Saturday, December 31, 2022

ಹೊಸತೇನಿದೆ ಎಲ್ಲವೂ ಹಳತೆ

ಹೊಸತೇನಿದೆ ಎಲ್ಲವೂ ಹಳತೆ 
ಹೊಸೆದು ಹುರಿಗೊಳಿಸದ ಬಾಳು ಅದು ಹಾಳು ವಾರವಿರುವಾಗಲೆ ತಯಾರಿ  
ಬಾರಗಳಲಿ ಬಾರಾ ಆಗುವುದು ಕಾಯುವ ಉದಾರಿಗಳು ಹೆಂಡತಿ ಹತ್ತು ನಿಮಿಷ ತಡ ಮಾಡಿದರೆ ಹಾರಾಡುವ ನಾವು ಈಗ ಸಮಾದಾನಿ  
ಹೊಸ ವರುಷ ಸ್ವಾಗತಿಸಲು ನಿಂತ ಸ್ವಾಗತಕಾರರು,
ಹಳೆ ವರುಷದ ಬೀರು, ಅದೇ ಹಳೆ ಬಾರು, ಹುರಿಗಡಲೆಯೂ ಹಳೆಯದೆ 
ತವಕ ಮಾತ್ರ ಹೊಸದು 
ಅಂಕಿಗಳ ಕಳೆದು ಸಂಖ್ಯೆ ಸೇರಿಸುವ ಸಂಭ್ರಮ ಮುಂಜಾನೆ ಬರುವ ರವಿ ಹೊಸಬನೇನು ? 
ಕಸ ತಗಿಯದೆ ಕಸಿಯಲು ನಿಂತರೆ ?
ಹೊಸದೇನಿದೆ ? ಕಲ್ಮಷಗಳು ಕರಗದೆ 
ನಲ್ಮೆಯು ಅರಳದೆ ನಡು ರಾತ್ರಿ ಅರಳಿದ ಹೊಸ ಭಾವ ಅದು ಸಾಬೂನು ಬೊಬ್ಬೆ , ಗಾಳಿಯೇ ಬೇಡ.
ಗಲ್ಲಿ ಗಳಲ್ಲಿ ಎಲ್ಲವೂ ಎಲ್ಲರಿಗೂ ವೈಭವ ! ಇವನೆಲ್ಲಿಯವನು ಹಳತು ಹೇಳಲು ನಿಂತ ಕೊಳೆತ ಮನುಷ್ಯ ಎನ್ನಬಹುದೇನೊ ? 
ನೆವವೊಂದೆ ಸಾಕಿತ್ತು ಕೆ ಕೆ ಹಾಕಿ ಕುಣಿಯಲ... ಕುಡಿಯಬೇಕೆಂದೇನು ಇಲ್ಲ ಕುಡಿಯದೆ ಓಲಾಡಬಹುದು ಕುಹಕ ಮಾಡುವವರ ಕಂಡು
ಕಳ್ಳತನ ಮಾಡಿಯೂ ಒಳ್ಳೆಯ 
ಭಾಷಣ ಮಾಡುವವರ ಕಂಡು
ಓಲಾಡಬಹುದು  ಸುಳ್ಳಿನ ಸಾಮ್ರಾಜ್ಯ ಕಟ್ಟಿ 
ಸತ್ಯವನ್ನು ಗುಲಾಮರನ್ನಾಗಿ ಮಾಡಿಕೊಂಡವರ ಕಂಡು ಓಲಾಡಬಹುದು ನಶೆ ಏರಿದ ನರ ಮಾನವ ಕಂಡು ಹೊಸವರ್ಷದ ಸ್ವಾಗತಕೆ ಪಟಾಕಿ ಹಾರಿಸಲು ಸಜ್ಜಾಗಿ ನಿಲ್ಲೋಣ ಎರಡು ನೂಕಿ ಮೂರು ಏರಿಸಲು.
ಏಕೆಂದರೆ ನಾವೆಲ್ಲಾ ಹತ್ತರಲ್ಲಿ ಹನ್ನೊಂದು.

ಹಳತು ಕೊಳೆತು ಗೊಬ್ಬರ 
ಹೊಸ ಚಿಗುರು ಬರಲು ಬಂತು 
ಹೊಸದೊಂದು ವರುಷ
ತಂತು ನಮಗೆಲ್ಲ ಹರುಷ

ರಾಗ ದ್ವೇಷ ಕಳೆದು 
ರೋಗ ರುಜೀನ ತೊಳೆದು
ಯೋಗದಿಂದ ಬಂತು ಬೋಗ 
ಯುಗ ಒಂದೆ ನಮಗೆ ಸುಯೋಗ

ಬಾಣ ಬಿರುಸು ಬಾರಾ ಕಳೆದ ಮೇಲೆ
ಬಾನಿಗೇನು ಗೊತ್ತು ಇದು ಹೊಸದು
ಭಾಸ್ಕರ್ ನಿಗಿಲ್ಲ ಆದಿ ಅಂತ್ಯ
ಬಂದು ಹೋಗುವದೊಂದೆ ಸತ್ಯ.

ಬೆಳಕು ಬಾರ ಕಡಿಮೆಯಾಗಿ
ಸೆಳೆತವೊಂದೆ ಸೀತ ಕೋಡಿ
ಬಿಸಿಲಿಗೂ ಬಂತು ಬೇಡಿಕೆ
ಹಾರಿಸಲ್ಲಿ ಪಟಾಕಿ ಜೋಡಿ.

ಬ್ರಿಟಿಷರಿಂದ ಪಡೆದ ವರ್ಷ
ಬಾಗಿ ಪಟಾಕಿ ಹಾರಿಸಿ ಕುಣಿದು
ತ್ಯಾಗದಿಂದ ಯುಗಾದಿ ಮರೆತ
ಜಗದ ನಿಯಮ ಪಾಲಕರು.

