Friday, April 30, 2021

* ಮಿನಿ ಫಾಲ್ಸ್ *

ಪ್ರಕೃತಿ ನೀಡಿದ ಪಾಲ್ಸ್ ..!
ಪ್ರೇಮದಿಂದ ದುಮಿಕಿದೆ 
ಪಯಣವಿನ್ನು ದೂರವಿದೆ 
ತಾಯಿಗಿಂತ ಸಮ ಯಾವುದಿದೆ ?
ತಟ್ಟಿ ,ಬಟ್ಟೆ ಕಳೆದು ಸಿಟ್ಟಿನಿಂದ 
ಸುರಿದರೂ ಗಟ್ಟಿ ಪ್ರೇಮ ನೀಡಿದೆ//
ಯಾರಿಗುಂಟು ಯಾರಿಗಿಲ್ಲ ..!
ಪಡೆದವರು ಭಾಗ್ಯ ಶಾಲಿಗಳೆಲ್ಲ.
ಯಂಕ, ಕಲ್ಯಾ ,ಮಲ್ಯ ಕಬಡ್ಡಿ 
ಆಡಿದೆವಲ್ಲ ಕಾಲು ಎಳೆದು 
ಮೇಲೆ ಬಿದ್ದು ತುಳಿದು ಎಳದು 
ಅವುಟು ಮಾಡಿದರಲ್ಲ ...?
ತಾಯಿ ಒಂದೆ ಸುರಿದು ಎರೆದು 
ಪಾಸ್ ಮಾಡಿ ಹೊರಗೆ ಹಾಕಿದಳಲ್ಲ /
ತಿರುಗಿ ಬರದೆ ಹೋದರೆ 
ನೆನೆದು ಓಣಿ ತಿರುಗುವಳಲ್ಲ 
ತಾಯಿ ಪ್ರೀತಿ ಮೀರಿದ 
ಜಗವು ಇದ್ದರೆ ಹೇಳಿ !
ಜಗವು ಖಾಲಿ ಮಾಡುವಾ//

* ಜ್ಞಾನದಿಂದ ಪ್ರಕಾಶ *

          ಕಿತ್ತು ತಿನ್ನುವ  ಬಡತನದಲ್ಲಿಯೊ ಕತ್ತು ಎತ್ತಿ ನಡೆಯಲು ಇರುವ ದಾರಿ ಯಾವುದಾದರು ಇದೆಯಾ ಸರ್ ? ಹುಡುಗ ತನ್ನ ಮೇಸ್ಟ್ರಿಗೆ ಕೇಳಿದ. ಮೇಸ್ಟ್ರು ಹೇಳಿದರು "ಮಗು ಇದೆ ಆದರೆ ಅದು ಕಿರಾಣಿ ಅಂಗಡಿಗಿ ಹೋಗಿ ನಾಲ್ಕಾಣೆಯನ್ನು ಕೊಟ್ಟು ಬೆಲ್ಲ ತಂದಷ್ಟು ಸುಲಭವು ಅಲ್ಲ, ನಾನು  ಹೇಳುವ ಹಾಗೆ ಅತಿ ದೊಡ್ಡದೂ ಅಲ್ಲ ಸದಾ ತಾಳ್ಮೆಯನ್ನು ಬೆನ್ನಿಗೆ ಅಂಟಸಿಕೂಂಡು ನಿತ್ಯ ಪರ್ವತ ಏರುವ ಶರ್ಪಾನ ಹಾಗೆ ಏರತಾ ಇರಬೇಕು .ಕಲ್ಲು, ಮುಳ್ಳು, ಕಮರಿಗಳಿಗೆ ಲೆಕ್ಕವೆ ಇಲ್ಲ ಸ್ವಲ್ಪ ಯಾಮಾರಿದರು ಪ್ರಪಾತ ಸೇರಬೇಕು.ಸರ್ ಅರ್ಥ ಆಯಿತು ಬಿಡಿ, ನೀವು ಹೇಳಿವುದು  "ಚನ್ನಾಗಿ ಓದಬೇಕು, ಕಷ್ಟ ಪಟ್ಟು ಓದಬೇಕು,ಹೆಚ್ಚು ಅಂಕ ಗಳಿಸಬೇಕು ಇದೆ ಅಲ್ಲವೆ ನಿಮ್ಮ ಮಾತಿನ ಅರ್ಥ? " ಮೇಸ್ಟ್ರು ತಲೆ ಗಿರಗಿರಣೆ ತಿರುಗುವಂತೆ ಆಯಿತು ಯಾಕೆಂದರೆ ತಾವು ಸದಾ ಪಾಠ ಮಾಡುವ ದಾಟಿಯನ್ನು ಈ ಹುಡುಗ ದಾಟಿ ಹೋಗಿದ್ದಾನೆ ಎನಿಸಿತು .ಕಾರಣ ಮೇಸ್ಟ್ರು ಕೆಲಸ ಅಂದರೆ ಅದೆ ಅಲ್ಲವೆ ? ಮುಂಜಾನೆ 10 ಗಂಟೆಯಿಂದ 5 ಗಂಟೆಯವರೆಗೆ ಸನ್ಮಾರ್ಗದಲ್ಲಿ ಹೋಗಬೇಕು ಕಾನೂನು ಗೌರವಿಸಬೇಕು ಎನ್ನುವುದು ಇವರ ಮಂತ್ರ. ವಿಶೇಷವಾಗಿ ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿಗಳು ಕೇಳುವುದೆ ಇದನ್ನಲ್ಲವೆ..! ಕನ್ನಡ ಭಾಷೆಯ ಮೇಷ್ಟ್ರು ಬರತಾರೆ ಅದರಲ್ಲಿ ಅನೇಕ ವಿದ್ವಾಂಸರು ದಾರ್ಶನಿಕರು ಹಾಗು ಕವಿ ಮತ್ತು ಸಾಹಿತಿಗಳು ಬರೆದ ಪಾಠಗಳನ್ನು ಹೇಳ್ತಾರೆ ಅವೆಲ್ಲ ನೈತಿಕ ಪಾಠಗಳೆ ಅಲ್ಲವೆ ! ಇನ್ನು ಇಂಗ್ಲಿಷ್ ಉಪನ್ಯಾಸಕರು ಬರತಾರೆ ಈ ದೇಶದ ನೈತಿಕ ಪಾಠಗಳು ಸಾಲದು ಅಂತ ಇಂಗ್ಲಂಡ್ ಅಮೇರಿಕಾದಂತಾ ದೇಶಗಳ ನೈತಿಕ ಕಥಗಳನ್ನು ಹೇಳುತ್ತರೆ.ಇನ್ನೂ ಇತಿಹಾಸ ವಿಷಯದ ಮೇಷ್ಟ್ರು ಬರತಾರೆ ಎಲ್ಲಾ ಧರ್ಮ ಗಳ ಅಂದರೆ ಹಿಂದೂ, ಮುಸ್ಲಿಂ,ಕ್ರೈಸ್ತ ಅಲ್ಲದೆ ಈ ದೇಶ ಜಗತ್ತಿನಲ್ಲಿ ಆಗಿ ಹೋದ ಎಲ್ಲಾ ಸಂತರ ಆದರ್ಶ ಗಳನ್ನು ಹೇಳುತ್ತಾರೆ.ಇನ್ನೂ ರಾಜ್ಯ ಶಾಸ್ತ್ರ ದ ಉಪನ್ಯಾಸಕರು ಬರುತ್ತಾರೆ ಪ್ಲೇಟೊ, ಅರಿಸ್ಟಾಟಲ್,ಕೌಟಿಲ್ಯ ನಂತ ದಾರ್ಶನಿಕರ ಬಗ್ಗೆ ಹೇಳುವರು. ಸಿದ್ದಾಂತ ಗಳಾದರು ಏನು ? ಕಲ್ಯಾಣ ರಾಜ್ಯ ಕಟ್ಟುವ ಮಾರ್ಗ ಗಳಲ್ಲವೆ.   ಸಮಾಜ ಶಾಸ್ತ್ರ ದಲ್ಲಿ ಬರುವುದಾದರು ಏನು..! ಕುಟುಂಬ,ಸಮಾಜ ,ನಗರ ಹಳ್ಳಿಯ ಬದುಕು ಮನುಷ್ಯರು ಸಂತೋಷ, ಶಾಂತಿಗೆ ಬೇಕಾದ ಚೌಕಟ್ಟು ಗಳು ಮತ್ತು ಮಾರ್ಗೋಪಾಯಗಳು.ಪ್ರಕಾಶನ ಮಾತಿನ ವೇಗಕ್ಕೆ  ಮೇಸ್ಟ್ರು ನಿರುತ್ತರರಾದಂತೆ ಕಂಡು ಬಂದರೂ ತನ್ನ ವೃತ್ತಿಯ ಬುಡವನ್ನೆ ಅಲುಗಾಡಿಸಿದಂತೆ ಆಯಿತು.ಮೇಷ್ಟ್ರು ಸುಧಾರಿಸಿ ಕೊಂಡು ಶಾಂತಚಿತ್ತದಿಂದ  ತನ್ನ ಪಕ್ಕದ ಲ್ಲಿ ಆತನನ್ನು  ಕುಳಿತುಕೊಳ್ಳುವಂತೆ ಹೇಳಿದರು.ಮಗು ಕತ್ತು ಎತ್ತಿ ನಡೆಯುವದು ಎಂದರೇನು ? ಮೇಷ್ಟ್ರ ಪ್ರಶ್ನೆಗೆ ಕ್ಷಣ ವಿಚಲಿತನಾದಂತೆ ಕಂಡರೂ ವಿವರಿಸಲು ಪ್ರಾರಂಭಿಸಿದ ಸರ್ ನಾನು ಎಲ್ಲರ ಹಾಗೆ ದುಡ್ಡು ಮಾಡಬೇಕು, ಒಂದು ಚನ್ನಾಗಿರುವ ಮನೆ ಕಟ್ಟಿಸಬೇಕು ,ಒಂದು ಕಾರು ಖರೀದಸಬೇಕು ಅಂದರೆ ಸಮಾಜದಲ್ಲಿ  ತಲೆ ಎತ್ತಿ ತಿರುಗಬಹುದು ಹೀಗೆ ಪ್ರಕಾಶ್ ನ ಪಟ್ಟಿ ಬೆಳೆಯುತ್ತಾ ಹೋಯಿತು.ಆವಾಗ ಶ್ರೀಧರ ಮೇಸ್ಟ್ರು  ಹೇಳಿದರು " ಮಗು ನೀನು ಈ ರೀತಿ ತಲೆ ಎತ್ತಿ  ತಿರುಗಲು ಯಾವುದೆ ಕಾಲೇಜಿಗೆ ಬರಬೇಕು ಎಂದೇನು ಇಲ್ಲ. ನಗರದ ಯಾವುದೇ ಪುಟ್ ಪಾತನಲ್ಲಿ ಆಮ್ಲೇಟ್ ಮಾರುವವನು ಕೂಡಾ ಇವುಗಳನ್ನು ಹೊಂದಬಹುದು.ಅಂದರೆ ಆಮ್ಲೇಟ್ ಮಾರುವದು ತಪ್ಪು ಅಂತ ನನ್ನ ಮಾತಿನ ಅರ್ಥ ವಲ್ಲ . ತಲೆ ಎತ್ತುವುದು ಎನ್ನುವುದು ನೈತಿಕ ಜೀವನದ ಪರಾಕಾಷ್ಟೆ ಅದರ ಮೂಲಕ ವ್ಯಕ್ತಿತ್ವವೆನ್ನುವದು ನಿರ್ಮಾಣವಾಗುತ್ತದೆ. ಅದು ಒಂದು ಎರಡು ದಿನದಲ್ಲಿ,ವರ್ಷದಲ್ಲಿ  ಅಥವಾ ಎರಡು ವಿಷಯ ಅಥವಾ ಭಾಷೆಯಿಂದ ನಿರ್ಮಾಣ ವಾಗುವದಲ್ಲ. ಅದರ ಬಲದಿಂದ ನಿರ್ಬಿಡೆ, ನಿರ್ಭಯ ಸೃಷ್ಟಿಯಾಗುತ್ತದೆ. ಅದರಿಂದ ತಲೆ ಎತ್ತಿ  ತಿರುಗಬಹುದು ಮಗ . ಎಂದಾಗ ಪ್ರಕಾಶ್ ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಇಳಯಿಯತು..! ಸರ್  "ನಾನು ವಿತಂಡ ವಾದ ಮಾಡಿ ತಮ್ಮ ನ್ನು ನೋಯಿಸಿದೆ  ಕ್ಷಮಿಸಿ " ಕಾಲಿಗೆ ಎರಗಿದ ...ಶ್ರಿಧರ ಗುರುಗಳು ಹೇಳಿದರು "ಮಗು ,ಇರಲಿ ಭೌತಿಕ ವಸ್ತುಗಳೊಂದೆ ತಲೆ ಎತ್ತಿ ತಿರುಗುವ ಸಾಧನಗಳಲ್ಲ ಬದಲಾಗಿ  ನೈತಿಕ, ಆಧ್ಯಾತ್ಮಿಕ ಜೀವನವು ತಲೆ ಎತ್ತಿ ತಿರುಗುವ 

ಮಹಾನ್ ಅಸ್ತ್ರ ಗಳೆಂದಾಗ ಪ್ರಕಾಶ್ ನ ತಲೆಯಲ್ಲಿ ಜ್ಞಾನದ ಪ್ರಕಾಶ ಹೊರಹೊಮ್ಮಿತು.


