Friday, June 26, 2020

* ಕನಕಾಂಗಿ *


ನಾನು ನಿನ್ನ ಪ್ರೀತಿಸುವೆ ಕುವರಿ
ಎಲ್ಲರ ಕಣ್ಣು ನಿನ್ನ ಮೇಲೆ ಪೋರಿ 
ನೀ ಪ್ರೀತಿಸಿದ್ಯಾರನ್ನ ಹೇಳೆ ಸುಕಮಾರಿ
ಹೃದಯ ಕದ್ದವನ ಹೇಳೊಂದು ಸಾರಿ//

ಚಂಚಲೆ ಮಂಚವೇರಲು ನೂರು ದಾರಿ
ನೇರ ಬಂದವರಿಗೆ ಬಹುದೂರ ದಾರಿ
ಅಡ್ಡ ದಾರಿ ಬಂದರೆ ಸಿಗುವಳೇನು ಸರಿ
ಅಟ್ಟಾಡಿಸಿ ಹೊಡೆಯುವಳು ಹೆಮ್ಮಾರಿ//

ಕಾಯಿಸಿ ಬಂದರು ಕೈವಲ್ಯ ಪಡೆದಂತೆ
ಕರ್ಮಯೋಗಿ ಹಿಡಿದವಳು ಕನಕಾಂಗಿ
ಬಡತನದಿ ಬಾಗ್ಯನೀಡುವಳು ಏಕಾಂಗಿ
ನೀನಿರವ ಮನೆಯ ನಿದ್ದೆಗೆಡಸತಿ ಕಮಂಗಿ//

ಬೇತಾಳದಂತ ಬೆನ್ನು ಹತ್ತುವರು ಬಹಳ
ತಲುಪಿದವ ತೃಪ್ತಿಯಿದಾನೇನು ಕೇಳು
ಪ್ರೀತಿಸುವ ಪರಿ ನನಗೊಂದೆಷ್ಟ ಹೇಳು
ಅರಿಯದೆ ಬೆನ್ನುಬಿದ್ದು ಆಗ್ಯಾರು ಹಾಳು//

                ಬಸನಗೌಡ ಗೌಡರ 


* ತಿಮ್ಮನ ಕೈತೋಟ *


ಅಮ್ಮ ನಿನ್ನ ಗೋಳು ಸಾಕು
ಅಪ್ಪನೇ ಏಕೆ ದುಡಿದು  ತರಬೇಕು
ನಾನು ದುಡಿದು ನಾಡಿಗೆ ಕೊಡುವೆ
ನೀ ಮುದ್ದೆ ಮಾಡಿ ಹಾಕು ಸಾಕು //

ನಮ್ಮ ಮನೆಯಲೊಂದು ತೋಟ
ಇರಲು ಚಿಂತೆ ಯಾಕೆ ಬೇಕು
ಶಾಲೆ ಮುಗಿಸಿ ಕಾಲ ಕಳೆಯದೆ
ಕಸ ತೆಗೆದು ನೀರು ಬಿಡ ಬೇಕು //

ಹಗಲು ಹೊತ್ತು ನೆಗಿಲು ಹೊಡೆದು
ಹದವ ಮಾಡಿ ಬೀಜ ಬಿತ್ತುವೆ
ಗೋದಿ, ಬಾರ್ಲಿ, ಭತ್ತ  ಬೆಳೆದು
ಅಪ್ಪನ ಶ್ರಮವ ಕಡಿಮೆ ಮಾಡುವೆ //

ರಾತ್ರಿ ಹೊತ್ತು  ಚಂದ್ರನದೆ ಗತ್ತು
ನಿಲ್ಲದೆ ಓಡುವನು ಯಾವತ್ತೂ
ಅಪ್ಪನ ಜೊತೆ ನೋಡುವೆ ಇವತ್ತು
ಜೊತೆಗೆ ತಿನ್ನುವೆ ಅಮ್ಮನ ಕೈತುತ್ತು /

