Saturday, October 31, 2020

* ಕಾಯಿಸುವ ರೋಗ *

ಕೊರೋನಾಕಿಂತ ಕರಾಳ ಕಾಯಿಸುವ 

ರೋಗ, ಕಾಡುತ ಹರಡಿದೆ ಜಗದೊಳಗ/

ಕಾದು ಜನ ಸುಸ್ತು ಅಧಿಕಾರ ಬಲದಾಗ

ಸಹನ ತಲೆ ಕೆರೆಯಿತು ಬಾಗಿಲುದಾಗ//


ಹರಿದು ತಿನ್ನಲು ತಿರುಗುವವು ಬಕಪಕ್ಷಿ

ಇವುಗಳ ಕೊಲ್ಲಬೇಕು ಸ್ವಾತಂತ್ರ್ಯ ಹಕ್ಕಿ/

ಆದರೇನು ಕಣ್ಣಿಗೆ ಕಟ್ಟಿರುವರಲ್ಲ ಪಟ್ಟಿ

ನಿಧಾನಿಸಿ ಇಡುವರು ಸುಳ್ಳಿನ ಬುಟ್ಟಿ//


ಮಜಾ ತೆಗೆಯುವ ಹುಡುಗಿಯರಂತೆ 

ಇವರೇನು ಕಡಿಮೆ, ಬಿಡುವರು ಬುರಡೆ/

ನಂಬಿದವ ಆದ ಇಂಗು ತಿಂದ ಮಂಗ

ಜಾರುವ ಮುನ್ನ ಬಿಡಬೇಕಿವರ ಸಂಘ//


ಕಾಸಿಗಾಗಿ  ಬೀಸುವರು ಸುಳ್ಳಿನ ರಾಶಿ,

ಕನಸು ಕಾಣುವನಾದ ನಂಬಿ ಪಿಕನಾಶಿ

ಮೋಸ ಹೋಗಿ ಬಿಡಲಾರದವರು ಹೇಸಿ

ಮತ್ತೆ ಪಡೆಯಲು ಮಾಡತಾರ ಚೌಕಶಿ//

            ಬಸನಗೌಡ  ಗೌಡರ


Tuesday, October 27, 2020

* ಬೇಡ ಸಂಚಲನ *

ನಡೆ ಮುಂದೆ, ನಡೆ ಮುಂದೆ, ಪಡೆದು

ಸೇರಬೇಕು ಸದ್ಗಗತಿಯ ಗುಂಪಿನ ಕಡೆ

ಸೋಲು ಗೆಲುವಿಗೂ ಸೇರಬೇಕು ಪಡೆ 

ಸಾವು ಬದುಕಿನಡುವೇರಬೇಕು ಹುಡೆ/


ಗೆದ್ದರೆ ಜಗವೆ ಆಗುವುದು ಪಡಸಾಲೆ

ಗದ್ದುಗೆ ಪಡೆದವರಿಗೆ ವಿಜಯಮಾಲೆ

ಬಿದ್ದಾಗ ತಿಳಿಯುವುದು ಶುದ್ಧಿಯ ಬೆಲೆ

ನಿದ್ದೆಯ ಬಿಡು ತಿಳಿ  ಮಾಯದ ಬಲೆ//


ನಿಂತರೆ ನಿನ್ನದೆ ನಿನಗಾಗುವುದು ಬಾರ

ಅಂತರ ಅರಿತು ನೀನಾಗು ನಿಜ ಶರಣ

ಅನವರತ ಕ್ರಮಿಸು ಸಾಧನೆಯ ದೂರ

ಅನಂತದಲ್ಲಿರುವನು ಹರಸುವ ಹರ //


ಕಾಣದ ಕಡಲಿಗೆ ನಡೆದಿದೆ ಕದನ 

ಸೇರದ ಒಡಲಿಗೆ ಸಂಚಲನ ವದನ

ಸವಕಳಿ ದೇಹಕ್ಕಿಲ್ಲ ಸಾವಿರ ವರುಷ

ಸಹನೆಯಿಂದ ಸೇರು ಬೇಕು ಮನುಷ//

          ಬಸನಗೌಡಗೌಡರ







 

Sunday, October 25, 2020

"ಮೊಮ್ಮಗನ ಮೊಬೈಲ್ ಆಪರೇಷನ್"

ಮೊಬೈಲ್ ಮೋಡಿಗೆ ಮರಳಾಗದವರು ಯಾರಿರುವರು ಹೇಳಿ ? ಮೂರರಿಂದ ನೂರು ವರುಷದ ವೃದ್ಧರವರೆಗೆ ..! ಗುದ್ದಾಡಿ ಒದ್ದಾಡಿ ಹೊಂದಬೇಕೆನ್ನುವವರೆ ...ಒಮ್ಮೆ ಮೊಮ್ಮಗನ ರಂಪಾಟ ಗುದ್ದಾಟ  ಮೊಂಡಾಟ ಮನೆಯವರನ್ನೆಲ್ಲ ತನ್ನ ಹಿಡಿತಕ್ಕೆ ತರುವ ಅವನ ಸಾಹಸಕ್ಕೆ ಎಲ್ಲರೂ ಸೋತು ಸುಣ್ಣವಾದರು  ನಾನಾ ತಂತ್ರಗಳನ್ನು ಹೆಣೆದು ಹಣ್ಣಾದರು.... ಇವನೇನು ಸಾಮಾನ್ಯನಲ್ಲ ಪಡೆದು  ವಿಜಯಿಯಾದ, ಪ್ರಯತ್ನ ಪ್ರಾರಂಭಿಸಿದ... ಮಾತಾಡಲಿಲ್ಲ ಬದಲಾಗಿ ಮಾಡಿ ತೋರಿಸುವ ಆಸಾಮಿ... ಇದು ಅವರ ಅಪ್ಪ ಅಮ್ಮನ ಆಸೆಯನ್ನು ತಣಿಸಲು ಹೊರಟ ಪ್ರಯತ್ನ .ಇದೇನಪ್ಪ ಅವರಪ್ಪ ಅಮ್ಮನ ಆಸೆ ಎಂದಿರಾ ಎಲ್ಲರಿಗೂ ಗೊತ್ತೆ ಇದೆ ಅಲ್ಲಾರಿ ಮಗ ಎಮ್ ಬಿ ಬಿ ಎಸ್ ಮಾಡಬೇಕು ಡಾಕ್ಟರ ಆಗಬೇಕು.ಇಂದು ಪ್ರತಿ ಪಾಲಕರೂ ಮಗು ಗರ್ಭದಲ್ಲಿ ಇರುವಾಗಲೆ  ಯೋಚನೆ (ದೂ ( ದು) ರಾಲೋಚನೆ) ಮಾಡುವುದು ಸಾಮಾನ್ಯವಾಗಿದೆ. ತಪ್ಪಿಲ್ಲ ಬಿಡಿ ಅದರ ಸಾಮರ್ಥ್ಯ ಆಸೆ ಆಕಾಂಕ್ಷೆಯ ಬಗ್ಗೆ ನಮಗೆ ಯೋಚಿಸಲು ಸಮಯವೆಲ್ಲಿದೆ ಹೇಳಿ.