                   ಬಸನಗೌಡ ಗೌಡರ

Wednesday, April 28, 2021

*ಆಕ್ರೋಶ ಕೊಂದ ಕರುಣೆ*

           ಸುಮಾರು 200 ಮನೆಗಳಿರುವ ಕುಗ್ರಾಮ ಅಲ್ಲಿರುವುದು ಎರಡೆ ಪ್ರಧಾನ ಉದ್ಯೋಗಗಳು ಒಂದು ಕೃಷಿ ಇನ್ನೊಂದು ಕುರಿ ಸಾಗಾಣಿಕೆ (ಆರ್ಥಿಕ ಪರಿಭಾಷೆಯಲ್ಲಿ  ಕುರಿ ಸಾಕಾಣಿಕೆಯೂ ಕೂಡಾ ಕೃಷಿಯಲ್ಲಿಯೆ ಬರುತ್ತದೆ ಆ ಮಾತು ಬೇರೆ)ಆ ಊರಿನಲ್ಲಿ ಹನಮಂತನೆಂಬ ಪ್ರಗತಿಪರ ರೈತ ಇದ್ದ  ಜಮೀನು ಕಡಿಮೆ ಬುದ್ಧಿವಂತಿಕೆಯಿಂದ ಎಲ್ಲರಿಗಿಂತ ಆದಾಯ ಹೆಚ್ಚು ತೆಗೆದು ಮಾದರಿ ರೈತನಾಗಿದ್ದ ಮತ್ತು ತೆಗೆದ ಆದಾಯದಲ್ಲಿ ಸಂತೋಷದಿಂದ ಜೀವನ ನಡಿಸುತ್ತಿದ್ಧ.ಪ್ರಗತಿಪರ ಎಂದಾಗ ಆತ ನಿಸರ್ಗದ ಪ್ರೀಯ ಇರಲೆ ಬೇಕಲ್ಲವೆ ? ಹೊಲದಲ್ಲಿ ನಾಲ್ಕು ಮಾವು ,ಆರು ಬೇವು ಮೂರು ಹುಣುಸೆ ಮರಗಳನ್ನು ಬಹು ಪ್ರೀತಿಯಿಂದ ಬೆಳೆಸಿದ್ದ ಅದೊಂದು ಸ್ವರ್ಗ ಎಂದರೂ ತಪ್ಪಾಗಲಾರದು.ಮರಗಳಿಲ್ಲದ ಹೊಲ ಅದು ಹೊಲವಾದರೂ ಹೇಗಾದೀತು ? ಹೊಲಕ್ಕೆ ಹೋದರೆ ಆತನ ಕಣ್ಣು ಮೊದಲು ಹೋಗುವುದೇ ಅವುಗಳ ಮೇಲೆಯೆ.ಅದರಿಂದ ಸಿಗುವ ಆನಂದ   ಇನ್ನಾವುದರಿಂದ ಸಿಗಲು ಸಾಧ್ಯ ಹೇಳಿ ? ಅದು ಅನುಭವಿಸಿದವರಿಗೆ ಗೊತ್ತು ಬಿಡಿ. ಒಂದು ದಿನ ದನಗಳೊಂದಿಗೆ ಹೊಲಕ್ಕೆ ಸಮೀಪ ಹೋದಾಗ ಏನೋ ಕಸವಿಸಿ ತನ್ನ ಬೇವಿನ ಮರದ ಟೊಂಗೆ ಬೋಳು, ಬೋಳಾಗಿರವಂತೆ ಬಾಸವಾಯಿತು. ಕಣ್ಣು ನಂಬಲಾಗಲಿಲ್ಲ ಲಗು ಬಗೆಯಿಂದ ಹತ್ತಿರ ಹೋದಾಗ ಮನಸ್ಸಿನಲ್ಲಿ ತಳಮಳ .ಆದರೇನು ಮಾಡುವುದು ನಾಲ್ಕಾರು ಟೊಂಗೆಗಳನ್ನು ಕಳೆದುಕೊಂಡಿದ್ದ ಮರ ತನ್ನ ಅಸಾಹಯಕತೆಯನ್ನು ಅತ್ತು ಹೇಳಿದಂತಾಯಿತು. ಕಡಿದವನಿಗ ಹಿಡಿ ಶಾಪ ಹಾಕಿ ಸಂಜೆವರೆಗೂ ಯಾರು ಕಡೆದಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ಸೂರ್ಯ ಜಾರಿದ್ದೆ ತಿಳಿಯಲಿಲ್ಲ. ಬಾರವಾದ ಹೃದಯದಿಂದ ತನ್ನ ಹಸುಗಳನ್ನು ಎಳೆಯುತ್ತ ಮನೆ ತಲುಪಿದ. ಊಟ ಸೇರದು ಮತ್ತೆ ಕಾಡುವ ಪ್ರಶ್ನೆ ಗಳಿಗೆ ಉತ್ತರ ನೀಡುವವರು ಯಾರು ? ಈ ರೀತಿ ಗಿಡ ಕಡಿಯುವವರು ಹಗಲಿನಲ್ಲಿ ಕಡಿಯಲು ಸಾಧ್ಯವಿಲ್ಲ ಅವರು ರಾತ್ರಿಯೆ ಮಾಡಿರಬಹುದು ಎಂದು ತಿಳಿದು ಅದರಂತೆ ಕಾರ್ಯ ಯೋಜನೆ ರೂಪಿಸಬೇಕೆಂದು ನಿರ್ದರಿಸದ .ರಾತ್ರಿ ನಾಲ್ಕು ಗಂಟೆಗೆ ಏಳಬೇಕು ಬಹು ದೂರದಲ್ಲಿ ಕುಳಿತು ಹಿಡಿಯಬೇಕು ಕಡಿದವನಿಗೆ ಊರ ಪಂಚಾಯತ್ ದಿಂದ ದಂಡ ಹಾಕಿಸಿ ಇನ್ನೊಮ್ಮೆ ನಮ್ಮ ಗಿಡದ ಕಡೆ ಸುಳಿದಂತೆ ಮಾಡಬೇಕೆಂದು ನಿರ್ಧರಿಸಿದ. ನಿದ್ರೆ ಸುಳಿಯುತ್ತಿಲ್ಲ ಒಟ್ಟಾರೆ ಹಿಡಯಲೆಬೇಕು ಇದಕ್ಕೊಂದು ಅಂತಿಮ ಹಾಡಬೇಕೆಂದು ಕೋಳಿ ಕೂಗುವ ಮುನ್ನ ಎದ್ದ, ಊರೆಲ್ಲ ಜನ ನಿದ್ರೆ ಯಲ್ಲಿದೆ ಎಲ್ಲಿ ನೋಡಿದರೂ ಗಾಢ ಮೌನ, ಮತ್ತೆ ಮನದಲ್ಲಿ ತತ್ತರ. ಬಂದವನು ನನ್ನ ಮೇಲೆ ಎರಗಿದರೆ ಏನು ಮಾಡುವುದು ತಾನೂ ಕೈಯಲ್ಲಿ ಒಂದು ಕೊಡಲಿ ಹಿಡಿದ .ತಲೆಗೆ ರುಮಾಲು ಸುತ್ತಿ ಮೆಲ್ಲನೆ ಮನೆಯಿಂದ ಹೊರ ಬಂದ. ನಾಯಿಗಳು ಬೊಗಳಿ ಭಯ ಬೀಳಿಸುತ್ತಿದ್ದವು ಏನು ಮಾಡುವುದು ಗಟ್ಟಿಯಾದ ನಿರ್ದಾರ ಮಾಡಿಯೆ ಬಿಟ್ಟ ಹಿಡಿದು ತರಲೆ ಬೇಕು,ಶಿಕ್ಷೆ ಕೊಡಿಸಲೆಬೇಕೆಂದು ನಿರ್ದರಿಸಿದ. ಕಾಲುಗಳು ಹೊಲದ ಕಡೆ ಹೆಜ್ಜೆ ಹಾಕಲು ಪ್ರಾರಂಭಿಸಿದವು . ಇನ್ನೇನು ಹೊಲ ಸಮೀಪ ಬರಬೇಕನ್ನುವಾಗ ಮತ್ತೆ ತಲೆಯಲ್ಲಿ ಮಿಂಚಿ ಮರೆಯಾದದ್ದು .ಆ ಕುರಗಾಹಿ ತನ್ನ ಮೇಲೆರಗಿದರೆ ? ದೂರದಲ್ಲಿಯೆ ಒಂದು ಸಣ್ಣ ಕಂಟಿಗೆ ಒರಗಿ ಆ ಕುರಿಗಾಹಿ ಬರುವಿಕೆಗಾಗಿ ಕಾದು ಕುಳಿತೆ ಕುಳಿತಾ ಯಾವುದೆ ಕುರಹು ಇಲ್ಲ.ಬೆಳಕು ಎಲ್ಲ ಕಡೆ ಪಸರಿಸಲು ಪ್ರಾರಂಭಿತು ಮರ ಕಡೆಯಲು ಬರುವವನೆಂದು ಭಾವಿಸಿದ್ದವ ಬರಲೆ ಇಲ್ಲ ಮಾಡುವದೇನು.ಇವತ್ತು ಬದುಕಿದ ಬಡವ ಬಂದಿದ್ದರೆ ಪಂಚಾಯತ್ ಕಟ್ಟಿಗೆ ಏರಿಸುತ್ತಿದ್ದೆ ಎಂದವನೆ ಬಾರವಾದ ಮನಸ್ಸಿನಲ್ಲೆ ತನ್ನ ಹೊಲದ ಕಡೆ ಹೆಜ್ಜೆ ಹಾಕಿದ .ಗಿಡ ಬೋಳು ಗಿಡದ ಕೆಳಗಡೆ ಬಿಳಿಯ ಶರ್ಟನಂತೆ ಏನೋ ಕಾಣಲು ಪ್ರಾರಂಭಿಸಿತು. ಏನಿದು ಕಣ್ಣು ನನಗೆ ಮೋಸ ಮಾಡುತ್ತಿಲ್ಲ ತಾನೆ ! ಕ್ಷಣ ವಿಚಿಲಿತನಾದ. ಕೊಡಲಿ ಒಂದು ಕಡೆ ಸೊಂಟ ಮುರಿದು ಕೊಂಡು ಬಿದ್ದವ ಇನ್ನಂದು ಕಡೆ ಆತನ ಆರ್ತನಾದ ಕೇಳಿದ ಹನಮಂತನಿಗೆ ಬಿದ್ದವನನ್ನು ಗುರುತು ಹಿಡಿಯಲು ಬಹಳ ಸಮಯ ಬೇಕಾಗಲಿಲ್ಲ. ಆತ ಬೇರೆ ಯಾರು ಅಲ್ಲ  ಅದೆ ಊರಿನ ಬಡ ಕುರಿಗಾಹಿಯಾದ ಕಲ್ಲಪ್ಪ .ಹನಮಂತನ ಮಾನವೀಯತೆ ಜಾಗೃತವಾಯಿತು ಎಂತಹ ಕೆಲಸ ಮಾಡಿಕೊಂಡು ಬಿಟ್ಟೆ ಹುಚ್ಚಪ್ಪ ಎಂದವನೆ ನಿಧಾನವಾಗಿ ಎತ್ತಿ  ತನ್ನ  ಹೆಗಲಿಗೆ ಹಾಕಿಕೊಂಡು ಮನೆ ದಾರಿ ತುಳಿದ.ಮತ್ತೆ ಮನಸ್ಸಿನ ಆಳದಲ್ಲಿ ಕೋಲಾಹಲದ ದಾಳಿ  ಕಲ್ಲಪ್ಪ ಬಡವ ನಾಲ್ವರು ಮಕ್ಕಳ ತಂದೆ. ಬಡತನ ಮತ್ತು ಅಜ್ಞಾನ,ಬದಕಲು ಈಗ ಹಿಡಿದ ದಾರಿ ಸರಿಯಾಗಿ ಇರದಿದ್ದರೂ ಪರಿಸ್ಥಿತಿ ಕೈಗೊಂಬೆಯಾಗಿ ಮಾಡಿದ ಕಾರ್ಯ ಆತನನ್ನು ನರಕಕ್ಕೆ ತಳ್ಳಿತ್ತು .ಹನಮಂತನೇನು ಕೊಡುವದು ಶಿಕ್ಷೆ ನಿಸರ್ಗವೆ ನೀಡಿಯಾಗಿತ್ತು ಬಾರವಾದ ಹೆಜ್ಜೆ ಹಾಕುತ್ತಾ ಮನೆ ದಾರಿ ತುಳಿದ.

