರ ಸ್ವಾರ್ಥದ ಪರಿಣಾಮವಾಗಿ ಜನಸಾಮಾನ್ಯರು ಅವುಗಳ ಬಗ್ಗೆ ಪ್ರೀತಿಯನ್ನು ಕಳೆದುಕೊಳ್ಳುವಂತಾಯಿತು . ಫಲಶೃತಿಯಾಗಿ  ಹೊಸ ಧರ್ಮಗಳು ಉದಯಿಸಿದವು ತದನಂತರ  ವೈದಿಕ  ಧರ್ಮ ತನ್ನ ಮಹತ್ವವನ್ನು ಕಳೆದುಕೊಳ್ಳಬೇಕಾಯಿತು ಕಾಲಾನಂತರದಲ್ಲಿ ಅದರ ಪುನರುತ್ಥಾನ ಮಾಡಿದವರು ಗುಪ್ತರು. ಆದರೆ ಮತ್ತೆ ಹಿಂದೂ ಧರ್ಮಕ್ಕೆ ಹಿನ್ನಡೆಯಾಗುವ ಸನ್ನಿವೇಶ ಸೃಷ್ಟಿಯಾಯಿತು ಅದಕ್ಕೆ ಕಾರಣ ಅರಬ್ ನಾಡಿಲ್ಲಿ ಜನಿಸಿ ಪೂರ್ವದ ದೇಶದಲ್ಲಿ ಪ್ರಚಾರಕ್ಕೆ ಆಗಮಿಸಿದ ಇಸ್ಲಾಮಿಕ್ ಪ್ರಚಾರಕರು. ಇನ್ನೊಂದು ಕಾರಣ ಹಿಂದೂ ಧರ್ಮದಲ್ಲಿ ಸೇರುತ್ತಿರವ ಕೆಲವೊಂದು ಅನಿಷ್ಟ ಪದ್ದತಿಗಳು.ಇಂಥಹ ಸಂದರ್ಭದಲ್ಲಿ ಹಿಂದೂ ಧರ್ಮಕ್ಕೆ ನವ ಚೈತನ್ಯ ನೀಡಲು  ಹಾಗೂ ಹಿಂದೂ ಮುಸ್ಲಿಂ ಐಕ್ಯತೆ ಸಾಧಿಸಲು  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಂದೋಲನ ರೂಪದಲ್ಲಿ ಭಕ್ತಿ ಚಳುವಳಿ ಪ್ರಾರಂಭವಾದವು. ಆಚಾರ್ಯತ್ರಯರು  ,ಆಳ್ವಾರರು,  ನಾಯಿನಾರರು . ಆ ಧಾರ್ಮಿಕ ಆಂದೋಲನಕ್ಕೆ ಮೊದಲ್ಗೊಂಡರು  ಅದರಲ್ಲಿ ನಾವು ಮೊದಲು ನೋಡುವುದು ಶಂಕರಾಚಾರ್ಯರನ್ನು ಅವರು  ಅದ್ವೈತ ಸಿದ್ಧಾಂತ ಬೋಧಿಸಿದರು ಅದ್ವೈತ ಎಂದರೆ ಎರಡಲ್ಲದ್ದು ಅಂದರೆ ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ ಅಲ್ಲ ಎರಡೂ ಒಂದೇ. ನನ್ನಲ್ಲಿ ಆತ್ಮ ಇದೆ ಅಂದರೆ ದೇವರು ನನ್ನ ಹತ್ತಿರ ಇದ್ದಾನೆ ಅಂತಾ...  ಅಂದರೆ ದೇವರೂ ನನ್ನಲ್ಲಿ ಇರುವದರಿಂದ ನಾನೇ ದೇವರು   "ಅಹಂ ಬ್ರಹ್ಮಾಸ್ಮಿ "  ಎಂದರು.ಜಗತ್ತು ಮಾಯೆ (ಮಿತ್ಯ ದೇವರು ಮಾತ್ರ ಸತ್ಯ ಎಂದರು)ಮೋಕ್ಷ  ಸಾಧನೆಗೆ ಜ್ಞಾನ ಮಾರ್ಗ ಬೋಧಿಸಿದರು .