Wednesday, October 27, 2021

* ನಾಡಗೀತೆಗಳ ಹಾಡೋಣ ಇಂದು *



ನಡೆ ಮುಂದೆ, ನುಡಿ ಸಿರಿಯ 
ಹಾಡೋಣ ಇಂದು//ಪ//

ಮರೆಯದಾ ಇತಿಹಾಸ ನಮ್ಮೆಲ್ಲರ  
ಭವಿಷತ್ತು ಮುಂದು /
ಗಲ್ಲಿ ಗಲ್ಲಿಗಳಲ್ಲಿ  ಹಿಡಿಯಿರಿ
ಕನ್ನಡದ ಬಾವುಟ, ಭಾರತದ ಮಡಿಲು 
ಮಕ್ಕಳಾಗಿ ಇಂದು//

ಬಯಲು, ಮಲೆ, ಪಡುವಣದ 
ಶರಧಿಯ ತೆರಗಳಬ್ಬರದ 
ಶಬ್ದಗಳು ಸಿರಿ ಹಬ್ಬದ ಮಾಲೆ /
ಕನ್ನಡದ ಸವಿ ನುಡಿ, 
ಸಹೋದರರ  ಬಾಳ್ನುಡಿ
ಸದ್ವಿಕಾಸದ ಹೊತ್ತಿಗೆಯ 
ಶಾಂತಿಯ ಬೆನ್ನುಡಿ//

ಸಾವಿರ ವರ್ಷಗಳ
ಶಾಸನದ ಸಾಲುಗಳು 
ಭರವಸೆಯ ಉಕ್ತಿಗಳು //
ಸನ್ಮತಿಯ ಉನ್ನತಿಯು 
ಜಗದಗಲ ಬೆಳಗುವ
ನಕ್ಷತ್ರಗಳು//

ದೇಗುಲದ ಭಿತ್ತಿಯ 
ಶಿಲ್ಪದ ಕೆತ್ತನೆಗಳು 
ಸಂಸ್ಕೃತಿ ಯ ಬಿತ್ತನೆಗಳು/
ಮೇಲ್ಕೆತ್ತಿದ ಮಹಾಕಾವ್ಯದ 
ಸಂಸ್ಕಾರ ಚಿತ್ರಗಳು
ಧರ್ಮದ ಮರ್ಮದ
ಸಾರಗಳು //

ಗಂಗ,ಕದಂಬ 
ರಾಷ್ಟ್ರ ಕೂಟ 
ಬಲ ಚಾಲುಕ್ಯರು /
ಕಟ್ಟಿದ ಗುಡಿ ಗೋಪುರ 
ಕಲ್ಯಾಣಿ ನಮ್ಮೆಲ್ಲರ 
ಮುಕುಟ ಮಣಿಯು..
ಹೊಯ್ಸಳರ ಶೈಲಿಯ 
ಕಲೆಯಿಂದಾದ ಬಲೆಯು
ಕೈಚಳಕದ ಗಣಿಯು//

ತಾಳೆ ಗರಿಯ ಹೊತ್ತಿಗೆಯು
ಮನುಕುಲವು ಗಳಿಸಿದ 
ಸಂಪತ್ತು.../ 
ನಿನ್ನವರೆ ಹೆತ್ತವರು 
ಸನ್ನಡತೆಯ ಪುತ್ರರು//

ಬಗ್ಗಿ ನಡೆದರೆ ಗುದ್ದು  
ನುಗ್ಗಿ ನಡೆ ಸಗ್ಗ ಇಂದು/
ಬಾಂದಳಕೇರಲಿ ಕನ್ನಡದ ಕೀರ್ತಿ  
ಭರವಸೆಯ ಬೆಳಕಿನೆಡೆ ತೇಲಲಿ 
ಸಿರಿಗನ್ನಡದ ವಾರ್ತೆ  //
  
ನಿನ್ನ ಅನ್ನವ ಪಡೆದು
ಕನ್ನಡವನ್ನುಲಿಯದಿರುವುದೆ
ಅನ್ಯರ ದ್ರೋಹ  /
ಸಕಲರ ಕಾಯುವ 
ದೇವರ ಗುಡಿ ಇದು ...
ಮಹಾದೇವಾಲಯವಿದು//

ಬಸನಗೌಡ ಗೌಡರ

Saturday, October 23, 2021

*ಕಟ್ಟಿ ಹಾಕಿದರೋ ರಂಗ ನನ್ನ ...*

*ಕಟ್ಟಿ ಹಾಕಿದರೋ ರಂಗ ನನ್ನ ...*

ಕಟ್ಟಿ ಹಾಕಿದರೋ ರಂಗ ನನ್ನ ...
ಕಟ್ಟಿ ಹಾಕಿದರೊ ರಂಗ.../
ದಿಟ್ಟತನದಿಂದ ನಡೆಯುವ ನನ್ನ 
ಕಟ್ಟಿ ಹಾಕಿದರೋ ರಂಗ //

ಗಟ್ಟಿ ಹೃದಯದ ನಾನು 
ಬಿಟ್ಟಿ ಉಪದೇಶ ಪಂಡಿತರ /
ಪಟ್ಟಿ ಮಾಡಲು ಹೋದೆ 
ಎನ್ನ ಕಟ್ಟಿ ಹಾಕಿದರೊ ರಂಗ// 

ಬಣ್ಣ ಬಳಿಯಲೆನ್ನ ಮನೆಯಲಿ
ಸುಣ್ಣ ಪಗಡೆ ಕುಂಚಗಳಿಲ್ಲ /
ಎನ್ನ ಮನೆಯ ಬಯಲಿನಲ್ಲಿ
ಸಣ್ಣ ರಂಗಮಂದಿರವಿಲ್ಲ //

ಹಾಕಿ ಎಳೆಯಲು ಪರದೆಗಳಿಲ್ಲ
ಸಾಕಿ ಪೊರೆಯಲು ಸಂಘಟನೆಯಿಲ್ಲ /
ಸೂತ್ರದಾರ ನೀ ದಾರ ಎಳೆಯಲಿಲ್ಲ  
ಪಾತ್ರ ಮಾಡಲೆನಗೆ ತಿಳಿಯಲಿಲ್ಲ //

ಸುಟ್ಜ ಮಡಿಕೆ ತಟ್ಟಿ ಪರೀಕ್ಷೆಗಿಳಿದೆ 
ಸಿಟ್ಟು ಸೇಡುವಿನ ಘಟ್ಟಿ ವ್ಯಾಪಾರಿ
ಪಟ್ಟು ಸಡಿಲಿಸದೆ ತಟ್ಟಿ ಕಲಿಸಿದ
ಇಟ್ಟಂತೆ ಖರೀದಿಸಲು ಜಾತ್ರೆಯಲ್ಲಿ //

ನನ್ನವರೆನ್ನುವವರನು ಹುಡುಕಿ 
ಬೆನ್ನು ಮೂಳೆ ಬಾಗಿ ಬಿಲ್ಲು ಬಾಣ/
ನನ್ನ ಜಾತಿ ಹುಡುಕಲೆನ್ನಲಿಲ್ಲ ತ್ರಾಣ
ಇನ್ನು ಸಿಗುವ ನಂಬಿಕೆ ಉಳಿಯಲಿಲ್ಲ//

ಕಟ್ಟಿ ಹಾಕಿದರೋ ರಂಗ ನನ್ನ ...
ಕಟ್ಟಿ ಹಾಕಿದರೊ ರಂಗ.../
ದಿಟ್ಟತನದಿಂದ ನಡೆಯುವ ನನ್ನ 
ಕಟ್ಟಿ ಹಾಕಿದರೋ ರಂಗ //

.