ಮಗನ ಶಿಕ್ಷಣಕ್ಕಾಗಿ ಅವರ ಖರ್ಚಿಗೆ ಲೆಕ್ಕವೇ ಇಲ್ಲ ಮಗ ಮಾತ್ರ ಡಾಕ್ಟರ್ ಅಂತೂ ಆಗಬೇಕು ,ಇರಲಿ ಸಮಾಜಕ್ಕೆ ಡಾಕ್ಟರ ಗಳಾದರೂ ಎಷ್ಟು ಬೇಕು ಹತ್ತು ಸಾವಿರಕ್ಕೆ ಒಬ್ಬ ಆದರೆ ಹತ್ತು ಸಾವಿರ ಕುಟುಂಬಕ್ಕೂ ಮಗನೊಬ್ಬ ಡಾಕ್ಟರ್ ಬೇಕು ...ಇದನ್ನೇ ಬಂಡವಾಳ ಮಾಡಿಕೊಂಡ ಶಿಕ್ಷಣ ಸಂಸ್ಥೆಯವರು ಪಾಲಕರನ್ನು ಗೂಡಿಸಿ ಗುಡ್ಡೆ ಹಾಕಿಕೊಂಡಿರುವದು.ಇದು ನಮಗೆ ಯಾವಾಗ ಅರ್ಥವಾಗತ್ತೊ ಕಾಲವೆ ಉತ್ತರಿಸಬೇಕು ನಾನಂತೂ ಆಶಾವಾದಿಯಾಗಿದ್ದೇನೆ .ಇದೀಗ ಕರ್ನಾಟಕ ಹೆಬ್ಬಾಗಿಲು ಮಾಡಿಕೊಂಡು  ಭಾರತವನ್ನು ವ್ಯಾಪಿಸಲು ಸಜ್ಜಾಗಿರುವ ಹೊಸ ಶಿಕ್ಷಣ ನೀತಿ 2020. ನಮ್ಮೆಲ್ಲರ ಆಶಾ ಕಿರಣದಂತೆ ಕಾಣುತ್ತಿದೆ ಬೇಗ ಕಾರ್ಯರೂಪಕ್ಕೆ ಬರಲಿ ಎನ್ನವುದು ನಮ್ಮೆಲ್ಲರ ಆಶೆ. ಕಾರಣ ಮಗುವಿಗಷ್ಟವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಇರುವ ಅವಕಾಶ.ಇನ್ನು ಮೊಮ್ಮಗನ ವಿಷಯಕ್ಕೆ ಬರುತ್ತೇನೆ, ಮೊಬೈಲ್ ಸಿಕ್ಕಾಗ ಅವನಿಗಾದ ಸಂತೋಷಕ್ಕೆ ಪಾರವೆ ಇಲ್ಲ ಆತ ತನ್ನ ಪ್ರಯೋಗ ಪ್ರಾರಂಭ ಮಾಡಿಯೆ ಬಿಟ್ಪ ತರಬೇತಿ ವೈದ್ಯ ಹೆಣ ಕೊಯ್ದು ಅಂಗಾಂಗಗಳನ್ನು ಪರೀಕ್ಷೆಯನ್ನು ಮಾಡಿದಂತೆ ಮೊಬೈಲ್ ಪಾರ್ಟಗಳನ್ನು ಕಿತ್ತು ಪರೀಕ್ಷೆ ಮಾಡಿದ್ದೆ ಮಾಡಿದ್ದು ಅದರಲ್ಲಿ ಆತ ಏನು ಕಲಿತನೋ ಆ ದೇವರೇ ಬಲ್ಲ ತರಬೇತಿಯಂತು ಯಶಸ್ವಿಯಾಯಿತು ಮೊಮ್ಮಗ ಯುದ್ದ ಗೆದ್ದ ಸೈನಿಕರಂತೆ ಹೊರ ಬಂದ, ನಾವು ಸೋತ ಶರಣಾದ ಕೈದಿಗಳಂತೆ ನಾವು ನಿಂತೆವು ವಿಜಯಿ ಸೈನ್ಯದ ಮುಂದೆ ,ಆದರೆ ಅವರಮ್ಮನ ಕಿಲಾಡಿ ತಂತ್ರ ಯಶಸ್ವಿಯಾಗಿತ್ತು, ಬಳಸದೆಯೇ ಬಿದ್ದ ಒಂದನ್ನು ನೀಡಿ ಯುದ್ದ ವಿರಾಮಕ್ಕೆ ಕಾರಣಳಾದಳು ಮತ್ತು ಒಂದು ಅಮೂಲ್ಯವಾದ ಸಲಹೆ ನೀಡಿ ಮನೆಯವರೆಲ್ಲರ ಮೇಲೆ ಯಜಮಾನಿಕೆ ಮೆರೆದಳು,ಅದೇನು ಅಂತೀರಾ ಮೊಬೈಲ್ ನಲ್ಲಿ ಹುಳ ಆರಿಸಿದಂತೆ ಆರಿಸುವುದನ್ನು ಕಡಿಮೆ ಮಾಡಿ ಪುಸ್ತಕ ಹಿಡಿಯುವುದನ್ನು ರೂಢಿಸಿಕೊಳ್ಳುವುದನ್ನು ಕಲಿಯಿರಿ ಎನ್ನಬೇಕೆ ಎಲ್ಲರೂ ತಲೆ ತಗ್ಗಿಸಿ ಕೋನೆ ಸೇರುವುದೊಂದೆ ಬಾಕಿ 

"ಮೊಬೈಲ್ ಹಿತ ಮಿತ ವಾಗಿರಲಿ ಎನ್ನವುದೆ ಕಳಕಳಿ"

Wednesday, October 21, 2020

* ಆಕ್ರಂದನ *

ಉಂಡವನಿಗೆ ತಿಳಿಯದು ಹಸಿದವನ ದಾಹ 

ಬಂಡೆಳವ ಮುನ್ನ ನೀಡುಬೇಕು ಜಾಣ

ಇಂದು ನಿನ್ನದು ನಾಳಿನ್ನಾರದು ನಾಕಾಣೆ

ಉಣಿಸುವ ಕರದಲಿರುವುದಿವರ ಪ್ರಾಣ//

 

ಬೀದಿ ಬದಿಯಲ್ಲಿ ಭಿಕ್ಷೆ ಬೇಡುವರೆ

ಹಿಡಯಷ್ಟು ಪ್ರೀತಿಯ ನೀಡಿದರೆ

ಕೈಲಾದಷ್ಟು ಹೊಟ್ಟೆಗೆ ಹಿಟ್ಟು ಕೊಟ್ಟರೆ

ಕೈಚಾಚಿ ಪಡೆವರೆ  ಬಡತನ ಹಿಂಗಿದರೆ


ಅನ್ನ ನೀಡುವ ಕೈಗಳು ಸದಾ ಮೇಲಿವೆ

ಅರಿಯದೆ ಹರಿದು ತಿನ್ನುವ ಕರಗಳಿವೆ

ಅರೆಗಂಜಿಗಾಗಿ ಇವರೆಲ್ಲರ ಆಕ್ರಂದನ

ಹರನಿಲ್ಲವೆ ನೀಡಿ ಮರೆಯಲು ಮೇಲೆ/ 


ತಿಳಿಯದೆ ತೆವಲಿಗೆ ತಂದರು ಭೂಮಿಗೆ  

ತಂದೆ ತಾಯಿ ಸಮಾನರಿವರು ಹಂದಿಗೆ

ತಿರಿದು ತಿನ್ನುವ ಮಕ್ಕಳದಲ್ಲದು ತಪ್ಪು

ಪೊರೆವಂತೆ ನಟಿಸುವವನಾವ ಬಗೆ //


        ಬಸನಗೌಡಗೌಡರ


"ಮೊಮ್ಮಗನ ಮೊದಲ ನಡಿಗೆ"

