Saturday, June 26, 2021

* ಪ್ರಕಾಶ್ ರ ಪಜೀತಿ *

           ಕೊರೋನಾ ಕಾಲಘಟ್ಟದಲ್ಲಿ ನಡೆಯುವ ಘಟನೆಗಳೆ ಹಾಗೆ ಒಂದಕ್ಕಿಂಥ ಒಂದು ಅಪರೂಪದ ಘಟನೆಗಳೆ, ಅಂತಹ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಪ್ರಕಾಶ ಸರ್ ಉತ್ತಮ ಉಪನ್ಯಾಸಕರು ಯಾವಾಗಲೂ ಕಾಲೇಜು ಕೆಲಸದಲ್ಲಿ ತಲ್ಲೀನ ಅಂದು ವಿದ್ಯಾರ್ಥಿಗಳು ತಮ್ಮ  ಪಾಲಕರ ಮೂಲಕ ನೀಡಿದ ಅಸೈನಮೆಂಟ ತರಲು ಕಾಲೇಜಿಗೆ ಹೋದರು ಎಲ್ಲಾ ವಿಷಯಗಳ ಅಸೈನಮೆಂಟಗಳು ಗುಡ್ಡದ ರೀತಿ ಟೇಬಲ್ ಮೇಲೆ ವಿರಾಜಮಾನವಾಗಿದ್ದವು ತನ್ನ  ವಿಷಯದ ಅಸೈನಮೆಂಟ  ಹುಡುಕುವದು ಕಷ್ಟದ ಕೆಲಸವೇನು ಆಗಲಿಲ್ಲ. ಕಾರಣ  ಶಿಸ್ತಿಗೆ ಹೆಸರಾಗಿದ್ದ ಕಮಲಮ್ಮ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಅಸೈನಮೆಂಟಗಳನ್ನು ಅದರ ಬಂಡಲ್ ಮೇಲೆ ವಿಷಯದ ಹೆಸರು ಬರೆದು  ಒಪ್ಪುವಾಗಿ ಜೋಡಣೆ ಮಾಡಿ ಇಟ್ಟಿದ್ದಳು. ತನ್ನ ಪಾಲಿಗೆ ಬಂದ ಪೇಪರಗಳನ್ನು ನೀಟಾಗಿ ತೆಗೆದು ಓಪನ್ ಮಾಡಲು ಹೆದರಕೆ ! ಅದರಲ್ಲೇನಾದರು ಕೊರೋನಾ ಬಂದರೆ ? ಸರಿ ಪ್ರಾಚಾರ್ಯರು ತಂದಿಟ್ಟ ಬಾಟಲಿ ಕಡೆಗೆ ನೇರವಾಗಿ ನಡೆದರು.. ಸೆನಿಟೈಜರ ಬಾಟಲಿ ಒತ್ತಿ ಕೈತುಂಬಾ ಸುರುವಿದರು ಪ್ರಕಾಶ, ತುಸು ಹೆಚ್ಚೇ ಎನ್ನುವಷ್ಟು ಕೈಗಳಿಗೆ ಸೆನಿಟೈಜರ್ ಹಾಕಿ ತನ್ನ  ಟೇಬಲ್ ಎದುರುಗಡೆ ಕುಳಿತು ಸರಾಗವಾಗಿ ಒಂದೊಂದಾಗಿ ಪೇಪರ್ ಮೌಲ್ಯಮಾಪನ ಮಾಡಿದರು. ಗಂಟೆ ಎರಡಾದರೂ ಹೊತ್ತು ಹೋದದ್ದೆ ತಿಳಿಯಲಿಲ್ಲ ಕಮಲಮ್ಮ ವೇಳೆಯಾಯಿತು ಎಂದು ಹೇಳುವುದಾದರು ಹೇಗೆ ? ಉಳಿದ ಉಪನ್ಯಾಸಕರು ತಮ್ಮ ತಮ್ಮ ಮೌಲ್ಯಮಾಪನದಲ್ಲಿ ತಲ್ಲೀನರಾಗಿದ್ದರು ಕೊನೆಗೆ ಕಪಾಟುಗಳ, ಟಾಕಿಗಳ, ಗ್ಲಾಸಗಳ ಸಪ್ಪಳ ಅಧಿಕವಾದಾಗ ವೇಳಯ ಗಮನ ಎಲ್ರಿಗೂ ಬಂದದ್ದು. ಎಲ್ಲರೂ ಅವಸರ ಅವಸರವಾಗಿ ಬಂಡಲ್ ಕಟ್ಟಿ ಮನೆಯ ದಾರಿ ಹಿಡಿದರು .ಪ್ರಕಾಶ ಸರ್ ಕೂಡಾ ದಾರಿ ಬದಿಯಲ್ಲಿ ಕಂಡ ನಾಲ್ಕಾರು ಕಾಯಿಪಲ್ಲೆ ತೆಗೆದುಕೊಂಡು  ಮನೆ ತಲುಪಿದಾಗ ಗಂಟೆ ಎರಡೂವರೆ ತೋರಿಸುತ್ತಿತ್ತು .ಅವಸರವಾಗಿ ಬಾತರೂಮಿಗೆ ತೆರಳಿ, ತಿಕ್ಕಿರಿ ತಿಕ್ಕಿರಿ...ಅಂತಾರಲ್ಲ ಹಾಗೆ ಸಾಬೂನ ಹಚ್ಚಿ ಕೈತೊಳೆದಾಗ ಗಡಿಯಾರದ ದೊಡ್ಡ ಮುಳ್ಳು ಮೂರಕ್ಕೆ ಮುತ್ತಿಕ್ಕಲು ರಡಿಯಾಗಿತ್ತು ಅವತ್ತು ಕಾರು ಹುಣ್ಣಿಮೆ ಬೇರೆ ಒಂದರ ಮೇಲೆ ಒಂದರಂತೆ ಮೂರು ಹೋಳಗೆ ತಿಂದು ಗಡದ್ದಾಗಿ ಎದ್ದಾಗ ಮೂರುವರೆ ದಾಟಿ ಮುಳ್ಳು ನಾಲ್ಕು ಗಂಟೆಯ ಕಡೆ ಮುಖ ಮಾಡಿತ್ತು .ಇನ್ನು ಹಾಸಿಗೆ ಕಡೆ ಹೋಗುವುದಾದರೆ ಹೇಗೆ ? ಮತ್ತೆ ಪೇಪರ ಕಡೆ ಮುಖ ಮಾಡಿದರು ಪ್ರಕಾಶ್ . ಇನ್ನೇನು ಎರಡು ಪೇಪರ ತಿದ್ದಿಲ್ಲ ಮುದ್ದಿನ ಮಡದಿ ನುಲಿಯುತ್ತ ಹತ್ತಿರ ಸಾಗಿ  "ಸಾಕ ಬಿಡ್ರಿ ಎಷ್ಟು ದುಡಿತೀರಿ ರೆಷ್ಟ ಮಾಡರಲ್ಲಾ ಎಂದಳು.ಹತ್ತಿರ ಬಂದ ಗೀತಾಳಿಗೆ ಇವತ್ತು ಏನೊ ವಿಶೇಷ ಕಾಣಿಸಿತು.ಪ್ರಶ್ನೆ ಮಾಡಿಯೇ ಬಿಟ್ಟಳು ಅಲ್ಲ ರಿ ಇವತ್ತು " ಘಮ್ ಘಮಾ ಸೇಂಟ ವಾಸನೆ ನಿಮ್ಮಿಂದ ಹೊರಹೊಮ್ಮಲು ಹತ್ತಿದೆ ! "ಏನು ವಿಶೇಷ ಎಂದಳು ಯಾವುದಾದರು ಕಾರ್ಯಕ್ರಮಕ್ಕೆ ಹೋಗಿದ್ರೇನು?" ಹೆಂಡತಿ ಈ ವಿಪರೀತವಾದ ಪ್ರಶ್ನೆಗೆ ಸಿಡುಕಿದ ಪ್ರಕಾಶ ಪೇಪರ ತಿದ್ದಿ ಸಾಕಾಗೈತಿ ಇನ್ನೆಲ್ಲಿ ತಂದಿ ಸೇಂಟ್..! ಪೇಪರ್ ತಿದ್ದಿ ಬೆವರು ಇಳದೈತೆ ...ನಿನಗ ಸೇಂಟನ ಹುಚ್ಚ ಹಿಡದೈತಿ ನಡಿ. ಎಂದು ಗದರಿಸಿದರು. ನಿಮಗ ಪೇಪರ ಬಂದಾವ ಇಲ್ಲಾ ಯಾರಗ್ಯಾರ ಬಂದಾವ...ತಿದ್ದರಿ ಒಬ್ಬರ ಕುತಗೊಂಡ, ಸದಾಶಿವಗ ಅದೆ ಧ್ಯಾನ ಅಂತಾರಲ್ಲ ಒಬ್ಬರ ಕುಂದರ್ರಿ ಎಂದು ಸರಸರ ಒಳ ನಡೇದಳು ಗೀತಾ. ಪ್ರಕಾಶನ ತಲೆಯಲ್ಲಿ  ಹುಳು ಹೊಕ್ಕ ತಿರುಗಲು ಪ್ರಾರಂಭವಾಯಿತು .ಗೀತ ಹೀಗೇಕೆ ಹೇಳಿದಳು... ನಾನು ಸೇಂಟ ಎಂದರೆ ಮಾರು ದೂರ ಸರಿಯುವವನು ನನಗೆ ಸೇಂಟ ಹಚ್ಚಿದೆ ಎಂದು ಏಕೆ ಹೇಳಿದಳು ! ಮರಕುಟಕನು ಮರಕುಕ್ಕಿದ ಹಾಗೆ ಗೀತನ ಮಾತು ಕುಕ್ಕಲು ಪ್ರಾರಂಭವಾಯಿತು.ತಕ್ಷಣವೇ ಜ್ಞಾನೋದಯ ಯುರೇಕಾ ಯುರೇಕಾ... ಗೀತಾ ಎಲ್ಲಿದೀಯಾ ನೆನಪಾಯಿತು ಏನ್ರಿ ಅದು ಯುರೇಕಾ "ಇವತ್ತು ಕಾಲೇಜಿನಲ್ಲಿ ಅವಶ್ಯಕತೆಗಿಂತ ಹೆಚ್ಚೆ ಸೆನಿಟೈಜರ ಕೈಗೆ ಮೆತ್ತಿ ಕೊಂಡಿದ್ದೇವೆ" ಅದರ ಸುವಾಸನೆ ಇದೆಲ್ಲದಕ್ಕೆ ಕಾರಣ ! ಅದುವೆ ನಿನಗೆ ಸೇಂಟ ಆಗಿ ಹೊರಹೊಮ್ಮಿದೆ ಕನೆ ಆಗಲೆ ನೆನಪು ಆಗಿದ್ದರೆ ಹೀಗಾಗುತ್ತಿರಲಿಲ್ಲ. ಎಂದಾಗ ಗೀತಾ ಸುಸ್ತೊ ಸುಸ್ತು. 