        ಬಸನಗೌಡ ಗೌಡರ

Thursday, June 25, 2020

ಗಡಿ ಗದ್ದಲ

ಗಡಿಗಾಗಿ ಹೊಡೆದಾಟ ಇಂದಿನದಲ್ಲ
ಬರಿ ಮನುಷ್ಯರದೂ ಅಲ್ಲ,
ಪ್ರಾಣಿ ಪಕ್ಷಿಗಳಲ್ಲೂ ಉಂಟು//

ಅಣ್ಣ ತಮ್ಮಂದಿರು ಹೊಲದ ಗಡಿಗಾಗಿ
ಹೊಡೆದಾಟ, ಒಂದೆ ತಾಯಿ ಮಕ್ಕಳಾಗಿ.
ತಂದೆ ಮಕ್ಕಳ ಹೊಡೆದಾಟವು ಉಂಟು//

ನನ್ನ ಮಕ್ಕಳೇ ಹೊಡೆದಾಟ ಹಕ್ಕಿಗಾಗಿ
ವಿಭಾಗಿಸಿದರು ಕೋಣೆ ಗಡಿ ಗುರುತಿಸಿ
ನಾವು ಕಸಗೂಡಿಸಲು ವಿಭಾಗಿಸಿದ್ದುಂಟು//

ಮುಂದವರಿದವರು ನಾಗರಿಕರರಿವರು
ಮುಂದಿನ ತಲೆಮಾರಿಗೆ ಅನ್ಯ ಗ್ರಹಕ್ಕೂ ಗಡಿ
ನೆರೆಮನೆ ಅನ್ನದ ಗಡಿಯ ತಿಳಿಯದ್ದುಂಟು//

ಪಕ್ಕದ ಚೀನಾ ಪಾಕಿಸ್ತಾನ ಪಕೀರರದ್ದೇನು
ಮಹಾಬಿಡಿ ಇರುವಿಕೆ ತೋರಿಸಲಷ್ಟೆ
ಗೊತ್ತಿಲ್ಲ ಸಾವೆಂಬ ಸಂಗಮವುಂಟು//






Tuesday, June 23, 2020

* ಅಮರ ಜವಾನ *

ಸಮರವೀರರ ಅಮರ ನಾಮ
ಹಿಮದ ಗಿರಿಗಳಲಿ  ಮೊಳಗಲಿ
ಸಿಂದೂ ಕಂದರ ಗುರಿ ತಲುಪಲಿ
ಸಕಲ ತ್ಯಾಗಿ ಜವಾನ ಮೆರೆಯಲಿ//

ದೇಶಪ್ರೇಮವೊಂದೆ ಇವರ ಉಸಿರು
ಹಸಿರು ಪರ್ವತ ಸಾಲೆ ಇವರ ಹೆಸರು
ಕಣವಿಯಿಂದ ಜಿನುಗುವ ಜೀವಜಲ
ನಮ್ಮ ಯೋಧನ ದೀರ ರಕ್ತ ತರ್ಪಣ//

ಅಂದು ನಮ್ಮ ಋಷಿಯ ತಪದ ತಾನ
ಇಂದು ಯೋಧ ರಣಕಹಳೆ ಗಾಯನ
ಕ್ಷಣ ವಿಚಲಿತನಾದೆ ಎದೆಗೆ ವೈರಿ ಬಾಣ
ವೀರಮರಣ ಕಂಡೆ ದೇಶ ಗುಣಗಾನ//

ವೈರಿ ಪಡೆಗೆ ಎದೆಯೊಡ್ಡಿ ಹುಲ್ಲು ಕಡ್ಡಿ
ಹಿಡಿದು ಗೀರಿ ಸಿಂಹಗರ್ಜನೆ ಠೇಂಕರಿಸಿ
ಹರಸಾಹಸ ಮೆರೆದ ಮಹಾಸಾಹಸಿ
ಹಾರಿಸಿದೆಮ್ಮ ಹೆಮ್ಮೆ ದೇಶ ಬಾವುಟ//

ಹಿಂದೂಸಾಗರದಿಂದ ಸಿಂದೂಕಣೆವೆ
ಮರಳು ಕಣವಿಯಿಂದ ವಂಗಮುಖಜ
ಉಪಖಂಡ ವಂದಿಸಿತು ಇತಿಹಾಸದ
ಸಾವಿರ ಅರಸರ ಶಾಸನ ಸಾಲಿನಲ್ಲಿ //