ಮಾನವ ಕುಲ ಮೊದಲು ಎರಡು ಕಾಲು ಬಳಸಿ ಯಾವಾಗ ನಡೆಯಲು ಪ್ರಾರಂಭಿಸಿತು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ ಅದು ಹಲವಾರು ಏಳು ಬೀಳುಗಳನ್ನು ಕಂಡೆ ನೇರ ನಡಿಗೆಯನ್ನು ಕಂಡಿದೆ. ಇಲ್ಲಿಯವರೆಗೆ ನಾನು ಮಾನವನ ನಡಿಗೆ ಬಗ್ಗೆ  ಏಕೆ ಹೇಳಿದೆ ಎಂದರೆ ಒಂದು ಪ್ರಬಲವಾದ ಕಾರಣವಿದೆ ಅದೇನೆಂದರೆ ನನ್ನ ಮೊಮ್ಮಗನ ಮೊದಲ ನಡಿಗೆಯ ಕಸರತ್ತು. ಈಗ ಆತನಿಗೆ ಒಂದು ವರ್ಷ ಈಗಾಗಲೆ ಆತ ಹಲವಾರು ಸಲ ಎದ್ದು ಬಿದ್ದಿದ್ದಾನೆ ತಲೆಗಾದ ಗುಮ್ಮಟಿಗಳಿಗೇನು ಕೊರತೆಯಿಲ್ಲ ಆದರೂ ಛಲಬಿಡದೆ ನಡದೆ ಬಿಟ್ಟ.ಸೋತರೂ ಬಿಡದೆ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುವ ರಾಜಕಾರಣಿಯಂತೆ ಮತ್ತೆ ಪ್ರಯತ್ನ ಮಾಡಿದ. ಅಂತೂ ಗೆದ್ದ ರಾಜಕಾರಣಿಯಂತೆ ಬೀಗಿ ಮುನ್ನೆಡದ ಪರಿ ಮನಮೋಹಕವಾಗಿತ್ತು. ಮಗು ಮನುಷ್ಯನ ತಂದೆ ಎಂದು ತಿಳಿದವರು ಹೇಳುತ್ತಾರೆ ಅದು ನೂರಕ್ಕೆ ನೂರು ಸತ್ಯ. ಒಮ್ಮೆ ಸೋತರೆ ಕೈಚಲ್ಲುವ ಜನರಿಗೆ ಇದು ಪಾಠವು ಹೌದು, ಸೋಲು ಗೆಲುವಿನ ಸೋಪಾನ ಎಂದು ಹೇಳುತ್ತಿರುವುದು .ಒಂದು ಕಡೆ ಡಿ.ವ್ಹಿ ಜಿ ಯವರು ಹೇಳುವುದು ಇದನ್ನೆ ಅಲ್ಲವೆ " ಮರಳಿ ಮರಳಿ ಯತ್ನವ ಮಾಡು" ಎಂದು .ಗೆದ್ದಾಗಿನ ಕುಸಿಗಿಂತ ಹಿರಿದಾದದ್ದು ಇನ್ನೊಂದಿಲ್ಲ.ಸೋಲದೆ ಗೆದ್ದಾಗಿನ ಕುಸಿಗಿಂತ ಸೋತು ಗೆದ್ದಾಗಿನ ಖುಷಿ ಹೆಚ್ಚು ಆನಂದವನ್ನು ಕೊಡುತ್ತದೆ.ಅದು ಅನುಭವದ ಆಗರವು ಹೌದು.ಮೊಮ್ಮಗನ ನಡೆಗೆಯಲ್ಲಿ ನನ್ನ ಮುನ್ನಡೆಯು ಇದೆ ಅದು ನನ್ನ ಸಾಧನೆಯ ನಡೆಯು ಹೌದು ಮಗಳ ಮಗನಾದರೇನು ಮಗನ ಮಗನಾದರೇನು ಸಾಧನೆಯ ಕುಡಿಯಂತು ಹೌದು.ಈ ಮಾತು ಹೇಳಲು ಕಾರಣವಿದೆ ಅದೆನೆಂದರೆ .ಒಮ್ಮೆ ಸಹಪಾಠಿಯೊಬ್ಬರ ಹತ್ತಿರ ಮಾತನಾಡಿದ ಸನ್ನವೇಶವೊಂದನ್ನು ಹೇಳಲು ಬಯಸುತ್ತೇನೆ. ನಾನು ದೂರದ ಊರಿನಿಂದ ವರ್ಗವಾಗಿ ಬಂದಿದ್ದೆ  ಕೆಲ ವರ್ಷಗಳ ನಂತರ  ನನ್ನ ಪೇಸ್ಬುಕನಲ್ಲಿ ನನ್ನ ಮೊಮ್ಮಗನ ಫೋಟೊವನ್ನು ಅಪ್ ಲೋಡ ಮಾಡಿದೆ. ಆವಾಗ ಅವರು ಯಾರದು ಅಪ್ ಲೋಡ ಮಾಡಿದ ಮುದ್ದಾದ ಮಗುವಿನ  ಫೋಟೊ ಎಂದು ಪ್ರಶ್ನಿಸಿದರು ಫೇಸ ಬುಕನಲ್ಲಿ. ಅದಕ್ಕೆ ನಾನು ಉತ್ತರಿಸಿದೆ  "ಅದು ನನ್ನ ಮೊಮ್ಮಗನ ಫೋಟೊ" ಅಂದರೆ ಮಗಳ ಮಗ ಎಂದು . ಆಗ ಸಹೋದರಿ ಸಮನಾದ ಮೇಡಮ್ ಮಾರ್ಮಿಕವಾಗಿ ಉತ್ತರಿಸಿದರು .ಸರ್ ಅದು ನಿಮ್ಮ ಮೊಮ್ಮಗ ಅಲ್ಲ ನಮ್ಮ ಮೊಮ್ಮಗ  ಎಂದು. ಕ್ಷಣ ವಿಚಲಿತನಾದರು ಸವಾರಿಸಿಕೊಂಡೆ ಸಂಪ್ರದಾಯ ಏನೆ ಇರಲಿ ನಮ್ಮ ಮನೆಯ ಆನಂದ ಇಮ್ಮಡಿಗೊಳಿಸಿದ ಮುತ್ತಿನಮಣಿಯಂತು ಹೌದು ಪ್ರತಿ ಮನೆಬೆಳಗಲು ಒಂದು ದೀಪವಂತು ಬೇಕೆ ಬೇಕು ಆ ಬೆಳಕಿಗೆ ಸಮಾನವಾದ ಬೆಳಕಂತು ಇಲ್ಲ .ಇದಕ್ಕಾಗಿಯೇ ನಮ್ಮಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತರುವ ಸಹೋದರಿಯರು ಹೇಳುವುದು ನಮ್ಮ ಮಗನಿಂದ ನಿಮ್ಮಮನೆ ಬೆಳಕಾಗಿದೆ ಎಂದು .


ಮನೆಗೊಂದು ಮಗು ಶಾಲೆಗೊಂದು ಮರ ಊರಿಗೊಂದು ವನ

Tuesday, October 20, 2020

* ಮಳೆ ಮಿಕ್ಕಿದಾಗ *

ಮಾತೊಂದು ಹೇಳಿದ್ದ ನಮ್ಮಪ್ಪ 
ನನಗೊಂದು,ಮನಸು ಅರಳಾಕ ...
ಮನೆ ಎತ್ತರ ಬೆಳೆಯಾಕ.. 
ಮಳೆಯಾದರ ಕೆಡಕಿಲ್ಲ 
ಮಗ ಉಂಡರ ಕೆಡಕಿಲ್ಲ.....!

ಮನೆಯು ಉರುಳಿತು 
ಮನಕೇರಿದ ಮತ್ತು ಇಳಿಯಿತು.  
ಕೆಡಕಾಗಿ ಹೋಯಿತಲ್ಲ, 
ಮನೆ ಮಠ ಮುಕ್ಕಾಗಿ ಹೋಯಿತಲ್ಲ ...
ಮಣ್ಣಾಗ ಮಣ್ಣಾಗಿ .....
ಮುಚ್ಚೆ ಹೋಯಿತಲ್ಲೋ  ..!

ಮರವು ಬೆಳೆದರ ಬರವು 
ಅಳಿಯಿತಂತ ವರುಣನ ಮರೆತು 
ಕೆರಿಯಾಗ ಬೆಳೆ ಬೆಳೆದವಲ್ಲ....
ಮರದೆತ್ತರ ಮನೆ ಕಟ್ಟಿ 
ಮೆಟ್ಟಿಲಿನ ಪುಟ್ಟಿಯಲೆ 
ಮರನೆಟ್ಟೆವಲ್ಲ...!

ಊರಾಗ ಗಟಾರ ಒತ್ತಿ..
ಹೊಲದಾಗ ಬದು ಒತ್ತಿ
ವಗ್ಗದ ಬೆಳೆಯಾದರು ಹಿಗ್ಗಿ ಹಿಗ್ಗಿ 
ಹೈಬ್ರೀಡ್ ಬೆಳೆದವಲ್ಲ..
ಮೇಲೆ ರಾಸಾಯನಿಕ ಗೊಬ್ಬರ,
ವಿಷ ಹಾಕಿ ಮಣ್ಣು ಕೊಂದೆವಲ್ಲೊ..!

ಮಗ ಬೆಳೆದು ಮಡದಿಗಾದ 
ಮಳೆ ಬಂದು ಮನೆಯುರಳಿ 
ಹೊಲವೆಲ್ಲ ಕಳೆಯಾತು..
ಬಾಳೆಲ್ಲ ತುಕ್ಕು ಹಿಡಯಿತಲ್ಲ
ಹೊಳೆಯುಕ್ಕಿ ಕೆಕೆ ಹಾಕಿತಲ್ಲ
ಮಳೆರಾಯ ಇನ್ನಾದರು 
ನಮ್ಮವರಿಗಾಗಿ ಸುರಿಯೋ..
 