ಎರಡು ಕಳೆದು ಮೂರು ಏರಿಸಿ
ಹಲಗಿ ಬಾರಿಸುವ  ಹುಡುಗರು
ಹತ್ತು ತಲೆಮಾರೆತ್ತ ಸಾಗಿದರೇನು 
ತುತ್ತು  ತುಂಬಿಸಲೋಡಬೇಕು ಮುಂದೆ

Thursday, December 29, 2022

* ಕನ್ನಡಕ್ಕೊಬ್ಬನೆ ಕುವೆಂಪು *

ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಪ್ರಯುಕ್ತ ಮಹಾನ ಕವಿ, ರಸಋಷಿಗೆ ಕನ್ನಡಿಗರ ಪ್ರೀತಿಯ ನುಡಿನಮನ.


ಕನ್ನಡಕ್ಕೊಬ್ಬ ಕುವೆಂಪು ಸಿಗದಿದ್ದರೆ ಮಲೆನಾಡಿನ ಸೋಬಗೊಂದು ಮನೆ ಮನೆಗಳಲ್ಲಿ ಮಾಧುರ್ಯ 
ಅಲೆಯಾಗಿ ಕಂಪು ಹರಡುತ್ತಿತ್ತೆನೋ ? । ಪ।

ಆ ಪಂಪ, ಪೊನ್ನ ,ಜನ್ನ  ರನ್ನರನ್ನು ಬಣ್ಣಿಸುವ
ಎನ್ನ ಕುಲಕೋಟಿಯ ತನ್ನ ತನವನ 
ಬಡಿದೆಬ್ಬಿಸುವ ರಸಗವಳ ಸಿಗುತ್ತಿತ್ತೇನೋ?॥
 
ಆ ಗಿರಿಕಂದರದ ಕೋಗಿಲೆಗಳಿಂಚರ ಕನ್ನಡಿಗನ ಸ್ವಾಭಿಮಾನದ ಆಲೆಯಾಗಿ ಬಲೆಯಾಗಿ
ಗಂಧರ್ವ ಲೋಕ ಸೃಷ್ಟಿಯಾಗುತ್ತಿತ್ತೇನೋ ?॥

ಆ ಶ್ರೀಗಂಧದ ಮರ ಮೈಸೂರು 
ಅರಮನೆಯ ದಸರೆಯಾಗಿ ದಶ ದಿಕ್ಕುಗಳಿಗೆ ಹೊಸ 
ಸುಗಂಧ ಪರಿಮಳ ಸೂಸುತ್ತಿತ್ತೇನೋ?॥

ಆ ಮತ ಈ ಮತ ಭಿನ್ನ ಮತಗಳ ಭೀತಿ 
ಸಾವಿರ ಪಂಥಗಳಲಿ ಸೇರಿ ಮನುಜ 
ಮತದಲ್ಲಿ ಲೀನವಾಗುತ್ತಿತ್ತೇನೋ ?॥

ಆ ಕವಿಶೈಲದೊಂದೊಂದು ನುಡಿ
ಕನ್ನಡಿಗರ ಹೆಮ್ಮೆಯ ಕಾವ್ಯವಾಗಿ 
ಅರಸಿಕನೂ ಬೆರಗಾಗುವ ಹೊಸ 
ಮನ್ವಂತರ ಖುಷಿ ನೀಡುತ್ತಿತ್ತೇನೋ.?॥

ಆ ಕ್ಲಾಸಿಕಲ್ ಯುಗದ ಕನ್ನಡದ ಕಂಪು 
ಈ ಸವಿಗನ್ನಡದ ಆದಿ ಜ್ಞಾನಪೀಠ ಪ್ರಶಸ್ತಿ 
ಭುವನೇಶ್ವರಿ ಕೊರಳ ಮಾಲೆಯಾಗಿ 
ಭುವನದಲ್ಲಿ ಶೋಭಿಸುತ್ತಿತ್ತೇನೋ.?

ಆ ವೈಚಾರಿಕ ನೆಲೆಯ ಸದಭಿವೃಚಿಯ ಸಾಹಿತ್ಯ
ಅಂಧಕಾರವ ಮುರಿದು ಸೈದ್ಧಾಂತಿಕ ಗಾಳಿ
ಅಧಮನ ಅನೀತಿಯ ಆಲಿಂಗನ ಬಿಡಿಸಿ
ಸುಧಾಮನರಮನೆ ಮಾಡುತ್ತಿತ್ತೇನೋ.?

ಕನ್ನಡಕ್ಕೊಬ್ಬ ಕುವೆಂಪು ಸಿಗದಿದ್ದರೆ ಮಲೆನಾಡಿನ ಸೋಬಗೊಂದು ಮನೆ ಮನೆಗಳಲ್ಲಿ 
ಮಾಧುರ್ಯ ಅಲೆಯಾಗಿ ಕಂಪು ಹರಡುತ್ತಿತ್ತೆನೋ ? । ಪ।

Monday, December 26, 2022

ತನಗಗಳು


ಕೇಳುತ್ತಾ ನಡೆದರೆ
ನೀನು ಆಗುವೆ ಬೆಣ್ಣೆ
ಕೇಳದೆ ಹೊರಳಿದೆ
ನೀನು ಜಗದ ಗೊಣ್ಣೆ

ಹಾರಿ ಹೋಗುವ ಜೀವ
ದಾರಿಯಲ್ಲಿ ಇರಲಿ
ಕಲ್ಲು ಮುಳ್ಳು ಬಹಳ
ಜಾರಿ ಬಿದ್ದರೆ ಗೋರಿ.

ಭಾವನೆ ಬುಗ್ಗೆಯಂತೆ
ಸುಗ್ಗಿಯಲ್ಲಿ ಹಿಗ್ಗುತ್ತೆ
ಬರಕೆ ಕಮರುತ್ತೆ
ಪಾಪಿಗೆ ಹೆದರುತ್ತೆ.