                  ಬಸನಗೌಡ ಗೌಡರ

Friday, June 25, 2021

* ಅಡತಡೆಗಳು *

         ಅಂದು ಶ್ರೀನಿವಾಸ ಬೇಗನೆ ಎದ್ದು ಕರ್ಮಾದಿಗಳನ್ನು ಮುಗಿಸಿ ಸೇವ್ ಮಾಡಿಕೊಂಡು ಸ್ನಾನ ಮಾಡಿದಾಗ ಗಂಟೆ 6.00 ತೋರಿಸುತ್ತಿತ್ತು ತನ್ನ ಆಫೀಸಿಗೆ ತಲುಪಬೇಕಾದರೆ 2.00 ಗಂಟೆ ಪ್ರಯಾಣದ ಅವಧಿ ಬೇಕು, ಅರ್ಧ ಗಂಟೆಯಲ್ಲಿ ರಡಿಯಾಗಬೇಕು ಅಂದರೆ 6.30 ಕ್ಕೆ ಮನೆಯಿಂದ ಹೊರಗೆ ಬರಬೇಕು ಅಂದರೆ 7.00 ಕ್ಕೆ ಬಸ್  ನಿಲ್ದಾಣದಿಂದ ನಿರ್ಗಮಿಸು

ತಿತ್ತು ...ಬಸ್ ಚಾಲಕ ಮತ್ತು ನಿರ್ವಾಹಕರು ಎಂದೂ ಲೇಟ ಮಾಡಿದವರೆ ಅಲ್ಲ 5 ನಿಮಷ ತಡವಾದರೆ ಬಸ್ ನಿಲ್ದಾಣದಿಂದ ಹೊರಗೆ ಹೋಗಿರುತ್ತಿತ್ತು ಆ ಕಾರಣಕ್ಕೆ ಮನೆಯಿಂದ ಬಸ್ ನಿಲ್ದಾಣಕ್ಕೆ ಬರಬೇಕಂದರೆ ಇಪ್ಪತ್ತೈದು ನಿಮಿಷ ಇನ್ನೂ ಐದು ನಿಮಿಷ ಮೊದಲೆ ಬಸ್ ನಿಲ್ದಾಣ ಸೇರುತ್ತದ್ದ ಶ್ರೀನಿವಾಸ.ವೇಳೆಯನ್ನು ನಾವು ಹಿಂಬಾಲಿಸಿ ಹೋಗಬೇಕು ಅದು ನಮ್ಮನ್ನು  ಹಿಂಬಾಲಿಸದು ಹಾಗಾಗಿ ಈತ ಅದಕ್ಕೆ ಹೊಂದಿಕೊಂಡದ್ದಿ, ವ್ಯವಸ್ಥೆ ಎಂದರೆ ಹೀಗಿರಬೇಕು ಇಲ್ಲ ದಿದ್ದರೆ ವೇಳೆಗೆ ಎಂದೂ ಮಹತ್ವ ಬಾರದು.ಅದಕ್ಕೆ ಹೊಂದಿಕೊಳ್ಳಬೇಕಾಗಿತ್ತು ಶ್ರೀನಿವಾಸ.  ಅಂದು ಸೋಮವಾರ ಅತ್ಯಂತ ಚುರುಕಿನಿಂದ  ಎಲ್ಲಾ ಹೊಂದಿಸಿಕೊಂಡ ಏಕೆಂದರೆ  ವಾರಕ್ಕೊಮ್ಮೆ ಮನೆಗೆ ಬಂದು ಸೋಮವಾರ ತನ್ನ ಕರ್ತವ್ಯಕ್ಕೆ ತೆರಳುತ್ತಿದ್ದ. ಅದಕ್ಕೆ ಹೇಳಿದ್ದು 2.00 ಗಂಟೆ ಪ್ರಯಾಣವೆಂದದ್ದು. ಬಸ್ ಏರಿ ಕುಳಿತು ಕೊಳ್ಳುವುದು ಮಾತ್ರ ಚಾಲಕನ ಸಮೀಪ .ಮುಂದಿನ ಸೀಟ್ ಗೆ  ಕುಳಿತು ಕೊಳ್ಳುವ ಕಾರಣ ಎರಡು ಲಾಭ ಒಂದು ನಿಸರ್ಗ ಆಸ್ವಾದಿಸುವ ಅವಕಾಶ ಇನ್ನೊಂದು ಪ್ರಯಾಣಿಕರು ಹತ್ತುವ ಇಳಿಯುವಾಗ ಸಂಭವಿಸಬಹುದಾದ ಕಿರಿಕಿರಿ ಯಿಂದ ಪಾರಾಗಲು .ಅದೆ ತಾನೆ ಡೀಫೊಕ್ಕೆ ಹೊಸದಾಗಿ ಬಂದ ಬಸ್ಸು ಬಹಳ ಸುಂದರವಾಗಿತ್ತು ಚಾಲಕ ತನ್ನ ಪ್ರೀತಿಗಾಗಿ ಅಲಂಕರಿಸಿ ತನ್ನ ವಾಹನದ ಪ್ರಯಣಿಕರಿಗೆ ಸಂಗೀತ ಕೇಳುವ ಭಾಗ್ಯ ಕರುಣಿಸಿದ್ದ ಅದೂ ಡಾ ರಾಜಕುಮಾರ್, ಎಸ್ ಪಿ ಬಾಲಸುಬ್ರಹ್ಮಣ್ಯರ ಹಾಡುಗಳೆಂದರೆ ಕೇಳಬೇಕೆ ? ಟಾಕೀಜನಲ್ಲಿ ಕುಳಿತ ಅನುಭವವಾಗುತ್ತಿತ್ತು.