ಬಸನಗೌಡ ಗೌಡರ

Monday, October 19, 2020

* ನೇಗಿಲ ಯೋಗಿ *



ನೇಗಿಲು ಯೋಗಿ ಭೂಮಿಗೆ ಬಾಗಿ
ಬೆವರನು ಹರಿಸಿದ ಹಟ ಯೋಗಿ. // ಪ//

ನೇಗಿಲು ಹೊಡೆಯುತ ಮುಗಿಲನು 
ನೋಡುತ, ಜಗದುದರವ ತುಂಬುವ
ಯೋಗಿಯ ನೋಡು ಬಾ ಇಲ್ಲಿ //

ಭೂಮಿಯ ಉತ್ತವ ಎತ್ತುಗಳೆ ಜೋಡಿ 
ನಿತ್ಯ ಕಾಯಕ ಸುತ್ತ ದನಕರಗಳ ಹಾಡಿ 
ಸತ್ಯ ಕರ್ಮಯೋಗಿಯ ನೋಡಿಲ್ಲಿ//

ಹಗಲಲಿ ಸೂರ್ಯನೆ ಗೆಳೆಯ, ಜೊತೆ 
ನಡೆಯುವ ಇವನು ಸುಗ್ಗಿಯೆ ಇರಲಿ 
ಬರವೆ ಬರಲಿ ಸಂಬಂಧ ಕಲಿಬೇಕಿಲ್ಲಿ//

ಬಿಸಿಲಲಿ ಬೆಂದು ಬೆವರಿನ ಹನಿಯಲಿ
ಮಳೆಯನು ತಂದು, ಹಸುರಿನ ಸಾಲು
ಉಸಿರಲಿ ಎಣಿಸುವನು ನೋಡಿಲ್ಲಿ//

ಹರಕಲು ಹಚಡ ಮುರುಕಲು ವಸನ
ಹರವಾದ ಬದುಕು ಕಾಣುವುದು ಹಸನ
ಹೆಮ್ಮೆಯ ಬಾಳನು ಕಲಿಯಬೇಕಿಲ್ಲಿ//

        ಬಸನಗೌಡ ಗೌಡರ 

Sunday, October 18, 2020

* ಸಿದ್ದಗಂಗೆಯ ಸಿದ್ದಿ ಪುರುಷ *

ನಡೆದಾಡಿದ ದೇವರೆ ನಮಿಪೆ ಗುರುವೆ 
ನಿನ್ನ ಚರಣಕೆ  ಹೂವು ಫಲವ ತರುವೆ/ಪ/

ಸಿದ್ದಗಂಗೆಯ ಸಿದ್ದಿ ಪುರುಷ ಎದ್ದು ಬಾ
ಹುದ್ದೆಗಾಗಿಯೆ ಗುದ್ದಾಡಿ ನಿದ್ದೆಗೆ ಜಾರಿ
ಒದ್ದಾಡುವ ಜನರ ಉದ್ಧಾರ ಮಾಡಲು
ಶುದ್ಧ ಮನಸ್ಸಿನ ಪ್ರಭುವೆ ನೀನೆದ್ದು ಬಾ//

ಅನ್ನ ಅಕ್ಷರ ಧರ್ಮದ ಮರ್ಮಸಾರಿ
ಕಣ್ಣು ತೆರೆಸಿದೆ ಭುವಿಯ ಮಕ್ಕಳಿಗೆ/
ಬದುಕು ಕಲಿಸಲು ಕಟ್ಟಿದೆ ಜೋಳಿಗೆ 
ಬಾಗಿ ನೆಡೆದಾಗ ಬಾಳಾತು ಹೋಳಿಗೆ//

ಜಾತಿ ವಿಷವರ್ತುಲ ಮೂಲ ಹರಿದು  
ಪಕ್ಷ ಪಂಗಡದ ಪರಿಭಾಷೆಯ ಮೀರಿ    
ಪಳಗಿಸಿ ಪಾಠ ಕಲಿಸಿ ಶರಣ ತಯಾರಿ
ಪವಡಿಸಿದೆ ಜಗಜನರ ಹೃದಯವೇರಿ//

ಕಾವಿಯ ಕರ್ಮದ ಮರ್ಮ ಅರುಹಿ
ಕಡಲಂತೆ ಒಡಲೊಳಗೇ ಸಲುಹಿದೆ
ಹಡೆದವರ ಪಡುವ ಸಂಕಷ್ಟ ಕಡಿದೆ
ಹರನಂತೆ ಪರರ ಬದುಕಿಗೆ ಬಾಗಿದೆ//

               ಬಸನಗೌಡ ಗೌಡರ  


Tuesday, October 13, 2020

* ಪರಿಭ್ರಮಣ *

ನಾನು ನನ್ನವರೆನ್ನುವದು ಬರಿ ಭ್ರಮೆ 
ಹರಿದು ತಿನ್ನಲು ಹಾಕಿದ ಪರಿಭ್ರಮಣ
ತರಿದ ಮರಕೆ ಸುತ್ತುವುದೆ ಹಕ್ಕಿ ಗಣ 
ಹರಗುರು ಚರಣಕೆ ಎರಗಬೇಕು ಶರಣ//

ನಾನೇಕೆ ನನ್ನಾಳಿದ ನಾಡ ದೊರೆ 
ನೂರು ನಾಡನು ಗೆದ್ದು ಮೆರೆದರು 
ಕಡೆಗೊಮ್ಮೆ ಮೂರಡಿಯಲ್ಲಿ ಮುದಡಿ
ಮಣ್ಣಲ್ಲಿ ಮಣ್ಣಾಗಿ ಕೊನೆಗಾದ ಹುಡಿ//

ಬಿಡಲೊಲ್ಲದು ನನದೆನ್ನುವ ಭ್ರಮೆ
ಬಿಡದೆ ಕಾಡುವುದು ನೆರಳಂತೆ ಹೆಮ್ಮೆ 
ಬಿದ್ದರೂ ಸದ್ದಾಗದಂತೆ ಹಿಡಿವ ಬಯಕೆ 
ಗೆದ್ದವರಂತೆ ನಟಿಸುವ ಬಂಡ ತವಕ //

ಮನದ ಮೈಲಿಗೆ ತೊಳೆಯದ ನರ 
ಮೈಲುದ್ದ ನಡೆದು ಪಡೆಬಹುದೆ ವರ 
ಬೆಳಗ್ಗೆಯೆ ಸಂತಸ ಬಯಸಿದರೆ ಬರ  
ಆಸೆತೊರೆ ಸಂಜೆಯ ಬದುಕು ಸುಂದರ//     

          ಬಸನಗೌಡ ಗೌಡರ 


Monday, October 12, 2020

* ಜಿಟಿ ಜಿಟಿ ಮಳೆ *

ಮುಗಿಲಿಗೆ ಮತ್ತಿಟ್ಟು ಓಡುವ ಮೋಡ

ಇಂದು ಅವಿತಿಟ್ಟು ಜಿಗಿಯುವ ಚಿರತೆ

ಅಂದು ಕಾದು ನೋಡಿದೆ ಶಬರಿಯಂತೆ

ಮಳೆ ಓಡಿತು ಸೀತೆ ಕದ್ದ ರಾಣನಂತೆ//


ಹಗಲಿರುಳು ಹೊಗೆಯಂತೆ ಹನಿಮಳೆ

ಹೋಗಲು ಬಿಡಲೊಲ್ಲದಾವರ್ತಮಳೆ

ಹೈರಾಣಾಗುತ್ತಿದೆ  ಬಿತ್ತುವವನ ತಲೆ

ಹದಬಯಸಿದವನ ಎದೆಗೇರಿದೆ ಕಳೆ //


ಮುಂಜಾನೆ ಮುಖ ಮುಚ್ಚಿ ಕಚಗುಳಿ 

ಮಾಳಿಗೆಯ ಸಂದಲ್ಲಿ ಕಣ್ಣೀರು ಹನಿ 

ಓಣಿಗೂ ಬೇಕಾಗಿದೆ ಸಾಗರದ ಡೋಣಿ

ಮುಗ್ಧ ಮಕ್ಕಳ ಹರುಷ ಏರಿದೆ ಏಣಿ//


ಕಟ್ಟಿದಾ ಕನಸು ಕಮರುವ ಕೆಟ್ಟಕಾಲ

ಹಟ್ಟಿಯ ತುಂಬೆಲ್ಲ ಜಿನುಗುವ ಜಲ

ಕರಗಿದೆ ಮಧುರ ಕನಸಿನ ಜೀವಫಲ

ಕರಿಮೋಡ ಕರಗಿ ಬರಲಿ ರವಿಬಿಸಿಲು//


  🖋️.ಬಸನಗೌಡ ಗೌಡರ

Saturday, October 10, 2020

* ಸಿಕ್ಕರೆ ಸಿಕಾರಿ *

ಶಿಕಾರಿಗಳು ನಾವೆಲ್ಲಾ ಶಿಕಾರಿಗಳು 
ಮಜಕುರ ತಿಳಿದವನೆ ಬಲ್ಲ ಎಲ್ಲಾ/
ತಕರಾರು ತೆಗೆದರೆ ಕೊಡತಾರ ಬೆಲ್ಲ
ತಗಾದೆ ತೆಗೆಯದಿರೆ ಬಕರಾ ನಾವೆಲ್ಲ//