Tuesday, April 27, 2021

"ಪ್ರಮಾಣ ಪತ್ರಗಳೆ ಅನ್ನ ಹಾಕುವ ಪತ್ರಗಳಲ್ಲ"


     ಸುಮಾರು 25 ವರ್ಷಗಳ ಹಿಂದಿನ ಮಾತು, ಆಗ ನಾನು ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕಾಲ . ಆದರೆ ವಾಸ ಮಾತ್ರ ಪಕ್ಕದ ನಗರದಲ್ಲಿ ಇತ್ತು .ಹೀಗಾಗಿ ದಿನನಿತ್ಯ ಓಡಾಡುವುದು ನನ್ನ(ನಮ್ಮ) ದಿನಚರಿ.ಬಸ್ ಕಾಯುವುದು ಕೂಡಾ ಕರ್ತವ್ಯದ ಒಂದು ಭಾಗವೆ ಆಗಿತ್ತು. ಕಾಯುವುದು ಅಂತ ಹೇಳಿದೆನಲ್ಲವಾ ಇದರ ತ್ರಾಸು ನಮ್ಮ ಶತೃವಿಗೂ ಬೇಡ .ಏಕಂದರೆ ಇದರಿಂದಾಗುವ ಹಿಂಸೆ ಅಪಾರ, ಅದಕ್ಕೆ ನಾನು ಹೇಳಿದ್ದು ಶತೃವಿಗೂ ಬೇಡ ಎಂದದ್ದು.ನಾನು ಕರ್ತವ್ಯ ನಿರ್ವಹಿಸಿದ ಊರಿಗೆ ಮತ್ತು ವಾಸವಿದ್ದ ನಗರಕ್ಕೆ 10 ರಿಂದ 12 ಕಿ.ಮೀ. 15 ನಿಮಿಷದ ಪ್ರವಾಸ, ಕಾಯುವ ಅವಧಿ ಮಾತ್ರ 1 ರಿಂದ 2 ಗಂಟೆ ಈ ಅವಧಿಯನ್ನು ಇನ್ನಾವುದಾದರು ಸೃಜನಾತ್ಮಕ ಕೆಲಸಕ್ಕೆ ಬಳಸಬಹುದಾಗಿತ್ತೇನೂ ಆದರೆ ಹಾಗಾಗಲಿಲ್ಲ. ಹೇಗೆಂದರೆ ಒಂದು ಎರಡು ಗಾಲಿ ವಾಹನ ಇಟ್ಟಿದ್ದರೆ ? ಇವತ್ತಿನ ಹಾಗೆ ಬೈಕು ನಮಗೆ ಎಟುಕವ ವಸ್ತುವಾಗಿರಲಿಲ್ಲ ಏಕೆಂದರೆ ಆವಾಗ ಇವತ್ತಿನ ಹಾಗೆ ಐದು ಅಂಕಿ ಸಂಬಳವಿರಲಿಲ್ಲ ಬದಲಾಗಿ ನಾಲ್ಕು ಅಂಕಿ ಸಂಬಳವಿರುತಿತ್ತು ಮತ್ತು ಜೀವನಾನುಭವವು ಕಡಿಮೆಯೆ. ಅವತ್ತಿನ ಸಂಬಳ ಇವತ್ತಿನ ಸಂಬಳಕ್ಕೆ ಹೋಲಿಸಿದರೆ ಕಡಿಮೆಯೆ. ಇರಲಿ ವಿಷಯಕ್ಕೆ ಬರುತ್ತೇನೆ.ಒಂದು ದಿನ ಬಸ್ ಸ್ಟ್ಯಾಂಡ ಇರುವ ಪಕ್ಕದ ಗಿಡದ ಬಹು ದೊಡ್ಡ ಕಟ್ಟಿಗೆ ಕುಳಿತುಕೊಅಂಡು ಲೋಕದ ಎಲ್ಲಾ ಸಮಸ್ಯೆಗೆ ಪರಹಾರ ಕಂಡು ಹಿಡಿಯುವವರಂತೆ ಚರ್ಚೆ ಮಾಡುತ್ತಾ ಕುಳಿತು ಕೊಂಡಿದ್ದೆವು ನಮ್ಮ ಎಲ್ಲಾ ಶಿಕ್ಷಕರು . ಆಗ ನಾವು ಹೋಗುವ ದಾರಿಗೆ ವಿರುದ್ಧವಾಗಿ ಒಂದು ಬಸ್ ಬಂದು ನಿಂತಿತು.ಕಾಯುವವರ ಹಣೆಬರಹವೆ ಹೀಗೆ... ನಾವು ಹೋಗುವ ಕಡೆ ಬರದೆ ವಿರುದ್ಧವಾದ ದಿಕ್ಕಿನಲ್ಲಿ ಬಸ್ಸು ಬಂದು ನಿಲ್ಲುತ್ತದೆ  ಹಿಂಸೆಯಾದಂತ ಅನುಭವ......ನಮ್ಮ  ವಿರುದ್ಧ ವಾಗಿಯೆ ಬಹಳ ಬಸ್ಸುಗಳು ಬಂದಂತೆ ಬಾಸವಾಗುತ್ತದೆ......! ಅದು ಕಾದವರಿಗೆ ಗೊತ್ತು ಬಿಡಿ... ನೋಡು ನೋಡುತ್ತಿದ್ದಂತೆ ನಿಂತ ಬಸ್ಸನಲ್ಲಿ ಒಬ್ಬ ಹುಡಗ ಇಳಿದ, ಎತ್ತರವಾದ ನಿಲುವು ದುಂಡಾದ ಮುಖ, ದಟ್ಟವಾದ ನೀಟಾಗಿ ಕ್ರಾಪ್ ಮಾಡಿಸಿದ ಕೂದಲು ಗುರುತು ಹಿಡಯಲು ಬಹಳ ವೇಳೆಯೇನು ತೆಗದುಕೊಳ್ಳಲಿಲ್ಲ.ಅವನೆ ಪೋಲೀಸ ಪಾಟೀಲ್ ಅವನ ಹೆಸರು ಮಾತ್ರ ನೆನಪಿಲ್ಲ ಯಾಕೆಂದರೆ ನಾವು ಬಿಜಾಪುರ ಜಿಲ್ಲೆಯವರಾಗಿರುದರಿಂದ ಹೆಸರಿಗಿಂತ ಆಡ್ರೆಸ್ ಗೆ ಬಹಳ ಮಹತ್ವ ಕೊಡುವವರಲ್ಲವೆ.... ಇರಲಿ,ನಗುಮೊಗದಿಂದ ಕೈಮುಗಿಯುತ್ತ ನನ್ನ ಕಡೆ ಓಡಿ ಬಂದು " ಆರಾಮು ಇದ್ದೀರಾ ಸರ್" ಎಂದು ಕೇಳಿದ ನಾನು ಅಷ್ಟೇ ನಗುತ್ತಾ ಕುಶಲೋಪರಿ ಕೇಳುತ್ತಾ ಪಾಟೀಲ್ "ಡಿಗ್ರಿ ಮುಗಿಯಿತಾ ,ಬಿ.ಇಡಿ ಏನಾದರು ಮಾಡಿದೆಯಾ" ಎಂದು ಕೇಳಿದೆ.ಇಲ್ಲ ..."ಬಿ. ಎ. ಮುಗಿಸಿದೆ ಬಿ ಇಡಿ ಮಾಡ ಲಾಗಲಿಲ್ಲ ಸರ್"  ಎಂದ ಹಾಗದರೆ ಜೀವನಕ್ಕೆ ಏನು ಎಂದು ಕೇಳಿದೆ. ಅದಕ್ಕೆ ಆತ ಕೊಟ್ಟ ಉತ್ತರ ಇವತ್ತಿಗೂ ಕೂಡಾ ನನ್ನ  ಸ್ಮೃತಿಪಟಲದ ಮೇಲೆ ಉಳಿಯುವಂತೆ ಮಾಡಿದೆ..ಆದೇನಂದರೆ. ಸರ್ ನಾನು ಕಲಿತ ಬಿ.ಎ. ಪ್ರಮಾಣ ಪತ್ರ ನನಗೆ ಉಪಯೋಗಕ್ಕೆ ಬಾರದೆ ಹೋಗಿರಬಹುದು ಆದರೆ ತಾವು ಕಲಿಸಿದ ಇಂಗ್ಲಿಷ್ ಮಾತ್ರ ನನಗೆ ಅನ್ನ ಹಾಕಿದೆ" ಎಂದ... ಮುಂದುವರಿದು,ಆ ಭಾಷೆಯ ಮೇಲನ ನನ್ನ ಹಿಡಿತ ನನಗೆ ದಾವಣಗೆರೆಯಲ್ಲಿ  ಪ್ರತಿಷ್ಠಿತ ಗಿರಣಿಯಲ್ಲಿ ಉದ್ಯೋಗ ದೊರೆಯುವಂತೆ ಮಾಡಿದೆ ಸರ್ ಎಂದಾಗ ನನ್ನ ಕಣ್ಣುಗಳು ಆರ್ದ್ರಗೊಂಡವ, ಗುರುವಾದವನಿಗೆ ಇದಕ್ಕಿಂತ ಶ್ರೇಷ್ಠವಾದ ಆದಾಯವೇನಿದೆ ಹೇಳಿ ? ಇದಕ್ಕೂ ಕಾರಣವಿದೆ ಸೇವೆಗೆ ಸೇರಿದ  ಆರಂಭದಲ್ಲಿ ಅದೆ ಹಳ್ಳಿಯಲ್ಲೇ ವಾಸವಾಗಿದ್ದೆ ಮತ್ತು ಕಲಾ ವಿಷಯ(ಸಮಾಜ ವಿಜ್ಞಾನ) ನನ್ನದಾದರೂ ಆಗಿನ ನನ್ನ ಮುಖ್ಯೋಪಾಧ್ಯಾಯರು  ಇಂಗ್ಲಿಷ್ ಭಾಷೆಯ ಬೋಧನೆ ನೀಡಿ 10 ದಿನ ತರಬೇತಿಗೆ ಕಳುಹಿಸಿದ್ದರು ಸ್ಪರ್ಧೆಯ ಮನೋಭಾವ ಹೊಂದಿರುವ ನನಗೆ ಅದು ಬಾರವೆಂದು ಅನಿಸಲೇ ಇಲ್ಲ. ಬದಲಾಗಿ ಹಳ್ಳಿಯ ಮಕ್ಕಳಿಗೆ ಸ್ಪರ್ಧಾತ್ಮಕ ಭಾಷೆಯನ್ನು ಕಲಿಸುವ ಅವಕಾಶ ಸಿಕ್ಕಿತು .ಶಾಲೆಯ ಒಳಗೆ ಮತ್ತು ಬಿಡುವಿನ ವೇಳಯನ್ನು ಮಕ್ಕಳಿಗೆ ಇಂಗ್ಲಿಷ್ ವ್ಯಾಕರಣ ಕಲಿಸುವದರಲ್ಲಿ ಕಳೆದೆ ಅದರ ಫಲವೆ ಈ ಪಾಟೀಲ್...! ಕಲಿಸುವ ಉಪಾಧ್ಯಾಯನ ನಿಜವಾದ ಆಸ್ತಿ ಅಂದರೆ ಇದೆ ಅಲ್ಲವೆ ?.

Ashoka's achievement

 ಅಶೋಕನ ಜೀವನ ಹಾಗೂ ಸಾಧನೆಗಳನ್ನು ವಿವರಿಸಿರಿ.

ಅಶೋಕನು ಮೌರ್ಯ ಅರಸರಲ್ಲಿಯೇ ಶ್ರೇಷ್ಠ ಅರಸನಾಗಿದ್ದು ಯುದ್ಧದ ಗೆಲುವಿನ ನಂತರ ಯುಧ್ಧವನ್ನು ತ್ಯಜಿಸಿ ಬೌದ್ದ ಧರ್ಮವನ್ನು ಸ್ವೀಕರಿಸಿ ಸಂಪೂರ್ಣ ಜೀವನವನ್ನು ಜನರ ಶಾಂತಿ ಮತ್ತು ಕಲ್ಯಾಣಕ್ಕಾಗಿ ದುಡಿದ.

ಅಶೋಕ ಸಾಶಪೂ 273 ರಲ್ಲಿ ಅಧಿಕಾರಕ್ಕೆ ಬಂದನಾದರೂ 269 ರಲ್ಲಿ ಪಟ್ಟಾಭಿಷೇಕ ಮಾಡಿಕೊಂಡನು.

ಕಳಿಂಗ ಯುದ್ಧ ಸಾಶಪೂ 261:.ಅಶೋಕ ಅಧಿಕಾರಕ್ಕೆ ಬಂದ ಮೇಲೆ ತನ್ನ ಸಾರ್ವಭೌಮತ್ವ ವಿಸ್ತರಿಸಲು ಕಳಿಂಗ ಯುದ್ಧ ಮಾಡಿ ಗೆದ್ದ ನಾದರೂ ಅದರ ರಕಪಾತ ಕಂಡು ದುಃಖತಪ್ತನಾದ ಮತ್ತು ತನ್ನ ವಿದೇಶಾಂಗ ನೀತಿ ಬದಲಾಯಿಸಿದ. ಉಪಗುಪ್ತನೆಂಬ ಬೌದ್ಧ ಸನ್ಯಾಸಿಯ ಪ್ರಭಾವದಿಂದ ದಿಗ್ವಜಯದ ಬದಲಾಗಿ ಧರ್ಮ ವಿಜಯದ ನೀತಿ ತನ್ನದಾಗಿಸಿಕೊಂಡ.