ಚಾಲಕ ಹನಮಂತ ಬಹು ಶಿಸ್ತಿನ ಮನುಷ್ಯ ಹೀಗಾಗಿ ಇಂಜಿನ್ ಮೇಲೆ ಯಾರನ್ನು  ಕಾಲು ಮೇಲಿಟ್ಟು ಕುಳಿತು ಕೊಳ್ಳದಂತೆ ನೋಡಿಕೊಳ್ಳುತ್ತದ್ದ. ಆ ಬಸ್ ಇಂಜಿನ್ ಮೇಲೆ ಈ ರೀತಿಯಾಗಿ ಬರೆಯಿಸಲಾಗಿತ್ತು " ಇಂಜಿನ್ ಮೇಲೆ ಯಾರೂ ಕಾಲ ಇಡಬಾರದು" ಈ ಬರಹ ಶ್ರೀನಿವಾಸನ ಕಣ್ಣುಗಳನ್ನು ರಾಚುತ್ತಿತ್ತು ಆದರೆ ಯಾರೊಬ್ಬರು ಆ ಕಡೆ ಗಮನ ಹರಿಸಿದಂತೆ ಕಾಣಲಿಲ್ಲ ಬಹುಶ: ಅದು ಸರಿ ಎಂದು ಭಾವಸಿದ್ದರೊ ಅಥವಾ ಕೆಲಸದ ಒತ್ತಡದಲ್ಲಿ ಯಾರೂ ಗಮನಿಸಿರಲಿಲ್ಲವೊ ಗೊತ್ತಿಲ್ಲ. ಅವನು ಮಾತ್ರ ಯಾರಾದರು ಅದರ ಬಗ್ಗೆ ಮಾತಾಡಿದಾಗ ಮಾತಾಡಿದರಾಯಿತು ಎಂದು ಸುಮ್ಮನಿದ್ದ ಅದು ಕೂಡಿಯೂ  ಬರಲಿಲ್ಲ. ಆ ಮಾತು ಬೇರೆ ಬಸ್ಸು ವೇಗವಾಗಿ ಹೋಗುತ್ತಿತ್ತು ಆತನ ವಿಚಾರ ಲಹರಿಯೊ ಅಷ್ಟೇ ವಿಮಾನದ  ವೇಗವನ್ನು ಮೀರಿ ಹೋಗುತಿತ್ತು ಬಸ್ ನಲ್ಲಿ ದಡ್ ಎಂಬ ಶಬ್ದ !. ಏನಾಯಿತು ಎಂದು ನೋಡುವದರಲ್ಲಿಯೆ ಎರಡು ಹುಡುಗರು ಒಂದೆ ಸಮನೆ ಓಡುತ್ತಿರುವದು ಕಂಡಿತು. ಬಸ್ ನಿಲ್ಲಿಸಿ ವಾಹನ ತಪಾಸನೆ ಮಾಡಿದ, ಕಿಡಿಕಿಯ ಗಾಜು ಪುಡಿ ಪುಡಿಯಾಗಿ ಬಸ್ ಒಳಗಡೆ ಚೂರು ಪಾರಾಗಿ ಬಿದ್ದದ್ದು ಕಂಡಿತು. ಡ್ರೈವರ ಸೀದಾ ಕಿಡಿಕಿಯ ಬದಿಗೆ ಬಂದು ಮಮ್ಮಲು ಮರುಗಿದ ಅತ್ಯಂತ ಕುಕ್ಕುಲುತನದಿಂದ ಪ್ರೀತಿಸುತ್ತಿದ್ದ ಚಾಲಕನಿಗೆ ತನ್ನ ದೇಹಕ್ಕೆ ಗಾಯವಾದವನಂತೆ ವರ್ತಸಿದ ಏನು ಮಾಡುವುದು ನಡೆದು ಹೋಗಿದೆ .ಸುಮ್ಮನೆ ಬಿಡುವ ಹಾಗಿಲ್ಲ ಆ ಹುಡುಗರನ್ನ ಪತ್ತೆ ಹಚ್ಚಿ ತನ್ನ ಬಸ್ಸಿಗಾದ ಹಾನಿ ವಸೂಲು ಮಾಡಲು ತಯಾರಿಯಾದ.ವೇಳೆಯಾದ ಕಾರಣ ಪ್ರಯಾಣಿಕರು ಬೇಗ ತಾವು ಹೋಗಬೇಕಾದ ಸ್ಥಳ ತಲುಪಲು ತವಕಿಸುತ್ತಿದ್ದರೆ ಹನಮಂತ ಮಾತ್ರ ಹುಡುಗರನ್ನು ಪತ್ತೆ ಹಚ್ಚಿ ತನ್ನ ಬಸ್ಸಿಗಾದ ನಷ್ಟ ಬರಿಸಲು ತವಕಿಸುತ್ತಿದ್ದ ಅದೇನೊ ಅಂತಾರಲ್ಲ ಅಜ್ಜಿಗೆ ಅರಳಿ ಚಿಂತೆಯಾದರೆ ಮೊಮ್ಮಗಳಿಗೆ .... ಇರಲಿ ಬಸ್ ಗೆ ಕಲ್ಲು ಹೊಡೆದ ಹುಡುಗರ ಊರು ದೂರವೇನು ಇರಲಿಲ್ಲ ಬಸ್ ಹೋಗುವ ಮುಖ್ಯ ರಸ್ತೆಯಿಂದ ಒಂದು  ಕಿಲೋ ಮೀಟರ್ ದೂರದಲ್ಲಿ ಮಾತ್ರ ಸೀದಾ ಊರು ಮುಂದಿನ ಅಗಸಿ ಬಾಗಲಿಗೆ ತಂದು ನಿಲ್ಲಿಸಿದ. ಊರಿನ ಹುಡುಗರೆಲ್ಲಾ  ಓ...