Friday, December 23, 2022

* ಕಲಿಸೋ ಗುರುವೆ ನೀ ಕಲಿಸು *

* ಕಲಿಸೋ ಗುರುವೆ ನೀ ಕಲಿಸು *

ಕಲಿಸೋ ಗುರುವೆ ನೀ ಕಲಿಸೋ   
ನಾ ಜಾಣನೆಂಬ ಅಜ್ಞಾನದ ಚಳಿ ಬಿಡಿಸಿ.
ಹೃದಯ ಶ್ರೀಮಂತಿಕೆ ಕಲಿಸು 
ಸತ್ಪ್ರಜೆಗಳ ಸಮಾಜ ನೀ ಬೆಳೆಸೋ॥

ಶಿರಬಾಗಿ ನಡೆಯುವುದು ಕಲಿಸು
ಅರಿ ಚಿಗುರಿ ಶರ ಬಿಟ್ಟಾಗ 
ಗುರಿಯಿಟ್ಟು ಹೊಡೆಯುವುದು ಕಲಿಸು
ಅರಿವಿನ ದಾರಿಗೆ ಮುನ್ನುಡಿ ಬಾರಿಸೋ।।

ಅಕ್ಷರ ಕಲಿತ ಅತಿ ಬುದ್ಧಿವಂತರಿಗಿಂತ 
ಅನಕ್ಷರನಾದರೂ ಹೃದಯವಂತನು 
ಮೇಲೆಂಬುದು ಕಲಿಸಿ ಮರ್ದಿಸು
ಸಂಸ್ಕಾರದ ಸಮಾಜ ನೀ ಉಳಿಸೋ॥

ದುಡಿದು ತಿನ್ನುವ ಅಂಬಲಿ
ದುಡಿಯದೆ ತಿನ್ನುವ ಪಿಜ್ಜಾ 
ಬರ್ಗರಗಿಂತ ಮೇಲೆಂಬುದು ಕಲಿಸು 
ಊಟದಲ್ಲೆ ಆರೋಗ್ಯವೆಂಬುದು ನೀ ತಿಳಿಸು. ॥

ಕಾಫಿ ಮಾಡಿ ಪಾಸಾಗುವದಕ್ಕಿಂತ 
ಫೇಲಾಗಿ ಅನುಭವ ಪಡೆವ ನೈತಿಕತೆ 
ಮೇಲೆಂಬುದು ಕಲಿಸು ಕಲಿತದ್ದಕ್ಕಿಂತ 
ಪಡೆದ ಅನುಭವ ಮೇಲೆಂಬುದು ನೀ ತಿಳಿಸು॥

ಕಲಿಯುವುದು ಕೆಲಸಕ್ಕಲ್ಲ
ನುಲಿಯುವದು ನರ್ತನವಲ್ಲ
ಮಾತಾಡಿ ಕಳೆದುಕೊಳ್ಳುವುದಿಕ್ಕಿಂತ 
ಮೌನವಾಗಿರುವುದೆ ಲೇಶೆಂದು ನೀ ಕಲಿಸು।।

Thursday, December 22, 2022

* ರೈತ ಭರಮಣ್ಣ *



ಎಳ್ಳು ಹೋಳಿಗೆ ಮಾಡಿ
ಬಳ್ಳ ತುಂಬಾ ಜೋಳ ಬೆಳೆದು 
ಕಳ್ಳು ಬಳ್ಳಿಯ ಕರೆದು 
ಒಳ್ಳೆಯ ಭಾವದಿ  ಅನ್ನ ನೀಡಿ 
ಸಂಸ್ಕಾರದ ಗಣಿಯಾದ  
ಹಳ್ಳಿಯ ಈ ರೈತ ಭರಮಣ್ಣ

ಹಂಡ ಹೋರಿ ಮೇಯಿಸಿ 
ತುಂಡು ಭೂಮಿಯಲ್ಲಿ ಕರ್ಮ.
ಗಂಡು ಹೋರಿಗಳು ರಾಮ ಲಕ್ಷಣ 
ಬಂಡೆಯಂತ ಭೂಮಿ ತುಂಡು 
ತಂಡಾಗಿ ಸೀಳಿ ಮಾಡಿದ ಪುಂಡಿಪಲ್ಲೆ. 
ಪುಂಡನಂತಾದ ಈ ರೈತ ಭರಮಣ್ಣ 

ಕರಿಯ ಹೊಲದಲ್ಲಿ ಬಿಳಿಯ 
ಜೋಳದ ಬೀಜ ಬಿತ್ತಿ 
ಹಸಿರು ಸೀರೆಯುನುಡಿಸಿ 
ಭೂದೇವಿ ಆಗಿಹಳು ಮುತೈದಿ 
ಬೀಗರಾಗಿ ಬಂದಾವು ಕಬ್ಬಕ್ಕಿ 
ಬೆಳಸಿಗೆ ಮುತ್ತಿಕ್ಕಿ ನೆನೆದರು ಭರಮಣ್ಣ.

ದೇಶಕ್ಕೆ ಅನ್ನ ನೀಡಿ ಆದ ದಾಸ
ಕೋಶ ಓದಿದವನಾದ ಈಗ ಈಶ
ಬಾಸೆ ಕೊಡದೆ ಬಾಗಿ ನಡೆದು  
ಸರ್ವರಿಗೆ ಅನ್ನ ನೀಡಿ ಅನ್ನದಾತ
ಬೆನ್ನು ಮುರಿದರು ನನ್ನವರೆಂಬ 
ಭಾವದಿ ಮುನ್ನುಗ್ಗಿದ ಭರಮಣ್ಣ.

ಉಡಿಯ ತುಂಬಿ ಎಡಿ ಹಿಡಿದು 
ಓಡಾಡಿದ ಹೊಲದ ತುಂಬಾ 
ಹುಲ್ಲುಲಿಗೋ ಚಲ್ಲಾಂಬರಿಗೋ
ಜೀವರಾಶಿಯ ಉದರ ತುಂಬಲು
ಚರಗ ನೀಡಿ ಆದ ಅನ್ನದಾತ
ಇವನೆ ನಮ್ಮ ರೈತ ಭರಮಣ್ಣ

ಎಳ್ಳು ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು🙏🙏🌹🌹

Tuesday, December 20, 2022

ತನಗಗಳು

ತನಗ

ದುಂಡು ಮಲ್ಲಿಗೆಯಂತ
ಮುಖವಿದ್ದರೆ ಏನು?
ಮಂದಹಾಸ ವಿಲ್ಲದ
ಮುಖ ಕೆಂಡದ ಕುಂಡ.