ಆದರೆ ರಾಮಾನುಜರು ಶಂಕರಾಚಾರ್ಯರ ಮಾಯಾವಾದ ಖಂಡಿಸಿ ವಿಶಿಷ್ಠಾದ್ವೈತ ಬೋಧಿಸಿ ವಿಷ್ಣು ಮತ್ತು ಲಕ್ಷ್ಮಿ ಯನ್ನು ಆರಾಧಿಸಲು ಹೇಳಿದರು ಮತ್ತು ಅಸ್ಪೃಶ್ಯರೂ ಮೋಕ್ಷಕ್ಕೆ ಅರ್ಹರೆಂದು ಅವರನ್ನೂ  "ತಿರುಕುಲತ್ತರ್" ಎಂದರು ರಾಮಾನುಜಾಚಾರ್ಯರು ಮೋಕ್ಷಕ್ಕೆ ಭಕ್ತಿ ಮಾರ್ಗ ತೋರಿದರು. ಭಕ್ತಿ ಮಾರ್ಗ ಪಾಮರನೂ ಕೂಡಾ ಮೋಕ್ಷ ಪಡೆಯಲು ಅತ್ಯಂತ ಸುಲಭ ಮಾರ್ಗ ಅದಕ್ಕಾಗಿ ಅವರು ಗುರುವಿಗೆ ಶರಣಾಗತಿ ಭಕ್ತಿ  ಮಾರ್ಗ ವನ್ನು ಭೋಧಿಸಿದರು.ಇನ್ನು ಮಧ್ವಾಚಾರ್ಯರು ದೈತ ಸಿದ್ದಾಂತ ಬೋಧಿಸಿದರು ಇಲ್ಲಿ ಅವರು. ಮೂರು ಪ್ರಧಾನ ಅಂಶಗಳನ್ನು ತಿಳಸುತ್ತಾರೆ ಅವುಗಳೆಂದರೆ ಪರಮಾತ್ಮ, ಆತ್ಮ, ಜಡ.  ಆತ್ಮ ಮತ್ತು ಜಡ ಪರಮಾತ್ಮ ನಿಗೆ ಅದೀನ ಎಂದರು. ಅಂದರೆ ಆತ್ಮ ಮತ್ತು  ಪರಮಾತ್ಮ ಬೇರೆ ಬೇರೆ, ಇದನ್ನೆ ದೈತ ಎನ್ನುತ್ತಾರೆ. ಸಿದ್ಧಾಂತ ಪ್ರಚುರ ಪಡಿಸಲು ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದ್ದಾರೆ ಮತ್ತು ಮೂರು ಪ್ರಧಾನ ಅಂಶಗಳಲ್ಲಿ ಐದು ಭೇಧಗಳನ್ನು ಗುರುತಿಸುತ್ತಾರೆ.ಹೀಗೆ ದಕ್ಷಿಣ ಭಾರತದಲ್ಲಿ ಉದಯವಾದ ಧಾರ್ಮಿಕ ಆಂದೋಲನವನ್ನು ಉತ್ತರ ಭಾರತದಲ್ಲಿ ಜನಪ್ರಿಯ ಗೊಳಿಸಿದವರೆ ರಮಾನಂದರು ಇವರು ಧರ್ಮ ಪ್ರಚಾರಕ್ಕೆ ಸಂಸ್ಕೃತದ ಬದಲಾಗಿ ಹಿಂದಿಯನ್ನು ಬಳಸಿದರು ಹಾಗಾಗಿ ಉತ್ತರ ಭಾರತದಲ್ಲಿ ಬಹುಬೇಗ ಹರಡಿತು.ಮೋಕ್ಷಕ್ಕೆ ದೇವರು ತನ್ನ ಪೂಜಕನ ಜಾತಿ ಯಾವುದೆಂದು ಎಣಿಸುವುದಿಲ್ಲ ಪೂಜಿ ಸಲ್ಲಿಸುವವನ ಪ್ರೀತಿಯನ್ನು ಮಾತ್ರ ಬಯಸುತ್ತಾನೆ ಎಂದರು. ಅಲ್ಲದೆ ಮಾನವ ಸಮಾನತೆ,ಲಿಂಗ ಮಾನತೆ ಬೋಧಿಸಿದರು. ಇವರ ಶಿಷ್ಯ ರಾದ ಕಬೀರ್ ನಂತರ ಬಂದ ಗುರುನಾನಕರು ಚೈತನ್ಯರು ಮೀರಾಬಾಯಿ ಹಿಂದೂ ಧರ್ಮ ಕ್ಕೆ ಚೈತನ್ಯ ನೀಡಲು ಶ್ರಮಿಸಿದರು ವಿಶೇಷವಾಗಿ ಕಬೀರರು ಹಿಂದೂ ಮುಸ್ಲಿಂ ಏಕತೆಯನ್ನು ಬಯಸಿದ ಮೊದಲ ಸಂತರು.