ಎಂದು ಚೀರುತ್ತಾ  ಬಸ್ ಊರಲ್ಲಿ ಬಂದಿದೆ ಎಂದು ಸಿಳ್ಳೆ ಕೆಕೆ ಹಾಕಿ ಕುಣಿದಾಡಿದರು. ಹನುಮಂತ ತಮ್ಮೂರಿನ ಹುಡುಗರು ಬಸ್ ಗೆ ಕಲ್ಲು ಹೊಡೆದ ಬಗ್ಗೆ  ಹೇಳಿದ ಸುದ್ದಿಯು ಬಾಯಿಯಿಂದ ಬಾಯಿಗೆ ಹರಡಿ ಕಲ್ಲು ಹೊಡೆದ ಹುಡುಗರನ್ನು ಪತ್ತೆ. ಹಚ್ಚುವದು ಕಷ್ಟವಾಗಲಿಲ್ಲ ಆದರೆ ಹುಡುಗರು ನಾಪತ್ತೆಯಾಗಿದ್ದರು ಹುಡುಗರ ಪೊಷಕರನ್ನು ಕರೆಸಲು ಅಗಸಿಯಲ್ಲಿದ್ದ ಪ್ರಮುಖರು ಮುಂದಾದರು. ಬಸ್ಸಿಗೆ ಕಲ್ಲು ಹೊಡೆದ ಕಲ್ಯಾನ ಅಜ್ಜಿಯನ್ನು ಕರೆಯಿಸಲಾಯಿತು ಬಡಗಿ ಊರುತ್ತ ಬಂದ ಅಜ್ಜಿ  ಸರ್ ಅವ ನಮಗ ಮಿಕ್ಯಾನ ಏನು ಮಾಡುದರಿ ಈಗ್ಗೆ ಎರಡು ವರ್ಷಗಳ ಹಿಂದ ಅವರಪ್ಪ ತೀರಿಕೊಂಡ ಅವರವ್ವ ನಿಮ್ಮ ಊರಾಗ ಇರಲಿ ಅಂತ ಬಿಟ್ಟು ಹೋಗ್ಯಾಳು ಹೇಳುವವರು ಕೇಳುವರು ಯಾರು ಇಲ್ದಂಗ ಆಗ್ಯಾದ, ನಾನರ ಏನು ಮಾಡಲಿ ? ಎರಡು ಒದ್ದು ಹಿಡಕೊಂಡು ಹೋಗರಿ, ಬುದ್ದಿ ಕಲಸರಿ.ಅಂದಳು.ಬಸ್ಸಿಗೆ ಆದ ಹಾನಿಗೆ ಬಂದರೆ ಬುದ್ಧಿ ಕಲಿಸುವ ಉಸಾಬರಿ ಬ್ಯಾರೆ ಮೈಮೇಲೆ ಬಿದ್ದಂಗಾಯಿತು ಹನಮಂತನ ಸ್ಥಿತಿ, ಗುಡ್ಡ ಅಗಿದು ಇಲಿ ಹಿಡಂದಂಗ ಅನ್ನುವ ಪರಿಸ್ಥಿತಿಗೆ ಬಂದು ನಿಂತಿತು.ಇನ್ನೊಬ್ಬ ಹುಡುಗನನ್ನು ಪತ್ತೆ ಹೆಚ್ಚಿದರೆ ಅದು ಇನ್ನೊಂದು ಕರುಣಾಜನಕ ಕಥೆ, ತಾಯಿಯನ್ನು ಕಳೆದುಕೊಂಡ ಕುಡುಕ ತಂದೆಯ ಮಗ. ಸಂಶೋಧನೆ ಮಾಡಿ ಹನುಮಂತನ ಪರಿಹಾರ ಕೊಡಿಸುವ ವೇಳೆಗೆ ಅಸಾಯಕ ಪ್ರಯಾಣಿಕರ ಮಾನಸಿಕ ವೇದನೆಗೆ ಪರಿಹಾರ ಕೊಡುವವರು ಯಾರು ? ನಿಧಾನವಾಗಿ ಎದ್ದು ನಿಂತ ಪ್ರಯಾಣಿಕ  "ಬಸ್ ಬಿಡಿ ಅದರ  ನಷ್ಟ ನಾನೆ ಬರಿಸುತ್ತೇನೆ" ! ಎಂದಾಗ ಪ್ರಯಾಣಿಕರ ಕ್ಷಣ ಸ್ತಂಬಿಭೂತರಾದರು ಅವರಾರು ಬೇರೆ ಅಲ್ಲ, ಅದೆ ಬಸ್ ನಲ್ಲಿ ಚನ್ನಾಗಿ ಡ್ರೆಸ್ ಮಾಡಿ, ಸೂಕ್ಷ್ಮವಾಗಿ ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದ ಪ್ರಯಾಣಿಕ ಒಬ್ಬ ನಿವೃತ್ತ ಶಿಕ್ಷಕ . ತನ್ನ ಸೇವಾವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳ ಹಣೆಬರಹ ಬರೆದ ಮತ್ತು ಇಂತಹ ನೂರಾರು ಕರುಣಾಜನಕ ಸಂಗತಿಗಳನ್ನು ಕಂಡ ಪುಣ್ಯಾತ್ಮ! ಬಸ್ ತನ್ನ ಗುರಿ ತಲುಪಲು ಮತ್ತೆ ದಾವಂತದಿಂದ ಓಡಲು ಪ್ರಾರಂಭಿಸಿತು.ಶ್ರೀನಿವಾಸನ ಮನದಲ್ಲಿ ಹಳ್ಳಿಯ ಬದುಕಿನಲ್ಲಿ ನಡೆಯುವ ಅದೆಷ್ಟು ಇಂತಹ ಮಕ್ಕಳ ಜೀವನದ ಚಿತ್ರಣಗಳು ಬಯಲಿಗೆ ಬರದೆ ಮುರುಟಿ ಹೋಗತ್ತಿರಬಹುದು ಎಂದು ಲೆಕ್ಕ ಹಾಕುತ್ತಿರುವಾಗಲೆ ಕಂಡಕ್ಟರ್ ಸೀಟಿ ವಾಸ್ತವಕ್ಕೆ ಕರೆದು ತಂದಿತ್ತು ಶ್ರೀನಿವಾಸ ಬಾಸ್ ನ ಕಾಕದೃಷ್ಟಿಯನ್ನು ನೆನೆಯುತ್ತ ಆಫೀಸ್ ದಾರಿ ಹಿಡಿದ. 