ಪರರ ಇಡಿ ಗಂಟು
ಹೊತ್ತರೆ ಹೆಣಬಾರ
ಬಿತ್ತಿದರೆ ಸತ್ಸಂಗ
ನಿತ್ಯವೂ ಅದು ಸ್ವರ್ಗ.

ನನಗಂಟಿದ ಆಶೆ
ನಾ ನೋಯಿಸಿದ ಭಾಷೆ
ನನ್ನಲ್ಲಿಯ ಹತಾಶೆ
ನನಗಾಗಿದೆ ಪಾಶ.

ಬಂಗಾರ, ಹಣವಿಲ್ಲ
ಹೊಣೆಯರಿತು ಬದ್ರ
ಬಡಿವಾರ ಹೊದ್ದವ
ತಂದುಕೊಂಡ ದರಿದ್ರ.

 🖋. ಬಸನಗೌಡ ಗೌಡರ

Sunday, December 18, 2022

ಶಿಕ್ಷಕನ ಜೀವನದ ಸಾರ್ಥಕ ಕ್ಷಣ

ಶಿಕ್ಷಕನ ಜೀವನದ ಸಾರ್ಥಕ ಕ್ಷಣ

           ಅಂದು ಮೂರು ಅವಧಿಗಳನ್ನು  ಮುಗಿಸಿ ಮಕ್ಕಳ ಮೊಗದಲ್ಲಿ ಮಂದಹಾಸ ಮೊಳಗಿಸಿ ಎರಡೂವರೆ ಗಂಟೆಗೆ ಮನೆ ದಾರಿ ಹಿಡಿದೆ,ಹೊಟ್ಟೆ ತಾಳ ಹಾಕುತಿತ್ತು ಏಳುವರೆ ಗಂಟೆಗೆ ಗಡಿಬಿಡಿಯಲ್ಲಿ ತಿಂದ ಅವಲಕ್ಕಿ ಹೊಟ್ಟೆಯಿಂದ ಕಾಲ್ಕಿತ್ತೆತ್ತೇನೋ ?ಮನೆಗೆ ತಲುಪಿದ್ದೆ ತಡ, ಮನೆಯ ಮಡದಿ ಮನೆಗೆ ಬಂದ ಸುದ್ದಿ ವರದಿ ಒಪ್ಪಸಿಲು ರೆಡಿ ! ಆದರೆ ಕೇಳುವ  ವ್ಯವಧಾನ ನನಗಿರಲಿಲ್ಲ " ನಿಮ್ಮ ವಿದ್ಯಾರ್ಥಿ ಬಂದಿದ್ದ ಮದುವೆ ಆಮಂತ್ರಣ ನೀಡಿದ್ದಾನೆ ಎಂದಳು". ಆಮೇಲೆ ಕೇಳುತ್ತೇನ ಮೊದಲು ಊಟೋಬಾ ನಂತರ ವಿಠೋಬಾ ಎಂದು ನಗೆ ಚಟಾಕಿ ಹಾರಿಸಿ ಕೈಕಾಲು ಮುಖ ತೊಳೆದು ಅಡ್ಡುಣಗೆ ಮೇಲೆ ತಾಟಿಟ್ಟು ಕೈಗೆ ಬಾಯಿಗೆ ಸುರು ಹಚ್ಚಕೊಂಡೆ. ಬಿಸಿ ಬಿಸಿ ರೊಟ್ಟಿ ಬದನಿಕಾಯಿ ಪಲ್ಲೆ ಮೊಸರು ಚಟ್ನಿ ತಿನ್ನುವ ರೊಟ್ಟಿಯ ಲೆಕ್ಕ ತಪ್ಪುವಂತೆ ಮಾಡಿತು. ಸಿದಾ ರೊಮಿಗೆ ತೆರಳಿದೆ ನಂತರ ಪೇಪರು ತಿರುವುತ್ತಾ ಕುಳಿತೆ ಮುಖಪುಟದ ಮುಖ್ಯ ವಿಷಯದಿಂದ ಹಿಡಿದು ಹೃದಯ ಭಾಗವಾಗಿರುವ ಸಂಪಾದಕೀಯ ಮುಗಿಸಿ ಕೊನೆಯ ಪುಟದ ಕೊನೆಯ ಸಾಲಿನವರೆಗೆ ತಿರುಗಿಸಿ ಹಾಕುವುದು ರೂಢಿ, ಏಕೆಂದರೆ ಮಧ್ಯಾಹ್ನ ನಿದ್ದೆ ಮಾಡುವುದು ನನಗೆ ಅಪರೂಪದ ಕೆಲಸ. ಅಷ್ಟರಲ್ಲಿ ಪೋನ್ ರಿಂಗುಣಿಸಿತು.. ಯಾರದು ? ಆಕಡೆಯಿಂದ  ಸರ್ ನಿಮ್ಮ ಶಿಷ್ಯ ಮೂಲಿಮನಿ ತೋಗುಣಸಿಯಿಂದ ಸರ್ ಎಂದ .ಸರಿ, ಆರಾಮ ಇದ್ದಿ ಏನಪಾ ಎಂದೆ .ಸರ್ ತಮ್ಮ ಆಶೀರ್ವಾದ ಮತ್ತು ಪ್ರೇರಣೆ ಹಾಗೂ ಮಾರ್ಗದರ್ಶನ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿ ಪೊಲೀಸ್ ಕೆಲಸ ಸಿಕ್ಕಿದೆ ಎಂದು ಕೃತಜ್ಞತೆಗಳ ಮಹಾಪೂರವೇ ಹರಿಸಿದ .ಅದು ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವೆ ಆಗಿದ್ದರೂ ನನ್ನ ಮೇಲಿನ ಅಭಿಮಾನ ಮತ್ತು ಪ್ರೀತಿಗೆ ಹಾಗೆ ಹೇಳಿರಲು ಸಾಕು. ಎಂದು ಭಾವಿಸಿದೆ ನಾನು ಅವರಿಗೆ ಮಹದುಪಕಾರಿ ಮಾಡಿದ್ದೇನೆ ಎಂದೆನಿಸಲಿಲ್ಲ ಅದು ನಾನು ಮಾಡಿದ ನನ್ನ ಕರ್ತವ್ಯವೆ ವಿನಹ ಬೇರೇನಲ್ಲ .