       🖋️   ಬಸನಗೌಡ ಗೌಡರ

*ಒಂದಾಗು ಮಲ್ಲಿ *


ಶರವೇಗದಲ್ಲಿ ನಿನ್ನಂದ ಸೆಳೆದಾಗ
ಶುರುವಾಯಿತು ಮೌನಾಲಾಪ ರಾಗ
ಭಾವ ತೀರದಲಿ ಓಲಾಡುತಿದೆ ಕಲ್ಪನೆ
ಭಯ ಮೀರಿ ಪ್ರೀತಿ ಶುರುವಾಗಿದೆ//

ಕನಸಿನ ಕಲ್ಪನೆ ಕಾದು ನೀರಾಗಿ
ನಿನ್ನ ಕಡಲ ತೀರ ಸೇರುವೆ ಸಾಗಿ
ಕವನ ಗೀಚಲು ಪದಗಳಿಗೆ ತಡಕಾಡಿ
ತಲೆ ಸಿಡಿದು ಚೂರಾಗಿ ಸೇರುವೆ ಬಾಗಿ//

ಸಿಂಗಾರದ ಸಿರಿ ಬೇಲೂರು ಬಾಲಕಿ
ಜಕ್ಕಣ್ಣನ ಕೈಚಳಕ ಶಿಲ್ಪಕಲೆ ಮೋಡಿ
ತೆಕ್ಕೆಯಲಿ ಬರಸೆಳೆದು ಬಿಗಿದಪ್ಪುವೆ
ನೀನಿಕ್ಕುವ ಶರತ್ತು ನಾನೊಪ್ಪೀರುವೆ//

ಬರದೆ ಕಾದು ಕೆಳಗಿಳಿಸಿ ಬಿತ್ತಬೇಡ
ಜಾಲಿಮರ ಮುಳ್ಳಗಗಳ ಮೂಟೆ ಅಲ್ಲಿ
ಜಾಜಿಮಲ್ಲಿಗೆ ಕನಕಾಂಬರ ಬೆಳೆವೆನಲ್ಲಿ
ಸೇರಿ ಸುವಾಸನೆ ಸವಿಯಬೇಕು ಮಲ್ಲಿ//

ಸಾಗರ ಮುತ್ತಿಗೆನಿನ್ನ ನತ್ತಿನಲ್ಲಿರುವಾಸೆ
ಕತ್ತಲೆ ಕರೆಯುವುದು ಶಶಿಧರನ ಉಷೆ
ಕಾಣಬಲ್ಲೆಯಾ ಕವಿ ಹೃದಯ ಮೂಸೆ
ಕನಸು ನನಸು ಮಾಡೆನ್ನ ಒತ್ತಾಸೆ//

           ಬಸನಗೌಡ ಗೌಡರ

Sunday, June 21, 2020

*ಮರೆಯದ ಅಪ್ಪ *

ಅಪ್ಪ ಆಲದ ಮರ ತಾಯಿ ಗುಬ್ಬವ್ವ
ಅಪ್ಪನ ರಕ್ಷಣೆ ಅರಿವು ಬರದೆ ಹೋತು
ತಾಯಿ ಗುಬ್ಬಿ ಗೂಡು ಹೆಣೆದದ್ದು ಕಾಣಿಸಿತು
ಅಪ್ಪ ಗಾಳಿಮಳೆಗೆ ಬೆಂದದ್ದು ಮರೆತೆ ಬಿಟ್ಟಿ//

ತಾಯಿ ಹಸಿದಾಗ ಬಾಯಿಲೆ ತುತ್ತು ಇಟ್ಲು
ಚಳಿಗಾಲದಾಗ ರೆಕ್ಯಾಗ ಮುಚ್ಚಿಟ್ಲು
ಮಳೆಗೆ ತಲೆ ತೋಯದಂತೆ ಪಕ್ಕಾಬಿಟ್ಲು
ಅಪ್ಪ ಎಲ್ಲಾ ಮುಚ್ಚಿದ್ದು ಮರತೇ ಬಿಟ್ಟೆ//