Wednesday, October 20, 2021

ಬೆಳದಿಂಗಳ ಕಾವ್ಯ ಗೋಷ್ಠಿ

ಇಂದು ದಿನಾಂಕ 20.10.2021ರಂದು ಪ್ರೊ.ಚಂದ್ರಶೇಖರ್ ಹೆಗಡೆ ರವರ ಮನೆಯಲ್ಲಿ ಬೆಳದಿಂಗಳ ಕಾವ್ಯ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು ನನ್ನ ವಿದ್ಯಾಗುರುಗಳಾದ ಡಾ ವ್ಹಿ.ಎ.ಬೆನಕನಾಳ ಅಧ್ಯಕ್ಷತೆ ವಹಿಸಿದ್ದರು .ಡಾ.ರಾಜಶೇಖರ್ ಬಸುಪಟ್ಟದ,ಕನ್ನಡ ಸಾಹಿತ್ಯ ಪರಿಷತ್ ಗುಳೇದಗುಡ್ಡ ಘಟಕದ ಅಧ್ಯಕ್ಷರಾದ ಪ್ರೊ.ಸಿ ಎಮ್ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಪ್ರೊ.ಚಂದ್ರಶೇಖರ್ ಹೆಗಡೆಯವರ ಕಾವ್ಯನುಸಂಧಾನದ ಕನಸು ನನಸಾಯಿತು ,ಅದಕ್ಕೆ ಸೀಗಿ ಹುಣ್ಣಿಮೆಯ ಚಂದ್ರನ ಬೆಳದಿಂಗಳು ಸಾಕ್ಷಿಯಾಯಿತು.ಎಂತಹ ಸಂದರ್ಭ..! ಭಾರತೀಯರ ಪವಿತ್ರ ಮಹಾಕಾವ್ಯ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಜಯಂತಿಯಂದು ನಡೆದ ಕಾವ್ಯ ಗೋಷ್ಠಿ ಗುಳೇದಗುಡ್ಡದ ಕಾವ್ಯಗೋಷ್ಠಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಾಯಿತು ಎಂದರೆ ತಪ್ಪಾಗಲಾರದು ಎನ್ನುವುದು ನನ್ನ ಭಾವನೆ.ಡಾ.ಚಂದ್ರಶೇಖರ ಕಾಳಣ್ಣವರ,ಡಾ.ಎಚ್ ಎಸ್ ಘಂಟಿ,ಮಹಾದೇವ ಜಗತಾಪ, ದಯಾನಂದ ಯಾನಮಶೆಟ್ಟಿ,ಶಿವು ಕರನಂದಿ,ಗುರು ಮನ್ನಿಕಟ್ಟಿ,ಸಿ ಆರ್ ಪಿ  ಸುರಪುರ ಸರ್ ಕವನ ವಾಚನ,ಪಿ ಯು ಪಾಡಾರವರ ವಿಮರ್ಶೆ,ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳರ ಫೋಟೊಗ್ರಪಿ,  ಧಾರವಾಡದ  ವರ ಕವಿ.ದ.ರಾಬೇಂದ್ರೆ, ರಾಷ್ಟ್ರ ಕವಿ ಕುವೆಂಪುರವರ ಕಾವ್ಯಮನೆ ಯನ್ನು ನೆನಪಿಸುವಂತಿತ್ತು ಕನ್ನಡ ಸಾಹಿತ್ಯ ಪರಿಷತ್ ಗುಳೇದಗುಡ್ಡದ ಅಧ್ಯಕ್ಷ ಪ್ರೊ.ಸಿ ಎಮ್ ಜೋಶಿಯವರ ಸ್ವರಚಿತ ಭಾವಗೀತೆ ಹಾಗೂ ಶ್ರೀ ಚಿದಾನಂದ ಕಾಟವಾ ರವರ ಸುಶ್ರಾವ್ಯ ಗಾಯನಗಳು ಗಂಧರ್ವ ಲೋಕವನ್ನೇ ಸೃಷ್ಟಿಸಿದವು.ಡಾ.ರಾಜಶೇಖರ್ ಬಸುಪಟ್ಟದ ಕವಿಗಳ ಮಾರ್ಗದರ್ಶನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿಯ ಚಿಲುಮೆಯಂತಿತ್ತು, ಕವಿಗಿರಬೇಕಾದ ಕಾವ್ಯ ಪ್ರಜ್ಞೆ ,ಅಧ್ಯಾಯನದ ಮಹತ್ವ ವನ್ನು ಎಳೆ ಎಳೆಯಾಗಿ ಬಿಡಿಸಿದ ಪರಿಗೆ ನಾನೋರ್ವ ಇತಿಹಾಸ ಉಪನ್ಯಾಸಕ ಎನ್ನುವುದು ಮರೆತು ಹೋಗಿ ಸಾಹಿತ್ಯ ಕಲಿಯುವ ವಿದ್ಯಾರ್ಥಿಯಾಗಿ ಬದಲಾಗಿದ್ದೆ.ಮಧ್ಯ ,ಮಧ್ಯ ಬರುವ ಪ್ರೊ.ಚಂದ್ರಶೇಖರ್ ಹೆಗಡೆ ಯವರ ನಿರೂಪಣೆ, ಕಾವ್ಯ ಕಸ್ತೂರಿ..! ನವಿಲು ನರ್ತಿಸಿ ,ಕೋಗಿಲೆಗಳ ಗಾನ ಹಾಡಿದಂತಿತ್ತು.ಉಪಮೆಯೊಂದಿಗೆ ರೂಪಕಗಳ ಮಾಲೆ ಮತ್ತೆ ಕೇಳಬೇಕೆಂದಿತ್ತು ಆದರೆ ಸಮಯ ಮುಗಿದಿತ್ತು.ಅಧ್ಯಕ್ಷತೆ ವಹಿಸಿದ ವಿದ್ಯಾ ಗುರುವಿನ ಸಮಾರೋಪ, ಅದು ಬಾಣ ಬಿರುಸಿನ ಚಮತ್ಕಾರ ಕವಿಮನಗಳಿಗಳ ಕವನಗಳನ್ನು ಉಪಗ್ರಹಗಳಿಗೆ ಹೋಲಿಸಿ ಚಂದ್ರಶೇಖರ್ ಹೆಗಡೆ ಯವರ ಮನೆಯನ್ನು ಲಾಂಚಿಂಗ ಪ್ಯಾಡ್  ಮಾಡಿದರಲ್ಲ ಇದಕ್ಕಿಂತ ಇನ್ನೇನು ಬೇಕು ಹೇಳಿ ?ನಾನು  ವರಕವಿ ಬೇಂದ್ರೆಯವರ ಮನೆಯೂ ನೋಡಿಲ್ಲ, ರಾಷ್ಟ್ರ ಕವಿ ಕುವೆಂಪುರವರ ಮನೆಯನ್ನು ನೋಡಿಲ್ಲ ಅದು ಗುಳೇದಗುಡ್ಡ ದಲ್ಲಿ ಸೃಷ್ಟಿಯಾದರೆ ಯಾರು ಬೇಡ ಎಂದಾರು ? ಅವಕಾಶ ನೀಡಿದ ಸ್ನೇಹಿತ, ಕವಿ ಚಂದ್ರಶೇಖರ್ ಹೆಗಡೆಯವರಿಗೆ ನೂರು ನಮನಗಳು. ಶುಭರಾತ್ರಿ