                  ಬಸನಗೌಡ ಗೌಡರ

Wednesday, June 23, 2021

* ಕಳೆ ಕೀಳುವವ ಕೀಳಲ್ಲ *

ಕೆಲಸ ಮಾಡಿಸುವವರು ಶ್ರೇಷ್ಠರೆಂದು 
ಕಳಸದಂತೆ ತುಂಬಿರುವರು ಜಗತುಂಬ
ವಲಸೆ ತರಬೇಕು ಕೆಲಸಗಾರನ್ನೆಲ್ಲಿಂದ! 

ಕಾಯಕವೆ ಕೈಲಾಸವೆಂದ ಬಸವಣ್ಣ
ಕಾರ್ಯ ಮಾಡಿಸಿದವನೆಂದಿಲ್ಲ ಅಣ್ಣ
ಕರ್ಮದ ತಾರತಮ್ಯ ಬಂತು ಎಲ್ಲಿಂದ!

ಕಳೆ ಕೀಳುವವನು ಕುಲ ಕೀಳಾದರೆ
ಜೋಳ ಬೆಳೆಯುವುದೆ ಹೊಲತುಂಬಾ
ಗಾಳ ಹಾಕಲು ಬಂದವ ಜಾಣನಿಂದು!

ಹಾಲು ನೀಡುವ ಹಸವಿನೊಲವಿಲ್ಲ
ಗೆಲುವು ತರುವದೆ ಆರೋಗ್ಯ ಬಲವು
ಹಾಲಾಗಿದೆ ಹಾಲಹಲ ಪಾಕೀಟಿನಿಂದ!

ರಾಸುಗಳಿರದ ಬೇಸಾಯ ಬಯಸಿ 
ಕಸಕೀಳದೆ ಭೂಮಿ ಹಸನುಗೊಳಿಸಿ
ಹೊಸ ಹೊಲಸಿರದ ಬಾಳು ಬೇಕಿಂದು!

ಕೆಸರಾದ ಕೈ ಮೊಸರಾಗಬೇಕು ಇಂದು
ಮೊಸಗಾರನ ಕೈ ಮೊದಲೆಂದರೆ ಸರಿಸಿ
ಹೊಸ ಮನ್ವಂತರ ಬೆಳಗಲಿ ಮುಂದೆ !

           ಬಸನಗೌಡ ಗೌಡರ

Sunday, June 20, 2021

*ಅಪ್ಪನೆಂಬ ಆಲದ ಮರ *

ಅಪ್ಪನೆಂಬ ಆಲದ ಮರ 
ಅದೆಷ್ಟು ಕಷ್ಟ ಕಾರ್ಪಣ್ಯಗಳನ್ನು        
ತಲೆಯಲ್ಲಿ ತುಂಬಿ ತುಂಬು ಕುಟುಂಬ            
ನಡೆಸಿದ ಅರಿವವಾಗಲಿಲ್ಲ ನನಗಂದು.
ಅಗ ಕಂಡದ್ದು ಬರಿ ಕೋಪದಿಂದ ಕೂಡಿದ,                    ಸಿಡುಕಿನೊಳಗೆ ಪ್ರೀತಿಯ ಲಾವಾರಸ ತುಂಬಿದ ಜ್ವಾಲಾಮುಖಿ. ಅಗಾಗ ಹೊರಹೊಮ್ಮುವ            
ಅಕ್ಕರೆಯ ಕಾರಂಜಿ ......
ಅರಿತು ನಡೆಯಲಾಗದೆ ಸಿಲುಕುತ್ತಿದ್ದೆ 
ನಾ ಒಮ್ಮೊಮ್ಮೆ  ಗೊಂದಲದ ಗೊಡಾಗಿ...!
ತಿದ್ಧಿ ತೀಡಿದ ತತ್ವಜ್ಞಾನಿ. ಕುಕ್ಕುಲುತನದಿಂದ 
ಕಥೆ ಹೇಳಿದ ಕಥೆಗಾರ, 
ತಪ್ಪಿ ನೆಡೆದಾಗ ದುರ್ವಾಸಮುನಿ .
ಬಡಿದ ದಿನಗಳೆ ಇಲ್ಲ ಬರಿ ಕಣ್ಣು ಕಿಸಿದೆ ಅಬ್ಬರಿಸಿ ನಿಬ್ಬೆರಗಾಗುವಂತೆ ಮಾಡಿದ ಮಾಂತ್ರಿಕ .
ನಿದ್ದೆಯಲ್ಲಿಯೂ ಸಿದ್ಧರಾಗಿರಬೇಕಿತ್ತು ಶಿಸ್ತಿನ  
ಸಿಪಾಯಿಯಾಗಿ ಹಾಗಾಗಿ ಈಗ 
ನಾನೊಬ್ಬ ಉಪಯೋಗಿ.... 
ಇಲ್ಲದಿದ್ದರೆ ಹೇಗಾಗುತ್ತಿದ್ದೆ ಯೋಗಿ ?
ಪ್ರೀತಿ, ಪ್ರೇಮ,ಕೋಪ,ತಾಪಗಳನು 
ಕಲಸಿ ಬದುಕೆಂಬ ಕುಲುಮೆಯಲ್ಲಿ ಕುಟ್ಟಿ,ತಟ್ಟಿ              ಬಂಗಾರದ ಗಟ್ಟಿ ಮಾಡಿದೆ ಅಪ್ಪ.....
ಇಂದು ನೀನಿಲ್ಲದೆ  ವಂದಿಸಲಿ ಯಾರೆಗೆ ?
ಸಂದಿಗೊಂದೊಂದು ದೇವರು 
ತಂದು  ಕೊಡಬಲ್ಲರೆ ಕರಳು ಬಳ್ಳಿಯ 
ಕಾಳಜಿಯೊಂದನು ? 
ಗುರುವಿನ ಗುಲಾಮನನ್ನಾಗಿ ನೀ ನನ್ನ  
ತಿದ್ದದಿದ್ದರೆ ಹೇಗಾಗುತ್ತಿದ್ದ ನಾ ದೊರೆ ?.
ಎಲ್ಲಾ ಇದೆ  ಆದರೆ ನೀನು ಇಲ್ಲ 
ಎನ್ನುವುದೊಂದೆ ನನ್ನ ಆನಂದಕ್ಕೆ ಬರೆ 
ನಿನ್ನ ನೆನಪು ಅಜರಾಮರ ಅದೊಂದೆ 
ಅನುದಿನದ ಸಂತೋಷಕ್ಕೆ ಆಸರೆ.
ಎಲ್ಲರಿಗೂ ವಿಶ್ವ  ಅಪ್ಪಂದಿರ ದಿನದ ಶುಭಾಶಯಗಳು
 