ಸಕಲ ಕಲಾವಲ್ಲಭರು ಬೆನ್ನು ಹತ್ತತಾರ
ನೈಸಾಗಿ ಮನಸ ಮಸಾಜ ಮಾಡತಾರ
ಜೂಸ್ ಕುಡಿಸಿ ಜಾಲಾಡಿ ಬಿಡತಾರ
ಜನ್ಮ ಕುಂಡಲಿ ಎಣೆಸುತ ನಗತಾರ //

ಪೇಟೆಗೆ ಹೋದರೆ ಗ್ರಾಹಕರು ನಾವೆಲ್ಲ
ಖರೀದಿಸಿ ಬಂದವರನ್ನೆಲ್ಲ ಕುದರಿಸಿ 
ಕುದುರೆ ಮಾಡಿ ಓಡಿಸುವರು ಇವರೆಲ್ಲ 
ತಡಿ ಹಾಕಿ ಓಡದಿರೆ ಚಡಿ ಬೀಸುವರಲ್ಲ//

ವೈದ್ಯ, ವಕೀಲರೆಲ್ಲ ಶಿಕಾರಿಗಾಗಿ ಕಾದು
ಕುಳಿತಿಹರಲ್ಲ ಬುದ್ಧಿ ಇದ್ದವರಿಗೆ ಸಾದು
ಕಳ್ಳ ಕದಿಮ,ಕುಳಿತು ಬೊಜ್ಜು ಬೆಳಿಸಿದ  
ರೋಗಿ ಬೇಟೆಗಳಿಗೆ ಕಲ್ಲುಬೀಸುವರಲ್ಲ//

🖋️ಬಸನಗೌಡ ಗೌಡರ

Tuesday, October 6, 2020

* ಬಾಳಿನ ಸರ್ವಸ್ವ *

ಹಾರುತಿರುವ ಹಕ್ಕಿಗಳೆ 
ಮಿನುಗುತಿರುವ ಚಿಕ್ಕಿಗಳೆ
ನೀವೆ ನಮ್ಮ ಪ್ರೀತಿಯ ಸಾಕ್ಷಿಗಳು //

ನಡುವೆ ನಮ್ಮ ಪೋಷಕರೆ
ರಕ್ತ ಹಂಚಿಕೊಂಡ ಬಂಧುಗಳೆ 
ನೀವೆ ನಮ್ಮ ವಾದಿಗಳು//

ನೋಡುತಿರುವ ಅಂಬರವೆ 
ಹಾಡುತಿರುವ ಕೋಗಿಲೆಗಳೆ
ನೀವೆ ನಮ್ಮ ಪುರೋಹಿತರು//

ಕುಣಿಯುತಿರುವ ನವಿಲುಗಳೆ
ಕರೆಯುತಿರುವ ಗಿಳಿಗಳೆ
ನೀವೆ ನಮ್ಮ ಬಂಧುಗಳು//

ಹರಿಯುತಿರುವ ನದಿಗಳೆ
ಕರೆಯುತಿರುವ ಸಾಗರಗಳೆ
ನೀವೆ ನಮ್ಮ ದೇವರುಗಳು//

ನಮ್ಮ ಸುತ್ತುವ ಸುನಕಗಳೆ 
ಜಿಗಿಯುವ ಮಾರ್ಜಾಲಗಳೆ 
ನೀವೆ ನಮ್ಮವೈರಿಗಳು//

ನಿತ್ಯ ಚುಚ್ಚುವ ಜನಗಳೆ
ಬೆಳಕು ನೀಡುವ ಚಂದ್ರಮನೆ
ನೀವೆ ಎಚ್ಚರಿಸುವ ಗಂಟೆಗಳು// 

ಕಣ್ಣೋಟದಿಂದ ಸೆಳೆದ ಪ್ರೆಯಸಿಯೆ
ಕಂದನ ಕರುಣಿಸಿದ ತಾಯಿಯೆ
ನೀನೆ ನನ್ನ ಸರ್ವಸ್ವವು //
   
             ಬಸನಗೌಡ ಗೌಡರ 

* ಕರಗಿದ ಅಜ್ಜ *

ನನ್ನಜ್ಜ ಹೊಟ್ಟೆಗೆ ಬಟ್ಟೆಯ ಕಟ್ಟಿ 
ಹರಿದ ಹಚಡಕೆ ಗಂಟುಕಟ್ಟಿ /
ಉಳಿಸಿದ ಬಳಸದೆ ಲೊಚಗುಟ್ಟಿ 
ಹೆಮ್ಮೆಯಿಂದ ತಿಂತೇವು ಕೈಕಟ್ಟಿ  //

ಸಹೋದರ ಮಕ್ಕಳ  ಸಹವಾಸ
ಹರಿದು ಹಂಚಿಕೊಳ್ಳುವು ಹರಸಾಹಸ/
ಆರು ತುಕಡಿಯ ನೂರಾರು ತುಂಡು
ಗಡಿ ತಗಾದೆಗೆ ತಗೆದರೆ ಜಗಮೊಂಡು//

ನೂರು ಹಿರಿಯರು ಹರಿದರು ತೀರದ
ಹಂಚಿಕೆ ಪಾಲು, ಮತ್ತೆ ಇವರ ಗೊಳು/
ಎತ್ತ ಸರಿದರು ನನಗೆ ಬರುತ್ತೆ ಪಾಳು
ಹೊಡದಾಡಿ ಬಿತ್ತು  ಭೂಮಿ ಬೀಳು//

ಹಾಳು ಮಾಡದೆ ಬೀಳು ಬಿಡದೆ ಕಾಳು 
ಕಾಳು ಆಯಿದು ಬೆಳೆದ ರಾಶಿ ಜೋಳ/
ಕಡಿದು ಸಂಕಟ ತುಂಬಿದ ತನ್ನವರ ತುತ್ತು
ಅರ್ಧಎಲೆಯಲಿ ಏರಿಸಿದನು ಮತ್ತು//

ನಾಳೆಯ ಬಾಳಿನ ಬೆನ್ನು ಹತ್ತಿ ಬದುಕು 
ಕೆತ್ತಿದ ಹತಾರದಂತೆ ತನ್ನ ಆಸೆ ಮರೆತು
ದಣಿದಾಗ ದೇಹ ಕರಗಿ ಸುಣ್ಣವಾಗಿತ್ತು
ಸುಟ್ಟ ಸುಣ್ಣದ ಬಿಳುಪೆ ನಮಗಿವತ್ತು//

           ಬಸನಗೌಡ ಗೌಡರ

Monday, October 5, 2020

* ಪರಶಿವ *

ಗಣೇಶಪಿತ ಗೌರಿಪತಿ ಗಂಗಾಧರ 

ಭಂಗ ಬಂದರೆ ನೀ ಉಗ್ರ ತಾಂಡವ 

ಬಡವ ನೀ ಶಿವ ಬಂಗಾರ, ಬೆಳ್ಳಿಯಿಲ್ಲ

ಬಟ್ಟೆಯಿಲ್ಲ ಬೂದಿಯೆ ಮೈಯಲ್ಲಾ //


ದೇಶಿವಾಸಿಗಳ ದೇವ ನೀ ಪರಶಿವ 

ಸಿಂಧೂಬಯಲಿನಿಂದ ಮಹಾದೇವ

ಪಶುಪತಿಯಾಗಿ ಬೆಳೆದೆ ಆಗಿನಿಂದ

ನಾಮ ನೂರಾರು, ಹೇಳಲವು ಚಂದ//


ಕೈಯಲ್ಲಿ ತ್ರಿಶೂಲ ಅದರಲ್ಲಿ ಡಮರುಗ

ಕೈಲಾಸವಾಸಿ ಕವನಕೂ ನಿಲುಕದವನು

ಗಂಗೆಗೌರಿಯ ಅಂಗದಿ ಧರಿಸಿದವನು 

ತ್ರಿನೇತ್ರಿ ತ್ರಿವೇಣಿ,ತ್ರಿಲೋಕ ಸಂಚಾರಿ// 

 