*ಯಾವುದು ಸತ್ಯ, ಅದಲ್ಲ ಸತ್ಯ *


*ಯಾವುದು ಸತ್ಯ, ಅದಲ್ಲ ಸತ್ಯ *

ಓಡಲಿಲ್ಲವೇನು.... 
ನಿನ್ನ ಕರ್ಮದ ಗಾಡಿ//

ಪಥವಿಲ್ಲ ಗತಿಯಿಲ್ಲ 
ದೃತಿಗೆಟ್ಟು ನಲುಗಿದೆಯಲ್ಲ
ಜ್ಞಾನವೆಂಬ ಚಾಲಕನಿಟ್ಟು 
ಅರಿವೆಂಬ ಮಾಲಿಕನಿಟ್ಟು  
ಓಡಲಿಲ್ಲವೇನು ......
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು .....
ನಿನ್ನ ಕರ್ಮದ ಗಾಡಿ//

ಕಾಲವನ್ನು ಕಳಿಚಿಟ್ಟು
ಕಾಲು ಗೆಜ್ಜೆ ಮೇಲ್ಕಟ್ಟಿ  
ಕುಣಿದು ಕುಪ್ಪಳಿಸಿ ಕೆಟ್ಟೆ
ಸತ್ಕರ್ಮ ಮಾಡಲಿಲ್ಲ
ಓಡಲಿಲ್ಲವೇನು.......
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು .....
ನಿನ್ನ ಕರ್ಮದ ಗಾಡಿ//

ಬಂದಾಗ ನಿಲ್ಲಲಿಲ್ಲ
ನಿಂತಾಗ ಅರಿಯಲಿಲ್ಲ
ಕುಂತಾಗ ಸಂತೆ ತಿಳಿಯಲಿಲ್ಲ
ಶಾಂತಿಗಾಗಿ 
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ನ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು...... 
ನಿನ್ನ ಕರ್ಮದ ಗಾಡಿ//

ಗುಡಿಯ ಹಿಂದನ ಗಡಿ 
ಬಿಡಿಸಿಕೊಂಡವರಿಲ್ಲ 
ಗಡಿ ದಾಟಿದವರು ಮೂಢರಲ್ಲ 
ಗಡಿಗಾಗಿ
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು...... 
ನಿನ್ನ ಕರ್ಮದ ಗಾಡಿ//

ಹುಡುಕಿದರೆ ಸಿಗುವುದಿಲ್ಲ 
ಸಿಕ್ಕರೂ ತಿಳಿಯುವುದಿಲ್ಲ 
ಸಿಕ್ಕವರೂ ಬಳಸಲಿಲ್ಲ
ಹಕ್ಕಿಗಾಗಿ 
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು.... 
ನಿನ್ನ ಕರ್ಮದ ಗಾಡಿ//

ಯಾವುದು ಸತ್ಯ, ಅದು ತಿಳಿಯಲಿಲ್ಲ 
ಯಾವುದು ಸುಳ್ಳು, ಅದು ಅರಿವಾಗಲಿಲ್ಲ  
ಸತ್ಯದ ಸತ್ಪುರಷರ ಹಿಂದೆ 
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು .......
ನಿನ್ನ ಕರ್ಮದ ಗಾಡಿ//

ವಾಲ್ಮೀಕಿ ಮಹರ್ಷಿ

* ಪೂರ್ಣಿಮೆಯ ಮಹರ್ಷಿ *

ಶೀಗಿಯ ಹುಣ್ಣಿಮೆ  
ಯೋಗವ ನೋಡೊಮ್ಮೆ /
ಯೋಗಿಯ ಜನ್ಮವು 
ಭಾರತ ಪಡೆದುದೆ ಹೆಮ್ಮ/
ಆದಿ ಕವಿಯು ಮೊದಲು/
ಉದರಕಾದ ವ್ಯಾಧ/ 
ಮಡದಿಯ ಪುಣ್ಯಫಲ 
ಉತ್ತರಕ್ಕೆ ಬದಲಾದ  //
ನಾರದರ ಪ್ರಶ್ನೆಗೆ 
ರತ್ನಾಕರ ಮಹಾಕವಿಯಾದ/
ವಲ್ಮದಲ್ಲರಳಿತು ನಲ್ಮೆಯ 
ಮಹಾಕಾವ್ಯ ರಾಮಾಯಣ// 
ಅಯೋಧ್ಯೆಯ ರಾಮ ಸಹೋದರ ಲಕ್ಷ್ಮಣ
ಸೀತಾಮಾತೆಯ ಆದರ್ಶ ಗುಣ/ 
ಕಲಿಯದಿದ್ದರೆ ಅದೆ ಮರಣ/ 
ಕಲಿತು ನೀನಾಗು ಶರಣ//
ದಶರಥನ ಕಂದ ಶ್ರೀರಾಮ ಚಂದ್ರ 
ಕೈಕೆಯ ಆಸೆಗೆ ಬಲಿಯಾದ/
ರಾಮನ ನಡಿಗೆ ಕಾಡಿನ ಕಡೆಗೆ 
ಸೀತೆ ಧರಿಸಿದಳು ನಾರು ಉಡುಗೆ/
ಸರ್ವವು ತ್ಯಾಗ ಕಾಡಿಗೆ ನಡೆದ
ಸಹೋದರ ಲಕ್ಷ್ಮಣನೊಂದಿಗೆ//
ಭರತ ಬಳಲಿ ರಾಜ್ಯ ಆಳಿದ 
ಶ್ರೀರಾಮನ ಪಾದರಾಕ್ಷಿಯೊಳಗೆ/
ಕಾಡಿಗೂ ಓಡಿತು ಕರ್ಮದ ಕಷ್ಟ 
ರಾಕ್ಷಸ ರಾವಣನ ಹೆಸರಲ್ಲಿ /
ಮಾಯದ ಜಿಂಕೆಗೆ ಮರುಳಾದ ಸೀತೆ
ಮರೆತು ರಾವಣ ಜಾಲದ ಬಲೆಗೆ/
ಲಂಕೆಯ ಅಂಕೆಯಲಿ ಮಂಕಾದಳು
ಸೀತೆ ಶ್ರೀ ರಾಮನ ನಾಮದಲ್ಲಿ/
ಹನುಮನ ಜನುಮದ ಒಲುಮೆಯ
ಗಮನ ರಾವಣ ನಿರ್ಣಾಮ// 
ದುಷ್ಟ ಸಂಹಾರ ಶಿಷ್ಟ ರಕ್ಷಣೆ 
ರಾಮರಾಜ್ಯದ ಕಥೆ ವಾಲ್ಮೀಕಿ 
ಬರೆದ ಇತಿಹಾಸ ಪುರಾಣ//

Friday, October 15, 2021

ಡಾಕ್ಟರ್/ಎ ಪಿ ಜೆ ಅಬ್ದುಲ್ ಕಲಾಮ್

ಇಂದು ವಿಶ್ವ ವಿದ್ಯಾರ್ಥಿಗಳ ದಿನ ಈ ದಿನವನ್ನು ವಿಶ್ವಸಂಸ್ಥೆ  ಡಾ/ಎ ಪಿ ಜೆ ಅಬ್ದುಲ್ ಕಲಾಮ್ ರವರ ಜಯಂತಿ  ಪ್ರಯುಕ್ತ  ಘೋಷಿಸಿದೆ ಅದರಂಗವಾಗ ಶ್ರೇಷ್ಠ ವ್ಯಕ್ತಿ ತ್ವಕ್ಕೆ ನನ್ನದೊಂದು ನಮನ

ನಾ ಕಂಡ ವಿರಳ ಶ್ರೇಷ್ಠರಲ್ಲಿ
ನಾ ತಲೆ ಬಾಗುವೆ ಇಂದು 
ನಮ್ಮವರೆ ಆದ ನಮ್ಮನ್ನು 
ಅರಿವಿನ ದಾರಿಗೆ ತಳ್ಳಿದ ಶಿಕ್ಷಕ
ರಸ ಋಷಿ ಕಲಾಮರಿಗೆ 
ವಿಧೇಯ ವಿದ್ಯಾರ್ಥಿಯಾಗಿ 
ನಾ ತಲೆಬಾಗುವೆನಿಂದು//