           ಬಸನಗೌಡ ಗೌಡರ

Thursday, June 17, 2021

ಮುಂಜಾನೆ ಮಳೆ

ಮುಂಜಾನೆ ಮಂಜೇರಿ ಮುದುರಿ 
ಕುಳಿತು ನಂಜಾಗಿದೆ ಮನವೆಲ್ಲ 
ಸಂಜೆಗೆ ಬರಬಾರದಿತ್ತೆ ಮಳೆರಾಯ ! 
ಜಿಟಿ ಜಿಟಿ ನಿನ್ನಯ ನಾದ ವಟ ವಟ
ಮಡದಿಯ ಬಾಣ, ಶಟಗೊಂಡರೆ 
ಸಿಗದು ಮುಂಜಾನೆ ಬಾನ ....
ರವಿಯನ್ನೆ ಮರೆಮಾಡಿ ತೋರುವೆ ನಿನ್ನ ಕಿರಣ 
ನುಜ್ಜು ಗುಜ್ಜಾದ ಗಟಾರಗಳೆ ಎನ್ನ ಕಾಯುವ ಯಜಮಾನ ! ತಪ್ಪಿ ನಡೆದರೆ ಅಗುಬೇಕು ಶರಣು
ಸುರಪಾನ ಮಾಡಿ ಸಂದಿಗೊಂದಿ ತಿರುಗಿದ ಶರಣ 
ನಗದೆ ಇರಲಾರನೆ ನನ್ನ ಓಲಾಟ ಪಾತ್ರ ನೋಡಿ !
ಎಂದೋ ಮಡಿಚಿಟ್ಟ ಮುದ್ದಿನ ಛತ್ರಿ 
ಮುಟ್ಟಲು ಹೋದರೆ ಮುಣಿಸದಿರದೆ ಅರಳಲು ..
ಹದ ಬಂದಾಗ ಬರುವರೆಂದು.. ?
ನಿದ್ದೆಗೆ ಜಾರಿದ ಜಾಡ 
ಸದ್ದು ಮಾಡಿದರೆ ಎದ್ದು ಎಲ್ಲಿಗೆ ಹೋಗಬೇಕು.. 
ಹದ್ದು ಮೀರಿ ಹೋಗಲು ನೀನೆ ಕಾರಣ.
ಪೈರುಗಳ ಜೊತೆ ವೈರಿಗಳಿಗೂ ಸಂಭ್ರಮ 
ಕಳೆ ಕೀಳುವವರಿಗೂ ಆಗಬೇಕು ನಾಳೆ ನಾ ಶರಣು .
ಬಡಪಾಯಿ ರೈತ ಪಡಬಾರದ 
ಸಂಕಟ ನೋಡು...! 
ಗುಡಿಗುಂಡಾರಗಳಲಿ ಹುಡುಗರದೆ ಕಾಟ 
ಆಡಲು ಜಾಗವಿಲ್ಲ ಮಾಡುವದಾದರು ಏನು ? 
ಹಿಡಿ ಶಾಪ ಹಾಕಿ ಹೊಲದ ದಾರಿ ಹಿಡಿದೆ , 
ಕುಲಾಯಿ ಹೊದ್ದ ಗದ್ದೆಗೆ ಹೋದರೆ ..  
ಸಾಲು ಬೀದಿಗೂ ಸರಸಲ್ಲಾಪ 
ನೋಡುವುದೇನು ಮನೆ ದಾರಿ ಹಿಡಿದೆ .

          ಬಸನಗೌಡ ಗೌಡರ

Wednesday, June 16, 2021

* ಮುಂಗಾರು ಮಳೆ *

ಮುಂಗಾರು ಮಳೆ ಮುಗಿಲು ಸೀಳಿ
ತಂಗಾಳಿ ಬೀಸಿ ಹೊಂಗನಸು ತಂತು 
ಸಂಗಾತಿ ಕನಸಿಗೆ ಹೊಸ ಜೀವಕಳೆ
ಬಂಗಾರ ಬದುಕಿಗೆ ಸಿಂಗಾರ ತಂತು//

ಮಡುಗಟ್ಟಿದ ಕೊಳೆ ಸಿವುಡುಗಟ್ಟಿ
ಕೆರೆ ಕಾಲುವೆ ತುಂಬಿ ಜಲಪಾತ ದಾಟಿ
ಹರವಾಗಿ ಒಮ್ಮೊಮ್ಮೆ ನೊರೆಯಾಗಿ
ಬರವ ಸಂಹಾರ ಮಾಡಲು ಬಂತು//

ಬಾಯಿ ತೆರೆದ ಭುವಿಗೆ ಜೀವ ಕೊಟ್ಟು 
ಬರುಡಾದ ನೆಲಕೆ ಹಸಿರು ಬಣ್ಣ ಇಟ್ಟು 
ಹಾರಾಡುವ ಹಕ್ಕಿಗೆ ಚೈತನ್ಯ ಕೊಟ್ಟು 
ಬೋರಾದ ಬಾನಿಗೆ ಚಿತ್ತಾರ ಬಿಡಿಸಿತು//