ಅಶೋಕನ ಶಾಸನಗಳು:ಅಶೋಕ ಶಿಲಾಶಾಸನ ಹೊರಡಿಸಿದ ಮೊದಲ ಅರಸ ಇವು ಆತನ ಆದರ್ಶ ಮತ್ತು ಮನೋಭಾವ ಅರಿಯಲು ಸಹಾಯ ಮಾಡುತ್ತವೆ.ಅವು ಪ್ರಾಕೃತಿಕ ಪಾಳಿ,ಬ್ರಾಹ್ಮಿ ಖರೋಷ್ಠಿ ಲಿಪಿಯಲ್ಲಿ ಕಂಡು ಬರುತ್ತವೆ.ಜೇಮ್ಸ್ ಪ್ರಿನ್ಸೆಪ್ಇವುಗಳನ್ನು ಮೊದಲು ಓದುವದರ ಮೂಲಕ ಸಂಶೋಧಿಸಿ ಬೆಳಕಿಗೆ ತಂದ

ಕರ್ನಾಟಕದಲ್ಲಿ ಅಶೋಕನ ಶಿಲಾಶಾಸನ ಕಂಡುಬರುವ ಸ್ಥಳಗಳೆಂದರೆ ಮಸ್ಕಿ, ಗವಿಮಠ, ಪಾಲ್ಕಿಗುಂಡ,ಬ್ರಹ್ಮಗಿರಿ ಸಿದ್ಧಾಪುರ ನಿಟ್ಟೂರು, ಕಲಬುರಗಿಯ ಸನ್ನತಿ.ಈ ಶಿಲಾಶಾಸನಗಳು ಅಶೋಕನನ್ನು ದೇವನಾಂಪ್ರಿಯ,ಪ್ರಿಯದರ್ಶಿ ಎಂದು ಉಲ್ಲೇಖಿಸುತ್ತವೆ.

ಧರ್ಮ: ಧರ್ಮ ನಿಷ್ಠನಾಗಿದ್ದ ಅಶೋಕ  ತಂದೆ ತಾಯಿಗೆ ವಿಧೆಯರಾಗಿರಬೇಕು ,ಸತ್ಯ ನುಡಿಬೇಕು,ಅವಲಂಬಿತರನ್ನು ಪ್ರೀತಿಶಬೇಕು,ಪ್ರಾಣಿಗಳಿಗೆ ಹಿಂಸೆ ನೀಡಬಾರದೆಂದು ಧರ್ಮ ನಿಷ್ಠಗುಣಗಳನ್ನು ತಿಳಿಸಿದ.

ಬೌದ್ಧ ಧರ್ಮದ ಹರಡುವಿಕೆಗೆ ಅಶೋಕ ತೆಗೆದುಕೊಂಡ.ಕ್ರಮಗಳು:

1) ಬೌದ್ಧಧರ್ಮದ ಪವಿತ್ರ ಸ್ಥಳಗಳಿಗೆ ಬೇಟಿ ನೀಡಿ ಧರ್ಮ ಗೋಷ್ಠಿ ಗಳನ್ನು ನಡೆಸಿದ.ಲುಂಬಿನಿ, ಗಯಾ,ಸಾರನಾಥ ಇತ್ಯಾದಿ. 

2) ಬೌದ್ಧ ಧರ್ಮದ ವಿಹಾರಗಳ ನಿರ್ಮಾಣಕ್ಕೆ ದಾನದತ್ತಿ ನೀಡಿದ.

3)ಬುದ್ಧನ ತತ್ವ ಗಳ ಪ್ರಚಾರಕ್ಕಾಗಿ ಶಿಲಾಶಾಸನಗಳನ್ನು ಕೆತ್ತಿಸಿದ.

4) ಧರ್ಮದ ಪ್ರಚಾರಕ್ಕಾಗಿ ಧರ್ಮಮಹಾಮಾತ್ರರು ಹಾಗೂ ಸ್ತ್ರೀ ಅಧ್ಯಕ್ಷ ಮಹಾಮಾತ್ರರ ನೇಮಕ ಮಾಡಿದ.

5) ಬೌದ್ಧ ಬಿಕ್ಷುಗಳ ಆಂತರಿಕ ಭಿನ್ನಾಭಿಪ್ರಾಯ ಹೋಗಲಾಡಿಸಲು ಸಾಶಪೂ 250 ರಲ್ಲಿ ಮೂರನೆಯ ಬೌದ್ಧ ಸಮ್ಮೇಳನ ಏರ್ಪಡಿಸಿದ.

6) ಬರ್ಮಾ,ಅಫ್ಘಾನಿಸ್ಥಾನದಂತ ದೇಶಗಳಿಗೆ ನಿಯೋಗಗಳನ್ನು ಕಳುಹಿಸಿದ ಸ್ವತಹ ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರ ರನ್ನು ಶ್ರೀಲಂಕಾ ಕ್ಕೆ ಕಳುಹಿಸಿದ. 

7) ಪ್ರಜೆಗಳಿಗೆ ತಂದೆಯಂತೆ ಅನೇಕ ಕಲ್ಯಾಣ ಕಾರಕ ಚಟುವಟಿಕೆ ಮಾಡಿದ

ರಸ್ತೆ ಬದಿಯಲ್ಲಿ ಫಲನೀಡುವ ಮರ ನೆಡುವದು.ಮಾನವ ಹಾಗೂ ಪ್ರಾಣಿಗಳಿಗೆ ಆಸ್ಪತ್ರೆಯ ನಿರ್ಮಾಣ ಮುಂತಾದವು 

ಹೀಗೆ ವಿಶಾಲವಾದ ಸಾಮ್ರಾಜ್ಯ ಸ್ಥಾಪನೆ ಮಾಡಿ ಪ್ರಜೆಗಳ ಶಾಂತಿ ಮತ್ತು ಕಲ್ಯಾಣಕ್ಕೆ ದುಡಿದು "ಹತ್ತಾರು  ಸಾವಿರ ರಾಜ ಮಹಾರಾಜರ ತುಂಬಿರುವ ಇತಿಹಾಸವೆಂಬ ದಿಗಂತದಲ್ಲಿ ಅಶೋಕ ದೃವತಾರೆಯಾಗಿ ಬೆಳಗುತ್ತಿದ್ದಾನೆ.


Saturday, April 24, 2021

*ಮಾಡರ್ನ್ ಕವನ, ಮನಾಗ ಕುಳಿತು*

ಮನೆಯಲಿ ಮಕ್ಕಳ ಕಲರವ ಸಪ್ಪಳ
ಮನೆ ಒಡತೆಯೆ ಎನಗಾಗಿಹಳು ಇಕ್ಕಳ
ಮೌನವಿದ್ದರೆ ಶಿಸ್ತಿನ ಪಾಠ ಹೇಳ್ತಾಳು//

ಗಾಳಿಯ ಗೂಳಿ ನುಗ್ಗದೆ ಕುಗ್ಗಿರುವೆ
ಕೃತ್ರಿಮಗಾಳಿ ದಾಳಿಗೆ ಬಸವಳಿದಿರುವೆ
ಮಳೆರಾಯ ಎಷ್ಟುದೂರ ಉಳಿದಿರುವೆ//

ಅಜ್ಜ ಕಟ್ಟಿದ ಕಲ್ಲು ಕಟ್ಟಿಗೆ ಶೇಷ್ಠ ಮನೆ
ಕೂಲರ ಬೇಡ ಕುಂತಾಗಿಲ್ಲ ಹನಾಹನಿ
ಕಾಂಕ್ರೀಟ್ ಹಾಕಿ ಸಂಕಟ ಪಡತೀನಿ//

ಬಿಸಿಲಿನ ಜಳಕೆ ಹಸಿವೆಯೆ ಹಾರಿದೆ
ಮೈ ಜುಳ ಜುಳ ನೀರು ಬಯಸಿದೆ
ಮಜ್ಜಿಗೆ ಮಡಿಕೆಯ ಮನ ಕೇಳುತಿದೆ//

ಪ್ರಿಜ್ಜು ಪಿಜ್ಜಾ ಬ್ಯಾಡ ಬೊಜ್ಜು ಬರತೈತಿ 
ಅಜ್ಜಿಯ ಜೀರಗಿಯ ಮಜ್ಜಿಗಿನ ಸಾಕು 
ಮಾಜಾಕಿಂತ ಮಸ್ತ್ ಮಜಾ ಬರತೈತಿ//

ತೆಂಗಿನ ಎಳೆನೀರು ಓರಿಜನಲ್ ಬಾಳಿ 
ಬಟ್ಟಿ ಇಳಿಸಿದ ಮಾವು ಸಿಗಾತಾವೆಲ್ಲಿ
ಬಾಟಲಿ ಗೀಳು ಎಲ್ಲರಿಗೂ ಹಿಡದೈತಲ್ಲ//

              ಬಸನಗೌಡ ಗೌಡರ

* ಬೇಡ ಉದಾಸೀನತೆ *

ಅಂಟಿಸಿಕೊಂಡು ಓಡಬೇಡ 
ಉದಾಸೀನ, ಸಿನಿಕತನ ನಂಟು.
ಸೊಂಟ ಮುರಿತಾರೋ ತುಂಟಾ//

ವೈದ್ಯರು ಹೇಳಿದ ಬುದ್ಧಿಯ ಮಾತು
ಬಿಸಿ ರಕ್ತದ ನಿನಗ ಕೇಳಿಸೀತು ಹ್ಯಾಂಗ
ಉಸಿರು ಕಟ್ಟಿದರೆ ಅರಿವಾಗತ್ತೊ ಆಗ/

ಕೊರೊನಾ ಕಾಲದ ಕಹಿ ಹೇಳೋದು 
ಹ್ಯಾಂಗ, ಕಾಣಬೇಡರಿ ಗುಂಪಿನಾಗ
ಕೆಮ್ಮಿ ಸಾಯಿತಿರೋ ಸ್ಟೇಚರೀನಾಗ//

ಸತ್ತರೂ ಸಿಗುವುದಿಲ್ಲ ಸ್ಮಶಾನ ಜಾಗ 
ಸುತ್ತಿ ಅರಿವ್ಯಾಗ ಕಟ್ಟತಾರ ಕವರಿನಾಗ
ಸಂಬಂಧಿಗಳೆ ಸೇರಿಸಲ್ಲ ಮನಿಯಾಗ//

ಸ್ಥಳಿಯ ಸರಕಾರ ದಂಡ ಹಾಕಿದರ 
ದುಡ್ಡಿನ ದೊಡ್ಡ ವಾದ ಮಾಡತಾರ
ದ್ವನಿ ನಿಂತರ ಮುರದು ತೆಗ್ಗಿಗಿಡತಾರ//

ಮೂಗು ಬಾಯಿ ಮುಚ್ಚಾಕ ಮತ್ತೆ 
ಮತ್ತೆ ಹೇಳಬೇಕಾ ? ಮಾನಗೇಡಿ
ಮುಖ ಮುಚ್ಚಿ ಕಳಸ್ತಾರೊ ನರಕಕ್ಕ //


            ಬಸನಗೌಡ ಗೌಡರ

Friday, April 23, 2021

* ಆಲಯ, ಗ್ರಂಥಾಲಯ .*.