ಮೂರ್ತಿ ಪೂಜೆ ಖಂಡಿಸಿದರು ತೀರ್ಥ ಯಾತ್ರೆ, ಪವಿತ್ರ ಸ್ನಾನ ಅಥವಾ ಜೋರಾಗಿ ಪ್ರಾರ್ಥಿಸುವದರಿಂದ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದರು.ಗುರುನಾನಕರು ಹಿಂದೂ-ಮುಸ್ಲಿಂ ರ ತಪ್ಪು ತಿಳುವಳಿಕೆಗಳೆ ಘರ್ಷಣೆಗೆ ಕಾಣವೆಂದರು.ಇನ್ನು ಭಾರತದ ಪೂರ್ವ ಭಾಗದಲ್ಲಿ ಆಧುನಿಕ ವೈಷ್ಣವ ಪಂಥ ಸ್ಥಾಪಿಸಿ ಮೋಕ್ಷಕ್ಕೆ ರಾಗ ಉತ್ತಮ ಮಾರ್ಗ ವೆಂದು ಬೋಧಿಸಿದರು.ಮಧ್ಯಕಾಲೀನ ಭಾರತದಲ್ಲಿ ಇಸ್ಲಾಮ್ ಧರ್ಮದ ಪ್ರಭಾವದಿಂದ ಸೂಫಿ ಪಂಥ ಉದಯಿಸಿತು ಇವರು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅನೇಕ ಆಚರಣೆಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸಮಾನತೆ, ಲಿಂಗ ಸಮಾನತೆ,ಧಾರ್ಮಿಕ  ಸಾಮರಸ್ಯ ತರಲು ಪ್ರಯತ್ನಿಸಿದರು.
ಇಂದಿನ ಸಂಕಷ್ಟ ಕಾಲದಲ್ಲಿ ಭಕ್ತಿ ಪಂಥದ ಚಳುವಳಿಗಳ ಆದರ್ಶ,  ಚಿಂತನೆಗಳು ಮಾನವ ಕುಲದ ಉಳಿವು ಮತ್ತು ಬೆಳವಣಿಗೆಗೆ ಅತ್ಯವಶ್ಯಕವಾಗಿವೆ.

Monday, August 1, 2022

ಚುಟುಕುಗಳು

 

ಕರ್ತವ್ಯ ಮಾಡಿದವರಿಗಿಂತ  
ಕೈಚೀಲ ಹಿಡಿದರಿಗೆ 
ಮೊದಲ ಆದ್ಯತೆ ಸಿಕ್ಕರೆ,
ಕಾಯುವುದೊಂದೇ
ಕರ್ಮಚಾರಿಯ ಧರ್ಮ. 

ಹದವಾದ ಮಳೆ ಬಂದಾಗ
ಇದು ಯಾವ ಗ್ರಹ, ನಕ್ಷತ್ರ 
ಬಿತ್ತುವುದೊಂದೆ ಬಾಕಿ.
ಭತ್ತಾನೊ, ಗೋದಿನೊ ! 
ಫಲ ನೀಡುವ ಶಕ್ತಿಯ 
ಹೊಲವೆ ಮುಖ್ಯ.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...