Monday, February 28, 2022

* ಶಿವರಾತ್ರಿಯ ಶಿವಧ್ಯಾನ *

ಶಿವಧ್ಯಾನ ಮಾಡೋಣ 
ಬಾರೋ ಅಣ್ಣ 
ಶಿವರಾತ್ರಿ ಇಂದು, ಅನ್ನ ನೀರು ಬಿಟ್ಟು 
ಅರಿಷಡ್ವರ್ಗಗಳನ್ನು nಸುಟ್ಟು   
ಶಿವ ಧ್ಯಾನ ಮಾಡೋಣ ಅಣ್ಣ //
ಯುಗ ಮುಗಿದ ಯುಗಾದಿ  
ಬರಲು ಮುಂದೆ 
ಹಗೆತನವ ಕಳೆದು ಹರಗೋಣ ಜಾಗ 
ಬಿತ್ತೋಣ ಪ್ರೀತಿಯ ಬೀಜವಣ್ಣ //
ಹುಲ್ಲು ಕಸಕಡ್ಡ ಕಳೆ ತೆಗೆದು 
ಹುಲಸಾಗಿ ಬಾಳಿನ ಫಸಲು 
ಬೆಳೆಯೋಣ ಬಾರೊ ಅಣ್ಣ // 
ಧನಿದ ದೇಹಕ್ಕೆ ದ್ವನಿಯಾಗಿ 
ನಿಲ್ಲೋನವಣ್ಣ
ಮನಬಾರದ ಅನ್ನ ಸುರುವಿ 
ಹೆಣವಾಗುವ ಮುನ್ನ 
ಧ್ಯಾನದ ಗಣಿಯಾಗೋಣ 
ಬಾರೊ ಅಣ್ಣ// 
ಹೆಣ್ಣು ಮಣ್ಣುಗಳ ಹುಣ್ಣು ಹತ್ತಿ 
ಸುಣ್ಣದಂತೆ ಕರಗುವ ಮುನ್ನ
ಶಿವಧ್ಯಾನ ಮಾಡೋಣ 
ಬಾರೊ ಅಣ್ಣ //
ಶಿವನೆಂಬ ಭಾವ ಮನದಲ್ಲಿ 
ಮೊಳೆತರೆ ಮನೆಯೊಂದು 
ಸುಂದರವಾದ ಉದ್ಯಾನವನ ಅಣ್ಣ//
ಹಾರುವ ಬೂದಿಯ ಮೆತ್ತಿದ 
ಹರನನ್ನು ನೆನೆದರೆ ಹಾರಿ 
ಹೋಗುವದು ಜಾರತನದ 
ಭಾವವಣ್ಣ//
ಶಿವ ಧ್ಯಾನ ಮಾಡೋಣ 
ಬಾರೊ ಅಣ್ಣ, ಶಿವಧ್ಯಾನ 
ಮಾಡೋಣ ಬಾರೋ ಅಣ್ಣ//

Saturday, February 26, 2022

ರವಿವಾರ ರಗಳೆ ಚಿಂತನೆ

* ಪಟ್ಟ *

ಇಲ್ಲಿ ಕೋಳಿಗಳೆ ಕೂಗುವವು 
ಹುಂಜದ್ದೇನಿದ್ದರು ಬರಿ ಕರ್ತವ್ಯ. 
ಕಾಣುವುದು ಸತ್ಯ ಎನ್ನ ಲಾದೀತೆ ? 
ಮಣ್ಣು ಹೊತ್ತವರು ಮಣ್ಣಿನಲ್ಲಿಯೇ 
ಹೂತು ಹೋದರು ಖಡ್ಗ ಹಿಡಿದವರೆ 
ಕಟ್ಟಿದರೆಂದು ಹೊಗಿಳಿದೆವು  
ಕೋಳಿಗಳದೇನು ಮಹಾ ಬಿಡಿ.
ಇದನ್ನೆ ಉರು ಹೊಡೆದು ಜ್ಞಾನಿಗಳಾಗಿಲ್ಲವೆ?  
ದರ್ಪದಿಂದ ಓಣಿ ತಿರುಗಿದ ಹುಂಜ
ತಿಪ್ಪಿ ಕೆದರಿ ಕಾಲುಕೆದರಿದ್ದೆ ಬಂತು 
ಪಟ್ಟ ಕಟ್ಟುವುದು ಮೃದುವಾಗಿ ಮುತ್ತಟ್ಟರಿಗೆ ಮಾತ್ರ ,ಅಲ್ಲವೆ..?.ಇಲ್ಲ ಕೆಲವರು 
ಮೊಟ್ಟೆ ಇಟ್ಟದ್ದಕ್ಕೆ ಎಂದರೆ  
ಬೇಡ ಎನ್ನಲಾದೀತೆ ?  ಏನು ಮಾಡಲಾಗುವುದಿಲ್ಲ, 
ಕಣ್ಣಿದ್ದವರೆ  ಹೇಳಿದ್ದಾರಲ್ಲವೆ. 
ಬಹುಜನರು ಒಪ್ಪಿದರೆ ಅದೆ ಪ್ರಜಾಪ್ರಭುತ್ವ , 
ಅದುವೆ ಸರಿ, ಬಹುಪರಾಕ ಹೇಳಲೇ ಬೇಕು 
ಅಂದರೆ ನಂಬಲೇ ಬೇಕು  
ನಮ್ಮೂರ ನರಸಮ್ಮ ಆರು ಕೋಳಿ 
ಏಳು ಹುಂಜ ಸಾಕಿದ್ದಳು. 
ವಾರದ ಹಿಂದೆ ಆರು ಹುಂಜವೆ ಮಾಯ... 
ಕೇಳಿದೆ... ಅಜ್ಜಿ ಆರು ಹುಂಜ ?  
ಅಜ್ಜಿ ಹೇಳಿತು  " ಯಾವ 
ದಾಬಾದ ಒಲೆಯ ಮೇಲೆ, 
ಚಪ್ಪರಿಸುವವರ ನಾಲಿಗೆ ಮೇಲೆ 
ನಲಿದಾಡಿದೆ ಏನೊ.. ಎಚ್ಚರಿಸಿದವರಿಗೆ 
ಇದೆ ಗತಿ ಎನ್ನಬೇಕೆ !