ಮರೀಬೇಡ ಗ್ರಂಥ 
ನೀನಿರಬೇಕು ಜೀವಂತ....!
ಓದಬೇಕು ನೀ ಗುಣವಂತ.
ಬರಿ ಆಲಯವಲ್ಲ, ಪುಸ್ತಕದ ಕಂತೆ
ಇದು ಜ್ಞಾನ ಕೊಳ್ಳುವ ಸಂತೆ//

ದೇಹವಿಲ್ಲದ ಜೀವವಿರುವ             
ಸಾವಿರ ಸಂತರ ಮಕರಂದ
ಮಸಣಕೆ ಹೋಗುವ ಮುನ್ನ 
ಮಾಡಿಕೊ ಅವರನು ನಿನ್ನ ಕಾಂತ
ಸಂತೋಷ ತರುವದು ಏಕಾಂತ// 

ನೂರು ಗೆಳೆಯರ ನೂಕಾಚೆ 
ಸಾವಿರ ವೈರಿಗಳ ಸರಿಸು ಆಚೆ 
ಸಾವಿಲ್ಲದ ಅರಮನೆ ಬಾಚೀಚೆ
ಸ್ವರ್ಗದ ಮನೆ ಇರವುದೆ ಈಚೆ..! // 

ಪುಸ್ತಕದ ದಿನ ಮಾಡಿಹರು 
ಮಸ್ತಕಕೇರಿಸದ ಸೋಗಲಾಡಿಗಳು
ಸುಟ್ಟು ಸುಣ್ಣವಾಗುವ ಮೊದಲು
ಕಟ್ಟು ಸುಂದರ ಅರಿವಿನ ಮಹಲು//

ಸಾವಿರ ಜೀವಗಳ ಸೇರಿಸಿ ಹೆಣೆದರು 
ಸುಂದರವಾದ ಮಂದಿರ ಅದುವೆ ಹಂದರ
ನಮ್ಮ ರಾಮ ರಹಿಮ ಸಂತರ ಮಂದಿರ
ಸಂತರ ಸವಿನುಡಿಯ ಬೆಳಕಿನ ಚಂದಿರ //

             ಬಸನಗೌಡ ಗೌಡರ

Thursday, April 22, 2021

* ತೊರೆಯದೆ ಏರಬಹುದೆ ಏರಿಗೆ *

ಕಂಥಕವನೇರಿ ನಡು ಇರುಳ ಸೇರಿ 
ಜಗದಳುವ ತಿಳಿಯಲು ನಿನ್ನ ಸವಾರಿ
ವೃದ್ದ ,ರೋಗಿ, ಶವ, ಸನ್ಯಾಸಿ ನೋಡಿ  
ಸನ್ನಿವೇಶಗಳೆ ಮನದಲಿ ಸುಳಿದಾಡಿ
ಸತ್ಯ ವರಿಯಲು ಸನ್ಯಾಸಿ ಪಯಣ //

ಮೈಯಲ್ಲ ಹಣ್ಣಾಗಿ ಕಣ್ಣು ಮಂಜಾಗಿ
ಬಾನದಂತೆ ನಡಬಾಗಿ, ರಕ್ತ ನೀರಾಗಿ 
ದಂತ ಹೊರ ಬಾಗಿ, ಚರ್ಮ ಸುಕ್ಕಾಗಿ
ಕಾಣದು ಸತ್ಯ,ನಿಂತ ತಲೆತಿರುಕನಾಗಿ
ಕಠೋರ ತಪಸ್ಸಿಗಾಗಲಿಲ್ಲ ಯೋಗಿ//

ತುಳಿದ  ಹೊಸದು ಮಧ್ಯಮ ದಾರಿ
ಕುಳಿತ ಗಯಾದ ಅರಳಿಮರದ ಕೆಳಗೆ
ಅರಳಿತು ತನ್ನೊಳಗೆ ಜ್ಞಾನದ ಬೆಳಕು 
ರಾಹುಲ ಯಶೋಧೆಯ ತೊರೆಯದೆ
ಹೇಗಾಗುತ್ತಿದ್ದ ಸಿದ್ದ ಗೌತಮ ಬುದ್ಧ  //

ಮಹಾಪರಿತ್ಯಾಗದಿಂದಾದ ತಥಾಗತ
ಧರ್ಮ ಚಕ್ರವುರುಳಿತು ಭರತಖಂಡ 
ದಾಟಿ ಚೀನಾ ಸಿಲೋನ ತುಂಬಾ 
ಅರಳಿತು ಧರ್ಮ ಚಕ್ರ ಪ್ರವರ್ತನ 
ಬೆಳಕಾಯಿತು ಏಷಿಯಾ ತುಂಬಾ //
 
ದುಃಖ ಸಹಜ ಆಸೆಗುದುರೆ ಏರಿದಾಗ 
ಅಷ್ಟ ಮಾರ್ಗ ಕಷ್ಟವೇನು ಆಸೆ ತೊರೆದಾಗ
ಅರಿತು ತುಳಿಯಲೇಳಿದ ಸನ್ಮಾರ್ಗದ ದಾರಿ
ಸತ್ಯ ಅಹಿಂಸೆ ಹಿಡಿದು ನಡೆದಾಗ ಜಯಭೇರಿ
ಇದೆ ನೀನು ಹೇಳಿದ ಸಿದ್ಧ ಬುದ್ಧ ರಹದಾರಿ//

              ಬಸನಗೌಡ ಗೌಡರ 

 

Monday, April 19, 2021

* ಪತಿ ಪರದೈವ *

ಭರವಸೆಗಳ ಬೆನ್ನು ಬಿದ್ದು, 
ಭವಿಷ್ಯದ ಬೆಳೆ ಬೆಳೆಯುವ 
ಭಾವನಾ ಜೀವಿ .ಈ ಮಹಿಳೆ.
ಬಿತ್ತುವ ಬೀಜಗಳ ನಂಬಿ ಬದುಕು 
ಕಟ್ಟಿದ ಭಾರತೀಯ ನಾರಿ 
ಸಂತೋಷದ ದಾರಿ ....
ಅಂದು ಇಂದು ಎಂದೆಂದೂ  ... !
ಸುಳ್ಳುಗಳನೆ ನಂಬಿ ಬಳ್ಳವನು ತುಂಬಿ 
ಸಂಸಾರ ದಡ ಸೇರಿಸುವ 
ಅಂಬಿಗಳೆ ಈ ಮಹಿಳೆ  . 
ಡೋಣಿ ತೂತಾದರು 
ದಡ ಸೇರಿಸುವ ಧಣಿವರಿಯದ 
ಕ್ಷಮಯಾಧರಿತ್ರಿ
ಮಣಿ ಪೋಣಿಸಿದಂತೆ 
ಸುಳ್ಳಿನ ಸರಮಾಲೆ ಇವಳಿಗೆ ಓಲೆ
ನಂಬಿದ ಗಂಡನೆನ್ನವ ಪ್ರಾಣಿ 
ನಿತ್ಯ ಯಾಮಾರಿಸಿದರೂ 
ಪತಿಯೆ ಪರದೈವ ...ಸತಿಗೆ ನೀಡುವನು  
ಕಾಲಿಗೊಂದು ಕೈಗೊಂದು 
ಮತ್ತೆ ಮಡಿಲಿಗೊಂದು ತಪ್ಪಿದರೆ ಜೋಕೆ, 
ಅಣುವಿದಳನ. ಸಮ್ಮಿಳನದಿಂದ 
ಹೊರಬರಲಿ ರವಿ ಕಿರಣ

ಬಸನಗೌಡ ಗೌಡರ 

* ಎನ್ನಂಗಳದ ಹೊಂಗೆ *

ಎನ್ನ ಅಂಗಳದ ಹಾದಿ, ಯಾರು 
ತುಳಿದರೇನು ? ಎಡ ಬಲಕೆ ಹೊಂಗೆ/ 
ಇಂಪಾಗಿ ಹಾಡು ಹಾಡತಾವು ಬೃಂಗ 
ಚಿಲಿಪಿಲಿ ಬಾರಿಸತಾವು ಮೃದಂಗ.//

ನಾನೆ ಹಾಕಿದೆ ನಲ್ಲಿಯ ನೀರಿಗೆ 
ನೋಡು ನೋಡುತ್ತಿದ್ದಂತೆ ಹೊಂಗೆ/ 
ಬೆಳೆಯಿತು ಎತ್ತರ ಮೀರಿ ಮಾಳಿಗೆ 
ನನ್ನದೆನ್ನುವ ಅಧಿಕಾರವಿದೆ ಯಾರಿಗೆ //

ಹಾರು ಹಕ್ಕಿಯು ಹಾಯ್ದು ಹೋದರೆ                    
ಕರೆದು ,ಹೂಮಾಲೆ ಹಾಕುವ ಕರಳು !
ದಣಿವು ಆರಿಸಿ ಸಂತೈಸುವ ನೆರಳು.
ಧರಣಿ ಕೊಡುಗೆ ನನ್ನದೆಂದರೆ ಮರಳು //

ಉರಿಯುವ ರವಿ ಕಿರಣದ ಸವಾಲು
ಮೂಡಣಕೆ ನಮ್ಮನೆಗೆ ನೀ ಕಾವುಲು
ಹಸು, ಹಸುಳೆ ನಿನ್ನೊಡಲ ಮಕ್ಕಳು
ಹೊಸಬಾಳಿಗೆ ಮುನ್ನುಡಿ ಬರೆದವಳು//

ಹನಿ ನೀರು ಹಾಕಿ,ಮನ ಬಾರ ಋಣ
ಮನದಲೇಳುವ ಮಲೀನಕೇನಿದೆ ಬಾಣ
ಸಾವಿರ ಸಾವಿರ ಜನರಿಗೆ ಸ್ವಚ್ಛ ಗಾಳಿ 
ಜಗಕೆಲ್ಲ ತಂಪೆರದರೂ ನೀಚ ದಾಳಿ//

ಹಚ್ಚ ಹಸುರಿನ ಮಧುವನಗಿತ್ತಿ ಇವಳು 
ಎನ್ನಂಗಳದ ಮಂಗಳ ಗೌರಿಯಿವಳು 
ಮನೆಯ ತುಂಬುವ, ಮನ ತುಂಬುವ
ಮಧುಬನದ ಮಾಂತ್ರಿಕ ಶಕ್ತಿಯಿವಳು//