ಮಸಣದ ವಾಸ ಹೊಸದೇನಲ್ಲ 

ನಾಗರಿಕತೆ ಮೆಟ್ಟಲು ಮೂಲದೇವ

ನಿನ್ನ ರೂಪಕೆ ಮರುಳಾದವನು ನರ

ನೀನೊಲಿಯದಿರೆ ಎಲ್ಲಾ ಹರೊಹರ//


        🖋️ಬಸನಗೌಡ ಗೌಡರ 

* ನಟರು *

ಬ್ರಹ್ಮ ಬರೆದ ಕತೆಯ ಭಾವಿ ನಟರು
ನೀಡಿದ ಪಾತ್ರ ಮಾಡದೆ ಬೇಡುವರು /
ಆಡಿಸಿದಂತಾಡುವ ಗೊಂಬೆಗಳು
ಅರಿವಿಲ್ಲದೆ ಚಲಿಸುವವು ದಿನಗಳು//

ಪಾತ್ರ ಮೇಲು ಕೀಳೆನ್ನುವುದಿವರ ಭ್ರಮೆ
ಗೆದ್ದ ನಟರ ಸಿನಿಕತನದಲ್ಲಿವರ  ಸಂಭ್ರಮ/
ಗೆಲ್ಲುವ ಕುದುರೆಗಿವರು ಹಿಂಬಾಲಕರು 
ಹೂವು ತುರಾಯಿಗೆ ನಿತ್ಯಕಾಯುವರು//

ರಂಗಭೂಮಿ ದೂರ ನೂರು ಮಾರು 
ಆಸೆಯ ಅಳತೆಯು ಸಾವಿರ ಮಾರು/
ಗಡಿಯ ಗುರುತಿಗಾಗಿ ನಡೆದಿದೆ ಜಗಳ
ಗೆದ್ದರೇನು ? ಬದುಕಿಗೆ ಬೇಕು ಕವಳ//  

ಬಣ್ಣ ಬದಲಿಸಿ ಹಿರಿತನ ಬಯಸುವರು 
ಬಣ್ಣ ಜಾರಿದಾಗ ತಾನೆ ಬಯಲಾದರು/
ಬದುಕಿನ ಬಣ್ಣವು ನಿಜ ತಿಳಿಯದಣ್ಣ 
ದುಡಿದು ಪಡೆಯುವವರು ಹಿರಿಯರಣ್ಣ//

               🖋️ಬಸನಗೌಡ ಗೌಡರ

Friday, October 2, 2020

* ಗಾಂಧಿ ತಾತ *

ಗಾಂಧಿ ತಾತ ನಿನ್ನ ಶಾಂತಿ ವಚನ 
ಕೆಲವರಿಗೆ ಆಗ ಹತ್ತಿದೆ ಅಪಚನ/
ಆಗಲಿ ಬಿಡಿ ಕೆಡುವುದು ಉದರವಿದಿನ
ಕೆಟ್ಟ ಮೇಲೆ ಬರುವುದು ಸುದಿನ //

ಶಾಂತಿ  ಅಹಿಂಸೆಯ ಪರಿಪಾಲನೆ
ಕೆಲ ಬೋಧಕರಿಗಾಗಿದೆ ವಿವರಣೆ /
ಸಾಧಕರಿಗದು ಸಮಯ ಪಾಲನೆ
ಪಾಲನೆಗೆ ಸಿಗತ್ತೆ ಲೇಟಾಗಿ ಮಣೆ//

ಹಿಂದೂ ಮುಸ್ಲಿಮರ ಐಕ್ಯತಾ ಮಂತ್ರ 
ಜಿನ್ನಾನ ಮುಂದೆ ನಡೆಯಲಿಲ್ಲ ತಂತ್ರ/
ಹೆಣೆದ ವಿಭಜನೆಗೆ ಮಹಾ ಕುತಂತ್ರ
ದಳ್ಳುರಿಗೆ ಬೆಂದ ಮೇಲೆ ದೇಶ ಸ್ವತಂತ್ರ //

ಗಾಂದೀಜಿ ಬ್ರಿಟಿಷರಿಗೆ ಹಾಕಿ ಸವಾಲು
ತಂದರು ಸ್ವತಂತ್ರ ಕೇಳಲಿಲ್ಲ ಪಾಲು/
ಸಾಧಿಸಿದೆನೆಂದು ಹೇಳದ ಸಾಧಕ
ಸವೆದು ಶ್ರೀಗಂಧ ಸೂಸಿದ ಸೇವಕ//

ನನ್ನ ಮಾಡಬೇಡಿ ನೀವು ಮೂರ್ತಿ
ಹೇಳಿದ ಅದು ನನಗಲ್ಲ ತರುವ ಕೀರ್ತಿ/ 
ಆದರೆತತ್ವಕ್ಕಿಟ್ಟಿವು ತಿಲಾಂಜಲಿ ಪೂರ್ತಿ
ಮರೆತಿಲ್ಲ ಭಾಷಣದಲ್ಲಿ ಬರತೈತಿ ಸರತಿ//

      ಬಸನಗೌಡ ಗೌಡರ 


Thursday, October 1, 2020

" ಫಾಲ್ಸ್ ಪಿಕ್ನಿಕ್ "

ಬದಾಮಿ ತಾಲೂಕು ತಮಗೆಲ್ಲರಿಗೂ ತಿಳಿದ ಹಾಗೆ ಒಂದು ಐತಿಹಾಸಿಕ,ನಿಸರ್ಗ ರಮನೀಯ ಪ್ರದೇಶಗಳಿಂದ ಆವೃತವಾದ ಪ್ರದೇಶ ಆ ತಾಲೂಕು ಭೌಗೋಳಿಕವಾಗಿ ವಿಸ್ತಾರವಾಗಿರುವದರಿಂದ ಆಡಳಿತ ದ ಅನುಕೂಲಕ್ಕಾಗಿ ಅದನ್ನು  ವಿಭಾಗಿಸಿ ಗುಳೇದಗುಡ್ಡ ನಗರ ಕೇಂದ್ರ ವಾಗಿಟ್ಟುಕೊಂಡು ಇನ್ನೊಂದು  ತಾಲೂಕನ್ನು ನಿರ್ಮಿಸಲಾಗಿದೆ ಈ ಗುಳೇದಗುಡ್ಡ ತಾಲೂಕು ಜಲಪಾತಗಳಿಂದ ತುಂಬಿರುವ ಪ್ರದೇಶವೆಂದರೆ ತಪ್ಪಾಗಲಿಕ್ಕಿಲ್ಲ ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಜಲಪಾತವೆಂದರೆ ಕೋಟೆಕಲ್ಲ ದಿಂದ ಸುಮಾರು 2 ಕಿಲೋ ಮೀಟರ್ ಅಂತರದಲ್ಲಿ ಬರುವ ದಿಡಗಿನ ಪಾಲ್ಸ್  ಅತ್ಯಂತ ಸುಂದರವಾದ ಪಾಲ್ಸ್ ,ಅದನ್ನು ಈಗಾಗಲೆ ನೋಡಿದ್ದರಿಂದ ಇನ್ನುಳಿದ ಜಲಪಾತ ನೋಡಬೆಕೆನ್ನುವದು ನನ್ನ ಸಹ ಉಪನ್ಯಾಸಕರ ಮಹದಾಸೆಯಾಗಿತ್ತು ಇದಕ್ಕಿಂತ ಹೆಚ್ಚಾಗಿ ನಮ್ಮಕಾಲೇಜಿನ ಜೀವ ಶಾಸ್ತ್ರ ಉಪನ್ಯಾಸಕಿಯರಾದ ಶ್ರೀಮತಿ ಜಯಮಾಲಾ ಯಡವನ್ನವರ ಆಸೆ ಇನ್ನೂ ಹೆಚ್ಚಿನ ದಾಗಿತ್ತು ಕಾರಣ ಇಷ್ಟೆ ಅವರಿಗೆ ಇರುವ ನಿಸರ್ಗದ ತುಡಿತ ಅಂದರೆ ಅಲ್ಲಿಯ ಜೀವ ವೈವಿಧ್ಯ ನೋಡ ಬೇಕು ಈ ಪ್ರದೇಶದ ಪರಿಸರವನ್ನು ಆಸ್ವಾದಿಸಿ ಮಕ್ಕಳಿಗೆ ಅರ್ಥಪೂರ್ಣ, ಜೀವಂತ ಪಾಠದ ಅವರ ಕನಸು .ಅದನ್ನು ಸಾಕಾರಗೊಳಿಸಲು ಎಲ್ಲರನ್ನು ಹುರುದುಂಬಸಿದರು ಕಾಲೇಜು ಅವದಿಯ ನಂತರ ಎಂದಾಗ ಕಾಲೇಜಿನ ಪ್ರಾಚಾರ್ಯರು ತಲೆ ಅಲ್ಲಾಡಿಸಬೇಕಾಯಿತು,ಅವರ ಸಂತೋಷಕ್ಕೆ ಮೇರೆ ಇರಲಿಲ್ಲ .ಇನ್ನೊಂದು ಮುಖ್ಯ ವಾದ ವಿಷಯ ನಾನು 