Friday, February 25, 2022

* ವರ್ತಮಾನದ ಗಾಡಿ *

* ವರ್ತಮಾನದ ಗಾಡಿ *

ಇದು ಕರ್ತಾರನ ವರ್ತಮಾನದ
ಗಾಡಿ,ಇದಕ್ಕೆ ಜೋಡಿಸಿದರು
ಸಿಲಿಕಾನ್ ಚಕ್ರದ ಗಾಲಿ
ನಡೆಸಿವರು ಸುಡುಗಾಡ ದಾರಿ !  
ಕಡಿವಾಣ ವಿಲ್ಲದ ಕುದುರೆ
ಓಡುತಿದೆ ಕಣ್ಣಿಗೆ ಪಟ್ಟಿಯ ಕಟ್ಟಿ 
ಕಾಲನ ಕತ್ತಿ, ಮೇಲೆ ಭಿತ್ತಿ  /
ಯಾರ ಕುತ್ತಿಗೆಗೆ ಸುತ್ತುವುದು
ಯಾರು ಬಲ್ಲ ,ಅರಿಯದೆ ತಿರುಗಿದೆ
ಗಿರಗಿರನೆ ಮೇಲೆ ಕೆಳಗೆ,
ಕ್ರಮಿಸುವುದು ದೂರ....
ಮೇಲೆ ಹೋದರೆ ಕೆಳಗೆ ಇಳಿಯುವಾಶೆ
ಕೆಳಗಿಳಿದರೆ ಮೇಲೇರುವಾಶೆ //
ಬಯಕೆಗಳು ಹೊದ್ದು ಮಲಗಿವೆ
ನಿದ್ದೆ ಮಾಡಲು ಇಲ್ಲಿ ಇಲ್ಲ ಪುರಸೊತ್ತು 
ಮುಂದೆ ಹೋಗುವುದೇ ಎಲ್ಲರ ಚಿತ್ತ /
ಅರೆಗುಂಜಿ ಹೀರುವ ಇರುವೆಗೂ
ಹಿರಿಯಾಶೆ ಆರು ತಿಂಗಳ ಅನ್ನ
ತನ್ನದಾಗಿಸುವಾಸೆ, ಮೂರೆ  ತಿಂಗಳಿಗೆ
ಮುಗಿಯುವುದು ಅದರ ಸಂತೆ //
ಹೆಕ್ಕಿ ಕಟ್ಟುವ ಹುತ್ತ ಹೆರವರದು.
ಹತ್ತಿ ಹತ್ತಿ ನೋಡುವುದೆ
ಅದರ ಭ್ರಮಣದ ಸಂಭ್ರಮ/
ಹಾವುಗಳು ವಾಸಮಾಡುವವು
ಎನ್ನುವುದು ಅದಕೇನು ಗೊತ್ತು  //
ಹಾರುವ ಹಕ್ಕಿಗಳ ಮೇಲೆ
ಉರಿಯುವ ಅಸ್ತ್ರಗಳು,
ಯಾರ ದೀಪ ಆರಿದರೇನು ?
ದಾರಿ ನನ್ನದೆ ಆಗಬೇಕು !
ನಿನ್ನ ದಾರಿ ಕತ್ತಲಾದ ಮೇಲೆಯೇ
ಗೊತ್ತಾಗುವುದು ಕರ್ತಾರನ
ವರ್ತಮಾನದ ಗಾಡಿ  // 

Sunday, February 20, 2022

* ಕನ್ನಡದ ಕನಸುಗಾರ *

🌹🌹🌹🌹🌹🌹🌹🌹
ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ

ಕನ್ನಡದ ಮೇರು ಕವಿ ಶ್ರೀ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ನುಡಿನಮನ 
ಸ್ಫರ್ಧೆಗಾಗಿ ಕವನದ  ಧ್ವನಿ ಮುದ್ರಣ 

* ಕನ್ನಡದ ಕನಸುಗಾರ *

ಸಾಹಿತ್ಯ ಕಣವಿಯಲಿ ಸಾವಿರ 
ಮರ ಬೆಳದ ಕಾವಲುಗಾರ.
ಚಿನ್ನದಂತ ಚನ್ನವೀರ ನೀವೆನ್ನ 
ಕನ್ನಡ ಕಣಜ ಕಟ್ಟಿದ
ಕನಸುಗಾರ.//

ಭಾವಗಳಿಗೆ ಜೀವ ನೀಡುವ 
ಭವದ ಭಾಗ್ಯದ ಬಳೆಗಾರ 
ಹೊಂಬಳದಿ ನಂಬಿ ಬೆಳೆದ 
ಹೊಂಬೆಳಕಿನ ತುಂಬಾ ಸವಿಗಾರ//