                  ಬಸನಗೌಡ ಗೌಡರ

Friday, April 16, 2021

* ಸುಳ್ಳಿಗೂ ಶಕ್ತಿ ಇದೆ *

* ಸುಳ್ಳಿಗೂ ಶಕ್ತಿ ಇದೆ *

ಅದೊಂದು ಸಣ್ಣ  ಹಳ್ಳಿ .ಆ ಊರನಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಅದರ ಶಿಕ್ಷಕರೆ ನಮ್ಮ ಶಿವಪ್ರಕಾಶ, ಪರೋಪಕಾರದಲ್ಲಿ ಯಾವತ್ತಿಗೂ ಮುಂದೆ  ಶನಿವಾರ ತಮ್ಮ ಊರಿಗೆ ಹೋಗಿ ಸೋಮವಾರ ಬರುತ್ತಿದ್ದ ಈ ಅವಧಿಯಲ್ಲಿ ಅವರಿಗೆ  ಉಳಿದುಕೊಳ್ಳಲು ಮನೆ ನೀಡಿದವರೆ ಶಾಂತಗೌಡ. ಹೆಸರಿಗೆ ತಕ್ಕ ಹಾಗೆ ಶಾಂತ ಮನಸ್ಸಿನ ಗೌಡ, ಹೆಚ್ಚಿಗೆ  ಮಾತನಾಡಿದವರೆ ಅಲ್ಲ ಆರ್ಥಿಕ ವಾಗಿ ಶ್ರೀಮಂತರೇನು ಅಲ್ಲ. ಇವರು ಇಬ್ಬರು ಅಣ್ಣತಮ್ಮಂದಿರು ಸಣ್ಣವನೆ ಹನುಮಂತ ಅಷ್ಟೇನೂ ಬುದ್ಧಿ ವಂತನಲ್ಲ ವ್ಯವಹಾರ ಜ್ಞಾನ ಅಷ್ಟಕ್ಕಷ್ಟೆ ಮದುವೆಯ ವಯಸ್ಸಿಗೆ ಬರುವ ಮುನ್ನವೆ ಮದುವೆ ಮಾಡಿದರು .ಮದುವೆ ಮಾಡಿದರೆ ಸುಧಾರಣೆಯಾಗುತ್ತಾನೆ  ಎನ್ನುವುದು ಹಳ್ಳಿಯ ಜನರ ನಂಬಿಗೆ ಆದರೆ ಆಗುವದೆ  ಬೇರೆ ಪಕ್ವತೆ ಬರುವ ಮುನ್ನ ಮದುವೆ ಮಾಡಿ ಕೈ ತೊಳೆದು ಕೊಳ್ಳುತ್ತಾರೆ ಆಗುವುದೆ ಬೇರೆ.ಹನಮಂತನ ಹೆಂಡತಿ  ಸುಧಾರಿಸುವ ಬದಲು   ಅವನನ್ನು ಆಡಿಸುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ ನಿಮ್ಮದು ಅತಿ ಚಿಕ್ಕದಾದ ಊರು ಉದ್ಯೋಗವು ಅಷ್ಟಕ್ಕಷ್ಟೆ ಎಂದು ಪುಸಲಾಯಿಸಿ ತವರು ಮನೆ ದಾರಿ ಹಿಡಿಸಿದಳು. ತವರು ಮನೆಯ ಯಜಮಾನಿಕೆಯಲ್ಲಿ ಗಂಡನ ಸ್ವಾತಂತ್ರ್ಯ ಹರಣ ಮಾಡಿದಳು ಗಿರಿಜಾ.ಆತ ಸಂಪೂರ್ಣ ಕೈವಶನಾದ, ಹನಮಂತ ಹೆಂಡತಿಯ ಮೋಹ ಪಾಶದಲ್ಲಿ ತನ್ನತನವನ್ನೆ ಕಳೆದು ಕೊಂಡ ಮತ್ತು ಪಂಜರದ ಗಿಳಿಯಾದ.  ಕಾಲಿ ಬಿದ್ದ ಆತನ ಮನೆಯಲ್ಲೆ ಈ ಶಿವಪ್ರಕಾಶ ಮಾಸ್ತರರು ವಾಸಮಾಡುತ್ತಿದ್ದದ್ದು ಅದಕ್ಕೆ ಬಾಡಿಗೆ ನೀಡಲು ಬಂದರೂ ಶಾಂತಗೌಡ ತೆಗೆದು ಕೊಂಡವನೆ ಅಲ್ಲ ಏಕೆಂದರೆ "ಬಾಡಿಗೆ ಪಡೆಯುವದು ಪೇಟೆ ಸಂಸ್ಕೃತಿ ಸರ್ ಹಳ್ಳಿ ಸಂಸ್ಕೃತಿ ಅಲ್ಲ" ಎನ್ನುವುದು ಅವನ ಊವಾಚ ನಮ್ಮ ತಮ್ಮ ಹೆಂಡತಿ ದಾಸನಾಗಿ ಹೆಂಡತಿ ತವರು ಮನೆಗೆ  ಹೋಗಿದ್ದಾನೆ ದೀಪ ಹಚ್ಚಿಕೊಂಡು ಹೋದರೆ ನಮಗೂ ಲಕ್ಷಣ ಮತ್ತು ಜೊತೆಯಾಗಿಯೂ ಇರತಿರಿ ಅಂತ ಬಾಡಿಗೆ ಇಲ್ಲದೆ ತನ್ನ ಉದಾರತೆ ಮೆರೆದಿದ್ದ ,ಆದರೆ ಶಿವಪ್ರಕಾಶ ಸರ್ ಯಾವುದಾದರೂ ಮಾರ್ಗ ದಲ್ಲಿ ಅವರ ಉಪಕಾರ ತೀರೀಸಲು ಹವನಿಸುತ್ತಿದ್ದರು ಅವರಿಗೆ ಸಣ್ಣ ಪ್ರಮಾಣದಲ್ಲಿ ತೊಂದರೆ ಬಂದಾಗ ಹಣ ನೀಡುತ್ತಿದ್ದರು ಅದನ್ನು ಹಣ ಕೇಳದೆ ಜಾಣ ಕಿವುಡು ತೋರಿಸುತ್ತಿದ್ದರು ಶಿವಪ್ರಕಾಶ. ಶಾಂತಗೌಡ ಮರಳಿಸಬೇಕೆಂದು ಪ್ರಯತ್ನಿಸಿ ಸೋಲುತ್ತಿದ್ದರು ಸಂಸಾರ ತಾಪತ್ರಯ. ಪರಿಸ್ಥಿತಿ ಮನುಷ್ಯನನ್ನು ಒಮ್ಮೊಮ್ಮೆ ಲೋಭಿ, ಸ್ವಾರ್ಥಿಯನ್ನಾಗಿ ಮಾಡುತ್ತದೆ. ಕೊಡಬೇಕು ಎನ್ನವ ಮನಸ್ಸನ್ನು ತಾಪತ್ರಯ ಕಟ್ಟಿ ಹಾಕುತಿತ್ತು ಒಂದು ಕಡೆ ತಮ್ಮನ ಬಾಳು ಹಾಳಾಗುತ್ತಿದ್ದರೂ ಸರಿ ಮಾಡದ ಅಸಾಹಯಕತನ ಆತನನ್ನು  ಹೇಡಿಯನ್ನಾಗಿ ಮಾಡಿತ್ತು.ಇತ್ತ ಕಡೆ ಹೆಂಡತಿಯ ಮಾತು ಕೇಳಿ ಸಹೋದರನ್ನು ದೂರು ಮಾಡಿದ ಹನಮಂತನ ಬಾಳು ಅತ್ತ ದರಿ ಇತ್ತು  ಪುಲಿ ಎಂಬಂತಾಗಿತ್ತು . ಹನಮಂತನ ಹೆಂಡತಿ ಗಿರಿಜಾ ಅಣ್ಣ ತಮ್ಮಂದಿರನ್ನು ಅಗಲಿಸುವಲ್ಲಿ ಯಶಸ್ವಿಯಾಗಿದ್ದಳು. ಪಾಲಿಗೆ ಬಂದ ಭೂಮಿಯ ಹಣವನ್ನು ಅಣ್ಣನ ಜೊತೆ ಜಬರದಸ್ತ ತೆಗೆದುಕೊಂಡು  ಹೆಂಡತಿಯ ಉಡಲಾಗ ಹಾಕಿ ಉಂಡಾಡಿಯಾದ, ಜವಾಬ್ದಾರಿಯನ್ನು ಹಾಕಿಕೊಳ್ಳದೆ ನಡೆದರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಹನಮಂತನೆ ಸಾಕ್ಷಿ . ಇಂತಹ ಸ್ಥಿತಿಯಲ್ಲಿ ಗಿರಿಜನ ಕಾಲಿಗೆ ಒಂದು ತೊಡಕಾಗಿದ್ದರೆ ಹನಮಂತನ ಸಂಸಾರ ಸರಿಯಾದ ದಾರಿಯಲ್ಲಿ ಸಾಗುತ್ತಿತ್ತೇನೊ ಈ ವಿಷಯದಲ್ಲಿ ದೇವರು ಕ್ರೂರಿ,ವಂಶ ಬೆಳೆಯಲೆ ಇಲ್ಲ.ಕಾಲ ಎಲ್ಲಾ ಸಮಯದಲ್ಲಿ ನಮ್ಮ ಪರವಾಗಿ ಇರಬೇಕಲ್ಲ ಕಾಲಿ ಮೆದಳು ದೆವ್ವದ ಅರಮನೆ ಅಂತಾರಲ್ಲ ,ಹಾಗೆ ಆಗಾಗ ಸ್ವಲ್ಪ ಚಿಂತೆ ಮರೆಯೋಣ ಅಂತ ಕಂಟ್ರಿ ಸರಾಯಿ ಕುಡಿಯಲು ಪ್ರಾರಂಭಿಸಿ ಕಂಟ್ರಿಯನ್ನೇ ಖರೀದಿಸಿ ದಂತೆ ವರ್ತಿಸಿದ. ತಾಳ ತಪ್ಪಿದ ದೇಹ ರೋಗದ ಗೂಡಾಯಿತು ಗಳಿಸುವ ಸಾಮರ್ಥ್ಯವೂ ಕ್ಷೀಣವಾಯಿತು .ಹೆಂಡತಿಯ ಮನೆಯವರು ಹೊರ ಹಾಕಿದರು. ಬಿಟ್ಟ ಗಂಡನ ಪಾದ ಲೇಸು ಅಂತಾರಲ್ಲ ಹಾಗೆ ಅಣ್ಣನ ಪಾದಕ್ಕ ಬಂದು ಬಿದ್ದ  ಆದರೆ ಆದದ್ದೆ ಬೇರೆ ಈಗಾಗಲೇ ನಾಲ್ಕಾರು ಮಕ್ಕಳನ್ನು ಹೊಂದಿದ್ದ  ಶಾಂತಗೌಡ ಬಸವಳಿದಿದ್ದ ಆತನನ್ನು ತೋರಿಸುವ ಶಕ್ತಿಯನ್ನು ಕಳೆದುಕೊಂಡಿದ್ದ ಮಾಡುವದೇನು ಎರಡು ಮೂರು ಬಾರಿ ತೋರಿಸಿ ಸಾಕಾಗಿ ಹನಮಂತನ ಹೆಂಡತಿಗೆ ಹೇಳಿ ಕಳುಹಿಸಿದ. ಆದರೆ ಹೆಂಡತಿ ಕಿವುಡಿಯಾಗಿದ್ದಳು ಏಕೆಂದರೆ ಬರಡುದನಕ್ಕೆ ಮೇವು ಹಾಕುವವರು ಯಾರು? ಅಂತಿಮವಾಗಿ ಅನಾತನೆಂದು ಬರೆಸಿ ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಬಂದ ಸಂಬಂಧಿಕರು ಇರುವವರನ್ನೆ ಸರಿಯಾಗಿ ನೋಡದ ವ್ಯವಸ್ಥೆಯಲ್ಲಿ ಅನಾಥನನ್ನು ಉಳಿಸಿಕೊಂಡು ಹೋಗುವ ಕಾಳಜಿಯಾದರು ಹೇಗಿದ್ದೀತು ? ವಾರ ತಿರುಗಿರಲಿಲ್ಲ ಮರಣದ ಸಿಡಿಲು ವಾರ್ತೆ ಅಣ್ಣನಿಗೆ ತಲುಪಿತು ರಕ್ತ ಸಂಬಂಧ ಬಿಡದ ಕರ್ಮ ಹೋಗಲು ತಯಾರಾದ ಶಾಂತಗೌಡ. ದೂರದ ಶಹರದಲ್ಲಿ ಹೆಣ ತರುವ ದಾರಿ ತಿಳಿಯದು ಅನಕ್ಷರಸ್ಥರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹೇಗೆ ಸ್ಪಂದಿಸುತ್ತಾರೆಂದು ಮಾಸ್ತರ ಸಹಾಯ  ಕೇಳಿದ ಸಹಾಯಕ್ಕೆ ತಯಾರಾಗಿದ್ದ ಶಿವಪ್ರಕಾಶ ಬಾಡಗಿ ಜೀಪ್ ತೆಗೆದುಕೊಂಡು ಲಗು ಬಗೆಯಿಂದ ಆಸ್ಪತ್ರೆಯ ಕಡೆಗೆ ತೆರಳಿದರು. ಆಸ್ಪತ್ರೆಯೋ ಜನಜಂಗುಳಿ ಎಲ್ಲಿ ಹೋಗಬೇಕನ್ನುವುದು ತಿಳಿಯುತ್ತಿಲ್ಲ ಪ್ರತಿ ಟೇಬಲ್ಲಿನ ಮಹಾಶಯರು ಸಾಗ ಹಾಕುವವರೆ. ಕಾರಣವಂತು ಸ್ಪಷ್ಟ ಸಾಧ್ಯವಾದರೆ ಪೀಕಬೇನ್ನುವವರೆ, ಒಳ್ಳೆಯವರಿಗೆ, ಸತ್ಯವಂತರಿಗೆ ಇದು ಕಾಲವಲ್ಲವೆಂದರಿತು ಸುಳ್ಳಿನ ಸಹಾಯ ಪಡೆದರು ಮಾಸ್ತರರು. ಕಳ್ಳರಿಗೆ ಸುಳ್ಳೆ ಮಲಾಮು  ಎಂದರಿತ ಮಾಸ್ತರು ಸಣ್ಣದೊಂದು ಸುಳ್ಳಿನ ಕಥೆ ಹೆಣೆದರು ಏನೆಂದರೆ ಮಾಸ್ತರರು ಸೀದಾ ಮುಖ್ಯ ವೈದ್ಯಾಧಿಕಾರಿಯ ಹತ್ತಿರ ತೆರಳಿದರು ಹೀಗೆ ಹೇಳಿದರು  " ನಾನು ಎಮ್ ಎಲ್ ಎ ಅಕ್ಕನ ಮಗ ನನ್ನನ್ನು ಕರೆದುಕೊಂಡು ಬಂದಿದ್ಧಾರೆ ಪೋನ್ ಮಾಡಿ ಕೊಡಲೆ" ಎಂದು ಹೇಳಿದರು ಮೊದಲೆ ನೀಟಾಗಿ ಡ್ರೆಸ್ ಮಾಡಿದ ಶಿವಪ್ರಕಾಶನನ್ನು ನಂಬಲು ಬಹಳ ಸಮಯ ಬೇಕಾಗಲಿಲ್ಲ ಸುಳ್ಳಿನ ಬಾಣ ಸತ್ಯದ ಮೇಲೆ ಎರಗಿತು.ಹತ್ತಾರು ಸುಳ್ಳು ಹೇಳಿ ಮದುವೆ ಮಾಡಬೇಕು ಎನ್ನುವು ಮಾತಿತ್ತು  ಆದರೆ  ಈಗ  ಮತ್ತೊಂದು ಸೇರಿತು "ಸುಳ್ಳು ಹೇಣ ತರಬೇಕು" ಎಂದು ಅಂತೂ ಮಾಸ್ತರು  ಹಣ ನೀಡದೆ ಹೆಣ ತರಲು ಯಶಸ್ವಿಯಾಗಿದ್ದರು.  ಮಾಸ್ತರರು .ಹಣ ನೀಡದೆ ಹೆಣ ತಂದದ್ದು ಸಾಧನೆ ಒಂದು ಕಡೆಯಾದರೆ ಯೋಜನೆಯೆ ಇಲ್ಲದೆ ದಾರಿಯ ಹೆಣವಾದ ಹನಮನ ಸ್ಥಿತಿಯ ಕಂಡು ನಿಜವಾಗಿಯೂ ಮನಸ್ಸಿನ  ಆಳದಲ್ಲಿ ಶಿವಪ್ರಕಾಶನಿಗೆ ತಳಮಳವನ್ನುಂಟು ಮಾಡಿತ್ತು .ಇದರ ಪರಿಹಾರಕ್ಕೆ ಹಗಲಿರಳು ಚಿಂತಿಸಿದಾಗ ತಿಳಿದ ಸತ್ಯ ಒಂದೆ ಹೈಟೆಕ್ ಆಸ್ಪತ್ರೆ ಕಟ್ಟು ವದಕ್ಕಿಂತ ಹೈಟೆಕ್ ಶಾಲೆಯನ್ನು ಕಟ್ಟಿದರೆ ಹೇಗೆ  ? ಉತ್ತರ ಯಾವಾಗ ಸಿಗುತ್ತೋ ಆ ದೇವರೆ ಬಲ್ಲ ಎಂದು ಮುನ್ನಡೆದ.