ಹೇಳದೆ ಹೋದರೆ ನನ್ನ ಬರವಣಿಗೆ ಅಪೂರ್ಣ ವಾದೀತು ಅದೇನೆಂದರೆ ಈ ವರ್ಷ ಜೀವಶಾಸ್ತ್ರ ವಿಷಯದಲ್ಲಿ  100 ./. ಫಲಿತಾಂಶ ತಂದ ಮೊದಲಿಗರು ಅವರೆ. ವಿಜ್ಞಾನ ವಿಭಾಗದಲ್ಲಿ ಸರಕಾರಿ ಸಂಸ್ಥೆಗಳಲ್ಲಿ ತರುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೂ ಹೌದು, ಆದರೆ ಸಾಧನೆಯಾಗಿದ್ದಂತು ಸತ್ಯ  .

ಗುಳೇದಗುಡ್ಡ ತಾಲೂಕಿನಲ್ಲಿ ಇರುವ ಇನ್ನುಳಿದ ಜಲಪಾತಗಳೆಂದರೆ ಹುಲ್ಲಿಕೇರಿ ಅವ್ವಕ್ಕನ ಪಾಲ್ಸ್ .ಈ ಜಲಪಾತ ನಮಗೆ ನೋಡಲು ಆಗಲಿಲ್ಲ  ಕಾರಣವಿಷ್ಟೆ ನಾವು ಉಪನ್ಯಾಸಕ ಮಿತ್ರರು ಮಧ್ಯಾಹ್ನ ಉಪಹಾರ ತಯಾರಿ ನಡೆಸಿದಾಗಲೆ ಲಗು ಬಗೆಯಿಂದ ಮುಂದೆ ಹೋಗಿ ಅವ್ವಕ್ಕನ ಜಲಪಾತವನ್ನು  ಉಳಿದ ಮಹಿಳಾ ಉಪನ್ಯಾಸಕಿ ಶೈಲಾ ಮೇಡಮ್, ಅಕ್ಕ ಮಹಾದೇವಿ ಶೆಟ್ಟರ,ನಾಗಮ್ಮ, ಬಸಮ್ಮ,ಕಣ್ಣು ತುಂಬಿಕೊಂಡು ಆಗಿತ್ತು. ನಮ್ಮ ಗುರಿ ಇನ್ನೂ ಮುಂದೆ ಇರುವ ಹುಲಿಗಮ್ಮನ ಕೊಳ್ಳ, ಹಾಗೂ ಹಾನಾಪೂರ ಗ್ರಾಮದ ಹಾಲಹಂಡೆ ನೋಡಬೇಕಿತ್ತು ,ಈಗಾಗಲೇ ಕಾಲೇಜು ಅವದಿಯ ನಂತರ ಬಂದದ್ದರಿಂದ ವೇಳೆಯ ಅಭಾವದಿಂದ ನಾಗಾಲೋಟದಿಂದ ಮುನ್ನಡೆಯಿತು.ಹಾನಾಪೂರ ಎಲ್ ಟಿ ಗೆ ಬಂದಾಗ ಬೈಕುಗಳು ತಮ್ಮ ವೇಗ ಕಳೆದುಕೊಂಡವು ಕಾರಣ ಹನುಮಪ್ಪನ ಕೊಳ್ಳದ ಜಲಪಾತ. ಈ ಜಲಪಾತಕ್ಕೂ ಹುಲಿಗಮ್ಮನ ಕೊಳ್ಳದ ಜಲಪಾತಕ್ಕೂ ಗುಳೇದಗುಡ್ಡ ತಾಲೂಕಿನ ಜಲಾನಯನ ಪ್ರದೇಶದಿಂದ ನೀರು ಹೋಗುವುದು ಆದರೆ ನೀರು ಹೋಗುವುದು ಬದಾಮಿ ತಾಲೂಕು  ವ್ಯಾಪ್ತಿ ಪ್ರದೇಶಕ್ಕೆ ಎನ್ನುವುದು ವಿಶೇಷ ಅದೂ ಅಲ್ಲೊಂದು ಚಿತ್ರದ ಚಿತ್ರೀಕರಣ ನಡೆದಿತ್ತು ಆದರೆ ,ನೋಡಲು ಪುರಸೂತ್ತಿಲ್ಲದ ಕಾರಣ ಆ ಕಡೆ ಗಮನ ಕೊಡಲಾಗಲಿಲ್ಲ. ಯೋಜನೆ ದೊಡ್ಡದು ವೇಳೆ ತುಂಬಾ ಕಡಿಮೆ.

ನಾವೆಲ್ಲಾ ಹನಮಪ್ಪನ ಕೊಳ್ಳದ ಕೆಳಭಾಗದಿಂದ ಜಲಪಾತ ನೋಡಿ ಆಸ್ವಾದಿಸಲು ಲಗುಬಗೆಯಿಂದ ಯದ್ಧಗೆಲ್ಲುವ ಸೈನಿಕರಂತೆ ಕೊಳ್ಳವನ್ನು ಪ್ರವೇಶಿಸಿದೆವು.

ಒಂದು ಕ್ಷಣ ಮೂಕವಿಶ್ಮಿತರಾದೆವು ಕಾರಣವೆಂದರೆ ಆ ಮಲೆನಾಡೂ ನಾಚಬೇಕು ಅಂತಹ ಚಲುವು ನೋಡಿ .ಜುಳು ಜುಳು ಹರಿಯುವ ತೊರೆಗಳು ಮುಗಿಲನ್ನೆ ಚುಂಬಿಸುವ ಭಯಂಕರ ಬಂಡೆಗಳನ್ನಾವರಿಸಿದ ಬೆಟ್ಟ ,ಅದರ ಮೇಲೆ ನಡೆಯುತ್ತಿದ್ದ ಚಿತ್ರೀಕರಣ ಎಂಥಹ ಅರಸಿಕನೂ ತಲೆದೂಗವ ಪ್ರಕೃತಿ ಸೌಂದರ್ಯ ,ನೋಡಲು ಎರಡು ಕಣ್ಣು ಸಾಲದಾದವು ,ಅದೆ ಗುಡ್ಡದ ತುದಿಯಲ್ಲಿ  ಸ್ಥಾಪನೆಗೊಂಡ ಹನಮಪ್ಪನ ಮುರುಕು ತಗಡಿನ ದೇವಾಲಯ ಅದರಲ್ಲಿ ಪಶ್ಚಮಾಭಿಮುಖವಾಗಿ ನಿಂತ ಹನುಮಂತ ದೇವರು,ಅವನ ದರ್ಶನ ಪಡೆಯುವುದೆ ಒಂದು ಸೌಭಾಗ್ಯದ ಸನ್ನಿವೇಶ ಆ ತೃಪ್ತಿ ಇನ್ನೆಲ್ಲಿಯೂ ಸಿಗದು .

ನಾಗರಿಕರಿಕತೆ ನಾಗಾಲೋಟದಿಂದ ನಿರ್ಮಿಸಿದ ಅದೆಷ್ಟೋ ದೇವಾಲಯ ನಾನು ನೋಡಿದ್ದೇನೆ ಇವೆಲ್ಲವುಗಳನ್ನು ಮೀರಿದ ಜೀವಕಳೆ ನಾನು ಅಲ್ಲಿ ಖಂಡೆ.ನಾನು ಈಗಾಗಲೆ ಬರೆದ ಹಾಗೆ ನಮಗೆ ವೇಳೆ ಚಾಟಿ ಎಟು ಬೀಸುತ್ತಿತ್ತು ಮತ್ತೆ ನಮ್ಮ ಸವಾರಿ ಹುಲಿಗೆ ಮ್ಮನ ಕೊಳ್ಳದತ್ತ. ಗಾಳಿಯ ವೇಗದ ರಭಸದಲ್ಲಿ ಓಡಿತು ನಮ್ಮ ಬೈಕು. 