ಬೆಂಬೆಳಕು ನೀಡಿ ಬೆಳೆದ 
ಸುನೀತಗಳ  ಸಾಮ್ರಾಟ್ .
ರಟ್ಟಿಗೂ ಗಟ್ಟಿ ಕಳೆ ನೀಡಿದ  
ಪಟ್ಟಿ ಕಿರಿಟದ ಪೇಟಗಾರ//

ನೀವಿಟ್ಟ ಹೆಜ್ಜೆಯ ಗುರುತು 
ಜ್ಞಾನ ಕಾಶಿಯಲಿ  ಸಂಚಾರ 
ನಾಡೆಲ್ಲ ಹಾಲು ಜೇನಾಗಿಸಿದ
ನವ್ಯಕಾವ್ಯ ಮನ್ವಂತರಗಾರ.//

ಮಾನವೀಯ ಮೌಲ್ಯಗಳ 
ವಿನಯದ ವಿಶಾಲ ಗುಣವಂತ .
ಕಾಣದಂತೆ ಮರೆಯಾದ  
ಸಂಸ್ಕಾರದ ಹೃದಯವಂತ.//

ಕನ್ನಡದ ತೇರು ಮುನ್ನಡೆಸಲು 
ನೀವೀರಬೇಕಿತ್ತು ಜೊತೆಗಾರ. 
ಕಾಣದ ಕರವೊಂದು ಕರೆದು  
ಕಣ್ಮುಂದೆ ಆದೆ ಮಾಯಗಾರ.//


 

Wednesday, February 16, 2022

ಬೆಳದಿಂಗಳ ಕಾವ್ಯಾನುಸಂಧಾನ ಸರಣಿ 4

ದಿನಾಂಕ 17.02.2022 ರಂದು ಶ್ರೀ ಚಂದ್ರ ಶೇಖರ
ಹೆಗಡೆ ಯವರ ಮನೆ ಅಂಗಳದಲ್ಲಿ ಭಾರತ ಹುಣ್ಣಿಮೆಯ ಹಬ್ಬದ ರಸದೌತಣ, ಬೆಳದಿಂಗಳ ಕಾವ್ಯನುಸಂದಾನ ಸರಣಿ 04 ರ ಸಂಭ್ರಮ. ಇಂದು ಇದು ವಿಶೇಷವಾಗಿ ಜರುಗಿದ ಕಾರ್ಯಕ್ರಮ ಯಾಕೆಂದರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದರ ಹಿರೇಮಠರು ನೀಡಿದ  ಅಲ್ಲಮಪ್ರಭುಗಳ "ನಿಜ ಮಾಯಾ ಜ್ಯೋತಿಯ ಆಯಾಮ ದರ್ಶನ ". ಕಲ್ಯಾಣದ ಶರಣರ ಅನುಭವ ಮಂಟಪ ನಾನು ನೋಡಿಲ್ಲ, ಆದರೆ ಅದರ   ಅನುಭಾವದ ಅನುಭೂತಿ ನಾ ಕಂಡೆ.ಶ್ರೀ ಜಗದ್ಗುರ ಪಟ್ಟಾದಾರ್ಯ 108 ಬಸವರಾಜ ಮಹಾಸ್ವಾಮಿಗಳ ಸಾನಿದ್ಯ , ಕನ್ನಡ ಕಲಿಸಿದ ಗುರುಗಳಾದ ಪ್ರೊ ಎಸ್ ಐ ರಾಜನಾಳ ಸರ್ ಅವರ ಅಲ್ಲಮನ ನೆಲೆಯಲ್ಲಿ ಬಂದ  ಆಧ್ಯಾತ್ಮಿಕ ಅನುಸಂದಾನ, ಶಿಕ್ಷಣ ಶಾಸ್ತ್ರ ಬೋಧಿಸಿದ ಡಾ ವಿ ಎ ಬೆನಕನಾಳ ಸರ್ ರ ತಾತ್ವಿಕವಾದ ಚಿಂತನೆಯ ಮಂಥನ ,ಎನ್ನ ಮನದಲ್ಲಿ ಮೂಡಿದ ಸಣ್ಣ ಸಂಶಯಗಳ ಸಂಹಾರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ  ಹೆಗ್ಗುರುತು ಮೂಡಿಸಿ ಸದ್ಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದಲಿಂಗಪ್ಪ ಬರಗುಂಡಿ ಸರ್ ರಂತಹ ದಿಗ್ಗಜರ ಮಧ್ಯೆ ನಾನೊಬ್ಬ ಪೆದ್ದ, ಎದ್ದು ಬಿದ್ದು ಕವನ ಓದಿದೆ ಎನ್ನುವುದಿಕ್ಕಿಂತ ಸದ್ಯ ಅವರ ಮಧ್ಯ ನನಗೂ ಒಂದು ಅವಕಾಶ ಸಿಕ್ಕಿತು ಎನ್ನುವುದು ನನ್ನ ಸಮಾಧಾನದ ಸಂಗತಿ .ಹೆಗಡೆಯವರ ಮನೆಯಂಗಳದಲ್ಲಿ ಚನ್ನವೀರ ಕಣವಿಯವರ ನುಡಿ ನಮನ, ಅವರು ನಮ್ಮನ್ನು ಅಗಲಿದ ದುಃಖ ನಡುವೆಯೂ ಅಲ್ಲಮನ ಆದರ್ಶ ದರ್ಶನ ಮಾಡಿಸಿದ  ಹೆಗಡೆ ಕುಟುಂಬ ವರ್ಗಕ್ಕೆ ನನ್ನ ದೊಂದ ದೀರ್ಘ ದಂಡ ನಮಸ್ಕಾರ. 