ಅವನು ನನ್ನ ಮೇಲಿಟ್ಟ ಪ್ರೀತಿಗೆ ಧನ್ಯತಾ ಭಾವಕ್ಕೆ ನಾನು ನೂರು ಶೆಲೂಟ ಹೇಳಲೆ ಬೇಕು.ತುಂಬಾ ಸಂತೋಷದ ಸಂಗತಿ ಅಭಿನಂದನೆಗಳು ಅಂದೆ .ಸರ್ ದಿನಾಂಕ 18.12.2022 ರಂದು ಮದುವೆಗೆ ಬರುಬೇಕು ಸರ್ ಅಂದ .ಖಂಡಿತವಾಗಿಯೂ ಬರುತ್ತೇನೆ ರವಿವಾರವಲ್ಲವೆ. ಪರವಾಯಿಲ್ಲ ಎಂದೆ. ಗುಳೇದಗುಡ್ಡದಿಂದ ದೂರವೇನಲ್ಲ 5 ಕೀ ಮಿ. ಅಷ್ಟೇ ಪ್ರೀತಿಯಿಂದ  ಕರೆದರೆ ಬಿಡಲಾದಿತೆ ? ದಾರಿ ಮಧ್ಯೆ ಆಮಂತ್ರಣ ನೀಡಿದ ಎಷ್ಟೊಂದು ಜನರ ಮದುವೆಗೆ ಹರಸಿ ಬಂದ ಉದಾಹರಣೆಗಳು ಇರುವಾಗ ನನ್ನ ವಿದ್ಯಾರ್ಥಿ ಅದೂ ಪ್ರೀತಿಯಿಂದ ಮನೆಯವರೆಗೆ ಬಂದು ಮತ್ತೆ ಮತ್ತೆ ಕರೆದರು ಹೋಗದಿರಲಾಯಿತೆ ?. ಒಂದೆರೆಡು ದಿನ ಕಳೆದಿರಲಿಲ್ಲ ಮತ್ತೆ ಶನಿವಾರ ಪೋನ್ ರಿಂಗುಣಿಸಿತು... ಮತ್ತದೆ ಪ್ರೀತಿಯ ಆದರದ ಆಹ್ವಾನದ ಧ್ವನಿ. ಸರ್ ನಾಳೆ ಖಂಡಿತಾ ತಪ್ಪಿಸಬೇಡಿ ಸರ್ ಎಂದ.ಇಲ್ಲ ಖಂಡಿತವಾಗಿಯೂ ಬರುತ್ತೇನೆ ಎಂದೆ .ಸರ್ ತಮಗೆ ನನ್ನ ಮದುವೆಯ ದಿನ  ಸನ್ಮಾನ ಇಟ್ಟುಕೊಂಡಿದ್ದೇನೆ ಎನ್ನಬೇಕೆ ! ಕ್ಷಣ ವಿಚಲಿತನಾದರೂ ಸವಾರಿಸಿಕೊಂಡು ಅದು ಮದುವೆಯ ದಿನ ಈ ಕಾರ್ಯಕ್ಕೆ ಕೈ ಹಾಕಿದ್ದಿಯಲ್ಲ ಎಂದೆ.ಇಲ್ಲ ತಾವು ಬರಬೇಕು ಸರ್, ಅದೆ ಖಚಿತ ನಿಲುವು. ನಾನು ಸಾಗರದಾಳದಲ್ಲಿ ಮದುವೆ ಯಾದವರನ್ನು ಕೇಳಿದ್ದೆ, ಆಕಾಶದಲ್ಲಿ ಮದುವೆಯಾದವರನ್ನು ಕೇಳಿದ್ದೆ ,ತಮ್ಮ ಮದುವೆಯಲ್ಲಿ ನೂರು ಮದುವೆ ಮಾಡಿದವರನ್ನು ನೋಡಿದ್ದೆ, ನೂರು ಅಸಾಹಯಕರಿಗೆ ಸಹಾಯ ಮಾಡಿದ್ದು ನೋಡಿದ್ದೆ.ಪುಸ್ತಕ ಬಿಡುಗಡೆ ಮಾಡಿ ಕವಿಗಳ ಸಮ್ಮೇಳನ ಮಾಡಿದ್ದು ಕೇಳಿದ್ದೆ .ಆದರೆ ತಮ್ಮ ಅತ್ಯಮೂಲ್ಯವಾದ ಮದುವೆಯ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿಯ ಬಂಧುಗಳ ಆನಂದದ,  ಸಂತೋಷದ ಸಮಯದಲ್ಲಿ ಗುರುವಿಗೆ ಸನ್ಮಾನದ ಕಿರಿಟ, ಅದೂ ನನಗೆ ! ಅಂತಹ ಸೌಭಾಗ್ಯದ ಸಡಗರದ ಸಮಯ "ಶಿಕ್ಷಕನ ಜೀವನದ ಅಮೂಲ್ಯ ಸನ್ಮಾನದ ಕ್ಷಣ " ಅದಕ್ಕೆ ಬಾಜನನಾಗಿದ್ದು ಬೇರಾರಲ್ಲ ನಾನು ! ನನ್ನ ಶಿಕ್ಷಕ ವೃತ್ತಿಗೊಂದು ಮುಕುಟಪ್ರಾಯದ ಕಳಸ, ಇದಕ್ಕಿಂತ ಹೆಚ್ಚಾದ ಪ್ರೀತಿಯ ಪದಕ ಎಲ್ಲಿದೆ ಹೇಳಿ ? ನನ್ನ ಪ್ರೀತಿಯ ಉಪನ್ಯಾಸಕ ವೃತ್ತಿಯ ಘನತೆ ಹೆಚ್ಚಿಸಿದ ಮೂಲಿಮನಿ ಬಂಧುಗಳಿಗೆ ನನ್ನ ನೂರು ನಮನಗಳು.ತಮ್ಮ ದಾಂಪತ್ಯ ಸಾವಿರ ಕಾಲ ಸುಖವಾಗಿರಲಿ.ಮತ್ತೊಮ್ಮೆ ನಾನು ಬರುವಂತಾಗಲಿ ತಾವು ಪೋಲೀಸ್ ವರಿಷ್ಠಾಧಿಕಾರಿಯಾದಾಗ.
ಶುಭವಾಗಲಿ.