ಕನಸು ನೆಲದಲ್ಲಿ ಬಿತ್ತಿ ಕಷ್ಟದ ಕಳೆ ಕಿತ್ತಿ
ನನಸು ಮಾಡಲು ನಾವಿನ್ಯತೆ ಮೆತ್ತಿ  
ಎಣಿಸು ಮೋಡದಲ್ಲಿ ಕಾಣುವುದು ಬುತ್ತಿ
ತಣಿಸಲು  ರೈತನ ಬಾಗಿಲಗೆ ಬಂತು //

ಹದ ಮಾಡಿದ ಹೈದ ಎದೆಯುಬ್ಬಿಸಿದ 
ಕೌದಿ ಹಾಸಿ ಕಾಲು ಚಾಚಿದವ ನಾಚಿದ 
ಇದು ನಿತ್ಯ ದುಡಿದವನ ಸತ್ಯದ ಮಾತು
ಸದಾ ದುಡಿದವನ ವದನವೀಗರಳಿತು//

                  ಬಸನಗೌಡ  ಗೌಡರ 

Sunday, June 13, 2021

* ಜೀವನ ಜೋಕಾಲಿ *

ಜೀವನದ ಜೋಕಾಲಿ ಜೀಕುವೆನು 
ಯಾವ ಗಿಡವಾದರೇನು 
ನೀ ಜೊತೆಯಿರಲು //

ಹಿತವಾಗಿ ಹಾಡುತಾ ನಲಿಯುವೆನು
ನಿನ್ನ ಸ್ಮರಣೆಯೊಂದು ಸಾಕು
ಬೆಳಕು ಬರಲು//

ಹರುಷದಿ ವರುಷ ಕಳೆಯುವೆನು 
ವಿರಸವು ಬೇಕು ನಮಗೆ 
ಸವಿ ತಿಳಿಯಲು //

ಮೇಲೇರಿ ಇಳಿದೇರುವೆನು
ಛಲದ ನಿನ್ನ ಪ್ರೀತಿಯು ಸಾಕು
ವಲವು ತುಂಬಿ ಬರಲು//

ಬಯಕೆಯ ಬದುಕು ಬೆಸಯುವೆನು
ನಿಯತವಾಗಿ ಜೀಕು ಸುಮ್ಮನೆ 
ನೀ ನನ್ನವಳಿರಲು//

ಹಗ್ಗ ಟೊಂಗೆ ಸೇರಿ ಬಿಗಿಯುವೆನು
ಜಗ್ಗಿ ಜೀಕಿದರೆ ಬಗ್ಗವುದೆ ಸಗ್ಗ
ಹಿಗ್ಗಿ ನೂಕುತಿರಲು//

ಹಾದಿ ಬೀದಿಯ ಜನ ಹಳಿದರೇನು
ಓದಿ ತಿಳಿದ ಮಾತಿನ ಜಾಣೆ
ನಿನ್ನ ನಿಜ ಭಾವವಿರಲು//

              ಬಸನಗೌಡ ಗೌಡರ

Friday, June 11, 2021

ಭಾವಪೂರ್ಣ ಶ್ರದ್ಧಾಂಜಲಿ

ಕೆಸರಿನಲ್ಲಿ ಅರಳಿ ಹೆಸರು 
ಅಜರಾಮರಗೊಳಸಿ, ಹೆಸರಿನಲ್ಲೆ 
ಲಿಂಗ ಧರಿಸಿದ ಸಿದ್ದಿ ಪುರಷ, 
ಸಾಹಿತಿ ಪುರುಷ ಸಿದ್ಧಲಿಂಗ ಅಯ್ಯ ! 

ಕನ್ನಡ ಸಾಹಿತ್ಯ ಲೋಕಕ್ಕೆ 
ಹೊಸ ಭಾಷ್ಯ ಬರೆದು  
ಬಡತನದಲ್ಲಿ ಬೆಂದು ಅರಳಿ 
ಬಾರದ ಲೋಕಕ್ಕೆ ತೆರಳಿದೆ ಅಯ್ಯ!

ಹೃದಯ ಸಿರಿತನದ ಕವಿಯಾಗಿ 
ಮಾನವೀಯತೆಗೆ ಮಿಡಿದ 
ಮಾನವತಾವಾದದ ಕುಡಿಗೆ
ಮನಮುಟ್ಟಿ ನಮಿಸುವೆವು ಅಯ್ಯ!

ದ್ವನಿ ಇಲ್ಲದವರ ದ್ವನಿಯಾಗಿ 
ಧನಿಗಳ ಮನ ಕರಗುವಂತೆ ಬರೆದು
ಗುಣವರಿತ ಬಲಿತರ ನಡುವೆ ಕಲಿತು
ದಮನಿತರ ಗಮನ ಸೆಳೆದೆ ಅಯ್ಯ!

ಕೇರಿಯನರಿತು ಊರಿಗೆ ಅರುಹಿ
ದಾರಿಯಲ್ಲಿ ನಡೆಸಿದ ಹಿರಿಯ
ದೂರದ  ಸೌಧದ ದಾರಿ ತುಳಿದ 
ಹಿರಿಯರ ಸೌಧದ ಗೌರವವೇರಿಸಿದೆ ಅಯ್ಯ!

* ಕನಸಿನ ಕಿವಿಮಾತು *

 ದತ್ತ ಪದ : ಕನವರಿಕೆ

  * ಕನಸಿನ ಕಿವಿಮಾತು * 

ಎದೆಯ ಭಾರ ಹದವಾಗಿ ಕಲೆತು
ಹೃದಯ ಗಾನ ಪಲ್ಲವಿ ಮೊಳೆತು/
ಪದಗಳ ನಾದ  ಸ್ವರಗಳಲಿ ತೇಲಿತು
ಇದು ಯಾವ ಕನಸಿನ ಕಿವಿ ಮಾತು//

ಬಣ್ಣದ ಭಾವತರಂಗ ಬಾಗಿ ಬೆಸೆದು 
ಬಣ್ಣಿಸಲು ಹಣ್ಣಾದೆ ನಾ ಬಸವಳಿದು/
ಕಣ್ಣಿಗೇರಿದ ಕಾಡಿಗೆ ಕಾರ್ಮೋಡ ಸೀಳಿ
ಮಣ್ಣಿಗೆ ಜಾರಿತು ಮುಂಗಾರು ಮಳೆ//