ವಿಶ್ವ ವಿದ್ಯಾರ್ಥಿ ದಿನದಂದು 
ವಿಶ್ವವೆ ತಲೆಬಾಗಿತು ಇಂದು 
ವಿಜ್ಞಾನಿಯಾಗಿ ವಿಜಯಿಯಾದರೂ
ವಿಧೇಯ ವಿದ್ಯಾರ್ಥಿಯಾಗಿ 
ವಿವರಿಸುವ ಶಿಕ್ಷಕನಾಗಿ 
ವಿನಯಶಾಲಿ ರಾಷ್ಟ್ರಪತಿಯಾಗಿ 
ನಮಗೆಲ್ಲ  ಸಂಸ್ಕಾರ ನೀಡಿದ ಸಂತನಿಗೆ 
ನಾ ತಲೆಬಾಗುವೆನಿಂದು//

ಕನಸುಗಳ ಸರದಾರ 
ಮಲಗಿಸದೆ ಕಾಡಿದರೆ
ಮುತ್ತಿಕ್ಕಿಎತ್ತರಕ್ಕೇರಿದ 
ಭಾರತದ ಜೊತೆಗಾರ 
ಏರಿದ ಏಣಿಯಲಿ ಗುರತನವ 
ಬಿಡದ ಸರ್ವಕಾಲಿಕ ಶಿಕ್ಷಕನಿಗೆ  
ನಾ ತಲೆಬಾಗುವೆನಿಂದು//

ತನ್ನವರಿಗಾಗಿ ಹೊನ್ನು 
ಹೊಂದಿಸಿದವರ ಕಂಡೆ 
ತನ್ನೇಳಿಗೆಗೆ ಬೆನ್ನಿಗೆ ಚೂರಿ 
ಇರಿದವರ ಕಂಡೆ 
ತನಗಾಗಿ ಏನು ಬಯಸದ 
ತನುವಿಗಾಗಿ ಜಗದಳುವಿಗಾಗಿ 
ಮಿಡಿದ ಮಿಸೈಲ್ ಮನುಜಗೆ
ನಾ ತಲೆಬಾಗುವೆನಿಂದು//

ಬಸನಗೌಡ ಗೌಡರ

Wednesday, October 13, 2021

ನಾಡ ಹಬ್ಬ

* ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸುತ್ತಿರುವ*

*ನಾಡ ಹಬ್ಬ ದಸರಾಜ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕವನ ರಚನೆ ಸ್ಪರ್ಧೆ*


  * ನಾಡ ಹಬ್ಬ🙏


ಕರುನಾಡ ಕನ್ನಡಿಗರ ಹಬ್ಬ
ಸಂಸ್ಕೃತಿ ಸೀಮೆಯ ಸಿರಿ ಹಬ್ಬ/ 
ಪರಂಪರೆ ಮಹಾನವಮಿ ದಿಬ್ಬ 
ಹರಡಿದೆ ಮೈಸೂರಿನಿಂದಬ್ಬರ/
ಕರಿ,ಕಲಿ,ಕವಿಗಳ ದಿಬ್ಬಣ 
ಅರಮನೆ ಪಥದಲ್ಲಿ ನಡೆದೈತಿ// 

ಅರಮನೆಯ ಮುಂದೆ 
ಅರಸನ ಅಂಬಾರಿ ಆನೆ/
ದಸರೆಯ ತುಂಬಾ ದೇವಿ 
ಚಾಮುಂಡೇಶ್ವರಿ ಸೇನೆ/ 
ಕರುನಾಡಿನ ಚಂದನವನದಲ್ಲಿ
ಕಲಾರಸಿಕರ ದಂಡೆ ತುಂಬೈತಿ  //

ದೇವಲೋಕ, ಮೃತ್ಯ ಲೋಕ  
ಭವದೊಳಗೆ ನಾನೆಲ್ಲೂ ಕಾಣೆ/
ಜಂಬೂ ಸವಾರಿ, ನಂಬಿ ಬಂದವರಿಗೆ 
ಮೈತುಂಬಾ ಮೈಸೂರು ಮಲ್ಲಿಗೆ / 
ಬಾಯಿ ತುಂಬಾ ಮೈಸೂರು 
ಪಾಕು ವಿಳ್ಯದೆಲೆ ಬಿದ್ದೈತಿ//

ಬಂಗಾರದ ಅಂಬಾರಿ 
ಬಲರಾಮನ ಮೇಲೆ ಏರೈತಿ/ 
ಜಂಭದ ನಡಿಗೆ ಜಂಬೂದ್ವೀಪದ ಬೆಡಗು
ದರ್ಶನಕ್ಕೆ ನಾಡೆಲ್ಲ ನಿಂತೈತಿ / 
ಯದುವಂಶದ ಕುಡಿಯ ಕಂಡು 
ಖುಷಿಯಿಂದ ಕುಣದೈತಿ//

ನವಮಿ ಹಬ್ಬ ನಾರಿಯರ ಹಬ್ಬ 
ಮಹಿಷಾಸುರನ ಕೊಬ್ಬು ಇಳಿಸೈತಿ/ 
ಅಸುರರ ಮೇಲೆ ಸಂಹಾರದ ಮಾಲೆ
ಜನಸಾಗರದೊಳಗರಳೈತಿ/ 
ದುರ್ಗಾನ ಅವತಾರ ನಮಗೆಲ್ಲ 
ಸ್ವರ್ಗದ ಸರಮಾಲೆ ತಂದೈತಿ//

 ಶ್ರೀ ಬಸನಗೌಡ ಗೌಡರ 
ಉಪನ್ಯಾಸಕರು ಗುಳೇದಗುಡ್ಡ

Sunday, October 10, 2021

ಬಾಗಿದ ಸ್ವಾಗತ

ಬಾಗಿದ ಸ್ವಾಗತ

ತೊಗರಿಯ ಹೊಲದಾಗ 
ಹಗುರಾಯಿತು ಭಾವ ಹಗೆತನವಿಲ್ಲ 
ಹರಿಪ್ರೇಮದ ಭೋಗವೆಲ್ಲ//

ನಗರದ ಬಿಗುಮಾನ 
ನಾನು ಎಂಬುದು ಕಳೆದು 
ನಮ್ಮದೆ ರಾಜ್ಯ ಇಲ್ಲೆಲ್ಲ //

ದುಂಬಿಗಳ ಕಾರುಬಾರು 
ನಂಬಿದವರಿಗೆ ನವರಾತ್ರಿ 
ಸೊಂಬೇರಿಗಳಿಗಲ್ಲ ಸೋಬಾನ// 

ತುಂಬಿ ಬರತಾವು ತಮ್ಮ 
ಹರುಷದ ದಿನಮಾನ 
ನಂಬಿ ದುಡಿದರೆ ನಾಕವು ಜಗವೆಲ್ಲ //

ಬಾರವಾದ ಮನಕೆ 
ಬೋರಾದ ದೇಹಕ್ಕೆ 
ಬಾಗಿದ ಸ್ವಾಗತವಿಲ್ಲಿ //

ಬಂಗಾರ ಬನದ ತೊಗರಿ 
ಗಂಗಾಳ ತೂರಿದರಾಚೆ ಪಾರು
ಅಂಗಕ್ಕೆ ಸಿಂಗಾರದ ಹೂವು ಮಾಲೆ//  

ಚಟ್ಟೆಯ ಕಾಯಿಗೆ ಪುಟ್ಟ ಪಾತರಗಿತ್ತಿ 
ಕಾವಲು ಇಟ್ಟವರು ಯಾರಿಲ್ಲಿ 
ನಾ ಬಿಟ್ಟ ಉಸಿರು ಹಸಿರಾಗಿ 
ನಂದಗೋಕುಲವಿಲ್ಲಿ  //