Saturday, December 17, 2022

* ರಾಜ ಮಾರ್ಗ *

ನಾವೋಡುವ ದಾರಿಯಲ್ಲಿ 
ಓಡುತ್ತಾ ನಡೆದಿದ ಆಡಿದ ಕರ್ಮ 
ನಮಗಿಂತ ಮುಂದೆ ನಾವದರ ಹಿಂದೆ
ಅದು ಅಗಲಿಸದಾ ಬಂಧ
ಬಿಡಿಸಲು ಬಾರದು ಕೆಡಿಸಲು ಆಗದು 
ನಡೆಯುವುದು ಒಂದೆ ಧರ್ಮ ! ॥

ಚಾರಣಕೇರಿ ಚಾಟಿ ಏಟನು ಮರೆತು 
ಬೇಟೆಯಾಡಲು ನಿಂತ ಶಬರ.
ಕೋಟೆ ಕಟ್ಟಿಹರು ಅಲ್ಲಿ...
ಎಂಟು ಸುತ್ತಿನ ಕೋಟೆ ! ಬಂಟರೆ ಬೇಕಲ್ಲಿ.
ದಾಟಿಸಲು ಯಾರಿಲ್ಲ ,ಶಿವನೆ, ದಾಟಿಸಲಾರಿಲ್ಲ.
ವಿಠ್ಠಲಾ ದಾಟಿಸು ಇದನೆಲ್ಲಾ.॥

ಲೆಕ್ಕ ಕೇಳುತಿರುವರು, ಪಕ್ಕಾ ಮಾಡುವರು
ಇಲ್ಲಾ ಪಕ್ಕೆಲಬು ಮುರಿಯುವರು.
ಹಕ್ಕಿನಲ್ಲಿರುವದೊಂದೇ ಕರ್ಮ. 
ಚುಕ್ತಾ ಮಾಡಬೇಕೊ ಅಲ್ಲಿ...
ಹಪ್ತಾ ಚುಕ್ತಾ ಮಾಡಬೇಕೋ ಅಲ್ಲಿ ....
ತಕ್ಕಡಿ ತೂಗುತಿರುವದಲ್ಲಿ.॥

ಲಂಚ, ಇವರಿಗೆ ಬೇಕಿಲ್ಲ, ಮಂಚ ಹತ್ತಲ್ಲ.
ಸಂಚು ಮಾಡಿದರೆ ಗೆಲ್ಲಲಾಗಲ್ಲ. 
ಕೊಂಚ ಮೊದಲೆ  ತಿಳಿದಿದ್ದರೆ 
ಪಂಚೇರ ತಗೆಯುತ್ತಿದ್ದೆವಲ್ಲ.
ಹೆದ್ದಾರಿ ಹಿಡಿಯುತ್ತಿದ್ದೆವಲ್ಲ..
ಕಾಲ ಮಿಂಚಿ ಹೋಗಿದೆಯಲ್ಲ.॥

ಶಿವ,ಶಿವ,ರಾಜ ಮಾರ್ಗ ದೂರ
ಆದರೆ ಏನು ಉರುಳಿ ಬರಹುದಿತ್ತಲ್ಲ
ಈಗ ನೆರಳಾಗಿ ಕಾಡತಿರುವದಲ್ಲ
ಉರಳು ಬಿಗಿಯಿತಲ್ಲ  ಸರಳು ಜಾರಿತಲ್ಲ
ಏರಿ ಬಂದ ಮೇಲರಿವು ಬಂದರೇನು
ಸಾರಿ ಹೇಳುವದೊಂದೆ ಉಳಿದಿದೆಯಲ್ಲ॥

Thursday, December 15, 2022

* ತನಗಗಳು *



ಪ್ರೀತಿಯ ಬೆನ್ನು ಹತ್ತಿ
ಬಿತ್ತು ಪಾತರಗಿತ್ತಿ
ತಿಳಿಯಲಿಲ್ಲ ಭಿತ್ತಿ
ಬೆಂಕಿಯೊಳಗ ಸತ್ತ

ತಡಿ ಹಾಕಿ ನೀನಡೆ 
ಸುಡು ಅರಿಷಡ್ವರ್ಗ 
ಹಿಡಿ ತಡಮಾಡದೆ
ಪದಕ ನಿನ್ನ ಕಡೆ .

ಹೂವು ಕಿತ್ತು ಕಟ್ಟಿದ
ಹೆರಳಿಗಾಭರಣ 
ಬೆಳದ ರೈತಗ್ಯಾಕ
ಅಕಾಲದ ಮರಣ.

ಸೂಳಿಯ ಸಂಗ ಕಟ್ಟಿ
ಬಾಳ್ವಂತ ಮಗ ಕೆಟ್ಟ  
ಗಾಳಿಯ ಮಾತು ನಂಬಿ, 
ಸೋಮಾರಿ ಮಗ ದೊಂಬಿ.