ಅವ್ವ ನನ್ನ ಹೆತ್ತು ಹೊತ್ತ ಬಾರತಿಂದಳು
ರೋಗ ಬಂದರ ಕಣ್ಣೀರು ಹಾಕಿದಳು
ಕೆಳಗಿಳದರ ಚೀರಾಡಿ ಮೇಲೆಳದಳು
ಅಪ್ಪ ಎಲ್ಲರನ್ನ ಎತ್ತಿದ್ದು ಮರತೆ ಬಿಟ್ವಿ//

ಅವ್ವ ಹಾರಾಡಿ ಆಹಾರ ತಂದಳು
ಹೋರಾಡಿ ಬಾಯಿಗೆ ಹಾಕಿದಳು
ಅಪ್ಪ ಆಳಕ್ಕಿಳಿದ ಬಾನಿಗೆ ಬೆಳೆಸಿದ
ಮಧ್ಯ ನಿಂತ ಅಪ್ಪನ್ನ ಮರತೆಬಿಟ್ವಿ//

                 ಬಸನಗೌಡ ಗೌಡರ

Friday, June 19, 2020

* ಕಾಲಹರಣ *


ನಿಸರ್ಗ ನಾನರಿಯದೆ 
ಸ್ವರ್ಗ ಬಯಸಿ ಹೋದೆ
ಬೆತ್ತಲಾಗಿ ಕತ್ತಲೆಯಲ್ಲಿಳಿದೆ
ಸುತ್ತಲೂ ಬರಿ ಬಯಲೆ /
ಸಂಬಂಧಗಳು  ಮುಕ್ಕಿ ಹುರಿದು
ನೆಕ್ಕಿ ನೋಡಿ ಪಕ್ಕಕ್ಕಿಟ್ಟು
ತಕ್ಕಡಿಯ ಪರಡಿಗಿಟ್ಟರು ಹಾಡಿ / 
ತೂಗಿನೋಡಿದರು ಜಾಲಾಡಿ
ಬುದ್ಧಿ ಬರಲಿಲ್ಲ ....?
ಬಂದವರೆಲ್ಲ ನನ್ನವರೆಂದು
ನಿದ್ರೆಯಿಲ್ಲದೆ  ಸದ್ದು ಮಾಡಿ ಓಡಾಡಿದೆ  /
ಸದ್ದಿಲ್ಲದೆ  ಬಂದ ಹದ್ದುಗಳು 
ಅನುಕಿಸಿದವು ನನ್ನ ನೋಡಿ ..
ಕಾಲಮಿಂಚಿತ್ತು ಅರಿವೆಂಬ
ಕೋಲ್ಮಿಂಚು  ಸೆಳೆದಾಗ
ಬರಿ ಬೋಧನೆಯೊಂದೆ ಉಳಿದಿದ್ದು!
ಕೈಲಾಗದ ಹೇಡಿಯಾದೆ,,,
ತಿಳಿದವರು ಕೇಳಲಾರರು.!
ಕೇಳುವವರಿಗೆ ಅರ್ಥವಾಗದು.
ಕರ್ಮ ಶಪಿಸಿ ಧರ್ಮ ಹಿಡಿದೆ
ಇಲ್ಲೂ ನೂರಾರು  .....
ಹಿಡಿಯುವುದಾದರು ಯಾವುದನ್ನು ?
ತೆಲೆ ತಿರುಗಿ ಕಾಲವನ್ನು ಕೊಂದೆ
ಕರಿನೀರ ಶಿಕ್ಷೆಯೊಂದೆ ಬಾಕಿ /
            
         ಬಸನಗೌಡ ಗೌಡರ

Thursday, June 11, 2020

* ಸನ್ಯಾಸಿ *

ಮೀಸೆ, ಕೇಶ ಬಿಟ್ಟವನು, ತೆಗೆದವನಲ್ಲ ಸನ್ಯಾಸಿ
ಕಾವಿ ಧಾರಣೆ ಬೂದಿ ಬಳಿದವನಲ್ಲ ಸನ್ಯಾಸಿ
ಆಸೆಯ ತೊರೆದಾತ,ಸತ್ಯ ತಿಳಿದಾತ ಸನ್ಯಾಸಿ
ಸಾವಿನಲ್ಲೂ ಸಂತೋಷ ಕಂಡವ ಸನ್ಯಾಸಿ ಸಾಗಿ
ಭಯಪಡದವ ಯೋಗಿ ಭಯಪೀಡಿತ  ಭೋಗಿ