ಅನಿಸಿಕೆ :-

ಆಧುನಿಕ ಅಲ್ಲಮರ  ಅಪರಾವತಾರ  
ಅನುಭಾವಿಗಳ ನೆಲದಲ್ಲಿ ಬಂದು 
ಸೇರಿದೇವು ನಾವೆಲ್ಲ /
ಚಂದ್ರ...ಶೇಖರನ ಬಯಲು 
ಮನೆಯಂಗಳ 
ಹಿಟ್ಟು ಚೆಲ್ಲಿದಂತ
ಭಾರತ ಹುಣ್ಣಿಮೆ ಬೆಳದಿಂಗಳ /
ವಚನ  - ಕಾವ್ಯಗಳ 
ಅನುಸಂಧಾನದ ಮಂಗಳ
ಅದು ನಮಗೊ ನಿಮಗೊ 
ಎತ್ತಿಕೊಂಡವರ ಆಲಿಂಗನ/
ನಡೆದಷ್ಟು ದಾರಿಯಲ್ಲಿ  
ಪಡೆದಷ್ಟು ಭಾಗ್ಯ ,
ಮರೆತವನೆ ಮಂಗ/
ಬಸವನ ನೆಲದಲ್ಲಿ ಹಸಿವು ಹಿಂಗಿತ್ತು .
ಶರಣ ಅಲ್ಲಮರ  ವಚನಗಳ 
ಬೇವು ಬೆಲ್ಲ, 
ಅನುಭವಿಗಳ ಅನುಭಾವದಿಂದ 
ನಮಗಾಯಿತು ಜ್ಞಾನ ವೃದ್ದಿ /
ಎನ್ನ ಮನದಂಗಳದಲ್ಲಿ 
ಕನ್ನಡ ಸಾಹಿತ್ಯ ಸಮೃದ್ಧಿ //

Monday, February 14, 2022

*ಪ್ರೀತಿಸಲು ಒಂದು ದಿನ ಬೇಕೆ?*

ಪ್ರೀತಿಯಿಲ್ಲದ ಮೇಲೆ ಯಾತರ ಬದುಕು 
ಪ್ರೀತಿಸಲು ಒಂದು ದಿನ ಬೇಕೆ ?  
ಹುಚ್ಚ ಒಂದೆ ದಿನ ಸಾಕೆ ..!
ಪ್ರೀತಿಯ ಹಾದಿ ತುಳಿದ ಮ್ಯಾಲೆ 
ಚೌಕಾಸಿ ಯಾಕೆ, ಚೌಕಾಸಿ ಯಾಕೆ. //

ಪ್ರೀತಿ ಎಂಬ ಎರಡಕ್ಷರಕಾಗಿ 
ಸೋತು ಶರಣಾದವರು ಸಾವಿರ 
ಸಾವಿರವುಂಟು, ಬಿಟ್ಟು ಗೆದ್ದವರುಂಟೆ 
ಹುಚ್ಚಾ  ಹೆದರಿ ಸಾಯೋದ್ಯಾಕೆ, 
ಸಾಯೋದ್ಯಾಕೆ //

ಪ್ರೀತಿಗಾಗಿ ಕೊಂದವರ ಕಂಡೆ 
ನೊಂದವರ ಕಂಡೆ ಕಣ್ಣಿದ್ದು 
ಕುರುಡಾದವರ ಕಂಡೆ ಇದ್ದದ್ದು 
ಹೇಳಲು ತಡವರಿಸುವದು ಯಾಕೆ 
ತಡವರಿಸೋದೇಕೆ//

ಪ್ರೀತಿಯೆಂದರೆ ವ್ಯಾಮೋಹವಲ್ಲ
ಹಿಡಿದ ಪಾತ್ರದ ಮೇಲಿನ ಭಕ್ತಿ 
ಅಂತರಾತ್ಮದ ಮೂಲ ಶಕ್ತಿ 
ಸತ್ಪಾತ್ರ ಜಾಲದ ಉಕ್ತಿ, ಅರಿಯದೆ 
ಹುಚ್ಚರಂತೆ ತಿರಗತಿ ಯಾಕೆ//

ಪ್ರೀತಿಗಾಗಿಯೇ ಶಿಕ್ಷಣ ಐತಿ 
ಗುರುವಿನ ಮೇಲೈತಿ, ಶಿಷ್ಯರ ಮೇಲೈತಿ 
ಆಯ್ಕೆ ಮಾಡಿದ ವಿಷಯದ ಮೇಲೈತಿ
ಗುರುಮಂದಿರದ ಮೇಲೈತಿ,ಅದು ನಿನಗೆ 
ಗೊಂದಲ ಯಾಕೈತಿ ಗೊಂದಲ ಯಾಕೈತಿ //