ನವರಾತ್ರಿ

            ಭಾರತ ದೇಶ ಹಬ್ಬಗಳ ನಾಡು (ದೇಶ )ಈ ದೇಶದಲ್ಲಿ  ಹುಟ್ಟಿದ ನಾವುಗಳು ಧನ್ಯರು. ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದು ಮಾನವನ ಪ್ರಗತಿ ಮತ್ತು ವಿಕಾಸದ ಸಂಕೇತವು ಹೌದು .ಇಲ್ಲಿ ಅನೇಕ ಧರ್ಮ,ಪಂಥಗಳು ಮೈದೆಳೆದು ಜಗತ್ತಿನ ವಿವಿಧ ಭಾಗಗಳಿಗೆ ಪಸರಿಸಿದ್ದನ್ನು ನಾವು ಕಾಣುತ್ತವೆ.ಈಗ ನಾನು ಪೀಠಿಕೆ ಹಾಕಿದ ಉದ್ದೇಶ ಏನೆಂದರೆ ದಸರಾ ನಮ್ಮ ಪರಂಪರೆ ಅದರ  ಕುರಿತು ಏನಾದರು ಬರೆಯಬೇಕೆಂಬುದು ಮನಸ್ಸಿನಲ್ಲಿ ಹೊಳೆದ ತಕ್ಷಣವೇ ನನ್ನ ಮೊಬೈಲ್ ನಲ್ಲಿ ಬೆರಳುಗಳು ಓಡ ತೊಡಗಿದವು ಈ ವರ್ಷ ಏಳನೇ ತಾರೀಖು ಪ್ರಾರಂಭವಾಗಿ 15 ನವೆಂಬರ್ ತಾರೀಖು ವರೆಗೆ ಮುಂದುವರೆಯುತ್ತದೆ. ಹಾಗಾದರೆ ಇದರ ಹಿನ್ನೆಲೆ ಏನು ಹೇಗೆ ಬೆಳೆದು ಬಂತು ಅನ್ನುವುದನ್ನು ಒಂದಷ್ಟು ಅವಲೋಕನ ಮಾಡಲು ಮಾಡಿದ ಸಣ್ಣ ಪ್ರಯತ್ನವೆ ಈ ಒಂದು ಲೇಖನ. ಭಾರತದ ಸಂಸ್ಕೃತಿ ಬೇರುಗಳ ಪ್ರಾರಂಭವನ್ನು ನಾವು ತಾಮ್ರಯುಗದಲ್ಲಿಯೇ  ಕಾಣುತ್ತವೆ . ಅದು ಉತ್ತರ ಭಾರತದಲ್ಲಿ ತಾಮ್ರಯುಗದಲ್ಲಿ ಕಂಡರೆ, ದಕ್ಷಿಣ ಭಾರತದಲ್ಲಿ ಕಬ್ಬಿಣದ ಯುಗದಲ್ಲಿ ಕಂಡು ಬರುತ್ತದೆ.ಸಿಂಧೂ ಸಂಸ್ಕೃತಿಯಲ್ಲಿ ನಮ್ಮ ಹಿಂದೂ ಧರ್ಮದ ಬೆರಳುಗಳನ್ನು ಕಾಣಬಹುದು ನಂತರ ಸು.ಸಾ ಶ ಪೂ2000 ರಲ್ಲಿ  ಆರ್ಯರ ಆಗಮನದಿಂದ ವೈದಿಕ ಸಂಸ್ಕೃತಿ ವಿಕಸನಗೊಂಡು ಹಿಂದೂ ಧರ್ಮದ ಬೇರುಗಳು ಇನ್ನಷ್ಟು ಭದ್ರಗೊಂಡು ಅದು ಹೆಮ್ಮರವಾಗಿ ಬೆಳೆಯಿತು.ವೈದಿಕ ಸಂಸ್ಕೃತಿಯನ್ನು ನಾವು ಎರಡು ಹಂತದಲ್ಲಿ ನೋಡುತ್ತೇವೆ, ಪೂರ್ವ ವೇದಕಾಲ ಮತ್ತು ಉತ್ತರ ವೇದಕಾಲವೆಂದು
ಪೂರ್ವ ವೇದ ಕಾಲವನ್ನು ಋಗ್ವೇದ ಕಾಲವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸರಳವಾಗಿದ್ದವು ದೇವರುಗಳ ಸಂಖ್ಯೆಯು ಕಡಿಮೆ ಇತ್ತು. ಅವರುಗಳೆಂದರೆ ಇಂದ್ರ,ಪೃಥ್ವಿ ವಾಯು ವರುಣ,ಅಗ್ನಿ ಸೂರ್ಯ, ಸೋಮ. ಆದರೆ ಉತ್ತರ ವೇದಕಾಲದಲ್ಲಿ ದೇವರುಗಳ ಸಂಖ್ಯೆಯು ಹೆಚ್ಚಾಯಿತು  ಮತ್ತು ಆಚರಣೆಗಳು ಜಟಿಲವಾದವು ಆ ಮಾತು ಬೇರೆ. ಈ ಅವಧಿಯಲ್ಲಿ ಸೃಷ್ಟಿಯಾದ ದೇವರುಗಳು ಸಂಖ್ಯೆ ಹೆಚ್ಚು ಅದರಲ್ಲಿ ಪ್ರಧಾನ ದೇವರುಗಳು, ಬ್ರಹ್ಮ ವಿಷ್ಣು ಮಹೇಶ್ವರ, ಇವರುಗಳನ್ನು  ಸೃಷ್ಟಿ, ಸ್ಥಿತಿ,ಲಯ ಕರ್ತೃ ಗಳೆಂದು ನಾವು ನಂಬುತ್ತೇವೆ. ಇವರುಗಳ ಜೊತೆಯಲ್ಲಿ ಗಣೇಶ, ಕಾರ್ತಿಕೇಯ, ಪಾರ್ವತಿ, ಲಕ್ಷ್ಮಿ,ಕಾಳಿ, ದುರ್ಗಾ ಮುಂತಾದ ದೇವರಗಳು ಅಸ್ತಿತ್ವಕ್ಕೆ ಬಂದರು. ಕೊನೆಗೆ ನಾನು ಹೇಳಿದೆನಲ್ಲವಾ ದುರ್ಗಾ ಮಾತೆ ಈ ದೇವರ ಆರಾಧನೆಯ ಅಂಗವಾಗಿ ನಡೆಯುವ ಹಬ್ಬವೆ ನವರಾತ್ರಿ 
 ಇದರ ಒಂದು ದಂತಕಥೆಯ ಪ್ರಕಾರ ಮಹಿಷಾಸುರ ಬ್ರಹ್ಮದೇವನಿಂದ ಅಮರತ್ವ ಪಡೆಯುತ್ತಾನೆ ಅದರೆ ಅವನಿಗೆ ಮಹಿಳೆಯಿಂದ ಮಾತ್ರ ಮರಣ ಇರುತ್ತದೆ ಪರಿಣಾಮವಾಗಿ ಮಹಿಷಾಸುರ ತ್ರೀಲೋಕ ಅಂದರೆ ಭೂಲೋಕ,ಸ್ವರ್ಗ ಮತ್ತು ಪಾತಾಳ ಲೋಕ ಸಂಹಾರ ಮಾಡಲು ಪ್ರರಂಭಿಸಿದಾಗ  ದೇವತೆಗಳೆಲ್ಲ       ಭಯಭೀತರಾಗಿ ಬ್ರಹ್ಮ ದೇವನಲ್ಲಿ ಬೇಡಿಕೊಳ್ಳುತ್ತಾರೆ
ಬ್ರಹ್ಮದೇವ ಮತ್ತು ಶಿವನ ಶಕ್ತಿ ಯಿಂದ ದುರ್ಗಾ ಮಾತೆಯು ಪಾರ್ವತಿ ದೇವಿಯಾಗಿ ಪುನರ್ ಜನ್ಮ ತಾಳುತ್ತಾಳೆ.ಈ ಮೂರು ದೇವರುಗಳ ಆಶೀರ್ವಾದದಿಂದ ದುರ್ಗಾ ದುಷ್ಟ ಮಹಿಷಾಸುರನ ಸಂಹಾರ ಮಾಡಲು ಒಂಬತ್ತು ಅವತಾರ ತಾಳುತ್ತಾಳೆ ಆ ಒಂಬತ್ತು ಅವತಾರಗಳೆ 
ಶೈಲಪುತ್ರಿ,ಬ್ರಹ್ಮಚಾರಣಿ ಚಂದ್ರಘಂಟಾ,
ಕುಶ್ಮಾಂದಾ ,ಸ್ಕಂದಮಾತಾ,ಕಾತ್ಯಾಯಿನಿ, ಕಾಲ್ರಾತ್ರಿ,ಮಹಾಗೌರಿ,ಸಿದ್ಧಿದಾತ್ರ. ಪ್ರತಿ ದಿನ ಒಂದೊಂದು ಅವತಾರವೆತ್ತಿ ಅಂತಿಮ ದಿನ ದುಷ್ಟ  ಸಂಹಾರ ಮಾಡಿ ವಿಜಯಾ ಚರಣೆಯೇ ಕುರುಹಾಗಿ  ವಿಜಯದಶಮಿ, ದುಷ್ಟ ನಿವಾರಣೆ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಇದು ನಮ್ಮ ನಾಡ ಹಬ್ಬವು ಹೌದು, ಹಾಗಾಗಿ ಮೈಸೂರು ಅರಸರ ಕಾಲದಿಂದಲೂ ನಮ್ಮ ಈ ಹಬ್ಬವನ್ನು ನಾಡ ಹಬ್ಬವಾಗಿ ಆಚರಿಸುವ ಪರಂಪರೆ ನಡೆದು ಕೊಂಡು ಬರುತ್ತಿದೆ.ಆದರೆ ಈ ಹಬ್ಬವನ್ನು ವಿಜಯನಗರದ ಅರಸರು ಮೊದಲು ವೈಭಯುತವಾಗಿ ಆಚರಿಸುತ್ತಿದ್ದರು. ಅವರ ಮಾಂಡಲಿಕರಾದ ಮೈಸೂರು ಅರಸರು ತಾವು ಸ್ವತಂತ್ರವಾಗಿ ಆಡಳಿತ ಮಾಡುವ ಸಂದರ್ಭದಲ್ಲಿ  ಬಹು ವಿಜೃಂಭನೆಯಿಂದ ಆಚರಿಸಿದರು ಈ ದಸರಾ ಹಬ್ಬವನ್ನು ಮೈಸೂರಲ್ಲಿ ಸ.ಶ.1610 ರಲ್ಲಿ  ಪ್ರಾರಂಭಿಸಿದ ಶ್ರೇಯಸ್ಸು ರಾಜ ಒಡೆಯರ್ ಗೆ ಸಲ್ಲುತ್ತದೆ . ಇಂದು ಸರಕಾರವೆ ಮುಂದೆ ನಿಂತು ದಸರಾ ಹಬ್ಬವನ್ನು ಬಹು ವೈಭವದಿಂದ ಆಚರಿಸುವ ಪರಂಪರೆ ಇದೆ. ದೇಶ ವಿದೇಶಗಳಿಂದ ಅಸಂಖ್ಯ ಪ್ರವಾಸಿಗುರು ಬಂದು ದಸರಾ ಸಡಗರವನ್ನು ಕಣ್ಣು ತುಂಬಿಕೊಂಡು ಹೋಗುತ್ತಾರೆ.ನಾವು ಕೂಡಾ ದುಷ್ಟ ಸಂಹಾರದ ಸಂಕೇತದ ದಸರಾವನ್ನು ಸಂತೋಷ ಮತ್ತು ಸಡಗರದಿಂದಲೇ ಆಚರಿಸೋಣ.ಶುಭರಾತ್ರಿ 🙏🙏