* ನನ್ನ ಪಾರಿವಾಳ *

ಕೊಲ್ಲಬೇಡ ಕಳ್ಳಿ, ಹೃದಯ ಕದ್ದ ಮಳ್ಳಿ
ಕಲ್ಲಿನಲ್ಲಿ ಕೆತ್ತದ  ಶಿಲ್ಪಿ ಕರದ ಪಾರಿವಾಳ
ಲಲ್ಲೆಗರೆದು ದೂರಸರಿವ ನಿನ್ನ ಚಾಳಿ
ಬಲ್ಲೆಯೇನು ಎನ್ನ ಮನದ ಬಿರುಗಾಳಿ//

ಆಗಸದ ಚತ್ತಿಗೆ ಏಣಿ ಹತ್ತಿ ಹಿಡಿಯಿಲೆ
ಬೊಗಸೆಗಣ್ಣಿನಲ್ಲಿ ಸೊಗಸು ಕಾಣಲು
ಸಾಗರದಾಳ ಮೀನ ಬಲೆ ಹೆಣೆಯಲೆ
ಸಾಕು ದೂರ ಸಂಚಿನಂಚಿನ ಲೀಲೆ //

ನಿನ್ನ ನೋಟದ ಕಲೆಗೆ ಕಡೆಗೀಲು ಹಾರಿ
ಓಲಾಡುತಿವೆ ಗಾಲಿಗಳು ಗತ್ತು ಜಾರಿ
ಓಡುತಿವೆ ಕುದುರೆಗಳು ಎನ್ನ ಕೈ ಮೀರಿ
ಪಡೆಯಲು ಕ್ರಮಿಸುವದು ಹೇಗೆ ದಾರಿ//

ಬಯಕೆಯ ಬೆನ್ನೇರಿ ಬದುಕಿನಲ್ಲಿ ಬಿದ್ದೆ
ಬಯಲಾಯಿತು ಭ್ರಮೆಯ ಕನಸಿನ ನಿದ್ದೆ
ಬಡಬಡಸಿ ನಿನ್ನ ನೆನಪಿನಲ್ಲಿ ನಾನೆದ್ದೆ
ಬಾರದೆ ಹೋದರೇನು? ಭವಿಯನ್ನೆ ಗೆದ್ದೆ //