ಹರಿವ ನದಿಯ ನೊರೆ ಹೊರೆಯಾಗಿ 
ಹರಿದು ಬಯಲೆಲ್ಲಾ ಪ್ರವಾಹವಾಗಿ/
ಹೃದಯನಾಳ ತುಂಬೆಲ್ಲಾ ಕೊಳೆಯಾಗಿ
ಹರಿದಿದೆ ಹೊಳೆ, ಇಳೆ ಪ್ರಳಯವಾಗಿ//

ಕನಸು ಕಾಣುವೆ ಕನವರಿಕೆಯಲ್ಲ
ಸನಿಹ ಬಂದು ಸವಿ ನೀಡುವೆಯಲ್ಲ/
ಮನಸ್ಸು ಕದಿಯುವ ನಿನ್ನ ಜಾಲ 
ಮುನಿಸು ಬಂದು ಜಾರುವೆಯಲ್ಲ//

ಮುಂಗಾರು ಮಳೆ ಮುತ್ತಿಕ್ಕಿ ಮೂಗಿಗೆ
ಮುಂಗುರುಳು ಸೋತು ಹೆರಳಾಗಿ/
ತಂಗಾಳಿಯ ಶಕ್ತಿಗೆ ಸಪ್ತಸ್ವರವಾಗಿ 
ಸಂಗಾತಿ ಎನ್ನ ಸೇರು ಮೃದುವಾಗಿ//

           ಬಸನಗೌಡ ಗೌಡರ 
                      ಉಪನ್ಯಾಸಕರು

Tuesday, June 8, 2021

* ಸೃಜನಶೀಲ ಸೃಷ್ಟಿಕಾರ *

 ದತ್ತ ಪದ : " ಪರಿಸರ "

* ಸೃಜನಶೀಲ ಸೃಷ್ಟಿಕಾರ *


ಬರಿ ಬದಲಿಸಿ ಬೆಳಸಿದೆನೆಂದರು
ಬರುವುದೆ ?. ಸೃಷ್ಟಿಸೊಂದು ಸಾಗರ,
ಬರದು. ತಿಳಿದರೂ ಬಡಿದಾಡುವರು.
ಬಡಿವಾರ ಬಿಡಲಾರದವರಿವರೆಲ್ಲಾ // 

ಹಕ್ಕಿಗಳಿಂಚರ ಹೂವಿನ ಗೊಂಚಲ
ಚದುರಿದ ಮೋಡದಿ ಅಡಗಿದ ಮಿಂಚು
ಸಂಜೆಯ ಹೊಂಬೆಳಕಿನ ಚಿತ್ರಕಾರ
ಚಂದಿರನ ಅಂದಕೆ ಸಮನಾರಿಲ್ಲ//

ಹಸಿರು ಗಿಡಮರ ಕೆಸರು ಗದ್ದೆ ಮೀರಿ
ಕೊಸರಿ ಹೋಗುವುದು ಎಲ್ಲಿಗೆ ?
ಹೊಸ ಆವಿಷ್ಕಾರ ಖರೀದಿಸಬಹುದು
ಕಾಸು ಕೊಟ್ಟು, ಪರಿಸರವನ್ನಲ್ಲ //

ಉಸಿರಿರುವರೆಗೆ ಹಸಿರು ಮಾಡು
ಹೆಸರಿಗಾಗಿ ಅಲ್ಲ, ಹಳೆಯ ಹೆಸರೆ
ಬೆಸೆದುಕೊಂಡಿವೆ, ಹೆಸರು ನಿಲ್ಲಲು 
ಹೊಸ ಸಾಲುಗಳಿಗೆ ಜಾಗವೆ ಇಲ್ಲಾ//

ಕಲ್ಲು ಮಣ್ಣಿನ ಗಿರಿ ಕಂದರ
ಎಲ್ಲಾ ಕಟ್ಟಿದ ಕನಸುಗಾರ 
ಎಲ್ಲಿಯೂ ಹೇಳಲಿಲ್ಲ ನಾ ಕೃತಿಕಾರ
ಇಲ್ಲಿ ನೆಡೆದಿದೆ ಹೆಸರಿನ ಸಮರವೆಲ್ಲಾ//

           ಬಸನಗೌಡ ಗೌಡರ

Sunday, June 6, 2021

* ಭಾವನೆಗಳರಳಿ ಜನಮಂದಿರವಾಗಿ *

ಏಳು ಬೀಳಿನ ನಡುವೆ ನಡೆದಿದೆ 
ತಾಳ ಮದ್ದಲೆ, ಬೀಳನು ತುಳಿದು 
ಏಳುವುದು ಸಹಜವಾಗಲಿ ಗೆಳೆಯ 
ತುಳಿದ ಕಾಲು ಸುತ್ತಿ ಏಳು ಬಳ್ಳಿಯಾಗಿ/

ಕಾಳಸಂತೆಯಲಿ ಖರೀದಿಸಿ ಖೂಳರಿಗೆ 
ಬಾಳು ನೀಡುವ ಕರ್ಮವ ತೊರೆದು
ಬಳಿ ಬಂದ ವ್ಯಾಪಾರಿಗಾಗು ಗೆಳೆಯ 
ಕೊಳತೆ ರಾಡಿ ಬಳಸು ಗೊಬ್ಬರವಾಗಿ/

ಬೇವಿನ ಬೀಜಕ್ಕೆ ಬೆಲ್ಲದ ಬೆರಣಿ ಮೆತ್ತಿ
ಸಾವಿರುವ ದೇಹ ವ್ಯಾಮೋಹ ಕಳೆದು 
ಭವಕೆ ಬಗ್ಗುವ ಬದುಕಾಗಲಿ ಗೆಳೆಯ 
ಭಾವನೆಗಳರಲಿ ಜನ ಮಂದಿರವಾಗಿ/

ಉಚ್ಚರೆನ್ನುವ ಹುಚ್ಚರ ಹೆಚ್ಚುಗಾರಿಕೆ
ಹೆಚ್ಚು ದಿನ ನಡೆಯದಂತೆ ಹರಿದು
ನೀಚರೂ ಸಚ್ಚಾರಿತ್ರ್ಯರಾಗಲಿ ಗೆಳೆಯ 
ಇಚ್ಛಿಯಂತೆ ನಡೆ ನೆಚ್ಚಿನ ಬಂಧುವಾಗಿ/

ತನ್ನದೆ ಸರಿ ಎನ್ನುವ ತತ್ವ ಭಿನ್ನರ ಕಣ್ಣು 
ಹೊನ್ನಿಗೆ ಬಣ್ಣ ಬದಲಿಸಿದರೆ ಸರಿದು
ತನ್ನತನ ಉಳಿಸಿಕೊಳ್ಳುಬೇಕು ಗೆಳೆಯ 
ತನ್ನಂತೆ ಪರರ ಬಗೆ ಹರ ಗುರುವಾಗಿ /

                        ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...