ಬಸನಗೌಡ ಗೌಡರ

Monday, October 4, 2021

* ಬದಲಾದ ಕಾಲಕ್ಕೆ ತಕ್ಕಂತೆ ಸಂಸ್ಕಾರ *

      ನಾಗರಿಕತೆ ಮತ್ತು ಸಂಸ್ಕೃತಿಯನ್ನು ಕೆಲವರು ತಪ್ಪಾಗಿ ಪರಿಭಾವಿಸಿದ್ದನ್ನು ನಾನು ನೋಡಿದ್ದೇನೆ ಆದರೆ ಇವೆರಡು ಶಬ್ದಗಳು ಬೇರೆ ಬೇರೆ ಯಾಗಿವೆ .ಸಂಸ್ಕೃತಿ ಎಂದರೆ  ನಾವು ಏನಾಗಿದ್ದೇವೆ ಎನ್ನುವುದನ್ನು ತಿಳಿಸಿದರೆ ನಾಗರಿಕತೆ ನಾವು ಏನನ್ನು ಹೊಂದಿದ್ದೇವೆ ಎನ್ನುವುದನ್ನು ತಿಳಿಸುತ್ತದೆ ಅಂದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಮ್ಮ ಆಚಾರ ,ವಿಚಾರ ತತ್ವಜ್ಞಾನ,ಧರ್ಮ ಇವೆಲ್ಲವೂ ಸಂಸ್ಕೃತಿಯಲ್ಲಿ ಬಂದರೆ ನಮ್ಮ ಬದುಕನ್ನು ಸರಳಗೊಳಿಸುವ ಸಲುವಾಗಿ ನಾವು ಹೊಂದಿರುವ ಭೌತಿಕ ವಸ್ತುಗಳೆಲ್ಲವು ನಾಗರಿಕತೆ ಪರಿವ್ಯಾಪ್ತಿಯಲ್ಲಿ ಬರುತ್ತವೆ.ಈಗ ನಾನು ಹೇಳಲು ಹೊರಟಿರುವ ಉದ್ದೇಶ ಇವೆರಡರ  ವ್ಯತ್ಯಾಸಗಳನ್ನಲ್ಲ ಬದಲಾಗಿ ನಾಗರಿಕತೆ ಬರಾಟೆಯಲ್ಲ ಸಂಸ್ಕೃತಿಗೆ ಕಡಿಮೆ ಮಹತ್ವ ಕೊಡುತ್ತಿದ್ದೇವೆ ಎಂದು ಅನಿಸುವುದಿಲ್ಲವೆ ? ನಮಗೆ ಕಾರು ಉಂಟು, ಬಂಗಲೆ ಉಂಟು ಕ್ಷಣಾರ್ಧದಲ್ಲಿ ಅಮೆರಿಕದಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಮಾತನಾಡಿಸುವ ಮೊಬೈಲ್ ನಮ್ಮ ಹತ್ತಿರ ಉಂಟು, ಆದರೆ ಹತ್ತಿರ ಇರುವ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಪ್ರೀತಿಸುವ ವ್ಯವಧಾನ ನಮ್ಮಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಮಾನವ ಸಂಬಂಧಗಳು  ಟಿ ವಿ ಮತ್ತು ಮೊಬೈಲ್ ದಾಸ್ಯತನದಲ್ಲಿ ನುಚ್ಚು ನೂರಾಗುತ್ತಿರುವಂತೆ ಭಾಸವಾಗುತ್ತಿದೆ !ಅದು ಹೇಗೆ ? ಮೊಬೈಲ್ ನಲ್ಲಿ ತಾಸು ಹರಟುವ ಜನ ಭೌತಿಕವಾಗಿ ಹತ್ತು ನಿಮಿಷ ಅವರಿಗಾಗಿ ಸಮಯ ಕೊಡದಷ್ಟ ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದ್ದೆವೆ .ಅದಕ್ಕೆ ನಮ್ಮ ದಾವಂತದ ಬದುಕು ಕಾರಣವಾಗಿರಬಹುದು.ಪೇಸ್ ಬುಕ್ ,ವಾಟ್ಸ್ ಅಪ್ ನಲ್ಲಿ ಸಾವಿರಾರು ಬಾರಿ ಶುಭಾಶಯಗಳ ಕೋರುವ ನಾವು ಮುಖಾ ಮುಖಿ ಯಾದಾಗ ಮುಖದ ತುಂಬಾ ನಗು ತುಂಬಿ ಎಷ್ಟು ಸಾರಿ ಹಾರೈಸಿದ್ದೇವೆ ಹೇಳಿ ? ಇದರ ಅರ್ಥ ಎಲ್ಲರೂ ಹೀಗೆ ಇರುತ್ತಾರೆ ಎಂದಲ್ಲ   ಬದಲಾಗಿ ಸಂಸ್ಕಾರ ತುಂಬಿದ ಸಮಾಗಮ ಕಡಿಮೆಯಾಗುತ್ತಿರುವುದು ಒಂದು  ಕ್ಷಣ ನಮ್ಮನ್ನು ಚಿಂತೆಗೆ ದೂಡಿದೆ  ಎಂದರೆ ತಪ್ಪಾಗಲಾರದು. ನಾವು ಮೊಬೈಲ್ ದೂರಿದರೆ ಏನು ಫಲ ,ಅದರ ಬಳಕೆಯ ಬಗ್ಗೆ ಒಂದಷ್ಟು ಜಾಗೃತಿ ವಹಿಸಿದರೆ ಸಾಕು .ಹಾಗಾದರೆ ಜಾಗೃತಿ ಮೂಡಿಸುವ ಕೆಲಸವಾದರೂ ಹೇಗೆ ? ಇದನ್ನು ಮಾಡುವವರು ಯಾರು ಇತ್ಯಾದಿ ಪ್ರಶ್ನೆ ತಲೆಯಲ್ಲಿ ಓಡಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ .ಇದು ತುಂಬಾ ಕಠಿಣವಾದ ಕೆಲಸ .ಹಾಗಾದರೆ,ಈ ಕೆಲಸ ಮಾಡುವವರು ಯಾರು? ಉತ್ತರ ಸುಲಭವಾಗಿದೆ ! ಆದರೆ ಕಾರ್ಯ ತುಂಬಾ ಕಠಿಣವಾಗಿದೆ ಒಂದು  ಮನೆ, ಇನ್ನೊಂದು ಶಾಲೆ.