Saturday, February 12, 2022

* ಮತ್ತೆ ಹೊಸ ಸಾಮ್ರಾಟ್ *

ನಾನು,ನನ್ನದು ನನ್ನಿಂದ 
ಎನ್ನುವವರೊಮ್ಮ ಚೆನ್ನಾಗಿಯೇ ನೋಡಬೇಕು, ಚೆನ್ನಾಗಿಯೇ ಕೇಳಬೇಕು !  
ಮಣ್ಣಿಗೂ ಹಪಹಪಿ ನನ್ನದು, ನನ್ನವರು 
ಯಾರೆಂದು ಮೊದಲೆ ಪಟ್ಟಿ 
ಮಾಡಿಟ್ಟಿದೆ ಜೋಕೆ ? 
ತನ್ನವರು ಯಾರೆಂದು ಭಿನ್ನ ಮಾಡಳು.. 
ಒಂದೆ, ಸಮಾನತೆ ! 
ಮೂರು ಆರರ ಜಾಗೆ  
ಇಲ್ಲಾ ನಾಲ್ಕು ಎಂಟರ ತುಂಡು. 
ಒಣಗಿದರೂ ಅಷ್ಟೇ 
ಒಣಗದಿದದ್ದರೂ ಅಷ್ಟೇ 
ಕೆರೋಸಿನ ಇದೆಯಲ್ಲ...! 
ಈಗೀಗ ಹರಿದ ಟ್ಯೂಬ್ 
ಟಾಯರ್ ಗಳು ಉಂಟು, 
ಬೂದಿ ಮಾಡಲು,ಅದಕ್ಕೂ 
ಇದೆಯಲ್ಲಾ ಮಣ್ಣಿನ ನಂಟು.  
ಅಸ್ತಿಗಳಿಗೂ ಗೌರವ ಉಂಟು..! 
ಮಣ್ಣಿನ ಮೇಲೆ ಸುರಿದ ವರುಣ 
ಸಾಲಾಗಿ  ಶಿಸ್ತಿನಿಂದ ನಡೆದಾಗ 
ನದಿ ಸರೋವರ, ಗಂಗೆ,ತುಂಗೆ..
ಹೆಸರು ಏನಾದರೇನು ಮುಳುಗಿಸಲು 
ಮುಳುಗಿ ತರ್ಪಣ ನೀಡಲು. 
ಮತ್ತೆ ಇದ್ದೆ ಇದೆ .ನನ್ನದು ನಿನ್ನದು   
ನೀನೇ ಗಳಿಸಿದ ಆಸ್ತಿ ಈಗ 
ನೀನು ಬರಿ ಅಸ್ತಿ ! ಆಸ್ತಿಗಾಗಿ ನಡೆದಿದೆ ಕುಸ್ತಿ                 ಸಂಬಂಧಿಕರೆ ಶತೃಗಳು. ಸಹೋದರರೆ ದಾಯಾದಿಗಳು,ಇವರಾರು ಅಪರಿಚಿರಲ್ಲ 
ಒಂದೊಮ್ಮೆ ನಿನ್ನಿಂದ ಸಹಾಯ ಪಡೆದವರೆ !  ಬಹುಪರಾಕ ಹೇಳಿದವರೆ,ಚಾಮರ ಬೀಸಿದವರೆ .... ಬೀಸಿದ ಗಾಳಿಗೆ ಉಬ್ಬಿ ಇದ್ದ ಬಿದ್ದವರನ್ನು ಸುಲಿದು ಮಹಲು ಮಂಟಪ, ಮಾನವತ್ವ ಮೀರೀದ 
ಸಾಮ್ರಾಜ್ಯ ಕಟ್ಟಿದೆ.....
ನನ್ನದೆ ಸಾಮ್ರಾಜ್ಯವೆಂದು ಭಾವಿಸಿದೆ.... ಉಡದಾರವನ್ನೆ ಬಿಡದವರು 
ಉಳಿಸುವರೇನು ಸಾಮ್ರಾಜ್ಯ 
ಮತ್ತೆ ಹೊಸ ಸಾಮ್ರಾಟ್ !

Wednesday, February 9, 2022

* ಹಾರುವ ಹುಚ್ಚು ಬಯಕೆ *

ಕೆಂದೂಳಿನ ರವಿ ಕಣ್ ತೆರೆದು
ಮುಂಜಾನೆಯ ಇಬ್ಬನಿ ಮುತ್ತಿಕ್ಕಿ
ಅರಳ್ಯಾವು ಹೂವು ಏಲಕ್ಕಿ 
ಹಾರಿವೆ ದುಂಬಿ ನೂರಾರು  // 

ಏರಿದ ಜವ್ವನಕೆ ಅರಿಯದ
ಹಾರುವ ಹುಚ್ಚು ಬಯಕೆ
ರೆಕ್ಕೆಗಳಿಲ್ಲದೆಯೂ ಹಾರಾಟ
ಸಿಕ್ಕ ಸಿಕ್ಕಲ್ಲಿ ಭಾವ ಎದೆ ತುಂಬಿ//

ಹಾಡಿ ಕುಣಿದು ಕುಪ್ಪಳಿಸಿತು 
ಮನ ,ನೂರಲ್ಲ ಸಾವಿರವಲ್ಲ
ಸಂತೈಸುವವರದೊ ಒಂದು ಸಂತೆ 
ಸೇರಿತು ಶಿಖರದ ತುದಿ ಮುಟ್ಟಿ// 

ಏರಿದ ಬಿರು ಕಿರಣ ಇಳಿದಾಗ 
ನೆರಳುಗಳು ಬೆಂಬತ್ತಿ ಇರಳು 
ಹರೆಯದ ಕೊರಳಿಗೆ ಸರಳು 
ಹರಳುಗಟ್ಟಿತು ಕಾಯ ಆಯತಪ್ಪಿ //

ಮುಡಿಗೇರಿಸಿ ಮುತ್ತಿಟ್ಟವರು
ಶಿವನ ಜಡೆಗಟ್ಟು ಕೈಮುಗಿದವರು
ಮುದಡಿದಾಗ ಕಾಲಡಿ ತುಳಿದು 
ಕಂಡರೂ ಕಾಣದಂತೆ ಬರಿ ಕಾಷ್ಟ//