 ದೂರದಿಂದಲೆ ನೂರಾರು ಅಡಿಗಳಿಂದ ದುಮ್ಮಿಕ್ಕುವ ಜಲಪಾತ ನಮ್ಮನ್ನು ಕೈಮಾಡಿ ಕರೆಯುತ್ತಿತ್ತು ಜೊತೆಗೆ ಜಾರಿ ಓಡುವ ಸೂರ್ಯನ ಕಳೆದುಕೊಂಡ ನತದೃಷ್ಟರಂತೆ ನಮ್ಮನ್ನು ಅನಿಕಿಸುವಂತಿತ್ತು ಹುಲಿಮ್ಮನ ಕೊಳ್ಳ.  ಏಕೆಂದರೆ 3.0 ಗಂಟೆ ದಾಟಿ ಯಾಗಿತ್ತು .ನಾವೇನು ಸಾಮನ್ಯರೇನಲ್ಲ ದುಮ್ಮಕ್ಕಿ ಜಿಗಿಯುವ ಜಲಪಾತಕ್ಕೆ ಹೆಗಲು ನೀಡಿ ಕೆಕೆ ಹಾಕಲು ಬಂದವರೆ .ಮೇಲಿಂದ ರಬಸದಿಂದ ಬುಸುಗುಡುವ ಜಲಪಾತಕ್ಕೆ ತಲೆಬಗ್ಗಿ ನಿಲ್ಲಬೇಕಿತ್ತು.ಇಲ್ಲಿ  ಕೆಕೆ ಹಾಕಿದವರೆಷ್ಟೊ, ಬಿದ್ದ ರಬಸಕ್ಕೆ ಮೈಚುರುಗುಟ್ಟರು ಗಟ್ಟಿಗನೆಂದು ತೋರಿಸಿದವರೇಷ್ಟೊ ಲೆಕ್ಕಹಾಕಲಾದಿತೆ

ಅಂತೂ ತೃಪ್ತ ಭಾವ ಎಲ್ಲರಲ್ಲೂ ಹೂರಹೊಮ್ಮಿತ್ತು.ಇನ್ನೊಂದು ವಿಚಾರ ಹೇಳದೆ ಹೋದರೆ ತಪ್ಪಾದಿತೇನೊ ಅದೇನೆಂದರೆ ನಾವು ನಿಶ್ಚಿಂತೆಯಿಂದ ಜಲಪಾತದಲ್ಲಿ ಮಿಂದೇಳಲು ಕಾರಣ ನೀರಿಗಿಳಿಯದೆ ಊಟ ಬಟ್ಟೆಯ ಸ್ಥಳದಲ್ಲಿ ಅಭಯ ನೀಡಿದ ಆಂಗ್ಲಭಾಷೆ ಉಪನ್ಯಾಸಕ ಹರೀಷ ಕುಂದರಗಿ.ಹೊಟ್ಟೆ ಹಸಿದು ತಾಳ ಹಾಕುತಿತ್ತು.

 ಜನದಟ್ಟಣೆಯ ಪ್ರದೇಶವಾದದ್ಥರಿಂದ ಊಟದ ಸ್ಥಳ ಹನಮಪ್ಪನ ಕೊಳ್ಳದ ಮೇಲ್ಭಾಗಕ್ಕೆ ನಿಗದಿಯಾಯಿತು.

  ಊಟವೆಂದರೆ ನಮ್ಮ ಸಮಾಜಶಾಸ್ತ್ರದ ಉಪನ್ಯಾಸಕರನ್ನು ಮರೆಯಲಾದೀತೆ. ಸಂಪೂರ್ಣ ಉಸ್ತುವಾರಿ ಎನ್ ಎಸ್ ಹಿರೇಮಠ ಸರ್ ಅವರದು. ತುಂಬುಗಾಯಿ ಹೀರೆಕಾಯಿ ,ಹೆಸರಕಾಳು ಪಲ್ಯ ,ರೊಟ್ಟಿ ಚಪಾತಿ ಮೇಲೆ ಬಸಮ್ಮ ಅಕ್ಕ ಮಾಡಿದ ಸೇಂಗಾ ಹೋಳಿಗೆ ಬರೆಯುವಾಗು ನೀರು ಬರುತ್ತಿವೆ.ಗಡದ್ದಾಗಿ ಸೇವಿಸಿ ಮುಗಿಸೀದಾಗ ಗಂಟೆ 5.30. ಜಯಮಾಲಾ ಮೆಡಮ ಮಡಿಚಿ ನೀಡಿದ ವಿಳ್ಯದ ಎಲೆ ತಿಂದು ಮನೆ ಸೇರಿದಾಗ 7 .00 ಗಂಟೆ ಸಮೀಪಿಸುತಿತ್ತು ಅದರೂ ಇನ್ನೊಂದು ಕೊರಗು ನಮ್ಮಲ್ಲಿ ಉಳಿದೇ ಬಿಟ್ಟಿತು ಅದುವೆ ಹಾನಾಪೂರ ಹಾಲಹಂಡೆ. ?

ಸಹಕಾರ ನೀಡಿದ ಪ್ರಾಚರ್ಯ ಕಳಸಾ ಸರ್, ಐ ಎಮ್ ದೊಡಮನಿ ಸರ್, ಮಡಿವಾಳರ ಸರ್, ಹಾದಿಕರ ಸರ್,ಕುಂದರಗಿ ಸರ್,  ಹಿರೇಮಠ ಸರ್ ಶೈಲಜಾ ಮೇಡಂ, ರಾಂಪೂರ ಮೇಡಮ್, ನಾಗಮ್ಮ, ಶಿಸ್ತು ಬದ್ದವಾಗಿ ಫೋಟೋಗಳನ್ನು ಸೆರೆಹಿಡಿದ ಬಸಮ್ಮ ಅಕ್ಕಅವರ ಪುತ್ರಿಗೆ ಹಾಗೂ ರಿಕ್ಷಾ ಚಾಲಕನಿಗೂ ಸುಸೂತ್ರವಾಗಿ ಪಿಕ್ನಿಕ್ ಗೆ ಆಶೀರ್ವಾದ ಮಾಡಿದ ಹುಲಿಗಮ್ಮದೇವಿಗೆ ಪ್ರಣಾಮಗಳು.

* ಮಾಗಿದ ಜೀವ *

ಮುಖದ ಮೇಲಿನ ನೂರು ಗೆರೆಗಳು

ಹದ ಮಾಡಿದ ಹೊಲದ ಸಾಲುಗಳು 

ಪ್ರಶ್ನೆ ಎಂಬ ಬೀಜ ಬಿತ್ತಬೇಕು ಅಲ್ಲಿ  

ಜ್ಞಾನವೆಂಬ ಅನುಭವದ ಫಲಗಳು //


ಮಾಗಿದ ದೇಹ ಮಹಾದೇವನ ವರ

ಮಾನವ ಹಾಗೆ ಬರುವದಿಲ್ಲ ಬರಪುರ

ಹಗಲು ರಾತ್ರಿ ಹದವಾಗಿ ದುಡಿದ ಫಲ

ಇಲ್ಲಾ ಕಾಯಿದ್ದಾಗ ಉದರುತ್ತೆ ಎಲ್ಲಾ//


ಹಸುಳೆಯಿಂದ ಹಿಡಿದು ಹಲವು ಪಾತ್ರ 

ನಟನೆಯು ನಿಲ್ಲದೆ  ತಲುಪಿದರೆ ಮಾತ್ರ

ನೀನು ಪಡೆಯಬಹುದು ಪ್ರಶಂಸೆ ಪತ್ರ

ನಟನೆ ತಪ್ಪಿದೆ ಬರುವುದು ಬಿಕ್ಷಾಪಾತ್ರ//


ಸಾವಿರ ಸಾವಿರ ಸಾಗರಲೆಗಳ ಮೀರಿ 

ಸವೆಸಿದೆ ಬದುಕಿನ ಸಂಘರ್ಷದ ದಾರಿ 

ಸಂದೇಶ ಒಂದೆ ನಮಗೆ ನೀಡಿದ ಗುರಿ

ಸಾಗು ನೀನು ಕೊಂದು ಅರಿಷಡ್ವೈರಿ//


          ಬಸನಗೌಡ ಗೌಡರ 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...