Thursday, April 15, 2021

* ಹಾದಿ ಬದಲಿಸಿದ ಹೈದ *

ಕಲ್ಲು ಮುಳ್ಳಿನ ಕವಲು ದಾರಿ  
ಬಲ್ಲವರು ಬೈದುದೆಲ್ಲವ ಸ್ವೀಕರಿಸಿ 
ಎಲ್ಲೆ ಮೀರದೆ ತನ್ನ ವಲವ ತೋರಿಸಿ 
ಎಲ್ಲವನ್ನೂ ನುಂಗಿದವನು ಈ ಹೈದ //

ಎತ್ತು ಎಮ್ಮೆ ಕತ್ತೆ ಕೋಣಗಳೆ ನಿತ್ಯ 
ಗೆಳೆಯರಿವನ, ಸತ್ಯದ ದಾರಿ ತುಳಿದ
ಮಿತ್ಯವನರಿಯದೆ ಎಲ್ಲರನು ಗೌರವಿಸಿ
ಸತ್ಪಾತ್ರಕೆ ಸವೆದವನು ಈ ಹೈದ//
ಹಾವಿನೊಂದಿಗೆ ಸರಸ ಚೇಳಿನೊಂದಿಗೆ 
ವಿರಸ, ರಕ್ತ ಸಂಬಂಧಿಗಳೆ ರಣವಿಳ್ಯ
ಸೌಖ್ಯ ಕಾಣದ ರಾತ್ರಿಗಳನು ಸಹಿಸಿ 
ಶಾಲೆಯ ದಾರಿ ತುಳಿದ ಈ ಹೈದ//

ಗುರುವಿನ ಗರಡಿಯ ನಗಾರಿ ಬಾರಿಸಿ
ಗುರಿ ಹಿಡಿದ ಬಾಲಕರ ಹಿಂಬಾಲಿಸಿ
ಗೆಳೆಯರ ಗತ್ತಿನಿ ಗಡಿಯನ್ನು ಕತ್ತರಿಸಿ
ಶಿರಬಾಗಿ ಅರಿತವನು ಈ ಹೈದ//

ಹಳೆಯಂಗಿ ಬಿಗಿದ ಚೊಣ್ಣ,ಕಿರಿದು 
ಚಪ್ಪಲಿ ಒಳಗೆ ಇಣುಕಿ ಮುತ್ತಿಕ್ಕುವ 
ಮೊಳೆಗಳು, ಮೌನವ ಆರಾಧಿಸಿ
ಮಾತು ಮನನ ಮಾಡಿದ ಈ ಹೈದ// 

ಮಾಳಿಗೆಯೆ ಪಲ್ಲಂಗ ಹರಿದ ಕೌದಿಯೆ
ರಜಾಯಿ ಬೀಸುವ ಗಾಳಿಯೆ ಎಸಿ 
ಓಣಿಯ ದೀಪವೆ ಮಾರ್ಗದರ್ಶಿ 
ಬುದ್ದ ಬಸವನ ಆದರ್ಶವೆ ಈ ಹೈದ//

ಬದಲಿಸಲು ಕಾನ್ವಂಟಗಳೆ ಬೇಕಿಲ್ಲ
ಬವಣೆ ಕಲಿಸುವವು ನೂರು ದಾರಿ 
ಬದಲಿಸಲು ಬೇಕು ಕಾಲಿ ಉದರ 
ಪದವರಿತು ಹದವಾದ ಈ ಹೈದ //


          ಬಸನಗೌಡ ಗೌಡರ 

             ಉಪನ್ಯಾಸಕರು

Tuesday, April 13, 2021

* ಮೂಕ ನಾಯಕ *

ಮೂಕನಿಗೆ ಮಾತು ಬರಿಸಿ ನಾಕದ 
ಕಡೆಗೆ, ಮುನ್ನೆಡಿಸಿದ ಮೂಕನಾಯಕ
ಮನ್ವಂತರದ ಸಂತನಿಗೆ ನನ್ನ ನಮನ//

ಬಹಿಷ್ಕೃತರಿಗೆ ಭರವಸೆಯ ಬೆಳಕು 
ನೀಡಿ, ಭವಿಷತ್ತಿಗೆ ನಡೆಸಿದ ರವಿಯ
ಆಶಾಕಿರಣದ ನಡೆಗೆ ನನ್ನ ನಮನ//

ತಾರತಮ್ಯದ ತೆವಲನು ತೊಳೆದು 
ಸಮಾನತೆಯ ಬೀಜ ಬಿತ್ತಿದ ಗುರು
ಮಾನವತೆ ಹರಿಕಾರನಿಗೆ ನನ್ನನಮನ//

ಬುದ್ಧನ ತತ್ವಗಳಿಗೆ ಮನಸೋತು
ಮಾನವ ಧರ್ಮವ ಸ್ವೀಕರಿಸಿ ಸತ್ವ
ತತ್ವಗಳ, ಬಿತ್ತಿದವನಿಗೆ ನನ್ನ ನಮನ// 

ಬೆಲ್ಲ ಮೆತ್ತಿದ ವಿಷಗುಳಿಗೆ ನೀಡಿ
ಷಾಹಿ ಸಾಮ್ರಾಜ್ಯ ಕಟ್ಟಿದ ಪಾಪಿಗಳ 
ತಡೆದ ,ಸಮಾಜವಾದಿಗೆ ನನ್ನ ನಮನ//

ನೂರು ದೇಶಗಳಿಗೆ ಹಾರಿ ಸಾವಿರ 
ಕಲಮುಗಳನೋದಿ ಸುಂದರವಾದ 
ಸಂವಿಧಾನ ಕಟ್ಟಿದ ಶಿಲ್ಪಿಗೆ ನನ್ನ ನಮನ//

ನರಕಕ್ಕೆ ನೂಕವ ನರಿಗಳರಿಯಲು
ನಿನ್ನ ನಾಮಬಲವು ಸಾಕು ಗುರುವೆ
ನಿಮಗೆ, ನಮ್ಮ ನಮನ ನನ್ನ ನಮನ//

                ಬಸನಗೌಡ ಗೌಡರ 
                    ಉಪನ್ಯಾಸಕರು 

Monday, April 12, 2021

* ಮತ್ತೆ ಓಡೋಣ ಕೆರೆಯ ಕಡೆ *

ಯುಗದ ಆದಿ ಕಟ್ಟಿತು ಬಾಲ್ಯದ ಸೌದ
ಯುಗಾದಿ ತಂದಿತ್ತು ಹರುಷದ ಜಾಡು
ಮದಗದ ಕೆರೆ ಈಜುವುದೆ ಹೆಮ್ಮೆಯ ಹಾದಿ
ಅಪ್ಪ ಕಳುಹಿಸಿದ್ದ ಹೋರಿಗಳನು ನೀಡಿ, 
ದಂಡೆಯಲಿ ಮೈ ತೊಳದು ಬರುವಂತೆ ಅಪ್ಪನೆ .
ಅಪ್ಪನ ಕಾಳಜಿ ಮರೆತು ಸಾಗುವುದೆ ಜಾಯಮಾನ, ಕಿಡಿಗೇಡಿಗಳು ಹುಡುಗಾಟಿಕೆಯ ಹಾದಿ 
ನೀರಿಗಿಳಿದರೆ ಬೇಗ ಬಂದರಾಗದು ! ಬಂದವನೆ ಹೇಡಿ .
ಸಾಗದಿದ್ದರೆ ಗೆಳೆಯರ ಮಾಡುವರು ಗೇಲಿ. 
ಹೋದರೆ ಸಾವಿನ ದಾರಿ, ಸಾವೆ ಓಡಿತು              
ನನ್ನ ಹುಡುಗರು ಕೆಕೆ ನೋಡಿ ! 
ಡಂಡೆಯಲ್ಲಿ ಪೆಂಡಾಲ ಮಾವು ಬೇವು.
ಕಾಗೆ ಕೊಗಿಲೆಗಳ ಕೊಗಿನ ಪೈಪೋಟಿ.
ನಮ್ಮ ಕೂಗಿಗೆ ಹೆದರಿ ಕಾಲ್ಕಿತ್ತವು ಓಡೋಡಿ                        ಕೂಗಿದೆವು ಸಾಗಿದೆವು ಗೌಡರ ಗದ್ದೆಯಲ್ಲಿ
ಸವಕಳಿಯ ಮಾತಿಗಿಲ್ಲ ಕೊರತೆ, 
ಸೇರಿದೆವು ಸಾಲು ಮರದ ಸಾಲಿನಲ್ಲಿ  
ಬೇವು ಮಾವು ಹೊಂಗೆ ತೊಂಗೆ 
ಮಕರಂದಕೆ ದುಂಬಿಗಳ ದಾಳಿ ...
ನಮ್ಮ ಹಾಡಿಗೆ ಹಕ್ಕಿಗಳೆ ತಾಳ. 
ಕೇಳಲದು ತುಂಬಿ ಬಂತು ಕಿವಿಗಿಂಪು. 
ಗೆಳೆಯರ ಭಾವ ಹೃದಯಕ್ಕೆ ಸಂಪು 
ಕಾಣಲಿಲ್ಲ ನಾ ಅಲ್ಲಿ ಒಣ ಕೆಂಪು. 
ಗಿಡಮರವೆಲ್ಲ ಕಳಚಿತ್ತು ಹಳೆಯಂಗಿ 
ಹಾಕಿತ್ತು ಹೊಸ ಹಸರಿನಂಗಿ, 
ತಿರುಗುವ ಪೋಲಿಗಳ ಹರಿದ ಅಂಗಿಗಳೆ ಶೃಂಗಾರ.
ಬಯಲೆ ಬಂಗಾರ ಬಿಡಿಸಲಾಗದ ಬಂದ 
ಬರುವಿಕೆಗೆ ಕಾಯುತಿರುವ ಹೋಳಿಗೆಯೇ ಶಬರಿ 
ಇದ್ದರೂ ಸವಿಯಬೇಕು ಬೆಲ್ಲ ಬೇವು 
ಸುರಿದುಕೊಳ್ಳುಬೇಕು ಎಲೆ ಬೇವು ಮೇಲೆ ಎಣ್ಣೆ ನೀರು ಅಜ್ಜಿಯ ಕಾಟಕ್ಕೆ ಜಜ್ಜಿಕೊಳ್ಳಬೇಕು ತಲೆಯನ್ನು, 
ಹೊಸ ತಲೆಮಾರು ಕಟ್ಟಲು ಇವಳು ಗೋಳು 
ತಲೆಗೊಂದು ಪಟಾರು, ಮರು ಮಾತು ನಾಡದೆ ಸುರಿದುಕೊಂಡೆ ಬೇವು ಹೂವು ಬೆರೆತ ನೀರು... 
ಬರದ ಬಾಲ್ಯ ಕನವರಿಸಿದೆ ನಾ ಶೂರ 
ಬಂದರೆ ನನಗೂ ಇರಲಿ, ಬಿಡದೆ ಹಿಡಿದಿಡು 
ನನಗೂ ನಿನಗೂ ,ಮತ್ತೆ ಓಡೋಣ ಕೆರೆಯ ಕಡೆ !

ಬಸನಗೌಡ ಗೌಡರ 
ಉಪನ್ಯಾಸಕರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ ಜಿಲ್ಲಾ ಬಾಗಲಕೋಟೆ

Sunday, April 11, 2021

"ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕ ಪಾತ್ರ"

18 ನೇ ಶತಮಾನದಲ್ಲಿ  ಕರ್ನಾಟಕದಲ್ಲಿ ಬ್ರಿಟಿಷರಿಗೆ ಹೈದರಾಲಿ ಮತ್ತು ಟಿಪ್ಪುವಿನಿಂದ ಪ್ರತಿರೋಧ ಪ್ರಾರಂಭವಾಯಿತು ದೋಂಡಿಯಾ ವಾಘ,ಕಿತ್ತೂರು ರಾಣಿ ಚೆನ್ನಮ್ಮ ಸಂಗೊಳ್ಳಿರಾಯಣ್ಣರ ಹೋರಾಟಗಳು ಪ್ರಮಖವಾದವುಗಳು.

  ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆ ನಂತರ ಬಾಂಬೆ ಪ್ರದೇಶ ಕಾಂಗ್ರೆಸ್ ಸಮಿತಿ ದಿನ್ ಷಾ ವಾಚಾರ ಅಧ್ಯಕ್ಷತೆ ಯಲ್ಲಿ ಬೆಳಗಾವಿಯಲ್ಲಿ, ಪಿರೋಜ ಷಾ ಮೆಹತಾ ರವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಅಧಿವೇಷನಗಳು ನಡೆದವು.ತಿಲಕರು ತಮ್ಮ ಮರಾಠಾ ಮತ್ತು ಕೇಸರಿ ಪತ್ರಕೆಗಳಿಂದ ಜನರನ್ನು ಉದ್ದೀಪನಗೊಳಿಸಿದರು ಮತ್ತು ಗಣೇಶೋತ್ಸವ ಮತ್ತು ಶಿವಾಜಿ ಜಯಂತಿಯನ್ನು ಉತ್ತರ ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದರು 

       1916 ರಲ್ಲಿ ಹೋಮ್ ರೂಲ್ ಶಾಖೆಯನ್ನು  ಧಾರವಾಡದಲ್ಲಿ ಸ್ಥಾಪನೆ ಮಾಡುವದರ ಮೂಲಕ ಹುಬ್ಬಳ್ಳಿ ಸಿರ್ಸಿ ಸಿದ್ಧಾಪುರ ಗಳಲ್ಲಿ ಚಳುವಳಿಯನ್ನು  ಕ್ರೋಢೀಕರಿಸಲಾಯಿತು.