Tuesday, February 8, 2022

* ಮುಕ್ತಿಯ ಗುರಿ ಒಂದೇ *

ಭವ್ಯ ಭಾರತ ಬೆಳಗಲು 
ಭೇಧವೆಂಬ ವಿಷ ತುಳಿದು
ಭಾವೈಕ್ಯತೆಯ ಹೂವು  
ಅರಳಿಸುವೆವು ಇಂದು
ಅರಳಿಸುವೆವು ಇಂದು//

ಸಂತರ ನಾಡಿದು ಪಂಥ ನೂರು 
ಮನೆ ಮಂದಿರ ಮಸೀದಿಗಳ 
ಮೇಲೆ,  ಶಾಂತಿಯ ಪಾರಿವಾಳ 
ಹಾರಿಸುವೆವು ಇಂದು 
ಹಾರಿಸುವೆವು ಇಂದು//

ಹಿಂದೂ, ಕ್ರೈಸ್ತ , ಶಿಖ್ ಇಸಾಯಿ
ಮುಸ್ಲಿಂ ರೆಲ್ಲರೂ ಒಂದೆ.. ಒಂದೆ.
ಭಾರತ ಮಾತೆಯ ಮಕ್ಕಳು ನಾವು
ಭವ್ಯ ಪರಂಪರೆಯ ವಾರಸಾದಾರರು
ನಾವೆಲ್ಲಾ  ಒಂದೇ. //

ತಂದು ಬೆಂಕಿಯ ಇಟ್ಟರೆ ಏನು 
ತಿಂದು ಜೀರ್ಣಿಸಿ ಬಿಟ್ಟೇವು
ಮೂರು ದೆಶೆಗೂ ಹರಡಿದ 
ಶರಧಿ,ಜಲ ವರುಣವಾಗಿ  
ಸುರಿಯುವೆವು ಇಂದು //
 
ನರನಾಡಿ ಯಂತೆ ಹರಿದ 
ಆಚಾರ್ಯತ್ರರ ವಿಚಾರಶೀಲ
ನುಡಿ ,ಪ್ರಸ್ಥಭೂಮಿಯ 
ಸ್ವಸ್ಥ ಮನ ಜನಗಳು, ತುಂತುರ 
ಹನಿ ಹರಡುವೆವು ಇಂದು  //

ಕಾಡು ಹಾದಿ, ಕಲ್ಲು ಮುಳ್ಳು 
ಅಡೆತಡೆಗಳು ನೂರೊಂದು  
ಮೆಟ್ಟಿ ನಡೆಯಲು ಪಥಗಳು 
ಹಲವು, ಭಕ್ತಿಯ ಗುರಿ ಒಂದೆ 
ಮುಕ್ತಿಯ ಗುರಿ ಒಂದೆ //

Monday, February 7, 2022

*ಉತ್ತಮ ಆರಂಭ ಅರ್ಧ ಮುಗಿದಂತೆ *

ಶಿಸ್ತು, ಸಂಸ್ಕಾರ ಅವಳಿ 
ಸಯಾಮಿ ಸಹೋದರರು.
ಒಬ್ಬರು ಬಿಟ್ಟು ಇನ್ನೊಬ್ಬರು 
ಇರಲಾರರು ..
ಒಂದು ನಾಣ್ಯದ ಎರಡು 
ಮುಖಗಳು ಬೇರೆಯಾದರೆ 
ನಡೆಯದ ಕೊಟ್ಟಿ ನಾಣ್ಯ  
ಯಾರು ಸ್ವೀಕರಿಸಲಾರರು !
ನೀಡುವವನು ಹತ್ತಿರ 
ಎತೆಚ್ಚವಾಗಿಯೇ  ಇರಬೇಕು 
ಪಡೆದು ಕೊಳ್ಳುವ ಗಿರಾಕಿಯೂ 
ಬಕಪಕ್ಷಿಯಂತೆ
ಬಡವನಾಗಿಯೆ ಇರಬೇಕು.
ಅವನನ್ನು ಸಿರಿವಂತರನ್ನಾಗಿ 
ಮಾಡಲು ಚೆನ್ನಾಗಿಯೇ ದುಡಿಯಬೇಕು ದುಡಿಸಿಕೊಳ್ಳಬೇಕು 
ದುಡಿಸಿಕೊಳ್ಳವವರಲ್ಲಿ ಕಡಿಮೆ ಯಾದರೆ ?
ಪಡೆಯುವವರಿಗೆ ನೀಡುವದಾದರೂ ಹೇಗೆ ?
ಹಡೆದವರ ಪಡೆಯಲು ಕಳುಹಿಸುವುದು 
ಸಹಜ .....ನೋಡದೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆಂದೇನು ಇಲ್ಲವಲ್ಲ? 
ಕಲ್ಲಾಗಿ ಕುಳಿತು ಕೊಳ್ಳುವ ಮೊದಲು 
ಸಿರಿವಂತರ ದೇಹಿಯಾದರೂ 
ತಪ್ಪೇನೂ ಇಲ್ಲ  ಒಪ್ಪಿ ನಡೆದರೆ ತೃಪ್ತಿ .
ಇಲ್ಲದಿದ್ದರೆ ಅಲ್ಲಿಗೆ ಸಮಾಪ್ತಿ !  
ಸಿರಿವಂತರಿದ್ದಾರೆ ಎಂದು 
ನೀಡಲು ಬಂದವನ ಗಡಗಿಯ 
ತುಂಬಾನೂ ಇರಬೇಕು ಅಂಬಲಿ ! 
ಪಡೆಯುವವನಿಗೂ ಹಸಿವು ಇರಬೇಕಲ್ಲ ? 
ಹಸಿವಿಲ್ಲದೆ ಬಂದರೆ ?
ಬಂದು ಹಾಕುವರು 
ದೆಶೆ ದೆಶೆಯಲ್ಲಿ ಘೋಷಣೆ... 
ಕಾರ ಇಲ್ಲ, ಉಪ್ಪುಇಲ್ಲ,..ಹುಳಿ ಇಲ್ಲ  
ನೀಡುವವನ ಗತಿ ಅದೋಗತಿ 
ದಂಡದ ಕೆಳಗಡೆ ದುಂಡಾಗಿ 
ಹೋಗಬೇಕಾದೀತು 
ಮಂಡಿಯೂರಿ ಉಣ್ಣಬೇಕಾದೀತು  
ಇದು ಬೇಕಾಗಿತ್ತಾ?  
ಹನ್ನೆರಡು ಜನ ಬುದ್ಧಿ ವಂತರು 
ಹುಟ್ಟುವುದು  ಸಹಜ... 
ಒಬ್ಬ ಆರು ಇನ್ನೊಬ್ಬ ಮೂರು  
ನಾಲ್ಕೂವರೆಗೆ ತಂದು 
ನಿಲ್ಲಿಸುವವರೂ ಉಂಟು 
ಚೌಕಾಸಿ ಬದುಕು...
ಕೊನೆಗಾಣಿಸಬೇಕು ಹೇಗೆ? 
ಆರಂಭದಲ್ಲಿಯೇ ಅವಳಿ ಸಹೋದರರನ್ನು 
ಹಿಡಿಯಬೇಕು  ಉತ್ತಮ ಆರಂಭ  
ಅಂತಿಮದ ಅರ್ಧ ಮುಗಿದಂತೆ 
ಯಾವುದು ಬೇಕು ?
ಅದು ನಿಮಗೆ ಬಿಟ್ಟಿದ್ದು. 