🖋.ಬಸನಗೌಡ ಗೌಡರ

Tuesday, December 13, 2022

* ಗತವೈಭವದ ಸುತ್ತ *

ಮನದ ದುಗುಡ ಮರೆಯಲು
ಬರೆದಾ ಭಾವನೆಗಳ ಸುತ್ತ 
ದೊರೆಯಾಗಲಿದು ಬೇಕಿತ್ತಾ
ಹರಿ ನಾಮ ಪಠಿಸದೆ ಸತ್ತಾ।

ಇರಿದು ಹುರಿದು ಮುಕ್ಕಿ ನೆಕ್ಕಿದವು
ಸಾಕಿ ಸಲುಹಿದ ಶುನಕಗಳು 
ಇವನ ಸತ್ತ ಶವದ ಸುತ್ತ 
ಅವುಗಳಿಗೊಂದೆ ಚಿತ್ತ, ಹಸಿವಿನತ್ತ.।

ಏನು ಮಾಡುವದು ಕಾಣದಂತೆ 
ಒಳಗೊಳಗೆ ಹೊತ್ತಿ ಉರಿದು 
ಬೆಂಕಿ ಹೊರ ಚಿಮ್ಮುತಿದೆ 
ಬೂದಿ ಮುಚ್ಚಿದ ಕೆಂಡ   ।

ಬೇಸಿಗೆಯಿಂದ ಹಸಿದ ಭುವಿಗೆ
ಬೀಸಿ ಬಂತು ಸುಂಟರ ಗಾಳಿ
ತಂತು ಮಳೆ ಗುಡುಗು ಮಿಶ್ರಿತ 
ನಿಂತ ಮೇಲೆ ಆಗುವದೆ ಶಾಂತ ।

ಬುಗ್ಗೆಯಲ್ಲರಳಿದ ಗಾಜು ಮನೆ 
ಸುಗ್ಗಿಯಂತೆ ತರಬಹುದೇ ರಸದೌತನ 
ಹೊಸತೇನಿದೆ ಬರಿ ಪ್ರವಾಹ 
ಬಂದು ಹರಿದ ಮೇಲೆ ರೋಧನ ।

ಅವಡುಗಚ್ಚಿ ಕಿವುಡರಂತೆ 
ತಡೆಹಿಡಿದಾ ನೂರು ಬಾಣ 
ಬಾರ ಬೆಟ್ಟ, ತಾಳ್ಮೆ ಅಲುಗಾಡಲಿಲ್ಲ 
ಹೊರ ಬಂತು ಸ್ವಯಂವರ।

ಯೋಧನಂತೆ ಮೆರೆದಾ ಕಲಿ 
ಜಾದೂ ಮಾಡಿ ಆಗಲಿಲ್ಲ ಹುಲಿ 
ಬಡಿದು ಮಾಡಿದಾ ಹತಾರ 
ಉರಳಿಸಿದಾ ಹೆಣ ಆ ಒಂದು ದಿನ ।

ನರಿ ನಾಯಿ ಕೆರೆಯ ಮೇಲೆ 
ಏರಿ ನಿಂತು ಏರು ಧ್ವನಿಯಲಿ 
ಊಳಿಟ್ಟು ದಾರಿ ಕೇಳುತಿವೆ 
ಹಸಿದ  ಹೊಟ್ಟೆಗೆ ಬಾನ ಈ ದಿನ.।
.

Monday, December 12, 2022

ತನಗ

ತನಗಗಳು

ಅಕ್ಷರ ಕಲಿತರೆ
ಸಾಕ್ಷರತೆಯ ಪಟ್ಟ
ನೈತಿಕತೆ ಬಿಟ್ಟರೆ
ಏರಿಸುವರು ಚಟ್ಟ

ಇವನದೊಂದು ಕಲೆ
ಹಾಕಿದ ಪ್ರೀತಿ ಬಲೆ
ಅವಳಾದಳು ಇಲಿ
ಈಗಾದಳು ಹೆಬ್ಬುಲಿ

ಮೋಡದ ಮರೆಯಲ್ಲಿ
ಮಾರುತದ ಮೋಡಿಗೆ
ಹಾರುತ್ತಾ ಬಂದೆ ಓಡಿ
ಹದ್ದು ಹಾರಿತ್ತು ಎದೆಗೆ.

Thursday, December 8, 2022

ತನಗಗಳು

ತನಗಗಳು

ಮಳೆಗಾಲ ಹೊರಳಿ
ಚಳಿಗಾಲ ಮರಳಿ 
ಕಂಬಳಿಗೂ ಬಂತಲ್ಲ
ಸಂಬಳದಂತ ಪ್ರೀತಿ.

ಕೋಳಿಗಳ ಕಾವಿಗೆ
ಅರಳಿದಂತೆ ಪಿಳ್ಳೆ
ನೀ ಮಂದೆ ಸುಳಿದರೆ
ಚಳಿ,ಬಂಗಾರ ಬೆಳ್ಳಿ.

ಕೈ ಹಿಡಿದ ಮಡದಿ
ಕಣ್ಸನ್ನೆ ಮಾಡಿದಳು
ಕರೆದಳೆನ್ನ ನೋಡಿ
ಸರಿದಳಲ್ಲಾ ಕೋಡಿ.

ಮಾಗಿಯ ಚಳಿಯಲ್ಲಿ
ನೀ ಯಾಕ ತವರಿಗೆ
ಮಾಗಿದ ಮನಸೆಲ್ಲ
ಬಾಡುತಿದೆ ಮುದುಡಿ.

   🖋 ಬಸನಗೌಡ ಗೌಡರ

Tuesday, December 6, 2022

ಜಾಕೀಟು ಸುತ್ತ..

ಜಾಕೀಟು ಸುತ್ತ..  

ಬರೆಯಬೇಕೆಂದಿರುವೆ 
ಬಡಿವಾರದ ಬದುಕೆಂಬ ಆದರ್ಶ 
ಬಿಡದೆ ಪಾಲಿಸಲು ಓದುವವರಾರು ? 
ಕಡೆಗೆಲ್ಲರೂ ನಡೆವರು ಕಿರಿ ದಾರಿ ಸುತ್ತ.॥

ಓದಬೇಕೆಂದಿರುವೆ ಸದಾ
ಹದವಾದ ನೊಂದವರ ಪತ್ರ 
ಅದು ಬರೆಯದೆ ಓಡುವ ಸತ್ಯ 
ಪದ ಜೋಡಿಸಿದರೆ ಸಿಗುದು ಪಾತ್ರ॥