ಸಂಸ್ಕಾರ ಸಂಸ್ಕೃತಿ ಕಲಿಸುವವರು ಇವರೆ ಅಲ್ಲವೆ, ಇದು ಕಾನೂನಿಂದ ಮಾಡುವ ಕೆಲಸವಲ್ಲ ಅದು ಅಷ್ಟು ಸುಲಭವೂ ಅಲ್ಲ ಕಾನೂನಿಂದ ಮಾಡುವುದಾಗಿದ್ದರೆ ಬಹುಶಃ ಇವತ್ತು ಯಾವುದೇ ಅಪರಾಧಗಳು ಸಮಾಜದಲ್ಲಿ ನಡೆಯುತ್ತಿರಲಿಲ್ಲ. ಅಂದರೆ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ತುಂಬಾ ಇದೆ ಎಂದು ಅರ್ಥವಾಯ್ತು ಅಲ್ಲವಾ..! ಸರಿ ಇನ್ನು ಸಂಸ್ಕಾರ, ಸದಾಚಾರ ಕಲಿಸುವ ವಿಚಾರಕ್ಕೆ ಬರುತ್ತೇನೆ ಅಲ್ಲ ಅಲ್ಲ.... ಕಲಿಯುವ ವಿಚಾರಕ್ಕೆ ಬರುತ್ತೇನೆ ಅಂದರೆ ಮನೆ, ಶಿಕ್ಷಣ ಸಂಸ್ಥೆಗಳಲ್ಲಿ ಯಾರು ಮಹತ್ವದ ಪಾತ್ರ ವಹಿಸುತ್ತರೆ ?  ಮನೆಯಲ್ಲಿ ತಂದೆ ತಾಯಿ, ಶಾಲೆಯಲ್ಲಿ ಬಂದರೆ ಶಿಕ್ಷಕರು, ಇವರು ಬಳೆಸುವ  ಸಂಸ್ಕಾರ ಮಗುವನ್ನು ಸರಿಯಾದ ದಾರಿಗೆ ತರಬಹುದೇನೋ ...ನಿನ್ನೆ ನಾನೊಂದು ಮೊಬೈಲ್ ನಲ್ಲಿ ವಿಡಿಯೋ ನೋಡಿದೆ ಅದೇನಂದರೆ ತಂದೆ ಮಲಗಿ ಮೊಬೈಲ್ ನೋಡುತ್ತಿರುವುದು ಮಗು ಅದನ್ನು ನೋಡಲು ಬರುವ, ಮತ್ತೆ ಮಗುವಿಗೆ ಕಾಣಿಸದಂತೆ ಮುಂದೆ ಸರಿಯವ, ಅದನ್ನು ನೋಡಲು ಆ ಮಗು ಮತ್ತೆ ಬರುವುದು! ಇದು ನೋಡಲು ಹಾಸ್ಯಮಯ ಎನಿಸಿದರೂ  ಅದು ಮೊಬೈಲ್ ಬಳಕೆಯ ವಿಡಂಬನೆ ಅನಿಸದೆ ಇರದು. ಹಿಂದಿನ ಕಾಲದಲ್ಲಿ ಪೂಜೆ ಪುನಸ್ಕಾರಗಳಿದ್ದವು ಅದನ್ನು ತಂದೆ ತಾಯಿ ಮಾಡುತ್ತಿದ್ದರು ಮಕ್ಕಳಿಂದ ಮಾಡಿಸುತ್ತಿದ್ದರು(ಈಗ ಇಲ್ಲ ಎನ್ನಲಾರೆ ಅದು ಯಾವ ಹಂತದಲ್ಲಿ ಇದೆ ತಮಗೆ ಬಿಡುತ್ತೇನೆ) ಪೂಜೆಗಳಿಂದ ದೇವರು ವರ ಕೊಡುತ್ತಾನೆ.. ಇಲ್ಲವೆ ? ಅದು ಬೇರೆ ಮಾತು, ಆದರೆ ಪೂಜೆಯಿಂದ ಮಗುವಿನಲ್ಲಿ ಏಕಾಗ್ರತೆ ಬೆಳವಣಿಗೆ ಯಾಗುವದಂತು ಸತ್ಯ. ಆ ಮೂಲಕ ಅತಿಯಾಗಿ ಭೌತಿಕ ಸಾಧನಗಳ ದಾಸನಾಗದಂತೆ ಮಾಡಬಹುದೇನೊ (ಖಚಿತವಾಗಿ ಹೇಳುವ ಸ್ಥಿತಿಯಲ್ಲಿ ನಾನು ಇಲ್ಲ) ಪ್ರಯತ್ನ ಮಾತ್ರ ಇದ್ದರೆ ಒಳ್ಳೆಯದು ಅದಕ್ಕೆ ಪೂರಕವಾಗಿ ನಾವು ಪುಸ್ತಕದ ದಾಸರಾದರೆ ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು. ಅದಕ್ಕೆ  ನಾನು ಹೇಳಿದ್ದು ನಾನು ಕಲಿಸುವುದಿಲ್ಲ ಬದಲಾಗಿ ಕಲಿಯುವಂತೆ ಇರುವುದು ಎಂದು.ಇನ್ನು ಶಿಕ್ಷಣ ಸಂಸ್ಥೆಗಳ,ಅಲ್ಲಿರುವ ಗುರುಗಳ ಮೊಬೈಲ್ ಅವಲಂಬನೆಯೂ ಕೂಡಾ ಅಷ್ಟೇ ಜವಾಬ್ದಾರಿಯಿಂದ ಕೂಡಿದ್ದರೆ ಫಲಿತಾಂಶ ಚನ್ನಾಗಿ ಬರಲು ಸಾಧ್ಯ (ಪರೀಕ್ಷೆ ಪರಿಣಾಮ ಒಂದೆ ಅಲ್ಲ) ಯಾವ ಮೊಬೈಲ್, ಪ್ರೊಜೆಕ್ಟರ್, ಉಪಕರಣಗಳು ಶಿಕ್ಷಕನ ಸ್ಥಾನಕ್ಕೆ ಏರಲಾರವು ಅವು ಪೂರಕ ಸಾಧನಗಳೇ ಹೊರತು ಅವುಗಳೆ ಸರ್ವಸ್ವವಲ್ಲ ಎನ್ನುವುದು ನನ್ನ ಭಾವನೆ (ಸಂಪೂರ್ಣ ಅವುಗಳಿಗೆ ಅವಲಂಬನೆ ಆಗಬೇಕೆಂದು ನಾನು ಹೇಳಲಾರೆ).ಹಿತಮಿತ ಬಳಕೆಯ ಸಂಸ್ಕಾರ ನಮ್ಮ ಮಕ್ಕಳಲ್ಲಿ ಬೆಳಸಲು ಇನ್ನಾದರೂ ನಾವು ಅಳವಡಿಸಿ ಕೊಳ್ಳಬೇಕು ಎನ್ನುವುದು ನನ್ನ ಲೇಖನದ ಉದ್ದೇಶ ನಿಮ್ಮ ಸಮಯ ಕದ್ದದ್ದಕ್ಕೆ ಕ್ಷಮೆಯಿರಲಿ ಶುಭರಾತ್ರಿ.