ಬಸನಗೌಡ ಗೌಡರ

Saturday, February 5, 2022

ಭಾವ ಪೂರ್ಣ ಶ್ರದ್ಧಾಂಜಲಿ

ಭಾವ ಪೂರ್ಣ ಶ್ರದ್ಧಾಂಜಲಿ 

* ಮಾಯೆ ಇನ್ನೇನು ಉಳಿಸಿದೆ *

ಕನ್ನಡದ ಕಬೀರ್ ನ 
ತನ್ನೊಡಲಿಗೆ ಸೇರಿಸಿದ 
ಮಣ್ಣು ನೀ ಮಾಯೆ 
ಇನ್ನೇನು ಉಳಿಸಿದೆ ಇನ್ನೇನು 
ಉಳಿಸಿದೆ//

ಭಾರತದ ಭಾವೈಕ್ಯತೆಯ 
ಭಾವಕ್ಕೆ ಜೀವ ತುಂಬಿ 
ನಮ್ಮ ಮನದಲ್ಲರಳಿದ 
ಭಿನ್ನತೆಯ ರೋಗ ಕಳೆದ 
ಸಂತನ ಎಳೆದೆ ಮಾಯೆ 
ಇನ್ನೇನು ಉಳಿಸಿದೆ 
ಇನ್ನೇನು ಉಳಿಸಿದೆ//

ಜಾತಿ ಧರ್ಮಗಳ ಮರ್ಮ 
ಅರುಹಿ ಜ್ಯೋತಿಯಂತೆ ಬೆಳಗಿದ 
ಸರ್ವ ಧರ್ಮ ಸಂತನ ಎಳೆದೆ 
ಮಾಯೆ  ಇನ್ನೇನು ಉಳಿಸಿದೆ 
ಇನ್ನೇನು ಉಳಸಿದೆ //

ಮನುಕುಲದ ಆದಿ ಅಂತ್ಯ 
ಮನಮಿಡಿಯುವಂತೆ ಹೇಳಿ 
ಮಾನವೀಯತೆಯ ಮೆರೆದ 
ಮುನಿವರ್ಯನೆಳೆದೆ ಮಾಯೆ  
ಇನ್ನೇನು ಉಳಿಸಿದೆ ಇನ್ನೇನು 
ಉಳಿಸಿದೆ //

ಗರ್ವ ಪಡಲಿಲ್ಲ ಧರ್ಮ ಮರೆಯಲಿಲ್ಲ 
ಧರ್ಮದ ಮೂಲ ತಿರಳು, ಸರಳ ಎಲ್ಲಾ. 
ತಿಳಿಸಿದವರನ್ನೆ ನೀ ಬಿಡಲಿಲ್ಲ 
ಮಾಯೆ ಇನ್ನೇನು ಉಳಸಿದೆ 
ಇನ್ನೇನು ಉಳಸಿದೆ//

ನಡೆವ ದಾರಿ ಬಿರಿದರೇನು 
ಹಿಡಿವ ಕರಗಳು ಜೊತೆಗಿವೆ 
ಮತ್ತೆ ಸಂತ ಸುತಾರೆ ಬರನೆ ?
ಮಾಯೆ ಇನ್ನೇನು ಉಳಸಿದೆ 
ಇನ್ನೇನು ಉಳಸಿದೆ//