ತುಳಿಯದ ದಾರಿ ಸೇರುವದೆಲ್ಲಿಗೆ ?
ತಿಳಿಯವಲ್ಲದು ಕುಣಿಯುತಿದೆ ಮಿತ್ಯ 
ಆದರೂ ಆಗಾಗ ಬರೆಯುತ್ತಿರುವೆನು 
ಸದಾ ತರಹೇವಾರಿ ತಿಳಿದ ಉತ್ತರ ॥

ಅಂಕ ನೀಡುವವನೆ ಮಾಯ 
ಸುಂಕ ಕೇಳುವರು ಮಾತ್ರ ಪ್ರತ್ಯಕ್ಷ
ಅಂಕ ಮುಗಿಯುತ್ತಾ ಬಂತು 
ಅಂಕಣಗಳಾದವು ದೂರದ ನಕ್ಷತ್ರ॥

ನಾನೇ ಓದಬೇಕು ತಿರಗಮುರಗಾ
ತಿಳಿದಂತೆ ನಟಿಸುವ ತಬರನಂತೆ
ಏಕೆಂದರೆ ಪುರಸೊತ್ತಿಲ್ಲ ಇವರಿಗೆ
ಬರೆಯುವದೇ  ಮುಗಿದಿಲ್ಲವಂತೆ॥

ಓದಲೆಲ್ಲಿದೆ ಇವರಿಗೆ ಪುರಸೊತ್ತು
ಬೋಧನೆಗೆ ನಡೆದಿದೆ ಕಸರತ್ತು
ಬೆಂದು ಬರೆದದ್ದು ಬಿಕರಿಯಾಗುತ್ತಿದೆ
ತಂಗಳಾದರೂ ಮಂಗಳಕರವಂತೆ॥

ನಾನೂ ಬರೆದೆ ಆಗಾಗ ಹರಿದೆ 
ಚುರಮುರಿ ಕಟ್ಟಲೂ ಬರಲಿಲ್ಲ 
ಅಮ್ಮ ಒಲೆಯಲ್ಲಿಟ್ಟು ಬೀಗಿದಳು
ಒಲೆ ಹತ್ತಲಿಲ್ಲವಂತೆ ! ಬಿಸಿ ನೀರಿಗೆ.॥

ಜಾಕೀಟು ಹೊಲಿಸಿದ್ದೆ ನೀಟಾಗಿ
ಸಮ್ಮೇಳನ ಬರಬಹುದೆಂದು 
ನನ್ನಾಕೆ ಕೇಳಿದಳು ಚಳಿಗಾಲವೇ ?
ಗಿರಕೆ ಹೊಡೆಯುತ್ತಿದೆ ಜಾಕೀಟು ಸುತ್ತ॥

Saturday, December 3, 2022

ತನಗಗಳು

ರವಿವಾರದ ತನಗಗಳು

ಮಂದಹಾಸವ ಬೀರಿ 
ಹಂದರದಲ್ಲಿ ಕಟ್ಟಿದೆ
ತಾಳಿಕೊಳ್ಳಲು ತಾಳಿ
ಇವಳು ಬಿರುಗಾಳಿ.

ಸಂಸಾರ ಅದ್ಹೇಗೆ 
ಆಗುತ್ತದೆ ಸಸಾರ 
ಬಾಗಿದವನ ಮೇಲೆ
ಸದಾ ಇರುತ್ತೆ ಬಾರ.

ಹುಡುಗಿಯಾ ಅಲ್ಲಲ್ಲ
ಇವಳು ತುಡುಗಿಯೇ
ಕದ್ದಳು ಕಾಪಿಟ್ಟಿದ್ದ
ಮುತ್ತಿನಂತ ಹೃದಯ.

ಮಂಚದ ಮೇಲೆ ಲಂಚ
ಎಚ್ಚರ ಬೇಕು ಕೊಂಚ 
ಅದಲ್ಲ ನಿನಗೆ ಲಂಚ್ 
ನಿನ್ನ ಮುಗಿಸೊ ಸಂಚು.

ಬಸನಗೌಡ ಗೌಡರ

ತನಗ

ಹಿರಿಯ ಕವಿ ಸಿದ್ಧಲಿಂಗಪ್ಪ ಬೀಳಗಿಯವರ ತನಗದ ವಿವರಣೆಯಿಂದ ಪ್ರೇರೇಣೆ ಪಡೆದು ನಾಲ್ಕು  ತನಗ ಬರೆದೆ ಸರಿ ಇದ್ದರೆ ಸರಿ ಅನ್ನಿ ಇಲ್ಲದಿದ್ದರೆ ಇಲ್ಲ ಅನ್ನಿ ಏನೂ ಅನ್ನದಿದ್ದರೆ ಶನಿವಿವಾರದ ಅರ್ಧ ಬಿಡುವಿನ ತಲೆನೋವು ಅನ್ನಿ ಅಂತೂ ಅನಿಸಿಕೆಗಳನ್ನು ಹೊರಹಾಕಿದೆ.

ಬಣ್ಣದ ಬೆನ್ನು ಹತ್ತಿ 
ತನ್ನವರೆನ್ನುವುದು 
ಮರೆತು ಓಡುತಿವೆ
ಸ್ವಾರ್ಥ  ಕುದುರೆಗಳು
 
ಎದುರು ಮನೆಯಲ್ಲಿ 
ಬೆದರಿಸವ ಬೊಂಬೆ
ಬಣ್ಣ ಮಾತ್ರ ಕರಿದು
ಗೆರೆ ಬಿಳಿದೇ ಬೇಕು

ಕಣ್ಣಿಗೆ ಪಟ್ಟಿ ಕಟ್ಟಿ
ಹುಡುಕುವರು ಬಿಟ್ಟಿ 
ಸಿಗುವುದೇನು ರೊಟ್ಟಿ
ಉಪವಾಸವೆ ಗಟ್ಟಿ

ಬೀಗಬೇಕೆಂದಿಹರು 
ಸಾಲವ ಮಾಡಿ ತಂದು 
ಸಾಗಹಾಕಲಾದೀತೆ
ಸಾಲಗಾರರ ಶೂಲ

ಬಸನಗೌಡ ಗೌಡರ 
ಉಪನ್ಯಾಸಕರ ಗುಳೇದಗುಡ್ಡ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...