Saturday, October 2, 2021

*ತತ್ವ ಬಲದ ಮಹಾತ್ಮ *

ಬುದ್ಧ ,ವರ್ಧಮಾನ ನೀಡಿದ 
ಸಿದ್ಧೌಷದ ಸೇವಿಸದೆ ಸೊರಗಿದರು, 
ಕೊರಗಿದರು ಸಾವಿರ ಸಾವಿರ ತಲೆಮಾರು../ 
ಆಸೆ, ದ್ವೇಷ, ಅಸೂಯೆ, ಹಿಂಸೆಖಯಂಬ.          ರೋಗದಿಂದ....../
ಅರಿತು ಔಷದ  ಅರುಹಿದ 
ಗಾಂಧಿಯೆಂಬ ಅಮರ ವೈದ್ಯ./ಜ 
ಗುಲಾಮಗಿರಿಯ ಸಲಾಮು ಸಾವಿರದ ಸಾವಿರ ಕನಸುಗಳು ಸಮಾಧಾನಕ್ಕೆ 
ಕಳಚಿ ಸಂಕೋಲೆ  ಹರಿಯಲು 
ಹೆಣೆದ ಬಲೆ ಸತ್ಯಾಗ್ರಹವೆಂಬ 
ಸತ್ಯದ ಮಹಾ ಅಸ್ತ್ರ ../ಗಿರಡ್ಡಿ 
ತತ್ವ ಬಲದ ಮಹಾತ್ಮ
ದೇಶಕ್ಕಾದ ಹುತಾತ್ಮ 
ಸ್ವಾತಂತ್ರ್ಯ ಪಡೆದ ಭಾರತೀಯ 
ಈಗ ಧನ್ಯಾತ್ಮ //
ಗಲ್ಲಿ ಗಲ್ಲಿ ಗಳಲ್ಲಿ ಮಾಡಿದೆವು
ಮೂರ್ತಿಗಳ ಪಾರುಪತ್ಯ 
ತತ್ವಗಳೆಮಗೆ ಅಪತ್ಯ !
ತಾತಾ ನಿಮ್ಮ  ಜಯಂತಿಯಂದು 
ನಮಗೆ ಆದರ್ಶ ಪಟ್ಟಿ ನೀಡದವರೆ 
ಈಗ ನಾಪತ್ಯೆ ..!

Friday, October 1, 2021

* ನಾನಾಗುವೆ ತೃಪ್ತ *

ನಾ ಕಲಿಸುವೆ ಎನ್ನುವುದೇ 
ಒಂದು ಭ್ರಮೆ ...!
ಕಲಿಯಲು ಇವರಿಗಿಲ್ಲ 
ಅರ್ಹತೆ ಎನ್ನುವುದು ಒಂದು ಅಕ್ಷಮ್ಯ..!
ಕಲಿಸುವುದು ಏನಿದೆ ?
ಪುಸ್ತಕದ ಅಕ್ಷರ, ಅಂಕಿಗಳ ಮಾಲೆ ? 
ನಾ ಮೊದಲು ನೋಡಿದೆ 
ನಂತರ ಬಾಯಿ ತೆರೆದೆ.. 
ಅಷ್ಟರಲ್ಲಿ ಕಲಿಸಿದೆ ಎನ್ನುವ ಪಿತ್ತ 
ನೆತ್ತಿಗೇರಿದರೆ.... ಅವನೊಬ್ಬ ಹುತಾತ್ಮ !
ಕಲಿಸಿದ ನಾನೊಬ್ಬ  ಪ್ರೇತಾತ್ಮ!
ಪ್ರೀತಿ ಇಲ್ಲದ ಪಾತ್ರ ಯಾರು ಮಾಡಿದರೇನು ?
ಭಕ್ತಿಯಿಲ್ಲದ ತೀರ್ಥ ಯಾತ್ರೆ 
ಶಕ್ತಿ ಯಿಲ್ಲದ ಸೈನಿಕನ ದಂಡ ಯಾತ್ರೆ 
ಆಗ ನಾನೊಬ್ಬ ಕೆಂಭೂತ ! 
ಕೈಯಲ್ಲಿ ಕೋಲು 
ಮುಖವೆಲ್ಲ ಜೋಲು 
ನಿದ್ದೆಕಣ್ಣಿನಲ್ಲಿ ಗುಣಗುಣಿಸಿದರೆ 
ನಿನ್ನ  ಪಾಲಿಗೆ ನಾನೊಬ್ಬ ಹದ್ದು 
ಇದಕ್ಕೆ ಯಾರಲ್ಲಿ ಇಲ್ಲ ಮದ್ದು.
ನನ್ನ ನೋಡಿಯೇ ನೀನು 
ಕಲಿಯಬೇಕು ಬದುಕಿನ ಲೆಕ್ಕ 
ಆಗ ನಾನೊಬ್ಬ ಗುರು ಪಕ್ಕಾ
ಅಳಿಸಲಾಗದ ಕಪ್ಪು
ಯಾರೆ ಬಳಸಿದರೂ ಅದು ತಪ್ಪು 
ಅಪ್ಪಿ, ಒಪ್ಪಿಕೊಂಡು ಮಾರ್ಗದರ್ಶನ, 
ಮಾಡಿದಾಗ ನಾನಾಗುವೆ ತೃಪ್ತ //


        ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...