     1920 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಥಮ ಅಧಿವೇಷನವನ್ನು ಧಾರವಾಡದಲ್ಲಿ ನಡೆಸಲಾಯಿತು, ಅಧ್ಯಕ್ಷತೆಯನ್ನು ಗಂಗಾಧರ ದೇಶಪಾಂಡೆ ವಹಿಸಿದ್ದರು, ಇವರನ್ನು ಕರ್ನಾಟಕದ ಕೇಸರಿ ಎಂದು ಕರೆಯುತ್ತಾರೆ ನಂತರ ಮಂಗಳೂರು ಬಿಜಾಪುರ, ಬಳ್ಳಾರಿಯಲ್ಲಿ ಅಧಿವೇಷನಗಳನ್ನು ನಡೆಸಲಾಯಿತು.

       ಗಾಂಧೀಜಿಯವರ ಪ್ರಭಾವದಿಂದ ಕಾರ್ನಾಡ ಸದಾಶಿವರಾಯ,ಹೆಚ್ ಯಾಳಗಿ ಎನ್ ಎಸ್ ಹರ್ಡಿಕರ್ ಕಾಕಾ ಕಾಲೆಕರ ಅಸಹಕಾರ ಚಳವಳಿಯ ನಾಯಕತ್ವ ವಹಿಸಿದರು.ಎನ್ ಎಸ್ ಹರ್ಡಿಕರ್ 1924 ರಲ್ಲಿ ಹಿಂದೂಸ್ತಾನ ಸೇವಾ ದಳ ಸ್ಥಾಪಿಸಿದರು.ಇದೆ ವರ್ಷ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಷನದಲ್ಲಿ ಗಾಂಧೀಜಿಯವರು ಮದ್ಯಪಾನ ನಿಷೇದ ಹಾಗೂ ಅಶ್ಪೃಷ್ಯತಾ ನಿವಾರಣೆಗೆ ಕರೆಯಿತ್ತರು.

     ಕಾಯಿದೆ ಭಂಗ ಚಳುವಳಿಯಲ್ಲಿ ಸಬರಮತಿಯಿಂದ ದಂಡಿಯವರೆಗೆ ನಡೆದ ಉಪ್ಪನ ಸತ್ಯಾಗ್ರಹ ದಲ್ಲಿ ಕರ್ನಾಟಕದಿಂದ ಮೈಲಾರ ಮಹದೇಪ್ಪ ಭಾಗಹಿಸಿದ್ದರು.ದಿವಾಕರ್,ಜಿ ದೇಶಪಾಂಡೆ, ಸದಾಶಿವ ರಾಯ ಅಂಕೋಲಾದಲ್ಲಿ ಉಪ್ಪು ತಯಾರಿಸಿ ಉಪ್ಪಿನ ಸತ್ಯಾಗ್ರಹ ಯಶಸ್ವಿಗೊಳಿದರು.

         1938 ರಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಯವರು ಶಿವಪುರದಲ್ಲಿ ಸಿಧ್ಧಲಿಂಗಯ್ಯನವರ ನೇತೃತ್ವದಲ್ಲಿ ತ್ರಿವರ್ಣ ದ್ವಜ ಹಾರಿಸಿದರು.ಅಲ್ಲದೇ ವಿಧುರಾಶ್ವಥ್ಥದಲ್ಲಿ ನಡೆದ ದ್ವಜಾರೋಹಣದಲ್ಲಿ ಬ್ರಿಟಿಷರ ಗೋಲಿಬಾರಿಗೆ 32 ಜನ ಬಲಿಯಾದರು ಹಾಗಾಗಿ ಈ ಘಟನೆಯನ್ನು ಕರ್ನಾಟಕದ ಜಲಿಯನ್ ವಾಲಾಬಾಗ ಎಂದು ಕರೆಯುತ್ತಾರೆ.

       ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಕರ್ನಾಟಕದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು. ಈಸೂರ ಒಂದು ಶಿವಮೊಗ್ಗದ ಹಳ್ಳಿ  ಬ್ರಿಟಿಷರಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು ಹಳ್ಳಿಯ ಜನ ಪಟೇಲ್ ಶಾನಭೂಗರ ಕಂದಾಯ ದಾಖಲೆಗಳನ್ನು ಕಸಿದುಕೊಂಡರು ಮತ್ತು ಪೋಲೀಸರ ಮತ್ತು ತಹಶೀಲದಾರರನ್ನು ಕೊಲೆಮಾಡಿದರು ಅವರನ್ನು ವಿಚಾರಣೆಗೊಳಪಡಿಸಿ ಗುರಪ್ಪ,  ಮಲ್ಲಪ್ಪ, ಶಂಕರಪ್ಪ,ಸೂರ್ಯನಾರಾಯಣಾಚಾರ್ಯರನ್ನು ಗಲ್ಲು ಶಿಕ್ಷೆಗೆ ಒಳಪಡಿಸಿದರು. ಹೀಗೆ ಭಾರತದ ಸ್ವಾತಂತ್ರ್ಯ ದೊಂದಿಗೆ  1947 ರಲ್ಲಿ ಮೈಸೂರು ಭಾರತದಲ್ಲಿ ಸೇರಿತು.


Saturday, April 10, 2021

* ಮತ್ತೆ ಚಿಗುರಿತು ಬನ *

ಹೊಸ ವರುಷ ಬಂತು 
ಹರುಷದ ಉಲ್ಲಾಸ ತಂತು
ಹೊಸ ಗಾನ ಹಾಡೋಣ ಬಾ //ಪ//

ಹಳತು ಹೊಸತರಲ್ಲಿ ಸೇರಿಸಿ
ಕೊಳೆತ ಶವಗಳನು ಸರಸಿ
ಹೊಸ ಏಣಿ ಏರೋಣ ಬಾ.. //

ಬೇವು ಬೆಲ್ಲದಲ್ಲಿ ಬೆರೆಸಿ 
ನೊವು ನಲುವಿನಲಿ ಮರೆಸಿ 
ಬನ ಚಿಗುರು ಸವಿಯೋಣ ಬಾ..//

ಹೊಂಗೆ ಹೂವಿನ ತಂಗಾಳಿ ಸೂಸಿ 
ಬೃಂಗದ ಝೇಂಕಾರ ಮನವರಳಿಸಿ
ಸಂಗೀತ ಕಲಿಯೋಣ ಬಾ..//

ಆದಿಯಲಿ ಅರಿವಿನ ಬೀಜವಿರಿಸಿ
ಅವನಿಯ ಅರಿ ಸೌದಿಯ ತೆಗೆಸಿ, 
ಧರಣಿಯ ಮಗನಾಗೋಣ ಬಾ..//

ಮಾಮರದ ಮುಗುಳು ಹೀರಿ 
ಮರಿ ಕೋಗಿಲೆಗಳ ಮಧರ ಗಾನ  
ನವಿಲೇರಿ ಕುಣಿಯೋಣು ಬಾ....//

ಬಸನಗೌಡ ಗೌಡರ

Monday, April 5, 2021

* ನಿಸ್ತಂತು ರಾಣಿ *

ನೀ ನನ್ನ ಸತಿಯ ಸವತಿಯೆ 
ನೆರಳಂತೆ ಹಿಂದೆ ತಿರುಗುತಿಯೆ
ನನ್ನ ಬೇಕು ಬೇಡಗಳ ಒರತಿಯೆ
ನನ್ನಾಲಿಂಗನವೆ ನಿನಗೆ ಮುಕುತಿಯೆ//

ನೀನಿಲ್ಲದ ದಿನವು ನಾ ಮರೆತಿರುವೆ
ನಿನ್ನ ಆಲಿಂಗನದಲ್ಲಿ ನಗು ಪಡೆದಿರುವೆ
ಭಾವನೆಗಳ ಬೇರು ಕೊಲ್ಲುತಿರುವೆ
ನಿನ್ನ ಭಕ್ತಿಯಲ್ಲೆ ಶಕ್ತಿಯ ಕಳೆದಿರುವೆ //

ಯಾವ ಮೋಹದ ಬಲೆಯ ಬೀಸಿರುವೆ
ಮುಂಜಾವಿನಲ್ಲೆ ಕೆಂಜಿಗೆ ಕಡಿಸಿರುವೆ
ಸಂಜೆಯಾದರೂ ನಂಜು ಏರಿಸಿರುವೆ
ಮಂಜಾದ ಕಣ್ಣರಳಿಸಿ ನೋಡಿಸುವೆ//

ನಿದ್ದೆಯಲ್ಲೆದ್ದು ಎದ್ದು ಮುದ್ದಿಸುವೆ
ಸುದ್ದಿಯ ಶೂರಳು ಸೌಖ್ಯ ತಂದಿರುವೆ
ಒಮ್ಮೆ ನಗಿಸಿ ಮಗದೊಮ್ಮೆಅಳಿಸುವೆ
ಸತಿಯೊಂದಿಗೆನಗೆ ವಿರಸ ತಂದಿರುವೆ//

ಸವತಿಯ ನೆರಳಿಲ್ಲಿ ಊದುವೆ ವಾಲಗ          
ನೀನಿಲ್ಲದ ಗಳಗೆ ಹಿಂಡನಗಲಿದ ಸಲಗ
ಪಂಡಿತನೂ ಎದುರಿಸಲಾರ ನಿನ್ನ ಕಾಳಗ
ಖಂಡಿತ ಸೋತೋದರು ನನ್ನ ಬಳಗ//

ನಿಸ್ತಂತು ರಮಣಿ ಎಷ್ಟಂತ ಮಹಿಮೆ
ನಿನುಟ್ಟ ಬಟ್ಟೆ ಉಡತಾಳೆನ್ನ ರಮಣಿ
ನೀ ಬಿಟ್ಟ ಉಸಿರವಳ ಹಸಿರು ಕವಳ
ಸವತಿಯ ಬಾಳು ಸಾಗಿದೆ ಜಗದಗಲ//

          ಬಸನಗೌಡ  ಗೌಡರ

Thursday, April 1, 2021

* ಮೌನದಲ್ಲಿ ಮರೆತಾಗ *

ಎಡ ಬಲದ ನಡುವೆ ಬೇಡ ಗೋಡೆ 
ಎರಡರಲ್ಲೂ ಉಂಟು ಕೊಳಚೆ ರಾಡಿ
ಹರಿದು ಹೋಗಲಿ ನಿತ್ಯ ಅದು ಕೋಡಿ
ಸೇತುವೆ ಕಟ್ಟೋಣವಲ್ಲಿ ಜೊತೆಗೂಡಿ//

ನಿತ್ಯ ಹಾಕಿದರೆ ಕೊಳಚೆ ಆಚೆ ಈಚೆ 
ಸಿಡಿಯದಿರುವುದೆ ಮುಖಕ್ಕೆ ಪಾಚಿ 
ಸತ್ಯ ತಿರುಚಲಾಗದು, ಗೋಡೆ ಹಾಕಿ
ಸಿಡಿಸಬೇಕು ಗೆಳೆಯ ಬಾಂಬ್ ಹಾಕಿ//

ನಡೆವಾಗ ಎಡುವುದು ಸಹಜ ಕೋಡಿ  
ಸ್ವಾರ್ಥದಿಂದ ಮಾಡಿದರಿವರು ಗಡಿಬಿಡಿ
ಸವಕಳಿ ಸಿದ್ದಾಂತ ಕೇಳಿ ಆಗಿದೆ ಕಿವುಡು
ಸಾಗು ನೀ ತೊಳೆಯಲು ಹಿಡಿದು ಜಾಡು//

ಬರಹದ ಬಣವೆಯಲ್ಲಿ ಸಾವಿರ ಸಾಕ್ಷಿ
ಸಾರಿಸಿ ನೀ ಕಲಕಬೇಡ ಕರುಣೆ ಮಿಕ್ಕಿ 
ಸಾಹಸವು ಉಬ್ಬಿ ನಡೆಯಲಲ್ಲ ಸೊಕ್ಕಿ
ವಿರಹವನ್ನೆ ಮೀರಿ ತೆಗೆಯಬೇಕು ಅಕ್ಷಿ//

ಮೌನದಲ್ಲಿ ಮರೆತಾಗ ಏರಿದೆ ಗೋಡೆ
ಮನ ಬಿಚ್ಚಿ ಮಾತನಾಡಲೇನು ದಾಡಿ
ನಡುವೆ ಸಿಕ್ಕವರ ಬಾಳು ನಾಯಿಪಾಡು  
ಮಾತಾಗಲಿ ಮಾನವೀಯತೆ ಹಾಡು//
         
          ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...