                      ಬಸನಗೌಡ ಗೌಡರ

Monday, June 8, 2020

* ಸಂಶಯದ ಸುಳಿ *

ಸಂಶಯದ ಸುಳಿಗಾಳಿ
ಆವರಿಸಿದೆ ಎನ್ನ ಸನಿಹ
ನೇಸರನನ್ನೂ
ಸುತ್ತುವುದೇನೋ ಇನ್ನು ../
ಇಳೆಯ ಸುತ್ತ ಕಂಪನದ ಹುತ್ತ
ಬಾಳೆಲ್ಲ ಕತ್ತಲು,
ಬರಿ ಸುಂಟರ ಗಾಳಿ
ನನ್ನ ಕರ ನಾ  ನಂಬೆ
ಉಜ್ಜಿ ಉಜ್ಜಿ ತೊಳೆದರು
ಬಿಡಲೊಲ್ಲದು ಬೂತ /
ಮರೆಯದು ಆನುಮಾನ
ಮಡದಿ ಮಕ್ಕಳು ಕೆಮ್ಮಿದರು
ಮನ ತಲ್ಲಣ
ನೆರೆ ಹೊರೆಯುವರನ್ನು
ನೋಡುವ ಸೌಜನ್ಯ
ಕರಗಿ ಹೊಳೆ ಯಾಗಿ
ಹರಿಯುತಿದೆ, ಕೆಂಡ ಆರುವುದು
ಯಾವಾಗ ? /
ಮಾತು ಮೌನದಲಿ ಲೀನ
ಭಾವನೆಗಳ ರೌದ್ರ ತಾಂಡವ
ಗುಡುಗು ಸಿಡಿಲಿಗೆ ಆಹ್ವಾನ !
ಮಳೆ ಬರಲು ಮೀನ ಮೇಷ
ಹೃದಯ ಬಳ್ಳಿಯ ಬೇರಿಗೆ
ನೀರೆರೆದು ಚಿಗುರಿಸುವ ಬಗೆ ಹೇಗೆ?
ಬರಿ ಬರಡು ದನಗಳೆ
ಕರೆಯುವುದಾದರು ಹೇಗೆ ?
ಹಾಲುಕ್ಕಿಸಿ ಸೇರುವ ಮನೆಯ
ಕಂಬಗಳೆ ಅಲುಗಡುತಿವೆ
ವಾಸದ ಮನೆಗಳು
ಗಾಸಿಗೊಂಡಿವೆ...//
ಹೊಸ ಮನೆಯ ಕಟ್ಟೋಣ
ಕಂಬಗಳೆ ಇಲ್ಲದ,ಛಾವಣಿಯೇ ಇಲ್ಲದ,
ಬಾಗಿಲೆ ಇಲ್ಲದ ಭದ್ರತೆಯ ಮೀರಿದ,
ಮನೆ ಕಟ್ಟೋಣ ಸಂಶಯದ
ಗಾಳಿ ಮೀರೋಣ //

            ಬಸನಗೌಡ ಗೌಡರ

Sunday, June 7, 2020

* ಜೋಗಪ್ಪ *

ನಮ್ಮೂರ ಜೋಗಪ್ಪ
ನಮ್ಮನ್ನ ನೋಡಿ
ನಗತಾನ ಜೋರು ಕಣಪ್ಪ.
ತೆಲಿಮ್ಯಾಲ ಭಾರ
ಯಾಕಾರ ಕಾರಬಾರ. !
ಊಟಕ್ಕೆ  ಎರಡು ಹೊತ್ತು
ಬಾಳಂದರ ಮೂರು ಹೊತ್ತು 
ಬದಕುವದು ನಾಲ್ಕು ಹತ್ತು
ಇಲ್ಲಾಂದರ ಇವತ್ತು...
ಹೊಗಿ ಬೀಳುವುದು ಮರೆತು
ಹಗೆ ತುಂಬುವುದು ಕಂಡು
ಜೋಗಪ್ಪ ತಲೆ ಸುತ್ತು  !
ಇರಾಕ ಮನೆಯಿಲ್ಲಿ
ಹುಗಿಲಾಕ ಹೊಲ ಇಲ್ಲ
ತಗಲಾಕೊ ಚಿಂತೆ ಮೊದಲಿಲ್ಲ
ತಿರಿಗ್ಯಾಡಿ ಬದುಕು ಕಟ್ಯಾನ !
ಮೂರು ತಲೆ ತಿಂದರೂ ತೀರದು
ಆರು ತಲೆ ಚಿಂತೆ ..!
ಗಾಳಿಗೆ ಗುದ್ದಿ ಏಳು ರೋಗ
ಪಡಕೊಂಡು ದಾಳ ಉರಳಿಸಿದ
ಸಂತೋಷ ಸಾರಿ ಸಾರಿ
ಹೇಳೋರನ್ನ ಕಂಡು
ಗಹಗಹಿಸಿ ನಗತಾನ ಜೋಗಪ್ಪ.
ಊರೂರು ತಿರುಗ್ಯಾನ
ದಾರಿಯಲ್ಲಿ ಹಾಡ್ಯಾನ
ದೊರೆತನದ ಮಾತು ಕಲಿಸ್ಯಾನ
ಸಿರಿತನದ ಮದ ಇಳಿಸ್ಯಾನ
ಸಹಕಾರದ ಮಾತು ತಿಳಿಸ್ಯಾನ
ನಮ್ಮೂರ ಜೋಗಪ್ಪ
ನಮ್ಮನ್ನ ನೋಡಿ
ನಗತಾನ ಜೋರು ಕಣಪ್ಪ.


      ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...