Tuesday, February 1, 2022

* ಕ್ಷಮಿಸು ತಂದೆ *

ಈಗೀಗ ಗಾಂಧೀಜಿಯವರ ದೋಷಗಳನ್ನು ಪಟ್ಟಿ ಮಾಡುತ್ತಿರುವರಲ್ಲ ! 
ಮಾಡಲಿ ಬಿಡಿ ಅವರೂ ಮನುಷ್ಯರೆ ಅಲ್ಲವೆ ! 
ಗಾಂಧೀಜಿಯವರೆ ಹೇಳಿದ್ದಾರಲ್ಲವೆ ನಾನು ತಪ್ಪು ಮಾಡಿ ತಿದ್ದಿಕೊಂಡಿದ್ದೇನೆ ಎಂದು. 
ಯಾಕೆಂದರೆ ಅವರೂ ಮನುಷ್ಯರೆ ಅಲ್ಲವೆ.!
ಮಗನ ಮಂತ್ರಿ ಮಾಡಲು ಮೈಕ್ ಹಿಡಿಯಲಿಲ್ಲ.ಮೊಸಳೆ ಕಣ್ಣೀರು ಸುರಿಸಲಿಲ್ಲ 
ಆದರೂ ದೋಷಗಳ ಪಟ್ಟಿ!
ಮಾಡಲಿ ಬಿಡಿ ಅವರು ಮನುಷ್ಯರೆ ಅಲ್ಲವೆ!
ಕಂತೆ ಕಂತೆ ಹಣ ಎಣಿಸಲಿಲ್ಲ
ಮೈತುಂಬ ಸೂಟು ಬೂಟು ಹಾಕಲಿಲ್ಲ ಆದರೂ ದೋಷಗಳ ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ ಅವರು ಮನುಷ್ಯರೆ ಅಲ್ಲವೆ !
ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕುಟುಂಬದ ಪ್ರಗತಿ ಮರೆತರು, ಹಿಡಿದ ತತ್ವಕ್ಕಾಗಿ ಜೈಲಿನಲ್ಲಿ ಮುದ್ದೆ ಮುರಿದರು. ಕಸ್ತೂರಿ ಬಾ ಸಾವಿನ 
ಬಾಗಿಲು ತಟ್ಟುವಾಗ ಸೂಪ್ 
ಕುಡಿಯದಂತೆ ತಾಕೀತು ಮಾಡಿ 
ಸತ್ಯ ಅಹಿಂಸೆಯ ಬೆನ್ನು ಬಿದ್ದರಲ್ಲ  
ಆದರೂ ದೋಷಗಳ
ಪಟ್ಟಿ ! ಮಾಡಲಿ ಬಿಡಿ ಯಾಕೆಂದರೆ 
ಅವರು ಮನುಷ್ಯರೆ ಅಲ್ಲವೆ !
ದೇಶ ಸ್ವತಂತ್ರ ಗೊಂಡಾಗ 
ಮಂತ್ರಿಯಾಗಬೇಕೆಂದು ಸಮಾಲೋಚನೆ 
ಮಾಡಲಿಲ್ಲ! ನೌಕಾಲಿಯಲ್ಲಿ ಕೋಮುವಾದದ ದುಳ್ಳರಿಗೆ ಬಲಿಯಾದವರ ಕಣ್ಣೀರು ಒರೆಸಿದರಲ್ಲ.
ಆದ್ರೂ ಪಟ್ಟಿ ! ಮಾಡಲಿ ಬಿಡಿ  ಯಾಕೆಂದರೆ ಅವರು ಮನುಷ್ಯರೆ ಅಲ್ಲವೆ !
ಗಾಂಧೀಜಿ, ಗೊಡ್ಸೆ ಗುಂಡಿಗೆ ಹೆದರಿದರೊ 
ಇಲ್ಲೂ  ... ನಿತ್ಯ ಬರುವ ಗುಂಡಿಗೆ ನಾನಂತೂ ಹೇಳುವುದು ಒಂದೆ, ಕ್ಷಮಿಸು ತಂದೆ.

* ಬೇಂದ್ರೆ ಹಚ್ಚಿದ ಲಾಂದ್ರ*

 **ಅಕ್ಷರದೀಪ ಸಾಹಿತ್ಯ ಮತ್ತು
 ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು *ಬೆಂಗಳೂರು* 
 *ವರಕವಿ ದ.ರಾ. ಬೇಂದ್ರೆ*
ರವರ ಜನ್ಮದಿನದ ಪ್ರಯುಕ್ತ ರಾಜ್ಯ ಮಟ್ಟದ 
ಹನಿಗವನ ರಚನೆ  ಸ್ಪರ್ಧೆ


ಕತ್ತಲಾದ ಮನಕೆ  ಸುತ್ತಲೂ 
ಇರಲಿಲ್ಲ ಜಾತ್ರೆ ! 
ಭಾಷೆ ಭಾವ ಸೋತು 
ಬಾಳು ಅನ್ನವಿಲ್ಲದ ಪಾತ್ರೆ 
ಅರಳು ಹುರಿದಂತೆ  
ವರಕವಿಯ ಭಾವಗೀತೆ !
ಸಾಧನಕೇರಿಯಿಂದ ಸಾಗಿ ಬಂತು 
ಅಮೃತ ಮಾತ್ರೆ !
ಬೆಂದು ಬೆಳೆದ ಬೇಂದ್ರೆ 
ಹಾಕಿ ಎಳದ ಲಾಂದ್ರ !
ಭಾಷೆ ಬದುಕು ಅರಳಿ 
ನೆಲವು ಹುಣ್ಣಿಮೆಯ ಚಂದ್ರ  !
ಶ್ರೀ ಬಸನಗೌಡ ಗೌಡರ 
        ಗುಳೇದಗುಡ್ಡ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...